[ವರ್ತಮಾನಕ್ಕೆ ಪ್ರಸ್ತುತವಾದ ಸಾಂವಿಧಾನಿಕ ಪ್ರಮಾಣವನ್ನು ಅಣಕಿಸುವಂತೆ ಯಃಕಶ್ಚಿತ್ ‘ಭಕ್ತಿ-ಉದ್ಯಮದ’ ಕೇಂದ್ರಗಳು (ತಿರುಪತಿ, ಶಿರ್ಡಿ, ಧರ್ಮಸ್ಥಳ, ಪುಟ್ಟಪರ್ತಿ ಇತ್ಯಾದಿ), ವ್ಯಕ್ತಿಗಳು (ರಾಮದೇವ್, ರವಿಶಂಕರ್, ಪೇಜಾವರ ಮುಂತಾದವರು) ಮೆರೆಯುತ್ತಿರುವ ಕಾಲದಲ್ಲಿ ನಮ್ಮ ಕಾಡ್ಮನೆಯ ವೈಜ್ಞಾನಿಕ ತಳಹದಿಯ ವ್ಯಕ್ತಿತ್ವ ವಿಕಸನ ಶಿಬಿರದ ಕಲಾಪಗಳ ವ್ಯಾಪ್ತಿ ಅದೆಷ್ಟು ಕ್ಷೀಣ ಎಂದನ್ನಿಸಿದರೂ ಒಂದು ಬೆಳಕಿನ ಕುಡಿ ಹೊಳೆಯಿಸಿದ, ವಿಚಾರದ ಕಿಡಿ ರಟ್ಟಿಸಿದ ಹೆಮ್ಮೆಯಲ್ಲಿ ಎರಡನೇ ಕಂತಿನಲ್ಲಿ ಮುಂದುವರಿಯುತ್ತೇನೆ]

ಮೂರು ದಿನಗಳಲ್ಲಿ ಕಾಡ್ಮನೆಯ ಒಳಗೇ ನಡೆದ ಕಲಾಪಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಮೊದಲಿಗೆ ಕೆಲವು ಸಾಮಾನ್ಯೀಕರಣಗಳು. ನಾವು ಉದ್ದೇಶಿಸಿದ ಇಪ್ಪತ್ನಾಲ್ಕು ವಿದ್ಯಾರ್ಥಿಗಳಲ್ಲದೆ ಶಿಬಿರಾವಧಿಯ ಮೂರೂ ದಿನ ಹಿಂದು ಮುಂದಿನ ಕಲಾಪ ನಡೆಸುವ ಸಂಪನ್ಮೂಲ ವ್ಯಕ್ತಿಗಳು, ಕೆಲವು ಪೋಷಕರು, ಮಿತ್ರರು ಅನೌಪಚಾರಿಕವಾಗಿ ಕಲಾಪಗಳಲ್ಲಿ, ಚರ್ಚೆಗಳಲ್ಲಿ ಸೇರಿಕೊಳ್ಳುವುದು ನಡೆದೇ ಇತ್ತು. ಬಂದ ಸಂಪನ್ಮೂಲ ವ್ಯಕ್ತಿ ಮತ್ತು ಕಲಾಪ ಏನಿದ್ದರೂ ಮೊದಲಲ್ಲಿ ನಾನು ಒಂದು ಎಂದರೆ ಒಂದೇ ವಾಕ್ಯದಲ್ಲಿ ಅತಿಥಿಯ ಹೆಸರು ಮತ್ತು ಅವರು ಪರಿಚಯಿಸಲಿರುವ ವಿಷಯವನ್ನಷ್ಟೇ ಉಲ್ಲೇಖಿಸಿಬಿಡುತ್ತಿದ್ದೆ. ಮತ್ತವರು ಸ್ವಪರಿಚಯದಿಂದ ತೊಡಗಿ, ಹೆಚ್ಚುಕಡಿಮೆ ಸರಸ ಸಂವಾದದಲ್ಲೇ ತಮ್ಮ ಪರಿಣತಿಯನ್ನು ಸಭಿಕರೊಡನೆ ಹಂಚಿಕೊಳ್ಳುತ್ತಿದ್ದರು. (ನಿರ್ವಾಹಕತನವೆಂಬ ಅಧಿಕಪ್ರಸಂಘವನ್ನು ನಾನು ಯಾವುದೇ ಸಭೆಯಲ್ಲಿ ಮೆಚ್ಚಿಕೊಂಡದ್ದಿಲ್ಲ ಹಾಗಾಗಿ ನನ್ನ ಸಭೆಗಳಲ್ಲಿ ನೆಚ್ಚಿಕೊಂಡದ್ದೂ ಇಲ್ಲ!) ಅವರು ಕೋಣೆಯ ಒಂದು ಭಾಗದಲ್ಲಿ ನಿಂತೋ (ಕಾಡ್ಮನೆಯಲ್ಲಿ ಕುರ್ಚಿ ಮೇಜುಗಳಿಲ್ಲ!) ನೆಲದಲ್ಲೇ ಕುಳಿತೋ ಕಲಾಪ ನಡೆಸುತ್ತಿದ್ದರೆ ಇತರರು ಹೆಚ್ಚಿನವರು ಕೋಣೆಯೊಳಗೇ ಹರಡಿಕೊಂಡು ಕುಳಿತು ಅನುಭವಿಸುತ್ತಿದ್ದರು. ಮುಂಚೂಣಿಯಲ್ಲಿ (ಗೋಡೆಯಾಧಾರವೂ ಇಲ್ಲದೆ ನೆಟ್ಟಗೆ) ಕುಳಿತು ಎಲ್ಲ ತಿಳಿಯುವ ಮತ್ತು ಅಗತ್ಯ ಬಿದ್ದರೆ ಮಾತ್ರ ಸಮನ್ವಯಿಸುವ ಕೆಲಸವನ್ನು ಜಿಟಿನಾ ತುಂಬು ಉತ್ಸಾಹದಿಂದ ನಡೆಸುತ್ತಿದ್ದರು. ಅಡಿಗೆ ಮನೆಯಲ್ಲಿ ಕೆಲಸಗಳನ್ನು ನಡೆಸುತ್ತಿದ್ದೂ ಆಗೀಗ ಒಳಹೊರಗೆ ಹೋಗುವ ಅನಿವಾರ್ಯತೆಯಲ್ಲಿ ಕಲಾಪಗಳಿಗೆ ಕಣ್ಣು ಕಿವಿಯಾಗಿದ್ದರು ನನ್ನಮ್ಮ, ಮಡದಿ ಮತ್ತು ಅಡುಗೆಯವ. ಮತ್ತೂ ಹೆಚ್ಚಾದ ಕುತೂಹಲಿಗಳು ವಿಸ್ತಾರ ಕಿಟಕಿಗಳ ಹೊರಗೆ ನಿಂತು ಪಾಲುಗೊಳ್ಳುತ್ತಿದ್ದದ್ದು ತುಂಬಾ ಅಪ್ಯಾಯಮಾನವಾಗಿರುತ್ತಿತ್ತು. ಮಳೆಯ ನಿರಂತರ ಚಡಪಡಿಕೆ ಮತ್ತು ಕಲಾಪದ ವಠಾರ ತುಂಬಾ ಅಳ್ಳಕವಾದ್ದರಿಂದ (ಬಹುತೇಕ ಔಪಚಾರಿಕ ಕಮ್ಮಟ, ಗೋಷ್ಠಿಗಳ ಭವನಗಳ ಆಚೆ ನಡೆಯುವಂತೆ) ಇವುಗಳಿಗೆ ನಾವು ಅತೀತರು ಎನ್ನುವ ಮೆರೆತದ ಮಂದಿ, ಸೋಮಾರಿ ಕಟ್ಟೆಯ ಮಾತುಗಳು ನಡೆಯಲೇ ಇಲ್ಲ! ನಿಗದಿತ ಸ್ಪಷ್ಟ ಊಟ ತಿಂಡಿಯ ಅವಧಿ ಕಾಯದೇ ಅಯಾಚಿತವಾಗಿ ಬಂದ ಕೆಲವು ಎಡೆ ತಿನಿಸು, ಪಾನಕಗಳೂ ಹರಿದಾಡುತ್ತಲೇ ಇದ್ದುದರಿಂದ ಯಾರಲ್ಲೂ ಔಪಚಾರಿಕ ಬಿಗಿತವಾಗಲೀ ಏಕತಾನತೆಯ ಹಿಂಸೆಯಾಗಲೀ ಪಡಿಮೂಡಲಿಲ್ಲ. ಸಂಘಟಕರಾಗಿ ನಮಗೆ career building ಚಪಲಗಳೇನೂ ಇಲ್ಲದ್ದರಿಂದ ಅಧಿಕೃತವಾಗಿ ಕಲಾಪಗಳ ಟಿಪ್ಪಣಿಯನ್ನಾಗಲೀ ಪ್ರತ್ಯೇಕ ದಾಖಲೀಕರಣದ ವ್ಯವಸ್ಥೆಯನ್ನಾಗಲೀ ಮಾಡಲೇ ಇಲ್ಲ (ಒಂದೇ ಒಂದು ಫೊಟೋವೂ ಇಲ್ಲ!). ಹಾಗಾಗಿ ಮುಂದಿನ ವಿವರಣೆಗಳಲ್ಲಿ ತಪ್ಪುಗಳು, ಕೊರತೆಗಳು ಕಾಣಿಸಿದರೆ ನನ್ನನ್ನು ಪೂರ್ಣ ಜವಾಬ್ದಾರನನ್ನಾಗಿಸಿ, ಸರಿಯನ್ನು ಪೂರಕವಾದ್ದನ್ನು ನೀವು ತುಂಬಿಕೊಡಬೇಕಾಗಿ ಮನವಿಯನ್ನೂ ಇಲ್ಲೇ ಮಾಡಿಬಿಡುತ್ತೇನೆ.

ಮೊದಲ ದಿನದ ನಾಲ್ಕು ಗೋಡೆಗಳ ನಡುವಣ ಮೊದಲ ಕಲಾಪ ಜಿ.ಎನ್. ಮೋಹನ್ ಮತ್ತು ಸತ್ಯ ದಂಪತಿಯದ್ದಿತ್ತು. ಮೋಹನ್ ಆಗ ಇ-ಟೀವಿಯ ಮಂಗಳೂರು ಮುಖ್ಯಸ್ಥ. ಘಟ್ಟದ ಮೇಲಿನೂರಿನ ಮೋಹನ್ ಮೊದಲು ಮಂಗಳೂರು ನೋಡಿದ್ದು ಪ್ರಜಾವಾಣಿಯ ಮಂಗಳೂರು ಪ್ರತಿನಿಧಿಯಾಗಿ. ಅವರಿಗೆ ಪತ್ರಿಕೋದ್ಯಮ ಬರಿಯ ಹೊಟ್ಟೆಪಾಡಿನದಾಗಿರಲಿಲ್ಲ. ಸಹಜವಾಗಿ ಅವರ ಅಭಿವ್ಯಕ್ತಿ ಸಂಯೋಜನೆಯಲ್ಲಿ ಅನುಭವಗಳು ಕವನವಾದ್ದುಂಟು, ಪ್ರವಾಸ ಕಥನವಾಗಿ ಕ್ರಾಂತಿಮುಖ ತೋರಿದ್ದುಂಟು, ಸಂಘಟನೆ ಸಂಪಾದಕತ್ವಗಳಿಗೂ ಒಲಿದದ್ದುಂಟು. ಇವುಗಳ ಸಂಯುಕ್ತ ಹೊಯ್ಲಿನಲ್ಲಿ ಅವರು ಮುದ್ರಣ ಮಾಧ್ಯಮ ಕಳಚಿಕೊಂಡು ವಿದ್ಯುನ್ಮಾನ ಮಾಧ್ಯಮಕ್ಕೆ ಸರಳವಾಗಿ ಹೇಳುವುದಾದರೆ ದೃಶ್ಯ ಮಾಧ್ಯಮಕ್ಕೆ ಇ-ಟೀವಿ ಮೂಲಕ ಪ್ರವೇಶಿಸಿದರು. ಅದರಲ್ಲವರ ಪ್ರಥಮ ಕಾರ್ಯಕ್ಷೇತ್ರವೂ ಮಂಗಳೂರೇ ಆಗಿದ್ದದ್ದು ನಮ್ಮ ಶಿಬಿರಕ್ಕೆ ಅನುಕೂಲವಾಯ್ತು. (ಮೋಹನ್ ಮುಂದೆ ಇ-ಟೀವಿಯಲ್ಲೇ ರಾಮೋಜಿ ನಗರದವರೆಗೂ ಏರಿದರು. ಮತ್ತೆ ಅದನ್ನೂ ಕಳಚಿಕೊಂಡು, ಇಂದು ಬೆಂಗಳೂರಿನಲ್ಲಿ ಸ್ವಂತದ ಮೇಫ್ಲವರ್ ಮೀಡಿಯಾ ಹೌಸ್ ಕಟ್ಟಿ, ಬಹುಮಾಧ್ಯಮ ಕಾರ್ಯಗಳನ್ನು ನಡೆಸುವುದರೊಡನೆ ಅಂತರ್ಜಾಲದಲ್ಲಿ ಅವಧಿ ಹೆಸರಿನಲ್ಲಿ ಇ-ಪತ್ರಿಕೆ ನಡೆಸುತ್ತಿರುವುದು ಜಾಲಿಗರಿಗೆಲ್ಲಾ ತಿಳಿದೇ ಇದೆ ಎಂದು ಭಾವಿಸುತ್ತೇನೆ.) ಮೋಹನ್ ಒಂದು ಗಂಟೆಯ ಅವಧಿಯಲ್ಲಿ ಒಟ್ಟಾರೆ ದೃಶ್ಯ ಮಾಧ್ಯಮದ ಪರಿಚಯ ಮತ್ತು ಸಾಧ್ಯತೆಗಳ ಕುರಿತು ತನ್ನನುಭವವನ್ನು ಶಿಬಿರಾರ್ಥಿಗಳಲ್ಲಿ ಹಂಚಿಕೊಂಡರು.

ಮೋಹನ್ ಹೆಂಡತಿ – ಸತ್ಯ, ಉದ್ದಕ್ಕೂ ಮೋಹನ್ ಅನುಸಾರಿಯೇ ಆದರೂ ಸ್ವತಂತ್ರೆ. ಅಂದು ಇಂಡಿಯನ್ ಎಕ್ಸ್‌ಪ್ರೆಸ್ಸಿನ ಅಂಶಕಾಲಿಕ ವರದಿಗಾರ್ತಿಯಾಗಿದ್ದರು ಎಂದು ನನ್ನ ನೆನಪು. (ಈಚೆಗೆ ಮಹಿಳಾ ಸಂಘಟನೆಗಳಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದಾರೆ) ಮುಂದಿನ ಒಂದು ತಾಸು, ಸತ್ಯ ಮುದ್ರಣ ಮಾಧ್ಯಮದ ಕುರಿತು ಶಿಬಿರಾರ್ಥಿಗಳ ಕುತೂಹಲ ತಣಿಸಿದರು.ಊಟದ ಬಿಡುವು ಲೆಕ್ಕಕ್ಕೆ ಒಂದರಿಂದ ಎರಡೂವರೆ ಗಂಟೆಯವರೆಗೆ ಎಂದು ನಾವು ಅಂದಾಜಿಸಿದ್ದರೂ ನಮ್ಮೆಲ್ಲ ಕಲಾಪಗಳು ಊಟ, ತಿಂಡಿಗಳೊಡನೆಯೂ ಮುಂದುವರಿಯುತ್ತಿದ್ದದ್ದು ಅರ್ಥಪೂರ್ಣವಾಗಿತ್ತು. ಹಾಗೇ ಅಂದು ಅಪರಾಹ್ನದ ಕಲಾಪಕರ್ತರಾದ ಎನ್.ಟಿ. ಭಟ್ ಮತ್ತು ಎ.ಪಿ. ಗೌರೀಶಂಕರ್ ನನ್ನ ಬೇಡಿಕೆ ಮನ್ನಿಸಿ ನಮ್ಮೊಡನೆ ಊಟಕ್ಕೇ ಸೇರಿಕೊಂಡದ್ದರಿಂದ ಮುಂದಿನ ‘ಅಧ್ಯಾಯಕ್ಕೆ’ ಮನೋಭೂಮಿಕೆ ಸಜ್ಜುಗೊಳಿಸುವ ಅವಶ್ಯಕತೆಯೂ ಬರಲಿಲ್ಲ. ಪ್ರೊ| ಎನ್. ತಿರುಮಲೇಶ್ವರ ಭಟ್ಟರು ಉಡುಪಿಯ ಮಹಾತ್ಮಗಾಂಧಿ ಮೆಮೊರಿಯಲ್ ಕಾಲೇಜಿನ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ (ಅಂಶಕಾಲಿಕ ಜರ್ಮನ್ ಭಾಷಾ ಅಧ್ಯಾಪಕ ಕೂಡಾ). ಜೊತೆಗೆ ಕಾಲೇಜಿನ ಆಶ್ರಯದಲ್ಲೇ ನೂರೊಂದು ಪಠ್ಯೇತರ ಕಲಾಪಗಳ ಕೇಂದ್ರವಾದ ರಾಷ್ಟ್ರಕವಿ ಗೋವಿಂದ ಪೈ ಕೇಂದ್ರದ ಅಂಗ ಸಂಸ್ಥೆಯೇ ಆದ ‘ಪ್ರಾದೇಶಿಕ ರಂಗ ಕಲೆಗಳ ಕೇಂದ್ರ’ದ ನಿರ್ದೇಶಕ. ಕುಶಿ ಹರಿದಾಸ ಭಟ್ಟರ ಗರಡಿಯಲ್ಲಿ ರೂಪುಗೊಂಡ ಯಾವುದೇ ವ್ಯಕ್ತಿ ಯಾವುದೇ ಹುದ್ದೆಯನ್ನು ಕೇವಲ ಅಲಂಕಾರಕ್ಕೆ ವಹಿಸಿಕೊಳ್ಳುವ ಕ್ರಮವೇ ಇಲ್ಲವೆಂಬಂತೆ ಎನ್.ಟಿ ಭಟ್ಟರು ಮಾಡದ ಕೆಲಸಗಳಿಲ್ಲ. ಅವರು ಈ ವಲಯದ ಜನಪದ ಆಚರಣೆಗಳಲ್ಲಿ ದಾಖಲಿಸಿಕೊಂಡಿದ್ದ ಕೆಲವು ಪಾಡ್ದನಗಳ ಟೇಪುಗಳನ್ನೂ ಪ್ಲೇಯರ್ ಜೊತೆಯಲ್ಲಿ ಹೊತ್ತು ತಂದು ಶಿಬಿರಾರ್ಥಿಗಳ ಒಂದು ಗಂಟೆಯನ್ನು ವಿವರಣೆ ಸಹಿತ ರಸಮಯ ಮಾಡಿದರು.

ಕಾನೂನು ಹೇಳುತ್ತದೆ – ನಿಯಮಗಳ ಅಜ್ಞಾನಕ್ಕೆ ಕ್ಷಮೆಯಿಲ್ಲ. ಎ.ಪಿ. ಗೌರೀಶಂಕರ್ ಮಂಗಳೂರಿನಲ್ಲೇ ವೃತ್ತಿನಿರತರಾದ ಹಿರಿಯ ವಕೀಲ, ನನಗೆ ಸಂಬಂಧದಲ್ಲಿ (ಮೂರನೇ) ಸೋದರ ಮಾವ ಮತ್ತು ಮಂಗಳೂರಿನ ನೆರೆಮನೆಯ ನೆಂಟ. ಇವರ ಸಾಹಿತ್ಯ ಮತ್ತು ಸಾಮಾಜಿಕ ಕಾಳಜಿಯ ವಿಸ್ತೃತ ಓದು ಹಾಗೂ ಚಿಂತನೆ ಇವರನ್ನು ಕಕ್ಷಿದಾರ ಮತ್ತು ನ್ಯಾಯಾಲಯ ಕಕ್ಷೆಯಿಂದ ಹೊರಗೂ (ಆರ್ಥಿಕ ಲಾಭವಿಲ್ಲದ) ಹಲವು ಚಟುವಟಿಕೆಗಳಲ್ಲಿ ತೊಡಗಿಸುತ್ತವೆ. (ಭರ್ಜರಿ ರುಸುಮಿನ ಖಟ್ಲೆಯಾಗಬಹುದಾದ ಎಷ್ಟೋ ವ್ಯಾಜ್ಯಗಳನ್ನು ರಾಜೀ ಮಾಡಿ ಇವರು ಖಾಲೀ ಕಿಸೆಯಲ್ಲಿ ಉಳಿದದ್ದು ನಮಗೆಷ್ಟೋ ಸಲ ಪರೋಕ್ಷಮಾರ್ಗಗಳಲ್ಲಿ ತಿಳಿಯುತ್ತಿತ್ತು! ದೊಡ್ಡ ನೋಟು ಕಿತ್ತುಕೊಂಡು ಒಣಡಂಭದಲ್ಲಿ ದಿನನೂಕುವ ಮಂದೆಯಲ್ಲಿ, ಶ್ರದ್ಧೆಯಿಂದ ಕೆಲಸ ಮಾಡಿಯೂ ಕೆಲವೊಮ್ಮೆ ಬಡ ಕಕ್ಷಿದಾರ ಮನೆಯಿಂದ ಹೊತ್ತು ತಂದು ಭಕ್ತಿಯಿಂದ ಕೊಟ್ಟ ತರಕಾರಿಯನ್ನಷ್ಟೇ ಒಪ್ಪಿಸಿಕೊಂಡು ತೃಪ್ತರಾಗುಳಿದದ್ದಿದೆ ಈ ವಕೀಲರು!) ಇವರ ಅಸಂಖ್ಯ ಪತ್ರಿಕಾ ಲೇಖನಗಳು (ಈಚೆಗೆ ಮೂಲಗೇಣಿ ರದ್ಧತಿ ಬಗ್ಗೆ ಎಲ್ಲಂದರಲ್ಲಿ – ಬೆಂಗಳೂರಿನಿಂದ ದಿಲ್ಲಿವರೆಗೆ, ಓಡಾಡಿ ನಡೆಸಿಕೊಡುತ್ತಿರುವ ಭೈಠಕ್ಕುಗಳೂ) ನಿಸ್ವಾರ್ಥ ಸೇವೆಯ ಸಣ್ಣ ಮುಖಗಳು. ಸಾಮಾಜಿಕ ಚಟುವಟಿಕೆಗಳಲ್ಲಿ ನಾವು ತಿಳಿದುಕೊಳ್ಳಲೇ ಬೇಕಾದ ಹಲವು ಕಾನೂನಿನ ಅಂಶಗಳ ಮೇಲೆ ಇವರು ನಮ್ಮ ಶಿಬಿರದಲ್ಲಿ ಚೆಲ್ಲಿದ ಬೆಳಕು ಕೇವಲ ಪ್ರಾಮಾಣಿಕ ಭಾವಾವೇಶದಿಂದ ನುಗ್ಗುವ ಮನಸ್ಸುಗಳಿಗೆ (ಹುಡುಗ ಪ್ರಾಯ ಅಂತದ್ದಲ್ಲವೇ!) ಒಳ್ಳೆಯ ಕಡಿವಾಣ ತೊಡಿಸಿತೆಂದೇ ಹೇಳಬೇಕು.

ಚಾ ವಿರಾಮದ ಬೆನ್ನಿಗೆ ನಮ್ಮೊಡನೆ ಪಟ್ಟಾಂಗಕ್ಕೆ ಕುಳಿತವರು ಮಣಿಪಾಲದಿಂದ ಬಂದ ಔಷಧ ಶಾಸ್ತ್ರದ ಪ್ರೊಫೆಸರ್. ಆದರೆ ಇವರು ಶಿಬಿರಾರ್ಥಿಗಳಿಗೆ ಕೊಟ್ಟ ಜೀವಪುಷ್ಠಿ ರಸಾಯನದಲ್ಲಿ ಜಾಗೃತ ನಾಗರಿಕನ ಹಕ್ಕು ಬಾಧ್ಯತೆಗಳ ಪೂರ್ಣ ಎಚ್ಚರ ಮೂಲಧಾತು. ಜೊತೆಗೆ ಪ್ರತಿಕ್ಷಣವೂ ರುಚಿ ಹೆಚ್ಚಿಸುವ ಪ್ರತ್ಯಕ್ಷ ಸ್ವಂತ ಹೋರಾಟದ ನೂರಾರು ಆಖ್ಯಾಯಿಕೆಗಳು. ಪ್ರಜಾಸತ್ತೆಯಲ್ಲಿ ಪ್ರತಿನಿಧಿಗಳು ಮತ್ತು ನೌಕರಶಾಹೀ ‘ಒಡೆಯರಲ್ಲ, ಸೇವಕರು’ ಎನ್ನುವುದನ್ನು ಅಸಂಖ್ಯ ಪತ್ರಿಕಾ ಬರಹಗಳಲ್ಲಿ (ಈಗ ಕೆಲವು ಪುಸ್ತಕಗಳ ರೂಪದಲ್ಲೂ ಲಭ್ಯ) ಸಾರ್ವಜನಿಕರರಿವಿಗೆ ಮತ್ತೆ ನೌಕರಶಾಹಿಯ ಕಾರ್ಯಶೈಲಿಗೆ ರೂಢಿಸಿದವರು ಇವರು. ಯಾವುದೇ ಧರಣಿ, ಘೆರಾವೋ, ದೊಂಬಿಗಳ ಆರ್ಭಟವಿಲ್ಲದೆ ತಣ್ಣಗೆ ಪತ್ರಗಳನ್ನಷ್ಟೇ ಬರೆದು ಸಾರ್ವಜನಿಕ ಸಮಸ್ಯೆಗಳನ್ನು ಇನ್ನಿಲ್ಲದ ಲೆಕ್ಕದಲ್ಲಿ ಪರಿಹರಿಸಿದ ಆ ವ್ಯಕ್ತಿ ರವೀಂದ್ರನಾಥ ಶ್ಯಾನುಭಾಗ. ನಿರ್ಮಲ, ನಿರರ್ಗಳ ಮಾತುಗಾರಿಕೆಯೂ ಸಿದ್ಧಿಸಿರುವ ಶ್ಯಾನುಭಾಗರ ಒಂದೊಂದು ಆಖ್ಯಾಯಿಕೆಯೂ ರೋಮಾಂಚಕ ಪತ್ತೇದಾರಿ ಕಥನಗಳಂತೆಯೇ ರಂಜಿಸಿದವು. ಇವರ ಕಲಾಪ ನಿಗದಿತ ಅವಧಿಯ ಕಟ್ಟು ಹರಿದುಕೊಂಡು ನಮ್ಮ ರಾತ್ರಿಯ ಊಟದವರೆಗೂ ವಿಸ್ತರಿಸಿದ್ದು ಆಶ್ಚರ್ಯವಲ್ಲ. ಮತ್ತೂ ಯಾಕೆ ಮುಂದುವರಿಯಬಾರದು ಎನ್ನುವುದೇ ಎಲ್ಲರ ಆಶಯವಾಗಿಬಿಟ್ಟಿತ್ತು! (ಬಳಕೆದಾರ ಜಾಗೃತಿಯನ್ನು ಈ ವಲಯದಲ್ಲಿ ಅಸಾಮಾನ್ಯ ಎತ್ತರಕ್ಕೆ ಮುಟ್ಟಿಸಿ, ಪರೋಕ್ಷ ನಿವೃತ್ತಿಯ ನೆಪದಲ್ಲಿ ಶ್ಯಾನುಭಾಗ್ ಮಣಿಪಾಲ ಬಿಟ್ಟು ನೇಪಾಳದ ದೂರಕ್ಕೆ ಹೋಗಿದ್ದರು. ಆದರೆ ಒಳಗಿನ ತುಡಿತಕ್ಕೆ ಸ್ಪಂದಿಸಿ ಈಗ ಊರಿಗೆ ಮರಳಿ, ಎಂಡೋಸಲ್ಫಾನ್ ವಿರುದ್ಧದ ಹೋರಾಟದಲ್ಲಿ ಪೂರ್ಣ ಮಗ್ನರಾಗಿದ್ದಾರೆ ಈ ಔಷಧ ಶಾಸ್ತ್ರಿ. ಹೆಚ್ಚಿನ ವಿವರಗಳಿಗೆ ಇಲ್ಲೇ ಪಕ್ಕಕ್ಕೆ ಕೊಟ್ಟಿರುವ ‘Sundara ವಸುಂಧರ’ ಬ್ಲಾಗ್ ಸೇತು ಬಳಸಿ)

ದಿನದ ಉದ್ದಕ್ಕೂ ಅತಿಥಿಗಳೆಲ್ಲಾ ಬಂದಷ್ಟೇ ಸಹಜವಾಗಿ, ಸರಳವಾಗಿ ಆದರೆ ನಮ್ಮ ಅಕ್ಷಯ ಸಂತೋಷದಲ್ಲಿ ಒಂದಷ್ಟನ್ನು ಮೊಗೆದುಕೊಂಡೇ ಮರಳಿದರು. ತೆರೆ, ಅಂಕಗಳ ಪ್ರತ್ಯೇಕತೆಯನ್ನು ನಿರಾಕರಿಸುವ, ಬೆಳಕಿನ ಏರುಪೇರುಗಳಲ್ಲಷ್ಟೇ ಮುಂದುವರಿಯುವ ಆಧುನಿಕ ರಂಗಪ್ರಯೋಗಗಳಂತೆ ಲಾಂದ್ರದ ತಂಪು ಬೆಳಕಿನಲ್ಲಿ ಕಾಡ್ಮನೆಯ ಎದುರಿನ ಕೋಣೆ ಹತ್ತೂವರೆ ಗಂಟೆಯ ಸುಮಾರಿಗೆ ಕೊನೆಯ ದೀರ್ಘ ದೆಖಾವೆಗೆ ಸಜ್ಜಾಯಿತು; ಶಯನೋತ್ಸವ. ಶಿಬಿರದ ಪಾಲ್ಗಾರಿಕೆಯನ್ನು ಹಗಲೆಲ್ಲಾ ಪಡೆದ ಮಳೆರಾಯರೂ ಅದೇ ಉತ್ಸಾಹದಲ್ಲಿ ನಮ್ಮೊಡನೆ ರಾತ್ರಿಯೂ ಮುಂದುವರಿದರು!

ಸೋಮವಾರ ಬೆಳಿಗ್ಗೆ ಮಳೆ ಸ್ವಲ್ಪ ವಿರಾಮ ಕೊಟ್ಟಂತಿತ್ತು. ಆದರೆ ಬಾವಿ ನೀರು ತರಲು ಹೊರಟವರಿಗೆ ಅಶ್ಚರ್ಯ ಕಾದಿತ್ತು – ಬಾವಿ ಮುಳುಗಿತ್ತು! ಮಳೆನೀರ ಧಾರಾಳದಲ್ಲಿ ಹಿಂದಿನ ದಿನವೇ ಬಾವಿಗೆ ಹೋದವರು “ಹಗ್ಗ ಬೇಡಾ ಸಾರ್! ನಲವತ್ತಡಿ ಆಳವೂ ನೀರು ತುಂಬಿದೆ” ಎಂದಿದ್ದರು. ಮೊದಲೇ ಹೇಳಿದಂತೆ ‘ಮೃಗಜಲ’ – ಅಭಯಾರಣ್ಯದ ಬಾವಿ, ಹಾಳುಬಿದ್ದ ಕಲ್ಪಣೆಯೊಳಗಿತ್ತು. ಬೆಳಿಗ್ಗೆ ಬಾವಿಯೇನು ಕಲ್ಪಣೆಯೂ ತುಂಬಿ, ಕಟ್ಟೆಯಂಚಿಗೆ ಹೋಗಬೇಕಾದರೂ ಮೂರಡಿ ನೀರಿನಲ್ಲಿ ನಡೆಯಬೇಕಾಗುತ್ತಿತ್ತು. ಇಷ್ಟಾದರೂ ಚಾಲನ ಚಾ (ಹಾಸಿಗೆ ಚಾ ಅಲ್ಲ) ಸಮಯಕ್ಕೆ ಸರಿಯಾಗಿ ದೂರದ ಮೂಡಬಿದ್ರೆಯಿಂದ ಗೆಳೆಯ, ವೈದ್ಯ (ಎಲ್ಲೆಲ್ಲೂ ನೀರೇ ಇದ್ದಾಗ ಒಂದಾಲದ ಎಲೆಯ ಮೇಲೊಂದು ಶಿಶು ತೇಲಿಬಂದಂತೆ) ಕೃಷ್ಣಮೋಹನ್ (ನಮ್ಮ ಪ್ರಿಯ ಭಾಷೆಯಲ್ಲಿ ‘ಕೃಶಿ’) ಮುಂದಿನ ತನ್ನ ಕಾರ್ಯಕ್ಕೆ ಸಜ್ಜಾಗಿ ಹಾಜರಾಗಿದ್ದರು. ಶಸ್ತ್ರ ವೈದ್ಯ, ವೈದ್ಯಪತ್ನಿ ಸಹಿತ ಸ್ವಂತ ಆಸ್ಪತ್ರೆ ನಿರ್ವಾಹಕ ಎನ್ನುವುದು ಇವರ ವೃತ್ತಿಮುಖ. ಹವ್ಯಾಸಿ ಮುಖದಲ್ಲಿ, ನಾನು ವಾರ ಕಾಲ ನಾಗರಹೊಳೆಯಲ್ಲಿ ‘ಹುಲಿ ಗಣತಿ’ಯಲ್ಲಿ ಭಾಗಿಯಾಗಿ ಪ್ರಥಮ ಬಾರಿಗೆ ವನ್ಯ ಚಟುವಟಿಕೆಗೆ ಅಧಿಕೃತ ಪ್ರವೇಶಪಡೆದಾಗ, ಅಂತಾರಾಷ್ಟ್ರೀಯ ಹುಲಿ ಬಿಕ್ಕಟ್ಟಿನ ವೇಳೆ ನಮ್ಮ ಜಿಲ್ಲೆಯ ನಾಗರಿಕ ವಲಯಗಳಲ್ಲಿ ಪ್ರಚಾರಸತ್ರ ನಡೆಸಿದಾಗ, ಕೊನೆಗೆ ಬಿಸಿಲೆ ಘಾಟಿಯಲ್ಲಿ ಸಂರಕ್ಷಣೆಗಾಗಿ ವನ ಖರೀದಿಸಿದಾಗ ನನಗೆ ಸಿಕ್ಕ ಏಕೈಕ ಪಾಲುದಾರ ಇದೇ ಕೃಶಿ. ಇವರ ಬಹುಮುಖೀ ಆಸಕ್ತಿಗಳ ಬಗ್ಗೆ ನಾನು ಹೀಗೇ ವಾಕ್ಯ ಹೊಸೆಯುವುದಕ್ಕಿಂತ ನೀವೇ ಅನುಭವಿಸಿ www.drkrishi.com

ಶಿಬಿರದ ಎರಡನೇ ದಿನದ ಮೊದಲ ಕಲಾಪ ಕೃಶಿ ನೇತೃತ್ವದಲ್ಲಿ ಪಕ್ಷಿವೀಕ್ಷಣೆ. ನಿಮಗೆಲ್ಲ ತಿಳಿದಿರುವಂತೆ ಎಡೆಂಬಳೆ ಕೃಷಿಕ್ಷೇತ್ರದ ಸುಮಾರು ಐವತ್ತು ಎಕ್ರೆ ಹರಹಿನ ಒಂದು ಮೂಲೆಯ ಕೇವಲ ಒಂದು ಎಕ್ರೆ ಮಾತ್ರ ಅಭಯಾರಣ್ಯ. ಆದರೆ ನಮ್ಮೆಲ್ಲಾ ಕಲಾಪಗಳಿಗೆ ಯಾವತ್ತೂ ಮುಕ್ತವಾಗಿ ಎಡೆಂಬಳೆಯೂ ಒದಗುತ್ತಿತ್ತು. ಅಲ್ಲಿ ತೋಟ ಸಣ್ಣದು. ಗುಡ್ಡೆ, ರಬ್ಬರ್ ತೋಟ, ಬಿದಿರ ಬನ, ಗೇರುತೋಟ ಮತ್ತು ಕುರುಚಲು ಕಾಡು ಮುಖ್ಯವಾದದ್ದು. ಕೃಶಿ ಮೊದಲಲ್ಲಿ ಎಲ್ಲರನ್ನೂ ಕಾಡ್ಮನೆಯ ಅಂಗಳದಲ್ಲೇ ನಿಲ್ಲಿಸಿ, ಸಣ್ಣದಾಗಿ ‘ಮಾಡು, ಮಾಡದಿರು’ ಪಾಠ ಮಾಡಿದರು. ಅನಂತರ ಒಂದೂವರೆ ಗಂಟೆ ಎಡೆಂಬಳೆಯ ತೋಟ, ಗುಡ್ಡೆ ಸುತ್ತಿಸಿ ಕೆಲವು ಪಕ್ಷಿಗಳನ್ನು ತೋರಿಸಿ, (ಮೋಡ ಮತ್ತು ಮಳೆಯ ವಾತಾವರಣವಿದ್ದುದರಿಂದ) ಕೆಲವನ್ನೇ ಕೇಳಿಸಿ, ಹಲವನ್ನು ಮಾತಿನಲ್ಲೇ ಪರಿಚಯಿಸಿ, ಕೊನೆಯದಾಗಿ ಕೊನೆಯಿಲ್ಲದ ಸಂಶಯಗಳಿಗೆ ಸಮರ್ಪಕ ಉತ್ತರಗಳನ್ನು ಕೊಟ್ಟರು.

ಪೈಪ್‌ನ ಹಳೆಯ ಬೂದಿ (ಮಾಯೆ?) ಕೊಡಹಿ, ಹೊಸ ತಂಬಾಕು (ಮಾನವೀಯ ಮೌಲ್ಯ?) ತುಂಬಿ, ನಸುಹೊಗೆಯಲ್ಲೂ ಸಮಚಿತ್ತದಿಂದ ಮಿಲಿಟರಿ ನ್ಯಾಯ ತೀರ್ಮಾನಿಸಿದ (ನಾಟಕ ‘ಕೋರ್ಟ್ ಮಾರ್ಶಲ್,’ ನಿ: ಸದಾನಂದ ಸುವರ್ಣ) ಕರ್ನಲ್ – ಚಂದ್ರಹಾಸ ಉಳ್ಳಾಲ. (ಇಂದು ಇವರು ಮೂಲವೃತ್ತಿರಂಗವನ್ನು ಬಿಡದೇ ಅಸಂಖ್ಯ ನಾಟಕಗಳು ಸಾಲದೆಂಬಂತೆ ಟೀವಿವಾಹಿನಿಗಳಲ್ಲೂ ಸಿನಿಮಾಗಳಲ್ಲೂ ವ್ಯಾಪಿಸಿಕೊಂಡಿದ್ದಾರೆ. ಗಿರೀಶ್ ಕಾಸರವಳ್ಳಿಯವರ ‘ಹಸೀನಾ’ದಲ್ಲಿ ಇವರೇ ಕಥಾನಾಯಕ. ಸದ್ಯ ಬಿಡುಗಡೆಯಾಗಲಿರುವ ಅಭಯನ ‘ಶಿಕಾರಿ’ಯಲ್ಲೂ ಇವರು ಕಾಣಿಸಿಕೊಳ್ಳಲಿದ್ದಾರೆ) ನಮ್ಮ ಶಿಬಿರದ ಎರಡನೇ ದಿನದ ಉಪಾಹಾರದನಂತರದ ಮೊದಲ ಅವಧಿಯಲ್ಲಿ ಇವರ ನಟನೆಯ ಪಾಠ ಸುರುವಾದದ್ದೂ ಅದೇ ಕರ್ನಲ್ ಗತ್ತಿನಲ್ಲಿ. ವೃತ್ತಿಯಲ್ಲಿ ಬಿಎಸೆನ್ನೆಲ್ ಅಧಿಕಾರಿಯಾದರೂ ಬಾಲ್ಯದ ಆರ್ಥಿಕ ಸಂಕಷ್ಟಗಳ ನಡುವೆಯೂ ಅರಳಿದ ಇವರ ಅಭಿನಯ ಕಲೆ ನಾಟಕ ಸಿನಿಮಾಗಳಿಗೆ ವ್ಯಾಪಿಸಿದ್ದರೂ ಸ್ಟಾರ‍್ಡಂ ಗೊಂದಲವಿಲ್ಲದೆ ನಮ್ಮ ಶಿಬಿರಾರ್ಥಿಗಳ ಮನದುಂಬಿತು.

‘ಕಾವ್ಯ ಎಂದರೇನು’ ಸಂಭಾಷಣೆ ಸುರು ಮಾಡಿದವರು ಕಾಡ್ಮನೆಯ ನೆಲದಲ್ಲಿ ಚಕ್ಕಳಬಕ್ಕಳ ಹಾಕಿ ಕುಳಿತ ಪ್ರೊ| ಬಿ.ಎ ವಿವೇಕ ರೈ. ಪುಸ್ತಕ ವ್ಯಾಪಾರಿಯಾಗಿ ನಾನು ಮಂಗಳೂರಿನಲ್ಲಿ ತೊಡಗಿದಂದೇ ಪೂರ್ವಪರಿಚಯವಿಲ್ಲದ ನನ್ನನ್ನು ವೈಯಕ್ತಿಕ ಗೆಳೆಯನಂತೆ ಆದರಿಸಿದ್ದರು (ಮನೆಗೆ ಕರೆದು ಸ್ನೇಹಭೋಜನವೂ ಕೊಟ್ಟಿದ್ದರು!). ನಮ್ಮ ಶಿಬಿರಕಾಲದಲ್ಲಿ ವಿವೇಕರೈ ಮಂಗಳೂರು ವಿವಿನಿಲಯದ ಕನ್ನಡ ವಿಭಾಗ ಮುಖ್ಯಸ್ಥರಾಗಿದ್ದರೂ, ಅಸಂಖ್ಯ ಲೇಖನ, ಪುಸ್ತಕ, ವಿದ್ವದ್ಗೋಷ್ಠಿಗಳನ್ನು ರಾಷ್ಟ್ರ-ಅಂತಾರಾಷ್ಟ್ರ ಮಟ್ಟಗಳಲ್ಲೂ ನಡೆಸಿದವರಾಗಿದ್ದರೂ (ಅನಂತರದ ದಿನಗಳಲ್ಲಿ ಎರಡೆರಡು ವಿವಿನಿಲಯಗಳ ಕುಲಪತಿಗಳಾಗಿ, ಸದ್ಯ ಜರ್ಮನಿಯಲ್ಲಿ ‘ಕನ್ನಡಕ್ಕೆ ಯಾರೆಂದು ಕೇಳಿದ್ದೀರಿ’ ಎಂದು ಸಂದರ್ಶಕ ಪ್ರಾಧ್ಯಾಪಕರಾಗಿರುವ) ತೀರಾ ಪ್ರಾಥಮಿಕ ಮಟ್ಟದ ಕಲಾಪವನ್ನು ಚೂರೂ ಉಪೇಕ್ಷಿಸದೆ ಆದರೆ ಒಂಟಿ ಎತ್ತಿನ ಗಾಡಿಯನ್ನು ಸಲಗ ಎಳೆದಷ್ಟು ಹಗುರಕ್ಕೆ ಆದರೆ ಶಕ್ತವಾಗಿ ನಿರ್ವಹಿಸಿದರು.

“ಸಂಶೋಧನಾ ಪದವಿಯನ್ನೂ ಗಳಿಸಿರುವ ನೀವು ಹೆಸರಿನ ಮುಂದೆ ‘ಡಾ| . . .’ ಬಳಸುವುದಿಲ್ಲ, ಯಾಕೆ?” ನಾನು ಹೀಗೊಮ್ಮೆ ಅಧಿಕಪ್ರಸಂಗದ ಪ್ರಶ್ನೆ ಕೇಳಿದ್ದೆ. ಪ್ರೊ| ಸಿ.ಎನ್. ರಾಮಚಂದ್ರನ್ ನಸು ನಕ್ಕರು. ಸಾಂಸ್ಥಿಕ ಆಡಳಿತದ ಉನ್ನತ ಸೋಪಾನಗಳನ್ನೇರಿಸುವಲ್ಲಷ್ಟೇ ಒದಗುವ ಬಿರುದುಗಳಿಗಿಂತ ಅಂತಃಸ್ಥವನ್ನು ಪ್ರತಿನಿಧಿಸುವ ಪ್ರೊಫೆಸರ್‌ಗಿರಿಯನ್ನೇ ಇಷ್ಟಪಟ್ಟದ್ದನ್ನು ಹೇಳಿಕೊಂಡಿದ್ದರು. ಇವರು ವೃತ್ತಿಯಲ್ಲಿ ಇಂಗ್ಲಿಷ್‌ಗೆ (ಅಂದು ಮಂವಿವಿನಿಲಯದ ಇಂಗ್ಲಿಷ್ ವಿಭಾಗ ಮುಖ್ಯಸ್ಥ. ಇಂದು ವೃತ್ತಿಪರ ಅಧ್ಯಾಪನದಿಂದ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರೂ ಯಾವುದೇ ಸಾಹಿತ್ಯಿಕ ಕಾರ್ಯಕ್ರಮಕ್ಕೆ ಘನತೆ ಬರುವುದಿದ್ದರೆ ಸೀಎನ್ನಾರ್ ಇರಲೇಬೇಕು ಎನ್ನುವಷ್ಟು ಕ್ರಿಯಾಶೀಲರಾಗಿಯೇ ಮುಂದುವರಿದಿದ್ದಾರೆ.) ತೆತ್ತುಕೊಂಡರೂ ‘ಕನ್ನಡ ಭವನ’ದ ಬಲು ದೊಡ್ಡ ನಿರ್ವಾಹಕ. ಹುಟ್ಟಿನ ಆಕಸ್ಮಿಕದಲ್ಲಿ ಇವರು ಕನ್ನಡಿಗರಾದರೂ (ಮೈಸೂರು ಸಮೀಪದ ಚಿಲ್ಕುಂದದವರು. ಮನೆಮಾತು ಅ-ಕನ್ನಡ; ಸಂಕೇತಿ) ವೃತ್ತಿ ಜೀವನದ ಆರಂಭದ ದಿನಗಳನ್ನು ಮರಾಠೀ ವಲಯದಲ್ಲಿ ಕಳೆದರು. ಆದರೆ ಅಂತರಂಗದ ಒಲವು ಇವರನ್ನು ಎಳೆದಿತ್ತು ಕನ್ನಡ ಕೈಂಕರ್ಯಕ್ಕೆ. ಕತೆ, ಕಾದಂಬರಿ ಬರೆದವರೇ ಆದರೂ ಗಟ್ಟಿಯಾಗಿ ನೆಲೆಸಿದ್ದು ವಿಮರ್ಶೆ, ವೈಚಾರಿಕತೆಗಳ ಆವರಣದೊಳಗೆ. ಸಿಎನ್ನಾರ್ ನಿವೃತ್ತಿಪೂರ್ವ ಸೇವಾ ಅವಧಿ ಮಂಗಳೂರು ವಿವಿನಿಲಯದಲ್ಲೇ ನಡೆದದ್ದು ಕನ್ನಡಕ್ಕೂ ಈ ವಲಯದ ಸಾಹಿತ್ಯಿಕ ಚಟುವಟಿಕೆಗಳಿಗೂ ಬಲು ದೊಡ್ಡ ಲಾಭ. ಅದಕ್ಕೊಂದು ನಿದರ್ಶನವೆಂಬಂತೆ ಗೆಳೆಯ ವಿವೇಕ ರೈ ಅವರೊಡನೆ ಬಂದು, ಮುಂದುವರಿದ ಅವಧಿಯಲ್ಲಿ ರೈ ಅವರು ನಿಲ್ಲಿಸಿದಲ್ಲಿಂದ, ಸಾಹಿತ್ಯ ಎಂದರೇನು ಎಂಬ ವಿಷಯದ ಚುಂಗು ಹಿಡಿಸಿ ಶಿಬಿರಾರ್ಥಿಗಳನ್ನು ಚಂದಕ್ಕೆ ನಡೆಸಿದರು ಸೀಎನ್ನಾರ್.

ಸಾಹಿತ್ಯದ ರಾಗಾಭಿವ್ಯಕ್ತಿ – ಸಂಗೀತವನ್ನು ಪರಿಚಯಿಸಿ ಕೊಟ್ಟವರು ನಿತ್ಯಾನಂದರಾವ್. ವೃತ್ತಿ ಜೀವನ ನಿರ್ವಹಣೆಗೆ, ಪ್ರವೃತ್ತಿ ವ್ಯಕ್ತಿತ್ವ ನಿರ್ಮಾಣಕ್ಕೆ ಎನ್ನುವ ಮಾತಿಗೆ ಈ ತೂತು ಬಾವಿ ಅರ್ಥಾತ್ ಬೋರ್‌ವೆಲ್ ಕಂತ್ರಾಟುದಾರ ನಿತ್ಯಾನಂದ ರಾವ್ ತುಂಬಾ ಒಳ್ಳೆಯ ಉದಾಹರಣೆ. ಮಂಗಳೂರಿನಲ್ಲಿ ಕರ್ಣಾಟಕ ಸಂಗೀತಕ್ಕಾಗಿಯೇ ಇವರು ಕಟ್ಟಿ ಬೆಳೆಸಿದ ಸಂಗೀತ ಪರಿಷತ್ (ಮುಂದುವರಿದ ದಿನಗಳಲ್ಲಿ ‘ಮಣಿಕೃಷ್ಣ ಅಕಾಡೆಮಿ’) ಮತ್ತದರ ಕಾರ್ಯಕ್ರಮ ವೈವಿಧ್ಯದ ರುಚಿ ಮತ್ತು ಶುಚಿ ನಾನಿವರನ್ನು ಶಿಬಿರಕ್ಕೂ ಬಯಸುವಂತೆ ಮಾಡಿತ್ತು (ಸ್ವತಃ ಇವರು ಸಂಗೀತಗಾರರಲ್ಲ). ಆಗಿನ್ನೂ ಸಂಗೀತ ಕಲಿಕೆಯ ಮೊದಲ ಹಂತಗಳಲ್ಲಷ್ಟೇ ಇದ್ದ ಅವರ ಮಗಳಂದಿರಿಬ್ಬರ (ದೊಡ್ಡವಳು – ಪ್ರಾರ್ಥನ, ಇಂದು ದೊಡ್ಡ ಕಲಾವಿದೆ, ವಿದ್ವಾಂಸೆ. ಮತ್ತಿನವಳು ಕೀರ್ತನ ಪ್ರಾಯದಲ್ಲಷ್ಟೇ ಕಿರಿಯಳು, ಹಾಡಿಕೆಯಲ್ಲಲ್ಲ) ಹಾಡಿಕೆಯ ಪ್ರಾತ್ಯಕ್ಷಿಕೆಯ ಬಲದಲ್ಲಿ ಕರ್ನಾಟಕ ಸಂಗೀತ ಪರಿಚಯದ ಒಂದು ಅವಧಿಯನ್ನು ರಸಮಯಗೊಳಿಸಿದರು.

ಮಳೆ ಪೂರ್ತಿ ಬಿಟ್ಟಿತ್ತು. ಇಳೆಯ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಎಲ್ಲರನ್ನು ಮತ್ತೆ ಹೊರಾಂಗಣಕ್ಕೆ ಇಳಿಸಿದವರು ಪಾಣಾಜೆಯ ಪಂಡಿತ ವೆಂಕಟ್ರಾಮ್ ದೈತೋಟ. ಶೈಕ್ಷಣಿಕ ಅಧ್ಯಯನ ನೋಡಿದರೆ ಇಂಜಿನಿಯರ್, ವೃತ್ತಿ ನೋಡಿದರೆ ಕೃಷಿಕ, ಪ್ರವೃತ್ತಿಯಲ್ಲಿ ವಂಶಪಾರಂಪರ್ಯದಲ್ಲಿ ಸ್ವಲ್ಪ ಬಂದ ಆಯುರ್ವೇದವನ್ನು ಬಗಲಲ್ಲಿಟ್ಟುಕೊಂಡು ಸ್ವಂತ ಆಸಕ್ತಿ, ಅಧ್ಯಯನ ಮತ್ತು ಅಸಾಧಾರಣ ಕ್ಷೇತ್ರಪರ್ಯಟ ಮುಪ್ಪುರಿಗೊಳಿಸುತ್ತ ಸಸ್ಯ ಜಗತ್ತಿನ ಆದ್ಯಂತ ಅಳೆಯುವ ಸಾಹಸಿ. ಇವರ ಕೃಷಿ, ಬರವಣಿಗೆಗಳ ಬಿಡುವನ್ನು ಪೂರ್ಣ ಆಪೋಷನ ತೆಗೆಯುವ ಇವರ ಬಲು ಜನಪ್ರಿಯ ಮತ್ತು ಪರಿಣಾಮಕಾರೀ ಆಯುರ್ವೇದೀಯ ಚಿಕಿತ್ಸಾ ಸೇವೆ ಇಂದಿಗೂ ಪೂರ್ಣ ಉಚಿತ! ವೆಂಕಟ್ರಾಮರ ಪ್ರಾತ್ಯಕ್ಷಿಕೆಗೆ ಪೂರ್ಣ ಎಡೆಂಬಳೆಯ ಗುಡ್ಡೆ ತೋಟಗಳ ವ್ಯಾಪ್ತಿ ತೆರೆದಿತ್ತು. ಮತ್ತಾ ಕಲಾಪಕ್ಕೆ ನಿಗದಿತ ಅವಧಿಯ ಮೇಲೆ ಮತ್ತಷ್ಟೇ ಸಮಯ ವಿಸ್ತರಿದ್ದೂ ಆಯ್ತು. ಆದರೇನು ಮಾಡೋಣ – ವೆಂಕಟ್ರಾಮರು ಮುಟ್ಟಿದ್ದೆಲ್ಲಾ ಮೂಲಿಕೆಗಳೇ! ನಮ್ಮ ಓಡಾಟ ನೂರಿನ್ನೂರು ಅಡಿ ಮೀರಲಾಗದಷ್ಟು ಸಸ್ಯ ವೈವಿಧ್ಯ ಅದನ್ನೂ ಮೀರಿದ ವಿಷಯ ಸಮೃದ್ಧಿ ವೆಂಕಟ್ರಾಮರಲ್ಲಿತ್ತು. ಶಿಬಿರಾರ್ಥಿಗಳ ಉತ್ಸಾಹಕ್ಕೆ ಕಟ್ಟೆ ಕಟ್ಟಲು ಊಟದ ನೆಪ ಒಡ್ಡಬೇಕಾಯ್ತು.

ಕಣ್ಣಿನ ಮಿಟುಕಿನಲ್ಲೇ ಹೃದಯಗೆಲ್ಲುವ, ಎಂದೂ ವಿಸ್ತರಿಸದ ಆದರೆ ಮಾಸದ ಮುಗುಳು ನಗೆಯ, ಸೌಮ್ಯ ವ್ಯಕ್ತಿ ಪ್ರೊ| ಪಿ.ಎಸ್. ರೈ. ಕೃಷಿ ವಿವಿನಿಲಯದ ಕೀಟ ಶಾಸ್ತ್ರಜ್ಞನಾಗಿ ನಿವೃತ್ತರಾದರೂ ಉದ್ದಕ್ಕೂ ಇವರ ಬರವಣಿಗೆ, ಮಾತುಗಳಲ್ಲಿ ಮುಖ್ಯವಾಗಿ ವಿಜ್ಞಾನವನ್ನು ಕನ್ನಡಿಗರಿಗೆ ಕೊಡಬೇಕು ಎನ್ನುವ ಪ್ರೀತಿ ಮತ್ತೆ (ಕಥೆಗಳು, ವ್ಯಕ್ತಿ ಚಿತ್ರಗಳು) ತನ್ನನುಭವ ಇತರರಿಗೆ ಪ್ರೇರಕವಾಗುವುದಿದ್ದರೆ ಯಾಕೆ ಬೇಡವೆನ್ನುವ ಕಾಳಜಿ ಮೂಲವಾಗಿಯೇ ಒಸರುತ್ತಿತ್ತು. ಅದರ ವಿಸ್ತರಣೆಯಾಗಿಯೇ ಆ ಮಳೆಯ ದಿನದಲ್ಲೂ ಆ ಹಿರಿಯ ಜೀವ ಯಾವುದೋ ಬಸ್ಸು ಹಿಡಿದು ನಮ್ಮ ಶಿಬಿರಕ್ಕೆ ಬಂದಿದ್ದರು. ಅವರು ಕೊಟ್ಟ ಅಸಂಖ್ಯ ಕೀಟ ಪರಿಚಯ ಇನ್ನೂ ನಾವು ಪೂರ್ಣ ತಿಳಿಯದೇ (ಕೀಟಗಳು ಕಳೆದೊಗೆಯಬೇಕಾದ ಉಪದ್ರಗಳು ಎಂಬ ಕಲ್ಪನೆಯೇ ತಪ್ಪು) ಹಾಗಾಗಿ ಗೌರವಿಸದೇ ಮಾಡುತ್ತಿದ್ದ ಪರಿಸರ ಅವಹೇಳನ. ಜೀವವೈವಿಧ್ಯದ ಎತ್ತರದ ಸ್ತರಗಳಲ್ಲಿ ಎದ್ದು ಕಾಣುವ ಕೆಲವೇ ಹುಲಿ, ಆನೆ, ಚಿರತೆ, ಕಾಟಿ, ಕಡವೆಗಳಿಗಿಂತ ಸಾವಿರಾರು ಪಾಲು ವೈವಿಧ್ಯದಲ್ಲೂ ಸಂಕೀರ್ಣತೆಯಲ್ಲೂ ವಿಪುಲವಾಗಿರುವ ಕೀಟಪ್ರಪಂಚವನ್ನು ತಿಳಿದು ನಡೆಯುವುದು ನಿಜ ಪರಿಸರ ಪ್ರೀತಿ ಎನ್ನುವ ಅರಿವನ್ನು ರೈಗಳು ಉಂಟು ಮಾಡಿದರು. ಇಂದು ನಮ್ಮದಲ್ಲದ ಗೇರುಬೀಜಕ್ಕಾಗಿ (ಅದಕ್ಕೂ ಮೀರಿದ ಅಜ್ಞಾನದಲ್ಲಿ ಅಸಂಖ್ಯ ತರಕಾರಿಗಳಿಗೂ) ನಾವು ಸುರಿದ ಎಂಡೋಸಲ್ಫಾನ್ ಮುಂತಾದ ವಿಷರಸಾಯನಗಳ ಪರಿಣಾಮದಲ್ಲಿ ನೇರ ಮನುಷ್ಯ ದುರಂತಗಳು ಬಿಡಿ, ಬಹುತೇಕ ಅಳಿಸಿಯೇ ಹೋದ ಜೇನು ನೊಣವೂ ಸೇರಿದಂತೆ ನೂರೆಂಟು ಮಿತ್ರ ಕೀಟಗಳ ಲೆಕ್ಕ ಹಿಡಿದವರೇ ಇಲ್ಲ. ಹಿಡಿಯಬಹುದಾಗಿದ್ದ ಪಿಎಸ್ ರೈಗಳೂ ಇಂದು ನಮ್ಮೊಡನಿಲ್ಲ.

ಸಾಮಾನ್ಯರಲ್ಲಿ ಕೆಲವೊಮ್ಮೆ ಕಮ್ಮಿನಿಷ್ಠ (ಕಮ್ಯುನಿಸ್ಟ್), ದೈವದ್ರೋಹಿ, ಜಗಳಗಂಟ ಇತ್ಯಾದಿ ಬಿರುದಾಂಕಿತರಾಗುವ ಪ್ರೊ| ನರೇಂದ್ರನಾಯಕ್ ನಿಜದಲ್ಲಿ ಮಾಡಿದ, ಮಾಡುತ್ತಿರುವ ಜನಜಾಗೃತಿ ಅಸಾಮಾನ್ಯ. ಶೈಕ್ಷಣಿಕ ಯೋಗ್ಯತೆಯಲ್ಲಿ ಸಿಕ್ಕ ಜೀವರಸಾಯನ ಶಾಸ್ತ್ರದ ಪ್ರೊಫೆಸರ‍್ಗಿರಿ ಮತ್ತು ಸ್ವಂತದ ಲ್ಯಾಬೊರೇಟರಿ ಸಮರ್ಥವಾಗಿ ಸುಧಾರಿಸಿಕೊಳ್ಳುವುದರೊಡನೆ ಬಳಕೆದಾರರ ಜಾಗೃತಿಯನ್ನು ಮಂಗಳೂರಿನಲ್ಲಿ ಬಹುಶಕ್ತವಾಗಿ ಕಟ್ಟಿ ನಡೆಸಿದ ಮುಂದಾಳು ಇವರು. ಅಲ್ಲಿ ಎದುರಾಗುವ ಜನರ ಮಾನಸಿಕ ತಡೆಗಳಿಂದ ಪ್ರೇರಿತರಾಗಿಯೋ ಏನೋ ವೈಜ್ಞಾನಿಕ ಮನೋಧರ್ಮದ ಪ್ರಚಾರವನ್ನಿವರು ಜನರ ನಡುವೆ ಚಳವಳಿಯ ಮಟ್ಟದಲ್ಲಿ ಬೆಳೆಸಿದರು. ಸಾರ್ವಜನಿಕ ಪ್ರದರ್ಶನ ಚಟಗಳಾಗಿಯೂ (ಮುಗ್ಧರೂ ಇದ್ದಾರೆ) ಬೆಳೆದ ಭಕ್ತಿ, ಭಾವುಕತೆಗಳ ಅಮಲಿನಲ್ಲಿ ಕಳೆದುಹೋದವರನ್ನು ಸೌಮ್ಯ ಹಾಗಾಗಿ ಉದ್ದದ ದಾರಿಗಳಲ್ಲಿ ವಾಸ್ತವಕ್ಕೆ ತರುವುದು ನರೇಂದ್ರ ನಾಯಕರಿಗೆ ಹಿಡಿಸುವುದಿಲ್ಲ. ಇವರ ಪ್ರದರ್ಶನ-ಪ್ರವಚನಗಳಲ್ಲಿ ಅಂಥ ನಂಬಿಕೆಗಳ ಟೊಳ್ಳನ್ನು ಆಘಾತಕರವಾಗಿ ಬಯಲಿಗೆಳೆಯುತ್ತಾರೆ. ಪವಾಡಗಳ ಖಂಡನೆ, ದೇವ ಮತ್ತು ದೇವಮಾನವರ ವಿರುದ್ಧ ನಾಯಕರ ಪ್ರಚಾರ ಗಟ್ಟಿಧ್ವನಿಯಲ್ಲಿರುತ್ತದೆ. ಅದಕ್ಕೂ ಮಿಗಿಲಾಗಿ ಅವರ ಪ್ರಾತ್ಯಕ್ಷಿಕೆಗಳು ಎಷ್ಟೂ ಅಲೌಕಿಕ ಸಂಗತಿಗಳನ್ನು ಸಂಶ್ಲೇಷಿಸಿ, ಪಕ್ಕಾ ಲೌಕಿಕ ಕಾರ್ಯಕಾರಣವನ್ನು ತೆರೆದಿಟ್ಟು ಮುಕ್ತ ಮನಸ್ಸಿನ ಯಾರೂ “ಪವಾಡ ಸುಳ್ಳು, ಇರುವುದೆಲ್ಲ ಕಣ್ಕಟ್ಟು” ಎಂದು ಘೋಷಿಸುವಂತೆ ಪ್ರಭಾವಿಸುತ್ತದೆ. ನಮ್ಮ ಶಿಬಿರದಲ್ಲೂ ನರೇಂದ್ರ ನಾಯಕ್ ಕೊಟ್ಟ ಪ್ರದರ್ಶನ, ಮಾತು ತೀವ್ರ ಸಂಚಲನವನ್ನೇ ಉಂಟು ಮಾಡಿತು. ಮುಪ್ಪಟ್ಟು ಶ್ರೀ ರವಿಶಂಕರರ ವಿಶ್ವಾಸಾರ್ಹತೆ ಬಗ್ಗೆ ಮುಗ್ಧಭಕ್ತೆಯೊಬ್ಬಳು ಪ್ರಶ್ನೆ ಹಾಕಿದ್ದು ತೀರಾ ಅನಿರೀಕ್ಷಿತವಿತ್ತು. ನಾಯಕರು ಕ್ಷಣಾರ್ಧವೂ ತಡವರಿಸದೆ “he is a big HOAX” ಎಂದಾಗ ಆಕೆ ಕಣ್ಣೀರ ಧಾರೆಯನ್ನೇ ಹರಿಸಿಬಿಟ್ಟಳು. (ಆಕೆಯನ್ನು ಸಮಾಧಾನಿಸುವವರು ಬೇರೇ ಇದ್ದರು ಬಿಡಿ.) ಆದರೆ ಅದರ ಕುರಿತೇ ಇತರರು ಬೆಳೆಸಿದ ಚರ್ಚೆಯಲ್ಲಿ ಅನೇಕ ಹುಸಿ ಮೌಲ್ಯಗಳು ಪುನರ್ಮನನಗೊಂಡದ್ದು ನಿಜ, ವೈಜ್ಞಾನಿಕ ಮನೋಧರ್ಮಕ್ಕೆ ಬಲ ಬಂದದ್ದು ನಿಜ.

(ಮುಂದುವರಿಯಲಿದೆ)

[ಅಧಿಕಾರದ ಗದ್ದುಗೆಗಾಗಿ ಜನರನ್ನು ಒಲಿಸಿಕೊಳ್ಳುವ ಏಕ ಉದ್ದೇಶದಿಂದ ಇನ್ನಿಲ್ಲದ ಕೆಲಸ, ವೆಚ್ಚ (ಮತ್ತು ವಂಚನೆಯನ್ನೂ) ಮಾಡಿ ಬರುವವರು, ಅನಂತರದ ದಿನಗಳಲ್ಲಿ ಪೂರ್ಣ ನಿಷ್ಠೆಯನ್ನು ಅಕಾರಣವಾದ ದೇವ, ದೇವಮಾನವರತ್ತ ತೋರುವುದು, ಕ್ರಿಯೆಗಳಲ್ಲಿ ಎಲ್ಲಾ ಸಾಮಾಜಿಕ ಮೌಲ್ಯ ಮತ್ತು ಜವಾಬ್ದಾರಿಗಳನ್ನು ಸ್ವಾರ್ಥಕ್ಕೇ ದುಡಿಸಿಕೊಳ್ಳುವುದು ಕಾಣುತ್ತಿದ್ದೇವೆ. ನಮ್ಮ ಶಿಬಿರದ ಕಲಾಪಗಳು ಇಂಥವಕ್ಕೇನಾದರೂ ಸಣ್ಣ ನಿರೋಧಶಕ್ತಿಯನ್ನು, ಹೋರಾಟದ ಛಲವನ್ನು ಯುವ ಮನಸ್ಸುಗಳಿಗೆ ಕೊಟ್ಟಿರಬಹುದೇ? ನಿಮ್ಮ ಸಂದೇಹ ಅಥವಾ ಸಮಾಧಾನದ ನಿರೀಕ್ಷೆಯಲ್ಲಿ ವಾರ ಕಳೆದು ಮುಂದಿನ ಕಂತಿನ ಕಥನಕ್ಕೆ ಬಲಗೊಳ್ಳುತ್ತೇನೆ]