Category Archives: ಯಕ್ಷಗಾನ

ಮಹಾಲಿಂಗರು ಕಂಡ ಸಂಜೀವರ ಸಾಹಸ

ಚಿಕ್ಕಾಸಿನ ಕೂಲಿಗೆ ಯಾರ್ಯಾರದೋ ಕಾರು ತೊಳೆಯುತ್ತಿದ್ದ ಹುಡುಗನಿಗೆ ಸಮೀಪದ ದೇವಾಲಯದ ವಠಾರದಿಂದ ‘ಯಕ್ಷ ಸಂಗೀತ’ಕೇಳಿದ್ದು, ಆಕರ್ಷಿತನಾದ್ದು ಆಶ್ಚರ್ಯವಲ್ಲ. ಹುಡುಗನ ಕುತೂಹಲ ಕಮರದಂತೆ ಕಲಿಸಿಕೊಟ್ಟ ಗುರು, ಕಿವಿಗೆ ಬಿದ್ದದ್ದು ಮನಸ್ಸು ದೇಹವನ್ನೇ ಏನು ಇಂದು ‘ಬೆಳೆದು ನಿಂತ ಹುಡುಗನ’ ಬದುಕನ್ನೇ ಆವರಿಸಿದ್ದು ಆಶ್ಚರ್ಯ. ಅಂಥವರು ರೂಢಿಯ ಜಾಡಿನಲ್ಲಿ ಮಾತಿನ ಗಾಡಿ ಹೊಡೆಯುವುದಾಗಲೀ ದೇಹದಂಡನೆಯಲ್ಲಿ ನಿರ್ವಂಚನೆಯ ಕಸುಬುಗಾರಿಕೆ ತೋರುವುದಾಗಲೀ ಇದು ಮೊದಲಲ್ಲ. ಆದರೆ ಆ ಅಭಿವ್ಯಕ್ತಿಯ ಶಿಲ್ಪಕ್ಕೆ ಕುಂದು ಬಾರದಂತೆ ಮರೆತುಹೋದ ಕುಸುರಿಯನ್ನು ಹುಡುಕಿ ತಂದು ಸೇರಿಸಿ, ಇವರಂತೆ ಭೂರಿ ಸಮಾರಾಧನೆ ನಡೆಸಿದವರು ಹಿಂದಿಲ್ಲ (ಮುಂದೆ ಇರಲಾರದು!) ಬಾಲ್ಯದಲ್ಲಿ ಅಕ್ಷರಜ್ಞಾನ ಅರ್ಥಾತ್ ಕಲಿಕೆಯ ಔಪಚಾರಿಕ ದ್ವಾರವನ್ನು ಅಷ್ಟಾಗಿ ಹಾದುಹೋಗಲಾಗದವರೂ ಲೋಕ ಶಿಕ್ಷಣದಲ್ಲಿ, ಕಾಲಪ್ರವಾಹದ ಸವಕಳಿಯಲ್ಲಿ ಗುರುವಾಗಿ ಸಂಪನ್ಮೂಲ ವ್ಯಕ್ತಿಯಾಗಿ ತೋರುವುದು ವಿಶೇಷವಲ್ಲ. ಇಂದೂ ಹೊಟ್ಟೆಪಾಡು ಮುಖ್ಯವಾಗಿ ಯಕ್ಷಶಿಕ್ಷಣಕ್ಕೆ ಬಂದು, ಅಕ್ಷರಕ್ಕೆರವಾಗುವ ಎಳೆಜೀವಗಳಿಗೆ ಸಂಜೀವವಾಗುವ, ಯಕ್ಷಶಿಕ್ಷಣದೊಡನೆ ಔಪಚಾರಿಕ ವಿದ್ಯೆಯನ್ನೂ ಒದಗಿಸುವ ಮಹಾಗುರುತನ ಗುರುತರವಾದದ್ದು, ಸದ್ಯ ಭಾರತದ ಸಂದರ್ಭದಲ್ಲಿ ಹೀಗೊಂದು ಸಾಧನೆಯನ್ನು ಕಾಣಿಸುತ್ತಿರುವ ಎರಡನೆಯ ಸಂಸ್ಥೆ -  ಉಡುಪಿಯ ಎಂ.ಜಿ.ಎಂ ಕಾಲೇಜಿನಾಶ್ರಯದ ಯಕ್ಷಗಾನ ಕೇಂದ್ರ (ವರ್ತಮಾನದ ಸಮರ್ಥ ನಿರ್ದೇಶಕ ಪ್ರೊ| ಹೆರಂಜೆ ಕೃಷ್ಣ ಭಟ್). ಕೇಂದ್ರದ ಒಡನಾಡಿದ ವ್ಯಕ್ತಿಶಕ್ತಿಗಳು ಬಹುವರ್ಣಮಯ. ಅದರ ಹುಟ್ಟು ಆಕಸ್ಮಿಕವೇ ಆದರೂ ವಿಕಾಸದಲ್ಲಿ ಇಂದು ಮುಟ್ಟಿದೆ ಸ್ವರ್ಣಪಥ. ಅದರ ಇತಿಹಾಸಕ್ಕೆ ಕೂರುವ ದೂಳು ತೊಳೆಯುತ್ತ, ಕಿಲುಬು ಕಳೆಯುತ್ತ, ‘ಗುರು’ತು ಮರೆತರೂ ಗುರುತು ಉಳಿಯುವ ಕೆಲಸ ಮಾಡುತ್ತಿರುವವರೇ (‘ಕಾರು ತೊಳೆದ ಹುಡುಗ’) ಬನ್ನಂಜೆ ಸಂಜೀವ ಸುವರ್ಣ. ಕೌಟುಂಬಿಕ ಹಿನ್ನೆಲೆ, ಸಂಸ್ಕಾರ ಯಕ್ಷಗಾನ ಕೇಂದ್ರದ ಪ್ರಾಂಶುಪಾಲ ಸಂಜೀವರಿಗೆ ನೂಕು ಬಲ ಕೊಟ್ಟಿಲ್ಲ. ಸಾಮಾಜಿಕ ವರ್ಗ ವಿಭಜನೆಗಳು ಸುವರ್ಣರಿಗೆ ಇಂದಿಗೂ ಅನುಕೂಲವಾಗಿರುವುದು ಸಂಶಯಾಸ್ಪದವೇ (ಅವರು ಎಲ್ಲೂ ಹೇಳಿಕೊಳ್ಳರು.). ಆದರೆ ಬೆಸ್ತರವಳ ಮಗ ‘ವೇದ’ಗ್ರಹಣ ಮಾಡಿದಂತೆ, ಕಾಡಬೇಡ ಮಹಾಕವಿಯಾದಂತೆ ಯಕ್ಷಲೋಕದಲ್ಲಿಂದು ಅದ್ವಿತೀಯ (ನಿರ್ವಿವಾದಿತ) ಮಹಾಗುರುವೆಂದರೆ ಬನ್ನಂಜೆ ಸಂಜೀವ ಸುವರ್ಣ.

Continue reading

ಯಕ್ಷಗಾನ ವಿಮರ್ಶೆಗಾಗಿ ದಾಕ್ಷಿಣ್ಯಬಿಟ್ಟವರು

“ಪ್ರದರ್ಶನದಲ್ಲಿ ಏನಾದರೂ ಹುರುಳುಂಟೇ ಅಥವಾ ಇದು ಕೇವಲ ನನ್ನೊಬ್ಬನ ಹಳವಂಡವೋ?” ಇದು ತನ್ನ ದೀವಟಿಗೆ ಪ್ರದರ್ಶನದ ಬೆನ್ನಲ್ಲಿ ಸದಾ ರಾಘವ ನಂಬಿಯಾರರು ಕೇಳುತ್ತಿದ್ದ ಪ್ರಶ್ನೆ. ಮನೋಹರ ಉಪಾಧ್ಯರ ಸೂಚನೆಯೊಂದಿಗೆ ನಾವು ಎರಡು ದೀವಟಿಗೆ ಪ್ರಯೋಗಗಳನ್ನು ವಿಡಿಯೋ ದಾಖಲೀಕರಣಕ್ಕಾಗಿಯೇ ಆಡಿಸಿ, ಮಾಡಿಸಿದ ಮೇಲೂ ಉಳಿದದ್ದು ಅದೇ ಪ್ರಶ್ನೆ “ದಾಖಲೀಕರಣದಲ್ಲಿ (ದೀವಟಿಗೆ ಪ್ರದರ್ಶನದಲ್ಲಿ) ಏನಾದರೂ ಹುರುಳುಂಟೇ ಅಥವಾ ಕೇವಲ ನಮ್ಮ ಶ್ರೇಷ್ಠತೆಯ ವ್ಯಸನವೇ?” ಪ್ರದರ್ಶನದಂದೇ ಕಲಾವಿದ ಗೋವಿಂದ ಭಟ್ಟರು ಪರೋಕ್ಷವಾಗಿ ಇಂಥ ಪ್ರಯತ್ನಗಳನ್ನೇ ಗೇಲಿಮಾಡಿದ್ದು ವಿಡಿಯೋ ದಾಖಲೆಯಲ್ಲೇ ನೀವು ಗಮನಿಸಬಹುದು. ಅದೇ ಗೋವಿಂದ ಭಟ್ಟರು ವಿಡಿಯೋ ಪ್ರಕಟವಾದ ಕೆಲವು ವಾರಗಳ ಮೇಲೆ ಹೀಗೇ ಅಂಗಡಿಗೆ ಬಂದವರನ್ನು ನಾನು ಎರಡೂ ವಿಡಿಯೋ ನೋಡಿದಿರಾ? ಹೇಗಾಯ್ತು ಎಂದು ಕುರಿತು ವಿಚಾರಿಸಿದೆ. “ಬಡಗಿನದ್ದು ನೋಡಿದೆ, ಒಳ್ಳೇದಾಗಿದೆ. ತೆಂಕು ಇನ್ನೂ ನೋಡಿಲ್ಲ. ಪ್ರದರ್ಶನ ಕಳೆಗಟ್ಟಿರಲಾರದು. ನಮ್ಮಲ್ಲಿ (ತೆಂಕುತಿಟ್ಟಿನಲ್ಲಿ) ತಂಡವಾಗಿ ಹೊಂದಿಕೊಂಡು ಹೋಗುವುದಿಲ್ಲ, ಎಲ್ಲರೂ ಬುದ್ಧಿವಂತರೇ” ಎಂದು ಹೇಳಿ, ಅವರ  ಗುಟ್ಟುಬಿಡದ ತೆಳು ನಗೆಯೊಡನೆ ಜಾರಿದರು!

Continue reading

ಸಾವಿರಕಂಬದ ಊರಿನಲ್ಲಿ ಸಾವಿರದ ಸಂಭ್ರಮ

[ಪ್ರಿಯರಾದ ಶತಾವಧಾನಿ ಗಣೇಶ್ ಮತ್ತು ಮಂಟಪ ಪ್ರಭಾಕರ ಉಪಾಧ್ಯರಿಗೆ ಒಂದು ತೆರೆದ ಪತ್ರ.]

ಪೂರ್ವರಂಗ: ಮಂಗಳೂರಿನ ಪ್ರಥಮ ಅಷ್ಟಾವಧಾನ (೪-೮-೧೯೯೧) ಕಾಲದಿಂದ, ‘ಭಾಮಿನಿ’ ಬರಲಿದ್ದಾಳೆ ಎಂದು ಖಾಸಗಿಯಾಗಿ ಕೈರಂಗಳದಲ್ಲಿ ನನಗೆ ಅದರ ಕರಪತ್ರದ ಮಾದರಿ ತೋರಿಸಿದಂದಿನಿಂದ ನಿಮ್ಮನ್ನು ಬುದ್ಧಿ ಭಾವಗಳೊಡನೆ ಅನುಸರಿಸುವ ಅಸಂಖ್ಯರಲ್ಲಿ ನಾನು ಒಬ್ಬನಾಗಿಯೇ ಇದ್ದೇನೆ. ಭಾರತೀಯ ವಿದ್ಯಾಭವನದಲ್ಲಿ, ಮನೋಹರ ಉಪಾಧ್ಯರ ಮನೆಯಲ್ಲಿ, ಶಿವಮೊಗ್ಗದ ಅಹೋರಾತ್ರಿಯಲ್ಲಿ, ಎಂಜಿಎಂನಲ್ಲಿ, ಸನಾತನ ನಾಟ್ಯಾಲಯದಲ್ಲಿ ಎಲ್ಲೆಂದರಲ್ಲಿ ಏಕವ್ಯಕ್ತಿಯ ವಿವಿಧ ಪ್ರಸಂಗಗಳನ್ನು ನೋಡಿದ್ದು ಮಾತ್ರವಲ್ಲ, ಇಷ್ಟ ಮಿತ್ರರಲ್ಲಿ ಹಂಚಿಕೊಂಡಿದ್ದೇನೆ, ನನ್ನ ತಂದೆಯ ಆತ್ಮಕಥೆ ಬಿಡುಗಡೆಯ ಸಭೆಯಲ್ಲಿ ‘ಆಡಿಸಿ’ಯೂ ಸಂತೋಷಪಟ್ಟಿದ್ದೇನೆ. ಯಕ್ಷ-ಚಿತ್ರ-ಕಾವ್ಯಾವಧಾನವೆಂಬ ಸರ್ಕಸ್ಸಿನಲ್ಲಿ (ನನಗೆ ಸರ್ಕಸ್ಸಿನ ಬಗ್ಗೆ ತಿರಸ್ಕಾರವಿಲ್ಲ), ಕೊಂಡದಕುಳಿಯವರೊಡನೆ ಯುಗಳ ಪ್ರದರ್ಶನದಲ್ಲಿ, ಶ್ಯಾಮಭಟ್ಟರ ದಾಕ್ಷಿಣ್ಯಕ್ಕೆ ಬಲಿಬಿದ್ದ ತೆಂಕಿನ ವೇದಿಕೆಯಲ್ಲಿ, ಜನಪ್ರೀssssಯ ಬೇಡಿಕೆಯ ಮೇರೆಗೆ ಮತ್ತೆ ಜೊಲ್ಲು ಸುರಿಸುವ ಚಿಟ್ಟಾಣಿಗೆ ಮೋಹಿನಿಯಾಗುವಲ್ಲಿಯೂ ನಾನು ಪ್ರೇಕ್ಷಕನಾಗಿ (ಕಭಿ ಕುಷ್, ಕಭಿ ಗಂ!) ನಿಮ್ಮ ಪ್ರದರ್ಶನಗಳನ್ನು ಅನುಭವಿಸಿದ್ದೇನೆ. ಅಂದಂದಿನ ನನ್ನ ಗ್ರಹಿಕೆಯ ಏರಿಳಿತಗಳೇನಿದ್ದರೂ ನಿಮ್ಮ ಒಟ್ಟು ಸಂಕಲ್ಪ, ಯೋಗ್ಯತೆ ಮತ್ತು ದುಡಿಮೆಗಳ ಬಗ್ಗೆ ಎರಡಿಲ್ಲದ ವಿಶ್ವಾಸದಲ್ಲಿ ಮತ್ತೆ ಮತ್ತೆ ನಿಮ್ಮೆದುರು ನನ್ನನ್ನು (!) ಕಾಣಿಸಿಕೊಳ್ಳುತ್ತಲೇ ಬಂದಿದ್ದೇನೆ. ಅದೇ ಪ್ರೀತಿಯಿಂದ, ಅಂಗಡಿಯಲ್ಲಿ ಆರ್ಥಿಕ ವರ್ಷದ ಕೊನೆಯ ಒತ್ತಡಗಳು ಉಳಿದಿದ್ದರೂ ದೃಢ ಮನಸ್ಸು ಮಾಡಿ ಸಾವಿರದ ಸಂಭ್ರಮದಲ್ಲಿ ಭಾಗಿಯಾದೆ.

Continue reading

ಯಕ್ಷ ದಾಖಲೀಕರಣದ ಫಲಶ್ರುತಿ

ಓ ಮೊನ್ನೆ ಕವಿ, ಕಲಾವಿದ ಕೆ.ವಿ ರಮಣ್ ಅನಿರೀಕ್ಷಿತವಾಗಿ ನನ್ನ ಅಂಗಡಿಗೆ ಬಂದು ನನ್ನ ಒಂದು ಮಿನಿಟಿನ ಬಿಡುವು ಕೇಳಿ ಹೇಳಿದ ಮಾತಿನ ಸಾರ, “ಯಕ್ಷಗಾನ ಎಂದರೆ ವೀರರಸ, ಅಬ್ಬರ (ಒರಟು), ಪುರುಷಕಲೆ ಎನ್ನುವ ಗ್ರಹಿಕೆ ನನ್ನಲ್ಲಿ ಬೇರೂರಿತ್ತು. ಇದನ್ನು ದೀವಟಿಗೆ ಬೆಳಕಿನ ಹಿಡಿಂಬಾ ವಿವಾಹ ಡಿವಿಡಿ ವೀಕ್ಷಣೆಯಲ್ಲಿ ನಾನು ಗುಣಾತ್ಮಕವಾಗಿ ಕಳಚಿಕೊಂಡೆ. ಬಡಗು ತಿಟ್ಟು ಸ್ವಭಾವತಃ ತೆಂಕಿಗಿಂತ ಕೋಮಲವಾದದ್ದೇ. ಆದರಿದು ಇನ್ನಷ್ಟು ಸೂಕ್ಷ್ಮಗಳಲ್ಲಿ, ಸೌಮ್ಯ ಭಾವಗಳಲ್ಲಿ ನಮ್ಮನ್ನು ಆಪ್ತವಾಗಿಸಿಕೊಂಡು ಸಂವಹನಿಸಿದೆ. ಕ್ಯಾಮರಾ ಚಳಕಗಳು ಇಲ್ಲದೆ ವೀಕ್ಷಣೆಯ ಅಬಾಧಿತವಾಗಿಸಿರುವುದು ತುಂಬ ಮೆಚ್ಚಿಕೊಂಡೆ. ಕೃತಜ್ಞತೆಗಳು.”

Continue reading