ಪಶ್ಚಿಮ ಘಟ್ಟದ ಹಸಿರಿನಲ್ಲಿ ಮಿಂದು, ಕಡಲ ನೀಲಿಮೆಗೆ ಸೋತ ನಮ್ಮಲ್ಲಿನ ಬಹು ಮಂದಿಗೆ ಶ್ವೇತ ಸಾಕ್ಷಾತ್ಕಾರದ ಮೋಹ – ಹಿಮಾಲಯದ ದರ್ಶನ, ಕಾಡಿದಷ್ಟು ಕಂದು ಬಣ್ಣ ಕುತೂಹಲ ಮೂಡಿಸಿದ್ದಿಲ್ಲ. ರಾಜಸ್ತಾನ ಎಂದ ಕೂಡಲೇ ಸುಲಭ ನಿರ್ಧಾರದಲ್ಲಿ ರಣಗುಡುವ ಬಿಸಿಲು, ಏಕತಾನತೆಯ ಮರಳನ್ನೇನು ನೋಡುವುದು ಎಂದು ತಳ್ಳಿ ಹಾಕುವವರಿಗೇನೂ ಕೊರತೆಯಿಲ್ಲ. ಆದರೆ ನೋಡುವ ಕಣ್ಣು, ಅನುಭವಿಸುವ ಸಾಮರ್ಥ್ಯವಿರುವವರಿಗೆ ಪ್ರಾಕೃತಿಕ ಸತ್ಯಗಳು ಅತಿ ಚಳಿಯ ಹಿಮಾಲಯದಷ್ಟೇ ಅತಿ ಉರಿಯ ಮರುಭೂಮಿಯಲ್ಲೂ ಇದೆ. ಅದಕ್ಕೂ ಮಿಗಿಲಾಗಿ ಐತಿಹಾಸಿಕ ಮತ್ತು ಸಾಮಾಜಿಕ ವೈವಿಧ್ಯಗಳು, ಸ್ಥಿತ್ಯಂತರಗಳು ಈ ರಾಜಸ್ತಾನದಲ್ಲಿ ತುಂಬಾ ಇವೆ. ಇವನ್ನು ಗುರುತಿಸಿಯೇ ಮಿತ್ರ ಮನೋಹರ ಉಪಾಧ್ಯರ ಕುಟುಂಬ ರಾಜಸ್ತಾನ ಪ್ರವಾಸಕ್ಕೆ ಹೋಗಿದ್ದರು. ಅವರು ಸಿದ್ಧ ತಿನಿಸಿನಂಥಾ ಪ್ಯಾಕೇಜ್ ಟೂರನ್ನು ನಿರಾಕರಿಸಿ, ಗಟ್ಟಿ ಮನೆಗೆಲಸ ಮಾಡಿದ್ದಾರೆ, ಅಲ್ಲಿಗೆ ಹೋದ ಮೇಲೆ ಮನವಿಟ್ಟು ಅನುಭವಿಸಿದ್ದಾರೆ. ಸಹಜವಾಗಿ ಅದು ಕಥನಕ್ಕಿಳಿದಾಗ ಗಂಟೆ ಕಿಮೀಗಳ ಪಟ್ಟಿ, ತಿಂಡಿತೀರ್ಥಗಳ ಯಾದಿ, ಸ್ವಂತ ಕಷ್ಟ ಸುಖಗಳ ಒಣ ವರದಿಯಾಗಿಲ್ಲ. ಸಾರ್ವತ್ರಿಕ ಓದಿನ ಸುಖಕ್ಕೆ, ಅನುಸರಣೀಯ ಉತ್ಸಾಹಿಗಳ ಸಖ್ಯಕ್ಕೆ ಸ್ವಾರಸ್ಯಕರ ಸಾಹಿತ್ಯವಾಗಿಯೇ ಬಂದಿದೆ.
ಮರುಭೂಮಿಯಲ್ಲೂ ಬಿಸಿಲು ಕಾಯಿಸುವ ದಿನಗಳಿವೆ. ಅದು ಬರಿಯ ಮುಳ್ಳು ಕಂಟಿಗಳ ಬರಡು ನೆಲವಲ್ಲ. ಅಲ್ಲಿನ ಜೀವವೈವಿಧ್ಯವೆಂದರೆ ಒಂಟೆ, ಕತ್ತೆಗಳಿಗೇ ಮುಗಿಯಲಿಲ್ಲ. ಅಲ್ಲಿ ನೀರು ಭ್ರಮಾತ್ಮಕ ಮೃಗಜಲಕ್ಕಷ್ಟೇ ಸೀಮಿತವಲ್ಲ… ಹೀಗೆ ನೇತಿ ನೇತಿ ಉದ್ಗರಿಸಿಹೋಗುತ್ತದೆ ಇವರ ಅನುಭವ ಕಥನದ ಸಾಕ್ಷಾತ್ಕಾರದಲ್ಲಿ! ವೈಯಕ್ತಿಕವಾಗಿ ನಾನು ಪ್ರವಾಸ ಕಥನಗಳಲ್ಲಿ ಕಂಡದ್ದನ್ನು ಹೇಳುವುದರೊಡನೆ ನನಗೆ ನಿಲುಕಿದಷ್ಟು ಅದರ ಅವಸ್ಥಾಂತರಗಳ ಕುರಿತು ವಿಷಾದಿಸುವುದು, ಕಾರಣಕರ್ತರನ್ನು ಕುಟುಕುವುದನ್ನು ಬುದ್ಧಿಪೂರ್ವಕವಾಗಿ ಮಿಳಿತಗೊಳಿಸುತ್ತೇನೆ. (ಇದನ್ನು ಅವಗುಣವೆಂದು ಭಂಗಿಸಿದವರೂ ಇದ್ದಾರೆ) ಆದರೆ ಪ್ರಸ್ತುತ ಪ್ರವಾಸ ಕಥನವನ್ನು ಕೊಟ್ಟ ವಿದ್ಯಾ ಎಲ್ಲವನ್ನೂ ಬಹಳ ಸಂಯಮದಿಂದ ನಿಭಾಯಿಸಿದ್ದಾರೆ.
`ಸವಿಯೆಲ್ಲ ನಿನಗಿರಲಿ, ಕಹಿ ಮಾತ್ರ ನನಗಿರಲಿ’ (- ಸಿನಿಗೀತೆಯೊಂದರ ಚರಣ) ಎಂಬ ಔದಾರ್ಯ ಮೆರೆದಿದ್ದಾರೆ. ಕ್ರಿಯೆಯಲ್ಲಿ ಅಸುಖವಿದ್ದರೂ (ಹಲ್ಲಿಗೆ ಭೈರಿಗೆ ಹಾಕುವುದು, ಅವಶ್ಯವಾದರೆ ಕಳಚುವುದು ವಿದ್ಯಾರ ವೃತ್ತಿ) ಪರಿಣಾಮದಲ್ಲಿ ನಗುವಿನ ಸ್ಪರ್ಷ ಕಾಣಿಸುವ ವೈದ್ಯೆಯ ನಾಜೂಕು ಇಲ್ಲಿ ವೇದ್ಯವಾಗುತ್ತದೆ. ಒಂದು ಉದಾಹರಣೆ ಗಮನಿಸಿ: ವಿಮಾನ ಯಾತ್ರಿಗಳಿಗೆ ಕೊಡುವ ಆಹಾರದ ಗುಣಮಟ್ಟದ ಬಗ್ಗೆ ಸಾಮಾನ್ಯವಾಗಿ ಯಾರಿಗೂ ಸಂದೇಹ ಬರಬಾರದು. ಆದರೆ (ಆಹಾರಕ್ಕೂ ಸೇರಿದಂತೆ) ಅಕ್ಷರಶಃ ಗಗನದೆತ್ತರದ ಬೆಲೆ ಕೊಟ್ಟ ಇವರಿಗೆ ಪ್ರಯಾಣದಲ್ಲಿ ದಕ್ಕಿದ ತಿನಿಸು ಹಳಸಿತ್ತು. ಸಹಜವಾಗಿ ತಿಂದ ತಾಯಿ, ಮಗನ ಆರೋಗ್ಯ ಕೆಟ್ಟಿತು. ಅದೃಷ್ಟವಶಾತ್ ತಿನ್ನದ ಮನೋಹರ್ ಮಾತ್ರ ಸ್ವಸ್ಥ ಉಳಿದಿದ್ದರು. ಆದರೆ ವಿದ್ಯಾ ಅನಾನುಕೂಲವನ್ನೂ ತಾವು ಅದಕ್ಕೆ ಹೋಮಿಯೋಪತಿಯಲ್ಲಿ ಉಪಶಮನ ಕಂಡುಕೊಂಡದ್ದನ್ನೂ ಸೂಚ್ಯವಾಗಿ ಹೇಳಿ ಜಾರುತ್ತಾರೆ. ಆ ತಿನಿಸನ್ನು ಪರೋಕ್ಷವಾಗಿ (ಸ್ಯಾಂಡ್-witch) ಮಾಟಗಾತಿ ಎಂದು ತಮಾಷೆ ಮಾಡಿ ಮುಂದುವರಿಯುತ್ತಾರೆ. ಹಾಗೆಂದು ಒಟ್ಟಾರೆ ಪ್ರವಾಸದಲ್ಲಿ ಆಹಾರದ ಹೆದರಿಕೆ ಉಳಿಸಿಕೊಂಡು, ಪ್ರದೇಶದ ಲಘು ರುಚಿಗಳನ್ನು ಇವರು ಕಳೆದುಕೊಳ್ಳಲೂ ಇಲ್ಲ; ಅಗತ್ಯ ಬಂದಂತೆ ದಾರಿ ಬದಿಯ ಜೂಶ್ ಹೀರಿ ಸಂತಸಪಡುವಲ್ಲಿ ಯಾವ ಹಿಂಜರಿಕೆಯನ್ನೂ ತಾಳುವುದಿಲ್ಲ.
ದೊಡ್ಡ ಅಪ್ರಿಯವನ್ನೇ ಆದರೂ ವೈಯಕ್ತಿಕವೆಂದುಕೊಳ್ಳುತ್ತಾ ಸಣ್ಣ ಗುಣವೇ ಕಂಡರೂ ಸಾರ್ವತ್ರಿಕಗೊಳಿಸುವ ಇವರ ಭಾವ ಇನ್ನೊಂದೆಡೆಯಲ್ಲೂ ಸ್ಪಷ್ಟವಾಗುತ್ತದೆ. ಊರಿಗೆ ಮರಳಿದ ಮೇಲೆ ಯಾರಿಗಾದರೂ ತಮ್ಮ ಪ್ರವಾಸದ ಸ್ಮರಣಿಕೆಯಾಗಿ ಕೊಡಲು ಬಂದೀತೆಂದು ಒಂಟೆ ಚರ್ಮದ್ದೇನೋ ಸಾಮಾನು ಕೊಳ್ಳುತ್ತಾರೆ. ಊರಿಗೆ ಮರಳಿದ ಹೊಸದರಲ್ಲೇ ಅದು `ಊಂಟ್ ಚಮ್ಡಾ’ದ ಸ್ವಭಾವದಲ್ಲೋ ಹದ ಬರಿಸಿದ ಕೊರತೆಯಲ್ಲೋ ನಾರುತ್ತಾ ದುರ್ವಾಸನೆ ಬಿಡುತ್ತದೆ. ಆಗ ವಿದ್ಯಾ ಮೊದಲು ತಾವು ಅದನ್ನು ಇನ್ನೂ ಅನ್ಯರಿಗೆ `ಉಡುಗೊರೆ’ಯಾಗಿ ಕೊಡದ ಬಗ್ಗೆ ಸಮಾಧಾನ ಪಟ್ಟುಕೊಳ್ಳುತ್ತಾರೆ. ಮತ್ತೆ ಉತ್ಪನ್ನದ ತಯಾರಿಕೆಯ ಕುರಿತು ಬಳಕೆದಾರನ ಜಾಗೃತಿಯ ಟೀಕೆ ಬಿಟ್ಟು, ಪರಿಮಳಕಾರಕದ ನೆನಪು ಮಾಡಿಕೊಳ್ಳುತ್ತಾರೆ. ಮಹಾಭಾರತದಲ್ಲಿ ಮತ್ಸ್ಯಗಂಧಿಯನ್ನು ಯೋಜನಗಂಧಿಯನ್ನಾಗಿಸಿ ಸ್ವಾರ್ಥಕ್ಕೆ ಬಳಸಿದ ಮುನಿಯನ್ನು ಯಃಕಶ್ಚಿತ್ `ವಾಸನಕಾರಕ’ಕ್ಕೆ ಸಮೀಕರಿಸಿ ಕುಶಾಲಿನಲ್ಲೇ ಸಾಮಾಜಿಕ ನ್ಯಾಯಸೂಚನೆಯನ್ನೂ ನೀಡಿ ಮುಗಿಸುತ್ತಾರೆ.
ಅಕ್ಷರ ಮತ್ತು ವ್ಯಾಕರಣಜ್ಞಾನವಷ್ಟೇ ಸಾಹಿತ್ಯವಾಗದು. ಅಂತೇ ಕ್ಯಾಮರಾ-ಸಲಕರಣೆಗಳ ಮೊತ್ತ ಯಶಸ್ವೀ ಚಿತ್ರ ಕೊಡಬೇಕೆಂದಿಲ್ಲ, ನಮಗೆಲ್ಲ ತಿಳಿದದ್ದೇ ಇದೆ. ಪಳೆಯುಳಿಕೆಗಳ ಉದ್ಯಾನ, ಮರಳಿನ ಮೇಲೆ ಸೂರ್ಯರಶ್ಮಿಯ ಲಾಸ್ಯ, ಲೆಕ್ಕಕ್ಕೆ ಮರುಭೂಮಿಯೇ ಆದರೂ ಅಲ್ಲಿನ ಚಳಿಗಾಲದ ರಾತ್ರಿಗಳ ತೀವ್ರತೆ, ಸೀಮಾಗ್ರಾಂ ಎಂಬ ಹೆಸರಿನ ಮಾಯೆ, ಕುಲ್ಧಾರಾ ಎಂಬ ಎಂಬತ್ನಾಲ್ಕು ಹಳ್ಳಿಗಳ ಪೂರ್ಣ ಒಕ್ಕಲು ಹೋದದ್ದೆಲ್ಲಿಗೆ ಎಂಬ ಪ್ರಶ್ನೆ, ನಾಲ್ಕು ಗೋಡೆಗಳ ನಡುವಣ ಶಿಕ್ಷಣವೆಂಬ ಕಲ್ಪನೆಯ ಟೊಳ್ಳು… ಎಂದಿತ್ಯಾದಿ ಸಾಗುವ ವಿದ್ಯಾಲಹರಿ ಕಟ್ಟುವ ಅರ್ಥ ಪರಂಪರೆ ದೊಡ್ಡದು. ಅವಕ್ಕೆಲ್ಲ ಸಾಂಗತ್ಯ ಕೊಡುವ ಮನೋಹರ ಚಿತ್ರಗಳು ನಿಸ್ಸಂದೇಹವಾಗಿ ಪೂರಕವಾಗುತ್ತವೆ. ಆದರವು ಕೇವಲ ಉಪಾಧಿಯಷ್ಟೇ ಆಗಿ ಉಳಿಯದೇ ಸ್ವತಂತ್ರ ಕತೆಗಳನ್ನೂ ಬಿತ್ತರಿಸುವಂತಾಗಿರುವುದು ಚಿತ್ರಕಾರನೂ ಮನೋಹರನೇ ಆಗಿರುವುದಕ್ಕೆ. ಉದಾಹರಣೆಗೆ ದಿನ ಒಂದರ ಕೊನೆಯ ಸೂರ್ಯಾಸ್ತದ ಚಿತ್ರ ನೋಡಿ: ಬರಡು ಬಯಲಿನ ಮರುಭೂಮಿ, ಸಾಮಾನ್ಯವಾಗಿ ಎಲ್ಲೆಡೆಯೂ ಕಾಣುವ ಸೂರ್ಯಾಸ್ತ ಎಂಬ ನಮ್ಮ ನಿರೀಕ್ಷೆಯೂ ಇವರ ಕಾರಿನ ಚಾಲಕನ ಮಾತೂ ಓದಿದಾಗ ದಕ್ಕುತ್ತದೆ. ಆದರೆ ಇವರ ಚೌಕಟ್ಟು ನಮ್ಮ ಘಟ್ಟಗಳ ಏರಿಳಿತ, ವನಗಳ ಛಾಯಾರೂಪ ಸೇರಿದಂತೆಯೇ ರೂಪುಗೊಂಡಿರುವಾಗ ಚಿತ್ರ ದಿನಾಂತ್ಯದ ಸೂಚನೆಯೊಡನೆ ಮುಂದಿನ ಕಥನದ ಬಗ್ಗೆ ಅಪಾರ ಕುತೂಹಲವನ್ನೂ ಹುಟ್ಟಿಸುತ್ತದೆ. ವಿದ್ಯಾಕಲೆಗೆ ಮನೋಹರ ಕುಸುರಿ ಯಾವುದೇ ಉತ್ತಮ ಸಂಗೀತ ಕಛೇರಿಯಲ್ಲಿನ ಕಲಾವಿದರ ನಡುವಣ ಸವಾಲ್ ಜವಾಬ್ ಗಳಿಗೆ ಸಾಟಿಯಾಗಿದೆ.
ನಮ್ಮಲ್ಲಿ ಸಾಮಾನ್ಯವಾಗಿ ಪ್ರವಾಸವೆಂದರೆ ತೀರ್ಥಯಾತ್ರೆ. ಯಾವುದೇ ಪ್ರವಾಸೀ ಸಂಸ್ಥೆಗಳ ಪಟ್ಟಿ ತೆಗೆದರೆ ಪ್ರಥಮಾದ್ಯತೆಯಲ್ಲಿ ಸಿಕ್ಕುವುದು ಒಂದಷ್ಟು ದೇವಸ್ಥಾನಗಳು. ಪ್ರವಾಸ ನಿರ್ವಾಹಕರೂ ತೀರ್ಥ ಕ್ಷೇತ್ರಗಳ ಅವ್ಯವಸ್ಥೆಗಳನ್ನು ಸುಧಾರಿಸಿಕೊಂಡು `ಗಿರಾಕಿ-ಭಕ್ತಾಭೀಷ್ಟ’ ಪೂರೈಸಲು ತೋರುವ ಉತ್ಸಾಹವನ್ನು ನಿಜ ಮೌಲ್ಯ ಸಾರುವ ಪ್ರದರ್ಶಕಗಳೆಡೆಗೆ ಹರಿಸುವುದೂ ಇಲ್ಲ; ಕಾರಣ ಸುಲಭ – “ಡಿಮಾಂಡಿಲ್ಲ ಸಾರ್.” (ನಾನು ಉತ್ತಮ ಅಭಿರುಚಿಯ ಪುಸ್ತಕಗಳನ್ನು ಪ್ರಕಟಿಸುತ್ತಿದ್ದ ಕಾಲದಲ್ಲಿ ಇತರ ಪುಸ್ತಕ ವ್ಯಾಪಾರಿಗಳಿಂದ ಹೆಚ್ಚಾಗಿ ಕೇಳಿಬರುತ್ತಿದ್ದ ಮಾತೂ ಇದೇ!) ಉಪಾಧ್ಯ ಕುಟುಂಬಕ್ಕೂ ಸಿಕ್ಕ ಚಾಲಕ/ ಮಾರ್ಗದರ್ಶಿ ಹೇಮ್ಜೀಯ ಮನೋಸ್ಥಿತಿಯಾದರೂ ಇದೇ. ಪ್ರವಾಸಕ್ಕೂ ವಾರಗಳ ಮೊದಲೇ ವಿದ್ಯಾ ಮತ್ತು ಮನೋಹರ್ ಪುಸ್ತಕ, ಅಂತರ್ಜಾಲ ಮತ್ತು ಗೆಳೆಯರ ಮೂಲಕ ಸಾಕಷ್ಟು ಮನೆಗೆಲಸ ಮಾಡಿ ತೀರ್ಥಯಾತ್ರೆ ಕಳಚಿಕೊಂಡೇ ಹೊರಟಿದ್ದರು, ನಡುವೆ ಎಲ್ಲೋ ತುಸು ಬಿಡು ಸಮಯ ತುಂಬಲು ಹೇಮ್ಜೀಯಲ್ಲಿ ಇವರು ಕೇಳಿಕೊಂಡಾಗ ಆತ ಭಕ್ತಿಯಲ್ಲಿ `ರಾಮ್ದೇವ್ರಾ’ ದರ್ಶನ ಮಾಡಿಸುತ್ತಾನೆ.
ಪ್ರಾಕೃತಿಕ, ಅಂದರೆ ಮುಖ್ಯವಾಗಿ ಮರುಭೂಮಿಯದ್ದೇ ಭೌಗೋಳಿಕ ಸತ್ಯಗಳು ಅಲ್ಲಿಗೆ ಹೋದವರಿಗೆಲ್ಲ ಸಹಜವಾಗಿ ದಕ್ಕುತ್ತದೆ. ಐತಿಹಾಸಿಕ ರಾಜಾಸ್ತಾನವನ್ನು ಅನುಭವಿಸುವಲ್ಲಿ ಅಲ್ಲಿನ ನವ-ನಾಗರಿಕತೆಯ ಪರಿಚಯವೂ ಆಗುತ್ತದೆ. ಹಾಗೆ ವಾಸ್ತವ್ಯ ಮಾಡಿದಲ್ಲಿ ಹೋಟೇಲಿನವರೇ ವ್ಯವಸ್ಥೆ ಮಾಡುವ ಜನಪದ ಝಲಕ್ಕುಗಳಾದರೋ ಪ್ರದರ್ಶನಕ್ಕೆ ಚೂಪುಗೊಂಡು ಔಪಚಾರಿಕ ಸತ್ಯಗಳನ್ನಷ್ಟೇ ಕಾಣಿಸುತ್ತದೆ. ವಿದ್ಯಾ ಅವೆಲ್ಲವನ್ನು ತುಸು ಕಳಚಿಕೊಂಡು, ಪ್ರಾಕೃತಿಕ – ಅದರಲ್ಲೂ ವನ್ಯ ಪರಿಸರದ ಸ್ಪರ್ಷದೊಡನೆ, ಸಾಂಪ್ರದಾಯಿಕ ಜಾನಪದಲೋಕವನ್ನು ಕಂಡುಕೊಳ್ಳುವುದನ್ನು ತುಂಬ ಪ್ರೀತಿಯಿಂದಲೇ ಅನಾವರಣಗೊಳಿಸುತ್ತಾರೆ. ಪ್ರಾದೇಶಿಕ ಸತ್ಯಗಳ ನಡುವೆ ಇದ್ದೂ ಇರಬಾರದಂತೆ (ನಮ್ಮ ಪುಡಾರಿಗಳ ಗ್ರಾಮವಾಸ್ತವ್ಯದ ಢೋಂಗಿಯಂತೆ,) `ಹೋಂ ಅವೇ ಫ್ರಂ ಹೋಂ’ ಎಂಬ ಅಪಕಲ್ಪನೆಯನ್ನು ಕೊಡುವ ರಿಸಾರ್ಟ್ಗಳಿಗೆ ವ್ಯತಿರಿಕ್ತವಾದ ವಸತಿ ಸೌಕರ್ಯದಲ್ಲಿ, ಅದೂ ಪ್ರಾಣಿ-ಸ್ನೇಹಕ್ಕೆ ಜಗದ್ವಿಖ್ಯಾತಿ ಗಳಿಸಿದ ಬೈಷ್ಣೋಯೀ ಗ್ರಾಮ ವಾತಾವರಣದಲ್ಲೇ ಇವರು ಸಣ್ಣ ಅವಧಿಗೇ ಆದರೂ ನೆಲೆ ಕಂಡಿರುವುದು ತುಂಬ ಕುತೂಹಲಕರವಾಗಿದೆ. ಸುಮಾರು ಎರಡೂವರೆ ದಶಕಗಳ ಹಿಂದಿನ ನನ್ನ ಪ್ರಥಮ `ಬೈಕೇರಿ ಭಾರತ ಸುತ್ತು’ವಿನ ಆಧಾರದಲ್ಲಿ “ನಾನೂ ರಾಜಾಸ್ತಾನಕ್ಕೆ ಹೋಗಿದ್ದೆ” ಎಂದುಕೊಳ್ಳುತ್ತಿದ್ದುದು ಎಷ್ಟು ಸ್ವಲ್ಪ ಎನ್ನುವಂತೆ ಮಾಡಿಬಿಡುತ್ತಾರೆ ವಿದ್ಯಾ. ಬಹುಮತದ ಪ್ರವಾಸೀ ತಾಣಗಳಲ್ಲಿ ನಿರ್ಮಮ ಪ್ರವಾಸಿಯಾಗಿ ಸಂಯಮದ ನಿರೂಪಣೆಯಲ್ಲೇ ಇದ್ದ ವಿದ್ಯಾ ಬೈಷ್ಣೋಯಿಗಳ ಸಂಗಕ್ಕೆ ಬಂದಾಗ ಅನಿವಾರ್ಯವಾಗಿ ಸಹಜ ಒಲವಿನ ಪರಿಸರಪ್ರೇಮಿಯಾಗಿ ಕಾಣಿಸಿಕೊಳ್ಳುತ್ತಾರೆ. ಇವರು, ಪ್ರದರ್ಶನ ಮೀರಿದ ಬೈಷ್ಣೋಯಿಗಳ ಜೀವನಕ್ರಮದ ಕುರಿತು ಬರೆಯುವಾಗ, ವಿಶ್ವಯಾನಿ ಗೆಳೆಯ ಗೋವಿಂದನ ಒಂದು ಉಲ್ಲೇಖ ನೆನಪಾಗುತ್ತದೆ. ಇಂದು ವಿಶ್ವಾದ್ಯಂತ ಆಧುನಿಕರ ಕಲ್ಪನೆಯಲ್ಲಿ ಅಮೆರಿಕ ಭುವಿಯ ಸ್ವರ್ಗ. ಆದರೆ ಅದರ ಹೃದಯಭಾಗದಲ್ಲೇ ಇದ್ದೂ ಹದಿನೆಂಟನೇ ಶತಮಾನದಿಂದ ಮುಂದಿನ ಜೀವನಕ್ರಮವನ್ನು ಬುದ್ಧಿಪೂರ್ವಕವಾಗಿ ನಿರಾಕರಿಸಿದ ಒಂದು ಸಮುದಾಯವೇ ಇದೆ. ಬೈಷ್ಣೋಯಿಗಳಾದರೂ ಹಾಗೇ ಇದ್ದಾರೆ! ಬೈಷ್ಣೋಯಿಗಳೆಂದರೆ ಒಂದು ಜೀವನಕ್ರಮವನ್ನು ಸೂಚಿಸುವ ಲೆಕ್ಕ; ನಮ್ಮ ವೈಷ್ಣವ ಪಂಥದವರೇನೂ ಅಲ್ಲ ಎನ್ನುವುದು ನನಗಂತೂ ಮೊದಲು ಕೇಳಿಯೇ ಗೊತ್ತಿರಲಿಲ್ಲ! (ಬೇಕಾದರೆ ಮೂರು `ಅ’ಕಾರ ಸೇರಿ ರೂಪುಗೊಂಡ ನಮ್ಮ `ಅತ್ರಿ’ ಇದ್ದ ಹಾಗೆ!), ಮಾಯಾದೀಪದ ರಕ್ಕಸ ಕ್ಷಣಾರ್ಧದಲ್ಲಿ ನಭೂತೋ ಎನ್ನುವ ಅರಮನೆ ಮಾಡಿಕೊಡುವಾಗ ಒಂದು ಕಿಟಕಿ ಮಾತ್ರ ಕಚ್ಚಾ ಉಳಿಸಿದ ಎಂದು ಕಥೆಯಲ್ಲಿ ಓದಿದ್ದು ನೆನಪಾಗುತ್ತದೆ. ಇದು ಪರೋಕ್ಷವಾಗಿ ಪರಿಪೂರ್ಣತೆ ಎಂಬುದಿಲ್ಲ ಎಂದೂ ಸೂಚಿಸುತ್ತದೆ. ಹಾಗೇ ಮರುಭೂಮಿಗೆ ಮಾರುಹೋಗಿ ಆರು ಕಂತುಗಳಲ್ಲಿ ಸಾಕಷ್ಟು ವಿವರವಾಗಿಯೇ ಕಥಿಸಿದ ವಿದ್ಯಾ, ಇದು ಮುಗಿಯುವಂತದ್ದಲ್ಲ “ಮತ್ತೆ ಹೋಗಬೇಕು” ಎನ್ನುವುದನ್ನು ಕೊನೆಯಲ್ಲಿ ನವಿರಾಗಿ ಸೂಚಿಸುತ್ತಾರೆ. ಆ ಸನ್ನಿವೇಶ ನೋಡಿ…
ಉಪಾಧ್ಯರ ಕುಟುಂಬ ವಿಮಾನದಿಂದಿಳಿದ ಮೊದಲಲ್ಲಿ ಕಾಣಿಸಿದ ದಾರಿ ಬದಿಯ ಕೆಲವು ಭಿತ್ತಿ ಚಿತ್ರಗಳನ್ನು ವಿದ್ಯಾ ಬಯಸುತ್ತಾರೆ. ಮನೋಹರ್ “ಹೋಟೆಲಿಗೆ ಹೋದ ಮೇಲೆ, ಡಿಕ್ಕಿಯ ಸೂಟ್ ಕೇಸಿನಿಂದ ಕ್ಯಾಮರ ಹೊರ ತೆಗೆಯಬೇಕಷ್ಟೆ” ಎಂದು ನಿಜವನ್ನೇ ಹೇಳುತ್ತಾರೆ. ಆದರೆ “ಹಿಂದೆ ಬರುವಾಗ ಹಿಡಿಯುವ” ಆಶ್ವಾಸನೆ ಕೊಡುವುದರಲ್ಲಿ ನಮ್ಮ ರಾಜಕಾರಣಿಗಳಿಗೆ ಸಾಟಿಯಾಗುತ್ತಾರೆ. ಅಂದರೆ, ಪ್ರವಾಸ ಮುಗಿಸಿದ ಕೊನೆ ಸವಾರಿಯಲ್ಲಿ ಮತ್ತೆ ಆ ಭಿತ್ತಿ ಚಿತ್ರಗಳೆದುರು ಇವರ ಕಾರು ಓಡುವಾಗ, ವಿದ್ಯಾ ಇನ್ನೊಮ್ಮೆ ಕಿವಿ ಕಚ್ಚುತ್ತಾರೆ. ಆದರೆ ಈಗಲೂ ಕ್ಯಾಮರಾ ಸೂಟ್ ಕೇಸಲ್ಲಿ ಪ್ಯಾಕಾಗಿ ಡಿಕ್ಕಿಯೊಳಗಿತ್ತು; ಮನೋಹರ ಸೋಲುತ್ತಾರೆ. ಆದರೆ ಬರಿಯ ಆ ಫೋಟೋ ಒಂದರ ನೆಪಕ್ಕಾದರೂ “ಮತ್ತೆ ಜೋಧಪುರಕ್ಕೆ ರೆಡಿ” ಎನ್ನುವ ಒಂದು ನುಡಿಯೊಡನೆ ಇವರ ಪ್ರವಾಸದ ಯಶಸ್ಸು, ಸಂತೋಷಗಳು ನನ್ನನ್ನು ಗಾಢವಾಗಿ ತಟ್ಟಿತು.
`ಮರುಭೂಮಿಗೆ ಮರುಳಾದವರು’ ಈ ಬರೆಹ ಈಗ ವಿ-ಪುಸ್ತಕವಾಗಿಯೂ ಸಾರ್ವಜನಿಕಕ್ಕೆ ಲಭ್ಯ. ಇದು ಒಟ್ಟು ರೂಪುಗೊಂಡ ಹಿನ್ನೆಲೆಯನ್ನೂ ನಾನಿಲ್ಲಿ ತುಸು ವಿವರದಲ್ಲಿ ಹೇಳಲೇಬೇಕು. ನಮ್ಮ ಕುಟುಂಬ ಮಿತ್ರರಾದ ಡಾ| ಮಂಟಪ ಮನೋಹರ ಉಪಾಧ್ಯ (ಪಶುವೈದ್ಯ), ಅವರ ಹೆಂಡತಿ ಡಾ| ವಿದ್ಯಾ (ದಂತ ವೈದ್ಯೆ) ಮತ್ತು ಅವರ ಮಗ ಸುಧನ್ವ (ಕಲಿಕೆಯಲ್ಲಿರುವ ಪಶುವೈದ್ಯ) ಕೆಲವು ತಿಂಗಳ ಹಿಂದೆ ತಮ್ಮ ವಿಭಿನ್ನ ಜವಾಬ್ದಾರಿ ಮತ್ತು ಬಿಡುವುಗಳೊಡನೆ ತುಂಬಾ ಕೊಸರಾಡಿ ವಾರ ಕಾಲ ರಾಜಸ್ತಾನದ ಕೆಲವೊಂದು ಭಾಗ ತಿರುಗಾಡಿ ಬಂದ ಸುದ್ಧಿ ಸಿಕ್ಕಿತು. ಈ ಕುಟುಂಬ ಕಲೆ, ಸಾಹಿತ್ಯ, ಸಾರ್ವಜನಿಕ ಪ್ರೀತಿಗಳೊಡನೆ ಒಳ್ಳೇದನ್ನೆಲ್ಲಾ ಗ್ರಹಿಸಿ ಸಂತೋಷಿಸುವ ಮುಕ್ತ ಮನಸ್ಸೂ ಹೊತ್ತವರಾದ್ದರಿಂದ ಮಾಮೂಲೀ ಭಾಷೆಯಲ್ಲಿ “ಮಝಾ ಮಾಡಿ ಬಂದ್ರಾ” ಎಂದು ನಾನು ಕೇಳಲಿಲ್ಲ. “ಮನೋಹರ್ ಹೇಗೂ ಒಳ್ಳೆಯ ಛಾಯಾ ಚಿತ್ರಗ್ರಹಣ ಮಾಡಿಯೇ ಇರುತ್ತಾರೆ. ಸಾಹಿತ್ಯ ಪಾಕ ನಿಮ್ಮದಾಗಲೇಬೇಕು. ಸುಧನ್ವನದ್ದು ಒಗ್ಗರಣೆ ಅವಶ್ಯ ಸೇರಿಸಿ” ಎಂದು ವಿದ್ಯಾರನ್ನು ಒತ್ತಾಯಪೂರ್ವಕವಾಗಿಯೇ ಕೇಳಿಕೊಂಡೆ. ವಿದ್ಯಾರಿಗೆ ಮೂರು ಮನೆ. ಗಂಡ, ಮಗನೊಡನೆ ನಿತ್ಯದ ಒಡನಾಟ, ವಾಸ ಇತ್ಯಾದಿಗಳ ಮೂಲ ಮನೆ – ಮಧ್ಯಮಾವತಿ, ಮಂಗಳೂರಿನಲ್ಲೇ ಇದೆ.
ಅಲ್ಲೇ ಅಂಗಳದಲ್ಲಿ ಇವರ ಅಚ್ಚುಕಟ್ಟಾದ ದಂತವೈದ್ಯ ಚಿಕಿತ್ಸಾಲಯವೂ ಇದೆ. ದೂರವಾಣಿಸಿ ಸಮಯಾನುಕೂಲ ಕೇಳಿಕೊಂಡಷ್ಟೇ ಬರುವ `ದಂತ ಭಗ್ನ’ರಿಗೆ ವಿದ್ಯಾ ಬಹಳ ಮುತುವರ್ಜಿಯಿಂದ `ನಗೆ’ ನೀಡುತ್ತಿರುತ್ತಾರೆ. ವಿದ್ಯಾ ಮಂಗಳೂರಿನ ವಿವಿಧ, ಕೇರಳಾದಿ ಹೊರರಾಜ್ಯಗಳಲ್ಲೂ ಹಲವು ದಂತವೈದ್ಯ ವಿದ್ಯಾ ಸಂಸ್ಥೆಗಳಲ್ಲಿ ಅಧ್ಯಾಪನ ಪ್ರಧಾನವಾದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ಇರುತ್ತಾರೆ. ಅಂತಲ್ಲಿಗೆ ಆಗೀಗ ಒಂದು ದಿನದ ಮಟ್ಟಿಗೆ ಮನೋಹರ್ ಜತೆಗೊಟ್ಟದ್ದಿದೆಯಾದರೂ ದಿನಗಟ್ಟಲೆ, ಕೆಲವೊಮ್ಮೆ ವಾರಗಟ್ಟಲೆ ಹೊರ ಊರುಗಳಲ್ಲಿ ಸ್ವತಂತ್ರವಾಗಿ ನಿಂತು ಕೆಲಸ ಪೂರೈಸುವ ವಿದ್ಯಾರಿಗೆ ಅಲ್ಲೆಲ್ಲ `ಎರಡನೇ ಮನೆ’ ಅನಿವಾರ್ಯ ಕೂಡಾ.
ಇವರ ಮಗರಾಯ `ವೀರ’ ಸುಧನ್ವ ಅಪ್ಪನ ಕೆಲಸವನ್ನು ಪ್ರೀತಿಸಿದವ. ಪದವಿಪೂರ್ವ ಓದಿನ ಕಾಲದಲ್ಲೇ ಸುಲಭ ದುಡ್ಡು (-ಅಂದರೆ), ಸುಂದರ ಕನಸು, ವಿದೇಶೀಮೋಹ ಮುಂತಾಗಿ ಅನೇಕ ದಾರಿಗಳಿದ್ದರೂ ಅವನ್ನನುಸರಿಸಲು ಅಂಕಪಟ್ಟಿಯ ಯೋಗ್ಯತೆ ಇದ್ದರೂ (ಅಲ್ಲದಿದ್ದರೂ ಹಣಕಾಸಿನಲ್ಲಿ ಉಪಾಧ್ಯರು ಕೈ ಕಟ್ಟಿ ಕುಳಿತವರಲ್ಲ) ಈತ ಆರಿಸಿದ್ದು ಮತ್ತು ಯೋಗ್ಯತೆಯಿಂದಲೇ ಗಳಿಸಿದ್ದು ಪಶುವೈದ್ಯಕೀಯದ ಕಲಿಕೆ. ಹೇಳುವವರಿಗೆ “ಓ ಬೆಂಗಳೂರು ಕಾಲೇಜು ಅಲ್ವಾ. ದೊಡ್ಡಪ್ಪ – ಮಂಟಪ ಪ್ರಭಾಕರ ಉಪಾಧ್ಯರ ಮನೆ ಇದೆ.” ಪ್ರಭಾಕರರ ಕುಟುಂಬ ಪ್ರೀತಿಯೂ ಕಡಿಮೆಯದ್ದೇನಲ್ಲ. ಆದರೆ ನಗರದ ಅಂತರ ಹಾಗೂ ಓಡಾಟದ ಅವ್ಯವಸ್ಥೆಗಳು ತಿಳಿದವರು ಯಾರೂ ನಿತ್ಯ ಬೆಂಗಳೂರಿನ ಎರಡು ಧ್ರುವಗಳ ನಡುವಣ ಪ್ರಯಾಣವನ್ನು ಬಯಸರು. “ಸರಿ, ಕಾಲೇಜಿಗೆ ಹಾಸ್ಟೆಲ್ ಇದೆಯಲ್ಲಾ” ಎಂದರೆ ಸುಧನ್ವ `ನೇತಿ’ ಎನ್ನುವ ಜಾತಿ! ಆತನಿಗೆ ಸೋದರ ಮಾವ – ಡಾ| ಚಕ್ರಪಾಣಿಯವರ ಆದರ್ಶ (ಗುರುತ್ವ ಕೂಡಾ ಇರಬೇಕು), “ಹಾಸ್ಟೆಲ್ಲಿನಲ್ಲಿ ಸಂಗೀತ ಕಲಿಕೆ ಮುಂದುವರಿಸುವುದು ಕಷ್ಟ” ಅನಿಸಿತು. ಹಾಗಿರುವಾಗ ಪೀಜಿ (ಪೇಯಿಂಗ್ ಘೋಸ್ಟ್!) ಎಚ್ಚೆಸ್ (ಹೋಮಿಷ್ಟೇ) ಹುಡುಕುವ ಪ್ರಶ್ನೆಯೂ ಇಲ್ಲ. ಕಾಲೇಜಿನಿಂದ ಕೂಗಳತೆ ದೂರದಲ್ಲೇ ಪುಟ್ಟ ಮನೆ ಮಾಡಿದ್ದಾರೆ. ಹುಡುಗ ಸ್ವಯಂಪಾಕ ನಡೆಸಿದ್ದಾನೆ. ಅವಶ್ಯ ಓಡಾಟಗಳಿಗಾಗಿ ಡೊಂಕು ಬೆನ್ನಿನ ಯಮನಂಥ ಬೈಕೋ ಕನಿಷ್ಠ ಸ್ಕೂಟಿಯೋ ಕೇಳುವುದು ಬಿಟ್ಟು ಸಾಮಾನ್ಯ ಸೈಕಲ್ ಇಟ್ಟುಕೊಂಡಿದ್ದಾನೆ. ಆದರೂ ಆತನ ಸಣ್ಣಪುಟ್ಟ ಅನಾರೋಗ್ಯ, ಪರೀಕ್ಷೆ ಮುಂತಾದವಕ್ಕೆ ಮಾತೆ-ವಿದ್ಯಾ ಆ ಮನೆಯಲ್ಲಿ ಮೊಕ್ಕಾಂ ಮಾಡುವುದು ಇದ್ದೇ ಇದೆ.
ಈ ಎಲ್ಲಾ ಸಂಭಾಳಿಕೆಯ ನಡುವೆ ವಿದ್ಯಾ ನನ್ನ ಮಾತನ್ನು ಗಂಭೀರ ಸವಾಲಾಗಿ ಸ್ವೀಕರಿಸಿ ಸುಂದರ ಕಥನ ಹೆಣೆದು ಕೊಟ್ಟಿದ್ದಾರೆ. ನಿರೀಕ್ಷೆಯಂತೆ ಮನೋಹರ(ರ)ವಾದ ಅಸಂಖ್ಯ ಚಿತ್ರ, ಚಲಚಿತ್ರಗಳ ಸಾಂಗತ್ಯವೂ ಸಿಕ್ಕಿತು. ಅವನ್ನು ಇಲ್ಲೇ ಕಳೆದ ಆರು ಶುಕ್ರವಾರಗಳ ಧಾರಾವಾಹಿಯಾಗಿ ಹರಿಸಿದ್ದಾಯಿತು. ಈಗ ಅದನ್ನೇ ಹೆಚ್ಚಿನ ಚಿತ್ರಗಳ ಸಹಿತ ವಿ-ಪುಸ್ತಕವಾಗಿಯೂ ಇಲ್ಲಿ ಮಡುಗಟ್ಟಿಸಿದ್ದೇವೆ. (ನಿಮಗೆ ಗೊತ್ತಲ್ಲಾ – ನನ್ನ ಜಾಲತಾಣದಿಂದ ಹಿಡಿದು ಎಲ್ಲ ವಿದ್ಯುನ್ಮಾನ ಸರ್ಕಸ್ಸಿನ ಸಂಪೂರ್ಣ ನಿರ್ವಾಹಕ, ಮಗ ಅಭಯಸಿಂಹ.) ಹೀಗೆ ಪ್ರಕಟಿಸಲು ಅವಕಾಶ ಕೊಟ್ಟು, ಉಚಿತ ಜ್ಞಾನ ಪ್ರಸರಿಸುವ ನಮ್ಮ ಕೈಂಕರ್ಯಕ್ಕೆ ಬಲ ಕೊಟ್ಟ ಅವರೆಲ್ಲರಿಗೂ ಕೃತಜ್ಞ. ಇದನ್ನು ಇಲ್ಲೇ ಅಂತರ್ಜಾಲದಲ್ಲೇ ಅಥವಾ ನಿಮ್ಮ ಯಾವುದೇ ಸಮರ್ಥ ಸಲಕರಣೆಗಳಿಗೆ ಇಳಿಸಿಕೊಂಡು ವಿರಾಮದಲ್ಲೇ ಓದಬಹುದು. ಇತರ ಓದುಗರ ಕಾಲಿಕ ಪ್ರತಿಕ್ರಿಯೆ ಸಹಿತ ನೋಡುವ ಆಸೆಯಿರುವವರಂತೂ ಎಂದೂ ನನ್ನ ಜಾಲತಾಣದ ಹಿಂದಿನ ನಮೂದುಗಳಲ್ಲಿ ವಿಹರಿಸಲು ಸ್ವತಂತ್ರರೇ.
ಈಗ ನಿಮ್ಮ ಚೌತಿ ವಿಶೇಷಾಂಕಕ್ಕೆ ಇಲ್ಲಿ ಚಿಟಿಕೆ ಹೊಡೆಯಿರಿ.
ಇ-ಪುಸ್ತಕ ತುಂಬಾ ಚೆನ್ನಾಗಿದೆ, ಲೇಖಕಿ ಡಾಕ್ಟರಮ್ಮಗೆ, ಡಾಕ್ಟರ್ ಉಪಾಧ್ಯರಿಗೆ, ಮತ್ತು ಚಿ, ಸುಧನ್ವಗೆ ಹಾಗೂ ಪ್ರಕಾಶಕರಾದ ಮೀಸೆ ಮಾಮ ಮತ್ತು ಚಿ. ಅಭಯ ಇವರಿಗೆ.
ನಾನು ಇತರ ಓದುಗರ ಜತೆಗೆ ಚಿರ ಋಣಿ.
ಮನಸ್ಸಾದಾಗ ಮರುಭೂಮಿಯ ಯಾತ್ರೆ ಮಾಡಿ ಬರುತ್ತೇನೆ.
ವಂದನೆಗಳು.
– ಪೆಜತ್ತಾಯ ಎಸ್. ಎಮ್.
BEAUTIFUL !
ವಸ್ತು – ವಿಷಯ ನಿಷ್ಠ , ಪ್ರಾಮಾಣಿಕತೆ , ಪಾರದರ್ಶಕತೆಯ ಶ್ರೀ ಅಶೋಕವರ್ಧನ ಮತ್ತು ಅವರ ಕುಟುಂಬ ನಮಗೆ ಎರಡು ದಶಕಕ್ಕೂ ಮಿಕ್ಕಿ ಸಮಯದಿಂದ ಆತ್ಮೀಯರು . ಅವರ ಒತ್ತಾಸೆ ಮತ್ತು ಪ್ರೋತ್ಸಾಹದಿಂದ ಈ ಪ್ರವಾಸ ದಾಖಲಾಯಿತು. ಪ್ರತೀ ಕಂತಿಗೂ ಇ – ಮೇಲ್ , ಫೇಸ್ ಬುಕ್ಕಿನಲ್ಲಿ ಓದುಗರನ್ನು ನೆನಪಿಸಿದ್ದಲ್ಲದೆ , ಅಭಯಸಿಂಹ ಅವರ ನೆರವಿನೊಂದಿಗೆ ಇ- ಪುಸ್ತಕದ ರೂಪ ಕೊಟ್ಟರು . ಎಲ್ಲವೂ ನಮ್ಮ ನಿರೀಕ್ಷೆಗೆ ಮೀರಿದ್ದು . ಪ್ರಕ್ರತಿಯೇ ದೇವರು, ವೈವಿಧ್ಯವೇ ಸಮ್ರದ್ಧಿ ಎಂಬಷ್ಟೇ ಭಾವದಲ್ಲಿ “ಮಾರು ಹೋದ ಮರುಭೂಮಿ” ಯ ಕಡೆಗೆ ನಡೆದ ನಮ್ಮ ಮರುಪಯಣಕ್ಕೆ ಅನೇಕ ಓದುಗರು ಸಹ ಪ್ರವಾಸಿಗರಾದದ್ದು ನಮ್ಮ ಸುಯೋಗ . ನಿಮ್ಮೆಲ್ಲರ ಪ್ರೋತ್ಸಾಹ – ಪ್ರತಿಕ್ರಿಯೆಗಳು ನಮ್ಮ ಸಂತಸವನ್ನು ಹೆಚ್ಚಿಸಿವೆ . ಈ ಅವಕಾಶ – ಅನುಭವಕ್ಕೆ ನಾವು ಅಭಾರಿಗಳು .
ವಿದ್ಯಾ , ಮನೋಹರ , ಸುಧನ್ವ
ಇ-(ಈ) ಪುಸ್ತಕ ವರ್ಣರಂಜಿತ ಚಿತ್ರಗಳನ್ನು ಒಳಗೊಂಡು ಚೆನ್ನಾಗಿದೆ. ನೋಡಿ ಖುಷಿಯಾಯಿತು.
ಮಾಲಾ
ನಿಮ್ಮ ಸಹಕಾರ ಇಲ್ಲದಿರುತ್ತಿದ್ದರೆ ರಾಜಸ್ಥಾನವನ್ನು ನೋಡಿದ ಭಾಸವಾಗುತ್ತಿರಲಿಲ್ಲ. ನಿಮಗೆ ಧನ್ಯವಾದಗಳು.
ಡಾ| ವಿದ್ಯಾಮನೋಹರ ಅವರ ಪ್ರವಾಸ ಕಥನ `ಮರುಭೂಮಿಗೆ ಹೋದವರು’ ಕೃತಿ ನನ್ನ ಬಹಳ ವರ್ಷಗಳ ಕನಸನ್ನುನನಸಾಗಿಸಿತು. ಹೇಗೆ ಗೊತ್ತೇ? ನಾನು ತಿರುಬೋಕಿ. ಪ್ಯಾಕೇಜ್ ಟೂರಿನಲ್ಲಿ ನನ್ನ ಪರ್ಸಿನ ಶಕ್ತಿಗನುಸಾರವಾಗಿ ಒಂದಷ್ಟು ಚಾರಿತ್ರಿಕ ಸ್ಥಳಗಳನ್ನು, ಪವಿತ್ರ ಕ್ಷೇತ್ರಗಳನ್ನು ಸಂದರ್ಶಿಸಿದ ಸುಖ, ಕಷ್ಟ ಎರಡೂ ಅನುಭವಿಸಿದ್ದೇನೆ. ರಾಜಸ್ತಾನದ ಗಡಿಯನ್ನು ಇಣುಕಿದರೂ ಒಳಗೆ ಹೋಗಿರಲಿಲ್ಲ. ಹೋಗಬೇಕೆಂಬ ಆಶೆಗೆ ಕಾವುಕೊಡುತ್ತಲೇ ಇದ್ದೆ. ಪ್ಯಾಕೇಜ್ ಟೂರಿನಲ್ಲಿ ಹೋಗುವುದಿದ್ದರೂ ಯಾರಾದರೂ ಪ್ರವಾಸದಲ್ಲಿ ಆಸಕ್ತಿಯುಳ್ಳ ಗೆಳತಿಯರು ಸಿಗುತ್ತಾರೋ ಎಂದು ಕಾಯುತ್ತಿದ್ದೆ. ನಾನು ನನ್ನಷ್ಟಕ್ಕೆ ಕಾದದ್ದೇ ಬಂತು, ಕಳೆದ ತಿಂಗಳು ನಮ್ಮ ವಿಜಯಲಕ್ಷ್ಮಿ ಶೆಟ್ಟಿಯವರು ರಾಜಸ್ತಾನದ ಪ್ರವಾಸ ಮುಗಿಸಿ ಬಂದುದನ್ನು ನಮ್ಮ ಸಂಘದಲ್ಲಿ ಘೋಷಿಸಿದಾಗ ನನಗೆ ಹೊಟ್ಟೆಯೆಲ್ಲಾ ಉರಿಯಿತು. ಏನು ಮಾಡುವುದು? ಈ ಉರಿ ತಣ್ಣಗಾದದ್ದು ವಿದ್ಯಾಅವರ ಪ್ರವಾಸ ಕಥನ ಓದಿದ ಮೇಲೇ. ಪ್ಯಾಕೇಜ್ ಟೂರಿನಲ್ಲಿ ಹೋದಾಗ ನೋಡಲು ಸಾಧ್ಯವಿಲ್ಲದ ಅನೇಕ ಮಹತ್ವದ ಸ್ಥಳಗಳನ್ನು ಇಲ್ಲಿ ಕಾಣಿಸಿದ್ದಾರೆ. ನಿಜವಾದ ಪ್ರವಾಸದ ಸುಖ ಸಿಗಬೇಕಾದರೆ ಹೀಗೆ ತಮಗಿಷ್ಟ ಬಂದ ಸ್ಥಳಗಳನ್ನು ಇಷ್ಟ ಬಂದಷ್ಟು ಹೊತ್ತು ನೋಡುವುದರಿಂದ ಮಾತ್ರ ಸಿಗುತ್ತದೆ. ಎಷ್ಟೋ ಸಲ ಈ ಪೇಕೇಜ್ ಟೂರ್ ಹೋದ ಪುಟ್ಟ ಬಂದ ಪುಟ್ಟ ಎಂಬಂತಾದದ್ದೇ ಹೆಚ್ಚು. ಆದರೂ ನಮ್ಮಂಥವರಿಗೆ ಸುಲಭದಲ್ಲಿ ಕೈಗೆಟಕುವುದು ಅವೇ ಟೂರ್ ಗಳಲ್ಲವೇ?
ಡಾ ವಿದ್ಯಾ ಅವರು ಪ್ರಕೃತಿ, ಪರಿಸರ, ಶಿಲ್ಪ. ಸಂಗೀತ, ಆಚಾರ, ವಿಚಾರ, ಆಹಾರ ಸಂಸ್ಕೃತಿ ಮುಂತಾದ ಎಲ್ಲ ವಿಷಯಗಳ ಬಗ್ಗೆಯೂ ಒಂದು ಸೂಕ್ಷ್ಮ ನೋಟದ ಮೂಲಕ ಮರುಭೂಮಿಯಲ್ಲಿ ಸುತ್ತಾಡಿದ್ದಾರೆ. ಅಲ್ಲಿನ ಜನಪದ ಸಿರಿಯನ್ನು ವೀಕ್ಷಿಸುವ ಅವಕಾಶ ಪಡೆದಿದ್ದಾರೆ. ಇವೆಲ್ಲ ಒಂದು ಪ್ರದೇಶದ ವೈಶಿಷ್ಟ್ಯಗಳೇನೆಂಬುದನ್ನು ಚಿತ್ರಗಳ ಸಹಿತ ಕೊಟ್ಟದ್ದು ತುಂಬಾ ಆಪ್ತವೆನ್ನಿಸಿತು.
ನನಗೆ ರಾಜರ ದೊಡ್ಡ ದೊಡ್ಡ ಅರಮನೆಗಳೊಳಗೆ ನಡೆದಾಡುವಾಗ ಯಾವಾಗಲೂ ಒಂದು ಪ್ರಶ್ನೆ ಮನಸ್ಸಿನಲ್ಲಿ ಗುದ್ದಿಕೊಂಡೇ ಹೊರಬರುತ್ತಿತ್ತು. ಆದರೆ ಕೇಳಿದರೆ ಎಲ್ಲಿ ನಗೆಪಾಟಲಾಗುತ್ತೇನೋ ಎಂದು ಗಂಟಲಲ್ಲಿ ಕರಗಿಸಿಬಿಡುತ್ತಿದ್ದೆ.ಈ ಅರಮನೆಯೊಳಗೆ ವಾಸಿಸುವವರು ಸ್ನಾನ ಮುಂತಾದ ನಿತ್ಯ ವಿಧಿಗಳಿಗೆ ಏನು?ಎಲ್ಲಿ, ಹೇಗೆ ವ್ಯವಸ್ಥೆ ಮಾಡುತ್ತಿದ್ದರು ಎಂಬುದನ್ನು ಯಾರೂ ಯಾವ ಗೈಡುಗಳೂ ಹೇಳುವುದಿಲ್ಲ. ಒಮ್ಮೆ ಆಗ್ರಾದ ಕೋಟೆಯಲ್ಲಿ ಗೈಡ್ ವಿವರಿಸುತ್ತಿದ್ದಾಗ ಅಂಜುತ್ತಾ ಅಳುಕುತ್ತಾ ಅವನಲ್ಲಿ ಕೇಳಿದ್ದೆ. ಅದಕ್ಕೆ ಅವನು ಅರಮನೆಯೊಳಗೆ ಯಮುನಾ ನದಿಯ ನೀರನ್ನು ಕೊಳವೆಗಳ ಮೂಲಕ ರಾಜರು ಹರಿಯ ಬಿಡುತ್ತಿದ್ದರೆಂದು ಒಂದು ಜಾಗವನ್ನು ತೋರಿಸಿದ. ನನಗದು ಅರ್ಥವಾಗಲಿಲ್ಲ. ನಾನು ಬಯಸಿದ್ದು ಅದಲ್ಲ.. ಇವಳಿಗೆ ಅರಮನೆಗೆ ಬಂದು ಕಕ್ಕುಸು ಗುಂಡಿಯ ಕನಸೇ? ಎಂದು, ಛೀ, ಥೂ ಎಂಬ ಭಯ ಕಾಡಿತು. ಮಲ ಹೊರುವ ವ್ಯವಸ್ಥೆ ಬೇಜಾನ್ ಆಗಿ ಇದ್ದ ಕಾಲದಲ್ಲಿ ಈಗಿನ ಆಧುನಿಕ ಶೌಚ ವ್ಯವಸ್ಥೆ ಇದ್ದಿರಲಾರದು ಎಂದು ನನ್ನ ಊಹೆ. ಯಾವ ಶಾಸನ, ಕಾವ್ಯ, ಪುರಾಣ, ಇತಿಹಾಸ ಕೃತಿಗಳಲ್ಲೂ ಈ ವ್ಯವಸ್ಥೆಯನ್ನು ನಿರ್ಲಕ್ಷಿಸಿದರಲ್ಲಾ. ಇವರ ಮಡಿವಂತಿಕೆಗೆ ಮರುಗುವುದಲ್ಲದೆ ಬೇರೇನೂ ಮಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯುಂಟಾಗಿದೆ.
ಬಹುಶಃ ರಾಜಸ್ತಾನದಲ್ಲು ಹುಟ್ಟಿ ಬೆಳೆದವರೂ ನೋಡಿರದ ಸ್ಥಳಗಳಲ್ಲೆಲ್ಲಾ ಸುತ್ತಾಡಿ ಮರುಭೂಮಿಯ ಬಗ್ಗೆ ಮಾರು ಹೋದವರ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ಈ ಕೃತಿ ಮನಸ್ಸಿಗೆ ಮುಟ್ಟುವಂತೆ ವಿವರಿಸಿದೆ. ಹೇಮ್ಜೀ ಎಂಬ ಮಾರ್ಗದರ್ಶಿಗೆ ಇಂಥ ಹುಚ್ಚು ಮನಸ್ಸಿನ ಪ್ರವಾಸಿಗಳೂ ಇರುತ್ತಾರಲ್ಲಾ ಎಂದು ಅಚ್ಚರಿಯಾವುದು ಸಹಜ ತಾನೇ? ಪ್ರವಾಸದಲ್ಲಿ ಉಂಟಾಗುವ ಎಡವಟ್ಟುಗಳನ್ನು ಬಹಳ ವಿಡಂಬನಾತ್ಮಕವಾಗಿ ವರ್ಣಿಸುವ ಶಕ್ತಿ ವಿದ್ಯಾ ಅವರಿಗಿದೆ. ಆದುದರಿಂದ ಅವರ ಪ್ರವಾಸದೊಂದಿಗೆ ನಾವೂ ಅವರ ನೆರಳಿನಂತೆ ಹಿಂಬಾಲಿಸಿಕೊಂಡು ಹೋಗುತ್ತೇವೆ. ಇದು ಅವರ ಬರಹಕ್ಕಿರುವ ಶಕ್ತಿ. ಬ್ಲಾಗಿನಲ್ಲಿ ಓದಲಾರದವರಿಗೆ ಸುಖ ಪ್ರಯಾಣದ ಅನುಭವಗಳನ್ನು ನೀಡಿದ ವಿದ್ಯಾ ಅವರ ಈ ಕೃತಿ ಮತ್ತು ಅದನ್ನು ಚಿತ್ರಗಳಿಂದ ಅದೂ ವರ್ಣರಂಜಿತ ಇನ್ನಷ್ಟು ಸಂಪನ್ನಗೊಳಿಸಿದ ಡಾ| ಮನೋಹರ ಉಪಾಧ್ಯರ ಕ್ಯಾಮರಾ ಕಣ್ಣಿಗೂ ಅಭಿನಂದನೆಗಳು ಸಲ್ಲಲೇ ಬೇಕು.
ಶ್ರೀಮತಿರೋಹಿಣಿಯವರಿಗೆ ವಂದನೆಗಳು.ಪುರಾತನ ಭಾರತದಲ್ಲಿದ್ದ ಶೌಚ ವ್ಯವಸ್ಥೆಯಬಗ್ಗೆ ಸಿಕ್ಕಿದ ಕೆಲವು ಅಂಶಗಳನ್ನು ಇಲ್ಲಿ ಸಂಗ್ರಹವಾಗಿ ಹೇಳುತ್ತೇನೆ. (ಅಂತರ್ಜಾಲ, ಯೂಟ್ಯೂಬಿನಲ್ಲಿ ಎಷ್ಟೂ ವಿವರಗಳಿವೆ)
ಪುರಾತನ ಭಾರತದಲಿ ಆಧುನಿಕ ವ್ಯವಸ್ತೆಯಂತಹ ಸೌಚ ವ್ಯವಸ್ಥೆ ಇದ್ದುದು ಮಾತ್ರವಲ್ಲ , ಪ್ರಪಂಚಕ್ಕೆ ಈ ವ್ಯವಸ್ಥೆಯ ಪರಿಚಯವಾದದ್ದೂ ಇಲ್ಲಿಂದಲೇ! ಕ್ರಿ.ಪೂ ೫೦೦೦, ಅಂದರೆ ಸುಮಾರುಏಳು ಸಾವಿರ ವರ್ಷಗಳಷ್ಟು ಹಿಂದಿನ ಶಹರಗಳ ರಚನೆಯಲ್ಲಿ ತ್ಯಾಜ್ಯ ನೀರನ್ನು ಮುಚ್ಚಿದ ಕೊಳವೆಗಳಲ್ಲಿ ಸಾಗಿಸಿ ಸಂಸ್ಕರಿಸುವ ಕ್ರಮ ಬಳಕೆಯಲ್ಲಿತ್ತೆನ್ನುವುದಕ್ಕಿ ಹರಪ್ಪ, ಮೊಹೆಂಜದಾರೋ, ಗುಜರಾತಿನ ದೊಲವಿರಾ ಎಂಬ ಕಡೆಗಳಲ್ಲಿ ಉತ್ಖನನ ನಡೆದಾಗ ಸಿಕ್ಕಿದ ವಸ್ತುಗಳು ಸಾಕ್ಷಿಗಳಾಗಿವೆ. ಚಾಣಕ್ಯವನ ಅರ್ಥ ಶಾಸ್ತ್ರದಲ್ಲಿನಾಗರಿಕ ಜೀವನದ ವಿವರಗಳನ್ನುಹೇಳುತ್ತ ಶೌಚ ವ್ಯವಸ್ಥೆಯ ಬಗ್ಗೆ ಪಾಲಿಸಬೇಕಾದ ನಿಯಮಗಳನ್ನು, ಅದಕ್ಕೆ ತಪ್ಪಿದವರನ್ನು ನಡೆಸಿಕೊಳ್ಳಬೇಕಾದರೀತಿಯನ್ನೂ ತಿಳಿಸಲಾಗಿದೆ.
ಇತಿಹಾಸಕಾರ ಉಪೇಂದ್ರ ಸಿಂಗ್ ಪ್ರಕಾರ ಭಾರತಲ್ಲಿದ್ದ ಕೊಮೊಡ್ಗಳ ಜತೆ, ನೀರನ್ನು ಉಪಯೋಗಿಸುವುದಕ್ಕಾಗಿ `ಲೋಟ’ ಎಂಬ ಸಾಧನವನ್ನು ಅಳವಡಿಸಲಾಗುತ್ತಿತ್ತು!
ಯುರೋಪ್ ಮತ್ತು ಆಸ್ಟ್ರೆಲಿಯಾಗಳಲ್ಲಿ ನಾಲ್ಕೈದು ಶತಮಾನಗಳ ಹಿಂದಿನವರೆಗೂ `ಬಕೆಟ್’ ಟಾಯಿಲೆಟ್ಗಳಷ್ಟೇ ಇದ್ದವು. ಇದರಲ್ಲಿ ನೀರಿನ ಉಪಯೋಗ, ತ್ಯಾಜ್ಯ ನೀರಿನ ವ್ಯವಸ್ಥೆಗಳಿರುವುದಿಲ್ಲ. ಈ ಮಲತುಂಬಿದ ಬಕೆಟ್ಟನ್ನು ಹೊತ್ತು ದೂರ ಸಾಗಿಸಲು night soilers (ತೋಟಿ) ಎಂಬ ವೃತ್ತಿ-ವ್ಯಕ್ತಿಗಳನ್ನೇ ನೇಮಕ ಮಾಡಿಕೊಂಡಿದ್ದರು. ಬ್ರಿಟಿಶರು ಭಾರತದಲ್ಲಿ ಕಟ್ಟಿಸಿದ ಮೊದಲ ಬಂಗ್ಲೆಗಳಲ್ಲಿ (ಕೊಲ್ಕೊತ್ತಾದಲ್ಲಿವೆ) ಬಕೆಟ್ ವ್ಯವಸ್ಥೆ ಮತ್ತಲ್ಲಿಂದ ಮಲಹೊರುವವರಿಗಾಗಿ ಪ್ರತ್ಯೇಕ ಸುರುಳಿ ಮೆಟ್ಟಲುಗಳು ಕಾಣಬಹುದು. ಆ ಮೆಟ್ಟಲುಗಳನ್ನು ಬೇರೆ ಯಾರೂ ಬಳಸುತ್ತಿರಲಿಲ್ಲವೆಂದೂ ಕೇಳಿದ್ದೇವೆ (ಮೈಲಿಗೆಯ ಹುಟ್ಟ್ತು!)
ದೆಹಲಿಯಲ್ಲಿ ಶೌಚವ್ಯವಸ್ಥೆಗೆ ಸಂಬಂಧಿಸಿದ ವಸ್ತುಗಳ ಸಂಗ್ರಹಾಲಯವೂ ಇದೆ.
ಪತ್ರದ ಮೂಲಕ ನಮ್ಮನ್ನು ಪ್ರೋತ್ಸಾಹಿಸಿದ ನಿಮಗೆ ನಮ್ಮ ಹೃದಯ ತುಂಬಿದ ಕೃತಜ್ಞತೆಗಳು.