ತೆಪ್ಪಕಾಡಿನಲ್ಲಿ ತೆಪ್ಪಗೆ ಬಿದ್ದವರ ಕಥೆಯಂತೂ ನಿಮಗೆ ಗೊತ್ತಾಯ್ತು. ಹಾಗೆಂದು ಮಸಣಿಗುಡಿಗೆ ಹೋದವರು ಹಿಂದಿನ ಯೋಚನೆಗಳನ್ನು ಇಟ್ಟುಕೊಳ್ಳುವುದು ಹೇಗೆ ಎಂದು ತಪ್ಪು ಭಾವಿಸಬೇಡಿ. ಅವರು ಮಸಣಿಗುಡಿ ತಲಪಿದ್ದೇ ಊರಬಾಗಿಲಿನಲ್ಲೇ ಇದ್ದ ಚೆಕ್ ಪೋಸ್ಟ್ ಬಳಿಯ ಮೈದಾನದಲ್ಲಿ ಬೀಡುಬಿಟ್ಟರು. ನಾಗರಾಜ್ ರೋಪಿಗೆ ಎಲ್ಲ ಗುಡಾರಗಳನ್ನು ವ್ಯವಸ್ಥಿತವಾಗಿ ಬಿಡಿಸಲು ಸೂಚನೆ ಹೋಯ್ತು. ಬಹಳ ಬಿಸಿಯಿಂದಲೇ ಸುರು ಮಾಡಿದ್ದರಂತೆ, ಆದರೆ ಬೆಣ್ಣೆಯಂತಾ ಸದಸ್ಯರು ಕರಗಿಹೋದರು. ಜಾವೀದ್ ಸೇಟ್ ಮತ್ತು ಬಾಲಸುಬ್ರಹ್ಮಣ್ಯಂ ಸೇರಿ ಮೊದಲ ಗುಡಾರ ಎಬ್ಬಿಸಿದರು. ಉಳಿದವು ಮೆಲ್ಲ ಮೆಲ್ಲನೆ ಏಳುತ್ತಿದ್ದಂತೆ ಜಾವೀದ್ ರೋಪಿಗೆ ಶಿಬಿರಾಗ್ನಿಗೆ ಸೌದೆ ಸಂಗ್ರಹಿಸುವ ಆದೇಶ ಹೊರಟಿತು. ಇದಕ್ಕೂ ಬಾಲಗ್ರಹ. ಇನ್ನೊಂದು ತಂಡ ನೀರು ಸಂಗ್ರಹಕ್ಕೆ ಹೊಯ್ತು. ಇಲ್ಲ, ಬಾವಿಗೆ ಬೀಳಲಿಲ್ಲ, ಅಲ್ಲಿಗೆ ಚಕ್ರದ ಮೇಲೆ ಬಂದಿದ್ದ ಸಣ್ಣ ಪ್ರಾಣಿ ಸಂಗ್ರಹಾಲಯದ ಹುಲಿ ಸಿಂಹಗಳನ್ನು ನೋಡುತ್ತ ಮೈಮರೆಯಿತು. ಮತ್ತೆ ಕೆಲವರು ಗೂಡು ಹೋಟೇಲಿನಲ್ಲಿ ಊರಿನ ರುಚಿಗಳನ್ನು ಪರೀಕ್ಷಿಸಿದರು. ಉಂಡಾಡಿಗಳ ಉಡಾಫೆ ಸಹಿಸದೆ ಹುಡುಗಿಯರು ಸುಮಾರು ಸೌದೆ ಸಂಗ್ರಹಿಸಿದರು. ಅವರೇ ನೀರಿನ ಹೊಣೆಗಾರರಿಗೆ ಮಾತಿನಲ್ಲಿ ಕುಕ್ಕಿ ಚುರುಕು ಮೂಡಿಸಿದರು. ಊಟದ ವೇಳೆಯೂ ಬಂತು (ಮಾಡಿದರು) ಆದರೆ ಉಳಿದೇ ಹೋಯ್ತು ಪಲ್ಲವಿ… `ಇನ್ನೂ ಯಾಕ ಬರಲಿಲ್ಲವ್ವಾ ತೆಪ್ಪಕಾಡಿನಂವಾ’
ಒದ್ದೆ ಕನಸುಗಳು (ತಾತಾರ್ ೩)
February 10, 2010 · 6 Comments
→ 6 CommentsCategories: ಪ್ರವಾಸ ಕಥನ · ವನ್ಯಲೋಕ
ನಿರಾಶ್ರಿತರ ಶಿಬಿರ
January 28, 2010 · 6 Comments
[ವಿ.ಸೂ: ಮುಂದೆ ಹಳಗಾಲದ ನಿರೂಪಣೆಯ ಉದ್ದಕ್ಕೆ ಈ ತೆರನ [ ] ದೊಡ್ಡ ಕಂಸದೊಳಗೆ ಈ ಕಾಲದ ವಗ್ಗರಣೆ ಅಥವಾ ಟಿಪ್ಪಣಿ ಎನ್ನಿ, ಹಾಕುತ್ತಿರುತ್ತೇನೆ]
ಡಿಸೆಂಬರ್ ೧೫, ೧೯೭೧ರ ಬೆಳಿಗ್ಗೆ ನಾನು ನಾಲ್ಕು ಗಂಟೆಗೇ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿ, ಅವಸರದಲ್ಲಿ ತಿಂಡಿ ಕುಡಿದು ಕಾಫಿ ತಿಂದೆ. ಪ್ಯಾಂಟು ಶರಟುಗಳೊಳಗೆ ತೂರಿದ್ದಲ್ಲದೆ ಊಟಿಯ ಚಳಿಯ ನಿರೀಕ್ಷೆಯಲ್ಲಿ ತಂದೆಯ ಹಳೆಯ ಕೋಟೊಂದನ್ನೂ ಏರಿಸಿಕೊಂಡೆ. [ಆ ಪ್ರಾಯದಲ್ಲಿ ‘ಕೊಡಗಿನವನಾದ’ ನಾನು, ಸ್ವೆಟ್ಟರ್ ಬಳಸುವುದು ಅವಮಾನಕಾರಿ ಎಂದೇ ಇತ್ತು, ನನ್ನಲ್ಲಿರಲೂ ಇಲ್ಲ!) ಮಧ್ಯಾಹ್ನದ ಊಟಕ್ಕೆ ಮಿತ್ರರೊಡನೆ ಹಂಚಿ ತಿನ್ನಲು ಕಟ್ಟಿಟ್ಟ ರೊಟ್ಟಿಗಂಟನ್ನು ದಿನಮುಂಚಿತವಾಗಿ ಇತರ ಸಾಮಾನುಗಳನ್ನು ತುಂಬಿ ಸಜ್ಜುಗೊಂಡಿದ್ದ ಸುಲಭೋಪಾಯದ ಬೆನ್ನುಚೀಲದಲ್ಲಿ ಇರುಕಿಸಿ, ಅದರ ಬಾಯಿ ಬಿಗಿದು ಬೆನ್ನಿಗೇರಿಸಿದೆ. ಬಲಗೈಯಲ್ಲಿ ಗಾಂಧೀ ಬಂಟ – ಊರುಗೋಲು. ಕಾಲಿಗೆ ಬೇಟೆಗಾರನ ಪಾದರಕ್ಷೆ ಅಥವಾ ಹಂಟರ್ ಶೂ. ನನ್ನಲ್ಲಿ ಅಷ್ಟಾಗಿ ಪ್ರಾಮುಖ್ಯ ಸಲ್ಲಬೇಕಿಲ್ಲದ ತಲೆಗೆ ಕಾಡುಟೊಪ್ಪಿ ಅಥವಾ ಜಂಗಲ್ ಹ್ಯಾಟ್.
→ 6 CommentsCategories: ಪ್ರವಾಸ ಕಥನ
ಈಶ್ವರ ದುರ್ಯೋಧನನಾದದ್ದು ಯಾಕೆ?
January 25, 2010 · 14 Comments
ತಾತಾರ್ ಲೇಖನ ಮುಂದೊಂದು ವಾರಕ್ಕೆ ಮತ್ತೆ ದೂಡುತ್ತಿರುವುದಕ್ಕೆ ನಿಮ್ಮಿಂದ ಕ್ಷಮೆ ಕೇಳಲೇ ಮಗ ಅಭಯನಿಗೆ ಪ್ರಥಮ ಸಿನಿಮಾ – ಗುಬ್ಬಚ್ಚಿಗಳು, ಇದಕ್ಕೆ ಸ್ವರ್ಣಕಮಲ ಬಂದ ಸಂತೋಷದ ವಾರ್ತೆ (ನೋಡಿ: www.abhayatalkies.com) ಬಿತ್ತರಿಸಿ ನಾನದಕ್ಕೆ ಸಂಬಂಧಿಸಿದ ಓಡಾಟಗಳಲ್ಲಿ ವ್ಯಸ್ತನಾಗಿದ್ದೆ ಎನ್ನಲೇ! ಏನೇ ಇರಲಿ, ಸದ್ಯ ತಮ್ಮ ಅನಂತ ವರ್ಧನ (ಅ-ತೃತೀಯ) ನನ್ನ ಲೇಖನ ಛಲದೊಳ್ ದುರ್ಯೋಧನಕ್ಕೆ ಪೂರಕವಾಗಿ ಅವನ ನೆನಪುಗಳ ಒಂದಷ್ಟು ಹೊರೆ ಇಳಿಸಿದ್ದನ್ನು ಇಲ್ಲಿ ಕೊಡುತ್ತಿದ್ದೇನೆ. ಕೊನೆಯಲ್ಲಿ ಈ ತೀನಿ ನಿಮಗೆ ರುಚಿಸಿದ್ದಕ್ಕೆ ನಾಲ್ಕು ಸಾಲಾದರೂ ಬರೆಯುವುದು ಮರೆಯಬೇಡಿ.
→ 14 CommentsCategories: ಹೀಗೆ ಒಂದಿಷ್ಟು
ನಿಲ್ಲಿ! ಗಡಿಬಿಡಿಯಲ್ಲಿ ಗಂಗಡಿಕಲ್ಲು
January 14, 2010 · 11 Comments
(ತಾತಾರ್ ಶಿಖರವನ್ನು ಭೂತಕಾಲದಲ್ಲಿ ಹತ್ತುವ ಮುನ್ನ ವರ್ತಮಾನದ ಒಂದು ಜರೂರು, ಒಂದು ಅನುಭವ ಹೇಳಿಬಿಡುತ್ತೇನೆ. ನಿಮ್ಮುತ್ಸಾಹದ ಚಿಲುಮೆ ವಾರಕಾಲ ಬಾಳಲಿ!)
ಕುದುರೆಮುಖ ರಾಷ್ಟೀಯ ಉದ್ಯಾನವನದೊಳಗೆ ಹಾಯುವ ಸುಲಭ ಏರಿನ, ಅಂದದ ಬಳುಕಿನ ನುಣ್ಣನೆ ದಾರಿ ಅದರದ್ದಲ್ಲ; ಗಣಿಗಾರಿಕೆಯವರದ್ದು. ಕಬ್ಬಿಣ ಗಣಿಗಾರಿಕೆಯವರಿಗೆ ಅದು ಅವಶ್ಯವೇ ಸರಿ. ಆದರೆ ಮತ್ತೆ ಹುಟ್ಟಿದ ವನ್ಯ ಇಲಾಖೆಗೆ, ಇಂದು ಬದಲಾದ ಪರಿಸ್ಥಿತಿಗೆ ಅದು ಶಾಪವೇ ಆಗಿದೆ. ಮೇಲಿನ ಸೌಕರ್ಯಗಳಲ್ಲದೆ ವಿರಳ ವಾಹನ ಸಂಚಾರವೂ ಕುಮ್ಮಕ್ಕು ಕೊಡುವುದರಿಂದ ಇಲ್ಲಿ ಮಿತಿಮೀರಿದ ವೇಗದಲ್ಲಿ ಧಾವಿಸುವ ಖಾಸಗಿ ವಾಹನಗಳು (ಈ ದಾರಿಯಲ್ಲಿ ಕೆಂಬಸ್ಸು, ಗಣಿಲಾರಿ, ಸಹಸ್ರಪಾದಿ ಎಣ್ಣೆಲಾರಿಗಳು ಇಲ್ಲ. ಇತರ ಸರಕು ಸಾಗಣೆ ಲಾರಿಗಳು, ಸಾರ್ವಜನಿಕ ಬಸ್ಸುಗಳೂ ತುಂಬಾ ಕಡಿಮೆ.) ಅಪಘಾತಕ್ಕೊಳಗಾಗುವುದು, ಜೀವ ಹಾನಿಯಾಗುವುದು ನಿತ್ಯ ಸಂಗತಿ. ಕರಾವಳಿ ವಲಯದಿಂದೇರುವವರಿಗೆ ಮಾಳದವರೆಗಿನ ಬಿಸಿಯೋ ಘಟ್ಟದ ಮೇಲಿನಿಂದ ಬರುವವರಿಗೆ ಕಳಸದವರೆಗಿನ ಅವೈಜ್ಞಾನಿಕ ಏರಿಳಿವಿನ ಹರಕು ದಾರಿಯೋ ಈ ಕಾಡಿನ ನದುವೆ ಕಾಡುವುದಿಲ್ಲ. ಕಣ್ಣು ತುಂಬುವ ಹಸಿರು, ಮೈ ತೀಡುವ ತಣ್ಪು, ತೆರೆದು ಬಿದ್ದ ಬೆಟ್ಟದಲೆಯಲೆಯ ನಡುವೆ ನಾನು/ ನಾವು ಮಾತ್ರ ವಿಹಾರಿಗಳು ಎಂಬ ಭಾವ ತಂದುಬಿಡುತ್ತದೆ. ಸೌಮ್ಯದಿಂದ ಬಿಸಿಯೇರಿಸುವವರೆಗಿನ ಪಾನೀಯಗಳನ್ನು ಸೇವಿಸುತ್ತ, ಹಾಳಮೂಳಗಳನ್ನು ಕುರುಕುತ್ತ, ವಾಹನದಲ್ಲೇ ಇರುವ ಸಂಗೀತವನ್ನು ಗರಿಷ್ಠ ಅರಚಿಸುತ್ತಾ ಕಡಿಮೆಯಾದರೆ ತಾವೂ ಬೊಬ್ಬೆ-ಸಂಗೀತದಲ್ಲಿ ಕಡಿಮೆಯಿಲ್ಲ ಎಂದು ಪ್ರಚುರಿಸುತ್ತ, ಸಿಗರೇಟು ಮೋಟು, ಕಸ, ಡಬ್ಬಿ, ಬಾಟಲುಗಳನ್ನು ಹೊರಗೆ ತೂರುತ್ತ ಅಪಾಯಕಾರೀ ವೇಗ ತಲಪಿಬಿಡುತ್ತಾರೆ. ಸ್ಥಳನಾಮ ಹೇಳುವ, ವನ್ಯರಕ್ಷಣೆಯ ನೂರೆಂಟು ಸಂದೇಶಗಳನ್ನು ಜಾಹೀರುಪಡಿಸುವ ಬರಹಗಳ ವೈವಿಧ್ಯ (ವಿವಿಧ ಸ್ಕೀಮುಗಳ ಕಡತ ಬಲಪಡಿಸಿದಷ್ಟು) ಪರಿಸರಕ್ಕೆ ಏನೂ ಮಾಡಿದಂತೆ ಕಾಣುವುದಿಲ್ಲ. ಇಲ್ಲಿ ಅವಘಡಗಳಿಗೆ ಸಿಕ್ಕು ಸಾಯುವ ಅಸಂಖ್ಯರಲ್ಲಿ ವನ್ಯ ಜೀವಿಗಳೇ ಬಹುಸಂಖ್ಯಾತರು. ಸಾಮಾನ್ಯ ದೃಷ್ಟಿಗೆ ನಗಣ್ಯವಾಗಬಹುದಾದ ಹಾವು ಮಂಗಗಳಷ್ಟೇ ಅಲ್ಲ, ಕಡವೆ ಕಾಟಿಯಷ್ಟು ದೊಡ್ಡ ಮೃಗಗಳೂ ಇವೆ ಎನ್ನುವುದು ನಿಜಕ್ಕೂ ಆತಂಕಕಾರಿ. ಹಾಗಾಗಿ ನಿಲ್ಲಿ! ನಡೆದು ಬನ್ನಿ.
Keep reading →
→ 11 CommentsCategories: ಪ್ರವಾಸ ಕಥನ · ವನ್ಯಲೋಕ