ತಾತಾರ್ ಲೇಖನ ಮುಂದೊಂದು ವಾರಕ್ಕೆ ಮತ್ತೆ ದೂಡುತ್ತಿರುವುದಕ್ಕೆ ನಿಮ್ಮಿಂದ ಕ್ಷಮೆ ಕೇಳಲೇ ಮಗ ಅಭಯನಿಗೆ ಪ್ರಥಮ ಸಿನಿಮಾ – ಗುಬ್ಬಚ್ಚಿಗಳು, ಇದಕ್ಕೆ ಸ್ವರ್ಣಕಮಲ ಬಂದ ಸಂತೋಷದ ವಾರ್ತೆ (ನೋಡಿ: www.abhayatalkies.com) ಬಿತ್ತರಿಸಿ ನಾನದಕ್ಕೆ ಸಂಬಂಧಿಸಿದ ಓಡಾಟಗಳಲ್ಲಿ ವ್ಯಸ್ತನಾಗಿದ್ದೆ ಎನ್ನಲೇ! ಏನೇ ಇರಲಿ, ಸದ್ಯ ತಮ್ಮ ಅನಂತ ವರ್ಧನ (ಅ-ತೃತೀಯ) ನನ್ನ ಲೇಖನ ಛಲದೊಳ್ ದುರ್ಯೋಧನಕ್ಕೆ ಪೂರಕವಾಗಿ ಅವನ ನೆನಪುಗಳ ಒಂದಷ್ಟು ಹೊರೆ ಇಳಿಸಿದ್ದನ್ನು ಇಲ್ಲಿ ಕೊಡುತ್ತಿದ್ದೇನೆ. ಕೊನೆಯಲ್ಲಿ ಈ ತೀನಿ ನಿಮಗೆ ರುಚಿಸಿದ್ದಕ್ಕೆ ನಾಲ್ಕು ಸಾಲಾದರೂ ಬರೆಯುವುದು ಮರೆಯಬೇಡಿ.
Entries categorized as ‘ಹೀಗೆ ಒಂದಿಷ್ಟು’
ಛಲದೊಳ್ ದುರ್ಯೋದನಂ!
December 31, 2009 · 36 Comments
‘ಬ್ರಹ್ಮಚರ್ಯವೇ ಜೀವನ, ವೀರ್ಯನಾಶವೇ ಮೃತ್ಯು’ – ಸ್ವಾಮಿ ಶಿವಾನಂದರ ಉಕ್ತಿಯನ್ನು ಅಕ್ಷರಶಃ ನಂಬಿ, ಕೇಳುವ ಕಿವಿಗಳಿಗೆ ಧಾರಾಳ ಹೇಳುತ್ತಿದ್ದ ಮತ್ತೆ ತನ್ನ ಮುಕ್ಕಾಲು ಶತಮಾನದ ಬಾಳಿನುದ್ದಕ್ಕೂ ಯಾರೂ ಸಂದೇಹಪಡದಂತೆ ಹಾಗೇ ಬಾಳಿದ ಜಿ.ಟಿ. ಈಶ್ವರ ನನ್ನ ಚಿಕ್ಕಪ್ಪಂದಿರಲ್ಲಿ (ನಾಲ್ವರಲ್ಲಿ) ದೊಡ್ದವ, ನನ್ನ ತಂದೆಗಿಂತ ಎಂಟೇ ವರ್ಷ ಚಿಕ್ಕವ. [ನೀವು ತಪ್ಪು ತಿಳಿಯುವ ಮೊದಲು ಒಂದು ಸ್ಪಷ್ಟನೆ: ನಮ್ಮ ಕುಟುಂಬದಲ್ಲಿ ಅದೂ ಸಣ್ಣ ಕಕ್ಷೆಯೊಳಗೆ ಯಾವ ತರ್ಕಗಳೂ ಇಲ್ಲದೆ, ಪ್ರೀತಿ, ಗೌರವಗಳಿಗೆ ಕುಂದಿಲ್ಲದೆ ರೂಢಿಸಿರುವಂತೆ ಈತನೂ ನಮ್ಮಿಂದ ಏಕವಚನದ ಮತ್ತು ನೇರ ಹೆಸರಿನ ಸಂಬೋಧನೆಗೇ ಒಳಗಾದವ.] ಈಶ್ವರ ನೆಚ್ಚಿದ ಇನ್ನೊಂದು ಸ್ವಾಮಿ ವಿವೇಕಾನಂದ. ಅವರು ಹೇಳಿದ್ದನ್ನು ಸ್ವಲ್ಪ ಆಚೀಚೆ ಮಾಡಿ ‘ದೃಢ ಮನಸ್ಸಿಗೊಂದು ಉಕ್ಕಿನ ದೇಹ’ ರಚಿಸಿ, ಕಾಪಾಡುವುದರಲ್ಲಿ ಜೀವಮಾನವನ್ನೇ ಮೀಸಲಿಟ್ಟವನೂ ಈ ಈಶ್ವರ! ರಜೆಗೆ ಅಜ್ಜನಮನೆಗೆ (ಮಡಿಕೇರಿಯಿಂದ ಆರು ಮೈಲು ದೂರದ ಮೋದೂರು) ಹೋಗುವ ನನ್ನಂಥವರಿಗೆ (ಬಾಲರಿಗೆ) ಈಶ್ವರ ಬಲುದೊಡ್ಡ ಆಕರ್ಷಣೆ, ಆದರ್ಶ. ನನಗೆ ಬೆಳಗಾಗುವ ಎಷ್ಟೋ ಮೊದಲು (ನಾಲ್ಕೋ ಐದೋ ಗಂಟೆಗೆ) ಈತ ಎದ್ದು, ಕೊರೆಯುವ ಚಳಿಯಲ್ಲಿ ತಣ್ಣೀರು ಮಿಂದು, ಗಂಟೆಗಟ್ಟಳೆ ಯೋಗಾಸನ ಮಾಡಿ, ವಿಚಿತ್ರಪಾಕದ (ಉಪ್ಪು, ಕಾರ, ಹುಳಿಗಳ ಹಂಗಿಲ್ಲದ ಆದರೆ ಎಲ್ಲ ಜೀವಾತುಗಳ ಸಂಗಮವೆನಿಸಿದ ಮಡ್ಡಿ) ಬುತ್ತಿ ಕಟ್ಟಿಕೊಂಡು ಮಡಿಕೇರಿಯ ಪಾಲಿಟೆಕ್ನಿಕ್ಕಿಗೆ ವಿದ್ಯಾರ್ಥಿಯಾಗಿ ಓಡುತ್ತಿದ್ದ. ಅದಕ್ಕೂ ಮಿಗಿಲಾಗಿ ಗಾಢಾಂಧಕಾರದಲ್ಲಿ ಮತ್ತೆ ಒಂಟಿಯಾಗಿ ಆತ ಮರಳುತ್ತಿದ್ದನಲ್ಲಾ ಅದು, ಇನ್ನಷ್ಟು ಪರಿಣಾಮ ಬೀರುತ್ತಿತ್ತು. ಅಂದ ಕಾಲತ್ತಿಲೆ ಮಡಿಕೇರಿಯೇ ಕತ್ತಲಮೂಟೆ. ಆ ಸಣ್ಣ ಪೇಟೆ ಕಳೆದದ್ದೇ ಸಿಗುವ ಕಾಫಿ, ಏಲಕ್ಕಿ ತೋಟಗಳೆಂದರೆ ರಾತ್ರಿಯಲ್ಲಿ ಗೊಂಡಾರಣ್ಯವೇ. ಅದರ ನಡುವೆ ನಡುಗುವ ದಾರಿಯಲ್ಲಿ ಇನ್ನಷ್ಟು ಭಯಹುಟ್ಟಿಸುವ ಹರಿಶ್ಚಂದ್ರ ಘಾಟ್ (ಬ್ರಾಹ್ಮಣರ ಶ್ಮಶಾನ) ದಾಟಿ ಬರಬೇಕು. ಇನ್ನು ಭೋರ್ಗರೆವ ಮಳೆಗಾಲದಲ್ಲಿ, ಸೊಂಯ್ಗುಟ್ಟುತ್ತ ಮೂಳೆಯಾಳಕ್ಕಿಳಿಯುವ ಚಳಿಗಾಳಿಗಳ ಇರಿಚಿಲಿನ ಹೊಡೆತದಲ್ಲಿ, ಇಂಬುಳ ಹಾವುಗಳಿಂದ ಹಿಡಿದು ಅಬ್ಬರಿಸುವ ಅರ್ಬುತನವರೆಗೆ ಏನೂ ಅಟಕಾಯಿಸಬಹುದಾದ ಪರಿಸರದಲ್ಲಿ ಕೂದಲೂ ಕೊಂಕದೆ ಬರುವ ಈಶ್ವರ ನನಗೆ ವಿವರಿಸಲಾಗದ ಅಚ್ಚರಿ. ಹಾಗೆ ಬರುವಲ್ಲಿ ಆತ ದಿನಕ್ಕೊಂದು ಭೂತಕ್ಕೆ ಹಾಕಿದ ಪಟ್ಟು, ಪಿಶಾಚಕ್ಕೆ ಕೊಟ್ಟ ಪೆಟ್ಟು ಕೇಳುತ್ತಾ ನನ್ನ ನಿದ್ರೆ ಚಟ್ಟು. ಈಶ್ವರ ಸಾವಿಲ್ಲದ ಸರದಾರ, ಅಲೆದಾಡುವ ಭೂತ, ಸಾಕ್ಷಾತ್ ಫ್ಯಾಂಟಮ್! ಉಳಿದ ವೇಳೆಯಲ್ಲೂ ಮಕ್ಕಳು ಅಟಕಾಯಿಸಿದಾಗೆಲ್ಲ ಆತ ಮತ್ತಷ್ಟು ರೋಚಕವಾಗಿ ಬಿತ್ತರಿಸುತ್ತಿದ್ದ ಸೈನ್ಯದ ಪ್ರಸಂಗಗಳು, ನೆನಪಿಸಿಕೊಳ್ಳುತ್ತಾ ತಾನೇ ಉಸಿರು ಸಿಕ್ಕಿಹೋಗುವಂತೆ ನಗುತ್ತಿದ್ದ ಜೋಕುಗಳು, ಅಲ್ಲಿ ಆತ ನೋಡಿದ ಜಗಜಟ್ಟಿ ಗಾಮಾ ದಾರಾಸಿಂಗ್ ಕಿಂಗ್ ಕಾಂಗ್ ಮುಂತಾದವರ ಮಲ್ಲಯುದ್ಧದ ಬಿಡಿಬಿಡಿ ಸನ್ನಿವೇಶಗಳು ಕೇಳಿದಷ್ಟೂ ಮುಗಿಯದು. (ಈಚೆಗೆ ಆತನ ಮನೆಗೆ ಹೋಗಿ ಬಂದ ಮಕ್ಕಳು ಕೇಳುವುದಿದೆ “ಈಶ್ವರಜ್ಜನ ಮನೆ ಅಡಿಗೆ ಮನೆ ಕಿಟಕಿಯಿಂದ ದೋಸೆ ಕೇಳುವ ಭೂತದ ಕೈ ಬಂದದ್ದು ನಿಜವಾ?”) ಈಶ್ವರ ಅಮರ ಕತೆಗಳ ಖಜಾನೆ.
Categories: ಹೀಗೆ ಒಂದಿಷ್ಟು
ಪರಿಸರ ಚಳವಳಿಯ ಸಾಂಸ್ಕೃತಿಕ ಮುಖ
November 26, 2009 · 8 Comments
“ಪರ್ವತಾರೋಹಣ ವನ್ಯಸಂರಕ್ಷಣೆಗಳ ಬಗ್ಗೆ ಮಾತಾಡಿದ ತೀವ್ರತೆಯಲ್ಲಿ ನೀವು ಯಕ್ಷಗಾನವೋ ಇನ್ನೊಂದು ಕಲಾಪ್ರಕಾರದ ಬಗ್ಗೆಯೋ ಮಾತಾಡ್ತೀರಿ. ಅದನ್ನು ಪರಿಸರ ಪ್ರೀತಿ ಎನ್ನಬಹುದು. ಇದು?” ಮಣ್ಣು, ನೀರು, ಗಾಳಿ, ಹಸಿರು, ಜೀವವೈವಿಧ್ಯ ಇತ್ಯಾದಿ ಹೆಸರಿಸುವ ಎಲ್ಲಾ ಪ್ರಾಕೃತಿಕ ಸತ್ಯಗಳು ಮನುಷ್ಯನ ಜೀವ-ಪರಿಸರವನ್ನು ಪೋಷಿಸಿದಷ್ಟೇ ಮುಖ್ಯವಾಗಿ ಆಗಬೇಕಾದದ್ದು ಮನುಷ್ಯನ ಭಾವ-ಪರಿಸರದ ಪೋಷಣೆ. ಅದಕ್ಕಾಗಿ ಶುದ್ಧ ಗಾಳಿ, ಶುದ್ಧ ನೀರು ಎಂದಿತ್ಯಾದಿ ಹಕ್ಕೊತ್ತಾಯ ನಡೆಸಿದಷ್ಟೇ ತೀವ್ರವಾಗಿ ರುಚಿ ಶುದ್ಧವಾದ ಕಲೆ, ರಾಜಕಾರಣರಹಿತ ಧರ್ಮ, ಪ್ರದರ್ಶನಕ್ಕೆ ಕಳೆದುಹೋಗದ ಸಂಸ್ಕೃತಿಗಳ ಬಗ್ಗೆ ಕೆಲಸ ಮಾಡಬೇಕಾಗಿದೆ.
Categories: ವನ್ಯಲೋಕ · ಹೀಗೆ ಒಂದಿಷ್ಟು
ಬರಗಾಲದಲ್ಲಿ ಮಸಾಲೆದೋಸೆ
October 24, 2009 · 11 Comments
ಕರ್ನೂಲಿನ ನನ್ನ ಹಿರಿಯ ಗೆಳೆಯ ಶ್ರೀ ಚಂದ್ರಶೇಖರ ಕಲ್ಕೂರರ ಸ್ಥಿರ, ಚರ ಸೊತ್ತುಗಳೆಲ್ಲ ಈಚೆಗೆ ಅವರ ಮಾತಿನಲ್ಲೇ ಹೇಳುವಂತೆ ‘ಮೂವತ್ತೆರಡು ಗಂಟೆಗಳ ಕಾಲ ತುಂಗಭದ್ರಮ್ಮನ ಹೊಟ್ಟೆಯಲ್ಲಿತ್ತು.’
ಚಂದ್ರಶೇಖರ ಕಲ್ಕೂರರ ಅಜ್ಜ ಊರಿನಲ್ಲಿ (ಉಡುಪಿ ಜಿಲ್ಲೆಯ ಬ್ರಹ್ಮಾವರ) ಹೊಟ್ಟೆಗೂ ಗತಿಯಿಲ್ಲದ ಕಾಲದಲ್ಲಿ ‘ಒಂದು ಸೌಟು’ ಹಿಡಿದುಕೊಂಡು ಭವಿಷ್ಯ ಅರಸಿ ಆಂಧ್ರಪ್ರದೇಶಕ್ಕೆ ವಲಸೆಹೋದವರು. ‘ಅನ್ನ ಮಾರಿ’ ಮಗ, ಮೊಮ್ಮಗನ ಕಾಲಕ್ಕೆ ಸಮೃದ್ಧಿ, ವಿದ್ಯೆ, ಸಂಸ್ಕೃತಿಗಳ ನೆಲೆ ಕಾಣಿಸಿದರು. ಸುಮಾರು ಹದಿನೈದು ವರ್ಷಗಳ ಹಿಂದೆ ನಾನು ಮೋಟಾರ್ ಸೈಕಲ್ಲಿನಲ್ಲಿ ಭಾರತ ಪ್ರವಾಸ ಕೈಗೊಂಡಿದ್ದಾಗ ಕಲ್ಕೂರರ ಹೋಟೆಲ್ ಕರ್ನೂಲಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದು. ಚಂದ್ರಶೇಖರ ಕಲ್ಕೂರ ಆಂಧ್ರಪ್ರದೇಶ ಹೋಟೆಲಿಗರ ಸಂಘದ ಅಧ್ಯಕ್ಷ. ಇವರು ನೆಚ್ಚಿದ ಪಕ್ಷ ಕಾಂಗ್ರೆಸ್ಸಾದರೂ ‘ಪಕ್ಷಪಾತ’ ಇವರ ಸಾರ್ವಜನಿಕ ಸೇವೆಯಲ್ಲಿರಲಿಲ್ಲ. ಅಪಾರ ಓದು (ಆಂಧ್ರದ ವಿದ್ಯಾರ್ಥಿಯಾದರೂ ಸ್ವಂತ ಗಳಿಕೆಯಲ್ಲಿ ಬಲು ದೊಡ್ಡ ಕನ್ನಡ ಓದುಗ ಮತ್ತು ಕಾರ್ಯಕರ್ತನೂ ಹೌದು), ಲೋಕಾನುಭವ ಮತ್ತು ಅಪರಿಮಿತ ಮಿತ್ರಬಳಗದ ಚಂದ್ರಶೇಖರರು ಕಾನೂನು ಪದವೀಧರರೂ ಹೌದು. ಈಚೆಗೆ ತನ್ನ ವಾಣಿಜ್ಯ ವ್ಯವಹಾರಗಳನ್ನು ಉತ್ತರಾಧಿಕಾರಿಗಳಿಗೆ ಬಿಟ್ಟು ಹವ್ಯಾಸೀ ವಕೀಲರಾಗಿದ್ದರು. ಇವರ ಸಾಮಾಜಿಕ ಸಂಶೋಧನಾಸಕ್ತಿ ಕರ್ನೂಲಿನ ಪಕ್ಕದ ನದಿ ತುಂಗಭದ್ರೆಯ ಕುರಿತು ವಿಸ್ತಾರವಾಗಿ ಹರಿದಿತ್ತು. ದುರಂತವೆಂದರೆ ಅದೇ ತುಂಗಭದ್ರೆ ಮೊನ್ನೆ ಶುದ್ಧ ಮಾನವಕೃತ ಅವ್ಯವಸ್ಥೆಯಲ್ಲಿ ಇವರನ್ನು ಕೇವಲ ಉಟ್ಟ ಬಟ್ಟೆಯಲ್ಲಿ ದಿಕ್ಕೆಡಿಸಿ ಓಡಿಸಿತ್ತು.
Categories: ಹೀಗೆ ಒಂದಿಷ್ಟು