Athree Book Center

Entries categorized as ‘ಪುಸ್ತಕ ಲೋಕ’

ಮೌಲ್ಯಗಳ ಪುಡಾರೀಕರಣ

March 5, 2010 · 4 Comments

ಗತಕಥನದ ಲಹರಿಯಲ್ಲಿ ವರ್ತಮಾನ ಕಳೆದುಹೋಗದಂತೆ ಈ ವಾರ ಮತ್ತೆ ತಾತಾರ್ ತಡೆದಿದ್ದೇನೆ. ಹಸಿವು ಹೆಚ್ಚಿಸಿ ತಿನಿಸು ಮೆಚ್ಚಿಸುವ ರೀತಿಯಲ್ಲಿ ಇಲ್ಲೊಂದು ಕಟುಕರೋಹಿಣಿ ಕಷಾಯ ಕಾಯಿಸಿ ಇಟ್ಟಿದ್ದೇನೆ. ನಿಧಾನಕ್ಕೆ ತಗೊಳಿ,  ಸೆರೆ ಸಿಕ್ಕೀತು, ಹುಶಾರ್!

ನನ್ನ ಪುಸ್ತಕೋದ್ಯಮದ (ಖರೀದಿ, ಮಾರಾಟ ಮತ್ತು ಪ್ರಕಟಣೆ) ಅನುಭವಗಳಲ್ಲಿ ‘ಅಪೂರ್ವ ಸ್ವಾದ’ ಕಂಡದ್ದೂ ಇದೆ, ‘ತುತ್ತಿನ ಕಲ್ಲು’ ಉಗುಳಿದ್ದೂ ಇದೆ. ಆದರೆ ಇವುಗಳಲ್ಲಿ ವೈಯಕ್ತಿಕತೆಯನ್ನು ಮೀರಿ, ಸಾಮಾಜಿಕ ಕುಶಿ ಅಥವಾ ಚಿಂತನೆಯ ಭಾಗಗಳಾಗುವಂತವನ್ನು ಎಚ್ಚರದಿಂದ ಸಾರ್ವಜನಿಕದಲ್ಲಿ ಹಂಚಿಕೊಂಡಿದ್ದೇನೆ. ಹಾಲಾಹಲವಾದರೆ ನೀಲಕಂಠನಾದರೂ ಸರಿ, ಅಮೃತ ಮೂಡಿದರೆ ಮೋಹಿನಿಯಾಗಲೇಬೇಕು (ಅನ್ಯಾರ್ಥಗಳನ್ನು ಮರೆತುಬಿಡಿ). ಈ ಮರೆಯಬಾರದ ಸಂಕೇತಗಳ ಪ್ರೇರಣೆಯಲ್ಲಿ ಫೆಬ್ರುವರಿ ೨೩ಕ್ಕೆ ನಾನು ಕೆಳಗೆ ಕಾಣಿಸಿದ ಲೇಖನ ಬರೆದೆ. ಮಿಂಚಂಚೆಯಲ್ಲಿ ಉದಯವಾಣಿಯ ಗೆಳೆಯ ಸತ್ಯಗಣಪತಿಗೆ ಕಳಿಸಿ “ಬೇಕೇ” ಕೇಳಿದೆ. ನನ್ನ ಕಾತರಕ್ಕೆ ಆತ ಉತ್ತರಿಸಲಿಲ್ಲ; ನಿರೀಕ್ಷೆ ಮೀರಿದ ಚುರುಕಿನಲ್ಲಿ ಮರುದಿನವೇ ಪ್ರಕಟಿಸಿಬಿಟ್ಟರು!

ಇಂದು ಮಾಧ್ಯಮಗಳ ವೈವಿಧ್ಯಕ್ಕೆ ತಕ್ಕಂತೆ ಸಂಪರ್ಕ ಸಾಧ್ಯತೆಗಳೂ ವಿಭಿನ್ನ. ಹಾಗಾಗಿ ಮೇ ಫ್ಲವರ್ ಮೀಡಿಯಾ ಹೌಸಿನ ಗೆಳೆಯ ಜಿ.ಎನ್. ಮೋಹನ್ನರಿಗೂ ಇದೇ ಲೇಖನವನ್ನು ದೂಡಿ (ಫಾರ್ವರ್ಡಿಸಿ), ಸೂಚಿಸಿದೆ, ‘ಇದು ಇಂದಿನ ಉದಯವಾಣಿಯಲ್ಲಿ ಪ್ರಕಟವಾಗಿದೆ. ನಿಮಗೆ ಬೇಕಾದಂತೆ ಬಳಸಿಕೊಳ್ಳಿ. ಅವರೂ ಮರುಕ್ಷಣದಲ್ಲಿ ತಮ್ಮ ‘ಅವಧಿ’ಯಲ್ಲಿ ಪ್ರಕಟಿಸಿದರು. ಈಗ ಮೊದಲು ಲೇಖನ ನೋಡಿ:

(more…)

Categories: ಪುಸ್ತಕ ಲೋಕ

ಮರುಬಳಕೆಯ ನಾಲ್ಕು ಪ್ರಹಸನಗಳು

February 18, 2010 · 9 Comments

ಪುಸ್ತಕ ಅಂಗಡಿಯಲ್ಲಿ ಕಾಗದದ ಮರುಬಳಕೆಯ ಅವಕಾಶ ಅಸಂಖ್ಯ. ಅವನ್ನು ಆಡುನುಡಿಯಲ್ಲೇ ಹೇಳುವುದಾದರೆ ಕ್ಯಾಟಲಾಗು (ಬರಿಯ ಪಟ್ಟಿಯಲ್ಲ, ಪ್ರಚಾರ ಸಾಹಿತ್ಯವೂ ಆಗಬಹುದು), ಇನ್ವಿಟೇಶನ್ನು (ಅಂಗಡಿಯಲ್ಲಿ ವಿತರಿಸಬೇಕೆಂಬ ಬೇಡಿಕೆಯ ಮೇಲೆ ಹೆಚ್ಚಿನ ಸಂಖ್ಯೆಯಲ್ಲೂ), ಪಬ್ಲಿಷರ್ಸ್ ಡಿಸ್ಟ್ರಿಬ್ಯೂಟರ್ಸ್ ಮತ್ತು ವಿವಿಧ ಇನ್ಸ್ಟಿಟ್ಯೂಶನ್ನುಗಳ ಸೆಲ್ಫ್ ಎಡ್ರೆಸ್ಸ್‌ಡ್ ಕವರ್ಸ್ ನಿತ್ಯ ಬರುತ್ತಿರುತ್ತವೆ. ಎಲ್ಲಾ ಬೆಸ್ಟ್ ಪೇಪರ್, ಸೈಜ್ ಮತ್ತು ಎಷ್ಟೋ ಭಾಗ ನೀಟಾಗಿ ಬ್ಲ್ಯಾಂಕ್ ಕೂಡಾ ಇದ್ದೇ ಇರುತ್ತವೆ. ಬಿಲ್ಲುಗಳ (ಅನಾವಶ್ಯಕ) ಎಕ್ಸ್ಟ್ರಾ ಕಾಪೀಸ್ (ಹೆಚ್ಚುವರಿ ಪ್ರತಿಗಳ ಹಿಂಬದಿ), ಕವರಿಂಗ್ ಲೆಟರ್ರು (ಮೇಲ್ಮುಚ್ಚುವ ಪತ್ರ?), ಮತ್ತೆ (ಸಾರ್ವಜನಿಕ ಸಾಗಣೆಯಲ್ಲಿ ಕಳಿಸಿದ್ದಾದರೆ) ಡ್ಯುಪ್ಲಿಕೇಟೋ ಟ್ರಿಪ್ಲಿಕೇಟೋ ಪ್ರತಿಗಳಲ್ಲಿ ಡೆಲಿವರಿ ಚಲನ್ನು ಸಹಾ ಬರುತ್ತವೆ. (ಅವನ್ನೆಲ್ಲ ನೇರಾನೇರ ಕನ್ನಡ ಶಬ್ದಗಳಲ್ಲಿ ಹೇಳುವುದೂ ಒಂದೇ ದೇವಭಾಷೆ ಬಿಟ್ಟ ಪುರೋಹಿತನೂ ಒಂದೇ!) ಅಗತ್ಯಕ್ಕಿಂತ ಹೆಚ್ಚಿಗೆ ಔಪಚಾರಿಕತೆಗೇ ವ್ಯರ್ಥವಾಗುವ ಇವನ್ನೆಲ್ಲ ಆವಶ್ಯಕತೆಯ ನೆಲೆಯಲ್ಲಿ ಕಡಿತಕ್ಕೊಳಪಡಿಸಲು ನಾನು ಬಳಸುವ ಅಸ್ತ್ರ ಮರುಬಳಕೆ. (ಹೆಚ್ಚಿನ ವಿದ್ಯಾಸಂಸ್ಥೆಗಳು ಪಾವತಿ ಕಳಿಸಲು ಪೂರ್ವಮುದ್ರಿತ ಮೇಲ್ಮುಚ್ಚುವ ಪತ್ರಗಳನ್ನಿಟ್ಟುಕೊಂಡಿರುತ್ತವೆ. ಸಹಜವಾಗಿ ಅದರ ಖಾಲಿ ಜಾಗಗಳಲ್ಲಿ ಪಡೆಯುವವರ ಹೆಸರು, ವಿಳಾಸ, ಖಾತೆಯ ವಿವರ ತುಂಬಿಬಿಡುತ್ತಾರೆ. ಕೆಲವೊಮ್ಮೆ ಸಂಸ್ಥಾ ಮುಖ್ಯಸ್ಥನ ರುಜು ರಬ್ಬರ್ ಮೊಹರು ಇರುತ್ತದೆ. ನಾನು ಕಳಿಸಲೇ ಬೇಕಾದ ರಸೀದಿ ಜೊತೆಗೆ ಆ ಪತ್ರಗಳಲ್ಲೇ ಕೃತಜ್ಞತೆಯ ಒಂದು ಸಾಲು ಕೈಯಾರೆ ಬರೆದುಬಿಡುತ್ತೇನೆ. ‘ಇದು ಅವಮಾನಕಾರಿ’ ಎಂದೊಬ್ಬ ಪ್ರಾಂಶುಪಾಲ ನನಗೆ ಹೇಳಿ ಕಳಿಸಿದ್ದರೂ ನಾನು ವ್ರತ ಬದಲಿಸಿಲ್ಲ!) ಅದರಲ್ಲಿ ಲಕೋಟೆಗಳ ಮರುಬಳಕೆಯಲ್ಲಿ ಉಂಟಾದ ಮೂರು ರಸಪ್ರಸಂಗಗಳನ್ನು ಮಾತ್ರ ಇಲ್ಲಿ ವಿಸ್ತರಿಸುತ್ತೇನೆ.

(more…)

Categories: ಪುಸ್ತಕ ಲೋಕ

ಇನ್ನು ಬರುವುದಿಲ್ಲ ಡೀವೀಕೇ

December 13, 2009 · 18 Comments

ಡಿವಿಕೆ ಮೂರ್ತಿ ಬೀಯೇ ಆನರ್ಸಿನಲ್ಲಿ (ಅರ್ಥಶಾಸ್ತ್ರ) ಸ್ವರ್ಣಪದಕ ಗಳಿಸಿ, ಅಧ್ಯಾಪನ ಮತ್ತು ಸಂಶೋಧನ ಅವಕಾಶಗಳು ಕೈಬೀಸಿ ಕರೆಯುತ್ತಿದ್ದಾಗ, ಸ್ವಇಚ್ಛೆಯಿಂದ ಅವನ್ನೆಲ್ಲ ನಿರಾಕರಿಸಿ, ಸ್ಪಷ್ಟ ವಿಚಾರದೊಡನೆ ಪುಸ್ತಕ ಲೋಕಕ್ಕೆ ಕಾಲಿಟ್ಟವರು. ಇವರು ನನ್ನಲ್ಲೇನು ಕಂಡರೋ ಬಿಟ್ಟರೋ ನನ್ನನ್ನೂ ಪುಸ್ತಕಲೋಕಕ್ಕೆ ತಂದರು. ಪ್ರಥಮ ಎಂಎ ಬೇಸಗೆ ರಜೆಯಲ್ಲಿ (೧೯೭೩) ಊರು ಸುತ್ತ ಹೊರಟವನಿಗೆ ಪುಸ್ತಕದ ಗಂಟಿನ ಅಂಟು ಹಾಕಿ, ಮುಂಬೈಯ ನಂಟು ಬೆಳೆಸಿಕೊಟ್ಟರು. ಹಸಿದವನಿಗೆ ಅನ್ನ ಕೊಡುವುದಿರಲಿ, ಅನ್ನ ಗಳಿಸುವ ಮಾರ್ಗವನ್ನೇ ಕಲಿಸಿಬಿಟ್ಟವರಿವರು. ನನಗೊಬ್ಬನಿಗೇಂತ ಅಲ್ಲ, ತನಗೆ ಸಹಜವಾಗಿ ಸ್ಫುರಿಸಿದ್ದನ್ನು (ಪುಸ್ತಕೋದ್ಯಮ) ಸಂಪರ್ಕಕ್ಕೆ ಬಂದವರ ಒಲವು ಗುರುತಿಸಿ ಹೇಳಿಕೊಟ್ಟರು, ಎಷ್ಟು ಕಾಲಕ್ಕೂ ಬಲವಾಗಿ ಬೆಂಬಲಿಸಿದರು. ಏಕಸ್ವಾಮ್ಯ, ವೃತ್ತಿ ಮಾತ್ಸರ್ಯ, ಅನಾರೋಗ್ಯಕರ ಸ್ಪರ್ಧಾಮನೋಭಾವ, ಅನುದಾರತೆ ಮುಂತಾದ ಶಬ್ದಗಳು ಡಿವಿಕೆ ಶಬ್ದಕೋಶದಲ್ಲೇ ಇರಲಿಲ್ಲ! ಈ ಕೆಲಸ ಇವರು ನನಗಿಂತಲೂ ಮೊದಲು ಹಲವರಿಗೆ ಮಾಡಿದ್ದರು. ನನ್ನನಂತರವೂ ಇನ್ನಷ್ಟು ಮಂದಿಗೆ ಮಾಡುತ್ತಲೇ ಇದ್ದರು. ಆದರೆ ಕನ್ನಡಮ್ಮನ ಸೇನೆಗೆ ತಾನೆಷ್ಟು ಹುರಿಯಾಳುಗಳನ್ನು ಸಜ್ಜುಗೊಳಿಸಿದೆನೆಂದು ಲೆಕ್ಕ, ಜಾಹೀರಾತು ಕೊಟ್ಟು ಪರೋಕ್ಷ ಲಾಭಗಳು ಬಿಡಿ, ಕನಿಷ್ಠ ಉಪಕೃತರ ಕೃತಜ್ಞತಾರ್ಪಣೆಗೂ ಅವಕಾಶ ಕೊಟ್ಟವರಲ್ಲ ಡಿವಿಕೆ!

(more…)

Categories: ಪುಸ್ತಕ ಲೋಕ

ಕಾಕರಾಜ! ನಿನ್ನ ಧ್ವನಿಯು ಎಷ್ಟು ಚಂದ!!

September 30, 2009 · 11 Comments

“ನಮಸ್ಕಾರಾ ಸಾರ್, ನಾನು ಮೈಸೂರಿಂದಾ, ಪುಸ್ತಕ ಸಂವಹನದಿಂದಾ. ನಾನು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯಾನೂ ಹೌದು. ಅಕ್ಟೋಬರ್ ಹನ್ನೊಂದು, ಭಾನುವಾರಕ್ಕೆ ನೀವು ಇಲ್ಲಿಗೆ ಬರಲೇಬೇಕು ಸಾರ್. ಕನ್ನಡ ಪುಸ್ತಕ ಪ್ರಾಧಿಕಾರದಿಂದಾ ಪುಸ್ತಕೋದ್ಯಮದ ಮೇಲೊಂದು ಗೋಷ್ಠಿ ಇಟ್ಟುಕೊಂಡಿದ್ದೇವೆ ಸಾರ್. . . . . .”

೧೯೮೩ರಲ್ಲಿ ನಡೆದ ಮೈಸೂರು ವಿವಿನಿಲಯದ ಪ್ರಸಾರಾಂಗದ ಸುವರ್ಣವರ್ಷ ಕಾರ್ಯಕ್ರಮದಲ್ಲಿ ಪುಸ್ತಕೋದ್ಯಮ ಗೋಷ್ಠಿ ಇಟ್ಟುಕೊಂಡಿದ್ದರು. ನನಗೋ ಪುಸ್ತಕೋದ್ಯಮಿಯಾಗಿ ಎಂಟರ ಹರಯ. ಆದರೂ ಬರೆಯುವ ಚಟವಿತ್ತೆಂದೋ ಮೈಸೂರಿನವನೇ ಎಂದೋ ಜಿಟಿ ನಾರಾಯಣ ರಾಯರ ಮಗನೆಂದೋ ‘ಪ್ರಾಯ ಕಿರಿದಾದರೇನ್ ಪೌರುಷಂ ಪಿರಿದು’ ಎಂದು ಪೌರಾಣಿಕ ನುಡಿಗಟ್ಟನ್ನು ನೆನೆಸಿಕೊಂಡೋ ನನ್ನನ್ನಂದು ಪ್ರಬಂಧಕಾರನನ್ನಾಗಿ ಕರೆದಿದ್ದರು. ನನಗದು ಅರ್ರಂಗೇಟ್ರಂ! ‘ಪುಸ್ತಕ ಮಾರಾಟಗಾರ’ದ ವ್ಯಾಖ್ಯೆಯಿಂದ ತೊಡಗಿ ನನ್ನ ಅನುಭವಕ್ಕೆ ನಿಲುಕಿದಷ್ಟು ಸಮಸ್ಯೆ, ಪರಿಹಾರಗಳನ್ನು ಸೂಚಿಸಿ ಪ್ರಬಂಧ ರಚಿಸಿ ಒಯ್ದೆ. ನನಗೋ ವಿದ್ಯಾರ್ಥಿ ದೆಸೆಯಲ್ಲಿ ಕಿರು ಅಭಿಪ್ರಾಯಕ್ಕೆ ಮಾತು ಕೊಡುವುದಿರಲಿ, ಯಾವುದೇ ಸಭಾವೇದಿಕೆಯ ಮೆಟ್ಟಿಲು ಏರಲೂ ಹೆದರಿಕೆ; ಸಭಾಕಂಪ! ನೂರಾರು ಹಿರಿಯ ಲೇಖಕರೂ ಪ್ರೊಫೆಸರುಗಳೂ ಓದುಗರೂ ನನ್ನನ್ನು ಪುಸ್ತಕೋದ್ಯಮಕ್ಕಿಳಿಸಿದಲ್ಲಿಂದ ತೊಡಗಿ ಪುಸ್ತಕೋದ್ಯಮದಲ್ಲಿ ನಡೆಸುತ್ತಲೂ ಇದ್ದ ಘಟಾನುಘಟಿ ಪ್ರಕಾಶಕ/ವಿತರಕರೂ ಇದ್ದ ಸಭೆ. ನಾನು ಸಾವಿರ ಅಡಿಗೂ ಮಿಕ್ಕ ರಂಗನಾಥ ಸ್ತಂಭದ (ಉದಕಮಂಡಲದಲ್ಲಿರುವ ಏಕಶಿಲಾ ಶಿಖರ) ನೆತ್ತಿಯಂಚಿನಲ್ಲಿ ನಿಂತು ಶೂನ್ಯ ದಿಟ್ಟಿಸುವವನಂತೆ ಪ್ರಬಂಧ ಓದಿಬಿಟ್ಟೆ! ಸಭೆ ಮುಗಿದು ಹೊರಬಂದಾಗ ಮನೋಹರ ಗ್ರಂಥಮಾಲಾದ ಜಿ.ಬಿ. ಜೋಶಿಯವರು (ನನಗೆ ಮುಖತಃ ಅಪರಿಚಿತರು) ಬೆನ್ನು ತಟ್ಟಿದರು. ಬೆಂಗಳೂರು ವಿವಿನಿಲಯದ ಪ್ರಸಾರಾಂಗದ ನಿರ್ದೇಶಕರು “ನೀವು ತುಂಬಾ ಖಾರ” ಎಂದಷ್ಟೇ ಹೇಳಿ ತಲೆತಪ್ಪಿಸಿಕೊಂಡರು. ಪರವಾಗಿಲ್ವೇ ನಾನೂ ಏನೋ ಪರಿಣಾಮ ಉಂಟುಮಾಡಬಲ್ಲೆ ಎಂದುಕೊಂಡೆ.

(more…)

Categories: ಪುಸ್ತಕ ಲೋಕ