ಭವಿಷ್ಯ ವಿಜ್ಞಾನ – ಲೇಖಕ ಜಿ.ಟಿ. ನಾರಾಯಣ ರಾವ್
೧೯೯೩ ಅತ್ರಿ ಬುಕ್ ಸೆಂಟರ್ ಪ್ರಕಟಣೆ, ಮೊದಲ ಮುದ್ರಣ ೧೯೮೧. ಪುಟ ಸುಮಾರು ೯೦ ಬೆಲೆ ರೂ ೧೨]
[ನಾಲ್ಕನೇ ಕಂತು]
ನಿಸರ್ಗದ ಸಂಪನ್ಮೂಲಗಳಲ್ಲಿ ವ್ಯಾಪಕವಾಗಿ ಎರಡು ವರ್ಗಗಳನ್ನು ಗುರುತಿಸಬಹುದು. ಪುನರಾವರ್ತನಶೀಲ ಸಂಪನ್ಮೂಲಗಳು, ಅಪುನರಾವರ್ತನಶೀಲ ಸಂಪನ್ಮೂಲಗಳು. ಪ್ರಾಣಿ, ಗಿಡ, ಮರ, ನೀರು, ವಾಯು ಮುಂತಾದವು ಮೊದಲನೆಯ ವರ್ಗಕ್ಕೆ ಸೇರುತ್ತವೆ. ಏಕೆಂದರೆ ಇವನ್ನು ರೂಪಿಸಲು ವಿನಿಯೋಗವಾಗುವ ವಿವಿಧ ಧಾತುಗಳು, ಆ ವಸ್ತುಗಳು ಉಪಯೋಗದಿಂದ ಇಲ್ಲವೇ ಸಾವಿನಿಂದ ಕೊನೆಗೊಂಡ ಬಳಿಕ, ಮತ್ತೆ ನಿಸರ್ಗಕ್ಕೆ ಅವೇ ಧಾತುಗಳಾಗಿ ಸೇರಿಹೋಗುತ್ತವೆ. ಉದಾಹರಣೆಗೆ ಯಾವುದೇ ಪ್ರಾಣಿಯನ್ನು ಪರಿಶೀಲಿಸಬಹುದು. ನೀರು, ಸಾರಜನಕ, ಮೇದಸ್ಸು, ಶರ್ಕರ ಮತ್ತು ಹಲವಾರು ಖನಿಜಲವಣಗಳ ಸಂಕೀರ್ಣ ಮೇಳನವದು – ಅರ್ಥಾತ್ ಹೈಡ್ರೋಜನ್, ಆಕ್ಸಿಜನ್, ನೈಟ್ರೋಜನ್ ಮತ್ತು ವಿವಿಧ ಖನಿಜಲವಣಗಳು ನಿರ್ದಿಷ್ಟ ಅಲೇಖ್ಯಾನುಸಾರ ಸಂಯೋಗಗೊಂಡು ಆ ಪ್ರಾಣಿ ಮೈದಳೆದಿರುತ್ತದೆ. ಅದರ ಮರಣಾನಂತರ ನೈಸರ್ಗಿಕ ಕಾರಕಗಳ ಸತತ ಕ್ರಿಯೆಯ ಪರಿಣಾಮವಾಗಿ ದೇಹ ವಿಘಟಿಸಲ್ಪಟ್ಟು ವಿವಿಧ ಧಾತುಗಳು ಬೇರ್ಪಟ್ಟು ನಿಸರ್ಗದಲ್ಲಿ ಲೀನವಾಗುತ್ತವೆ; ಹಾಗೂ ನಿಸರ್ಗದ ಮಹಾಪ್ರಯೋಗಮಂದಿರದಲ್ಲಿ ಉಪಯೋಗಕ್ಕೆ ಪುನಃ ಲಭಿಸುತ್ತವೆ. ಫಾಸಿಲ್ ಇಂಧನ (ಕಲ್ಲಿದ್ದಲು, ಪೆಟ್ರೋಲ್ ಇತ್ಯಾದಿ) ಹೀಗಲ್ಲ. ಅಂತೆಯೇ ಲೋಹ ಹಲವಾರು ಖನಿಜಗಳು, ಪ್ಲ್ಯಾಸ್ಟಿಕ್, ಕೃತಕನಾರು, ಸಂಶ್ಲೇಷಿತ ರಾಸಾಯನಿಕಗಳು ಮುಂತಾದವು ಕೂಡ. ಉಪಯೋಗಾನಂತರ ನಿಸರ್ಗಕ್ಕೆ ಜಮಾವಣೆ ಆಗುವ ಇವುಗಳ ಶೇಷ ಪದಾರ್ಥಗಳು ನಿಸರ್ಗದಲ್ಲಿ ಸುಲಭವಾಗಿ ಆಗಲಿ ಕ್ಷಿಪ್ರವಾಗಿ ಆಗಲಿ ಲೀನವಾಗುವುದಿಲ್ಲ. ಸಾವಿರಾರು ವರ್ಷಗಳ ಕಾಲ ಇವು ಪ್ರತ್ಯೇಕವಾಗಿಯೇ ಉಳಿದಿರುತ್ತವೆ. ಏಕೆಂದರೆ ಇವನ್ನು ಶೀಘ್ರವಾಗಿ ವಿಘಟಿಸಬಲ್ಲ ಸಾಮರ್ಥ್ಯಯುತ ನೈಸರ್ಗಿಕ ಕಾರಕಗಳಿಲ್ಲ. ಇತ್ತ ವಿಕಿರಣಪಟು ಧಾತುಗಳ ಬಳಕೆಯಿಂದ ಪರಮಾಣು ಶಕ್ತಿಯನ್ನು ಹಿಂಡುವ ತಂತ್ರವಿದ್ಯೆಯ ಉಪೋತ್ಪನ್ನ ಪದಾರ್ಥಗಳು ಶತಮಾನಪರ್ಯಂತ ವಿಕಿರಣಪಟುಗಳಾಗಿಯೇ ಉಳಿದಿದ್ದು ಜೀವಿಗಳಿಗೆ ಮಾರಕವಾಗುತ್ತವೆ. ಒಟ್ಟಾರೆ, ನಿಸರ್ಗದಿಂದ ಒಮ್ಮೆ ಬಸಿಯಲಾದ ಫಾಸಿಲ್ ಇಂಧನ ಮೊದಲಾದ ಸಂಪನ್ಮೂಲಗಳು ಸನಿಹದ ಭವಿಷ್ಯದಲ್ಲೇನೂ ಅದರ ಮಹಾ ಪ್ರಯೋಗಮಂದಿರಕ್ಕೆ ಮರುಬಳಕೆಗೆ ಲಭಿಸುವುದಿಲ್ಲ ಎಂಬುದಂತೂ ಖರೆ. ಹೀಗಾಗಿ ಅಷ್ಟರಮಟ್ಟಿಗೆ ಪ್ರಪಂಚ ಕಚ್ಚಾ ಸಾಮಗ್ರಿಗಳ ಕೊರತೆಯಿಂದ ನರಳಬೇಕಾಗುತ್ತದೆ.
ಜನಸಂಖ್ಯೆ – ತಂತ್ರವಿದ್ಯೆ – ಶಕ್ತಿ ತ್ರಿಭುಜದ ಸಲೆ ನಿಸರ್ಗ ಭರಿಸಬಹುದಾದ ಸಂಪನ್ಮೂಲಗಳ ಪರಿಮಿತಿಯೊಳಗೆ ಇರುವಾಗ ಈ ತ್ರಿಭುಜದ ಇರವಿನ ಅರಿವು ಮಾನವನಿಗೆ ಆಗುವುದಿಲ್ಲ. ಇಂಥ ನಿರ್ಣಾಯಕ ಪರಿಮಿತಿಯನ್ನು – ದೇಹಲಿ (= ಹೊಸ್ತಿಲು) ಪರಿಮಿತಿಯನ್ನು – ಪ್ರಪಂಚ ೧೯೫೦ರ ಅಂದಾಜಿಗೆ ಅಡ್ಡ ಹಾಯ್ದದಂತೆ ತೋರುತ್ತದೆ. ಆಗ ಪರಿಸರಮಾಲಿನ್ಯ ಪಿಡುಗಾಗಿ ತನ್ನ ಅಸ್ತಿತ್ವವನ್ನು ಪ್ರದರ್ಶಿಸತೊಡಗಿತು. ಜೀವನ ಗುಣಮಟ್ಟದ ಮೇಲೆ, ಉಳ್ಳವರನ್ನೂ ಉಳ್ಳದವರನ್ನೂ ಸಮಾನವಾಗಿಯೇ ಒಳಗೊಂಡಂತೆ, ದುಷ್ಪರಿಣಾಮ ಬೀರತೊಡಗಿತು.
ಜನಸಂಖ್ಯೆಯ ಬೆಳೆವಣಿಗೆ – ಹದಿನಾಲ್ಕು
ಕ್ರಿಸ್ತಪೂರ್ವ ೮೦೦೦ದ ಅಂದಾಜಿಗೆ ನವಶಿಲಾಯುಗ ಪ್ರಾರಂಭವಾಯಿತು. ಆ ಮೊದಲು ಕಾಡು ಪ್ರಾಣಿಗಳಿಗಿಂತ ತೀರ ಬೇರೆಯವನೇನೂ ಆಗಿರದಿದ್ದ ಆದಿಮಾನವ (ನೈಸರ್ಗಿಕವಾಗಿ ದೊರೆತ ಪ್ರಾಣಿ ಹಾಗೂ ಸಸ್ಯಗಳಿಂದ ಹೊಟ್ಟೆ ಹೊರೆಯುವುದು ಮತ್ತು ನಿಸರ್ಗದ ಪ್ರತಿಕೂಲ ಬಲಗಳ ಎದುರು ಬದುಕಿ ಉಳಿಯುವುದು ಇವೆರಡೇ ಆದಿಮಾನವನ ಬದುಕಿನ ಘನೋದ್ದೇಶಗಳಾಗಿದ್ದುವು) ಈ ವೇಳೆಗೆ ಬೇಸಾಯಕ್ಕೆ ಕಾಲಿರಿಸಿದ್ದ, ಸಾಕುಪ್ರಾಣಿಗಳ ಸೇವೆ ಪಡೆಯತೊಡಗಿದ್ದ. ತತ್ಪರಿಣಾಮವಾಗಿ ಅಲೆಮಾರಿ ಮಾನವ ಒಂದೆಡೆ ನೆಲೆಯೂರಿದವನಾದ. ಇದು ಆತನಿಗೆ ಒಂದು ತೆರನಾದ ನೆಮ್ಮದಿಯ ಬಾಳನ್ನು ಒದಗಿಸಿತು. ಈ ಕಾರಣದಿಂದಾಗಿ ಜನಸಂಖ್ಯೆಯ ಬೆಳವಣಿಗೆಗೆ ಕೊಂಚ ಕುಮ್ಮಕ್ಕು ದೊರೆಯಿತು. ಆಗಿನ ಪ್ರಪಂಚದ ಜನಸಂಖ್ಯೆ ಸುಮಾರು ಎಂಬತ್ತು ಲಕ್ಷ.
ಆದಿಮಂತ್ರವಿದ್ಯೆಯ ಪ್ರವೇಶ – ಹದಿನೈದು
ಕ್ರಿಸ್ತಪೂರ್ವ ೩೦೦೦ದ ಅಂದಾಜಿಗೆ ಮಾನವ ಕಂಚುಯುಗಕ್ಕೆ ಕಾಲಿರಿಸಿದ. ಅಂದು ತಿಳಿದಿದ್ದ ಆದಿಮಂತ್ರ ವಿದ್ಯೆಯನ್ನು ನಿಸರ್ಗಕ್ಕೆ ಅನ್ವಯಿಸಿ ಚಿನ್ನ, ಬೆಳ್ಳಿ, ತಾಮ್ರ, ತವರ, ಸೀಸ ಎಂಬ ಐದು ಬೇರೆ ಬೇರೆ ಲೋಹಗಳನ್ನು ಸಂಸ್ಕರಿಸಬಲ್ಲವನಾಗಿದ್ದ. ಆತನ ಆದಿಮ ಕುಲುಮೆಗೆ ಯಥೇಚ್ಛವೆನಿಸುವಷ್ಟು ಕಟ್ಟಿಗೆ ಸ್ಥಳೀಯವಾಗಿಯೇ ದೊರೆಯುತ್ತಿತ್ತು. ತಾತ್ತ್ವಿಕವಾಗಿ ಈ ಸಿದ್ಧಿಯ ಅರ್ಥವಿಷ್ಟು: ಶಕ್ತಿಯ ಒಂದು ರೂಪವಾದ ಉಷ್ಣವನ್ನು ಅದುರಿನ ಮೇಲೆ ಹೇರಿ ಲೋಹ ಸಂಸ್ಕರಣೆ ಮಾಡಬಹುದಾಗಿತ್ತು. ಹೀಗೆ ಪಡೆದ ಲೋಹ ಮಾನವನಿಗೆ ಅಧಿಕ ತ್ರಾಣ ಕೊಡಬಲ್ಲದಾಗಿತ್ತು. ಇದರ ಪರಿಣಾಮವಾಗಿ ಆತನ ಬದುಕು ಅಷ್ಟರಮಟ್ಟಿಗೆ ಸುಗಮವಾಗುತ್ತಿತ್ತು. ಲೋಹದಿಂದ ಆಯುಧಗಳನ್ನೂ ಹತ್ಯಾರುಗಳನ್ನೂ ಮಾನವ ತಯಾರಿಸಬಲ್ಲವನಾಗಿದ್ದ.
ಕ್ರಿಸ್ತಪೂರ್ವ ೮೦೦೦ದಲ್ಲಿದ್ದ ಎಂಬತ್ತು ಲಕ್ಷ ಜನಸಂಖ್ಯೆ ಕ್ರಿಸ್ತಶಕಾರಂಭವಾಗುವಾಗ ಸುಮಾರು ಮೂವತ್ತು ಕೋಟಿಗೆ ಏರಿತ್ತು. ಆಧಾರವರ್ಷದ ಜನಸಂಖ್ಯೆ x ಇದ್ದು ಸರಾಸರಿ ವಾರ್ಷಿಕ ಜನಸಂಖ್ಯಾವೃದ್ಧಿದರ ಶೇಕಡ r ಇದ್ದರೆ n ವರ್ಷಾನಂತರ ಜನಸಂಖ್ಯೆ yಯನ್ನು ಈ ಮುಂದಿನ ಸಮೀಕರಣ ಕೊಡುತ್ತದೆ: y = x[1+ r/100]n ಇದರಲ್ಲಿ x = ೮೦ ಲಕ್ಷ, y = ೩೦ ಕೋಟಿ, n = ೮೦೦೦ ಆದೇಶಿಸಿ r ನ ಬೆಲೆಯನ್ನು ಗಣಿಸಬಹುದು. r = ೦.೦೩೬ ದೊರೆಯುತ್ತದೆ.
ಹೀಗೆ ಇತಿಹಾಸಪೂರ್ವ ವರ್ಷಗಳಲ್ಲಿ ಸರಾಸರಿ ವಾರ್ಷಿಕ ಜನಸಂಖ್ಯಾ ವೃದ್ಧಿದರ (r) ಶೇಕಡ ೦.೦೩೬ರಷ್ಟು ಕಡಿಮೆ ಇತ್ತು. ಅಂದರೆ ಯಾವುದೇ ವರ್ಷ ೧ ಲಕ್ಷವಿದ್ದ ಜನಸಂಖ್ಯೆಗೆ ಮರುವರ್ಷದ ವೇಳೆಗಾಗುವಾಗ ೩೬ ಜನರು ಸೇರ್ಪಡೆ ಆಗಿರುತ್ತಿದ್ದರು. ಇಲ್ಲಿ ಒಂದು ಅಂಶವನ್ನು ನೆನಪಿನಲ್ಲಿಡಬೇಕು. ಆ ದಿನಗಳಂದು ಜನನದರ ಸಾಕಷ್ಟು ಉನ್ನತವಾಗಿಯೇ ಇತ್ತು. ಆದರೆ ಹೀಗೆ ಹುಟ್ಟಿದ ಮಕ್ಕಳೆಲ್ಲರೂ ಬಹುಕಾಲ ಬದುಕಿ ಉಳಿಯುತ್ತಿರಲಿಲ್ಲ. ಅಲ್ಲದೇ ದೊಡ್ಡವರಾದರೂ ನೈಸರ್ಗಿಕ ಅಪಘಾತ, ವ್ಯಾಧಿ, ಕಾಳಗ ಮೊದಲಾದವುಗಳಿಗೆ ತುತ್ತಾಗಿ ಪೂರ್ಣಾಯುಷ್ಯ ತುಂಬುವ ಮೊದಲೇ ಮಡಿಯುತ್ತಿದ್ದರು. ಹೀಗೆ ಉನ್ನತ ಜನನದರವನ್ನು ಉನ್ನತ ಮರಣದರ ಹೆಚ್ಚುಕಡಿಮೆ ಸಮತೋಲಿಸಿ ಒಟ್ಟಾರೆ ಜನಸಂಖ್ಯಾವೃದ್ಧಿದರ ತೀರ ಅಲ್ಪ ಪ್ರಮಾಣದಲ್ಲಿರುತ್ತಿತ್ತು.
ಕ್ರಿಸ್ತಶಕಾರಂಭವಾಗುವ ವೇಳೆಗೆ ಮಾನವ ಕಬ್ಬಿಣಯುಗದ ಕೊಡಿ ತಲಪಿದ್ದ. ಬಂಗಾರವನ್ನು ಕೃತಕವಾಗಿ ನಿರ್ಮಿಸಲು ರಸವಾದಿಗಳು ಬಗೆಬಗೆಯ ಧಾತು ಕಷಾಯಗಳನ್ನೂ ಮಂತ್ರ ಮೋಡಿಗಳನ್ನೂ ಪ್ರಯೋಗಿಸುತ್ತಿದ್ದರು. ಅವರ ಉದ್ದೇಶವೇನೂ ಕೈಗೂಡಲಿಲ್ಲ. ಆದರೆ ಆ ಪ್ರಯೋಗಗಳ ಉಪೋತ್ಪನ್ನಗಳಾಗಿ ರಸಾಯನ ವಿಜ್ಞಾನವೂ ಲೋಹತಂತ್ರವಿದ್ಯೆಯೂ ಚೆನ್ನಾಗಿ ಬೆಳೆದು ಅಭಿವೃದ್ಧಿಸಿದವು. ಸರಿ, ಯಥಾಪ್ರಕಾರ ನಿಸರ್ಗದ ಮೇಲೆ ಶಕ್ತಿಯ ಅಧಿಕ ಪ್ರಯೋಗದಿಂದ ಅಧಿಕ ತ್ರಾಣ ಗಳಿಸುವ ಮತ್ತು ಹೆಚ್ಚಿನ ಹತೋಟಿ ಸಾಧಿಸುವ ಆಟ (ಅಥವಾ ಲೂಟಿ?) ಮುನ್ನಡೆಯಿತು. ಸಹಜವಾಗಿ ಜನಸಂಖ್ಯೆ ವೃದ್ಧಿ ಆಗುತ್ತ, ಈ ಹಿಂದೆ ಹೇಳಿದಂತೆ, ಕ್ರಿಸ್ತಶಕ ೧ರಲ್ಲಿ ಮೂವತ್ತು ಕೋಟಿ ತಲಪಿತು.
ಮುಂದಿನ ೧೭೫೦ ವರ್ಷಗಳಲ್ಲಿ ಜನಸಂಖ್ಯೆ ಅತಿ ಮಂದ ದರದಿಂದ ವಾರ್ಷಿಕವಾಗಿ ಶೇಕಡ ೦.೦೫೬ ದರದಲ್ಲಿ ಬೆಳೆದು ಕ್ರಿಸ್ತಶಕ ೧೭೫೦ರ ವೇಳೆಗೆ ಎಂಬತ್ತು ಕೋಟಿ ಆಯಿತು. ಇಷ್ಟಾಗುವಾಗ ಮಾನವನಿಗೆ ಹೊಸದೊಂದು ಶಕ್ತಿಮೂಲ ಲಭಿಸಿತು. ಉನ್ನತ ಸಂಮರ್ದದಲ್ಲಿ ಸಂಗ್ರಹಿಸಿದ ಉಗಿಯನ್ನು ಬಗೆಬಗೆಯ ಕಾರ್ಯನಿರ್ವಹಿಸಲು ನಿಯೋಜಿಸಬಹುದು ಎಂಬ ಉಗಿ ಯಂತ್ರದ ತತ್ತ್ವ ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಕರಗತವಾಯಿತು. ಸಹಜವಾಗಿ ಇದರಿಂದ ವಿಜ್ಞಾನ ಮತ್ತು ತಂತ್ರವಿದ್ಯೆಗೆ ಹೆಚ್ಚಿನ ನೂಕುಬಲ ಒದಗಿತು. ಉತ್ಪಾದನೆ, ವ್ಯಾಪಾರ, ಸಂಚಾರ, ಜನಾರೋಗ್ಯ, ಸಾಮಾಜಿಕ ವ್ಯವಹಾರ, ಸರ್ಕಾರಗಳ ಕಾರ್ಯಕಲಾಪ, ಯುದ್ಧ ಮುಂತಾದ ವಿವಿಧ ರಂಗಗಳಲ್ಲಿ ತಂತ್ರವಿದ್ಯೆ ತನ್ನ ಖಚಿತ ಮುದ್ರೆ ಒತ್ತಿ ಮಾನವಜೀವನದ ಸಮಸ್ತಸ್ತರಗಳನ್ನೂ ವ್ಯಾಪಿಸಿತು. ಇಷ್ಟಾಗುವಾಗ ಇಸವಿಪಟ್ಟಿ ೧೮೦೦ನ್ನು ತೋರಿಸುತ್ತಿತ್ತು. ಜನಸಂಖ್ಯೆ ನೂರು ಕೋಟಿಯನ್ನು ದಾಟಿತ್ತು. ೧೭೫೦ರಿಂದ ೧೮೦೦ ತನಕದ ವಾರ್ಷಿಕ ಜನಸಂಖ್ಯಾವೃದ್ಧಿದರ ಶೇಕದ ೦.೪೪.
ಪೆಟ್ರೋಲಿಯಮ್ ಚಿಲುಮೆ – ಹದಿನಾರು
ತಂತ್ರವಿದ್ಯೆಯ ಸರ್ವತೋಮುಖ ಅಭಿವರ್ಧನೆಗೆ ಹೊಸ ಆಯಾಮ ಲಭಿಸಿದ್ದು ಪೆಟ್ರೋಲಿಯಮ್ ಉತ್ಪನ್ನಗಳ ವಾಣಿಜ್ಯ ಗಾತ್ರದ ಶೋಧನೆ, ಸಂಸ್ಕರಣೆ, ಸಾಗಣೆ ಹಾಗೂ ಸಂಗ್ರಹಣೆ ವ್ಯಾಪಕವಾಗಿಯೂ ವ್ಯವಸ್ಥಿತವಾಗಿಯೂ ಆಗತೊಡಗಿದ ಮೇಲೆ. ಕ್ರಿ.ಪೂ ೩೦೦೦ದಷ್ಟು ಹಿಂದೆಯೇ ಮಾನವ ಉಪ್ಪುನೀರಿನ ಬಾವಿಗಳನ್ನು ಅಗೆದು ಇಲ್ಲವೆ ಜವುಗು ನೆಲಗಳಲ್ಲಿ ಮೇಲಕ್ಕೆ ಒಸರಿ ಬರುತ್ತಿದ್ದ ಪಸೆಯನ್ನು ಬಗೆದು ಪೆಟ್ರೋಲಿಯಮ್ ಎಣ್ಣೆ ಮತ್ತು ನೈಸರ್ಗಿಕಾನಿಲಗಳನ್ನು ಸಂಗ್ರಹಿಸುತ್ತಿದ್ದನೆಂದು ತಿಳಿದಿದೆ. ಹೀಗಿದ್ದರೂ ೧೯ನೆಯ ಶತಮಾನಾರಂಭದ ತನಕವೂ ಅಮೆರಿಕದಂಥ ತಂತ್ರವಿದ್ಯಾತ್ಮಕವಾಗಿ ಪ್ರಗತಿ ಕಂಡಿದ್ದ ದೇಶದಲ್ಲಿ ಕೂಡ, ಮನೆ ಬೆಳಗಲು ಹಣತೆಯುಗದ ವಿಧಾನಗಳೇ ಬಳಕೆಯಲ್ಲಿದ್ದುವು. ಆ ವೇಳೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನೂ ಜೀವನ ಸೌಕರ್ಯಗಳನ್ನೂ ಅರಸುತ್ತ ಜನರು ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರಗಳಿಗೂ ಕೈಗಾರಿವಲಯಗಳಿಗೂ ವಲಸೆ ಹೋದರು. ಹೀಗೆ ನಗರಗಳು ಮೈದಳೆದು ಬೆಳೆಯಲಾರಂಭಿಸಿದುವು. ಸಹಜವಾಗಿ ಮನೆ, ಕಾರ್ಖಾನೆ, ಅಂಗಡಿ, ಬೀದಿ ಮುಂತಾದವನ್ನು ಬೆಳಗಲು, ಯಂತ್ರ ಸಂಕುಲಗಳಿಗೆ ಊಡಲು ಮತ್ತು ಸಂಚಾರಸಾಧನಗಳನ್ನು ಸುಲಭವಾಗಿ ಚಾಲೂಗೊಳಿಸಲು ಹೊಸ ಇಂಧನಗಳೂ ಸ್ನೇಹನಗಳೂ (ಲ್ಯೂಬ್ರಿಕೆಂಟ್ಸ್) ಆವಶ್ಯವಾದುವು. ೧೯ನೆಯ ಶತಮಾನದ ಮಧ್ಯಭಾಗದಲ್ಲಿ ಕೆರೊಸೀನಿನ (ಕಲ್ಲೆಣ್ಣೆ, ಸೀಮೆಯೆಣ್ಣೆ) ಬಳಕೆ ಯುರೋಪ್ ಮತ್ತು ಅಮೆರಿಕ ದೇಶಗಳಲ್ಲಿ ಸರ್ವೆ ಸಾಮಾನ್ಯವಾಗಿತ್ತು. ಕಲ್ಲಿದ್ದಲನ್ನು ಆಸವಿಸಿ ಇದನ್ನು ಪಡೆಯುತ್ತಿದ್ದರು. ೧೮ನೆಯ ಶತಮಾನದಲ್ಲಿ ವಿಶೇಷ ವೇಗೋತ್ಕರ್ಷ ಪಡೆದು ಪ್ರವರ್ಧಿಸುತ್ತಿದ್ದ ಕೈಗಾರಿಕಾಕ್ರಾಂತಿ ತನ್ನ ಬಹುಬಾಹುಗಳನ್ನು (ಕಬಂಧ ಬಾಹುಗಳನ್ನು?) ನವ ಇಂಧನಾಕರಗಳ ಶೋಧನೆಗೆ ನಿಯೋಜಿಸಿತು. ಅಗ್ಗವಾಗಿಯೂ ಯಥೇಚ್ಛವಾಗಿಯೂ ದೊರೆಯಬಲ್ಲ ಎಣ್ಣೆಯ ಹಾಗೂ ಸ್ನೇಹನದ ಆವಶ್ಯಕತೆ ಹಿಂದೆಂದಿಗಿಂತಲೂ ಆಗ ಅತಿ ತೀವ್ರವಾಗಿತ್ತು.
೧೮೫೯ರಲ್ಲಿ ಇ.ಎಲ್ ಡ್ರೇಕ್ ಎಂಬಾತ ಪೆನ್ಸಿಲ್ವೇನಿಯಾದಲ್ಲಿ ಮೊದಲ ಎಣ್ಣೆ ಬಾವಿ ಕೊರೆದಾಗ ಪೆಟ್ರೋಲಿಯಂ ಉದ್ಯಮ ಆಧುನಿಕ ಕೈಗಾರಿಕಾಯುಗವನ್ನು ಆವಾಹಿಸಿತು. ಫಾಸಿಲ್ ಇಂಧನದ ವ್ಯಾಪಕೋಪಯೋಗ ಪ್ರಪಂಚದ ಮುಖವನ್ನು, ನಾಗರಿಕತೆಯ ಆರಂಭದಿಂದ ಆ ತನಕ ಕಾಣದಿದ್ದ ರೀತಿಯಲ್ಲಿ, ಶಾಶ್ವತವಾಗಿ ಬದಲಾಯಿಸಿಬಿಟ್ಟಿತು.
ಕೈಗಾರಿಕಾ ಕ್ರಾಂತಿಯ ಫಲವಾಗಿ ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಸ್ವಯಂಚಲಿ – ಫಾಸಿಲ್ ಇಂಧನ ಸಂಬಂಧ ಅವಿಭಾಜ್ಯವಾಯಿತು. ಪೆಟ್ರೋ ರಾಸಾಯನಿಕ ಕೈಗಾರಿಕೆಯಲ್ಲಿ ಅತಿ ಪ್ರಮುಖ ಕಚ್ಚಾ ಸಾಮಗ್ರಿಯಾದ ಪೆಟ್ರೋಲಿಯಂ, ಸ್ವಯಂಚಲಿಗಳಿಗೆ ಶಕ್ತಿ ಪೂರೈಕೆ ಮಾಡುವ ಇಂಧನವಾಯಿತು. ಗರಿಷ್ಠ ಶಕ್ತಿಯನ್ನು ಉತ್ಪಾದಿಸಬಲ್ಲ ಅಕ್ಷಯ ಪಾತ್ರೆಯೇ ಇದಾಯಿತು. ಇದನ್ನು ಆಧರಿಸಿಯೇ ಮಾನವ ಸಮುದಾಯದ ವರ್ತಮಾನ ಹಾಗೂ ಭವಿಷ್ಯ ನಿಂತುವು.
೧೮೦೦ರಿಂದ ಈಚೆಗಿನ ಸುಮಾರು ೧೯೦ ವರ್ಷಗಳಲ್ಲಿ ವಿಜ್ಞಾನ ಮತ್ತು ತಂತ್ರವಿದ್ಯೆಯಲ್ಲಿ ಮಾನವ ಸಾಧಿಸಿರುವ ಪ್ರಗತಿ, ಗಳಿಸಿರುವ ಹಿರಿಮೆ ಮತ್ತು ಏರಿರುವ ಎತ್ತರ ಎಷ್ಟು ಎಂಬುದನ್ನು ಒಂದೇ ವಾಕ್ಯದಲ್ಲಿ ಹೇಳುವುದಾದರೆ ಆತನ ಜ್ಞಾನವಿಂದು ಪರಮಾಣುವಿನ ಅನಂತಾಲ್ಪಹೂರಣದಿಂದ ತೊಡಗಿ ಬ್ರಹ್ಮಾಂಡದ ವ್ಯೋಮ ಬೃಹದ್ವಿಸ್ತಾರದವರೆಗೂ ಹಬ್ಬಿದೆ. ಜನನ ಮರಣಗಳ ಮೇಲೆ ಹಿಂದೆ ಎಂದೂ ಇದ್ದಿಲ್ಲದಷ್ಟು ಹತೋಟಿಯನ್ನು ಇಂದು ಆತ ಗಳಿಸಿದ್ದಾನೆ, ನವಶಕ್ತಿ ಮೂಲಗಳನ್ನು ಕಂಡುಕೊಂಡಿದ್ದಾನೆ. ಸಮಗ್ರವಾಗಿ ಹೇಳುವುದಾದರೆ ಆಧುನಿಕ ಮಾನವ ಶಕ್ತಿಯನ್ನು, ಉದಾಹರಣೆಗೆ ವಿದ್ಯುಚ್ಛಕ್ತಿಯನ್ನು, ತನಗೆ ಬೇಕಾದಂತೆ ಕಾರ್ಯವೆಸಗಲು ವಿಧಿಸಬಲ್ಲವನಾಗಿದ್ದಾನೆ. ಶಕ್ತಿರಹಿತ ಜೀವನ ಇಂದು ಊಹಾತೀತವಾಗಿದೆ ಎಂದೇ ಆತ ಶಕ್ತಿಯ ಪ್ರಭುವೂ ಹೌದು, ದಾಸನೂ ಹೌದು.
ಶಕ್ತಿ ಬದುಕನ್ನು ಚುರುಕುಗೊಳಿಸುತ್ತದೆ. ನೂತನಾವಕಾಶಗಳನ್ನು ಅನ್ವೇಷಿಸುವುದರತ್ತ ಮಾನವನನ್ನು ಕ್ರಿಯಾಪ್ರೇರಿಸುತ್ತದೆ. ಇಂಥ ಅನ್ವೇಷಣೆಗೆ ಅಧಿಕ ಶಕ್ತಿ ಅವಶ್ಯ. ಶಕ್ತಿಯ ಬೆನ್ನಟ್ಟಿದ ಮಾನವ ತಂತ್ರ ವಿದ್ಯೆಯನ್ನು ಅಭಿವರ್ಧಿಸುತ್ತಾನೆ. ಒಟ್ಟಾಗಿ ಪ್ರಪಂಚದಲ್ಲಿ ದೂರಗಳು ಕುಗ್ಗುತ್ತವೆ. ಜನರಹಿತ ಪ್ರದೇಶಗಳು ಸಂಕೋಚಿಸುತ್ತವೆ, ಜನಸಂಚಾರ ಜಾಸ್ತಿ ಆಗುತ್ತದೆ. ಒಂದಿಗೇ ಜನಸಂಖ್ಯೆ ವರ್ಧಿಸುತ್ತದೆ. ಆದರೆ ಜನರ ಹಿತ?
ಜನಸಂಖ್ಯಾಸ್ಫೋಟ – ಹದಿನೇಳು
ಜನಸಂಖ್ಯೆ ಕಳೆದ ಶತಮಾನಗಳಲ್ಲಿ ಹೇಗೆ ಬೆಳೆದು ಬಂದಿದೆ ಎಂಬುದನ್ನು ಮುಂದಿನ ಯಾದಿಯಿಂದ ತಿಳಿಯಬಹುದು:
೨೦ನೆಯ ಶತಮಾನದಲ್ಲಿ ಜನನಸಂಖ್ಯಾವೃದ್ಧಿದರ (ಸರಾಸರಿಯಲ್ಲಿ) ವಾರ್ಷಿಕವಾಗಿ ಶೇಕಡ ೧.೪ರಲ್ಲಿ ನಿಲ್ಲುವುದೆಂದು ಹೇಳಬಹುದು. ಇದೇನೂ ಸಾಧಾರಣ ದರವಲ್ಲ – ಹಿಂದಿನ ಯಾವ ಶತಮಾನಗಳಲ್ಲೂ ಜನಸಂಖ್ಯಾ ವೃದ್ಧಿದರ ಈ ಎತ್ತರವನ್ನು ಐದಿರಲಿಲ್ಲ ಎಂಬುದನ್ನು ಮೇಲಿನ ಯಾದಿ ಸ್ಪಷ್ಟಪಡಿಸುತ್ತದೆ.
ಹಾಲಿ ಜನಸಂಖ್ಯೆ ಯಾವ ದರದಲ್ಲಿ ಬೆಳೆದದ್ದಾದರೆ ಅದು ಎಷ್ಟು ವರ್ಷಗಳಲ್ಲಿ ದ್ವಿಗುಣಿತವಾಗಬಲ್ಲುದು ಎಂಬುದನ್ನು ಗಣಿಸಿ ಜನಸಂಖ್ಯಾ ವೃದ್ಧಿದರವನ್ನು ವಿವರಿಸುವುದು ವಾಡಿಕೆ:
ಏರುತ್ತಾ ಇರುವ ಜನಸಂಖ್ಯೆಯ ಇದುರು ಅದಾವ ಸಮೀಕರಣ ನಿಂತೀತು?
Nice one & scientifically narrated in such a way that common man can understand this. Better our TV media read this first & discuss on this issue on the above backdrop!!!!:-
“೨೦೦೦ದ ಅರುಣೋದಯ (ಮರಣೋದಯ?) ಸಮೀಪವಾದಂತೆ ಮಾನವನ ಸಮಸ್ತ ಚಟುವಟಿಕೆಗಳೂ ಏರುತ್ತಿರುವ ಬಾಯಿಗಳನ್ನು ಸಮಾಧಾನ ಸ್ಥಿತಿಯಲ್ಲಿ ಇಡುವುದರ ಕಡೆಗೇ ಕೇಂದ್ರಿತವಾಗಬೇಕಾದೀತು”. ಎಂಬ ಭವಿಷ್ಯವನ್ನು ಎಲ್ಲರೂ ತಪ್ಪಾಗಿ ಅರ್ಥಮಾಡಿಕೊಂಡಂತಿದೆ! ೨೦೧೩ರ ಅರುಣೋದಯ ಕಾಲದಲ್ಲಿ ಹಿಂತಿರುಗಿ ನೋಡಿದಾಗ ಮಾನವನ ಸಮಸ್ತ ಚಟುವಟಿಕೆಗಳು ಕಾರ್ಪೊರೇಟ್ /ದಲ್ಲಾಳಿ / ರಾಜಕಾರಣಿಗಳ ಬಾಯಿಗಳನ್ನು ಸಮಾಧಾನ ಸ್ಥಿತಿಯಲ್ಲಿ ಇಡುವುದರ ಕಡೆಗೆ ಮಾತ್ರ ಕೇಂದ್ರಿತವಾದಂತೆ ಕಾಣಿಸುತ್ತಿದೆ. ವೈಜ್ಞಾನಿಕಭವಿಷ್ಯದೊಂದಿಗೆ ಕವಡೆ ಮತ್ತು ತಾಳೆ ಗರಿಯ ಚಿತ್ರ ಇಟ್ಟರೆ ಈ ಭವಿಷ್ಯವನ್ನು ಜನ ಗಂಭೀರವಾಗಿ ತಗೊಳ್ಳಬಹುದೇ?
ಕ್ರಮೇಣವಾಗಿ ಹೆಮ್ಮರವಾಗಿ ಬೆಳೆದಿರುವ ಜನ ಸಂಖ್ಯೆ, ವಿಜ್ಞಾನ ಮತ್ತು ತಂತ್ರವಿದ್ಯೆಯಲ್ಲಿ ಮಾನವ ಪ್ರಗತಿ ಸಾಧಿಸಿದರೂ ಕೋಟ್ಯಾಂತರ ಮಾನವರು ಇನ್ನೂ ಹಸಿವು, ನ್ಯೂನ್ಯಪೋಷಣೆಯಿಂದ ಪೀಡಿತರಾಗಿ ಬದುಕುತ್ತಿರುವ ಸಂಗತಿಯನ್ನು ಶ್ರೀ ಜಿ.ಟಿ.ನಾ. ರಾವ್ ಇವರು ಸರಳವಾಗಿ ಓದುಗರಿಗೆ ತಮ್ಮ ವೈಜ್ನಾನಿಕ ಲೇಖನ ಮೂಲಕ ನೀಡಿದ್ದಾರೆ. ಶ್ರೀ ಜಿ.ಟಿ.ನಾ. ರಾವ್ ಇವರ ಲೇಖನ ಮಾಲಿಕೆ ಇದೆ ರೀತಿ ಓದುಗರಿಗೆ ನಿಮ್ಮ ಬ್ಲಾಗಿನ ಮೂಲಕ ನೀಡುತ್ತಿರಿ. ಧನ್ಯವಾದಗಳು.
Good one. nijavadla edde undu –m p joshy.