೧೯೭೦ರ ದಶಕದ ಮೊದಲ ಭಾಗದಲ್ಲೆಲ್ಲೋ ನನ್ನ ಮನೋಭಿತ್ತಿಗೆ ಹತ್ತಿದ ಚಿತ್ರಕ್ಕೆ ಒಪ್ಪಕೊಡುತ್ತಿದ್ದೇನೆ. ಮಹಾರಾಜಾ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಮುಗ್ಧಗಣ್ಣಿನ ಪ್ರೇಕ್ಷಕ ನಾನು. ಸರಸ್ವತೀಪುರಂ ಮಧ್ಯದ ತೆಂಗಿನ ತೋಪಿನ (ಸಮತೆಂತೋ) ಹವ್ಯಾಸಿ ಕಲಾವಿದರ ಬಳಗದ ಪ್ರಸ್ತುತಿ. ಭಾರತದ ಸ್ವಾತಂತ್ರ್ಯ ಹೋರಾಟದ ನೆನಪುಗಳಿನ್ನೂ ದಟ್ಟವಾಗಿದ್ದ ದಿನಗಳು. ಜಿ.ಬಿ. ಜೋಶಿಯವರು ಬರೆದು, ಪ್ರಕಟಿಸಿ, ಪ್ರದರ್ಶಿಸಿಯೂ ಇದ್ದ ನಾಟಕ – ಕದಡಿದ ನೀರು. ಗೂಳಪ್ಪ (ಗುಂಡಪ್ಪ) – ಸಿಂಧುವಳ್ಳಿ (ಅಥವಾ ಸುರುಚಿ) ಅನಂತಮೂರ್ತಿ, ರಂಗಕ್ಕೆ ನುಗ್ಗುವ ಅಬ್ಬರಕ್ಕೆ ನಾನು ನಡುಗಿದ್ದೆ. ವೃದ್ಧಾಪ್ಯದ ಬೇನೆಗಿಂತಲೂ ಪರಿಸ್ಥಿತಿಯ ಒತ್ತಡಕ್ಕೆ ಬಸವಳಿದು ಕೂತ ಗಾಂಧಿವಾದಿ (ಶಿವಪ್ಪ) – ಬಹುಶಃ ಡಾ| ನ. ರತ್ನ, ಪಡುತ್ತಿರುವ ಪಾಡಿಗೆ ಹನಿಗಣ್ಣನಾಗಿದ್ದೆ. ಪಾತ್ರ-ಪಾತ್ರಧಾರಿಯ ಪತ್ತೆ ಸ್ಫುಟವಾಗದಿದ್ದರೂ ಆಗಿಂದಾಗ್ಗೆ ಅವಧೂತನಂತೆ “ಉಗ್ರ, ಅತ್ಯುಗ್ರ, ಮಹೋಗ್ರ” ಎಂದು ಬೊಬ್ಬಿರಿಯುತ್ತ, ನಾಟಕದ ಪಲ್ಲವಿಯೇ ಇದೋ ಎಂಬ ಭಾವ ಮೂಡಿಸುತ್ತಿದ್ದ ಹುಚ್ಚನೂ ನಿಚ್ಚಳವಾಗುತ್ತಾನೆ; ಅಷ್ಟೆ! ಇದಕ್ಕೆಲ್ಲಾ ಕಾರಣ, ಮೊನ್ನೆ ಮಂಗಳವಾರ ಮಂಗಳೂರು ಪುರಭವನದಲ್ಲಿ ತುಂಬಿದ ಗೃಹಕ್ಕೆ ಪ್ರದರ್ಶನಗೊಂಡ ಅದೇ ನಾಟಕದ ತುಳು ರೂಪಾಂತರ – ಕಲಂಕ್ದ ನೀರ್!
ಶಾಲಾ ವಾರ್ಷಿಕೋತ್ಸವಗಳ ಕೊನೆಗೊಂದು ಅನಿವಾರ್ಯ ಹರಕೆ – ಅದೂ ಮಾತಿನ ಚಮತ್ಕಾರ, ವಿಪರೀತ ಚಟುವಟಿಕೆಗಳ ಕಂತೆಗೊಂದು ಸುಖಾಂತವೇ ನಾಟಕವೆಂದು ಭಾವಿಸಿಕೊಂಡು ಬಂದಿದ್ದೆ. ಪುತ್ತೂರು ಜಾತ್ರೆಗೊಮ್ಮೆ ಮೊಕ್ಕಾಂ ಹೂಡಿದ್ದ ಹಿರಣ್ಣಯ್ಯ ಮಿತ್ರ ಮಂಡಲಿಯ `- ಆಚಾರ’ (ಲಂಚ, ಭ್ರಷ್ಟ, ಅನಾ ಇತ್ಯಾದಿ) ಸರಣಿಯ ವೃತ್ತಿಪರ ನಾಟಕಗಳು ರುಚಿಸಿದಾಗ ಸಾಮಾಜಿಕ ಜಾಗೃತಿಯ ಅಸ್ತ್ರವಾಗಿಯೂ ಕಂಡದ್ದುಂಟು. ಆದರೆ ಅದಕ್ಕೆ ಒಂದು ಬಹುದೊಡ್ಡ ವೈಚಾರಿಕ ಆಯಾಮವೂ ಉಂಟೆಂದು ನನಗೆ ಬಹುಶಃ ಮೊದಲು ಕಾಣಿಸಿದ್ದು ಮೇಲೆ ಹೇಳಿದ ಕದಡಿದ ನೀರು.
ನಿರ್ಮಲ ನಗೆಯಲೆಗಳ ನಲಿದಾಟದಲ್ಲೇ ಕಳೆದು ಹೋಗಿದ್ದ ತುಳು ನಾಟಕರಂಗಕ್ಕೆ, ಸದಾನಂದ ಸುವರ್ಣರ ತುಳು ರೂಪಾಂತರ ಮತ್ತು ನಿರ್ದೇಶನದ ಕಲೆಂಕ್ದ ನೀರ್, ಮುಂಗಾರಿನೊಡಗೂಡಿದ ಹೆದ್ದೆರೆಯಾಗಿ ಅಪ್ಪಳಿಸುವ ನಿರೀಕ್ಷೆಯಿತ್ತು. ಸುವರ್ಣ ಪ್ರತಿಷ್ಠಾನದ ಸದಭಿರುಚಿಯ ಬಗ್ಗೆ ಎರಡು ಯೋಚನೆಯಿಲ್ಲದೆ, ಮನತೊಯ್ದುಕೊಳ್ಳಲು ಭವನ ತುಂಬಿ ಬಂದ ನಾಟಕಾಸಕ್ತರಿಗೆ ಭಿನ್ನ ಬಣ್ಣವೇನೋ ಕಾಣಿಸಿತು, ದಕ್ಕಿದ್ದು ತುಸು `ಕಲಂಕ್ದ ನೀರ್’; ತಳಮಟ್ಟದ ಕಲಕು ಆಗಲಿಲ್ಲ.
ನಾಟಕ ಪ್ರಕಟವಾದ ಹೊಸತರಲ್ಲೇ ಮುಂಬೈಯಲ್ಲಿದ್ದ ತರುಣ ಸದಾನಂದ ಸುವರ್ಣರನ್ನು ಇದು ತಟ್ಟಿತ್ತಂತೆ. ಅವರು ಆಗಲೇ ಅದನ್ನು ತನ್ನವರ ಬಳಗದಲ್ಲಿ ನಿರ್ದೇಶಿಸಿ, ಪ್ರದರ್ಶಿಸಿದ್ದರು. ಅನುಭವ ಮತ್ತು ಪ್ರಾಯದಲ್ಲಿ ಪಕ್ವಗೊಂಡ ಸುವರ್ಣರು ಸುಮಾರು ಎಂಟು-ಹತ್ತು ವರ್ಷದ ಹಿಂದೆ ಮರಳಿಮಣ್ಣಿಗೆ (ಮಂಗಳೂರಿನಲ್ಲೇ ನೆಲೆಸಿದ್ದಾರೆ) ಬಂದಿದ್ದರು. ಹಾಗೆಂದು ಸುವರ್ಣರು ತನ್ನ ಬಹುಮುಖೀ ಆಸಕ್ತಿಯನ್ನು ಸುಪ್ತವಾಗಿಟ್ಟುಕೊಳ್ಳಲಿಲ್ಲ. ಅವರು ಮಂಗಳೂರಿನಲ್ಲಿ ಗಂಭೀರ ಕನ್ನಡ ನಾಟಕಗಳ ಪ್ರಯೋಗಗಳಿಗೆ ಕೈ ಹಾಕಿದರು. ಅವರ ಯಶಸ್ಸನ್ನು ಸಾರುವುದಕ್ಕೆ ಕೋರ್ಟ್ ಮಾರ್ಶಲ್, ಉರುಳು, ಮಳೆನಿಲ್ಲುವತನಕ ಮುಂತಾದ ಪ್ರಯೋಗಗಳು ಧಾರಾಳ ಸಾಕ್ಷಿ ನುಡಿಯುತ್ತವೆ. ಸುವರ್ಣರು ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ತಾಯ್ನುಡಿ ಮತ್ತು ಮಣ್ಣಿನ ಭಾಷೆ ತುಳುವನ್ನೇ ಆಯ್ದುಕೊಂಡಿದ್ದಾರೆ. ಸಹಜವಾಗಿ ನಮ್ಮ ನಿರೀಕ್ಷೆಗಳು ಮುಟ್ಟಿದ ಎತ್ತರ ದೊಡ್ಡದು. ಬಹುಶಃ ಹೀಗಾಗಿ ಪ್ರದರ್ಶನ ಆಭಾಸಕರವಾಗದಿದ್ದರೂ ಪ್ರಭಾವಿಯಾಗಲಿಲ್ಲ ಎನ್ನುವುದನ್ನು ಸಖೇದ ಗುರುತಿಸುವಂತಾಗಿದೆ. ಕಲಾವಿದರು ರಂಗ ತಾಲೀಮಿಗೆ ಶಿಸ್ತುಬದ್ಧವಾಗಿ ಒಡ್ಡಿಕೊಂಡಿರಬಹುದು. ಆದರೆ `ಪಾಠ’ವನ್ನು ಸ್ವತ್ವದಿಂದ ಕಲಾಭಿವ್ಯಕ್ತಿಯಾಗಿಸುವಲ್ಲಿ ನೀರಸವಾದದ್ದು ಪ್ರದರ್ಶನದ ಮುಖ್ಯ ಸೋಲು.
ನನ್ನ ತಿಳಿವಳಿಕೆಯಂತೆ, ಪ್ರದರ್ಶನದ ಸೋಲು ಸದಾನಂದ ಸುವರ್ಣರ ಅರಿವನ್ನು ಮೀರಿದ್ದಲ್ಲ ಮತ್ತು ಭಾಗವಹಿಸಿದ ಕಲಾವಿದರ ಬಗೆಗಣ್ಣು ಕಾಣದ್ದೂ ಅಲ್ಲ ಎಂಬ ಅರಿವಿನೊಡನೇ ನನ್ನ ಮಿತಿಯಲ್ಲಿ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಇದು ಆರೋಗ್ಯಪೂರ್ಣ ಚರ್ಚೆಗೆ ನಾಂದಿಯಾದರೆ, ಈ ಪ್ರಯೋಗದ ಮುಂದಿನ ಉತ್ತಮಿಕೆಗೆ ಪುಟ್ಟ ಸಲಕರಣೆಯಾದರೆ ನಾ ಧನ್ಯ.
ಭಾಷೆಗೆ ತಕ್ಕ ಭಾವದೀಪ್ತಿಸಲು ಅನುವಾದ ಅಥವಾ ರೂಪಾಂತರ ದುಡಿದದ್ದು ಸಾಲದು. ಧಾರವಾಡ ವಲಯದಿಂದ ಕರಾವಳಿಯ ಭಾಷೆಯೊಡನೆ ಆಚಾರಕ್ಕೆ ಇದು ಇಳಿದು ಬರುವಾಗ ಹೆಸರಿನಲ್ಲಿ – ಶಂಕ್ರು, ವಿಷಯದಲ್ಲಿ – ಶೇಂಗಾ ಎಣ್ಣೇ (ಅಥವಾ ನೆಲಗಡಲೆ ಎಂದು ಅರ್ಥವನ್ನೂ ಪಾತ್ರ ಕೊಡಬೇಕಾಯ್ತು! ತೆಂಗಿನೆಣ್ಣೆ ಅಥವಾ ಬರಿಯ ಎಣ್ಣೆಮಿಲ್ಲು ಎಂದಿದ್ದರೂ ಸಾಕಿತ್ತು) ನಂಬಿಕೆಗಳಲ್ಲಿ – ಸಿದ್ಧಪ್ಪ (ಇಲ್ಲಿನ ಇಷ್ಟೊಂದು ದೈವ, ದೇವಸ್ಥಾನಗಳು ದಾಸಪ್ಪನಿಗೆ ದಕ್ಕಲಿಲ್ಲವೇ?) ವೇಷಭೂಷಣಗಳಲ್ಲಿ ಇತ್ಯಾದಿ ಗಳಿಸಿದ್ದೇನು ಎನ್ನುವಾಗ ನಿರಾಶೆಯೇ ಹೆಚ್ಚಿತ್ತು.
ರಂಗ ಪರಿಕರಗಳಲ್ಲಿ ಅಸಹಜತೆ ಕಾಡಿತು. ಮನೆಯ ಮುಖ್ಯ ಬಾಗಿಲನ್ನು ದಾಟಿ ಸ್ನಾನದ ಕೊಟ್ಟಿಗೆ, ಗಾಂಧಿಯ ಪಟದ ಪಕ್ಕದಲ್ಲೇ ಎದ್ದು ಕಾಣುವಂತೆ ಕೋವಿ, ಹೊತ್ತು ಗೊತ್ತುಗಳ ಔಚಿತ್ಯ ತಿಳಿಸದ ಎರಡು ನಂದಾ ದೀಪಗಳು (ಅದರಲ್ಲೊಂದರ ಒಂದು ಬತ್ತಿಯನ್ನು ಒಮ್ಮೆ ಹೊಸದಾಗಿ ಹಚ್ಚಿದ್ದು ಅರ್ಥವಾಯ್ತು, ಮತ್ತೆ ಆರಿಸಿದ್ದು ಯಾಕೆಂದುತಿಳಿಯದಾಯ್ತು.) ಇತ್ಯಾದಿ. ಬಂಗಾರ ಶೆಟ್ಟಿ ಮದುವಣಿಗನಂತೆ ಶೃಂಗಾರದಲ್ಲಿ ಬಂದಾಗ, ಜಗುಲಿಯಲ್ಲಿ ಕಿಟಕಿಗೊರಗಿಸಿ ಬಿಟ್ಟ ಕೊಡೆ, ಅವನು ಸುಮಾರು ಹದಿನೈದು ದಿನಗಳ ಅಂತರದಲ್ಲಿ ಜೈಲಿನಿಂದ ಬಿಡುಗಡೆಗೊಂಡು ವಾಪಾಸು ಬರುವಾಗಲೂ `ಜಗುಲಿಯ ಕಿಟಕಿ’ಗೇ ಆನಿಕೊಂಡೇ ಉಳಿದಿತ್ತು!
ಉಡುಪಂತೂ ತೀರಾ ನಗಣ್ಯ ಪರಿಕರದಂತೆ ನಿರ್ವಹಣೆಗೊಂಡಿದೆ. ಹೀಗೇ ಉದಾಹರಿಸುವುದಾದರೆ – ಸುಮಾರು ನಾಲ್ಕು ದಶಕಗಳ ಹಿಂದೆ, ರೈತಾಪಿ ಹಿನ್ನೆಲೆಯ ತರುಣ – ಶಂಕ್ರು, ಮನೆಯುಡುಗೆಯಾಗಿ (ಮುಂಡು, ಬರಿಮೈ ಬಿಟ್ಟು) ಪ್ಯಾಂಟ್, ಬನಿಯನ್ನು ಧರಿಸುವುದು ಎಷ್ಟು ಸರಿ? ಮೊದಮೊದಲು ಮೈಮುಚ್ಚಿ ಸೆರಗು ಹೊದ್ದ ಹಿರಿಯ ಹೆಂಗುಸು, ಕೊನೆಗಾಗುವಾಗ ಆತಂಕ ದುಃಖಗಳಲ್ಲಿ ಮುಸುಕಿಕ್ಕಿಕೊಳ್ಳುವ ಹಂತದಲ್ಲಿ ಸೆರಗು ಬೀಸಬಿಟ್ಟು, ಅರೆಬೆನ್ನು ತೋರಿಸಿದ್ದು (ಅಭಿನಯದಷ್ಟೇ) ಉಡುಪಿನ ಕೊರತೆಯೆಂದೇ ಕಂಡಿತು.
ಪರಿಸರದ ಸದ್ದುಗಳು (ರಾತ್ರಿಯ ನೀರವತೆಗಾಗಿ ಬಿಬ್ಬಿರಿ, ಉದಯಕಾಲದ ಸಂಕೇತವಾದ ಹಕ್ಕಿಗಳ ಕಲರವ) ಎಲ್ಲಕ್ಕೂ ಮುಖ್ಯವಾಗಿ `ಕಾಳ’ ನಾಯಿಯ ಬೊಬ್ಬಾಟ (ಧ್ವನಿಮುದ್ರಣ) ನಾಟಕದ ಒಟ್ಟಂದದ ಭಾಗವಾಗಿರಲಿಲ್ಲ. ನಾಯಿ ಹಳ್ಳಿಮನೆಯ ವಾಸ್ತವವಾಗಿ ಬೇರೆ ಬೇರೆ ಪಾತ್ರ ಪ್ರವೇಶಗಳೊಡನೆ, ಬೊಗಳಿಕೆಯ ವೈವಿಧ್ಯವನ್ನು – ಗುರುತು, ಪ್ರೀತಿ, ಕೋಪ, ನೋವು ಇತ್ಯಾದಿ ಕೊಡಬೇಕಿತ್ತು. ಆಗ ಕೊನೆಯಲ್ಲಿ ದೊಡ್ಡ ಸಂಕೇತವೂ ಆಗಿ (ದಾಸಪ್ಪನಂತೆ ಅಥವಾ ತುಸು ಹೆಚ್ಚೇ) ಹೆಚ್ಚು ಧ್ವನಿಸುತ್ತಿತ್ತು. ಅದು ಸ್ವತಂತ್ರ ಪಾತ್ರಧಾರಿಯಂತೆ ಒಂದೆರಡು ಬಾರಿಯಷ್ಟೇ ಪ್ರಕಟವಾಗಿ, ಆಗಲೂ ನಾಟಕದ ಶ್ರುತಿಗೆ ಒಗ್ಗದ ಹದದಲ್ಲಿ (ದೂರದ ಬಾವಿಕಟ್ಟೆಯ ಬೊಗಳು ಮನೆಮಂದಿಯ ಮಾತಿನ ಹದಕ್ಕೂ ಮೀರಿ) ಪ್ರಸ್ತುತಗೊಂಡಿತು.
ಕಥಾಕ್ರಮದಲ್ಲಿ ಗುಂಡಪ್ಪ – ಕಾಳ ನಾಯಿ, ಶಿವಪ್ಪರ ಮರಣ, ಶಂಕ್ರುವಿನ ಬಂಧನದೊಡನೆ (ಬಂಗಾರಶೆಟ್ಟಿ – ಮಗಳ ವರಣ?) ಕಥೆಯೇನೋ ಕೊನೆಗಂಡಿತು. ಆದರೆ ಆ ದುರಂತವನ್ನು ಮನಗಾಣಿಸಬೇಕಾದ ನಾಟಕೀಯತೆ ತಡವರಿಸುವ ದೃಶ್ಯಗಳ ಜೋಡಣೆಯಲ್ಲಿ ಬಳಲಿತು. ತೋಟ ಗದ್ದೆಯ ದುಡಿಮೆ ಮುಗಿಸಿ ಬಂದವ, ತುರ್ತು ಪರಿಸ್ಥಿತಿಯಲ್ಲಿ ಒಂದು ಸಂದೇಶ ರವಾನೆಗೂ ಒದಗದಷ್ಟು ಬಳಲಿದವನಂತೆ ಕಾಣಲೇ ಇಲ್ಲ. ಅದಕ್ಕೂ ಮಿಗಿಲಾಗಿ ಆತನಲ್ಲಿ ಶೋಷಣೆಯ ವಿರುದ್ಧ ಕೆರಳುವ ಭಾವ ಕೊಲೆ ಮಾಡುವ ಮಟ್ಟಕ್ಕೆ ಬೆಳೆದದ್ದಾಗಲೀ ಆನಂತರ ಕೊಲೆಗಾರನಾಗಿ ಹದಿನೈದು ದಿನಗಳ ಕಾಲ ಮನಸ್ಸಾಕ್ಷಿಯಲ್ಲಿ ಬೆಂದದ್ದಾಗಲೀ ನಮ್ಮನ್ನು ಮುಟ್ಟಲೇ ಇಲ್ಲ. ಖಳನೆದುರು ತರುಣಿಯ ಸಿಡಿಮಿಡಿ, ಪರಿಸ್ಥಿತಿಗೆ ಸ್ಪಂದಿಸುವ ಛಲದಲ್ಲಿ ಕಾರಿರುಳಿನಲ್ಲೂ ಖಳನಲ್ಲಿಗೆ ಹೋಗಲು ಅಂಜದಿರುವ ನಿಲುವು, ಮುಂದೆ ಶೋಷಿತಳಾಗಿ ಮರಳುವ ಸ್ಥಿತಿಗಳೆಲ್ಲ ಚೆನ್ನಾಗಿಯೇ ಬಂತು, ಮತ್ತದು ನಾಟಕೀಯತೆಗೆ ಅವಶ್ಯವೇ ಸರಿ. ಆದರೆ ಅದನ್ನು ಪ್ರೇಕ್ಷಕರು ಒಪ್ಪಿಕೊಳ್ಳುವಂತೆ ಮಾಡುವಲ್ಲಿ ಇತರ ಪಾತ್ರಗಳು ಮತ್ತು ಪರಿಸರ ವಿಫಲವೇ ಆಯ್ತು. ಗೃಹಕೃತ್ಯದಲ್ಲಿ ದೈಹಿಕವಾಗಿ ಬಳಲಿದ ಹಿರಿಯನನ್ನುಳಿದು, ಇತರರು ತೊಡಗಿಕೊಳ್ಳುವಲ್ಲಿ ಸಹಜತೆ ಮತ್ತು ಸಾತತ್ಯ ಕಾಣಿಸುವ ಅಂಶಗಳ ಕೊರತೆ ತುಂಬಾ ಕಾಡುತ್ತಿತ್ತು.
ಶಿವಪ್ಪನ ಗಾಂಧೀವಾದ ಚಲಾವಣೆ ಕಳೆದುಕೊಂಡ ನಾಣ್ಯ. ಬದಲಾದ ಕಾಲದ ಪೆಟ್ಟುಗಳಲ್ಲಿ ನುಗ್ಗಾಗಿ, ಸ್ವತಃ ಆತನೇ ಅದನ್ನು ಅಪಮೌಲ್ಯಕ್ಕೊಳಪಡಿಸುವಂತೆ ಆತನ ಪುತ್ರವ್ಯಾಮೋಹ ಕಾಣಿಸುತ್ತದೆ. ಆದರೆ ವಾಸ್ತವದಲ್ಲಿ ನಮ್ಮ ಮನಸ್ಸಿನಲ್ಲಿ ಆ ಮೌಲ್ಯಗಳ ಅವನತಿ ಕಾಣಿಸುವ ಪ್ರಯತ್ನ, ಅಥವಾ ಬದಲಾವಣೆಯ ಬಳ್ಳಿ ವಿಸ್ತರಿಸಲು ಪ್ರದರ್ಶನ ಕಟ್ಟಿಕೊಟ್ಟ ತಾರ್ಕಿಕ ಹಂದರ ದುರ್ಬಲ ಅನ್ನಿಸಿತು.
ಗುಂಡಪ್ಪನ ಗತ್ತು, ಬಂಗಾರಶೆಟ್ಟಿಯ ಉತ್ತರಕುಮಾರತ್ವ, ದಾಸಪ್ಪನ ಮರುಳು, ಅಂಚೆಯಣ್ಣನ ದೈನ್ಯ ಚೆನ್ನಾಗಿತ್ತು. ಶಿವಪ್ಪನ ಸತ್ತ್ವ ಮಾತ್ರ ನೀರಸ ಮಾತುಗಳಷ್ಟೇ ಆಗುಳಿಯಿತು. ಮಗಳು ಅಡ್ದಿಯಿಲ್ಲ. ಅಮ್ಮ ಮತ್ತು ಶಂಕ್ರು ಅಭಿನಯದಲ್ಲಿ ಶ್ರಮಿಸಬೇಕಾದ ದಾರಿ ಇನ್ನು ತುಂಬಾ ದೀರ್ಘವಿದೆ. (ಇದನ್ನು ಬರೆಯುತ್ತಾ ಪ್ರದರ್ಶನದಲ್ಲಿ ನಾನೇ ತೆಗೆದ ಚಿತ್ರಗಳನ್ನು ನೋಡುವಾಗಷ್ಟೇ ನೆನಪಾಯ್ತು,) ನಾಟಕದ ಮೊದಲಲ್ಲಿ ಸನ್ಯಾಸಿಯಂತೆ ಕಾಣಿಸಿದ ಪಾತ್ರ ನನಗಂತು ಗ್ರಹಿಕೆಗೇ ಸಿಗಲಿಲ್ಲ. ನಿತ್ಯ ನೂತನ ಪ್ರಯೋಗವೇ ಆಗುವ ನಾಟಕರಂಗದಲ್ಲಿ, ಅದೂ ಸದಾನಂದ ಸುವರ್ಣರಂಥ ಅನುಭವಿಗಳ ಗರಡಿಯಲ್ಲಿ, ಮತ್ತು ಅನುಭವೀ ನಟರುಗಳ ಮೇಳದಲ್ಲಿ ಹುರಿಗೊಂಡು ಕಲಂಕ್ದ ನೀರ್ ಇನ್ನಷ್ಟು ಶಕ್ತವಾಗಿ ಮರುಪ್ರದರ್ಶನಕ್ಕೆ ಬರಲಿ ಎಂದು ಮನಸ್ವೀ ಹಾರೈಸುತ್ತೇನೆ.
[ನಾಟಕ ನೋಡದವರಿಗಾಗಿ ಕಥಾ ಸಾರಾಂಶ: ಸ್ವಾತಂತ್ರ್ಯ ಹೋರಾಟಗಾರ ಶಿವಪ್ಪ ಗಾಂಧೀ ಆದರ್ಶದೊಡನೆ, ಸ್ವತಂತ್ರ ಭಾರತದಲ್ಲಿ ತನ್ನ ಪೂರ್ವವೃತ್ತಿ – ಕೃಷಿಯಲ್ಲಿ, ನೆಲೆಸಲು ಹೆಣಗುತ್ತಿದ್ದಾನೆ. ನಿರೀಕ್ಷೆಯಂತೆ ಹೊರಗಿನಿಂದ ಬರಬೇಕಾದ ಆರ್ಥಿಕ ಸಹಾಯ ಬಂದಿಲ್ಲ. ಕೃಷಿ ಹೂಡಿಕೆ, ಸ್ವಂತದ ವೃದ್ಧಾಪ್ಯದ ಬೇನೆ, ಪತ್ನಿ, ಕಲಿಕೆ ತಪ್ಪಿಸಿ ದುಡಿಮೆಗುಳಿಸಿಕೊಂಡ ಮಗ, ಮದುವೆಯ ಪ್ರಾಯಕ್ಕೆ ಬಂದ ಮಗಳ ಜವಾಬ್ದಾರಿಗಳೆಲ್ಲ ಒತ್ತಡ ಹೇರುತ್ತಿವೆ. ಸಹಜವಾಗಿ ಸಾಲದ ಸುಳಿಯಲ್ಲಿ ಬಿದ್ದು, ಮನೆ ಭೂಮಿಗಳೆಲ್ಲ ಗೂಂಡಾನಿಗೆ ವಜಾ ಆಗುವ ಹಂತ ಬಂದಿದೆ. ಇಲ್ಲಿ ಸಣ್ಣ ಆಶಾಕಿರಣ – ಮಗಳನ್ನು ಮದುವೆಯಲ್ಲಿ ಕೊಟ್ಟರೆ ಸಾಲಮುಕ್ತಿಗೆ ಸಹಕರಿಸಲು ಮುಂದಾದ ಇನ್ನೊಬ್ಬ ಧನಿಕ – ವ್ಯಾಪಾರಿ. ಆದರೆ ಆತನಿಗೆ ವರ-ಯೋಗ್ಯತೆ ಇಲ್ಲ ಎನ್ನುವ ಇಬ್ಬಂದಿ. ಗೊಂದಲದ ಶಿಖರದಲ್ಲಿ ಮಗಳು ಅತ್ಯಾಚಾರಕ್ಕೀಡಾಗಿ, ಮಗ ಗೂಂಡಾನ ಕೊಲೆಗಾರನಾಗಿ, ಅಳಿಯನಾಗಬಹುದಿದ್ದ ವ್ಯಾಪಾರಿ ಮಿಥ್ಯಾರೋಪದಲ್ಲಿ ದೂರನಾಗಿ, ಶಿವಪ್ಪ ಅಸುನೀಗುತ್ತಾನೆ. ನಿರೀಕ್ಷಿತ ಹೊರಗಿನ ಆರ್ಥಿಕ ಸಹಾಯ ಬಂದು, ನಿಷ್ಪಾಪಿ ಮಗಳನ್ನು ವ್ಯಾಪಾರಿ ವರಿಸಲು ಒಪ್ಪಿಕೊಂಡು, ಗೂಂಡಾನ ಹಂಗೂ ಉಳಿದಿಲ್ಲವೆಂದೆಲ್ಲ ಕದಡಿದ ನೀರು ಹಣಿಯಾಗುವ ಹಂತದಲ್ಲಿ ಅನುಭವಿಸಲು ಶಿವಪ್ಪ ಉಳಿದಿಲ್ಲ ಎನ್ನುವುದು ಇಲ್ಲಿನ ದುರಂತ!]
ನಿಮ್ಮ ಸಚಿತ್ರ ವಿಮರ್ಶೆ ಇಷ್ಟವಾಯಿತು. ಕದಡಿದ ನೀರು ತುಳುವಿನಲ್ಲಿ ಪ್ರಯೋಗವಾದುದು ಹೆಚ್ಚು ಮಹತ್ವದ ಸಂಗತಿ. ನಾಟಕವನ್ನು ತುಳು ಸಾಂಸ್ಕೃತಿಕ ಪರಿಸರಕ್ಕನುಗುಣವಾಗಿ , ಪಾತ್ರಗಳ ಹೆಸರು, ಉಡುಗೆ ಸ್ಥಳೀಯ ದೈವ ಇತ್ಯಾದಿ ಬದಲಾವಣೆಗಳನ್ನು ಮಾಡಿಕೊಂಡಿದ್ದರೆ ಹೆಚ್ಚು ಪರಿಣಾಮಕಾರಿಯಾಗುತ್ತಿತ್ತು. ಅಡು ಭಾಷೆಯಾಗಿ ಬಳಕೆಯಲ್ಲಿ ಉಳಿದು ಬಂದಿರುವ ತುಳು.ಕೊಡವದಂಥ ಭಾಷೆಗಳನ್ನು ಸಾಹಿತ್ಯ ಸಂವೇದನೆಯ ಭಾಷೆಗಳಾಗಿ ಬೆಳೆಸುವ ದೃಷ್ಟಿಯಿಂದ ಇಂಥ ಪ್ರಯೋಗಗಳು ಹೆಚ್ಚಬೇಕು. ನಾಟಕದ ಅಭ್ಯಾಸ ಹೆಚ್ಚದಷ್ಟೂ ಸೂಕ್ಷ್ಮಗಳು ಹೆಚ್ಚಿ ಕೊರತೆಗಳು ಕಡಿಮೆಯಾಗುವಂತೆ ಅಡು ಭಾಷೆಗಳು ಶಿಷ್ಟ ಸಂವೇದನೆಯ ಭಾಷೆಗಳಾಗಿ ಬೆಳೆಯುಲು ಅನುಕೂಲವಾಗುತ್ತದೆ.
A good review. From your review, without attending the play, I could reconstruct what could have happened serially, scene after scene, in the play and the whole of it. Thanks.
' ಕಲಂಕ್ ದಿ ನೀರ್ ' ತುಳು ನಾಟಕದ ವಿಮರ್ಶೆ ಸರಿಯಾಗಿದೆ. ಪ್ರೇಕ್ಷಕರ ಮೇಲೆ ಪ್ರಭಾವ ಬೀರುವಲ್ಲಿ ನಾಟಕ ವಿಫಲವಾಗಿದೆ. ಶಂಕುವಿನ ಪಾತ್ರ, ನಿರೂಪಣೆಯಲ್ಲೂ, ನಿರ್ವಹಣೆಯಲ್ಲೂ ಸೋತಿದೆ. ರಂಗವಿನ್ಯಾಸವನ್ನು ಅರಗಿಸಿಕೊಳ್ಳಲು ಕಷ್ಟವಾಗಿತ್ತು. ಧ್ವನಿವ್ಯವಸ್ಥೆ ಮಾತ್ರ ಉತ್ತಮವಿತ್ತು. ಮಾತುಗಳನ್ನು ಸ್ಪಷ್ಟವಾಗಿ ಕೇಳಬಹುದಾಗಿತ್ತು. ಕನ್ನಡವೇ ಇರಲಿ, ತುಳುವೇ ಆಗಿರಲಿ, ರಂಗದ ಮೇಲಿನ ಭಾಷೆ ಆಡುಭಾಷೆಯಂತಿರಬಾರದು. ಕೊಂಚ ಮೇಲ್ಮಟ್ಟದ್ದಿರಬೇಕು. ನಾಟಕದ ಭಾಷಾಮಟ್ಟ ಪ್ರೇಕ್ಷಕರ ಮೇಲೆ ಪರಿಣಾಮ ಬೀರುವಂತಿರಲಿಲ್ಲ. ಕೆಲವು ಕಲಾವಿದರ ಪಾತ್ರ ನಿರ್ವಹಣೆ ಅಪೇಕ್ಷಿತ ಮಟ್ಟಕ್ಕೆ ಏರದ್ದು ಕೂಡ, ನಾಟಕ ನಿರೀಕ್ಷಿತ ಮಟ್ಟಕ್ಕೆ ಏರದಿರಲು ಒಂದು ಕಾರಣವಾಗಿತ್ತು. ಸದಾನಂದ ಸುವರ್ಣರ ನಾಟಕವಾದದ್ದರಿಂದ ಪ್ರೇಕ್ಷಕರಿಗೂ ಕೊಂಚ ನಿರೀಕ್ಷೆಯಿರುವುದು ಸಹಜ ತಾನೇ.
ನಾಟಕ ಪ್ರದರ್ಶನದ ಬಗೆಗಿನ ನಿಮ್ಮ ವಿಮರ್ಶೆ ಓದಿದೆ . ನಾನೂ ಆ ದಿನ ನಾಟಕ ನೋಡಿದ ಕಾರಣ ನಿಮ್ಮ ಪ್ರತಿಕ್ರಿಯೆ ತುಂಬ ಸರಿ ಅನ್ನಿಸಿತು . ಜೊತೆಗೆ ನನ್ನ ಗಮನಕ್ಕೆ ಬಾರದ ಅನೇಕ ಸೂಕ್ಷ್ಮ ಅಂಶಗಳು ( ಕೊಡೆ ಬಿಟ್ಟದ್ದು ..) ನಿಮ್ಮ ಕಣ್ಣಿಗೆ ಬಿದ್ದಿವೆ . ಉತ್ತರಕರ್ನಾಟಕದ ವಸ್ತು, ಬದುಕು ಮತ್ತು ಭಾಷೆಯನ್ನು ತುಳು ರಂಗಭೂಮಿಗೆ ರೂಪಾಂತರಿಸುವ ಮತ್ತು ಪ್ರದರ್ಶಿಸುವ ದೊಡ್ಡ ಸವಾಲು ಇಲ್ಲಿ ಇದೆ . ರಂಗದ ಭಾಷೆಯಲ್ಲಿ ಇರುವ ಬಿರುಕುಗಳನ್ನು ನೀವು ಸರಿಯಾಗಿಯೇ ಗುರುತಿಸಿದ್ದೀರಿ . ಮುಂದಿನ ಪ್ರಯೋಗಗಳಲ್ಲಿ ಪರಿಷ್ಕಾರಕ್ಕೆ ಇಂತಹ ಪ್ರತಿಕ್ರಿಯೆಗಳು ಸಹಕಾರಿ ಆಗುತ್ತವೆ . ತುಳುವಿನ ನಾಟಕಕ್ಕೆ ಮಂಗಳೂರಿನ ರಂಗಾಸಕ್ತರು- ಎಲ್ಲ ಭಾಷೆಯವರು- ಅಷ್ಟು ಗಂಭೀರವಾಗಿ ಬಂದದ್ದು ಪ್ರೋತ್ಸಾಹಿಸಿದ್ದು ಒಂದು ಒಳ್ಳೆಯ ಬೆಳವಣಿಗೆ .
ಪ್ರಿಯ ಅಶೋಕವರ್ಧನರಿಗೆ ವಂದನೆಗಳು.ನಿಮ್ಮ ಬ್ಲಾಗ್ನಲ್ಲಿ ಪ್ರಕಟವಾದ ಕಚ್ಚಾ ವಜ್ರವೊಂದರ…. ಸಮೀಕ್ಷೆಗೆ ತಡವಾಗಿ ಪ್ರತಿಕ್ರಿಯಿಸುತ್ತಿದ್ದೇನೆ. ಕಾರಣ ಕಲಂಕ್ದಿ ನೀರ್ ನಾಟಕ ಪ್ರದರ್ಶನದ ಮರುದಿನವೇ ನಾನು ಬೆಂಗಳೂರಿಗೆ ತೆರಳಿದ್ದೆ. ರಂಗಭೂಮಿಯ ಒಂದು ಪ್ರಮುಖ ಘಟಕ ಪ್ರೇಕ್ಷಕ ವರ್ಗ. ಪ್ರೇಕ್ಷಕರಿಲ್ಲದೆ ನಾಟಕವಿಲ್ಲ. ಓರ್ವ ಪ್ರಾಮಾಣಿಕ ಸದಭಿರುಚಿಯ ಪ್ರೇಕ್ಷಕರಾಗಿ ನೀವು ಕಲಂಕ್ದಿ ನೀರ್ ಕುರಿತು ಮಾಡಿದ ಸಮೀಕ್ಷೆ ಓದಿ ಸಂತೋಷವಾಯಿತು. ಧನ್ಯವಾದಗಳು.ಕೆಲವು ಪರಿಚಿತ ಪ್ರೇಕ್ಷಕರು ನಾಟಕ ಮುಗಿಯುತ್ತಲೇ ನಿರ್ದೇಶಕನನ್ನು, ನಟ ನಟಿಯರನ್ನು ಭೇಟಿಯಾಗಿ, ಫೋನಿಸಿ ಬಹಳ ಒಳ್ಳೆ ನಾಟಕ, ಅದ್ಭುತ, ಫೆಂಟಾಸ್ಟಿಕ್ ಎಂದೆಲ್ಲ ಹೊಗಳಿ ಅಟ್ಟಕ್ಕೇರಿಸುತ್ತಾರೆ. ಆದರೆ ಆಮೇಲೆ ಕೆಲವರು ಹಿಂದಿನಿಂದ ತಮ್ಮ ಮಿತ್ರರಿಗೆ ವ್ಯತಿರಿಕ್ತ ಪ್ರತಿಕ್ರಿಯೆ ನೀಡುತ್ತಾರೆ. ಅವರದು ಸೌಜನ್ಯಕ್ಕಾಗಿ ತೋರುವ ಅಪ್ರಮಾಣಿಕ ಪ್ರತಿಕ್ರಿಯೆ. ನೀವು ಮಾತ್ರ ನಿಮ್ಮ ಅನಿಸಿಕೆಗಳನ್ನು ನಿಮಗೆ ತೋಚಿದಂತೆ ನಿರ್ದಾಕ್ಷಿಣ್ಯವಾಗಿ ವ್ಯಕ್ತಪಡಿಸಿದ್ದೀರಿ. ಇದು ನನಗೆ ಇಷ್ಟವಾಯಿತು.ಮೊನ್ನಿನದು ನಮ್ಮ ನಾಟಕದ ಪ್ರಥಮ ಪ್ರದರ್ಶನ. ಮೊದಲ ಪ್ರದರ್ಶನ ನಮಗೆ ಒಂದು ಗ್ರ್ಯಾಂಡ್ ರಿಹರ್ಸಲ್ ಇದ್ದ ಹಾಗೇ. ಆ ಪ್ರಯೋಗದಲ್ಲಿ ನಮ್ಮ ಲೋಪದೋಷಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಹಾಗೆಯೇ ಅಂದು ನೆರೆದ ಪ್ರೇಕ್ಷಕರ ಪ್ರತಿಕ್ರಿಯೆ, ಫೀಡ್ಬ್ಯಾಕ್ ದೊರೆಯುತ್ತದೆ. ಇದರಿಂದಾಗಿ ಎರಡನೇ ಪ್ರದರ್ಶನದಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲು ಅನುಕೂಲವಾಗುತ್ತದೆ. ಪ್ರಯೋಗಗಳು ಹೆಚ್ಚಿದಂತೆ ಗುಣಮಟ್ಟ ಅಧಿಕವಾಗುತ್ತ ಹೋಗುತ್ತದೆ. ಹೆಚ್ಚು ಪ್ರೇಕ್ಷಕರರನ್ನು ನಾಟಕ ತಲುಪುತ್ತದೆ. ಆದರೆ ಈ ಸಲ ಪ್ರಥಮ ಪ್ರದರ್ಶನಕ್ಕೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿ ನಮ್ಮನ್ನು ಬೆರಗುಗೊಳಿಸಿದರು. ಹೊಸ ನಾಟಕದ ಮೊದಲ ಪ್ರಯೋಗದ ನಂತರ ನಾಟಕದ ಎಲ್ಲ ಕಲಾವಿದರನ್ನೂ ಒಟ್ಟುಗೂಡಿಸಿ ನಾಟಕದ ಪೋಸ್ಟ್ಮಾರ್ಟಂ ಮಾಡುವ ಪ್ರಕ್ರಿಯೆಯನ್ನು ನಾನು ಮುಂಬಯಿಯಲ್ಲಿದ್ದಾಗಲೇ ಆರಂಭಿಸಿದ್ದೆ. ನಾವು ಕಂಡುಕೊಂಡ ಪ್ರಯೋಗದ ಕುಂದುಕೊರತೆಗಳು ಮತ್ತು ಪ್ರೇಕ್ಷಕರಿಂದ ದೊರೆತ ಪ್ರತಿಕ್ರಿಯೆಗಳನ್ನೆಲ್ಲ ಸಂಗ್ರಹಿಸಿ ಅವುಗಳ ಕುರಿತು ಚರ್ಚಿಸಿ ಮುಂದಿನ ಪ್ರಯೋಗದಲ್ಲಿ ಮಾಡಬೇಕಿರುವ ಸೂಕ್ತ ಬದಲಾವಣೆಗಳನ್ನು ನಿರ್ಧರಿಸುತ್ತೇವೆ. ನಾನು ಬೆಂಗಳೂರಿಗೆ ಹೋಗಿದ್ದ ಕಾರಣ ಈತನಕ ಕಲಂಕ್ದಿ ನೀರ್ನ ಪೋಸ್ಟ್ಮಾರ್ಟಂ ಆಗಿಲ್ಲ. ಸದ್ಯದಲ್ಲೇ ಮಾಡುವಾಗ ನಿಮ್ಮ ಸಮೀಕ್ಷೆ ನೆರವಿಗೆ ಬರಲಿದೆ; ಚರ್ಚೆಗೆ ಗ್ರಾಸವಾಗಲಿದೆ.ಭಾಷೆಯ ಕುರಿತು: ಸಾಮಾಜಿಕ ನಾಟಕದಲ್ಲಿ ಅದರಲ್ಲೂ ವಾಸ್ತವಿಕ ಶೈಲಿಯ ನಾಟಕದಲ್ಲಿ ಭಾಷೆ ಆಡುಭಾಷೆಯಾಗಿಯೇ ಇರಬೇಕು. ನಾನು ರಂಗಶಿಕ್ಷಣ ಪಡೆದಿರುವ ಮುಂಬಯಿಯ ಅಂದಿನ ಪ್ರತಿಷ್ಠಿತ ನಾಟ್ಯ ಅಕಾಡೆಮಿಯ ವಾಚಿಕ ಅಭಿನಯದ ಬಗ್ಗೆ ಪಾಠ ಮಾಡುತ್ತಿದ್ದ ಪ್ರಾಧ್ಯಾಪಕ ಬರ್ಕ್ಲಿಹಿಲ್ ನಮಗೆ ಹೇಳುತ್ತಿದ್ದರು ” ನಾಟಕದ ಭಾಷೆ ಸರಳವಾಗಿದ್ದರೇ ಚೆನ್ನ. ಯಾಕೆಂದರೆ ಪ್ರೇಕ್ಷಕ ವರ್ಗದಲ್ಲಿ ಸುಶಿಕ್ಷಿತರೂ, ಬುದ್ಧಿಜೀವಿಗಳ ಜತೆ ಸಾಮಾನ್ಯ ಪ್ರೇಕ್ಷಕರೂ ಇರುತ್ತಾರೆ. ಅವರೆಲ್ಲರಿಗೂ ಅರ್ಥವಾಗುವಂಥ ಸರಳ ಭಾಷೆ ಸಂವಹನಕ್ಕೆ ಹೆಚ್ಚು ಸಹಕಾರಿಯಾಗುತ್ತದೆ. ನಟ-ನಟಿಯರು ಸರಾಗವಾಗಿ, ಅಡೆತಡೆಗಳಿಲ್ಲದೆ ಪರಿಣಾಮಕಾರಿಯಾಗಿ ಸಂಭಾಷಣೆ ನಡೆಸಲು ಭಾಷೆ ಸರಳವಾಗಿಯೇ ಇರಬೇಕು. ನಿರ್ದೇಶಕನಾದವನು ಸಂಭಾಷಣೆಯಲ್ಲಿರಬಹುದಾದ ಕಠಿಣ ಶಬ್ದಗಳ ಬದಲಿಗೆ ಸುಲಭದಲ್ಲಿ ಅರ್ಥವಾಗುವ ಶಬ್ದಗಳನ್ನು ಉಪಯೋಗಿಸಿ ಸರಳಗೊಳಿಸಬೇಕು’ ಎನ್ನುತ್ತಿದ್ದರು. ಈ ಪ್ರಕ್ರಿಯೆಯನ್ನು ಅವರು ಪಾಲಿಶಿಂಗ್ ದಿ ಡೈಲಾಗ್ಸ್ ಎಂದು ಕರೆಯುತ್ತಿದ್ದರು. ನಾನು ಈ ಪ್ರಯೋಗವನ್ನು ನನ್ನ ನಾಟಕಗಳಲ್ಲಿ ಮಾಡುತ್ತಿರುತ್ತೇನೆ.ನಿರ್ದೇಶಕನಾಗಿ ನಾನು ಕಲ್ಪಿಸಿದ ಮಟ್ಟದ ಕಲಂಕ್ದಿ ನೀರ್ ನಾಟಕ ಮುಂದಿನ ಪ್ರಯೋಗಗಳಲ್ಲಿ ಕಾಣಬಹುದು ಎನ್ನುವ ನಿರೀಕ್ಷೆ ನನ್ನದು. ಹಾಗಂತ ನಾನು ಓರ್ವ ಶ್ರೇಷ್ಠ ನಿರ್ದೇಶಕ ಎನ್ನುವ ಭ್ರಮೆ ನನಗಿಲ್ಲ. ನಾನಿನ್ನೂ ರಂಗಭೂಮಿಯ ವಿದ್ಯಾರ್ಥಿಯೇ ಆಗಿದ್ದೇನೆ. ಈ ನಾಟಕವನ್ನು ಅನೇಕ ನಿರ್ದೇಶಕರು ವಿಭಿನ್ನ ರೀತಿಯಲ್ಲಿ ಪ್ರಯೋಗಿಸಿದ್ದಾರೆ. ಮುಂಬಯಿಯಲ್ಲಿ ಗ್ರ್ಯಾಂಟ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಂದ ನಾನು ಕನ್ನಡದಲ್ಲಿ ಪ್ರಯೋಗಿಸಿದ್ದೆ. ಖ್ಯಾತ ಪರಿಸರವಾದಿ ಕುಸುಮಾ ಸೊರಬ್ ಮತ್ತು ಪ್ರಶಸ್ತಿ ವಿಜೇತೆ, ಚಿತ್ರ ನಿರ್ದೇಶಕಿ, ಸಂಕಲನಕಾರ್ತಿ ಅರುಣಾ ರಾಜೆ ಇದರಲ್ಲಿ ಪ್ರಮುಖ ಪಾತ್ರಗಳನ್ನು ಬಹಳ ಚೆನ್ನಾಗಿ ನಿರ್ವಹಿಸಿದ್ದರು. ಪ್ರಖ್ಯಾತ ನಿರ್ದೇಶಕ ಪ್ರಸನ್ನ ಅವರು ನಿರ್ದೇಶಿಸಿದ ಒಂದು ಪ್ರಯೋಗವನ್ನು ನಾನು ಬೆಂಗಳೂರಿನಲ್ಲಿ ಬಹಳ ಹಿಂದೆ ನೋಡಿದ್ದೆ. ವಾಸ್ತವಿಕ ಶೈಲಿಯ ನಾಟಕಗಳಲ್ಲಿ ಬಹುಚರ್ಚಿತ ನಾಟಕವಿದು. ಡಾ. ಮರುಳಸಿದ್ದಪ್ಪ, ಪ್ರಸನ್ನ, ಲಿಂಗದೇವರು ಹಳೆಮನೆ ಮೊದಲಾದ ರಂಗತಜ್ಞರು ಇದರ ಬಗ್ಗೆ ತಮ್ಮ ಲೇಖನಗಳಲ್ಲಿ ವಿಮರ್ಶಿಸಿದ್ದಾರೆ. ನಾನು ಈ ಗಂಭೀರ ನಾಟಕ ಕೈಗೆತ್ತಿಕೊಳ್ಳಲು ಕಾರಣ ಇಲ್ಲಿನ ತುಳು ರಂಗಭೂಮಿಯಲ್ಲಿ ಯಶಸ್ವಿಯಾಗಿ ಪ್ರಯೋಗಿಸಲ್ಪಡುತ್ತಿರುವ ಹಾಸ್ಯ ನಾಟಕ, ಪೌರಾಣಿಕ ಹಾಗೂ ಐತಿಹಾಸಿಕ ನಾಟಕಗಳ ಜತೆ ಗಂಭೀರ ನಾಟಕಗಳೂ ಪ್ರಯೋಗಿಸಲ್ಪಡಬೇಕು ಅನ್ನುವ ಕಾಳಜಿ. ತುಳು ರಂಗಭೂಮಿಯಲ್ಲಿ ಗಂಭೀರ ನಾಟಕಕ್ಕೂ ಸಾಕಷ್ಟು ಪ್ರಮಾಣದ ಪ್ರೇಕ್ಷಕರಿದ್ದಾರೆ ಎನ್ನುವುದಕ್ಕೆ ಮೊನ್ನೆ ಕಲಂಕ್ದಿ ನೀರ್ ಪ್ರಯೋಗಕ್ಕೆ ತುಂಬಿದ ಪುರಭವನ ಸಾಕ್ಷಿಯಾಯಿತು. ಇದು ನನಗೆ ಸಂತಸ ತಂದಿದೆ.ರಂಗಭೂಮಿ ಕುರಿತ ನಿಮ್ಮ ಕಾಳಜಿಗೆ ಧನ್ಯವಾದಗಳು.ನಿಮ್ಮ ವಿಶ್ವಾಸದ