ಗತಕಥನದ ಲಹರಿಯಲ್ಲಿ ವರ್ತಮಾನ ಕಳೆದುಹೋಗದಂತೆ ಈ ವಾರ ಮತ್ತೆ ತಾತಾರ್ ತಡೆದಿದ್ದೇನೆ. ಹಸಿವು ಹೆಚ್ಚಿಸಿ ತಿನಿಸು ಮೆಚ್ಚಿಸುವ ರೀತಿಯಲ್ಲಿ ಇಲ್ಲೊಂದು ಕಟುಕರೋಹಿಣಿ ಕಷಾಯ ಕಾಯಿಸಿ ಇಟ್ಟಿದ್ದೇನೆ. ನಿಧಾನಕ್ಕೆ ತಗೊಳಿ, ಸೆರೆ ಸಿಕ್ಕೀತು, ಹುಶಾರ್!
ನನ್ನ ಪುಸ್ತಕೋದ್ಯಮದ (ಖರೀದಿ, ಮಾರಾಟ ಮತ್ತು ಪ್ರಕಟಣೆ) ಅನುಭವಗಳಲ್ಲಿ ‘ಅಪೂರ್ವ ಸ್ವಾದ’ ಕಂಡದ್ದೂ ಇದೆ, ‘ತುತ್ತಿನ ಕಲ್ಲು’ ಉಗುಳಿದ್ದೂ ಇದೆ. ಆದರೆ ಇವುಗಳಲ್ಲಿ ವೈಯಕ್ತಿಕತೆಯನ್ನು ಮೀರಿ, ಸಾಮಾಜಿಕ ಕುಶಿ ಅಥವಾ ಚಿಂತನೆಯ ಭಾಗಗಳಾಗುವಂತವನ್ನು ಎಚ್ಚರದಿಂದ ಸಾರ್ವಜನಿಕದಲ್ಲಿ ಹಂಚಿಕೊಂಡಿದ್ದೇನೆ. ಹಾಲಾಹಲವಾದರೆ ನೀಲಕಂಠನಾದರೂ ಸರಿ, ಅಮೃತ ಮೂಡಿದರೆ ಮೋಹಿನಿಯಾಗಲೇಬೇಕು (ಅನ್ಯಾರ್ಥಗಳನ್ನು ಮರೆತುಬಿಡಿ). ಈ ಮರೆಯಬಾರದ ಸಂಕೇತಗಳ ಪ್ರೇರಣೆಯಲ್ಲಿ ಫೆಬ್ರುವರಿ ೨೩ಕ್ಕೆ ನಾನು ಕೆಳಗೆ ಕಾಣಿಸಿದ ಲೇಖನ ಬರೆದೆ. ಮಿಂಚಂಚೆಯಲ್ಲಿ ಉದಯವಾಣಿಯ ಗೆಳೆಯ ಸತ್ಯಗಣಪತಿಗೆ ಕಳಿಸಿ “ಬೇಕೇ” ಕೇಳಿದೆ. ನನ್ನ ಕಾತರಕ್ಕೆ ಆತ ಉತ್ತರಿಸಲಿಲ್ಲ; ನಿರೀಕ್ಷೆ ಮೀರಿದ ಚುರುಕಿನಲ್ಲಿ ಮರುದಿನವೇ ಪ್ರಕಟಿಸಿಬಿಟ್ಟರು!
ಇಂದು ಮಾಧ್ಯಮಗಳ ವೈವಿಧ್ಯಕ್ಕೆ ತಕ್ಕಂತೆ ಸಂಪರ್ಕ ಸಾಧ್ಯತೆಗಳೂ ವಿಭಿನ್ನ. ಹಾಗಾಗಿ ಮೇ ಫ್ಲವರ್ ಮೀಡಿಯಾ ಹೌಸಿನ ಗೆಳೆಯ ಜಿ.ಎನ್. ಮೋಹನ್ನರಿಗೂ ಇದೇ ಲೇಖನವನ್ನು ದೂಡಿ (ಫಾರ್ವರ್ಡಿಸಿ), ಸೂಚಿಸಿದೆ, ‘ಇದು ಇಂದಿನ ಉದಯವಾಣಿಯಲ್ಲಿ ಪ್ರಕಟವಾಗಿದೆ. ನಿಮಗೆ ಬೇಕಾದಂತೆ ಬಳಸಿಕೊಳ್ಳಿ. ಅವರೂ ಮರುಕ್ಷಣದಲ್ಲಿ ತಮ್ಮ ‘ಅವಧಿ’ಯಲ್ಲಿ ಪ್ರಕಟಿಸಿದರು. ಈಗ ಮೊದಲು ಲೇಖನ ನೋಡಿ:

ಡಿವಿಕೆ ಮೂರ್ತಿ ಬೀಯೇ ಆನರ್ಸಿನಲ್ಲಿ (ಅರ್ಥಶಾಸ್ತ್ರ) ಸ್ವರ್ಣಪದಕ ಗಳಿಸಿ, ಅಧ್ಯಾಪನ ಮತ್ತು ಸಂಶೋಧನ ಅವಕಾಶಗಳು ಕೈಬೀಸಿ ಕರೆಯುತ್ತಿದ್ದಾಗ, ಸ್ವಇಚ್ಛೆಯಿಂದ ಅವನ್ನೆಲ್ಲ ನಿರಾಕರಿಸಿ, ಸ್ಪಷ್ಟ ವಿಚಾರದೊಡನೆ ಪುಸ್ತಕ ಲೋಕಕ್ಕೆ ಕಾಲಿಟ್ಟವರು. ಇವರು ನನ್ನಲ್ಲೇನು ಕಂಡರೋ ಬಿಟ್ಟರೋ ನನ್ನನ್ನೂ ಪುಸ್ತಕಲೋಕಕ್ಕೆ ತಂದರು. ಪ್ರಥಮ ಎಂಎ ಬೇಸಗೆ ರಜೆಯಲ್ಲಿ (೧೯೭೩) ಊರು ಸುತ್ತ ಹೊರಟವನಿಗೆ ಪುಸ್ತಕದ ಗಂಟಿನ ಅಂಟು ಹಾಕಿ, ಮುಂಬೈಯ ನಂಟು ಬೆಳೆಸಿಕೊಟ್ಟರು. ಹಸಿದವನಿಗೆ ಅನ್ನ ಕೊಡುವುದಿರಲಿ, ಅನ್ನ ಗಳಿಸುವ ಮಾರ್ಗವನ್ನೇ ಕಲಿಸಿಬಿಟ್ಟವರಿವರು. ನನಗೊಬ್ಬನಿಗೇಂತ ಅಲ್ಲ, ತನಗೆ ಸಹಜವಾಗಿ ಸ್ಫುರಿಸಿದ್ದನ್ನು (ಪುಸ್ತಕೋದ್ಯಮ) ಸಂಪರ್ಕಕ್ಕೆ ಬಂದವರ ಒಲವು ಗುರುತಿಸಿ ಹೇಳಿಕೊಟ್ಟರು, ಎಷ್ಟು ಕಾಲಕ್ಕೂ ಬಲವಾಗಿ ಬೆಂಬಲಿಸಿದರು. ಏಕಸ್ವಾಮ್ಯ, ವೃತ್ತಿ ಮಾತ್ಸರ್ಯ, ಅನಾರೋಗ್ಯಕರ ಸ್ಪರ್ಧಾಮನೋಭಾವ, ಅನುದಾರತೆ ಮುಂತಾದ ಶಬ್ದಗಳು ಡಿವಿಕೆ ಶಬ್ದಕೋಶದಲ್ಲೇ ಇರಲಿಲ್ಲ! ಈ ಕೆಲಸ ಇವರು ನನಗಿಂತಲೂ ಮೊದಲು ಹಲವರಿಗೆ ಮಾಡಿದ್ದರು. ನನ್ನನಂತರವೂ ಇನ್ನಷ್ಟು ಮಂದಿಗೆ ಮಾಡುತ್ತಲೇ ಇದ್ದರು. ಆದರೆ ಕನ್ನಡಮ್ಮನ ಸೇನೆಗೆ ತಾನೆಷ್ಟು ಹುರಿಯಾಳುಗಳನ್ನು ಸಜ್ಜುಗೊಳಿಸಿದೆನೆಂದು ಲೆಕ್ಕ, ಜಾಹೀರಾತು ಕೊಟ್ಟು ಪರೋಕ್ಷ ಲಾಭಗಳು ಬಿಡಿ, ಕನಿಷ್ಠ ಉಪಕೃತರ ಕೃತಜ್ಞತಾರ್ಪಣೆಗೂ ಅವಕಾಶ ಕೊಟ್ಟವರಲ್ಲ ಡಿವಿಕೆ!