ಮಾನ್ಯರೇ

ನಾನು ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸ್ನಾತಕೋತ್ತರ ಪದವೀಧರನಾಗಿ ಹೊರಬಂದರೂ (೧೯೭೪) ತಾಬೇದಾರಿಯನ್ನು ಬಯಸದೆ ಮಂಗಳೂರಿನಲ್ಲಿ ಈ ಪುಸ್ತಕದ ಅಂಗಡಿಯನ್ನು ತೆರೆದು (೧೯೭೫) ನಿಂತೆ. ಈ ಮೂವತ್ನಾಲ್ಕು ವರ್ಷಗಳ ನನ್ನನುಭವದ ಲಾಭ ನಿಮ್ಮ ಖಾತಾನಿರ್ವಹಣೆಯಲ್ಲಿ ಬಳಕೆಗೆ ಬಂದು ಸಾಮಾಜಿಕ ಹಿತ ಹೆಚ್ಚುವುದಾದರೆ ಯಾಕೆ ಬೇಡ ಎಂಬ ನೆಲೆಯಲ್ಲಿ ನನ್ನ ಈಚಿನ ಒಂದು ಪತ್ರದ ಪರಿಷ್ಕೃತ ಪ್ರತಿಯನ್ನು ಕೆಳಗೆ ಕೊಡುತ್ತಿದ್ದೇನೆ. ಗಮನಿಸಿ – ಈ ಪತ್ರದ ವಿಳಾಸದಾರರನ್ನು ‘ಸಿಕ್ಕಿಸಿ ಹಾಕುವುದು’ ನನ್ನ ಉದ್ದೇಶವಲ್ಲ. ಹಾಗಾಗಿ ಅವರ ಉಲ್ಲೇಖಗಳನ್ನು ಮರೆಸಿದ್ದೇನೆ. ಇದು ಒಟ್ಟಾರೆ ನಮ್ಮ ಶಾಲೆಗಳು ನಡೆದುಕೊಳ್ಳುವ ಕ್ರಮ ಮತ್ತಿದನ್ನು ನಿವಾರಿಸಲು ನಿಮಗೆ ವಿಷಯ ತಿಳಿಸುವುದಷ್ಟೆ ನನಗಿರುವ ಆಸಕ್ತಿ. ಪರ್ಯಾಯ ವ್ಯವಸ್ಥೆಗಳ ಬಗ್ಗೆ ನನ್ನ ಒಂದೆರಡು ಸಲಹೆಗಳನ್ನು ಕೊನೆಯಲ್ಲಿ ಸೇರಿಸಿದ್ದೇನೆ.

ಪತ್ರದ ಪ್ರತಿ:
ಮುಖ್ಯೋಪಾಧ್ಯಾಯರಿಗೆ ೪-೬-೨೦೦೯
ಸರಕಾರೀ ಪ್ರೌಢ ಶಾಲೆ. xxxxxxxxxxxxx

ಮಾನ್ಯರೇ,

ನಿನ್ನೆ ನಿಮ್ಮ ಅಧ್ಯಾಪಕ ಪ್ರತಿನಿಧಿಗಳು ನನ್ನ ಅಂಗಡಿಗೆ ಬಂದು ಪುಸ್ತಕಗಳನ್ನು ನಗದು ಕೊಟ್ಟು ಖರೀದಿಸಿಕೊಂಡು ಹೋದದ್ದಕ್ಕೆ ಮೊದಲಿಗೆ ಕೃತಜ್ಞತೆಗಳು. ಶಾಲಾ ಗ್ರಂಥಾಲಯದ ಪುಸ್ತಕ ಖರೀದಿಗೆ ಇರುವ ಸರಕಾರೀ ನಿಯಮಗಳು ಮತ್ತು ಅವುಗಳ ಅನುಷ್ಠಾನದಲ್ಲಿ ಮೂಡುವ ಗೊಂದಲಕ್ಕೆ ಈ ವ್ಯವಾಹಾರವೂ ಒಂದು ಉದಾಹರಣೆ. ನನ್ನ ಮೂವತ್ನಾಲ್ಕು ವರ್ಷಗಳ ಪುಸ್ತಕ ವ್ಯಾಪಾರೀ ಅನುಭವದಲ್ಲಿ ನಾನು ಪುಸ್ತಕೋದ್ಯಮದ ಹಲವು ವಿಚಾರಗಳ ಕುರಿತು ಕಾಲಕಾಲಕ್ಕೆ ಪತ್ರಿಕಾ ಲೇಖನ, ಈಚೆಗೆ ಬ್ಲಾಗ್ ಬರಹ (ನೋಡಿ: www.athree.wordpress.com), ಭಾಷಣ ಕೊನೆಗೆ ‘ಪುಸ್ತಕ ಮಾರಾಟ ಹೋರಾಟ’ ಎಂಬ ಪುಸ್ತಕ ಪ್ರಕಟಿಸುವವರೆಗೆ ಚಿಂತಿಸಿದ್ದೇನೆ, ಸಾರ್ವಜನಿಕ ಜಾಗೃತಿಗೆ ದುಡಿದಿದ್ದೇನೆ. ಹಾಗಾಗಿ ನಿಮ್ಮ ಶಾಲೆಯಿಂದೊದಗಿದ ಪ್ರಸ್ತುತ ಅನುಭವವನ್ನು ನನ್ನ ದೃಷ್ಟಿಯಿಂದ ವಿಶ್ಲೇಷಿಸುತ್ತೇನೆ. ದಯವಿಟ್ಟು ತಾಳ್ಮೆಯಿಂದ ಓದಿ, ಮನನ ಮಾಡಿಕೊಂಡು ಉತ್ತರಿಸುವಿರಾಗಿ ಭಾವಿಸುತ್ತೇನೆ.

“ಬಿಲ್ಲು xxxxxx ಸಾವಿರಕ್ಕೆ, ರಿಯಾಯಿತಿ ಕೊಡುವುದೇನಿದ್ದರೂ ಬಿಲ್ಲಿನಲ್ಲಿ ಕಾಣಿಸದೆ ನಮ್ಮ ಓಡಾಟ ಮತ್ತು ಪುಸ್ತಕ ಸಾಗಣೆ ಖರ್ಚಿಗೆ ಕೊಡಬೇಕು” ಇದು ನಿಮ್ಮ ಪ್ರತಿನಿಧಿಗಳ ತಂಡದ ನಾಯಕನ ಮೊದಲ ಮಾತು. (ಸರಕಾರ ಪುಸ್ತಕಕ್ಕೆ ಅನುದಾನ ಕೊಡುತ್ತದಾದರೂ ಅದನ್ನು ಹಳ್ಳಿಮೂಲೆಗಳಲ್ಲಿ ಬಳಸಿಕೊಳ್ಳಲು ತಗಲುವ ಖರ್ಚಿಗೆ ವ್ಯವಸ್ಥೆ ಮಾಡುವುದಿಲ್ಲ ಎಂದು ಕೇಳಿದ್ದೇನೆ. ಹಾಗಾಗಿ ಆ ಬೇಡಿಕೆ ಬಂದದ್ದೇ ಸಹಜವೆನ್ನುವಂತೆ) ನಾನು ಒಪ್ಪಿದೆ. ಬಂದಷ್ಟೂ ಜನ ವಿವಿಧ ವಿಷಯಗಳ ಕಪಾಟುಗಳಿಗೆ ಹಂಚಿಹೋಗಿ ಪುಸ್ತಕ ಆರಿಸತೊಡಗಿದರು. ಒಂದು ಹಂತದಲ್ಲಿ ನನಗೆ ಬಿಲ್ಲು ಶುರು ಮಾಡಲು ಹೇಳುವುದರೊಡನೆ ತಮ್ಮನ್ನು ಮಧ್ಯಾಹ್ನಕ್ಕೆ ವಾಪಾಸು ಹೋಗಲು ಬಿಟ್ಟುಕೊಡಬೇಕೆಂದೂ ವಿನಂತಿಸಿದರು. ನನ್ನ ಮಧ್ಯಾಹ್ನದ ಬಿಡುವಿನ ಬಗ್ಗೆ (ಒಂದರಿಂದ ಎರಡೂವರೆ ಗಂಟೆಯವರೆಗೆ) ಅವರಿಗೆ ತಿಳಿಸಿ, ಇತರ ಗಿರಾಕಿಗಳನ್ನು ಸುಧಾರಿಸುತ್ತಾ “ನಿಮ್ಮ ಬಿಲ್ಲು ಮಾಡುತ್ತಾ ಹೋಗುತ್ತೇನೆ. ಅನಿವಾರ್ಯವಾದರೆ ಅಪರಾಹ್ನವೂ ನೀವು ಕಾಯಬೇಕಾಗುತ್ತದೆ” ಎಂದು ಸೂಚಿಸಿ ಬಿಲ್ಲಿಗಿಳಿದೆ. ಅಧ್ಯಾಪಕಿಯೊಬ್ಬರು ತಮಗೆ ಕೆಲವೆಲ್ಲ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಬೇಕಿರುವುದರಿಂದ ಎರಡೆರಡು ಪ್ರತಿಗಳಿದ್ದರೆ ತೆಗೆಯಬೇಡಿ ಎಂದೂ ಸೂಚಿಸಿದಂತೆ ಮುಂದುವರಿದೆ. ಕೇವಲ ಎರಡು ವಿಜ್ಞಾನದ ಪುಸ್ತಕಗಳನ್ನು ಎರಡು ಪ್ರತಿಗಳಲ್ಲಿ ಬಿಲ್ಲು ಮಾಡಿಯಾಗುವುದರೊಳಗೆ ಒಟ್ಟಾರೆ ನಿಮ್ಮ ಪ್ರತಿನಿಧಿಗಳ ಆಸಕ್ತಿಯ ವೈವಿಧ್ಯ ಮತ್ತು ತಾವೇ ಹೆಕ್ಕಿದ ಪುಸ್ತಕಗಳ ಬೆಲೆಯನ್ನು ತಮ್ಮ ಅನುದಾನದ ಮಿತಿಯೊಡನೆ ಹೊಂದಿಸಿಕೊಳ್ಳುವ ಬುದ್ಧಿವಂತಿಕೆ ಇಲ್ಲ ಎಂಬುದು ನನಗೆ ತಿಳಿಯಿತು. ಹಾಗಾಗಿ ಮತ್ತೆ ಒಂದಕ್ಕಿಂತ ಹೆಚ್ಚು ಪ್ರತಿಗಳು ಬಂದವನ್ನು ಅವರಿಗೆ ತಿಳಿಸದೆ ಬಿಡುತ್ತಾ ಬಿಲ್ಲು ಮುಂದುವರಿಸಿದೆ. ಮಧ್ಯಾಹ್ನಕ್ಕೆ ಬಿಲ್ಲು ಮುಗಿಯುವಂತೆ ಕಾಣಲಿಲ್ಲ. ಹಾಗಾಗಿ ನಿಮ್ಮವರೆಲ್ಲರೂ ಒಟ್ಟಾಗಿ, ಆರಿಸಿಟ್ಟ ರಾಶಿಯಲ್ಲಿ ಅತ್ಯವಶ್ಯ ಎಂದನ್ನಿಸಿದ ಪುಸ್ತಕಗಳನ್ನು ಮುಂದಾಗಿ ತೆಗೆದುಕೊಟ್ಟರು. ನಾನು ಅಪರಾಹ್ನ ಬಾಗಿಲು ತೆರೆದಮೇಲೆ ಅವರನ್ನು ಕಾಯದೇ ನಿಗದಿತ ಮೊತ್ತಕ್ಕೆ ಬಿಲ್ಲು ಮುಗಿಸಿ ಪುಸ್ತಕಗಳನ್ನು ಕಟ್ಟಿಡಲು ಕೇಳಿಕೊಂಡು ಎಲ್ಲರೂ ಜಾಗ ಖಾಲಿ ಮಾಡಿದರು.

ಆದರೆ ಮತ್ತೆ ಅಂಗಡಿ ತೆರೆಯುವಾಗ ತಂಡದ ನಾಯಕ ಮತ್ತೊಬ್ಬರೊಡನೆ ಮಾತ್ರ ಹಾಜರಾದರು. ಮಹಿಳಾ ಪ್ರತಿನಿಧಿಗಳನ್ನು ಇನ್ನೇನೋ ಖರೀದಿಗೆ ಇನ್ನೆಲ್ಲೋ ಬಿಟ್ಟು ಬಂದಿದ್ದರು. ಆಯ್ಕೆಯ ಪುಸ್ತಕಗಳು ಇನ್ನೂ ಸುಮಾರಿವೆ ಆದರೆ ನಿಗದಿತ ಮೊತ್ತ ಸ್ವಲ್ಪವೇ ಉಳಿದಿದೆ ಎನ್ನುವಾಗ ಸಮಸ್ಯೆ ಸುರುವಾಯ್ತು. ನಿಮ್ಮ ಪ್ರತಿನಿಧಿ ತಮ್ಮ ಒಲವಿಗನುಸಾರ ಆರಿಸಿದ್ದ ಪುಸ್ತಕಗಳಷ್ಟೇ ಯೋಗ್ಯವಾದವು ಉಳಿದವರು ಆರಿಸಿದ್ದೆಲ್ಲ ವ್ಯರ್ಥ ಎನ್ನುವ ಧೋರಣೆಯೊಂದಿಗೆ ಹಿಂದೆ ಬಿಲ್ಲು ಮಾಡಿಯಾಗಿದ್ದ ಇತಿಹಾಸ, ಇಂಗ್ಲಿಷ್ ಪುಸ್ತಕಗಳನ್ನೆಲ್ಲ ರದ್ದುಪಡಿಸಲು ಒತ್ತಾಯಿಸತೊಡಗಿದರು. ನಾನು ಈಗಾಗಲೇ ಬರೆದಾದ ಬಿಲ್ಲು ರದ್ದುಪಡಿಸಲು ಅಸಾಧ್ಯ (ನನಗೂ ಆಡಿಟ್ ಇದೆ) ಎಂದೆ. ತಿದ್ದುಪಡಿ ಹಾಕಿಕೊಟ್ಟರೆ ನಾಳೆ ನಿಮ್ಮ ಲೆಕ್ಕಾಚಾರ ತನಿಖೆಯವರು ಆಕ್ಷೇಪ ಹೇಳಿದರೆ ನಾನು ಜವಾಬ್ದಾರನಲ್ಲ ಎಂದೂ ವಿವರಿಸಿದೆ. “ತಿದ್ದುಪಡಿಯಾದರೆ ಅದು, ಮಾಡಿ” ಎಂದರು ನಿಮ್ಮ ತಂಡದ ನಾಯಕ. ಆ ಪ್ರಕಾರ ಹಳತರಲ್ಲಿ ಹಲವು ರದ್ದುಪಡಿಸಿ, ಇವರದ್ದಷ್ಟನ್ನು ಹಾಕಿ ಮುಗಿಸುತ್ತಾ ಇರುವಾಗ ಮೂರು ಕೊಟೇಶನ್ನಿನ ಪ್ರಸ್ತಾಪವೆತ್ತಿದರು.
೧. ನನ್ನಲ್ಲಿ ನನ್ನ ಒಂದೇ ಕೊಟೇಶನ್ನು ಲಭ್ಯ. ಇನ್ನೆರಡನ್ನು ಕಾನೂನು ರೀತ್ಯಾ ಮತ್ತು ವಾಸ್ತವದಲ್ಲೂ ಶಾಲೆಯೇ ಸಂಪಾದಿಸಬೇಕು ಎನ್ನುವುದೇ ಕೊಟೇಶನ್ನಿನ ಮೂಲ ಆಶಯ! ಆದರೆ ರೂಢಿಯಲ್ಲಿ ಸಾಮಾನ್ಯವಾಗಿ ಎಲ್ಲಾ ಪೂರೈಕೆದಾರರು ನೇರ ತಮ್ಮಲ್ಲಿ ಖರೀದಿಸುವವರಿಗೆ ತಮ್ಮದರೊಡನೆ ಇನ್ನೆರಡು ಕೊಟೇಷನ್ನು (ಬೇನಾಮಿ) ಕೊಡಲು ಸಿದ್ಧರಿರುತ್ತಾರೆ. ಮತ್ತೆ ಶಾಲೆಗಳ ತುರ್ತು ಅಗತ್ಯಗಳಿಗನುಕೂಲವಾಗುವಂತೆ ಒಮ್ಮೆಗೆ ರೂ ಐದುನೂರರವರೆಗಿನ ಖರೀದಿಗೆ ಕೊಟೇಶನ್ನು ಬೇಡ, ರಿಯಾಯ್ತಿ ಸಿಗದೆಯೂ ಇರಬಹುದು ಎನ್ನುವ ಉಪನಿಯಮವಿದೆಯಂತೆ. ಹಾಗಾಗಿ ಕೆಲವು ಜಾಣರು ಅನುದಾನ ಎಷ್ಟು ಸಾವಿರವಿದ್ದರೂ ಖರೀದಿಗೆ ಬಂದಾಗ ಐದುನೂರರ ಒಳಗಿನ, ತಾರೀಕು ರಹಿತ, ರಿಯಾಯಿತಿ ತೋರಿಸದ ಬಿಲ್ಲುಗಳನ್ನು ಕೇಳುತ್ತಾರೆ. ಒಮ್ಮೆಗೆ ಕೈಯಿಂದ ಹಣ ಹಾಕಿದರೂ ಬಿಲ್ಲುಗಳಲ್ಲಿ ಬೇರೆಬೇರೆಯ ತಾರೀಕುಗಳನ್ನು ಹಾಕಿಕೊಳ್ಳುತ್ತಾ ತಮ್ಮ ಹಣವನ್ನು ನಿಜದಲ್ಲಿ ದಕ್ಕಿದ ರಿಯಾಯಿತಿಯ ಲಾಭ ಸಹಿತ ಹಿಂದೆ ಪಡೆಯುತ್ತಾರೆ.
೨. ಮುದ್ರಿತ ಬೆಲೆಯಿಲ್ಲದ ಅಥವಾ ಗರಿಷ್ಠ ವ್ಯಾಪಾರೀ ಬೆಲೆ (maximum retail price – MRP) ಮಾತ್ರ ಕಾಣಿಸಿದ ಮಾಲುಗಳಂತೆ (ಆಟೋಟ ಸಾಮಾಗ್ರಿಗಳು, ಪ್ರಯೋಗಶಾಲೆಯ ಸಲಕರಣೆಗಳಂತೆ) ಪುಸ್ತಕಗಳು ಅಲ್ಲ. ಇವುಗಳಲ್ಲಿರುವ ಮುದ್ರಿತ ಬೆಲೆ ವಾಸ್ತವದ ಮಾರಾಟ ಬೆಲೆ. ಇದು ಅಂಗಡಿಯಿಂದ ಅಂಗಡಿಗೆ ಬದಲಾಗುವುದಿಲ್ಲ. (ಆ ಮುದ್ರಿತ ಬೆಲೆಯ ಮೇಲೆ ರಿಯಾಯ್ತಿ ಎನ್ನುವುದು ವ್ಯಾಪಾರಿಯ ನ್ಯಾಯಬದ್ಧವಾದ ಆದಾಯದ ಕಡಿತ. ರಿಯಾಯ್ತಿ ಕೇಳುವುದೆಂದರೆ ವ್ಯಾಪಾರಿಯ ಔದಾರ್ಯವನ್ನು ನಿರೀಕ್ಷಿಸುವುದಷ್ಟೇ ಸರಿ; ರಿಯಾಯ್ತಿ ಗಿರಾಕಿಯ ಹಕ್ಕಲ್ಲ) ಹಾಗಾಗಿ ಸಾಂಸ್ಥಿಕ ಖರೀದಿಯ ವೇಳೆ ದರಪಟ್ಟಿ ಕೇಳಿದವರಿಗೆ ನಾವು ಮುದ್ರಿತ ಬೆಲೆಯ ಮೇಲೆ ರಿಯಾಯಿತಿ ದರ ಮಾತ್ರ ಉಲ್ಲೇಖಿಸುವ ಪತ್ರ ಕೊಡುತ್ತೇವೆ. ಇತರ ಶಾಲಾ ಸಾಮಾನುಗಳ ವ್ಯಾಪಾರಿಗಳಂತೆ ಪುಸ್ತಕಗಳ ದರ ಪಟ್ಟಿಯನ್ನೂ ಕೊಡುವ ಅಗತ್ಯವಿಲ್ಲ. ನಿಮ್ಮವರು ಮೊದಲಿಗೇ ಬಿಲ್ಲಿನಲ್ಲಿ ಏನೂ ರಿಯಾಯಿತಿ ಕಾಣಿಸಬಾರದೆಂದು ಸ್ಪಷ್ಟ ಕೇಳಿಕೊಂಡಿರುವಾಗ ನಾನೇನು ‘ಸೊನ್ನೆ ದರಪಟ್ಟಿ’ ಕೊಡುವುದೇ? ಇದನ್ನು ಬಹಳ ಕಷ್ಟಪಟ್ಟು ನಿಮ್ಮ ಪ್ರತಿನಿಧಿಗೆ ಅರ್ಥೈಸಿದೆ. ಆದರೂ ಅವರಿಗುಳಿದ ಸಂದೇಹವನ್ನು ಅವರೇ ನಿಮ್ಮನ್ನು ನನ್ನ ದೂರವಾಣಿಯಲ್ಲಿ ಸಂಪರ್ಕಿಸಿ ಕೊಟ್ಟಾಗ ನಿಮಗೂ ವಿವರಿಸಿದ್ದೆ. ಆಗ ನೀವೇ ಸೂಚಿಸಿದಂತೆ ಶೇಕಡಾ xxxxxರ ರಿಯಾಯ್ತಿ ದರದ ಪತ್ರ ಮತ್ತು ಆ ಪ್ರಕಾರ ಹೆಚ್ಚುವರಿ ಸ್ವಲ್ಪ ಪುಸ್ತಕಗಳನ್ನು ಸೇರಿಸಿ ಲೆಕ್ಕ ಮುಗಿಸಿದ್ದಾಯ್ತು.

ಶಿಕ್ಷಕ ಮತ್ತು ಶಿಕ್ಷಣ ಎನ್ನುವುದು ಕೇವಲ ನಿಗದಿತ ಅವಧಿಯಲ್ಲಿ (ಪಿರಿಯಡ್), ನಾಲ್ಕು ಗೋಡೆಗಳ ನಡುವೆ ಕೊಡುವ ಭಾಷಣಕಾರ ಅಥವಾ ಭಾಷಣ ಅಲ್ಲ ಎನ್ನುವುದನ್ನು ನೆನಪಿಸಿಕೊಳ್ಳಿ. ಗ್ರಂಥಾಲಯದ ಪುಸ್ತಕಗಳು ಶಿಕ್ಷಕರಿಗೆ ಆಕರವಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ತಿಳುವಳಿಕೆಗೆ ಸಾಧನವಾಗಿ ಒದಗುವಂತಿರಬೇಕು. ಇವನ್ನು ಸಂಗ್ರಹಿಸುವ ಸಾಧನ ನಿಮ್ಮಲ್ಲಿ ಅಪರಿಮಿತವಾದರೆ ಯಾವುದೇ ಮಳಿಗೆಯ ಎಲ್ಲಾ ಪುಸ್ತಕಗಳೂ ಉಪಯುಕ್ತವೇ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಜ್ಞಾನಸಾಗರಕ್ಕೆ ಕಿರುಚೊಂಬು (ಕೆಲವು ಸಾವಿರ ರೂಪಾಯಿ ಮಾತ್ರ) ಹಿದಿದು ಹೋಗುವವರಿಗೆ ವಿವೇಚನೆಯೂ ಒಂದು ಸಾಧನವಾಗಬೇಕಿತ್ತು. ನಿಮ್ಮ ತಂಡದ ಮಹಿಳಾ ಉಪಾಧ್ಯಾಯರುಗಳಿಗೆ ತಾವು ಆರಿಸುವ ಪುಸ್ತಕಗಳ ಕುರಿತು ಸ್ಪಷ್ಟ ಆದ್ಯತೆಗಳು ಇತ್ತು. ಆದರೆ ತಂಡದ ನಾಯಕರಿಗದು ಇರಲಿಲ್ಲ. ಸನ್ನಿವೇಶಕ್ಕೆ ಅಪ್ರಸ್ತುತವಾದ ‘ಪ್ರಾತಿನಿಧ್ಯ’ ಎಂಬ ಮೌಲ್ಯಕ್ಕೆ ಅವರು ಒತ್ತುಕೊಟ್ಟಿದ್ದರು. ಉದಾಹರಣೆಗೆ ನನ್ನ ತಿಳುವಳಿಕೆಯಂತೆ ಶಬ್ದಮಣಿದರ್ಪಣ, ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ, ದಲಿತರು ಮತ್ತು ಚರಿತ್ರೆ, ಪಾಶ್ಚಾತ್ಯ ಕಾವ್ಯಮೀಮಾಂಸೆ ಮುಂತಾದ ಪುಸ್ತಕಗಳು ಸ್ನಾತಕ, ಸ್ನಾತಕೋತ್ತರ ಪದವಿ ಶಿಕ್ಷಣದ ಭಾಗಗಳಾಗಿ ಸರಿ. ಮತ್ತೆ ಒಂದೂ ಬಿಡದೆ ಗಿರೀಶ್ ಕಾರ್ನಾಡರ ನಾಟಕಗಳು, ಶೇಕ್ಸ್‌ಪಿಯರ್ ಅನುವಾದಗಳ ಬದಲು ಶಾಲೆಯ ಮಕ್ಕಳ ರಂಗಪ್ರಯೋಗಗಳಿಗೆ ಉಚಿತವಾದ ಎಷ್ಟೂ ನಾಟಕಗಳು, ತುಳು ನಾಟಕಗಳೂ ಇದ್ದವು. ಮಹಿಳಾ ಅಧ್ಯಾಪಕರು ಆರಿಸಿದ್ದ ಇತಿಹಾಸ ಪುಸ್ತಕಗಳು ನಿಜಕ್ಕೂ ಉಪಯುಕ್ತವಿದ್ದವು. ಕನ್ನಡ ವಿಜ್ಞಾನ ಪದವಿವರಣ ಕೋಶ, ವಿಶ್ವಕೋಶಗಳ ಮಹತ್ವವನ್ನು (ಮಹಿಳಾ ಉಪಾಧ್ಯಾಯಿನಿ ಅರಿತೇ ಆರಿಸಿಟ್ಟದ್ದನ್ನು) ಬಿಲ್ಲು ಮಾಡುವಾಗ ನಾನು ವಿವರಿಸಿ, ಬೆಲೆ ಕಡಮೆ ಇರುವುದನ್ನೂ ತೋರಿಸಿ, ಒತ್ತಾಯಿಸಿ ಸೇರಿಸಿ ಕೊಡಬೇಕಾಯ್ತು. ವೈದ್ಯರ ಅದಕ್ಷತೆ ಒಂದು ಜೀವದ ನಾಶದಲ್ಲಿ ಮುಗಿಯುತ್ತದೆ (ಆರಡಿ ಮೂರಡಿ ನೆಲದಡಿಯಲ್ಲಿ ಹುಗಿದುಹೋಗುತ್ತದೆ). ತಂತ್ರಜ್ಞನ ಸೋಲು ಒಂದು ಕಟ್ಟಡವೋ ಯಂತ್ರದ್ದೋ ವೈಫಲ್ಯದಲ್ಲಿ ಪರ್ಯವಸಾನಗೊಳ್ಳುತ್ತದೆ. ಆದರೆ ಶಿಕ್ಷಕನ ಅವನತಿ ತಲೆಮಾರುಗಳನ್ನೇ ಕಾಡುತ್ತದೆ ಎಂಬ ಲೋಕೋಕ್ತಿ ನೆನಪಿಸುವುದರೊಂದಿಗೆ ವಿರಮಿಸುತ್ತೇನೆ.
(ಪತ್ರ ಮುಗಿಯಿತು)

ಸಲಹೆಗಳು: ೧. ಪುಸ್ತಕಗಳಿಗೆ ಮುದ್ರಿತ ಬೆಲೆಯಿರುವುದರಿಂದ ಮೂರು ಕೊಟೇಶನ್ನುಗಳ ನಿಯಮವನ್ನು ತೆಗೆದು ಹಾಕಿ. ಈಗಿನ ಪುಸ್ತಕಗಳ ಬೆಲೆಯಲ್ಲಿ ಕನಿಷ್ಠ ಒಮ್ಮೆಗೆ ಐವತ್ತು ಅರವತ್ತು ಪುಸ್ತಕಗಳಾದರೂ ದಕ್ಕುವಷ್ಟು ಅನುದಾನವನ್ನು ಪರಿಷ್ಕರಿಸಿ. ಹೀಗೆ ಒದಗುವ ಘನ ಖರೀದಿಗೆ ಯಾವುದೇ ವ್ಯಾಪಾರಿ ರಿಯಾಯ್ತಿ ಕೊಡದಿರಲಾರ.
೨. ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗ (ಯೂಜೀಸಿ) ತನ್ನ ಅನುದಾನದಲ್ಲಿ ಕೊಳ್ಳುವ (ಕಾಲೇಜು ಗ್ರಂಥಾಲಯದ) ಪುಸ್ತಕಗಳಿಗೆಲ್ಲ ಕನಿಷ್ಠ ರಿಯಾಯ್ತಿ ೧೦% ಪಡೆಯುವುದನ್ನು ವಿದ್ಯಾಸಂಸ್ಥೆಗಳಿಗೆ ಕಡ್ಡಾಯ ಮಾಡಿದೆ. ಕೇರಳ (ಖಾಸಗಿ) ಗ್ರಂಥಾಲಯ ಅನುದಾನ ನಿಯಮದಲ್ಲಿ ಕನ್ನಡ ಪುಸ್ತಕಗಳಿಗೆ ಕನಿಷ್ಠ ೧೫% ರಿಯಾಯಿತಿ ಪಡೆಯುವುದನ್ನು ಕಡ್ಡಾಯ ಮಾಡಿದೆ. ಮುದ್ರಿತ ಬೆಲೆ ನಿಯಂತ್ರಣದ ವ್ಯವಸ್ಥೆ ಮಾಡಿಕೊಂಡು ನೀವೂ ಕನಿಷ್ಠ ರಿಯಾಯ್ತಿ ದರವನ್ನು ಕಡ್ಡಾಯಗೊಳಿಸುವುದು ಉತ್ತಮ.
೩. ಗ್ರಂಥಾಲಯ, ಪ್ರಯೋಗಶಾಲೆ, ಕ್ರೀಡಾಸಾಮಾಗ್ರಿಗಳೆಲ್ಲದರ ಖರೀದಿಗೆ ವರ್ಷಕ್ಕೊಮ್ಮೆ ಸಮೀಪದ ನಗರಕ್ಕೆ ಹೋಗಿಬರಲು ವಾಹನ ವ್ಯವಸ್ಥೆಯ ವೆಚ್ಚವನ್ನೂ ಅನುದಾನದಲ್ಲಿ ಸೇರಿಸಬೇಕು. ಇದು ವಾಸ್ತವಿಕ ನೆಲೆಯಲ್ಲಿ ಶಾಲೆಯಿಂದ ಶಾಲೆಗೆ (ದೂರವನ್ನು ಹೊಂದಿಕೊಂಡು) ಹೆಚ್ಚುಕಡಿಮೆಯಾಗಬೇಕು. (ನಗರದಲ್ಲೇ ಇರುವ ಶಾಲೆಗಳಿಗೂ ಐವತ್ತು ಕಿಮೀ ದೂರದ ಹಳ್ಳಿ ಮೂಲೆಯವರಿಗೂ ಒಂದೇ ಆಗಬಾರದು).
೪. ಪಠ್ಯೇತರ ಓದುವಣಿಗೆಗೆ ಶಾಲಾವಧಿಯಲ್ಲಿ ಅವಕಾಶ ಒದಗಿಸುವುದು, ಮನೆಗೆ ಪುಸ್ತಕ ಎರವಲು ಕೊಡುವ ವ್ಯವಸ್ಥೆ ಸರಿಪಡಿಸುವುದು ಮತ್ತು ಅಂಕಗಣನೆಯಲ್ಲಿ ಇತರ ಓದಿನ ಫಲಿತಾಂಶ ಕಾಣಿಸುವುದು ಅವಶ್ಯ ಆಗಬೇಕು. ಈಗ ಶಾಲೆಗಳಲ್ಲಿರುವ ಪಠ್ಯೇತರ ‘ಪ್ರಾಜೆಕ್ಟು’ಗಳ ಹಾಗೆ ‘ಪುಸ್ತಕದ ಓದು’ ಹಣ ಎಸೆದು ಮಾರ್ಕು ಗಿಟ್ಟಿಸುವ ಆವುಟವಾಗದ ಎಚ್ಚರ ವಹಿಸಬೇಕು.
೫. ಅಧ್ಯಾಪಕರುಗಳಿಗೆಲ್ಲ ಬೋಧನೇತರ ಶಾಲಾ ವ್ಯವಾಹಾರಜ್ಞಾನವನ್ನು ರೂಢಿಸಬೇಕು. ಆಗ ಈ ಕನಿಷ್ಠ ದರಪಟ್ಟಿ (ಕೊಟೇಶನ್ನು), ತುಲನಾತ್ಮಕ ನಿಷ್ಕರ್ಷೆ (ಕಂಪ್ಯಾರಟೀವ್ ಸ್ಟೇಟ್‌ಮೆಂಟ್) ಇತ್ಯಾದಿ ಆವಶ್ಯಕ ತಂತ್ರಗಳು ಅರ್ಥಹೀನ ಮಂತ್ರಗಳಾಗಿ ಉಳಿಯುವುದಿಲ್ಲ.

ಈ ವಿಚಾರದಲ್ಲಿ ಜನಜಾಗೃತಿಯನ್ನು ಹೆಚ್ಚಿಸುವ ಸಲುವಾಗಿ ಈ ಪತ್ರವನ್ನು ನನ್ನ ಬ್ಲಾಗ್: www.athree.wordpress.comನಲ್ಲೂ ಪ್ರಕಟಿಸಲಿದ್ದೇನೆ, ಪತ್ರಿಕೆಗಳಿಗೂ ಮುಕ್ತಗೊಳಿಸುತ್ತಿದ್ದೇನೆ. ನಿಮ್ಮ ಪ್ರತ್ಯುತ್ತರ, ಅದಕ್ಕೂ ಮಿಗಿಲಾಗಿ ಕಾರ್ಯರಂಗದಲ್ಲಿ ಅನುಷ್ಠಾನದ ಛಾಯೆ ಕಾಣಿಸಿದರೂ ಕೃತಜ್ಞತಾಪೂರ್ವಕವಾಗಿ ಅಲ್ಲೆಲ್ಲ ದಾಖಲಿಸುವ ಭರವಸೆ ಕೊಡುತ್ತೇನೆ.

ಇಂತು ವಿಶ್ವಾಸಿ
ಜಿ.ಎನ್.ಅಶೋಕವರ್ಧನ
ಮಾಲಿಕ
ಅತ್ರಿ ಬುಕ್ ಸೆಂಟರ್, ೪ ಶರಾವತಿ ಕಟ್ಟಡ, ಬಲ್ಮಠ, ಮಂಗಳೂರು ೫೭೫೦೦೧ ದೂರವಾಣಿ ೨೪೨೫೧೬೧ ತಾ: ೮-೬-೨೦೦೯