‘ಬ್ರಹ್ಮಚರ್ಯವೇ ಜೀವನ, ವೀರ್ಯನಾಶವೇ ಮೃತ್ಯು’ – ಸ್ವಾಮಿ ಶಿವಾನಂದರ ಉಕ್ತಿಯನ್ನು ಅಕ್ಷರಶಃ ನಂಬಿ, ಕೇಳುವ ಕಿವಿಗಳಿಗೆ ಧಾರಾಳ ಹೇಳುತ್ತಿದ್ದ ಮತ್ತೆ ತನ್ನ ಮುಕ್ಕಾಲು ಶತಮಾನದ ಬಾಳಿನುದ್ದಕ್ಕೂ ಯಾರೂ ಸಂದೇಹಪಡದಂತೆ ಹಾಗೇ ಬಾಳಿದ ಜಿ.ಟಿ. ಈಶ್ವರ ನನ್ನ ಚಿಕ್ಕಪ್ಪಂದಿರಲ್ಲಿ (ನಾಲ್ವರಲ್ಲಿ) ದೊಡ್ದವ, ನನ್ನ ತಂದೆಗಿಂತ ಎಂಟೇ ವರ್ಷ ಚಿಕ್ಕವ. [ನೀವು ತಪ್ಪು ತಿಳಿಯುವ ಮೊದಲು ಒಂದು ಸ್ಪಷ್ಟನೆ: ನಮ್ಮ ಕುಟುಂಬದಲ್ಲಿ ಅದೂ ಸಣ್ಣ ಕಕ್ಷೆಯೊಳಗೆ ಯಾವ ತರ್ಕಗಳೂ ಇಲ್ಲದೆ, ಪ್ರೀತಿ, ಗೌರವಗಳಿಗೆ ಕುಂದಿಲ್ಲದೆ ರೂಢಿಸಿರುವಂತೆ ಈತನೂ ನಮ್ಮಿಂದ ಏಕವಚನದ ಮತ್ತು ನೇರ ಹೆಸರಿನ ಸಂಬೋಧನೆಗೇ ಒಳಗಾದವ.] ಈಶ್ವರ ನೆಚ್ಚಿದ ಇನ್ನೊಂದು ಸ್ವಾಮಿ ವಿವೇಕಾನಂದ. ಅವರು ಹೇಳಿದ್ದನ್ನು ಸ್ವಲ್ಪ ಆಚೀಚೆ ಮಾಡಿ ‘ದೃಢ ಮನಸ್ಸಿಗೊಂದು ಉಕ್ಕಿನ ದೇಹ’ ರಚಿಸಿ, ಕಾಪಾಡುವುದರಲ್ಲಿ ಜೀವಮಾನವನ್ನೇ ಮೀಸಲಿಟ್ಟವನೂ ಈ ಈಶ್ವರ! ರಜೆಗೆ ಅಜ್ಜನಮನೆಗೆ (ಮಡಿಕೇರಿಯಿಂದ ಆರು ಮೈಲು ದೂರದ ಮೋದೂರು) ಹೋಗುವ ನನ್ನಂಥವರಿಗೆ (ಬಾಲರಿಗೆ) ಈಶ್ವರ ಬಲುದೊಡ್ಡ ಆಕರ್ಷಣೆ, ಆದರ್ಶ. ನನಗೆ ಬೆಳಗಾಗುವ ಎಷ್ಟೋ ಮೊದಲು (ನಾಲ್ಕೋ ಐದೋ ಗಂಟೆಗೆ) ಈತ ಎದ್ದು, ಕೊರೆಯುವ ಚಳಿಯಲ್ಲಿ ತಣ್ಣೀರು ಮಿಂದು, ಗಂಟೆಗಟ್ಟಳೆ ಯೋಗಾಸನ ಮಾಡಿ, ವಿಚಿತ್ರಪಾಕದ (ಉಪ್ಪು, ಕಾರ, ಹುಳಿಗಳ ಹಂಗಿಲ್ಲದ ಆದರೆ ಎಲ್ಲ ಜೀವಾತುಗಳ ಸಂಗಮವೆನಿಸಿದ ಮಡ್ಡಿ) ಬುತ್ತಿ ಕಟ್ಟಿಕೊಂಡು ಮಡಿಕೇರಿಯ ಪಾಲಿಟೆಕ್ನಿಕ್ಕಿಗೆ ವಿದ್ಯಾರ್ಥಿಯಾಗಿ ಓಡುತ್ತಿದ್ದ. ಅದಕ್ಕೂ ಮಿಗಿಲಾಗಿ ಗಾಢಾಂಧಕಾರದಲ್ಲಿ ಮತ್ತೆ ಒಂಟಿಯಾಗಿ ಆತ ಮರಳುತ್ತಿದ್ದನಲ್ಲಾ ಅದು, ಇನ್ನಷ್ಟು ಪರಿಣಾಮ ಬೀರುತ್ತಿತ್ತು. ಅಂದ ಕಾಲತ್ತಿಲೆ ಮಡಿಕೇರಿಯೇ ಕತ್ತಲಮೂಟೆ. ಆ ಸಣ್ಣ ಪೇಟೆ ಕಳೆದದ್ದೇ ಸಿಗುವ ಕಾಫಿ, ಏಲಕ್ಕಿ ತೋಟಗಳೆಂದರೆ ರಾತ್ರಿಯಲ್ಲಿ ಗೊಂಡಾರಣ್ಯವೇ. ಅದರ ನಡುವೆ ನಡುಗುವ ದಾರಿಯಲ್ಲಿ ಇನ್ನಷ್ಟು ಭಯಹುಟ್ಟಿಸುವ ಹರಿಶ್ಚಂದ್ರ ಘಾಟ್ (ಬ್ರಾಹ್ಮಣರ ಶ್ಮಶಾನ) ದಾಟಿ ಬರಬೇಕು. ಇನ್ನು ಭೋರ್ಗರೆವ ಮಳೆಗಾಲದಲ್ಲಿ, ಸೊಂಯ್‌ಗುಟ್ಟುತ್ತ ಮೂಳೆಯಾಳಕ್ಕಿಳಿಯುವ ಚಳಿಗಾಳಿಗಳ ಇರಿಚಿಲಿನ ಹೊಡೆತದಲ್ಲಿ, ಇಂಬುಳ ಹಾವುಗಳಿಂದ ಹಿಡಿದು ಅಬ್ಬರಿಸುವ ಅರ್ಬುತನವರೆಗೆ ಏನೂ ಅಟಕಾಯಿಸಬಹುದಾದ ಪರಿಸರದಲ್ಲಿ ಕೂದಲೂ ಕೊಂಕದೆ ಬರುವ ಈಶ್ವರ ನನಗೆ ವಿವರಿಸಲಾಗದ ಅಚ್ಚರಿ. ಹಾಗೆ ಬರುವಲ್ಲಿ ಆತ ದಿನಕ್ಕೊಂದು ಭೂತಕ್ಕೆ ಹಾಕಿದ ಪಟ್ಟು, ಪಿಶಾಚಕ್ಕೆ ಕೊಟ್ಟ ಪೆಟ್ಟು ಕೇಳುತ್ತಾ ನನ್ನ ನಿದ್ರೆ ಚಟ್ಟು. ಈಶ್ವರ ಸಾವಿಲ್ಲದ ಸರದಾರ, ಅಲೆದಾಡುವ ಭೂತ, ಸಾಕ್ಷಾತ್ ಫ್ಯಾಂಟಮ್! ಉಳಿದ ವೇಳೆಯಲ್ಲೂ ಮಕ್ಕಳು ಅಟಕಾಯಿಸಿದಾಗೆಲ್ಲ ಆತ ಮತ್ತಷ್ಟು ರೋಚಕವಾಗಿ ಬಿತ್ತರಿಸುತ್ತಿದ್ದ ಸೈನ್ಯದ ಪ್ರಸಂಗಗಳು, ನೆನಪಿಸಿಕೊಳ್ಳುತ್ತಾ ತಾನೇ ಉಸಿರು ಸಿಕ್ಕಿಹೋಗುವಂತೆ ನಗುತ್ತಿದ್ದ ಜೋಕುಗಳು, ಅಲ್ಲಿ ಆತ ನೋಡಿದ ಜಗಜಟ್ಟಿ ಗಾಮಾ ದಾರಾಸಿಂಗ್ ಕಿಂಗ್ ಕಾಂಗ್ ಮುಂತಾದವರ ಮಲ್ಲಯುದ್ಧದ ಬಿಡಿಬಿಡಿ ಸನ್ನಿವೇಶಗಳು ಕೇಳಿದಷ್ಟೂ ಮುಗಿಯದು. (ಈಚೆಗೆ ಆತನ ಮನೆಗೆ ಹೋಗಿ ಬಂದ ಮಕ್ಕಳು ಕೇಳುವುದಿದೆ “ಈಶ್ವರಜ್ಜನ ಮನೆ ಅಡಿಗೆ ಮನೆ ಕಿಟಕಿಯಿಂದ ದೋಸೆ ಕೇಳುವ ಭೂತದ ಕೈ ಬಂದದ್ದು ನಿಜವಾ?”) ಈಶ್ವರ ಅಮರ ಕತೆಗಳ ಖಜಾನೆ.

ಓದು ಎಸ್ಸೆಸ್ಸೆಲ್ಸಿ ದಾಟುವಾಗ ಈಶ್ವರ ಯಾಕೋ ಏನೋ ಮನೆಯಲ್ಲಿ ತಿಳಿಸದೆ (ಓಡಿಹೋಗಿ) ಭಾರತೀಯ ಸೈನ್ಯ ಸೇರಿದ್ದ. ವರ್ಷ ಒಂದೋ ಎರಡೋ ಕಳೆಯುವಾಗ ಸೈನ್ಯದಲ್ಲಿ ಆದರ್ಶಕ್ಕೂ ವಾಸ್ತವಕ್ಕೂ ಇರುವ ಅಗಾಧ ಕಂದರವನ್ನು ಪಾರುಗಾಣಿಸಲಾಗದೆ ಈಶ್ವರ ನಾಗರಿಕ ಜೀವನಕ್ಕೆ ಮರಳುವ ಕೊರಗಿನಲ್ಲಿ ತನ್ನ ಇರವನ್ನೂ ಪ್ರಕಟಿಸಿದ, ಹಂಬಲವನ್ನೂ ತೋಡಿಕೊಂಡ. ಆದರೆ ಅವನೇ ಬರೆದುಕೊಟ್ಟ ಏಳೋ ಎಂಟೋ ವರ್ಷದ ದುಡಿಯುವ ಒಪ್ಪಂದ (ಬಾಂಡು) ಮೀರಲಾಗದೆ ಬಲುಬನ್ನ ಪಟ್ಟೇ ಹೊರಬಂದ. ಮತ್ತೆ ಮಡಿಕೇರಿ ಪಾಲಿಟೆಕ್ನಿಕ್ಕಿನಲ್ಲಿ ಶಾರ್ಟ್ ಹ್ಯಾಂಡ್ ಮತ್ತು ಟೈಪಿಂಗ್ ಕಲಿತದ್ದು. ಆ ಪದವಿ + ಮಾಜೀ ಸೈನಿಕ + (ಅಣ್ಣ) ಮೇಜರ್ ಜಿಟಿ ನಾರಾಯಣ ರಾವ್ ಶಿಫಾರಸಿನಲ್ಲಿ ಆತನಿಗೆ ಎನ್.ಸಿ.ಸಿ ಆಫೀಸಿನಲ್ಲಿ ಗುಮಾಸ್ತಗಿರಿ ಸಿಕ್ಕಿತು. ಅದರಲ್ಲಿ ಮೂರೂರು ಸುತ್ತಿ, ಮೈಸೂರಿನಲ್ಲಿ ನೆಲೆಸಿದ. ಆ ಹೊತ್ತಿಗೆ ಈಶ್ವರನ ನಿಜ ವ್ಯಕ್ತಿತ್ವವನ್ನು ಸ್ವಲ್ಪವಾದರೂ ತಿಳಿಯುವ ಹಂತಕ್ಕೆ ನಾನು ಬೆಳೆದಿದ್ದೆ.

ಸರಳ ಸಾತ್ವಿಕ ಜೀವನ, ಪ್ರಾಮಾಣಿಕತೆ, ಪರೋಪಕಾರಗಳೆಲ್ಲ ಈಶ್ವರನ ಉಸಿರುಸಿರಿನಲ್ಲೂ ಇತ್ತು. ಆದರೆ ಸ್ವಧರ್ಮ ರಕ್ಷಣೆಗಾಗಿ (ಖಂಡಿತವಾಗಿಯೂ ಇತರರನ್ನು ವಂಚಿಸಲು ಅಲ್ಲ) ಸುಳ್ಳು ಹೇಳುವುದನ್ನು ಆತ ನಮಗೆ ಬಾಲಾಪ್ಯದಲ್ಲಿ ಕಥೆ ಹೇಳಿದಷ್ಟೇ ಪರಿಣತಿಯಿಂದ ಹೇಳುತ್ತಿದ್ದ. ಇತರರಿಗೆ ತೊಂದರೆ ಕೊಡದ ಸುಳ್ಳಿಗೊಂದೇ ಉದಾಹರಣೆ ಸಾಕು. ಈಶ್ವರ ಬೆಂಗಳೂರಿನಲ್ಲಿದ್ದಾಗ ಒಂದು ಮನೆಯ ಮಾಳಿಗೆಯ ಕೋಣೆಯೊಂದನ್ನು ಬಾಡಿಗೆಗೆ ಹಿಡಿದಿದ್ದ. ಕೆಳಗಿದ್ದ ವಾನರತಿ (ಮನೆಯ Ownerನ ಹೆಂಡತಿ) ಯಾವುದೋ ಹಬ್ಬಕ್ಕೆ ‘ಪಾಪ, ಒಂಟಿಜೀವ’ ಎಂದು ಪಾಯಸ ಕೊಡಲು ಬಂದರಂತೆ. ದಾರಾಸಿಂಗನನ್ನೂ ಒಂದು ಕೈ ನೋಡುವ ಹಾಗಿದ್ದ ಈಶ್ವರನಿಗೆ ಪಾಯಸ ಎಂದರೆ ಭಾರೀ ಇಷ್ಟವೂ ಹೌದು. ಆದರೆ ಸ್ವಾಭಿಮಾನ ಬಿಡಬೇಕಲ್ಲಾ “ಓ ಸಾರಿ, ನನಗೆ ಡಯಾಬಿಟಿಸ್” ಎಂದು ಬಿಟ್ಟ. ಇನ್ನೊಮ್ಮೆ ಆ ಕರುಣಾಮಯಿ ಈತನಿಗೆ ಶುದ್ಧ ತುಪ್ಪದನ್ನ ಕೊಡಬಂದಳು. ಈತ ವ್ಯಾಯಾಮದಂಗವಾಗಿ ತಾರಸಿಯ ಮೇಲೆ ಸ್ಕಿಪ್ಪಿಂಗ್ ಮಾಡಿದರೆ ಹಳೆ ಕಟ್ಟಡ ಜರಿದು ಬಿದ್ದೀತೆಂದು ಯಾವುದೋ ಪಾರ್ಕಿನಲ್ಲಿ ಭಾರೀ ‘ದಮ್ಮಾಸ್’ ಹಾಕಿದ್ದರಿಂದ ಬೆವರಿನಿಂದ ತೊಯ್ದಿದ್ದ. ತೆರೆದ ಬಾಯಿಗೆ ಘೋಷಿಸಿಬಿಟ್ಟ “ಅಯ್ಯೋ ಕೊಲೆಸ್ಟ್ರಾಲ್! ನಂಗೆ ಹಾರ್ಟ್ ಟ್ರಬಲ್ಲ್.” ಪಾಪ, ಆಕೆಗೆ ವಿಷ ಒಡ್ಡಿದಷ್ಟೇ ಸಂಕಟವಾಗಿರಬೇಕು. ಹೀಗೆ ಆಕೆಯ ಪ್ರತಿ ಉಪಚಾರಕ್ಕೆ ವಿರುದ್ಧವಾದ ಮರಣಾಂತಿಕ ಕಾಯಿಲೆ ಹೆಸರಿಸುವ ಕಷ್ಟಕ್ಕೆ ಹೆದರಿ ಈಶ್ವರ ಬೇಗನೆ ಮನೆಯನ್ನೇ ಬದಲಿಸಿಬಿಟ್ಟ!

ಸೈನ್ಯದಲ್ಲಿ ಚೀನಾ ಯುದ್ಧ, ಗೋವಾ ವಿಮೋಚನೆಗಳಲ್ಲಿ ಮುಂಚೂಣಿಯ ಅನುಭವ ಈಶ್ವರನಿಗಾಗಿತ್ತು. ಅದರ ಜೊತೆಗೆ ಸಿಕ್ಕಿದ ತೀರಾ ಸೀಮಿತ ಅರ್ಥಗ್ರಹಣದ ಓದು (ಹಿಮಾಲಯನ್ ಬ್ಲಂಡರ್ – ಬ್ರಿಗೆಡಿಯರ್ ದಳ್ವಿ ಬರೆದ ಪುಸ್ತಕ ಈತನ ಬಲುಪ್ರಿಯ ಸಂಗ್ರಹದಲ್ಲೊಂದು) ಈಶ್ವರನನ್ನು ಉಗ್ರ ದೇಶಪ್ರೇಮಿ (ಹಾಗೂ ಬದ್ಧ ನೆಹರೂ ವೈರಿಯನ್ನಾಗಿಯೂ) ಹಾಗೂ ಆತನೇ ವ್ಯಾಖ್ಯಾನಿಸಬಹುದಾಗಿದ್ದ ‘ಸನಾತನ ಮೌಲ್ಯಗಳ’ ಪ್ರತಿಪಾದಕನನ್ನಾಗಿಯೂ ರೂಪಿಸಿತ್ತು. ಹೆಣ್ಣು/ ಮದುವೆ ಎಂಬ ಕಲ್ಪನೆಗಳೇ ಆತನ ಕೋಶದಲ್ಲಿರಲಿಲ್ಲ. ನನ್ನ ತಾಯಿ, ಆತನ ಸೋದರ ಮಾವನ ಮಗಳೇ ಆದ್ದರಿಂದ ಮತ್ತು ಬಾಲ್ಯದಿಂದ ಒಡನಾಟ ಇದ್ದುದರಿಂದ ಮೈಸೂರಿನ ನಮ್ಮ (ಅತ್ರಿ) ಮನೆಗೆ ಆತ ಧಾರಾಳ ಬರುವುದಿತ್ತು. ಮತ್ತೆ ನನ್ನ ತಂದೆಯ ಬಗ್ಗೆ ಆತನಿಗೆ ಲಕ್ಷ್ಮಣ ನಿಷ್ಠೆ. ಅವರು ಏನು ಹೇಳಿದರೂ ಈತನಿಗೆ ಶಿರೋಧಾರ್ಯ! ಆದರೆ ಸಾರ್ವಜನಿಕದಲ್ಲೆಲ್ಲೂ ಅಪರಿಚಿತರಿಗೆ ತಾನು ಇಂಥವರ ಸಂಬಂಧಿ ಎಂದು ಹೇಳಿಕೊಳ್ಳದ ವಿನಯಿ ಮತ್ತು ಸ್ವಾಭಿಮಾನಿ. (ಅವನ ಮಿತಿ ಗೊತ್ತಿದ್ದು ತಂದೆ ಅವನಿಗೆ ಕೆಲಸ ಹೇಳುತ್ತಿದ್ದದ್ದು ಕಡಿಮೆ) ತಂದೆಯನ್ನೊಮ್ಮೆ ತೀವ್ರ ಅನಾರೋಗ್ಯ ಕಾಡಿ, ವಾರಗಟ್ಟಳೆ ಆಸ್ಪತ್ರೆಯಲ್ಲಿರುವಂತಾಗಿದ್ದಾಗ ಅಕ್ಷರಶಃ ಅಣ್ಣನ ಚರಣಸೇವಕನಾಗಿದ್ದ ಈಶ್ವರ.

ಊರಿನಲ್ಲೇನಾದರೂ ವಿಶೇಷ ಸಮಾರಂಭಗಳಿದ್ದು ದಿನಗಟ್ಟಲೆ ಅತ್ರಿಗೆ ಬೀಗ ಜಡಿದು ಬರಬೇಕೆಂದಿದ್ದರೆ ಮನೆಯ ಇಪ್ಪತ್ನಾಲ್ಕು ಗಂಟೆ ಪಹರೆಗೆ ಈ ಮಾಜೀ ಸೈನಿಕ ಬಲು ಸಂತೋಷದಿಂದ ಹಾಜರ್. (ಆ ಸಮಾರಂಭಗಳಲ್ಲಿ ಆತ ಭಾಗಿಯಾಗುವ ಮಾತಂತೂ ಊಹಾತೀತ.) ಮತ್ತದನ್ನು ಒಟ್ಟಾರೆ ತನ್ನ ಭೋಳೇತನವನ್ನು ಎಲ್ಲೂ ಹೇಳಿಕೊಳ್ಳುವ, ಒಪ್ಪಿಕೊಳ್ಳುವ ಪ್ರಾಮಾಣಿಕತೆಯೂ ಆತನಲ್ಲಿತ್ತು. ಅತ್ರಿಗೆ ಸೊಸೆಯಂದಿರು, (ಹೆಣ್ಣು) ಮೊಮ್ಮಕ್ಕಳು ಬರತೊಡಗಿದೊಡನೆ (ಅಂದರೆ ನಮ್ಮ ಮೂವರಿಗೆ ಮದುವೆ, ಮಕ್ಕಳಾಗುತ್ತಿದ್ದಂತೆ) ಈತ ಅಷ್ಟಷ್ಟು ದೂರವಾಗುತ್ತಿದ್ದ. ನನ್ನ ಹೆಂಡತಿಯೋ (ದೇವಕಿ) ತಮ್ಮನ ಹೆಂಡತಿಯೋ (ರುಕ್ಮಿಣಿ) “ಈಶ್ವರ ಮಾವಾ”ಂತ, ತಮ್ಮನ ಮಗಳು ಅಕ್ಷರಿ “ಈಶ್ವರಜ್ಜಾ”ಂತ ಅವರ ಮನೆಗೆಲ್ಲಾದರೂ ಹೋಗಿಬಿಟ್ಟರೆ ಅವನ ಗಡಿಬಿಡಿ ನಿಜವಾಗಿಯೂ ನೋಡುವಂತದ್ದೇ. ತವರು ನೆಲವೆಂದೂ ನೈಸರ್ಗಿಕ ಆರೋಗ್ಯಧಾಮವೆಂದೂ ಮೋದೂರಿನ ಮೇಲೆ ಆತನಿಗೆ ವಿಶೇಷ ಮೋಹವೇನೋ ಇತ್ತು. ಆದರೆ ತಮ್ಮ, ದಿವಾಕರನ ಹೆಂಡತಿ ಅಲ್ಲಿರುವಾಗ ಈ ಋಷ್ಯಶೃಂಗ ಅಲ್ಲಿಗೆ ಹೋಗುವುದುಂಟೇ! ನಮ್ಮ ಮನೆಯೊಳಗೇ ಸಣ್ಣ ಪುಟ್ಟಪುಟ್ಟ ನೆಪಮಾಡಿ (ದೊಡ್ಡ ಕಾರ್ಯಕ್ರಮಗಳೆಂದು ಗೊತ್ತಾದರೆ ಆತ ಊರೇ ಬಿಟ್ಟೋಡಿಬಿಡುತ್ತಿದ್ದ!) ವಿಶೇಷ ಊಟಕ್ಕೆ ಆತನನ್ನು ಕರೆಸುವುದಿತ್ತು. ಸ್ವತಃ ಆತನ ಅಡುಗೆ ಉದ್ದೇಶಪೂರ್ವಕವಾಗಿ ಭಯಂಕರ! ಹಿಂದೆ ಪಾಲಿಟೆಕ್ನಿಕ್ಕಿಗೆ ಹೋಗುವಾಗ ಆತನೇ ಮಾಡಿಕೊಳ್ಳುತ್ತಿದ್ದ ವಿಚಿತ್ರಪಾಕವನ್ನೇ ಪರಿಷ್ಕರಿಸಿ ಬಳಸುತ್ತಿದ್ದ. (ಪ್ರಯೋಗಗಳು ಅಸಂಖ್ಯ, ಪರಿಣಾಮ ಶೂನ್ಯ!) ಆರೋಗ್ಯ, ದೇಹದಾರ್ಢ್ಯಕ್ಕೆ ವಿರೋಧವಾದ್ದೆಲ್ಲವೂ ಆತನಿಗೆ ಬುದ್ಧಿಪೂರ್ವಕವಾಗಿ ವರ್ಜ್ಯ. ಅನಿವಾರ್ಯವಾದಲ್ಲಿ ನಮ್ಮ ವಲಯದ ಸಾಂಪ್ರದಾಯಿಕ ರುಚಿಗಳು, ಮುಖ್ಯವಾಗಿ ಊಟ ಅವನೆಂದೂ (ಅವನೇ ಹೇಳಿಕೊಳ್ಳುತ್ತಿದ್ದಂತೆ, ತನ್ನ ನಾಲಗೆ ಚಪಲವನ್ನೂ) ತಿರಸ್ಕರಿಸಿದ್ದಿಲ್ಲ, ಅಷ್ಟೇಕೆ ಕಡಿಮೆ ತಿಂದದ್ದೂ ಇಲ್ಲ! ಪೊಗದಸ್ತು ಊಟದ ಕೊನೆಯಲ್ಲಿ (ನನ್ನ ತಮ್ಮ) ಅನಂತ ಎಂದಿನ ಆತ್ಮೀಯ ಶೈಲಿಯಲ್ಲಿ “ಈಶ್ವರಾ ಈ ಮುದ್ದೇಹುಳಿ ಉಳ್ದುಹೋಯ್ತಲ್ಲಾ. ಇನ್ನು ತೆಂಗಿನಗುಂಡಿಗೇ ಹಾಕಬೇಕು” ಎಂದೇನಾದರೂ ಹೇಳಿಬಿಟ್ರೆ ಈಶ್ವರ ಈಗಾಗಲೇ ಮೂಗಿನವರೆಗೆ ಊಟಮಾಡಿಯಾಗಿದ್ದರೂ ಅದನ್ನೂ ತಿಂದು ಖಾಲಿಮಾಡಿದ ಎಂದೇ ಅರ್ಥ. ಆತ ಸ್ವಂತ ಮನೆಯಲ್ಲಿ ಅಕ್ಕನ (ಅವನಮ್ಮ, ಅಂದರೆ ನನ್ನಜ್ಜಿಯನ್ನು ಮಕ್ಕಳೆಲ್ಲರೂ ಕರೆಯುತ್ತಿದ್ದದ್ದು ಹಾಗೇ) ನೆನಪಲ್ಲಿ ಒಮ್ಮೊಮ್ಮೆ ಯಾವುದೋ ಪಾಕ ಮಾಡಲು ಹೋಗಿ, ಅದು ಇನ್ನೇನೋ ಆಗುತ್ತಿತ್ತಂತೆ. ಆದರೆ ಅನ್ನಬ್ರಹ್ಮನನ್ನು ಅವಮಾನಿಸದ ಈಶ್ವರನ ನಿಲುವು, ಆ ಪಾಕದ ಒಂದಗಳೂ ವ್ಯರ್ಥವಾಗದಂತೆ ಇವನ ಹೊಟ್ಟೆ ಸೇರಿದ ಕಥೆ ಭೂತಪ್ರೇತಗಳ ಹೊಡೆದಾಟದಷ್ಟೇ ರಮ್ಯ.

ನನ್ನ ಮೈಸೂರು ವಾಸದ ಕಾಲದಲ್ಲೇ (೧೯೬೯-೭೪) ಈಶ್ವರ ಮೈಸೂರಿಗೆ ವರ್ಗವಾಗಿ ಬಂದಿದ್ದ. ಮೊದಲ ಕೆಲವು ಕಾಲ ನಮ್ಮ ಮನೆಯಲ್ಲೇ ಇದ್ದ. ನನ್ನ ಅಪ್ಪಮ್ಮರ ಸ್ಪಷ್ಟ ಸೂಚನೆಗೆ ಮಣಿದು, ಅನಂತನ ಪೂರ್ಣ ಸಹಕಾರದಲ್ಲಿ ಇವನೊಂದು ಸಣ್ಣ ಮನೆ ಖರೀದಿಸಿದ್ದ. ನನ್ನಮ್ಮನೊಡನೆ (ಬಾಲ್ಯದಿಂದ ಕಂಡ ಸೋದರಮಾವನ ಮಗಳೇ) ಆತನಿಗೆ ಸದರವಿತ್ತಾದರೂ ಕೆಲವೊಮ್ಮೆ ಸಲಹೆಗಳು ಅಪಥ್ಯವಾಗುವುದಿತ್ತು. ಆದರೂ ಆಕೆಯ ವರ್ತಮಾನದ ‘ಅತ್ತಿಗೆ’ ಅಂತಸ್ತಿನ ಗೌರವಕ್ಕೆಂದೂ ಈಶ್ವರ ಚ್ಯುತಿ ತಂದದ್ದಿಲ್ಲ. ಆತನಿಗೆ ಸ್ಟ್ರಾಂಗ್ ಕಾಫಿ ರುಚಿಸುತ್ತಿತ್ತು ಆದರೆ ತತ್ವತಃ ಕುಡಿಯುವಂತಿಲ್ಲವಲ್ಲಾ! ಇದು ಅಮ್ಮನಿಗೆ ಗೊತ್ತಿದ್ದೇ ಕಾಫಿ ಕೊಟ್ಟು ಒಂದು ಒತ್ತಾಯದ ಮಾತು ಸೇರಿಸಿದರೆ ಸಾಕು, ಕುಡಿದುಬಿಡುತ್ತಿದ್ದ – (ನಾಲಿಗೆ) ಸುಖಕ್ಕಾಯ್ತು. ಆದರೆ ಹಿಂದೆಯೇ ಚೊಂಬು ತುಂಬಾ ನೀರು ಕುಡಿದು ನಗೆ ಬೀರುತ್ತಿದ್ದ – ಶಾಸ್ತ್ರಕ್ಕೂ ಆಯ್ತು (ಜೀರ್ಣಾಂಗಕ್ಕೆ ಕಾಫಿಯ ಪರಿಣಾಮ dilute ಮಾಡುವುದಂತೆ). ಹೀಗೆ ನನ್ನಮ್ಮ ದಕ್ಕಿಸಿಕೊಂಡಳೆಂದು ಇನ್ಯಾರಾದರೂ ಸದರ ತೆಕ್ಕೊಂಡ್ರೆ ಈಶ್ವರ ಸಾಕ್ಷಾತ್ ದೂರ್ವಾಸ. ಈ ಹಠಮಾರಿತನವನ್ನೇ ಈತ ಗುಣವಾಗಿ ಸ್ವೀಕರಿಸಿದ್ದಕ್ಕೆ ಸಾಕ್ಷಿಯಾಗಿ ತನ್ನ ಮನೆಗೆ ‘ದುರ್ಯೋದನ ನಿಲಯ’ ಎಂದೇ ಹೆಸರಿಸಿದ್ದ!

ಕೆಳಸ್ತರದ ವೃತ್ತಿ (ಕೀಳಲ್ಲ, low profile ಅಂತಾರಲ್ಲಾ ಅದು) ಕೊಡುತ್ತಿದ್ದ ಮರೆ, ತೀರಾ ಗೊಂದಲಿತ ಆದರೆ ಅಷ್ಟೇ ಖಚಿತ ನಿಲುವುಗಳು ಮತ್ತು ಕೌಟುಂಬಿಕವಾಗಿ ಸಿದ್ಧಿಸಿದ ಹಾಸ್ಯಪ್ರಜ್ಞೆಗಳೆಲ್ಲಾ ಸೇರಿ ರೂಪುಗೊಂಡ ಈಶ್ವರನನ್ನು ಸಾಮಾಜಿಕವಾಗಿ (ಹತ್ತಿರದ ಸಂಬಂಧಿಗಳು ಸೇರಿ) ಏಕಕಾಲಕ್ಕೆ ಪ್ರೀತಿ (ಕನಿಕರ) ಮತ್ತು ತಿರಸ್ಕಾರಗಳ ಸಮತೂಕದಲ್ಲಿ ಅಳೆಯುವಂತಾಗುತ್ತಿತ್ತು. ನಿಧಾನ, ಅವ್ಯವಸ್ಥೆ, ಕೊಳಕು ಎನ್ನುವ ಮಟ್ಟದ ಸರಳತನ ಈತನನ್ನು ಸದಾ ಹಿಂದೆಬಿಟ್ಟು ಗೇಲಿ ಮಾಡಲು ವಿಷಯವಾಗುತ್ತಿತ್ತು. ಆದರೆ ಅವುಗಳಲ್ಲೇ ಪ್ರಚೋದನೆಯನ್ನು ಪಡೆದು ತೀವ್ರ ಉಗ್ರ ನಿಲುವು, ಮತ್ತದರ ಪ್ರತಿಪಾದನೆಗೆ ಆತ್ಮೀಯರಲ್ಲಿ ಮುಖಾವಲೋಕನ ನಿಷೇಧಿಸಿಕೊಳ್ಳುವುದು, ಕೈಸಾಗದಲ್ಲಿ ಉಗ್ರ ಮೂಕರ್ಜಿ ಬರೆಯುವುದು ಈಶ್ವರನ ಪ್ರಿಯ ಹವ್ಯಾಸಗಳು! ಇವನೊಮ್ಮೆ ನಮ್ಮನೆಯಲ್ಲಿ ಊಟ ಮಾಡುತ್ತಿದ್ದಾಗ ಬೆಂಗಳೂರಿನಿಂದ ಹತ್ತಿರದ ತಮ್ಮ ಕೃಷ್ಣಮೂರ್ತಿ ಎದುರು ಬಾಗಿಲಿನಲ್ಲಿ ಬಂದ ಸುದ್ಧಿ ಸಿಕ್ಕಿತು. ಎಂಥದ್ದೋ ಚಿಲ್ಲರೆ ಪ್ರಸಂಗದಲ್ಲಿ ಈಶ್ವರ “ಮೂರ್ತಿಯ ಮುಖ ನೋಡೆ” ಎಂದು ಶಪಥ ಮಾಡಿದ್ದು ಆಗ ಜ್ಯಾರಿಯಲ್ಲಿತ್ತು. ಅಮ್ಮ ಮೂರ್ತಿಯಲ್ಲಿ ಎರಡು ಉಪಚಾರದ ಮಾತಾಡಿ, ಊಟಕ್ಕೆ ಕರೆತರುವಾಗ ಈಶ್ವರ ಮಂಗಮಾಯ. ಅವಸರವಸರವಾಗಿ ಕೈ ತೊಳೆದೋ ತೊಳೆಯದೆಯೋ ಬಟ್ಟೆ ಹಾಕಿಯೋ ಎಳೆದುಕೊಂಡೋ ಹಿಂದಿನ ಬಾಗಿಲಿನಲ್ಲಿ ಓಡಿಹೋಗಿಯಾಗಿತ್ತು! ಕೊನೆಯ ತಮ್ಮ ದಿವಾಕರನಿಗೆ, ಸೋದರ ಮಾವನ ಮಗ – ಬಾಲ್ಯದ ಚಡ್ಡಿ ದೋಸ್ತ ಎ.ಪಿ ಗೋವಿಂದನಿಗೆ ಇನ್ನೆಷ್ಟೋ ಸಂಬಂಧಿಕರಿಗೆ ಈತ ಅನಾವಶ್ಯಕ ವಾಚಾಮಗೋಚರ ಪತ್ರ ಬರೆಯುತ್ತಿದ್ದದ್ದು, ಭೇಟಿ ಬಹಿಷ್ಕರಿಸುತ್ತಿದ್ದದ್ದು ಎಲ್ಲಾ ನಮ್ಮ ವಲಯಗಳಲ್ಲಿ ಕೇವಲ ಹಾಸ್ಯ ಪ್ರಸಂಗಗಳಾಗಿ, ಕಟ್ಟೇಪುರಾಣಗಳಾಗಿಯೇ ಚಾಲ್ತಿಯಲ್ಲಿದ್ದವು.

ಈಶ್ವರ ಕಚೇರಿಯಲ್ಲಿ, ನಿವೃತ್ತಿಯಾದಮೇಲೆ ಹೋದಲ್ಲಿ ಬಂದಲ್ಲಿ ಭೀಕರ ನಿದ್ರೆಗೆ (ಕಾಯಿಲೆ ಏನೂ ಅಲ್ಲ) ಜಾರುವುದಿತ್ತು. ಪೇಪರ್ ಓದುವ ನೆಪದಲ್ಲಿ ಹೋದ ಸಾರ್ವಜನಿಕ ಗ್ರಂಥಾಲಯಗಳಲ್ಲಿ, ಪಾರ್ಕುಗಳ ಸಿಮೆಂಟ್ ಬೆಂಚಿನಲ್ಲಿ, ಹೆಚ್ಚೇಕೆ ಜೀವದ ಸಂಗಾತಿಯಾಗಿದ್ದ ಸೈಕಲ್ (ಸವಾರಿ ಮಾಡಿದ್ದು ಕಡಿಮೆಯೇ ಇರಬೇಕು!) ನೂಕುತ್ತ ನಡೆಯುತ್ತಿದ್ದಂತೆ ಒಮ್ಮೆಗೆ ನಿಲ್ಲಿಸಿ, ದಾರಿ ಬದಿಯ ಮೋರಿಕಟ್ಟೆಯಲ್ಲೂ ಈತ ಗಂಟೆಗಟ್ಟಳೆ ನಿದ್ರೆ ತೆಗೆದದ್ದಿತ್ತು. ಆಸ್ಪತ್ರೆಯಲ್ಲಿದ್ದ ಏಕಮಾತ್ರ ಅಣ್ಣನ ಕಾವಲಿನ ಸಮಯದ ಕಥೆ, ನಂಬಿದರೆ ನಂಬಿ, ರೋಗಿಯ ಪಕ್ಕದ ಮಂಚದ ಮೇಲೆ ಕೆಡೆದುಬಿದ್ದ (ಮಲಗಿದ್ದ ಎನ್ನುವುದು ತುಂಬಾ ಸೌಮ್ಯ ಶಬ್ದ) ಈತನನ್ನು ವೈದ್ಯರು ಮಹಾರೋಗಿಯೆಂದೇ ಭ್ರಮಿಸಿ ಕಾರ್ಯಾಚರಣೆಗಿಳಿದಿದ್ದರಂತೆ! ಆತನ ಭಾಷೆಯಲ್ಲಿ ಅದು ನಿದ್ರೆಯಲ್ಲ, ‘ಸಮಾಧಿ ಸ್ಥಿತಿ.’ ಗುಮಾಸ್ತನ ಭಾಷೆಯಲ್ಲೂ ಆತನೇ ಅಸಾಧ್ಯ ನಗೆಯೊಡನೆ ಹೇಳುತ್ತಿದ್ದ “ನಿದ್ರೆ ಕಂಡಾಬಟ್ಟೆ ಕ್ರೆಡಿಟ್ ಬ್ಯಾಲೆನ್ಸ್ ಇತ್ತು. ಎಲ್ಲ ಡೆಬಿಟ್ ಮಾಡಿಬಿಟ್ಟೆ.” ಹೀಗೇ ಆತ ಕಬ್ಬನ್ ಪಾರ್ಕಿನ ಮುರುಕು ಬೆಂಚಿನ ಮೇಲೆ ಒರಗಿರುತ್ತಲೊಂದು ಕಂಡ ಕನಸು, ಅಪರಾತ್ರಿಯಲ್ಲಿ ನಿರ್ಜನ ನಗರ ವಿಸ್ತರಣ ಜಾಗದ ಮೋರಿ ಕಟ್ಟೆಯ ಮೇಲೆ ಧ್ಯಾನಸ್ಥನಾದ ಪರಿ ಮುಂತಾದವು ಬಾಯಿಂii ಸೆಟ್ಟ್ ಹಲ್ಲು ಹಾರಿಹೋಗುವಂಥ ಅವನ ನಗುವಿನ ಸಹಿತ ಅವನ ಬಾಯಲ್ಲೇ ಕೇಳಬೇಕು, ಇಲ್ಲ, ಕೇಳಬೇಕಿತ್ತು.

ಹೌದು, “ಈಶ್ವರಮಾವ ಹೋಗಿಬಿಟ್ರು” ಎಂದು ೨೭ರ (ಇದೇ ಡಿಸೆಂಬರ್, ೨೦೦೯) ಬೆಳಿಗ್ಗೆ ರುಕ್ಮಿಣಿ ಮೈಸೂರಿನಿಂದ ದೂರವಾಣಿಸಿದಾಗ ಇನ್ನೂ ಎಷ್ಟೆಷ್ಟೋ ಹಾಸ್ಯ, ರಸಪ್ರಸಂಗಗಳು ಈಶ್ವರನ ಬಾಯಲ್ಲೇ ‘ಕೇಳಬೇಕಿತ್ತು’ ಎನ್ನುವ ಮಾತು ಉಳಿದೇ ಹೋಯ್ತು. ಸಣ್ಣಪುಟ್ಟ ವೃದ್ಧಾಪ್ಯದ ತೊಂದರೆಗಳು (ಪ್ರಾಯ ಎಪ್ಪತ್ತೈದು) ಆತನನ್ನು ಕಾಡುತ್ತಿದ್ದಾಗಲೂ ಇನ್ನೊಬ್ಬರಿಗೆ ತಾನು ಹೊರೆಯಾಗಬಾರದೆಂದು ತಿಂಗಳಾನುಗಟ್ಟಳೆ ಅತ್ರಿಗೆ ಬರುತ್ತಿರಲಿಲ್ಲ. ಆ ದೈಹಿಕ ಚಿಕಿತ್ಸೆಗಳಿಗೆ ಎಲ್ಲೋ ಆಸ್ಪತ್ರೆಗೆ ಅಜ್ಞಾತವಾಗಿ ಸೇರಲು ಹೋಗಿ, “ಅರೆ, ನೀವು ಜಿಟಿಎನ್ ಬ್ರದರ್ ಅಲ್ವೇನ್ರೀ” ಎಂದು ಗುರುತು ಹಿಡಿದಾಗ ಚಿಕಿತ್ಸೆ ನಿರಾಕರಿಸಿ ಹೋದದ್ದು, ಇನ್ನೆಲ್ಲೋ ಹೀಗೇ ಸೇರಿ ಪರಿಸ್ಥಿತಿ ಬಿಗಡಾಯಿಸಿದಾಗ ಅನಂತನಿಗೆ ಹೇಗೋ ತಿಳಿದು ಅವನ ಅಭಿಮಾನ ಭಂಗ ಮಾಡದೆ ಸಹಾಯ ಒದಗಿಸಿದ್ದು, ಇನ್ನೆಲ್ಲೋ “Oh, brother of GTN!” ಯಾರೋ ಅಂದದ್ದಕ್ಕೆ “Yes, infamous brother of famous GTN” ಎಂದು ಈತನೇ ವಗ್ಗರಿಸಿದ್ದು ಎಷ್ಟೂ ಇವೆ. ಆದರೆ ಅನಂತ-ರುಕ್ಮಿಣಿಯರು, ಅವನ ಮನೆಯ ಹತ್ತಿರದಲ್ಲೇ ಇದ್ದ ಕುಸುಮ-ಸದಾಶಿವರು (ನನ್ನ ಒಬ್ಬ ಸೋದರಮಾವ ಎ.ಪಿ. ರಮಾನಾಥ ರಾವ್ ಅವರ ಮಗಳು, ಅಳಿಯ) ಏನೇನೋ ನೆಪ ಮಾಡಿಕೊಂಡು ಅವನನ್ನು ವಿಚಾರಿಸಿಕೊಳ್ಳುತ್ತಲೇ ಇದ್ದರು.

೨೦-೧೨-೨೦೦೯ರಂದು ಅಕ್ಷರಿಯ ಮದುವೆ ನಿಶ್ಚಯವಾದೊಡನೇ ಅನಂತ “ಚಿಕ್ಕಯ್ಯಾ (ಅನಂತ ಈಚೆಗೆ ಹಾಸ್ಯಕ್ಕೆಂದು ಈ ಸಾಂಪ್ರದಾಯಿಕ ಸಂಬೋಧನೆಯನ್ನು ರೂಢಿಸಿಕೊಂಡಿದ್ದ) ಬಂದುಬಿಡೋ” ಎಂದು ಆಮಂತ್ರಣ ಕೊಟ್ಟೇ ಹೇಳಿದ್ದ. ಮೈಸೂರಿನಲ್ಲೇ ನಡೆಯಲಿದ್ದ ಮದುವೆಯಲ್ಲಿ ತಾನು ಭಾಗಿಯಾಗುವುದನ್ನು ತಪ್ಪಿಸುವುದು ಹೇಗೆ ಎಂದು ಈಶ್ವರನ ಚಡಪಡಿಕೆ ಸುರುವಾಗಿರಬೇಕು. ಹಳ್ಳಿಮನೆ “ಮೋದೂರಿಗೆ ಬೀಗ ಹಾಕಿ ಬರುವುದು ಕಷ್ಟ. Watch & Ward ಕೆಲ್ಸಕ್ಕೆ ಬರ್ತಿಯಾ” ಎಂದು ದಿವಾಕರ ಕೇಳಿದ ನೆಪ ಸಾಕಾಗಿ ಈತ ಮೈಸೂರಿನಲ್ಲಿ ಸುದ್ಧಿ ಕೊಡದೆ ಹೋಗಿಬಿಟ್ಟಿದ್ದ. ಅದರರಿವಿಲ್ಲದೆ ಮದುವೆಯ ಹಿಂದಿನ ಬೆಳಿಗ್ಗೆ ಮೈಸೂರು ತಲಪಿದ್ದ ನಾನು ಹೀಗೇ ಅವನ ಮನೆಗೆ ಹೋದಾಗ ಗೇಟಿಗೆ ಬೀಗ. ವೈಶಂಪಾಯನ ಸರೋವರದಲ್ಲಿ ಮುಳುಗುವ ಮೊದಲು ದುರ್ಯೋದನ ಹಿಂದೆ ಹಿಂದೆ ಹೆಜ್ಜೆಯಿಟ್ಟುಕೊಂಡು ಹೋಗಿದ್ದನಂತೆ. ಹಾಗೇ ಈ ಅಭಿನವ ದುರ್ಯೋದನ ಗೇಟಿಗೆ ಮತ್ತು ಎದುರು ಬಾಗಿಲಿಗೆ ಬೀಗ ಹಾಕಿ ಹಿಂದಿನ ಬಾಗಿಲಿನಿಂದ ಒಳಸೇರಿ ಭೇಟಿಗೆ ಬಂದವರನ್ನು ಸೋಲಿಸುವುದುಂಟೆಂದು ರುಕ್ಮಿಣಿ ಹೇಳಿದ್ದಳು. ಹಾಗಾಗಿ ನಾಲ್ಕೈದು ಬಾರಿ ಕೂಗಿ ಕರೆದೂ (ಭೀಮ ಗರ್ಜನೆ?) ವಿಫಲನಾಗಿದ್ದೆ. ಅನಂತರ ತಿಳಿಯಿತು, ಆತ ನಿಜಕ್ಕೂ ಮನೆಯಲ್ಲಿರಲಿಲ್ಲ; ಮೋದೂರಿನಲ್ಲಿದ್ದ. ಇಂದು ಯೋಚಿಸುವಾಗ, ‘ಕೊನೆಯ ಭೇಟಿ’ ಎಂಬ ಔಪಚಾರಿಕತೆಯನ್ನೂ ಆತ ನನಗೆ ನಿರಾಕರಿಸಿದ್ದ.

ನನ್ನ ತಂದೆಗೆ ಕೊನೆಯ ದಿನಗಳವರೆಗೆ ಸಂಗೀತಕ್ಕೋ ನಾಟಕಕ್ಕೋ ಹೋಗೆಂದ ಕಡೆಗೆ ಜೊತೆಗೊಡುವುದರೊಡನೆ ಬೌದ್ಧಿಕ ಸಾಹಚರ್ಯವನ್ನೂ ಒದಗಿಸಿದವರು ಪ್ರೊ| ರಾಘವೇಂದ್ರ ಭಟ್ಟರು. ಅವರು ಮೊನ್ನೆ ಬೆಳಿಗ್ಗೆ ಹೀಗೇ ವಾಯುಸೇವನೆಗೆ ನಡೆದು ಹೊರಟಿದ್ದ ಈಶ್ವರನಿಗೆ ಸಿಕ್ಕಿದರಂತೆ. ಮತ್ತೆ ಪಟ್ಟಾಂಗ ಹೊಡೆಯುತ್ತ ದಾರಿಯಲ್ಲಿ ರೈಲ್ವೇ ಬುಕ್ಕಿಂಗ್ ಕಛೇರಿಗೆ, ಯಾವುದೋ ಮುಂಗಡ ಟಿಕೆಟ್ ಖರೀದಿಸುವುದಕ್ಕೆಂದು ಒಳನುಗ್ಗಿದರು. ಹಾಗೆ ಹೋಗಿ ಹೀಗೆ ಬರುವಾಗ, ಹೊರಗೆ ಮೆಟ್ಟಿಲ ಸಾಲ ಬಳಿ ಇವರನ್ನು ಕಾದು ನಿಂತಿದ್ದ ಈಶ್ವರ ಕುಸಿದು ಬಿದ್ದಿದ್ದ. ಭಟ್ಟರು ಕೂಡಲೇ ಆಂಬುಲೆನ್ಸ್ ತರಿಸಿದರೂ ಆ ಸ್ವಾಭಿಮಾನೀ ಜೀವ ಚಿಕಿತ್ಸೆ ಕಾದು ಕುಳಿತಿರಲಿಲ್ಲ.

ಸಹಜವಾಗಿ ಮತ್ತು ಸಮರ್ಥವಾಗಿ ಅನಂತ ಉತ್ತರಾಧಿಕಾರವನ್ನು ನಡೆಸಿದ್ದಾನೆ. ನನ್ನಪ್ಪ ದೇಹದಾನದ ಒಪ್ಪಂದವನ್ನು ಜೆ.ಎಸ್.ಎಸ್. ವೈದ್ಯಕೀಯ ಕಾಲೇಜಿನೊಡನೆ ಮಾಡಿಕೊಂಡಂದೇ ಈಶ್ವರನೂ ಅನುಸರಿಸಿದ್ದ. ಹಾಗಾಗಿ ಸಕಾಲಕ್ಕೆ ಕಣ್ಣು ಮತ್ತೆ (ಮಡಿಕೇರಿ, ಬೆಳ್ಳಾರೆಗಳಿಂದ ಈಶ್ವರನ ತಮ್ಮ ತಂಗಿಯರು, ನೆರೆಕರೆಯವರು) ‘ಅಂತಿಮದರ್ಶನ’ದ ಔಪಚಾರಿಕತೆ ಮುಗಿಸಿದ ಬೆನ್ನಿಗೆ ದೇಹವನ್ನೂ ಕಾಲೇಜಿನವರು ಗೌರವಯುತವಾಗಿ ಪಡೆದುಕೊಂಡರು. ಮಡಿಕೇರಿಯ ಹರಿಶ್ಚಂದ್ರ ಘಾಟಿನ ಪ್ರೇತಾತ್ಮಗಳಿಗೆ ಇನ್ನು ಪೆಟ್ಟು ಹಾಕುವವರು ಯಾರು?