ನನ್ನ ಬಾಲ್ಯದ ಮಡಿಕೇರಿ ಮತ್ತೆ ಬಳ್ಳಾರಿ ಮುಂದುವರಿದು ಬೆಂಗಳೂರು (೧೯೬೯ರ ಆಸುಪಾಸಿನಲ್ಲಿ) ಯಕ್ಷಗಾನ ಸಮೃದ್ಧ ಪ್ರದೇಶಗಳಲ್ಲ. ಆದರೆ ರಜಾದಿನಗಳಲ್ಲಿ ಅಜ್ಜನೂರು – ಪುತ್ತೂರಿಗೆ ಬಂದರೆ ಒಂದೆರಡಾದ್ರೂ ಆಟ ಗ್ಯಾರಂಟಿ. ಮಹಾಲಿಂಗೇಶ್ವರ ದೇವರ ಜಾತ್ರೆಯುದ್ದಕ್ಕೂ ಹಗಲು ನಿದ್ದೆ, ರಾತ್ರಿ ಯಕ್ಷಗಾನ ನನಗಂತೂ ಖಾಯಂ. ಅಜ್ಜ ಅಜ್ಜಿಯರಿಗೋ ಮಾವ, ಚಿಕ್ಕಮ್ಮಾದಿಗಳಿಗೋ ಯಕ್ಷಗಾನ ವಿಶೇಷ ಹಚ್ಚಿಕೊಳ್ಳುವಂತದ್ದೇನೂ ಆಗಿರಲಿಲ್ಲ; ಮಡಿ, ವಿರೋಧ ಏನೂ ಇರಲಿಲ್ಲ. ಹಾಗಾಗಿ ನನ್ನ ಐವತ್ತು ಪೈಸೆಯ ಬೇಡಿಕೆಗಳು (ಚಾಪೆ ಕ್ಲಾಸಿನ ಟಿಕೆಟ್ಟಿಗೆ) ಎಂದೂ ತಿರಸ್ಕೃತಗೊಂಡದ್ದಿರಲಿಲ್ಲ. ನನ್ನ ಚಿಕ್ಕ-ಚಿಕ್ಕಮ್ಮ ಅನುರಾಧೆ, ತಮ್ಮ ಆನಂದ, ಮುಂದುವರಿದ ದಿನಗಳಲ್ಲಿ ಮಾವಂದಿರ ಮಕ್ಕಳು ನನಗೆ ಜೊತೆಗೊಡುವುದಿತ್ತು. ಆದರೆ ಮಕ್ಕಳ ಯಕ್ಷಗಾನ ಹುಚ್ಚಿಗೆ ಸರ್ವಮಾನ್ಯತೆಯೂ ಮಹಾಬಲವೂ ಬರುತ್ತಿದ್ದದ್ದು ಇನ್ನೊಬ್ಬ ಚಿಕ್ಕಮ್ಮಳ (ಲಲಿತ) ಗಂಡ ಚಿಕ್ಕಪ್ಪ, ಬಂಗಾರಡ್ಕ ಮಹಾಬಲ ಭಟ್ಟರಿಂದ. ಪುತ್ತೂರಿನಿಂದ ದೂರದೂರುಗಳಿಗೂ ನಮ್ಮ ಯಕ್ಷಾಸಕ್ತಿಯನ್ನು (ಅಂದು ನಮ್ಮ ಸಂಬಂಧಿಗಳಲ್ಲಿ ಯಾರಲ್ಲೂ ಇರದ) ಚಿಕ್ಕಪ್ಪ ಅವರ ಕಾರಿನಲ್ಲಿ ಒಯ್ದು ಪೂರೈಸುತ್ತಿದ್ದರು. ಮತ್ತೆ `ಕೊಳಕಟೆ’ ಚಾಪೆಯಿಂದ ಮುಂಚೂಣಿಯ ಈಸಿಚೇರಿಗೆ ಭಡ್ತಿ, ಅಗತ್ಯ ಬಂದಲ್ಲಿ class ತಿನಿಸುಗಳ ಅಯಾಚಿತ ಲಾಭ ಇವರಿಂದಾಗುತ್ತಿತ್ತು. (ಆ ದಿನಗಳಲ್ಲಿ ಅಪರೂಪಕ್ಕೆ ಐದು ಪೈಸೆಯ ದೂದ್‌ಕ್ಯಾಂಡಿಯೋ ಹುರಿಗಡಲೆಯಿಂದಲೋ ಮೇಲೆ ನೋಡಲು ಗೊತ್ತಿರದ ನಮಗೆ ಝಗಮಗಿಸುವ ಸ್ವೀಟ್ ಸ್ಟಾಲಿನಿಂದ ಸೇರು ತೂಕದ ಕಡ್ಲೆಮಿಠಾಯಿ, ಕಲ್ಲಡ್ಕದ ರಿಂಜಿಂ ಕಾಫಿ ಎಂಬ ಅದ್ಭುತ, ಮಂಗಳೂರಿನ ಉಡ್‌ಲ್ಯಾಂಡ್ಸ್ ಎಂಬ `ಫೈವ್ ಸ್ಟಾರ್’ ಇತ್ಯಾದಿ ಇವರು ಪರಿಚಯಿಸಿದ್ದು ಮರೆಯಲುಂಟೇ!) ಜತೆಯಲ್ಲಿ ಯಕ್ಷರಸಾಸ್ವಾದನೆ, ಪ್ರಸಂಗ, ಕಲಾವಿದರ ಮಾಹಿತಿಗಳ ಪೂರಣೆಯಲ್ಲೂ ಚಿಕ್ಕಪ್ಪ ತನ್ನ ಮಿತಭಾಷೆಯಲ್ಲೂ ಖಚಿತ ಸಂಸ್ಕಾರ ಕೊಡುತ್ತಿದ್ದರು. ಚಿಕ್ಕಪ್ಪ ಉಗ್ರ ತೆಂಕುತಿಟ್ಟು ಅದರಲ್ಲೂ ಆಟದ (ತಾಳಮದ್ದಳೆ ಅಲ್ಲ) ಪ್ರತಿಪಾದಕ. ರಂಗದ ಮೇಲಿನದ್ದು ಸತ್ಯವೋ myth-ಯೆಯೋ ಎಂದು ನಿಷ್ಕರಿಸಲೇ ಗೊತ್ತಿರದ, ತಿಟ್ಟುಗಳ ವೈವಿಧ್ಯ ಮತ್ತು ಶಿವರಾಮ ಕಾರಂತ ಪ್ರಯೋಗಗಳ ಹರಹಿನ ಪರಿಚಯವೇ ಇರದ ಪ್ರಾಯದ ನನಗೆ ಚಿಕ್ಕಪ್ಪ ತೆಂಕು ತಿಟ್ಟಿನ ಸರ್ವ ಶ್ರೇಷ್ಠತೆಯನ್ನು ಹೇಳಿಯೇ ಹೇಳುತ್ತಿದ್ದರು. ಅಳಿಕೆ ರಾಮಯ ರೈ, ದಾಮೋದರ ಮಂಡೆಚ್ಚ, ಮಿಜಾರು ಅಣ್ಣಪ್ಪ, ಪುತ್ತೂರು ನಾರಾಯಣ ಹೆಗ್ಡೆ ಮುಂತಾದವರ ಬಗ್ಗೆ ಆ ದಿನಗಳಲ್ಲಿ ನಾನು ಏನಾದರೂ ಮಾತಾಡಿದ್ದು, ಬರೆದದ್ದೂ ಇದ್ದರೆ ಶೇಕಡಾ ನೂರು ಬಂಗಾರಡ್ಕ ಚಿಕ್ಕಪ್ಪನ ಕೃಪೆ!

`ನಭೂತೋ ನಭವಿಷ್ಯತ್’ ಎಂಬ ಉಕ್ತಿಗೆ ಪೂರ್ಣ ಅರ್ಥಗೌರವ ದಕ್ಕುವಂತೆ ಉಡುಪಿಯಲ್ಲಿ `ಕಾರಂತ ಅರುವತ್ತು’ (೧೯೬೯/೭೦) ನಡೆಯಿತು. ಆ ಅದ್ಭುತವನ್ನು ಸಂಘಟಿಸಿದ ರೂವಾರಿ ಕುಶಿ ಹರಿದಾಸ ಭಟ್ಟ. ಕುಶಿಯವರೊಡನಿದ್ದ ಆತ್ಮೀಯತೆ ಬಲದಲ್ಲಿ (ವಿದ್ಯಾರ್ಥಿ ದೆಸೆಯಿಂದಲೂ ನನ್ನ ತಂದೆಯ ಆತ್ಮೀಯ ಮಿತ್ರ) ಅಷ್ಟೂ ದಿನ ಎಂ.ಜಿ.ಎಂ ಕಾಲೇಜು ಸ್ವಯಂ ಸೇವಕರ ತಂಡದೊಳಗೆ ನನಗೆ ಒಂದು ವಿಶೇಷ ಅವಕಾಶ ಪ್ರಾಪ್ತಿಸಿತ್ತು. (ಇನ್ನೂ ಪ್ರಥಮ ಬೀಯೇ ವಿದ್ಯಾರ್ಥಿಯಾಗಿದ್ದ ನನಗೆ ಆ ಐದೂ ದಿನಗಳ ರಾತ್ರಿವಾಸದ ರೂಂಮೇಟ್ ಅಲ್ಲೇ ಅಂತಿಮ ಬೀಯೇ ವಿದ್ಯಾರ್ಥಿ ಎಂ.ಎಲ್ ಸಾಮಗರು.) ಅಲ್ಲಿ ಸಮ್ಮಾನ ಒಂದು ದಿನ. ನಿಜ ಸಂಭ್ರಮವಿದ್ದದ್ದು ಅದಕ್ಕೆ ಪೂರ್ವಭಾವಿಯಾಗಿ ನಡೆದ ಯಕ್ಷಗಾನ ಗೋಷ್ಠಿಯಲ್ಲಿ. ಕಾರಂತರದೇ ನಿರ್ದೇಶನದಲ್ಲಿ ನಾಲ್ಕೈದು ದಿನ ನಡೆದ ಆ ಗೋಷ್ಠಿ ನನ್ನ ಯಕ್ಷವೀಕ್ಷಣಾ ದೃಷ್ಟಿಗೆ ಉಪನಯನ ಸಂಸ್ಕಾರ ಕೊಟ್ಟಿತು. ಅಂದು ನನಗೆ ದಕ್ಕಿದ್ದು ಕಾರಂತರ ಪ್ರಯೋಗಗಳು ಮಾತ್ರ. ಆದರೆ ವ್ಯಾವಸಾಯಿಕ ಯಕ್ಷ-ಪ್ರೇಕ್ಷಣೆಯಲ್ಲಿ ನಾನು ಪೂರ್ಣ ತೊಡಗಿದ್ದಿದ್ದರೆ ಅದು ಆ ಕಾಲಕ್ಕೆ ದ.ಕ ಜಿಲ್ಲೆಗೆ ವ್ಯವಸ್ಥಿತವಾಗಿ ಬರತೊಡಗಿದ್ದ ಇಡಗುಂಜಿ ಮೇಳದಿಂದ; ಕೆರೆಮನೆ ಶಂಭು ಹೆಗಡೆಯವರ ಆಟಗಳಿಂದ ಎಂದು ಘಂಟಾಘೋಷವಾಗಿ ಹೇಳಬಲ್ಲೆ.

ನನ್ನ ನೆನಪಿನ ಭಿತ್ತಿಗೆ ಇತಿಹಾಸ ಪ್ರಜ್ಞೆ, ಕಾಲಾನುಕ್ರಮಣಿಕೆ ಇಲ್ಲ. ನಾನು ಪುಸ್ತಕ ವ್ಯಾಪಾರಿಯಾಗಿ ಮಂಗಳೂರಿನಲ್ಲಿ ನೆಲೆಸಿದ ಮೇಲೆ (೧೯೭೫ ರಿಂದ ಮುಂದೆ) ವಾರದ ದಿನಗಳಲ್ಲೂ ಆ ಊರು ಈ ಊರು ಎಂದು ಹುಡುಕಿ ಹೋಗಿ ನೋಡಿದ್ದಿದೆ. ಅಂಗಡಿಯ ಅನಿವಾರ್ಯ ಹನ್ನೆರಡುಗಂಟೆಯ ಕಾರ್ಯಭಾರದಿಂದ ಇಲ್ಲೂ ಅಲ್ಲೂ ತೂಕಡಿಸಿದ್ದಿರಬಹುದು. ಆದರೆ ಗ್ರಹಿಸಿದ್ದಷ್ಟರಲ್ಲಿ ಗುಣಾತ್ಮಕತೆಯ ಬಲು ದೊಡ್ಡಹೊರೆ ಕೊಟ್ಟವರು ಈ ಗುಣವಂತೆಯ ಬಳಗ. ಹಾಗಾಗಿ ನಾನು ನೋಡಿದ ಅಸಂಖ್ಯ ಇಡಗುಂಜಿ ಮೇಳದ ಆಟಗಳ ಕೊನೆಯಲ್ಲಿ ಸಂತೋಷವೊಂದು ಅಪರಿಮಿತವಾಗಿರುತ್ತಿತ್ತು. ವಿವರಗಳನ್ನು ಹೇಳಹೊರಟರೆ ಎಲ್ಲ ಗೋಜಲು. ಸ್ಮರಣೀಯವಾಗಿ ಉಳಿದ ಒಂದಿಷ್ಟನ್ನು ಮಾತ್ರ ಶಂಭು ಹೆಗಡೆಯವರ ಪ್ರೀತ್ಯರ್ಥ ಇಲ್ಲಿ ದಾಖಲಿಸುತ್ತೇನೆ.

೯-೯-೧೯೭೮ರ ಉದಯವಾಣಿಯಲ್ಲಿ ಪ್ರಕಟವಾದ ನನ್ನ ಪತ್ರವೊಂದರ ಆಯ್ದ ತುಣುಕು: ಮಳೆಗಾಲದ ಆಟ ಎಂದರೆ ಘಟಾನುಘಟಿಗಳ ಸಂಯೋಜನೆಯಿಂದಾಗುವ ಗದ್ದಲ. ಇದಕ್ಕೊಂದು ಅಪವಾದ ವರದೇಂದ್ರ ಕಲಾಮಂದಿರದ ಪ್ರದರ್ಶನ – ಮಾಗಧ, ಕಾರ್ತವೀರ್ಯ, ಕರ್ಣ… ಕಾರ್ತವೀರ್ಯ (ಶಂಭುಹೆಗಡೆ) ಹೊಂದದ ಸಹಕಲಾವಿದರೊಡನೆ, ಒಗ್ಗದ ರಂಗಮಂಚದಮೇಲೆ ಕೂಡಿತಾದಷ್ಟು ಒಳ್ಳೆಯದನ್ನು ತೋರಿಸುವ ಶ್ರಮವಹಿಸುವಾಗ ಇವರು ತಮ್ಮ ಹೆಸರಿನಲ್ಲಿ ಉಸಿರಾಡುವುದನ್ನು ಕಾಣುತ್ತೇವೆ. ಭಾಗವತ ಬಾಯಿತೀಟೆ ತೀರಿಸಲು ಉಪಮಾನಸಹಿತ ಪದಕೊಡುವುದಲ್ಲ. ತಾಕತ್ತಿದ್ದ ಕಲಾವಿದ ಭಾಗವತನನ್ನು ದುಡಿಸಿಕೊಳ್ಳುತ್ತಾನೆ ಎಂಬೆರಡು ಮಾತಿಗೆ ಸಾಕ್ಷಿ ಕಾರ್ತವೀರ್ಯ.

೧೯-೪-೮೦ ರ ಉದಯವಾಣಿಯಲ್ಲಿನ ನನ್ನ ಪತ್ರವೊಂದರ ಪರಿಷ್ಕೃತ ರೂಪ: ಪುರಭವನದಲ್ಲಿ ಬ್ರಹ್ಮಕಪಾಲ ನಡೆದಿತ್ತು. ಶಿವಪಾತ್ರಧಾರಿ ಕೆಳಗೆ ಮತ್ತು ಮಹಡಿಯಲ್ಲಿ ಒಂದು ಸಾಲೂ ಬಿಡದಂತೆ ಸಭೆಯಲ್ಲಿ ಸುತ್ತಿ, ನಿದ್ರಿಸಿದವರನ್ನು ಬಡಿದೆಬ್ಬಿಸುವಂತೆ ಒರಲಿ ಭಿಕ್ಷೆ ಬೇಡಿದ. ಪಾತ್ರಿಗೆ ಒಳ್ಳೇ ಸಂಪಾದನೆ. (ಅಧಿಕಪ್ರಸಂಗ: ಈ ಪ್ರಸಂಗ ಆಡುವಲ್ಲೆಲ್ಲಾ ಕಲಾವಿದರೊಳಗೆ ಶಿವನ ಪಾತ್ರಕ್ಕೆ ಭಾರೀ ಸ್ಪರ್ಧೆಯಂತೆ. ಪಾತ್ರ ನಿಷ್ಕರ್ಷೆಯ ಮತ್ತು ಭಿಕ್ಷಾಟನೆಯ ಉದ್ದಕ್ಕೆ ರಂಗಕ್ರಿಯೆ ಸುಧಾರಿಸುವ ಭಾಗವತನಿಗೆ ಭಿಕ್ಷೆಯ ಆದಾಯದಲ್ಲಿ ಆತ ಪಾಲು ಮಾತ್ರ ಕೊಡಲೇಬೇಕಂತೆ) ಇನ್ನೊಮ್ಮೆ ಮೇಳ ಒಂದರಲ್ಲಿ ಇದೇ ಪ್ರಸಂಗ ನಡೆದಿತ್ತು. ಪ್ರಖ್ಯಾತ ವೇಷಧಾರಿಯೊಬ್ಬರು ಕಪಾಲಹಿಡಿದ ಶಿವನಾಗಿ ಬಿಕ್ಷೆ ಬೇಡುತ್ತಾ ಸಭೆಯ ನಡುವೆ ಬಂದರು. ಸಭೆಯಲ್ಲಿದ್ದ ಪ್ರಖ್ಯಾತ ಅರ್ಥದಾರಿಯೊಬ್ಬರು ತಾನು ಸೇದುತ್ತಿದ್ದ ಸಿಗರೇಟು ಮೋಟನ್ನೇ ಬಿಕ್ಷೆ ಹಾಕಿದರು! ಸಮಜಾಯಿಷಿ ಕೇಳಿದವರಿಗೆ ಅವರು `ರಂಗಸ್ಥಳ ಬಿಟ್ಟು ವ್ಯವಹರಿಸುವವನನ್ನು ವೈಯಕ್ತಿಕ ನೆಲೆಯಲ್ಲಿ ಪುರಸ್ಕರಿಸಬಹುದು ವಿನಾ ಆತ ತೊಟ್ಟ ವೇಷದ ನೆಲೆಯಲ್ಲಲ್ಲ’ ಎಂದು ಪಾಠ ಹೇಳಿದರಂತೆ. ನಾನು ಇಡಗುಂಜಿ ಮೇಳದ `ಬ್ರಹ್ಮ ಕಪಾಲ’ಕ್ಕೆ ಸಾಕ್ಷಿಯಾದೆ. ಕಪಾಲ ಕಚ್ಚಿದ ಶಿವನ (ಶಂಭುಹೆಗಡೆ) ನಡೆಗೆ ಸಭೆಯ (ಕೆಟ್ಟ) ಸಾಂಪ್ರದಾಯಿಕ ಉತ್ಸಾಹ ಕಾಸು ಎಸೆಯುತ್ತಿತ್ತು. ಆದರೆ ಶಿವ ಶಂಭು (ಹೆಗಡೆ) ಆಗಲಿಲ್ಲ, ಇನ್ನೂ ಸರಿಯಾಗಿ ಹೇಳುವುದಾದರೆ ಶಂಭುಹೆಗಡೆ ಶಿವನ ನೆಪದಲ್ಲಿ ಮೇಲ್ಸಂಪಾದನೆಯ ಅವಕಾಶ ಬಳಸಲೇ ಇಲ್ಲ. ಹುಚ್ಚುಕಟ್ಟುವ ಜನ ಎಸೆದ ನಾಣ್ಯಕ್ಕೆ ಫೋಕಸ್ (ಲೈಟ್) ಒಂದು ಹುಡಿಯಾದರೂ ಆ ಕ್ಷಣದಲ್ಲಿ ಶಂಕರನ ಫೋಕಸ್ ಕಪಾಲದ ಮೇಲೇ. ಬ್ರಹ್ಮಕಪಾಲದ ರಣಹಸಿವಿನ ಚಿಂತೆ ಪ್ರಕಟಿಸುವವನಿಗೆ ವಾಸ್ತವದಲ್ಲಿ (ಮೇಳದ ಯಜಮಾನಿಕೆಯ ನೆಲೆಯಲ್ಲಿ) ಸುಮಾರು ಆರ್ನೂರು ರೂಪಾಯಿ ಬೆಲೆಯ ಹೊಸದೊಂದು ಬಲ್ಬ್ ಹೊಂದಿಸುವ ನೋವು ಹುಗಿದೇ ಹೋಯ್ತು.

ನಾನು ನನ್ನ ಮನೆಯ ಮಹಡಿಯ ಗೃಹಪ್ರವೇಶದ ನೆಪದಲ್ಲಿ, ಡಾ| ಮನೋಹರ ಉಪಾದ್ಯರ ಎಂದಿನ ಕಲಾಪ್ರೀತಿ ಸಹಯೋಗದಲ್ಲಿ ಇಡಗುಂಜಿ ಮೇಳದ `ಲಂಕಾದಹನ’ ಪ್ರಸಂಗ ಇಟ್ಟುಕೊಂಡಿದ್ದೆವು. `ವೀಳ್ಯ’ ನಮ್ಮದಾದರೂ ವೈಯಕ್ತಿಕ ಪ್ರಚಾರ ನಿರಾಕರಿಸಿ ಪ್ರಚಾರದಲ್ಲೆಲ್ಲ (ನನ್ನ ಮಗ ಅಭಯಸಿಂಹ ಕಾರ್ಯದರ್ಶಿಯಾಗಿದ್ದ ನೆಪದೊಡನೆ ಉಚಿತ ಸಭಾಭವನ ಒದಗಿಸಿದ್ದ) ಸಂತ ಅಲೋಶಿಯಸ್ ನಾಟಕ ಸಂಘ ಕಾಣಿಸಿದ್ದೆವು. ನಾನು ಮನೆಯಲ್ಲಿ ಸೇರಿದ್ದ ಆತ್ಮೀಯರ ಊಟದ ಕೂಟದಲ್ಲಿ ತೊಡಗಿಕೊಂಡಿದ್ದುದರಿಂದ ಪ್ರದರ್ಶನಕ್ಕೆ ಸಾಕಷ್ಟು ಮೊದಲೇ ಬರುವ ಮೇಳದವರ ಸ್ವಾಗತಕ್ಕೆ ಅಭಯ ನಿಯೋಜಿತನಾಗಿದ್ದ. ಆದರೆ ಆತನ ಹುಡುಗು ಬುದ್ಧಿಗೆ ರಂಗಮಂಚದ ಮರೆಯಲ್ಲಿನ ಮುರುಕು ಸಾಮಾನುಗಳು, ಬಲೆ, ದೂಳು ತೆಗೆದು ಕಲಾವಿದರಿಗೆ `ಚೌಕಿ’ ಕಲ್ಪಿಸುವ ಸಾಮಾನ್ಯ ಜ್ಞಾನ ಬರಲಿಲ್ಲ. ಕಲಾವಿದರು “ಕನಿಷ್ಠ ಹಿಡಿಸೂಡಿ ಕೊಡಿ. ನಾವೇ ಗುಡಿಸಿಕೊಳ್ಳುತ್ತೇವೆ” ಎಂದದ್ದು ಮತ್ತೂ ಅವರು ಹಾಗೇ ಮಾಡಿಕೊಳ್ಳುವಂತಾದ್ದು ನನಗೆ ತಡವಾಗಿ ತಿಳಿಯಿತು. ಅದು ನಮ್ಮ ಅಕ್ಷಮ್ಯ ತಪ್ಪು ಮತ್ತು ಆಕುರಿತು ನಾನು ಶಂಭು ಹೆಗಡೆಯವರಲ್ಲಿ ಕ್ಷಮೆಯನ್ನೂ ಕೇಳಿದ್ದೆ. ಅದಕ್ಕೂ ಮಿಗಿಲಾಗಿ…

ಮೊದಲೇ ಹೇಳಿದಂತೆ ಗೃಹಪ್ರವೇಶದ ನೆಪವಿದ್ದರೂ ಮುಖ್ಯವಾಗಿ ಯಕ್ಷಗಾನದ ಪ್ರೀತಿಗೇ ನನ್ನ ತಮ್ಮ – ಅನಂತವರ್ಧನ, ಮೈಸೂರಿನಿಂದ ಬಂದಿದ್ದ. ಅಂದು ಶಂಭುಹೆಗಡೆ ಮನೋಹರ ಉಪಾದ್ಯರ ಬಯಕೆಗೆ ತಕ್ಕಂತೆ ಹನುಮಂತ. ಆದರೆ ಪ್ರಾಯದ ಬಳಲಿಕೆ ಮತ್ತು ಅಂದು ವಿಶೇಷವಾಗಿ ಅವರನ್ನು ಕಾಡುತ್ತಿದ್ದ ಜ್ವರ ಒಟ್ಟು ಪ್ರದರ್ಶನ ನೀರಸವಾಗುವಂತೆ ಮಾಡಿತ್ತು. ಆದರೆ ನನ್ನ ತಮ್ಮ ಪ್ರದರ್ಶನದ ಚೌಕಟ್ಟು ಮೀರಿ, ಹೆಚ್ಚು ಕಡಿಮೆ ಶಂಭುಹೆಗಡೆಯವರ ವ್ಯಕ್ತಿತ್ವವನ್ನೇ ಅವಹೇಳನ ಮಾಡುವಂತೆ `ಮಂಗನ ಕೈಯಲ್ಲಿ ಮಾಣಿಕ್ಯ’ ಎಂಬ ಶೀರ್ಷಿಕೆಯಲ್ಲಿ ಒಂದು ವಿಮರ್ಶೆ ಬರೆದು ನನಗೆ ತಿಳಿಸದೆ ಯಕ್ಷಪ್ರಭಾ ಪತ್ರಿಕೆಗೆ ಕಳಿಸಿಬಿಟ್ಟ. ಅದು ಪ್ರಕಟವೂ ಆಯ್ತು. ಆತಿಥೇಯನ ಸ್ಥಾನದಲ್ಲಿದ್ದುಕೊಂಡು ನಿರ್ದಾಕ್ಷಿಣ್ಯ ವಿಮರ್ಶೆಕೊಡಲಾಗದ್ದಕ್ಕೆ ನಾನೇ ತಮ್ಮನ ಹೆಸರಿನಲ್ಲಿ ಅಥವಾ ಅವನಿಗೆ ಹೇಳಿಕೊಟ್ಟು ಬರೆಸಿರಬೇಕು ಎಂಬ ಅರ್ಥ ನನಗೇ ಹೊಳೆದು ನನ್ನ ಅಪರಾಧ ಪ್ರಜ್ಞೆ ಇಲ್ಲಿ ದುಪ್ಪಟ್ಟಾಯಿತು. ದೂರವಾಣಿಸಿ ಅನಂತನಿಗೇನೋ ಹೇಳಿದೆ. ಅನಂತ “ಓ! ನನಗೆ ಹಾಗನ್ನಿಸಿತು, ಬರೆದುಬಿಟ್ಟೆ. ಅವಸರವಾಯ್ತಾ ತಪ್ಪಾಯ್ತಾ? ಸರಿ ಸರಿ” ಎಂದು ತೇಲಿಸಿಬಿಟ್ಟ. ಆದರೆ ಪರಂಪರೆ, ಅಧ್ಯಯನ, ಪ್ರಯೋಗಗಳ ಸಾತತ್ಯವುಳಿಸಿಕೊಂಡವರಿಗೆ ಬರಿಯ ಮಾತಿನುಪಚಾರ ಸಾಕಾಗದು ಎಂದನ್ನಿಸಿ ಒಂದು ಪತ್ರವನ್ನೇ ಬರೆದೆ. ಸಂಬೋಧನೆ ಅನಂತನಿಗೇ ಆದರೂ ಯಥಾಪ್ರತಿಯನ್ನು ಶಂಭುಹೆಗಡೆಯವರಿಗೂ ಕಳಿಸುತ್ತಿದ್ದೇನೆ ಎಂಬ ಔಪಚಾರಿಕತೆಯನ್ನು (ಠಕ್ಕಲ್ಲ) ಒಕ್ಕಣೆ. ಶಂಭುಹೆಗಡೆಯವರಿಂದೇನೂ ಪ್ರತಿಕ್ರಿಯೆ ಕಾಣಲಿಲ್ಲ! ಕೆಂಡಾಮಂಡಲ ಕೋಪ ಬಂದಿರಬಹುದು ಎಂದುಕೊಂಡಿದ್ದೆ. ಕೆಲಕಾಲಾನಂತರ ಹೀಗೇ ಸಭೆಯಲ್ಲೆಲ್ಲೋ ಸಿಕ್ಕಾಗ ಎಂದಿನ ಸ್ನೇಹಮಯಿ ಶಂಭುಹೆಗಡೆಯನ್ನೇ ಕಂಡೆ. ನಾನು ಕ್ಷಮಾಪೂರ್ವಕವಾಗಿಯೇ ನನ್ನ ಪತ್ರದ ಮಾತು ತಂದೆ. ಆದರವರು `ಹೌದು ಪತ್ರವೇನೋ ಬಂತು. ಆದರೆ ನಾನು ಮೂಲ ವಿಮರ್ಶೆಯನ್ನೇ ನೋಡಲಿಲ್ಲವಲ್ಲಾ. ಮತ್ತೆ ನನಗೆ ಆಗದ ನೋವಿಗೆ ನೀವು ಉಪಶಮನಕಾರಕ ಪತ್ರ ಬರೆದಮೇಲಂತೂ ನಾನು ನಿರಾಳವಾಗಿ ಬಿಟ್ಟೆ’ ಎಂಬ ಅರ್ಥದಲ್ಲಿ ಮಾತಾಡಿ ನನ್ನ ಆತಂಕವನ್ನು ಪೂರ್ಣ ನೀಗಿದರು.

ಪ್ರತಿ ಪ್ರದರ್ಶನದ ಕೊನೆಯಲ್ಲಿ ಶಂಭುಹೆಗಡೆ ಸಭಿಕರನ್ನುದ್ದೇಶಿಸಿ ನಾಲ್ಕು ಮಾತಾಡುವುದಿತ್ತು. ಅಂಥಲ್ಲಿ ಒಮ್ಮೆ ಅಭಿಮಾನೀ ಸಂಘಗಳ ಬಗ್ಗೆ ಚಿಕಿತ್ಸಕ ನೋಟ ಹರಿಸಿ ಅವರಾಡಿದ್ದ ಮಾತು `ಅಭಿಮಾನಿಗಳು ಬೇಕು, ವ್ಯಕ್ತಿಯ ಕುರಿತಲ್ಲ – ಆತ ಪ್ರತಿನಿಧಿಸುವ ಕಲೆಯ ಕುರಿತು’. ನಾವು ಹೊಗಳಿ ಬರೆದ ಪತ್ರಕ್ಕೆ ಅವರಲ್ಲಿ ಕೃತಜ್ಞತೆ ಇತ್ತು, ಗುರುತೂ ಇಟ್ಟುಕೊಳ್ಳುತ್ತಿದ್ದರು. ಆದರೆ ಚಿಕಿತ್ಸಕ ಟೀಕೆಯೇ ಏಕೆ, ಸಹೃದಯತೆ ಮರೆತ ಬಯ್ಗುಳಕ್ಕೂ ಅವರಿಂದ ಸಮಾಧಾನದ ಪ್ರತಿಕ್ರಿಯೆ ಬರುತ್ತಿತ್ತು. ಪ್ರತಿಬಯ್ಗುಳ, ಟೀಕೆಯ ಖಂಡನೆ ಇರುತ್ತಿರಲಿಲ್ಲ, ತಮ್ಮ ದೃಷ್ಟಿಯ ವಿಸ್ತರಣೆ ಮಾತ್ರ ಬರುತ್ತಿತ್ತು. ಹೆಚ್ಚಿನ ಓದಿಗೆ ಅವಶ್ಯ ನೋಡಿ ಬ್ಲಾಗ್: www.apkrishna.wordpress.com ಶಂಭುಹೆಗಡೆಗೆ ನುಡಿನಮನ.

ಇನ್ನೂ ಹೆಚ್ಚಿನ ಓದಿಗೆ… ಕನ್ನಡ ವಿಕಿ-ಪೀಡಿಯಾ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಈ ಬ್ಲಾಗಿನಲ್ಲಿ ಕೊಟ್ಟಿರುವ ಚಿತ್ರಗಳ ಮೂಲಗಳಿಗೆ ಕೃತಜ್ಞರಾಗಿದ್ದೇವೆ. ಅವುಗಳ ಉಲ್ಲೇಖ ಈ ರೀತಿಯಾಗಿವೆ:

http://farm4.static.flickr.com/3112/2918511654_4a64ccd4b4.jpg
http://mangalorean.com/images/newstemp20/20090203hegde.jpg
http://farm4.static.flickr.com/3271/2959551308_71388218ed.jpg