(ಜಮ್ಮು ಕಾಶ್ಮೀರ ಪ್ರವಾಸ ೬)
ಮೂರನೇ ದಿನದ ಕಲಾಪ – ಸೋನ್ಮಾರ್ಗ್ ಮತ್ತು ಅದಕ್ಕೊಂದು ಕೊಸರು – ಒಂದು ಕೊಂಡರೆ ಒಂದು ಉಚಿತ ಎನ್ನುವಂತೆ, ಕೀರ್ ಭವಾನಿ. ಒಂದು ಲಕ್ಷ್ಯ, ಅಂದರೆ ಶಿಖರ ಎಂದಿಟ್ಟುಕೊಳ್ಳಿ, ಅದರ ಸಾಧನಾ ಮಾರ್ಗದಲ್ಲಿ ನಾಲ್ಕೆಂಟು ಬೆಟ್ಟ ಕಣಿವೆಗಳನ್ನು ಕ್ರಮಿಸುವುದು ವೈವಿಧ್ಯಮಯ ಅನುಭವಗಳಿಗೆ ತೆರೆದುಕೊಳ್ಳುವುದು ಸಂತೋಷದ ಸಂಗತಿ. ಶ್ರೀನಗರದಿಂದ ಸಾಮಾನ್ಯವಾಗಿ ಯಾವ ದಿಕ್ಕಿಗೆ ಮುಂದುವರಿದರೂ ಹಿಮ ಕವಿದ ಉತ್ತುಂಗಗಳು, ಭೋರ್ಗರೆವ ಕೊಳ್ಳಗಳು ನೋಡಿದಷ್ಟೂ ಮುಗಿಯದು, ಬೇಸರವೂ ಆಗದು. ಹಾಗೆಂದು ಎಲ್ಲವುಗಳ ಸವಿವರ ದರ್ಶನಕ್ಕಿಳಿಯುವುದಿದ್ದರೆ ಒಂದು ಜನ್ಮ ಸಾಕಾಗದು ಎಂಬ ಅರಿವು ಪ್ರವಾಸಿಗನಿಗೆ ಅವಶ್ಯ. ಆ ಲೆಕ್ಕದಲ್ಲಿ ಸೋನ್ಮಾರ್ಗ್ ಭೇಟಿ ಸ್ವಾರಸ್ಯಕರವಾಗಲಿಲ್ಲ.
ಸೋನ್ಮಾರ್ಗ್ ಶ್ರೀನಗರದಿಂದ ಅರೆವಾಸಿ ಉತ್ತರಕ್ಕೆ ಸಾಗಿ ಮತ್ತಷ್ಟೇ ಪೂರ್ವಕ್ಕೆ ಹೊರಳಿಕೊಳ್ಳುವ ಕಾರ್ಗಿಲ್, ಲೇಹ್ ಲದ್ದಕ್ ಮಾರ್ಗದ ಒಂದು ಅಮುಖ್ಯ ಸ್ಥಳ. ದಾರಿಯ ಎರಡೂ ಬದಿಗೆ ಹಿಮಶಿಖರದ ಸಾಲುಗಳು, ನಡುವಣ ಉದ್ದನ್ನ ಸಪುರ ತಟ್ಟಿನಲ್ಲಿ ಹಾವಾಡುತ್ತ ಸಾಂಗತ್ಯ ಕೊಡುವ ಸಿಂಧೂ ನದಿ. ಅಲ್ಲಲ್ಲಿ ನದಿ ಪಾತ್ರೆಗೆ ಜಾರಿ ಇಳಿದಂತಿದ್ದ ಭಾರೀ ಹಿಮ ರಾಶಿ.
ಅದು ಕೆಲವೆಡೆಗಳಲ್ಲಂತೂ ನದಿ ಪಾತ್ರೆಯನ್ನು ಪೂರ್ಣ ಮುಚ್ಚಿ ಈಚೆ ದಂಡೆಯನ್ನು ಮುಟ್ಟಿದ್ದು ಇತ್ತು. ಅಂಥಲ್ಲಿ ದಾರಿಯನ್ನು ಸಂಬಂಧಿಸಿದ ಇಲಾಖೆಯವರೇನೋ ಮುಕ್ತಗೊಳಿಸುತ್ತಾರೆ. ಅದೇ ನದಿಯಾದರೋ ಹಿಮದಡಿಯಲ್ಲಿ ಗುಹಾದಾರಿ ಮಾಡಿಕೊಂಡು ಮೂಲ ಪ್ರವಾಹವನ್ನು ಮುಂದುವರಿಸುತ್ತದೆ. ಇಂಥ ದೃಶ್ಯಗಳು, ಒಟ್ಟಾರೆ ಹಿಮನಾಡಿನ ವೈವಿಧ್ಯಗಳು ನಮ್ಮ ಮಾರ್ಗಕ್ರಮಣವನ್ನು ಸ್ವಾರಸ್ಯಕರವಾಗಿಯೇ ಉಳಿಸಿತ್ತು.ಆದರೆ ಜಗ್ಗದ ನದಿ ಹಿಮದಡಿಯಲ್ಲಿ ಗುಹಾದಾರಿ ಮಾಡಿಕೊಂಡು ಮೂಲ ಪ್ರವಾಹವನ್ನು ಮುಂದುವರಿಸುವ ದೃಶ್ಯಗಳೂ ಸೇರಿದಂತೆ ಒಟ್ಟಾರೆ ಹಿಮನಾಡಿನ ವೈವಿಧ್ಯಗಳು ನಮ್ಮ ಪ್ರವಾಸದ ಎಲ್ಲಾ ಮಾರ್ಗಕ್ರಮಣವನ್ನು (ಕಷ್ಟ, ಭಯಗಳ ಸಹಿತ) ಸ್ವಾರಸ್ಯಕರವಾಗಿಯೇ ಉಳಿಸಿತ್ತು.
ಪ್ರಕೃತಿಗೆ ವಿರೋಧಿಯಾದ ಮನುಷ್ಯಕೃತ ದಾರಿಯ ಕತೆ ನದಿಯಷ್ಟು ಸುಲಭದ್ದಲ್ಲ. ಇಲ್ಲಿನ ಎಷ್ಟೋ ರಸ್ತೆಗಳು ಎಷ್ಟೋ ನಾಗರಿಕ ನೆಲೆಗಳಿಗೆ ಪರ್ಯಾಯ ವ್ಯವಸ್ಥೆಯೇ ಇಲ್ಲದ ರಕ್ತನಾಳಗಳಿದ್ದಂತೆ. ಆ ಲೆಕ್ಕದಲ್ಲಿ ಎಲ್ಲಿಯೂ ರಸ್ತೆ ಸಂಪರ್ಕವನ್ನು ತುರ್ತಾಗಿ ಸಾಧಿಸಲೇಬೇಕಾಗುತ್ತದೆ. ಆದರೆ ಈ ವಲದಲ್ಲಿ ಅದಕ್ಕೂ ಮುಖ್ಯವಾಗಿ ರಾಷ್ಟ್ರೀಯ ಭದ್ರತೆಯ ವಿಷಯವೂ ಸೇರಿಕೊಳ್ಳುತ್ತದೆ. ಪಾಕಿಸ್ತಾನ ಮತ್ತು ಚೀನಾದೊಂದಿಗಿನ ಗಡಿ-ಬಿಡಿ ನಿಮಗೆಲ್ಲ ತಿಳಿದದ್ದೇ ಇದೆ. ತಿಂಗಳಂತರದಲ್ಲಿ ಬರಲಿದ್ದ ತಿಂಗಳುದ್ದದ ಅಮರನಾಥ ಯಾತ್ರೆಗೆ ರಕ್ಷಣೆ ಒದಗಿಸುವುದು ಸೈನ್ಯಕ್ಕೆ ಹೆಚ್ಚಿನ ಹೊಣೆ. ಅಲ್ಲಲ್ಲಿ ಸೈನ್ಯದ ಶಿಬಿರಗಳು, ಹೆಚ್ಚಿನ ಬಂದೋಬಸ್ತಿನೊಡನೆ ಸರಕು ಸಾಗಣಾವಾಹನಗಳ ದಂಡು ಕಾಣಿಸುತ್ತಲೇ ಇದ್ದುವು. ಸಾಲದೆಂಬಂತೆ ಎರಡು ಮೂರು ಘಟ್ಟಗಳಲ್ಲಿ ನಿಯತ ಅಂತರದಲ್ಲಿ ಸಾಯುಧ ಕಾಲಾಳುಗಳ ಪಹರೆ ನಡೆಸಿದ್ದನ್ನೂ ಕಂಡಿದ್ದೆವು. ಹೀಗಾಗಿ ಸೈನ್ಯದ ಒಂದು ಅಂಗವೆಂಬಂತೆ, ಬಹುಸಜ್ಜಿತ ಗಡಿ ರಸ್ತೆ ನಿರ್ವಹಣಾ ಸಂಸ್ಥೆ (ಬೀಯಾರ್ವೋ –ಬಾರ್ಡರ್ ರೋಡ್ ಆರ್ಗನೈಜೇಶನ್) ಇದೆ. ಇದು ಸಾರ್ವಜನಿಕ ರಸ್ತೆ ನಿರ್ವಹಣಾ ಶೈಲಿಗಿಂತಲೂ ಸಮರ್ಥವಾಗಿ, ಚುರುಕಾಗಿ ರಸ್ತೆಯನ್ನು ಸದಾ ಹಿಮಮುಕ್ತವೂ ಮಾಡುತ್ತಿರುತ್ತದೆ.
ಚಳಿಗಾಲದಲ್ಲಿ ಪೂರ್ಣ ಮುಚ್ಚಿಯೇ ಹೋಗುವ ಉಳಿದಂತೆ ಪ್ರವಾಸೋದ್ಯಮವನ್ನೇ ನೆಚ್ಚಿದ ಪುಟ್ಟ ಪೇಟೆ ಸೋನ್ಮಾರ್ಗ್. ಅಮರನಾಥ ಹಿಮವದ್ಲಿಂಗ ದರ್ಶನಕ್ಕಿರುವ ಎರಡನೇ ಕಾಲ್ದಾರಿ ತೊಡಗುವುದು ಇಲ್ಲಿಂದಲೇ ತುಸು ಮುಂದಿನ ಸ್ಥಳ ಬಾಲ್ತಲ್ನಿಂದ. ಇಲ್ಲಿನದೇ ಸಾರ್ವಜನಿಕ ಆಕರ್ಷಣ ಕೇಂದ್ರಗಳೇನಿದ್ದರೂ ಈ ಎರಡು ಬೆಟ್ಟ ಸಾಲಿನ ನಡುವಣ ತಟ್ಟಿನಲ್ಲಿ ಹರಡಿಕೊಂಡಿದ್ದವು. ಅವೆಲ್ಲಕ್ಕೂ ಪ್ರವಾಸಿಗಳು ಸ್ಥಳೀಯ ಪರ್ಯಾಯ ಸಂಚಾರ ವ್ಯವಸ್ಥೆಯನ್ನೇ ಅವಲಂಬಿಸುವುದು ಕಡ್ಡಾಯವಿತ್ತು. ವಾಸ್ತವವಾಗಿ ಅಲ್ಲೆಷ್ಟು ಓಡಾಡಬೇಕು, ಏನು ನೋಡಬಹುದು, ಅವಕ್ಕೆ ಜೀಪೊಳ್ಳೆಯದೋ ಕುದುರೆಯೋ, ಅಂದಾಜು ದರ ಎಷ್ಟು ಇತ್ಯಾದಿ ಮಾರ್ಗದರ್ಶನ ನಮಗೆ ಗಿರೀಶರಿಂದ ಸಿಗಲೇ ಇಲ್ಲ. ಕುದುರೆ ಮತ್ತು ಜೀಪುಗಳ ಸಾಮರ್ಥ್ಯ ಭಿನ್ನ. ಸಹಜವಾಗಿ ನಮಗೊದಗುವ ಅನುಭವವೂ ಭಿನ್ನ. ಎರಡೂ ಬಳಗಗಳು ತೀನ್ ಪಾಯಿಂಟ್, ಪಾಂಚ್ ಪಾಯಿಂಟ್ ಎಂದು ಏನೇನೋ ಹೆಸರಿನ ಪಟ್ಟಿ ಕೊಡುತ್ತಿದ್ದರು.
ಪಾಯಿಂಟ್ ಏನೇ ಹೇಳಿದರೂ ಕುದುರೆಗೆ ಜತೆಯಲ್ಲಿ ನಡೆಸಿಕೊಂಡು ಬರುವ ಕಾಸ್ತಾರನ ವೇಗದ ಮಿತಿಯಿದೆ ಮತ್ತು ಲಭ್ಯ ಸಮಯದಲ್ಲಿ ಕ್ರಮಿಸುವ ಅಂತರ ಕಡಿಮೆ ಎಂಬುದರಿಂದ ನಾವು ಜೀಪನ್ನೇ ನೆಚ್ಚಿದೆವು. ಜೀಪಿನ ದಳ್ಳಾಳಿಗಳು ಮಕ್ಕಳೋ ದೊಡ್ಡವರೋ ಎಂಬ ಬೇಧವಿಲ್ಲದೆ ಜೀಪೊಂದಕ್ಕೆ ಆರೇ ಮಂದಿ ಎಂದು ಕಾನೂನಿನ ಠಕ್ಕು ಮಾಡಿ ನಮಗೆ ತಲಾ ಮೂರು ಸಾವಿರ ರೂಪಾಯಿ ಬಾಡಿಗೆಯ ಎರಡು ಜೀಪು, ಮೂರು ಪಾಯಿಂಟಿಗೆಂದು ಹಿಡಿಸಿದರು. (ಅನಂತರ ನೋಡುವಾಗ ಹಲವು ಇತರ ಜೀಪುಗಳಲ್ಲಿ ದೊಡ್ಡವರೇ ಎಂಟು ಒಂಬತ್ತು ಮಂದಿ ತುಂಬಿದ್ದೂ ಇತ್ತು.)
ಮೊದಲನೇದು ಫಿಶಿಂಗ್ ಪಾಯಿಂಟ್: ಇದು ಮುಖ್ಯ ದಾರಿಯಲ್ಲೇ ಆರೆಂಟು ಕಿಮೀ (ಕಾರ್ಗಿಲ್ಲಿನತ್ತ) ಮುಂದುವರಿಕೆಯಲ್ಲಿ ದಾರಿಯ (ಉತ್ತರಕ್ಕೆ) ಎಡ ಬದಿಯಲ್ಲಿತ್ತು. ಸಣ್ಣ ದಿಬ್ಬ, ಆಚೆಗೆ ಆವರಿಸಿದಂತೊಂದು ಪ್ರಾಕೃತಿಕ ಕೊಳ – ಪಕ್ಕಾ ಸರಕಾರೀ ವ್ಯವಸ್ಥೆ. ದಾರಿಯಂಚಿಗೆ ಬೇಲಿ ಹಾಕಿ, ಟಿಕೆಟ್ ವ್ಯವಸ್ಥೆ ಗಟ್ಟಿ ಮಾಡಿದ್ದಾರೆ; ಹೆದ್ದಾರಿ ಪೂರ್ಣಗೊಳ್ಳುವ ಮೊದಲು ನಮ್ಮಲ್ಲೆಲ್ಲ ಟೋಲ್ ಪ್ಲಾಝಾಗಳನ್ನು ತೆರೆದ ಹಾಗೆ.
ದಿಬ್ಬವನ್ನು ಹುಲ್ಲುಗಾವಲು ಮಾಡಿ ಒಂದೆರಡು ಅಲಂಕಾರಿಕ ಮಂಟಪಗಳನ್ನು ನಿಲ್ಲಿಸಿದ್ದಾರೆ. ದಿಬ್ಬದ ಆಚಿನ ಮಹಾಗಿರಿಯಲ್ಲೊಂದು ಝರಿ – ಕೊಳದ ನೀರಿನ ಮೂಲ. ಅದು ಒಂದಷ್ಟು ಹಿಮ ಮಣ್ಣು ಕಲ್ಲುಗಳನ್ನು ಕೊಚ್ಚಿಕೊಂಡು ಬಂದು ಕೊಳದ ಎದುರು ದಂಡೆಯಲ್ಲಿ ರಾಶಿ ಹಾಕಿತ್ತು. ಹಿಂದಿನ ದಿನದ ಸ್ಥಳೀಯ ಪತ್ರಿಕಾ ವರದಿ ನೆನಪಾಗದಿರಲಿಲ್ಲ. (ಬೆಟ್ಟ ಜರಿದು ಹೊಳೆಗಡ್ಡ ಕೂತದ್ದು, ತಂತ್ರಜ್ಞರ ಕಡಿವಾಣ ಕಚ್ಚದೆ ತನ್ನದೇ ಸಮಯ ಮತ್ತು ಸೊಕ್ಕಿನಲ್ಲಿ ಒಡೆದು ಕೆಳಪಾತ್ರೆಯ ನಲ್ವತ್ತಕ್ಕೂ ಮಿಕ್ಕು ಹಳ್ಳಿ, ಕೃಷಿಗಳನ್ನೆಲ್ಲ ಕೊಚ್ಚಿದ್ದು!) ದಿಬ್ಬದಂಚಿನಲ್ಲಿ ಕೊಳಕ್ಕೆ ಕಾಂಕ್ರೀಟ್ ದಂಡೆ ಕಟ್ಟಿದ್ದರು. ಕೊಳದಲ್ಲಿ ನೀರು ಕಡಿಮೆಯಿದ್ದುದರಿಂದ, ಝರಿ ಬುಡಕ್ಕೆ ಸಣ್ಣ ಕಾಲ್ದಾರಿ ರೂಪಿಸಿದ್ದರು. ಬೆಟ್ಟ ಜರಿಸುವ ಮಳೆಯ ಲಕ್ಷಣ ಅಥವಾ ಅಗೋಚರ ಎತ್ತರಗಳಲ್ಲಿ ಹಿಮದ ಟೊಪ್ಪಿ ಕರಗಿಸಿ ಅನಿರೀಕ್ಷಿತ ಪ್ರವಾಹ (ಅವಲಾಂಚ) ತರುವ ಪ್ರಖರ ಬಿಸಿಲೂ ಕಾಣಲಿಲ್ಲ. ದೇವಳದ ಒಳಗಿನ ಮೂಲೆಕಲ್ಲು, ಆಧಾರದ ಕೋಲಿಗೆಲ್ಲ ವಂದಿಸುವ ಭಕ್ತರಂತೆ, ನಾವು ಕೆಲವರು ಕೊಳದ ನಡುವಿನ ಸಪುರ ಕಾಲ್ದಾರಿಯ ಕೆಸರು ತುಳಿದು ಹಿಮ ಮುಟ್ಟಿ ಬಂದೆವು!
ಕೊಳದ ತುಸು ಆಳದ ಭಾಗದಲ್ಲಿ ಪಾರದರ್ಶಕ ಗೋಳವೊಂದು ತೇಲಿಕೊಂಡು ಬಿದ್ದಿತ್ತು. ಅದಕ್ಕೆ ಪ್ರತ್ಯೇಕ ಟಿಕೇಟ್ ಖರೀದಿಸಿದವರು ಗೋಳದ ಒಳಗೆ ಸೇರಿಕೊಂಡು ಕೊಳದ ನೀರಿನಲ್ಲಿ ಉರುಳು ಸೇವೆ ನಡೆಸಬಹುದಿತ್ತು. ಸ್ಥಳನಾಮಕ್ಕೆ ತಕ್ಕಂತೆ, ಎಲ್ಲೂ ಗಾಳ ಎಸೆದು ಮತ್ಸ್ಯಧ್ಯಾನದಲ್ಲಿದ್ದವರನ್ನು ನಾವು ಕಾಣಲಿಲ್ಲ. ಅದಕ್ಕೆ ಪ್ರತ್ಯೇಕ ಸುಂಕ, ಗಾಳ ಬಾಡಿಗೆ, ಎರೆಹುಳ ಖರೀದಿ, ಹಿಡಿದ ಮೀನಭಾರಕ್ಕೆ ತಕ್ಕ ಕರಭಾರ ಇನ್ನೇನೇನು ರಗಳೆಗಳಿವೆಯೋ! ಜೀಪಿನವನು ವೇಟಿಂಗ್ ದರ ಲೆಕ್ಕ ಹಾಕುತ್ತಿದ್ದಂತೆ (ಖಾಸಗಿ ವಾಹನ ಒಯ್ಯುವಂತಿಲ್ಲವಲ್ಲ!) ಅಲಂಕಾರಿಕ ಮಂಟಪಗಳಲ್ಲಿ ಮೈಚಾಚಿ ವಿರಮಿಸಬಹುದು? ಫಿಶಿಂಗ್ ಪಾಯಿಂಟಿನ ಗಾಳಕ್ಕೆ ನಾವೇ ಎರೆಗಳು! ಜೀಪು ಫಿಶಿಂಗ್ ಪಾಯಿಂಟಿನಿಂದ ಮರಳುವಾಗ ಎಡಕ್ಕೊಂದು ದಾರಿ ಹಿಡಿಯಿತು. ಟ್ಯಾಕ್ಸೀ ಸ್ಟ್ಯಾಂಡಿನ ಹಿತ್ತಲಿನಲ್ಲೇ ಎಂಬಂತೆ ಆರೆಂಟು ಕಿಮೀ ಅಂತರದಲ್ಲಿ ಪ್ರಧಾನ ಬೆಟ್ಟ ಸಾಲಿನ ಬುಡವನ್ನೇ ಸೇರಿತು. ಇಲ್ಲೊಂದು ಸಾಮಾನ್ಯ ಹಿಮನದಿ – ತಾಜ್ವಾಸ್. (ಹಿಮಗಡ್ಡೆಗಳು ಬಂಡೆ, ಮಣ್ಣು ಕಲಸಿಕೊಂಡು ಬಲು ನಿಧಾನಕ್ಕೆ ಹರಿಯುವ ನದಿ – ಗ್ಲೇಸಿಯರ್) ಇದಕ್ಕೆ ವನಧಾಮದ ಹೆಸರು ಕೊಟ್ಟು, ಅಭಿವೃದ್ಧಿ ಮಂತ್ರದ ಜಪ ನಡೆದಿದೆ. ಪ್ರವಾಸೋದ್ಯಮದ ಲೆಕ್ಕದಲ್ಲಿ ಹೆಸರುಗಳ ವೈಭವಕ್ಕೇನೂ ಕೊರತೆಯಿಲ್ಲ – ಮೌಂಟೇನ್ ಗ್ರೀನ್ಸ್, ಸ್ನೋ ಹೈಟ್ಸ್, ಕ್ಯಾಂಪಿಂಗ್ ಗ್ರೌಂಡ್ಸ್ ಇತ್ಯಾದಿ.
ಸೋನ್ಮಾರ್ಗ್ ಟ್ಯಾಕ್ಸೀ ಸ್ಟ್ಯಾಂಡಿನ ಕುದುರೆ ದಳ್ಳಾಳಿಗಳು ಹೇಳುವ ಐದೋ ಎಂಟೋ ಪಾಯಿಂಟುಗಳೆಲ್ಲ ನೇರ ಇಲ್ಲಿಗೆ ಬರುವ ಒಳದಾರಿಗಳುದ್ದಕ್ಕೆ ಸಿಗುವ ಇವೇ ಸರಕಾರೀ ಹೆಸರುಗಳೆಂದು ಅಲ್ಲಿ ಸ್ಪಷ್ಟವಾಯ್ತು. (ಕುದುರೆ ಸವಾರರು ಫಿಶ್ ಪಾಯಿಟ್ ಹೇಳುತ್ತಿರಲಿಲ್ಲ!) “ಹಿಮಜಾರಾಟದ ಬಯಲೊಂದಿದೆ. ಅದನ್ನು ಕಾಶ್ಮೀರದ ಸ್ವಿಝರ್ಲ್ಯಾಂಡೆಂದೇ ಹೇಳುತ್ತಾರೆ, ಆದರೆ ಸದ್ಯ ಅಲ್ಲಿ ಹಿಮವಿಲ್ಲ” ಬೇರೊಂದು ಸಂದರ್ಭದಲ್ಲಿ ಗಿರೀಶ್ ಹೇಳಿದ್ದು ನೆನಪಿಗೆ ಬಂದು, ವಿಷಾದಕ್ಕಿಂತಲೂ ಬಿಡುಗಡೆಯ ಭಾವವೇ ಬಂತು. ಇಲ್ಲವಾದರೆ ಕುದುರೆ, ಜೀಪು, ಸ್ಲೆಡ್ಜ್, ಗೊಂಡೋಲಾ, ಚಳಿಯುಡುಪುಗಳು ಮುಂತಾದ ಪಟ್ಟಿಗೆ ಜಾರಲು ಬಾರದ ಮತ್ತು ವ್ಯವಧಾನವೂ ಇಲ್ಲದ ನಾವು ಸ್ಕೀಯಿಂಗ್ ಬೂಟು, ವಿಶೇಷ ಉಡುಪು, ಊರೆಗೋಲು ಎಂದೆಲ್ಲಾ ಸೇರಿಸಿಕೊಂಡು, ತಲೆ ತಿನ್ನುವ ದಳ್ಳಾಳಿಗಳ ಎದುರು “ಟುಬೀ ಆರ್ ನಾಟುಬೀ” ಸ್ವಗತ ಹೊಡೆಯಬೇಕಾಗುತ್ತಿತ್ತು!
ಹರಿದೋ ಸುರಿದೋ ಬಂದ ಹಿಮರಾಶಿಯನ್ನು ದಾರಿಯ ಬದಿಗಳಲ್ಲಿ ಕಲ್ಲು-ಮಣ್ಣು-ಕಸದೊಂದಿಗೆ ನೂಕಿ ರಾಶಿ ಹಾಕಿದ್ದಾರೆ. ಇಲ್ಲಿ ತಂಗುದಾಣಗಳಿಲ್ಲ. ಹರಕು ಅಂಚಿನ ದಾರಿಯಲ್ಲೇ ಜನ, ಕುದುರೆ, ಜೀಪುಗಳೆಲ್ಲ ಕಬಡ್ಡಿಯಾಟ ನಡೆಸಿದಂತಿತ್ತು. ಸಹಜವಾಗಿ ಲದ್ದಿ, ಕೆಸರನ್ನು ಮೂತ್ರದಲ್ಲಿ ಅರೆಯುವ ಕೆಲಸವನ್ನು ಜೀಪುಗಳು ಗುಲ್ಮಾರ್ಗಿಗಿಂತಲೂ ಚೆನ್ನಾಗಿಯೇ ಮಾಡುತಿದ್ದವು. ನಮ್ಮ ಜೀಪಿನವ ನಮ್ಮನ್ನಿಳಿಸುವ ಗಡಿಬಿಡಿಯಲ್ಲಿ ಕೆಸರು ರಟ್ಟಿಸಿದ್ದಕ್ಕೆ ಸ್ಥಳೀಯ ಒಬ್ಬ `ದಾದ’ ಇವನ ಮೇಲೇರಿ ಬಂದ. ಈತ ತಾನು ಕಡಿಮೆಯಿಲ್ಲ ಎಂಬಂತೆ ಜ್ಯಾಕಿನ ಲಿವರ್ ಹಿಡಿದೇ ನಿಂದ.
ನಿತ್ಯದ ಈ ನಾಟಕದಲ್ಲಿ ಶಾಂತಿದೂತರೂ ಇರುವುದರಿಂದ ಏನೋ ನಮ್ಮ ವಾಪಾಸು ಹೋಗುವ ವಾಹನ ಮತ್ತು ಲೆಕ್ಕದ ಇನ್ನೊಂದು ಪಾಯಿಂಟ್ ತಪ್ಪಲಿಲ್ಲ! ಮುಂದುವರಿದು, ಅದರ ತಲೆಬಿಸಿಯಲ್ಲೆ ನಮ್ಮವ ಜೀಪು ತಿರುಗಿಸಲು ತಿಣುಕುವಾಗ ಇನ್ನೊಂದು ನಿಂತಿದ್ದ ಜೀಪಿನ ಪಕ್ಕಕ್ಕೆ ಗುದ್ದಿದ. ಇವನ ಅದೃಷ್ಟಕ್ಕೆ ಅದರ ಯಜಮಾನ ಅಲ್ಲಿರಲಿಲ್ಲ. (ಮುಂದೇನಾಯ್ತೋ ನನಗೆ ಗೊತ್ತಿಲ್ಲ!) ಈ ಎಲ್ಲ ಗಜಿಬಿಜಿಯ ನಡುವೆ ನಾವು ಹೇಗೋ ತೂರಿಕೊಂಡು, ಜಲ್ಲಿ ಮರಳು ಮುಂತಾದ ಸಾಮಾನು ಹರಡಿಕೊಂಡು ನಡೆದಿದ್ದ ಅರೆಬರೆ ಕಾಮಗಾರಿಗಳ ಅವ್ಯವಸ್ಥೆಯನ್ನು ಹಾಯ್ದು, ತಿಂಡಿತೀರ್ಥಗಳ ಗುಡಾರ, ಅವುಗಳಿಂದಿಳಿವ ಕೊಳಚೆ ತುಳಿದು, ಕೊನೆಗೂ ಶುದ್ಧ ಮಂಜಿನ ಹರಹು ಮೆಟ್ಟುವಾಗ (“ನೀರೊಳಗಿರ್ದುಂ…” ಸವಕಲು ನಾಣ್ಯ ಬಿಡಿ) ಸಾಕೋ ಸಾಕು.
ಇಲ್ಲಿನ ಪ್ರವಾಸಿ ವಲಯ ನೇರ ಹಿಮನದಿಯ ಮೇಲಿಲ್ಲ (ಇರುವುದೇ ಆಗಿದ್ದರೆ ದಾರಿ, ಕಟ್ಟಡಗಳು ಸಾಧ್ಯವೂ ಇರಲಿಲ್ಲ). ಆದರೂ ಹಿಮದ ಹರಹು, ಮರ, ಗಿಡ, ಬಂಡೆ, ಕಲ್ಲಚೂರು ಎಲ್ಲ ಚಲ್ಲಾಪಿಲ್ಲಿಯಾಗಿರುವುದರಿಂದ ಜಾರುಬಂಡಿ, ಬೂಟು, ಗಂಬೂಟು ಎಂದೆಲ್ಲ ವಿಶೇಷವಾಗಿ ಹಚ್ಚಿಕೊಂಡವರು ಕಡಿಮೆ. ಮರದ ಮರೆ ಮತ್ತು ಹಿಮದ ಮೊತ್ತದ ಲೆಕ್ಕದಲ್ಲಿ ಇಲ್ಲಿ ಚಳಿಯ ಅನುಭವ ಗುಲ್ಮಾರ್ಗಿಗಿಂತಲೂ ಹೆಚ್ಚೇ ಇತ್ತು. ಆದರೂ ನಾವು ಸ್ವೆಟ್ಟರ್, ಮಂಗನಟೊಪ್ಪಿಗಿಂತ ಹೆಚ್ಚೇನೂ ಬಳಸದೇ ಸುಧಾರಿಸಿದ್ದೆವು. ಅಲ್ಲಿ ಜನ ಓಡಾಡುತ್ತಿದ್ದ ತುಸು ಎತ್ತರದ ಸ್ಥಳದವರೆಗೆ ಹಿಮದಲ್ಲೂ ನಾನು ಕಾಲ್ಚೀಲವೂ ಇಲ್ಲದೆ, ಮಾಮೂಲಿ ಬೆಲ್ಟ್ ಹಾಕಿದ ಚಪ್ಪಲಿಯಲ್ಲೇ ಏರಿ ಹೋಗಿದ್ದೆ. ಮರಳುವಾಗ ಎಚ್ಚರಿಕೆ ಹೆಚ್ಚು ವಹಿಸಿದ್ದಕ್ಕೋ ಏನೋ ಒಬ್ಬ ಸಾದಾ ಜಾರುಬಂಡಿಯವನು ನನಗೆ ಜಿಗಣೆಯಾದ. ಸುಮಾರು ನೂರಿನ್ನೂರು ಮೀಟರ್ ಉದ್ದಕ್ಕೂ “ನನ್ನ ಜಾರುಬಂಡಿಗೆ ಬನ್ನಿ, ಬನ್ನಿ” ಎಂದು ಕಾಡುತ್ತಲೇ ಬಂದ.
ನೂರು ರೂಪಾಯಿಂದ ತೊಡಗಿದ ಅವನ ಚೌಕಾಸಿ ಇಪ್ಪತ್ತಕ್ಕಿಳಿದರೂ ನಾನು ಸಮಾಧಾನದಲ್ಲೇ “ನೈ ಚಾಹಿಯೇ” ಜಪ ಬಿಡಲಿಲ್ಲ. ಕೊನೆಗೆ ಆತ ನನ್ನಿಂದ ಕಳಚಿಕೊಳ್ಳುವಾಗ ರೇಗಿ, “ನೀ ಜಾರಿಬಿದ್ದು ಹೋಗ” ಎಂದೂ ಶಪಿಸಿದ! ಪ್ರಾಕೃತಿಕ ವಿಪರೀತ, ಆದಾಯ ಸಿಗುವ ಸಣ್ಣ ಋತುಮಾನ, ಮತ್ತದರಲ್ಲೂ ಈ ವರ್ಷ ತುಂಬ ಕೊರತೆ ಇರುವಾಗ ನಾನು ಒಲಿಯದಿದ್ದದ್ದು ಅವನನ್ನು ಹಾಗೆ ನುಡಿಸಿರಬೇಕು. (ಶಾಪ, ವರಗಳ ಬಗ್ಗೆ ನನಗೆ ನಂಬಿಕೆಯಿಲ್ಲ, ನಗೆ ಬಂತು.) ನನಗೆ ಆತನ ಬಗ್ಗೆ ವಿಷಾದವಿದೆ. ಹಾಗೆಂದು ಮೂಲತಃ ನಾನು ಬಯಸದ ಸೇವೆ ಪಡೆಯುವುದು ಅಥವಾ ದಾನ ಬಿಕ್ಷೆ ಕೊಡುವುದು ಎಂದೂ ನನ್ನ ಮನಸ್ಸಿಗೆ ಹಿಡಿಸಿದ್ದೂ ಇಲ್ಲ.
ಅಂದೂ ಊಟದ ಹೊತ್ತು ಮೀರಿದ್ದೆವು. ಚಳಿ ಮತ್ತು ಹಸಿವೆಯ ಸಣ್ಣ ತೃಪ್ತಿಗಾಗಿ ನಾವಿಬ್ಬರು ಒಂದು ತಿನಿಸಿನ ಜೋಪಡಿ ಹೊಕ್ಕಿದ್ದೆವು. ಇಂದಿನ ಲೆಕ್ಕದಲ್ಲಿ ಹೇಳಬೇಕಾದರೆ ಬಿಸಿ ಬಿಸಿ ಸೀಸದ ವಿಷ (ಮ್ಯಾಗೀ ನೂಡಲ್ಸ್) ಬೈಟೂ ಮತ್ತು ಡಬಲ್ ಚಾಯ್ ಹೇಳಿ ಕಾದಿದ್ದೆವು. ಒಂದಷ್ಟು ಕೂಲಿ ಕಾರ್ಮಿಕರು ಅಲ್ಲಿ ಊಟಕ್ಕೆ ಬಂದಿದ್ದರು. ಅವರನ್ನು ಕುತೂಹಲದಲ್ಲಿ ಮಾತಾಡಿಸಿದಾಗ, ಅವರಲ್ಲೊಬ್ಬ – ಜಹಾಂಗೀರ್, ಕನ್ನಡ ಮೂಲದವನು ಎಂದು ತಿಳಿದದ್ದು ತುಂಬ ಸೋಜಿಗದ ಆಕಸ್ಮಿಕ. ಸುಮಾರು ಆರು ವರ್ಷ ಪ್ರಾಯದಲ್ಲಿ ಆತ ಕನ್ನಡ ನಾಡಿನ ಕರಾವಳಿ ಬಳಿಯಿಂದ ಹೇಗೋ (ಓಡಿ ಬಂದದ್ದೋ ಯಾರದರೂ ಕದ್ದು ತಂದದ್ದೋ – ಆತನಿಗೇ ನೆನಪಿಲ್ಲ) ಕಾಶ್ಮೀರ ಸೇರಿಕೊಂಡನಂತೆ. ಬಿಟ್ಟು ಬಂದ ಸ್ವಂತದ ಸ್ಥಳನಾಮ, ಭಾಷೆ, ತಂದೆತಾಯಿಯಾದಿ ಸಂಬಂಧಗಳು ಎಲ್ಲವನ್ನೂ ಆತ ಮರೆತಿದ್ದಾನೆ.
ಕರ್ನಾಟಕ ಎಂಬ ಹೆಸರು ಮತ್ತು ಕಡಲ ಅಬ್ಬರದ ನೆನಪುಗಳಷ್ಟೇ ಅವನ ಬಾಲ್ಯದ ಸಂಗಾತಿಗಳು. ಹಾಗಾಗಿ ಗೆಳೆಯರ ಗೇಲಿಯಲ್ಲಿ ಮಾತ್ರ ಜಹಾಂಗೀರ್ `ಕನ್ನಡಿಗ’ನಾಗಿ ಉಳಿದುಬಿಟ್ಟ! ನಾವು ನಿಜವಾದ ಕನ್ನಡಿಗರೆಂದು ತಿಳಿದಾಗ ಆತ ನಾಚಿಕೊಂಡು ಮಾತಾಡದುಳಿದುಬಿಟ್ಟ! ನಮ್ಮ ಜೀಪ್ ಚಾಲಕ, ಇನ್ನೂ ತರುಣ, ಎರಡೆರಡು ಘಟನೆಗಳಿಂದ ಭಾರೀ ತಲೆಬಿಸಿಯಲ್ಲಿದ್ದ. ಹಾಗಾಗಿಯೋ ಏನೋ ಮರಳುವ ದಾರಿಯಲ್ಲಿ ತುಸು ಆಚೀಚೆ ಸರಿದರೆ ಸಿಗಬಹುದಾಗಿದ್ದ ಇನ್ನೊಂದು ಪಾಯಿಂಟ್ ತೋರಿಸುವುದನ್ನು ಮರೆತುಬಿಟ್ಟ. ಸೀದಾ ಟ್ಯಾಕ್ಸಿ ಸ್ಟ್ಯಾಂಡಿಗೆ ಮರಳುವಾಗ ನಾವು ಮೂರನೇ ಪಾಯಿಂಟಿಗೆ ಒತ್ತಾಯಿಸಿದೆವು. ಮತ್ತದನ್ನು ನಾವೇ ಆಯ್ಕೆ ಮಾಡಿಕೊಂಡು, ಬರುವ ದಾರಿಯಲ್ಲೇ ಕಂಡಿದ್ದ ಕಚ್ಚಾ ದಾರಿಯಲ್ಲಿ ಸಿಂಧು ನದಿಯ ಪಾತ್ರಕ್ಕೆ ಜೀಪ್ ಇಳಿಸಿದೆವು. ಅಲ್ಲಿ ಕಂಡಂತೆ, ನದಿಯ ಉತ್ತರ ದಂಡೆಯಲ್ಲಿ ಹೆಚ್ಚು ವ್ಯವಸ್ಥಿತವಾಗಿ ಹೆದ್ದಾರಿ ಹೊಸತಾಗಿಯೇ ನಿರ್ಮಾಣವಾಗುತ್ತಿತ್ತು. ಆದರೆ ಪ್ರಾಕೃತಿಕವಾಗಿ ಹರಡಿದ್ದ ಬಂಡೆ, ಮರಳು ಯಾವುವು, ನಿರ್ಮಾಣದ ಭಾಗವಾಗಿ ಬಂದು ಬಿದ್ದು ವ್ಯರ್ಥವಾಗುತ್ತಿದ್ದ ಸಾಮಗ್ರಿಗಳು ಯಾವುವು ಎಂದು ಅರ್ಥವಾಗದಷ್ಟು ಅವ್ಯವಸ್ಥೆ ಅಲ್ಲಿತ್ತು.
ಸಾಲದ್ದಕ್ಕೆ ಸದ್ಯ ಅಲ್ಲಿ ಕೆಲಸ ನಡೆಯುತ್ತಿದ್ದ ಲಕ್ಷಣಗಳೂ ಇರಲಿಲ್ಲ. ಸದಾ ಹೊಸ ಹಣಕಾಸು ವಹಿವಾಟುಗಳಲ್ಲಿ, ಉದಾತ್ತ ವಿಚಾರಗಳ ಹೆಸರಿನಲ್ಲಿ ತೊಡಗಿಕೊಳ್ಳುವ ಸರಕಾರದ ಹಿಂದಿನ ವ್ಯಕ್ತಿಗಳ ಹಸಿವಿನಭಾಗ್ಯಕ್ಕೇನೆನ್ನಲಿ! ಒಂದು ಪುಟ್ಟ ಪ್ರವಾಹಕ್ಕೂ ಇಲ್ಲಿ ಕೊಚ್ಚಿ ಹೋಗುವ ಸಾಮಗ್ರಿಗಳು, ಕಡತಗಳಲ್ಲಿ ಒಂದಕ್ಕೆ ಸಾವಿರವಾಗುವುದು ಖಂಡಿತ. ವರ್ಷಂಪ್ರತಿ ಕಡಲ್ಕೊರೆತಕ್ಕೆ ಕಲ್ಲು ಹಾಕುವ, ವರಾಹಿ ತುಂಬೆಯಂಥ ಜಲಯೋಜನೆಗಳು `ಆಕಸ್ಮಿಕ’ಗಳಲ್ಲಿ ತೊಳೆದು ಹೋಗುತ್ತಲೇ ಇರುವ, ಚಾರ್ಮಾಡಿ ಶಿರಾಡಿಗಳು ದುಡ್ಡಿನ ಗುಡ್ಡೆಗಳನ್ನೇ ಜರಿಸುತ್ತಿರುವುದೇ ಮುಂತಾದ ಪ್ರಕರಣಗಳನ್ನು ನಾವೇನು ಕಾಣದವರೇ!
ಸೋನ್ಮಾರ್ಗ್ನಲ್ಲಿ ಒಳ್ಳೆಯ ಡಾಬಾ ಇರಲಿಲ್ಲ. ಹಾಗೆ ಅದನ್ನು ಹಿಂದಿರುಗುವ ದಾರಿಯಲ್ಲಿ ಹುಡುಕುತ್ತ ಬಂದು, ಊಟಕ್ಕೆ ನಿಲ್ಲುವಾಗ ಗಂಟೆ ನಾಲ್ಕನ್ನು ಸಮೀಪಿಸಿತ್ತು! ಕೆಲವು ದಶಕಗಳ ಅನುಭವೀ ಪ್ರವಾಸೀ ಸಂಸ್ಥೆಗೆ, ಬಹುಜನಪ್ರಿಯ ಪ್ರವಾಸೀ ಕೇಂದ್ರದಲ್ಲೇ ತನ್ನ ಅತಿಥಿಗಳಿಗೆ ಪ್ರತಿದಿನ ಎನ್ನುವಂತೆ ಈ ಅತಿವಿಳಂಬಿತ ಊಟ ಕೊಡುವ ಸ್ಥಿತಿ ಬರಬಾರದು. ಶ್ರೀನಗರಕ್ಕೂ ಸ್ವಲ್ಪ ಮೊದಲು ಸಣ್ಣ ಅಡ್ಡ ಸರಿತದಲ್ಲಿ ಸಿಗುವ ಊರು ತುಲ್ಮುಲ್. ಅಲ್ಲಿ ವಿಸ್ತಾರ ವಠಾರದಲ್ಲಿ ಪುಟ್ಟ ಕೊಳದ ಮಧ್ಯೆ ನಿಂತ ದೇವಿ ಭವಾನಿ, ತನ್ನ ಖೀರು ಪ್ರಸಾದದ ಹೆಸರಿನೊಡನೆ ಖ್ಯಾತೆ. ಈಕೆ ಮೊದಲು ರಾವಣನಿಗೊಲಿದು ಲಂಕೆಯಲ್ಲಿದ್ದಳಂತೆ. ಸೀತಾಪಹರಣದನಂತರ ಆತನ ಲಂಪಟತನಕ್ಕೆ ಹೇಸಿ, ಹನುಮಂತನಿಂದ ಇಲ್ಲಿ ಪುನರ್ವಸತಿ ಪಡೆದಳಂತೆ. ಈಕೆಯ ಮಡಿ, ಪ್ರಾದೇಶಿಕ ಬಂದೋಬಸ್ತುಗಳೆರಡನ್ನು ಸೇರಿಸಿ ಗಿರೀಶ್ ದೊಡ್ಡ ನಿಷೇಧಿತ ಸಾಮಗ್ರಿ ಪಟ್ಟಿಯನ್ನೇ ಕೊಟ್ಟರು. ಪೆನ್ನು, ವಾಚು, ಬೆಲ್ಟು, ಚರವಾಣಿ, ಕ್ಯಾಮರ, ಪರ್ಸುಗಳನ್ನೂ ಚಪ್ಪಲಿಯೊಡನೆ ದೇವಳದ ಹೊರಗೆ ಬಿಡಬೇಕೆಂದರು. ಅಷ್ಟು ಮಾಡಿ, ಕೇವಲ ಆರಾಧನಾ ಕೇಂದ್ರವನ್ನು ನೋಡುವ ಆಸಕ್ತಿ ನನಗೆ ಇರಲಿಲ್ಲ. ಆದರೆ ಅದರ ಗೇಟಿನ ಬಳಿ ಚಪ್ಪಲಿ ಮಾತ್ರ ಬಿಟ್ಟರೆ ಸಾಕೆಂದು ತಿಳಿದ ಮೇಲೆ, ನಾನೂ ಒಳಗೆ ಒಂದು ಸುತ್ತು ಹೊಡೆದು ಬಂದೆ.
ಹಾಲಿನ ಬೂತಿನಂತೆ ಬಿಸಿಖೀರು ಪ್ರಸಾದದ ವಿತರಣೆಗೇ ಪ್ರತ್ಯೇಕ ಕೋಣೆ ಕಟ್ಟಿದ್ದರು. ಪುಟ್ಟ ಸ್ಟೀಲ್ ಬಟ್ಟಲು, ಚಮಚ ಸಹಿತ ಉಚಿತವಾಗಿ ಕೊಡುತ್ತಿದ್ದ ಖೀರು ಸರಳ ರುಚಿಯದ್ದಾಗಿತ್ತು. ತಿರುಪತಿಯ ಲಡ್ಡು ಪ್ರಸಾದದಂತೆ ಗಾತ್ರ, ಗುಣಮಟ್ಟಗಳಲ್ಲಿ ಉತ್ಕೃಷ್ಟತೆ ಇಲ್ಲ ಮತ್ತೆ ಕಾಸಿಗೆ ಮಾರಿಕೊಳ್ಳುವುದೂ ಇಲ್ಲ. ಪ್ರಸಾದ ಸ್ವೀಕರಿಸಿದವರು ಸ್ವತಃ ಬಟ್ಟಲು ಚಮಚವನ್ನು ತೊಳೆದು, ಮರಳಿಸುವ ನಿಯಮವೂ ಇದ್ದದ್ದು ನನಗೆ ಕುಶಿ ಕೊಟ್ಟಿತು.
ವಠಾರದ ಕೇಂದ್ರದಲ್ಲೊಂದು ಪುಟ್ಟ ಕೊಳ. ಅದರ ನಡುವೆ ದೇವಿಯ ಮಂಟಪ. ಭಕ್ತಾದಿಗಳು ದಂಡೆಯ ಪ್ರತ್ಯೇಕ ಭವನದಲ್ಲಿ ನಿಂತೇ ಸ್ತುತಿ, ಪೂಜಾದಿಗಳನ್ನು ಮಾಡುವ ವ್ಯವಸ್ಥೆ. ಪೂರ್ಣ ಆಧುನಿಕ ಟೈಲ್ಸ್ ಕೂರಿಸಿದ್ದ ಕೊಳದ ಪಾತ್ರೆ ಪ್ರಾಚ್ಯಭಾವಕ್ಕೆ ಕೊರತೆಯುಂಟು ಮಾಡುವಂತಿತ್ತು. ಕೊಳದ ನೀರಿನ ರಂಗು ದೇಶದ ಆಗುಹೋಗಿನ ಬಗ್ಗೆ ಕಣಿ ನುಡಿಯುತ್ತದೆ ಎಂದು ಸ್ಥಳ ಪುರಾಣ ಹೇಳುತ್ತದೆ. ಅದರಲ್ಲಿ ಪ್ರಾಕೃತಿಕವಾದ ತಾವರೆ ಮೀನುಗಳೇನೂ ಇರಲಿಲ್ಲ. ಬದಲಿಗೆ ಅದರಲ್ಲಿ ಪೂಜಾ ಸಾಮಗ್ರಿಗಳ ರಂಗು, ಮಂಟಪದ ಅಲಂಕಾರ ಎಲ್ಲ ಸೇರಿ ಪವಿತ್ರ ಎನ್ನುವುದಕ್ಕಿಂತ, ಏನೋ ನಾಟಕೀಯ ಎನ್ನುವ ಭಾವ ಬಂತು. ಕೊಳದ ಎದುರು ಭಕ್ತರು ಸೇರುವ ಮಂಟಪದಲ್ಲಿ ಅಲ್ಲಿಗೇ ವಿಶೇಷವಾಗಿ ಹೊಸೆದು ಹಾಕಿದ್ದ ಭಾರೀ ಜಮಖಾನ ಚೆನ್ನಾಗಿತ್ತು.
ಅಲ್ಲಿ ಸುಮುಹೂರ್ತಗಳಲ್ಲಿ ಭಜನಾ ತಂಡಗಳ ಗೋಷ್ಠಿಗಳೇ ನಡೆಯುತ್ತವಂತೆ. ಅಲ್ಲೇ ಒಂದು ಬದಿಯಲ್ಲಿ, ಕೆಲವೇ ದಿನಗಳಲ್ಲಿ ಬರಲಿದ್ದ ವರ್ಷಾವಧಿ ಜಾತ್ರೆಗೆ ಕಾರ್ಯಕರ್ತರು ಸಜ್ಜಾಗುತ್ತಿದ್ದರು. ದೇವಾಲಯ ಒಟ್ಟಾರೆ ಸರಳ, ಪ್ರಶಾಂತ ಹಾಗೂ ಚೊಕ್ಕವಾಗಿತ್ತು. ಅಲ್ಲೇ ಹೊರಗಿನ ಡಾಬಾದಲ್ಲಿ ಲೆಕ್ಕದ ಚಾ (ಮಧ್ಯಾಹ್ನದೂಟ ಸಂಜೆಯಾದಾಗ ಹಿಂಬಾಲಿಸುವ ಚಾ ಇನ್ನೇನಾಗಬೇಕು!) ಸೇವಿಸಿ ಹೋಟೆಲಿಗೆ ಮರಳಿದೆವು. ಹಾಗೇ ದಿನದ ಕೊನೆಯ ಕಲಾಪ – ರಾತ್ರಿಯೂಟ, ಔಪಚಾರಿಕ ಅಗತ್ಯವೇ ಆಗಿತ್ತು. ಆದರೂ ಅದನ್ನು ಕಾದು, ಮುಗಿಸಿಯೇ ಮಲಗಿದೆವು. ನಾಲ್ಕನೇ ಬೆಳಿಗ್ಗೆ ನಾವು ಶ್ರೀನಗರಕ್ಕೂ ಹೋಟೆಲ್ ಶನೀಲಿಗೂ ವಿದಾಯ ಹೇಳಿ ಪೆಹೆಲ್ಗಾಂನತ್ತ ಹೊರಟೆವು. ಇದು ಚಪ್ಪಟೆ ಹಾಸಿದ ಭೂಪಟದಲ್ಲಿ ಶ್ರೀನಗರದಿಂದ ತುಸು ದಕ್ಷಿಣಕ್ಕೆ ಜಾರಿದ ಪೂರ್ವದಲ್ಲಿ, ಬಹು ಸಮೀಪದಲ್ಲೇ ತೋರುತ್ತದೆ. ಆದರೆ ಬೆಟ್ಟ ಸಾಲುಗಳ ಜಿಡುಕು ಬಿಡಿಸಿ ಸಾಗಬೇಕಾದ ದಾರಿ ಅನಂತನಾಗ್ವರೆಗೆ ಜಮ್ಮುವಿನದೇ (ದಕ್ಷಿಣಕ್ಕೆ)ದಾರಿಯಲ್ಲಿ ಇಳಿದು,
ಮತ್ತೆ ಪೂರ್ವದ ಕವಲು ಹಿಡಿದು ಉತ್ತರಕ್ಕೇರುತ್ತದೆ. ಈ ದಾರಿಯಲ್ಲಿ ವನ, ಕೃಷಿಯ ಲೆಕ್ಕದಲ್ಲಿ ಹೆಚ್ಚು ಸಮೃದ್ಧಿ ಕಾಣಿಸಿತು. ಸೇಬಿನ ತೋಟಗಳೂ ಅಕ್ರೋಟು ಮರಗಳದ್ದೂ ದರ್ಶನವಾಯ್ತು. ಕ್ರಿಕೆಟ್ ಬ್ಯಾಟುಗಳಿಗೆ ವಿಶೇಷವಾಗಿ ಬಳಕೆಯಾಗುವ ವಿಲ್ಲೋ ಮರಗಳು ಸಾಕಷ್ಟು ಕಾಣಸಿಕ್ಕವು. ಅಂಥ ಮೂರು ನಾಲ್ಕು ಕಡೆ ಸಣ್ಣ ಮರಸಿಗಿಯುವ ಕಾರ್ಖಾನೆಗಳೂ ಇದ್ದವು. ಅವುಗಳ ಅಂಗಳದಲ್ಲಿ ನೂರು ಸಾವಿರ ಲೆಕ್ಕದಲ್ಲಿ ಕ್ರಿಕೆಟ್ ಬ್ಯಾಟ್ ಮಾಡಲು ಅನುಕೂಲವಾಗುವ ಗಾತ್ರದಲ್ಲಿ ಮರದ ಹೋಳುಗಳನ್ನು ಒತ್ತರೆಯಾಗಿ ಜೋಡಿಸಿಟ್ಟದ್ದೂ ಕಾಣುತ್ತಿತ್ತು. ಧನಂಜಯರು ಹಿಂದಿನ ಯಾವುದೋ ಊರಿನಲ್ಲಿ ಪೂರ್ಣ ಕೆತ್ತಿಯೂ ಮುಗಿದ ಒಂದು ಬ್ಯಾಟನ್ನೇ ಸೂರ್ಯನಿಗೆ ಕೊಡಿಸಿದ್ದರು. ಮುಂದೊಂದೆಡೆ ಸಿಕ್ಕ ಸಣ್ಣ ವುಡ್ ಲೇತಿನಲ್ಲಿ ಕೆತ್ತಿ, ಕಡಿದು, ಬಿಸಾಡಿದ್ದ ಕೆಲವು ಸುಂದರ ಅಸಂಗತ ಶಿಲ್ಪದಂತಿದ್ದ ಮರದ ತುಂಡುಗಳನ್ನೂ ಸಂಗ್ರಹಿಸಿದ್ದರು. ಕೊನೆಗೆ ಜಮ್ಮು ನಿಲ್ದಾಣದಲ್ಲಿ ಬೇಸ್ ಬಾಲ್ ಬ್ಯಾಟ್ ಕೂಡಾ ಕೊಂಡು ಅವರು ಹೊರೆಯನ್ನು ಏರಿಸಿದ್ದೆಲ್ಲ ಕಾಶ್ಮೀರ ಸ್ಮರಣೆಗೇ ಸಲ್ಲುತ್ತದೆ!
ದಾಲ್ ಸರೋವರದಲ್ಲಿ ಕಂಡ ಭಾರೀ `ಕೇಸರ್ ಭಂಡಾರ’ದಿಂದ ತೊಡಗಿ, ಬಗಲಲ್ಲಿ ಜೋಳಿಗೆ ನೇಲಿಸಿಕೊಂಡು ಹೋದಲ್ಲಿ ಬಂದಲ್ಲಿ ಎಡತಾಕುವವರವರೆಗೆ ಕೇಸರಿ ನಮ್ಮನ್ನು ಕಾಡುತ್ತಲೇ ಇತ್ತು. ಆದರೆ ಸೀಮಿತ ಋತುಮಾನದಲ್ಲಷ್ಟೇ ಸುಮಸೂಸುವ ಕೇಸರಿ ಹೊಲಗಳ ಪ್ರತ್ಯಕ್ಷ ದರ್ಶನ ಭಾಗ್ಯ ನಮಗೊದಗಲಿಲ್ಲ. ಅದಕ್ಕೂ ಇದು ಸೀಸನ್ ಅಲ್ಲ ಎಂದಿದ್ದ ಗಿರೀಶರ ಮಾತಿನ ಸತ್ಯಾಸತ್ಯತೆ ನಾವು ಇನ್ನು ಪ್ರಶ್ನಿಸಿ ಪ್ರಯೋಜನವಿಲ್ಲ. (ಪಠ್ಯ ಪುಸ್ತಕದ ಕಠಿಣ ಸಮಸ್ಯೆಯೊಂದನ್ನು ಅಧ್ಯಯನ ಸಾಲದ ಶಿಕ್ಷಕ ಸಿಲೆಬಸ್ಸಿನಲ್ಲಿಲ್ಲ ಎಂದ ಹಾಗೂ ಇರಬಹುದು!)
ಕಾಶ್ಮೀರ ಒಣಹಣ್ಣುಗಳಿಗೂ ಪ್ರಸಿದ್ಧ ಎನ್ನುವ ಮಾತಿದೆ. ಅದಕ್ಕೆ ಸರಿಯಾಗಿ ಈ ದಾರಿಯಲ್ಲಿ ಒಂದು ಸಾಕಷ್ಟು ದೊಡ್ಡ `ಡ್ರೈ ಫ್ರೂಟ್ಸ್ ಅಂಡ್ ನಟ್ಸ್’ ಮಳಿಗೆಗೆ ಭೇಟಿ ಕೊಟ್ಟಿದ್ದೆವು. ತಮಾಷೆ ಎಂದರೆ ಕಾಶ್ಮೀರದ ಕೃಷಿಗೇನೂ ಸಂಬಂಧವಿಲ್ಲದ ಖರ್ಜೂರ, ಗೇರುಬೀಜದಂತಹ ವಸ್ತುಗಳೂ ಇಲ್ಲಿ ಕಾಶ್ಮೀರದ ಮೊಹರಿನಲ್ಲಿ ಆಕರ್ಷಕವಾಗಿ ಕಂಡು ಮಾರಿಹೋಗುತ್ತವೆ. ಕಾಶ್ಮೀರದ ವಿಶೇಷ ಪಾನೀಯ ಪಾಕ, ಹಸಿರು ಚಾ ಸೊಪ್ಪಿನದೇ ವಿಶೇಷ ಕಷಾಯ – ಕಹ್ವಾಟೀಯನ್ನೂ ಇಲ್ಲಿ ಗಿರೀಶ್ ಕೊಡಿಸಿದ್ದರು. ಹಾಲಿಲ್ಲದ ಈ ಸುವರ್ಣವರ್ಣದ ಚಾವನ್ನು ಎಲ್ಲರು ಹೊಸರುಚಿಯೆಂದೇ ಚಪ್ಪರಿಸಿ ಸವಿದೆವು.
ಊಟದ ಹೊತ್ತಿಗೆ ನಮ್ಮ ಸವಾರಿ ಪೆಹಲ್ಗಾಂ ತಲಪಿತ್ತು. ವರ್ಷಕ್ಕೊಮ್ಮೆ (ಕೆಲವು ವಾರಗಳ ಅವಧಿಯಲ್ಲಿ) ನಡೆಯುವ ವಿಖ್ಯಾತ ಅಮರನಾಥ ಯಾತ್ರೆಯ ತಳಶಿಬಿರವಾಗಿ ಪೆಹೆಲ್ಗಾಂ ಪ್ರಸಿದ್ಧ ಮತ್ತು ಆ ನಿಟ್ಟಿನಲ್ಲಿ ಸಾಕಷ್ಟು ಬೆಳವಣಿಗೆಯನ್ನೂ ಕಂಡ ಸ್ಥಳ. ಆ ಜಾತ್ರಾ ಕಾಲದಲ್ಲಿ ಪರಸ್ಥಳದ ವಾಹನಗಳಿಗೆ ಇದೇ ಕೊನೆಯ ನಿಲುಗಡೆ. ಆದರೆ ದಾರಿ ಮತ್ತೂ ಸುಮಾರು ಹದಿನಾರು ಕಿಮೀ – ಅಂದರೆ, ಚಂದನವಾಡಿಯವರೆಗೂ ಮುಂದುವರಿಯುತ್ತದೆ. ಆ ಸವಾರಿಗೆ ಜೀಪು, ಮತ್ತೂ ಮುಂದುವರಿಯುವ ಸೌಕರ್ಯಕ್ಕೆ ಕುದುರೆ/ಹೇಸರಗತ್ತೆಗಳ ಬಹುತೇಕ ನಿಷ್ಕರ್ಷೆ ನಡೆಯುವುದು ಪೆಹೆಲ್ಗಾಂನಲ್ಲೇ. ಗಿರೀಶ್ ಇಲ್ಲೂ ನಮ್ಮನ್ನು ಟ್ಯಾಕ್ಸೀ ಸ್ಟ್ಯಾಂಡಿಗೆ ಮುಟ್ಟಿಸಿ, ನಿರ್ಯೋಚನೆಯಿಂದ ಪರಭಾರೆ ಮಾಡಿಬಿಟ್ಟರು. ಜೀಪ್ ಹಾಗೂ ಕುದುರೆ ದಲ್ಲಾಳಿಗಳು ನಮಗೆ ಗೊತ್ತಿಲ್ಲದ ತಾಣಗಳ ಪಟ್ಟಿ ತೆಗೆಯುತ್ತ ಭಾರೀ ಎನ್ನುವ ಮೊತ್ತಗಳನ್ನು ಹೇಳುತ್ತಿದ್ದರು. ಇಂಥ ಚಿಲ್ಲರೆ ದಲ್ಲಾಳಿಗಳ ಅಥವಾ ಹೆಜ್ಜೆಹೆಜ್ಜೆಗೆ ಚೌಕಾಸಿಗಳ ಗಲ್ಲಿಯಲ್ಲಿ ಬಿದ್ದು ಮುಖ್ಯದಾರಿ ಕಳೆದು ಹೋಗಬಾರದೆಂಬ ಉದ್ದೇಶಕ್ಕೇ ನಾವು (ಅಥವಾ ಯಾರೂ) ಸಂಘಟಿತ ಒಂದು ದಲ್ಲಾಳಿಯಾಗಿ ಟ್ರಾವೆಲ್ಸ್ ನೆಚ್ಚುವುದಲ್ಲವೇ? ಅದನ್ನು ಸಮರ್ಪಕವಾಗಿ ನಿರ್ವಹಿಸದ ಗಿರೀಶ್ ಬಗ್ಗೆ ರೋಸಿ, ಗಣೇಶ್ ಭಟ್ ಮತ್ತು ಧನಂಜಯ ಸ್ವತಂತ್ರವಾಗಿ ಜೀಪ್ ನಿಷ್ಕರ್ಷಿಸಲು ಸ್ಟ್ಯಾಂಡಿನಿಂದಲೇ ಹೊರಹೋದರು. ಒಟ್ಟು ತಂಡದ ನಿಜ ನಿರ್ವಹಣೆಯಲ್ಲಿ ಟ್ರಾವೆಲ್ಸ್ ಸೋತ ಪರಿಗೆ ಪೆಹೆಲ್ಗಾಂನಲ್ಲೇ ನಡೆದ ಇನ್ನೊಂದೇ ಘಟನೆಯನ್ನು ನಾನು ಹೇಳಲೇಬೇಕು.
ಅಂದು ನಾವು ಶ್ರೀನಗರ ಬಿಡುವ ಮುಹೂರ್ತಕ್ಕೆ ಶಬೀರ್ ಟೂರ್ಸಿನ ಮೂರನೇ (ಸಣ್ಣದು) ವಾಹನವೊಂದು, ಖಾಲಿಯೇ ಚಾಲಕ ಮಕ್ಬೂಲ್ನೊಡನೆ ನಮ್ಮನ್ನು ಹಿಂಬಾಲಿಸಿತ್ತು. ಮೂಲದಲ್ಲಿ ಆ ವಾಹನದಲ್ಲಿ ಶಬೀರ್ ಟ್ರಾವೆಲ್ಸಿನ ನೇರ ಗಿರಾಕಿಯಾಗಿ ಮುಂಬೈಯ ಯುವಜೋಡಿಯೊಂದು (ಚಾರ್ಟರ್ಡ್ ಅಕೌಂಟೆಂಟ್ಸಂತೆ) ಕಾಶ್ಮೀರ ತಿರುಗಿತ್ತಂತೆ. ಅದರ ಕೊನೆಯ ಕಲಾಪವಾಗಿ ಆ ಯುವ ಜೋಡಿಯನ್ನು ಜಮ್ಮುವಿನ ವಿಮಾನ ನಿಲ್ದಾಣಕ್ಕೆ ಬಿಡುವುದಷ್ಟೇ ಬಾಕಿಯಿತ್ತು. ಆದರೆ ಅಷ್ಟರಲ್ಲಿ ಆ ತರುಣಿಗೆ ತಮ್ಮ ಕಾರಿನ ಚಾಲಕನ ನಡವಳಿಕೆ ಹಿಡಿಸದೆ ಸಂಸ್ಥೆಯ ಮಾಲಿಕ ಶಬೀರಿಗೆ ದೂರು ಸಲ್ಲಿಸಿದ್ದಳು. ವ್ಯವಹಾರ ಜಾಣ ಶಬೀರ್ ಗಿರೀಶ್ ಸಂಪರ್ಕಿಸಿ, ಆ ಜೋಡಿಯನ್ನು ತಾತ್ಕಾಲಿಕವಾಗಿ ಧಾರಾಳ ಸೀಟಿದ್ದ ನಮ್ಮ ಎರಡನೇ ಕಾರಿಗೇ (ಚೆನ್ನೈ ಕುಟುಂಬದ ನಾಲ್ವರಷ್ಟೇ ಇದ್ದ ಕಾರು) ವರ್ಗಾಯಿಸಿದ. ಪೆಹೆಲ್ಗಾಂವರೆಗೆ ಅವರ ಯೋಜಿತ ಕಾರು, ಖಾಲಿಯಾಗಿಯೇ ನಮ್ಮ ತಂಡವನ್ನು ಅನುಸರಿಸುವಂತೆ ಸೂಚಿಸಿದ. ಪೆಹೆಲ್ಗಾಂನಿಂದ ಮುಂದೆ ನಮ್ಮ ಎರಡನೇ ಕಾರಿನ ಚಾಲಕ – ಜೊಜಿಯಾ ಆಚೆ ಕಾರನ್ನು ವಹಿಸಿಕೊಂಡು ಯುವ ದಂಪತಿಯನ್ನು ಜಮ್ಮು ತಲಪಿಸುವಂತೆ ಮಾಡಿದ. ನಾವು ಯಾರೂ ವಿವರ ಕೇಳಲು ಹೋಗಲಿಲ್ಲ. ತೋರ ನೋಟಕ್ಕೆ ನಮ್ಮ ಕಲಾಪಗಳಿಗೆ ಬಾಧಕವಿಲ್ಲದ್ದು ಮತ್ತೆ `ರೌಡಿ ಚಾಲಕ’ನಿಂದ `ಪಾಪದ ತರುಣಿ’ಯ ಗೌರವಕ್ಕೆ ರಕ್ಷೆ ಒದಗಿದ್ದು ಸರಿ ಎಂದಷ್ಟೇ ಅನಿಸಿತ್ತು. ಆದರೆ ಆ ತರುಣಿ ಅನಂತನಾಗ್ – ಪೆಹೆಲ್ಗಾಂ ನಡುವೆ, ದಾರಿ ಅಷ್ಟೇನೂ ಒಳ್ಳೆಯದಿಲ್ಲದಲ್ಲಿ ಜೊಜಿಯಾನನ್ನು ಒಲಿಸಿಕೊಂಡು, ಕಾರು ಚಾಲನೆಯನ್ನು ತಾನೇ ನಡೆಸಿದಳು. ಇದರಿಂದ ಅದುವರೆಗೆ ಸಮಜೋಡಿಯಾಗಿ ಓಡಿಕೊಂಡಿದ್ದ ನಮ್ಮೆರಡು ವಾಹನಗಳು ನಿಧಾನಿಸುವಂತಾಯ್ತು. ಅದಕ್ಕೂ ಮುಖ್ಯವಾಗಿ, ಗಂಭೀರ ಕಾರು ಚಾಲನೆಯಲ್ಲಿ ಆಕೆಯ ಅನನುಭವದ ಪರಿಣಾಮವಾಗಿ ಅಪಘಾತವಾಗದಿದ್ದದ್ದು ಒಟ್ಟು ತಂಡದ ಅದೃಷ್ಟ. ಆ ಹಂತದಲ್ಲಿ ಒಣ ಹಣ್ಣುಗಳ ಅಂಗಡಿಯ ವಿರಾಮ ಬಂದಿತ್ತು. ಅಲ್ಲಿ ಚೆನೈ ಕುಟುಂಬದವರೂ ನಮ್ಮ ಚಾಲಕ (ಹಿರಿಯ) ಬಶೀರ್ ಕೂಡಾ ಜೊಜಿಯಾನನ್ನು ಗದರಿ ಸರಿಪಡಿಸಿದ. ಇಲ್ಲಿ ವ್ಯಾವಹಾರಿಕ ದಾಕ್ಷಿಣ್ಯಕ್ಕಾಗಿ ಗಿರೀಶ್ ಯುವಜೋಡಿಯನ್ನು ನಮ್ಮ ಬಳಗದೊಡನೆ ಸೇರಿಸಿಕೊಂಡದ್ದು ಸರಿಯಿರಬಹುದು. ಆದರೆ ಅದು ನಮ್ಮ ಭದ್ರತೆಯನ್ನೇ ಹಾಳುಮಾಡುವಾಗ ನಿಷ್ಪಾಕ್ಷಿಕವಾಗಿ ನಿಂತದ್ದು ಏನೇನೂ ಸರಿಯಲ್ಲ. ಪೆಹೆಲ್ಗಾಂನಲ್ಲಿ ಆ ಮೂರನೇ ಚಾಲಕನನ್ನು (ಅವಮಾನದಲ್ಲಿ ಮುಖ ಸಣ್ಣ ಮಾಡಿಕೊಂಡಿದ್ದ) ನಮ್ಮೊಡನುಳಿಸಿ, ಜೊಜಿಯಾ ಮುಂಬೈ ಜೋಡಿಯನ್ನು ಜಮ್ಮುವಿನತ್ತ ಒಯ್ದಾಗ ನಮ್ಮೆಲ್ಲರ ಅನುಕಂಪ ಪಕ್ಷಾಂತರ ಮಾಡಿತ್ತು!
ಆ ಲೆಕ್ಕದಲ್ಲಿ ಟೆಂಪೋ ಟ್ರಾವೆಲ್ಲರಿನೊಳಗಿದ್ದ ನಮ್ಮ ಮುಖ್ಯ ತಂಡ ಯಾವ ಪೂರ್ವ ಪರಿಚಯವಿಲ್ಲದೆಯೂ ಒಂದು ಬಳಗದಂತೇ ಉಳಿದದ್ದು ನಿಜಕ್ಕೂ ಆಶ್ಚರ್ಯ. ವ್ಯಕ್ತಿವೈಶಿಷ್ಟ್ಯ, ಒಳಗುಂಪುಗಳಲ್ಲೂ ರುಚಿಬೇಧ, ದೈಹಿಕ ಮಿತಿಗಳು ಸಾಕಷ್ಟಿದ್ದರೂ ತಂಡವಾಗಿ ನಮ್ಮೊಳಗೆ ಒಂದು ನಡೆಯಿತ್ತು, ಉದ್ದೇಶಪಡದೇ ಕುಟುಂಬದ ಬಂಧವಿತ್ತು. ವ್ಯಾನಿನೊಳಗೆ ಯಾರೂ ಶಾಶ್ವತಸ್ಥಾನಗಳಿಗೆ ಚಡಪಡಿಸಲಿಲ್ಲ, ಇದ್ದಲ್ಲೂ ಇತರರ ಅನುಕೂಲಗಳಿಗೆ ಸದಾ ಸ್ಪಂದಿಸುತ್ತಿದ್ದರು. ಊಟವಾಸಗಳ ಅವ್ಯವಸ್ಥೆಯನ್ನು ಆಡಳಿತದ ಮಟ್ಟದಲ್ಲಿ ವಿರೋಧಿಸಿದರೂ ನಮ್ಮೊಳಗೆ ಮೇಲು ಕೀಳು ಭಾವನೆ ಬರಲೇ ಇಲ್ಲ. ಸ್ವತಃ ಹಿರಿಯರಾದ ಗಣೇಶ್ ಭಟ್, ಉಷಾ ದಂಪತಿ ತಂಡಕ್ಕೇ ಹಿರಿಯರಂತೆ ಬಾಲರಾದ ಸೂರ್ಯ, ಮಹಾದೇವಿಯರು ಮನೆಮಕ್ಕಳಂತೆ ತಂಡ ನಡೆದಿತ್ತು. ಅನಿವಾರ್ಯತೆಗೆ ತಲೆಕೊಟ್ಟು ಗಣೇಶಭಟ್ ಮತ್ತು ಧನಂಜಯರು ಶ್ರೀನಗರದಲ್ಲಿ ದಾರಿ ಬಿಡಿಸುವಲ್ಲಿಂದ, ಕುದುರೆ ಜೀಪು ಬಾಡಿಗೆ ನಿಷ್ಕರ್ಷೆವರೆಗೆ ತೆಗೆದುಕೊಂಡ ನಿರ್ಧಾರಗಳನ್ನು ಯಾರೂ ಪ್ರಶ್ನಿಸಲಿಲ್ಲ, ಅನುಸರಿಸುವಲ್ಲಿ ಹಿಂಜರಿಯಲಿಲ್ಲ. [ವಾಸ್ತವದಲ್ಲಿ ನಾವಿಬ್ಬರು ಲಂಚ, ಇನಾಮು (ಟಿಪ್ಸ್) ವ್ಯವಸ್ಥೆಯನ್ನು ಎಂದೂ ಮನ್ನಿಸಿದವರಲ್ಲ. ನನ್ನ ವಿಚೇಚನೆಗೆ ಬಿಟ್ಟಿದ್ದರೆ, ಯಾವ ವಿಶೇಷ ಸೇವೆ ಅಥವಾ ಸೌಕರ್ಯವನ್ನು ಕೊಡದ ಮೂರೂ ಮುಖ್ಯ ಹೋಟೆಲುಗಳ ನೌಕರರಿಗೆ ಟಿಪ್ಸ್, ಕೊನೆಯಲ್ಲಿ ಗಿರೀಶರಿಗೆ ಕೊಟ್ಟ ಇನಾಮು ಖಂಡಿತವಾಗಿಯೂ ಸಲ್ಲುತ್ತಿರಲಿಲ್ಲ. ಹಾಗೆಂದು ನನ್ನ ಪಾಲನ್ನು ಕೊಡದುಳಿದಿದ್ದರೆ ಒತ್ತಾಯಿಸುವವರೂ ಇಲ್ಲ ಎನ್ನುವ ಅರಿವಿದ್ದೂ ಸಹಕರಿಸಿದ್ದೇನೆ.] ವೆಚ್ಚ ಅನಾವಶ್ಯಕ ಅಥವಾ ಯಾವುದೋ ಸ್ಥಳವಿಶೇಷ ತಮ್ಮ ಆಸಕ್ತಿಗೆ ಅಥವಾ ದೈಹಿಕ ಮಿತಿಗೆ ಹಿಡಿಸಿದ್ದಲ್ಲ ಎಂದು ಕೆಲವರು ಕೆಲವೊಮ್ಮೆ ಹಿಂದೆ ನಿಂತದ್ದಿತ್ತು. ವೀಕ್ಷಣಾನಂತರ ತಂಡ ಮರುಸಂಘಟನೆಗೊಳ್ಳುವಲ್ಲಿ ಕೆಲವರು ತುಸು ನಿಧಾನಿಸುವುದಿತ್ತು. ಇವು ಪಾಲಿನ ಮತ್ತು ತಾಳ್ಮೆಯ ಲೆಕ್ಕಗಳಲ್ಲಿ ಇತರರಿಗೆ ಹೊರೆಯಾಗುತ್ತಿತಾದರೂ ವ್ಯಾಜ್ಯವಾಗಲಿಲ್ಲ, ಕುಟುಂಬದೊಳಗಿನ ಇರಿಸುಮುರುಸಿನಂತೆ ತೇಲಿ ಹೋಗಿತ್ತು. ಮಾಲಿ ಉರುಫ್ ಮಹಾದೇವಿ ತನ್ನ ಮನೆಯಜ್ಜನಂತೇ ಗಣೇಶಭಟ್ಟರ ಬಹ್ವಂಶ ಸಾಣೆಮಂಡೆಯ ಅಂಚಿನಲ್ಲುಳಿದ ಬಿಳಿಗೂದಲಿನೆಡೆ ಕಪ್ಪು ಕೂದಲನ್ನೆಣಿಸಲು ತಿಣುಕಿದಾಗ ಎಲ್ಲರ ಮನಸ್ಸು ಹಗುರವಾಗುತ್ತಿತ್ತು. ವಾಹನ ಸಮ್ಮರ್ದದಲ್ಲಿ ಅನಿರ್ದಿಷ್ಟ ಸಿಕ್ಕಿಬಿದ್ದು ಸೆಕೆ, ದೂಳು, ಹೊಗೆ ಎಂದು ಎಲ್ಲ ತಹತಹಿಸುತ್ತಿದ್ದಾಗ ಸೂರ್ಯ ಗಂಭೀರವಾಗಿ “ಹೀಘೂ ಉಂಠೇ!! ಮಾನ್ಯ ಬಳಕೆದಾರರೇ…” ಎಂದು ಉದ್ಗರಿಸಿದಾಗ ಸಾಮೂಹಿಕ ನಗೆಯ ಅಲೆಯಲ್ಲಿ ತೇಲಿ ಹೋಗುತ್ತಿತ್ತು.
[ಅವಶ್ಯ ಮುಂದುವರಿಯಲಿದೆ, ಆದರೆ ನೂಕುಬಲ ನಿಮ್ಮ ಪ್ರತಿಕ್ರಿಯೆಗಳಲ್ಲಿದೆ ಎನ್ನುವುದನ್ನು ಮರೆಯಬೇಡಿ :-)]
WHEN WE ADMITTED A STUDENT FROM JAMMU AND KASHMIR HIS FATHER SAID THEIR PLACE IS JANNAT IN HINDI AND ASKED US TO VISIT THEIR PLACE AFTER SEEING THE PHOTOS I REALISED HOW TRUE IT IS
ಫೋಟೊ ಸಹಿತ್ ನಮ್ಮ ಇತ್ತೀಚಿನ ನಂದಾದೇವಿ ಚಾರಣ ದ ಒಂದು ಬರವಣಿಗೆ ಸುರುಮಾಡಿದ್ದೆ.. ನಿಮ್ಮ ಈ ವಿವರ.. ವಿಡಿಯೋ ನೋಡುವುದಕ್ಕಿಂತ ಈ ತರ ಫೋಟೋಹಾಕಿದ್ದನ್ನ ಓದುವುದು.. ಇಂತಹ ಸ್ಥಳ ವನ್ನ ಎರಡು ಬಾರಿ ನೋಡಿದ ನನಗೆ ಬಹಳ ರಂಜನೆ ಕೊಟ್ಟಿತು. ಹಾಗೆ ನನ್ನ ಬರಹ ಫೋಟೋ ಹಾಕಿ ಮಾಡಲು ಇಲ್ಲಿ ತುರುಕಲು ಸ್ಪೂರ್ತಿ ನೀಡಿದೆ..
ಹಣದ ವಿಷಯವನ್ನು ಪ್ರತ್ಯೇಕವಾಗಿ ನೋಡಿದ್ದಾದರೆ ಸೋನೂಮಾರ್ಗ್ ನ್ನು ನಾವು ತುಂಬಾ ಆಸ್ವಾದಿಸಿದೆವು… ನಿಮ್ಮ ಅನುಭವ, ನೀವು ದೃಷ್ಟಿ ಕೋನ ಎಲ್ಲವೂ ಭಿನ್ನ….