ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ
ಒಡಿಶಾದ ಒಡಲೊಳಗೆ ಅಧ್ಯಾಯ (೧೦)

ಭುವನೇಶ್ವರದಲ್ಲಿ ಪ್ರಸಿದ್ಧ ದೇವಸ್ಥಾನಗಳಿದ್ದ ಹಾಗೇ ನೋಡಲೇಬೇಕಾದ ವಸ್ತುಸಂಗ್ರಹಾಲಯಗಳೂ ಇವೆ. ಒಂದೇ ದಿನದಲ್ಲಿ ವಿವರವಾಗಿ ಎಲ್ಲವನ್ನೂ ನೋಡಲು ಕಷ್ಟಸಾಧ್ಯ. ಹಾಗಾಗಿ ನಮ್ಮ ಪಟ್ಟಿಯಲ್ಲಿದ್ದ ಆದಿವಾಸಿ/ಬುಡಕಟ್ಟು ವಸ್ತು ಸಂಗ್ರಹಾಲಯ, ಜೀವವೈವಿಧ್ಯ ವಸ್ತು ಸಂಗ್ರಹಾಲಯ, ಒಡಿಶಾ ರಾಜ್ಯ ವಸ್ತು ಸಂಗ್ರಹಾಲಯಗಳ ಪೈಕಿ ಒಂದನ್ನು ಮಾತ್ರ ಆರಿಸಿಕೊಳ್ಳಬೇಕಾಗಿ ಬಂತು.

ಪರಶುರಾಮೇಶ್ವರ ದೇವಾಲಯದಿಂದ ನೇರವಾಗಿ ಒಡಿಶಾ ರಾಜ್ಯ ವಸ್ತುಸಂಗ್ರಹಾಲಯಕ್ಕೆ ಬಂದೆವು. ಸರ್ಕಾರಿ ಸ್ವಾಮ್ಯದಲ್ಲಿದ್ದರೂ ಸ್ವಚ್ಛ ಮತ್ತು ಅಚ್ಚುಕಟ್ಟಾದ ವ್ಯವಸ್ಥೆಗಳಿದ್ದವು. ಶಾಲಾ ಮಕ್ಕಳು ತಂಡೋಪತಂಡವಾಗಿ ಭೇಟಿ ನೀಡುತ್ತಿದ್ದರು. ೪ ಮಾಳಿಗೆಗಳ ೫ ಹಂತಗಳ ಬೃಹತ್ ಸಂಗ್ರಹಾಲಯ. ಚಾರಿತ್ರಿಕ ವಿಷಯಗಳಿಗೆ ಸಂಬಂಧಪಟ್ಟವು ಕೆಳ ಅಂತಸ್ತಿನಲ್ಲಿ ಮೊದಲಿಗೇ ಇದ್ದದ್ದರಿಂದ ವಿವರವಾಗಿ ನೋಡಿದೆವು. ಈ ಪ್ರದೇಶವನ್ನಾಳಿದ ರಾಜಮನೆತನಗಳು, ಶಾಸನಗಳು, ನಾಣ್ಯಗಳು, ಲಿಪಿಗಳು, ಉತ್ಖನನದಲ್ಲಿ ದೊರೆತ ಶಿಲ್ಪ ಇನ್ನಿತರ ವಸ್ತುಗಳನ್ನೆಲ್ಲಾ ಗಾಜಿನ ಕಪಾಟುಗಳಲ್ಲಿ ಕಾಲಾನುಕ್ರಮದಲ್ಲಿ ಜೋಡಿಸಿಟ್ಟಿದ್ದಾರೆ. ಇವುಗಳಿಗೆ ಸಂಬಂಧಿಸಿದ ವಿವರಗಳೂ ಅಲ್ಲೇ ಲಭ್ಯವಿವೆ. ಮುಂದಿನ ಹಂತಗಳಲ್ಲಿ ಪ್ರಾಣಿ, ಪಕ್ಷಿ, ವೃಕ್ಷ, ಅರಣ್ಯ, ಮೀನು, ಲೋಹ, ಬುಡಕಟ್ಟುಜನಾಂಗ, ವಾದ್ಯ, ಶಸ್ತ್ರ, ವಸ್ತ್ರ, ಆಭರಣ, ಚಿತ್ರಕಲೆ, ಕೆತ್ತನೆ ಹೀಗೆ ಹಲವಾರು ವಿಷಯಗಳಿಗೆ ಸಂಬಂಧಿಸಿದ ವಸ್ತುಗಳಿವೆ. ಆಸಕ್ತರು ವಿವರವಾಗಿ ಓದುವುದಿದ್ದರೆ ವಾಚನಾಲಯವೂ ಇದೆ. ನಾವು ಅಲ್ಲಿ ಕಳೆದ ಸುಮಾರು ಎರಡೂವರೆ ಗಂಟೆಗಳಲ್ಲಿ ಇಡೀ ಒಡಿಶಾದ ಚಿತ್ರಣವನ್ನು ಕಣ್ಣು, ಮನಗಳಲ್ಲಿ ತುಂಬಿಕೊಂಡೆವು ಎನ್ನಬಹುದು. ಇಷ್ಟೇ ಆದರೆ ಸಾಕೆ? ನಮ್ಮ ಚೀಲಗಳನ್ನೂ ತುಂಬಿಕೊಳ್ಳ ಬೇಡವೇ? ಅದಕ್ಕೂ ಅವಕಾಶ ಸಿಕ್ಕಿತೆನ್ನಿ. ಈ ವಸ್ತು ಸಂಗ್ರಹಾಲಯದಲ್ಲೇ ಒಂದು ಕಡೆ ಕೈಮಗ್ಗವನ್ನೂ ಇಟ್ಟು ಬಟ್ಟೆ ತಯಾರಿಯೂ ನಡೆದು, ಅಲ್ಲೇ ಮಾರಾಟಕ್ಕೂ ಇಟ್ಟಿದ್ದರು. ಒಡಿಶಾದ ಕೈಮಗ್ಗ ಕಲೆ ಬಹಳ ಸುಂದರ. ‘ಇಕ್ಕತ್’ ಅಥವಾ ಪೋಚಂಪಲ್ಲಿ ಎಂದೂ ಕರೆಯಲಾಗುವ ನೆಯ್ಗೆಯ ವಿನ್ಯಾಸ ಸಾಂಪ್ರದಾಯಿಕ ಉಡುಪಗಳ ಆಸಕ್ತರಿಗೆ ತುಂಬಾ ಅಚ್ಚುಮೆಚ್ಚಿನದು. ಸೀರೆ, ಚೂಡಿದಾರ್ ಬಟ್ಟೆ, ಕರವಸ್ತ್ರ, ಶಾಲು ಇತ್ಯಾದಿಗಳ ತಯಾರಿಯ ಕಷ್ಟವನ್ನು ಕಣ್ಣಾರೆ ಕಂಡವರಿಗೆ ಖರೀದಿಸುವಾಗ ದುಬಾರಿಯೆನಿಸದು.

ಸ್ವಲ್ಪ ಗಮನಿಸಿದರೆ ಒರಿಯಾಗಳು ತಮ್ಮ ಪರಂಪರೆಯ ಹೆಮ್ಮೆಯ ಹರಿಕಾರರು ಎಂಬುದು ಗೊತ್ತಾಗುತ್ತದೆ. ಹತ್ತಿಯ ವಸ್ತ್ರಗಳು, ಕೈಮಗ್ಗದ ಬಟ್ಟೆಗಳು, ಸಾಂಪ್ರದಾಯಿಕ ಶೈಲಿಯಲ್ಲೇ ಕಚ್ಚೆ ಹಾಕಿ ಸೀರೆ ಉಡುವ ಸ್ತ್ರೀಯರು, ಸುಂದರವಾದ ಶಾಲುಗಳನ್ನು ಧರಿಸಿದ ಪುರುಷರು, ಒಡಿಶಾದ ಹಳ್ಳಿಗಳಲ್ಲಿ ಮಾತ್ರವಲ್ಲ, ರಾಜಧಾನಿ ಭುವನೇಶ್ವರದಲ್ಲೂ ಕಾಣಸಿಗುತ್ತಾರೆ. ಪ್ರಪಂಚದ ಎಲ್ಲೇ ಇರಲಿ, ಕಟಕದ ಬೆಳ್ಳಿಯ ಆಭರಣಗಳು, ಪುರಿಯ ಶಂಖದ ಆಭರಣಗಳನ್ನೇ ಧರಿಸಿ ನೃತ್ಯ ಮಾಡುವ ಒಡಿಸ್ಸೀ ನರ್ತಕರನ್ನು ಕಂಡವರಿಗೆ ಪರಂಪರೆಯ ಬಗ್ಗೆ ಅವರ ಆದರ, ಗೌರವದ ಅರ್ಥವಾಗುವುದು. ಇಂತಹ ಒಡಿಸ್ಸೀ ನೃತ್ಯವೊಂದನ್ನು ನೋಡಿಯೇ ನಮ್ಮ ಪ್ರವಾಸವನ್ನು ಮುಗಿಸಬೇಕೆನ್ನುವುದು ನಮ್ಮ ಆಶೆಯಾಗಿತ್ತು.

ಹಿಂದಿನ ದಿನ ತೋಶಾಲಿಯಲ್ಲಿ ಉಂಡ ಒರಿಯಾ ಊಟದ ಪರಿಮಳ ಇಂದೂ ಅಂತಹದ್ದೇ ಭೋಜನಶಾಲೆ ‘ದಲಮಾ’ಕ್ಕೆ ಎಳಕೊಂಡು ಹೋಯಿತು. ಊಟ ಮುಗಿಸಿ, ನಮ್ಮ ಒಡಿಸ್ಸೀ ನೃತ್ಯದ ಆಸೆಯನ್ನು ಹೊಸ ಚಾಲಕ ಸಂಗ್ರಾಮಸಿಂಗನಿಗೆ ತಿಳಿಸಿದೆವು. ಆತ “ಶನಿವಾರವಾದ್ದರಿಂದ ನೃತ್ಯ ನಡೆಯುವ ರವೀಂದ್ರ ಮಂಟಪ ಬೇಗನೇ ತುಂಬಿ ಬಿಡುತ್ತದೆ. ನಾವು ಮುಂಗಡ ಟಿಕೇಟು ಖರೀದಿಸುವುದು ಒಳ್ಳೆಯದು. ಅಲ್ಲಿಗೇ ಹೋಗುವಾ” ಎಂದ. “ಅಲ್ಲಿಂದ ಮುಂದೆ ನಂದಕಾನನಕ್ಕೆ ಹೋಗಿ ಪ್ರದರ್ಶನದ ವೇಳೆ ಅಂದಾಜು ೫.೩೦ಕ್ಕೆ ವಾಪಾಸು ಬರಬಹುದಲ್ವಾ?” ಎಂದು ಕೇಳಿದೆ. “ಇಲ್ಲ, ಇಲ್ಲ, ಅದು ಸಾಧ್ಯವಾಗದು. ನಂದಕಾನನ ತುಂಬಾ ದೂರವಿದೆ, ಟ್ರಾಫಿಕ್ ಕೂಡಾ ಇಂದು ಜಾಸ್ತಿ. ನೀವು ಇಲ್ಲೇ ಇದ್ದು ನೃತ್ಯ ನೋಡಿ ವಾಪಾಸು ಹೋಟೆಲ್ಲಿಗೆ ಹೋಗಿ” ಎಂದ.

ಗೂಗಲ್ ಮ್ಯಾಪಿನಲ್ಲಿ ಸಾಕಷ್ಟು ವಿವರಗಳನ್ನು ಮೊದಲೇ ತಿಳಿದುಕೊಂಡಿದ್ದರಿಂದ ಸಂಗ್ರಾಮಸಿಂಗನ ಉದಾಸೀನ ನನಗೆ ಅರ್ಥವಾಗಿತ್ತು. ಇವನೊಡನೆ ಈಗ ಸಂಗ್ರಾಮಕ್ಕೆ ಇಳಿಯಬೇಕಲ್ಲ ಎಂದು ಕೂಡಲೇ ಮನೋಹರರಿಗೆ “ಹ್ವಾಯ್, ನೀವು ಜಿ.ಪಿ.ಎಸ್ ಹಾಕಿ ಎಷ್ಟು ಹೊತ್ತು ಬೇಕು, ಟ್ರಾಫಿಕ್ ಹೇಗಿದೆ ಎಂದು ನೋಡಿ, ಅವನಿಗೆ ತೋರಿಸಿ” ಎಂದೆ. ಅದುವರೆಗೆ ಮಲಗಿಯೇ ಇದ್ದ ಮನೋಹರ್‍ರ ಜಿ.ಪಿ.ಎಸ್ ಖುಶಿಯಿಂದ ಎದ್ದು ಚುರುಕಾಯಿತು. ಮೆತ್ತಗಾದ ಸಂಗ್ರಾಮನ ಜತೆ ರಾಜಿಯಲ್ಲೇ ನಂದಕಾನನಕ್ಕೆ ಹೊರಟೆವು.

ತನ್ನ ಸೌಂದರ್ಯದಿಂದ ನಂದನವನವೆನಿಸಿಕೊಳ್ಳುವ ನಂದನಕಾನನ ಒಂದು ಬೃಹತ್ ವನ್ಯಸಂಗ್ರಹಾಲಯ. ಭುವನೇಶ್ವರ ನಗರದ ಹೊರವಲಯದಲ್ಲೇ ಇರುವುದರಿಂದ ಧಾರಾಳ ಮರಗಳೂ ನೀರಿನ ಆಶ್ರಯವೂ ಪಶು, ಪಕ್ಷಿಸಂಕುಲವೂ ಇವೆ. ಇದರಿಂದಾಗಿ ನಗರದ ವಾಹನಗಳ ಮಾಲಿನ್ಯದ ಪರಿಣಾಮ ವಿಪರೀತವೆನಿಸುವುದಿಲ್ಲ. ಈ ನಗರದಲ್ಲೂ ಚಂಡೀಗಢದಂತೆ ವಿಶಾಲವಾದ ರಸ್ತೆಗಳು, ಸಾಕಷ್ಟು ಹಸಿರಿನ ಹೊದಿಕೆಯೂ ಇದ್ದು ವಾಯು ವಿಹಾರಿಗಳಿಗೆ ಖುಷಿಯಾಗುವಂತಿದೆ. ಭುವನೇಶ್ವರ ಎಂಬ ಹೆಸರು ಬಂದುದೇ ಭುವಿ+ವನ+ಈಶ್ವರ ಎಂಬುದಾಗಿ ತಿಳಿಯಬಹುದು.

ನಂದನಕಾನನ ವನ್ಯಧಾಮದಲ್ಲಿ ವಿವಿಧ ರೀತಿಯ ಸಸ್ಯ ಉದ್ಯಾನಗಳು, ಉರಗ ಉದ್ಯಾನ, ಪ್ರಾಣಿಸಂಗ್ರಹಾಲಯ ಹೀಗೆ ಹಲವಾರು ವಿಭಾಗಗಳಿವೆ. ಇವುಗಳ ಪೂರ್ತಿ ವೀಕ್ಷಣೆಗೆ ಬೇಕಾಗುವ ಸಮಯ ಅವರವರ ಆಸಕ್ತಿಯ ಮೇಲೆ ಅವಲಂಬಿತವಾಗಿದೆ. ನಾವು ನಮ್ಮಲ್ಲಿದ್ದ ೨ ಗಂಟೆಗಳ ಅವಧಿಯಲ್ಲಿ ಟಿಕೆಟ್ ಕೊಂಡು, ಹುಲಿ, ಸಿಂಹ, ಕರಡಿ, ಒರಂಗುಟಾನ್, ನೀರಾನೆ, ಜಿರಾಫೆ ಮುಂತಾದವುಗಳನ್ನೂ ನೋಡಿದೆವು. ಬಿಳಿಹುಲಿಗಳನ್ನು ಮೊದಲ ಬಾರಿಗೆ ಕಂಡದ್ದು ವಿಶೇಷವೆನ್ನುವುದು ಬಿಟ್ಟರೆ, ಪ್ರಾಣಿಗಳನ್ನು ಪ್ರಾಣಿಸಂಗ್ರಹಾಲಯಗಳಲ್ಲಿ ಇರಿಸಿ ನೋಡುವಾಗ ಅವುಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತಂದ ತಪ್ಪಿತಸ್ಥ ಭಾವ ಅಲ್ಲಿ ಖುಶಿಪಡಲು ಬಿಡದು. ಸಾಕಷ್ಟು ಮಟ್ಟಿಗೆ ಕಾಡಿನ ರಚನೆ ಇದ್ದು, ಪ್ರಾಣಿಗಳಿಗೆ ಓಡಾಡುವ ವ್ಯವಸ್ಥೆ ಇದ್ದರೂ ಸಫಾರಿ ವಾಹನಗಳ ಡೀಸಲ್ ಹೊಗೆ, ಶಬ್ದ, ಜನರ ಕೇಕೆ, ಗದ್ದಲ ಅವುಗಳ ನೆಮ್ಮದಿ ಹಾಳು ಮಾಡಲು ಸಾಕು. ಆದಾಗ್ಯೂ ಸಾಕಷ್ಟು ಪ್ರಮಾಣದ ಜಿಂಕೆ, ಕಡವೆ, ಮಂಗ, ನವಿಲುಗಳು, ವಿಧವಿಧದ ಪಕ್ಷಿಗಳೂ ಇದ್ದವು.

ಸಂಜೆ ಸುಮಾರು ೫.೩೦ರ ಸಮಯಕ್ಕೆ ರವೀಂದ್ರ ಮಂಟಪಕ್ಕೆ ಬಂದಿಳಿದೆವು. ನಮ್ಮ ದುರದೃಷ್ಟಕ್ಕೆ ಅಂದು ಒಡಿಸ್ಸೀ ನೃತ್ಯ ಪ್ರದರ್ಶನವಿರಲಿಲ್ಲ; ಬರೀ ಸಂಗೀತ ಕಾರ್ಯಕ್ರಮವಿತ್ತು. ಒಂದು ವ್ಯಾನ್ ಜನ ನೃತ್ಯ ನೋಡಲು ಯಾವುದೋ ದೂರದ ಊರಿನಿಂದ ಬಂದಿರುವರೆಂದು ಸುದ್ದಿ ಕೇಳಿದ ನೃತ್ಯ ಗುರುಗಳೊಬ್ಬರು ಓಡೋಡಿ ಬಂದರು. ಅಲ್ಲೇ ಸಮೀಪ ಮತ್ತೊಂದು ರಂಗಮಂದಿರವಿರುವುದೆಂದೂ ಅಲ್ಲಿ ೬.೩೦ರನಂತರ ನೃತ್ಯ ಕಾರ್ಯಕ್ರಮವಿರುವುದೆಂದೂ ಹೇಳಿದರು. ಇಷ್ಟೆಲ್ಲಾ ಆಗುವಾಗ ಸಂಗ್ರಾಮನ ತಾಳ್ಮೆ ಮುಗಿಯುತ್ತಿರುವುದರ ಅರಿವಾಯಿತು. ಇನ್ನು ಅವನನ್ನು ಒತ್ತಾಯಿಸುವುದು ಬೇಡವೆಂದು “ಸರಿ ಮಾರಾಯ, ನಮ್ಮನ್ನು ಹೋಟೆಲ್ಲಿಗೆ ಮುಟ್ಟಿಸಿ ನೀನು ಮನೆಗೆ ಹೋಗು” ಎಂದೆವು. ಸಂಗ್ರಾಮಸಿಂಗ್ ತಕ್ಷಣ ಆದೇಶ ಪಾಲಿಸಿದ.

ರಾತ್ರಿಯೂಟ ಮುಗಿಸಿ, ಮಾರನೆ ದಿನ ಬೆಳಗ್ಗೆ ಬೇಗನೆ ಹೊರಡ ಬೇಕಾಗಿರುವುದರಿಂದ ಸಾಮಾನು, ಸರಂಜಾಮುಗಳ ವಿಲೇವಾರಿ ಮಾಡಿ ಮಲಗುವ ಮುನ್ನ ವಾಹನದ ವ್ಯವಸ್ಥೆಯನ್ನು ಖಾತ್ರಿ ಮಾಡಿಕೊಳ್ಳಲು ನಿರ್ಧರಿಸಿದೆವು. ಅದೇ ಸಮಯಕ್ಕೆ ಸಂತೋಷ ಫೋನ್ ಮಾಡಿ ಮರುದಿನ ತಾನೇ ಬಂದು, ನಮ್ಮನ್ನು ವಿಮಾನ ನಿಲ್ದಾಣಕ್ಕೆ ಬಿಡುವುದಾಗಿ ತಿಳಿಸಿದ. ಅದೇಕೋ ಸಂಗ್ರಾಮನ ಹೆಸರು ಕೇಳಿದಾಗಿನಿಂದಲೂ ಹೊಂದಾಣಿಕೆಯೇ ಆಗದ ನಮಗೆ ಈಗ ನೆಮ್ಮದಿಯ ನಿದ್ದೆ ಬಂತು.

ಮಾರನೆ ದಿನ, ನಾವು ತಯಾರಾಗುವಷ್ಟರಲ್ಲೇ ಬಂದು ಕಾದು ಕುಳಿತಿದ್ದ ಸಂತೋಷ, ಗಾಡಿಯನ್ನು ಎಂದಿನಂತೆ ಸ್ವಚ್ಛಗೊಳಿಸುತ್ತಿದ್ದ. ಇಂದು ಬರೀ ಅರ್ಧ ಗಂಟೆಯಷ್ಟೇ ನಾವು ಕುಳಿತುಕೊಳ್ಳುವವರು ಎಂದು ಗೊತ್ತಿದ್ದರೂ ಯಾವ ಅಸಡ್ಡೆಯನ್ನೂ ಮಾಡದೇ ಆಸನಗಳ ಬಟ್ಟೆಗಳನ್ನೆಲ್ಲಾ ಶುಚಿಯಾಗಿಟ್ಟಿದ್ದ ಸಂತೋಷನ ಮನೋಧರ್ಮ, ಒರಿಯಾ ಕಲಾವಿದರುಗಳಲ್ಲಿ ಕಾಣುವ ಶ್ರದ್ಧೆಯ ಕಾಯಕದ ಪ್ರತಿರೂಪವೆನಿಸಿತು.

ವಿಮಾನ ನಿಲ್ದಾಣ ತಲಪುತ್ತಲೇ ಗಾಡಿ ನಿಲ್ಲಿಸಿದ ಸಂತೋಷ ಬೀಳ್ಕೊಡುಗೆಯ ಅಂಗವಾಗಿ ಒಬ್ಬೊಬ್ಬರ ಬಳಿಗೆ ಬಂದು ಸಿಹಿ ತಿಂಡಿಯ ಪೆಟ್ಟಿಗೆಯನ್ನು ಮುಂದೆ ಒಡ್ಡಿದ. “ನನ್ನ ಕಡೆಯಿಂದ” ಎಂದ ನಾಚಿಕೆಯ ನಗುವಿನೊಂದಿಗೆ. ಈ ಸಿಹಿಯೂ ಹೊಟ್ಟೆ ಸೇರಲು ಹೆಚ್ಚು ತಡವಾಗಲಿಲ್ಲ. ಹೊಟ್ಟೆ ತುಂಬಿದ ಆ ಕ್ಷಣ “ನಾವು ಒಡಿಶಾದ ಒಡಲೊಳಗೋ ನಮ್ಮ ಒಡಲೊಳಗೇ ಒಡಿಶಾವೋ” ಎಂಬ ಸಂತೃಪ್ತಿಯ ಆನಂದಕ್ಕೆ ಸಾಕ್ಷಿಯಾಯಿತು. “ಓಹೋ! ಸಂತೋಷ, ನಮಗೆಲ್ಲಾ ಸಂತೋಷವಾಯಿತಪ್ಪಾ” ಎಂದು ಪ್ರತಿಕ್ರಿಯಿಸಿದ್ದಕ್ಕೆ ಇನ್ನಷ್ಟು ನಾಚಿಕೆಯ ನಗೆ ನಕ್ಕ. ತನ್ನ ಕಂಪೆನಿಯ ವಿಸಿಟಿಂಗ್ ಕಾರ್ಡ್ ಕೊಟ್ಟು “ನಿಮ್ಮ ಬಂಧು ಮಿತ್ರರಿಗೆ ಅವಶ್ಯ ತಿಳಿಸಿ, ಒಡಿಶಾ ಅವರ ಬರವಿಗೆ ಕಾಯುತ್ತಿದೆಯೆಂದು” ಎಂದ. “ಖಂಡಿತಾ” ಎಂದು ಬೀಳ್ಕೊಂಡೆವು. ಸಾಮಾನುಗಳನ್ನೆಲ್ಲಾ ಇಳಿಸಿ, ವ್ಯವಸ್ಥೆಯಾಗುವವರೆಗೂ ಇದ್ದು, ಕೈಬೀಸಿ ಸಂತೋಷ ಮರೆಯಾದರೂ, ನಮ್ಮೊಳಗಿನ ಸಂತೋಷ ಮರೆಯಾಗಲಿಲ್ಲ.

ವಿಮಾನ ನಿಲ್ದಾಣದಲ್ಲಿ ಬಿಸಿಬಿಸಿ ಮಸಾಲೆ ದೋಸೆಯ ಕೌಂಟರ್ ಇತ್ತು. ಸಾಮಾನ್ಯವಾಗಿ ‘ಹೆಚ್ಚುಮುಂದುವರಿದ’ ಕಡೆಗಳಲ್ಲಿ ಫಿಜ್ಜಾ, ಬರ್ಗರ್, ಸ್ಯಾಂಡ್ವಿಚ್‍ಗಳ ಹಾವಳಿಯೇ ಕಂಡಿದ್ದ ನಮಗೆ ಇಲ್ಲಿನ ದೋಸೆಯ ಕೌಂಟರ್ ಕೂಡಾ ಭುವನೇಶ್ವರವನ್ನು ಅಪ್ಯಾಯಮಾನವಾಗಿಸಿದೆಯೆನಿಸಿತು. “ಇದು ಹೀಗೆಯೇ ಇರಲಿ ದೇವರೇ” ಎಂಬ ಪ್ರಾರ್ಥನೆ ಅವನಿಗೆ ಮುಟ್ಟಿದರೆ ಸಾಕು.

ಈಗ ಮತ್ತೆ ದೂರದರ್ಶನ ಭಾರತಿಯಲ್ಲಿ ಕೋನಾರ್ಕ, ರಾಜಾರಾಣಿ, ಮುಕ್ತೇಶ್ವರ ನೃತ್ಯೋತ್ಸವಗಳ ಸಮಯ. ಒಡಿಸ್ಸೀ ನೃತ್ಯದ ನೇರ ಪ್ರಸಾರದ ಜತೆಗೇ ಬರುವ ಒಡಿಶಾ ಪ್ರವಾಸೋದ್ಯಮದ ಜಾಹೀರಾತು ಈಗ ಇನ್ನೂ ಹೆಚ್ಚು ಆಕರ್ಷಣೀಯವೆನಿಸುತ್ತಿದೆ. ನಾವು ನೋಡಿ ಬಂದ ಜಾಗಗಳ ಝಲಕ್ಕಿನೊಂದಿಗೆ[ picture 248 ]ನಾನೂ ಧ್ವನಿಗೂಡಿಸುತ್ತೇನೆ – “ಒಡಿಶಾ: ದ ಸೋಲ್ ಆಫ್ ಇನ್ಕ್ರೆಡಿಬಲ್ ಇಂಡಿಯಾ – ಸೀನಿಕ್, ಸೆರೀನ್, ಸಬ್ಲೈಮ್ (ಒಡಿಶಾ: ಅದ್ಭುತ ಭಾರತದ ಮೂಲ ಚೇತನ – ಸುಂದರ, ಪ್ರಶಾಂತ, ಉದಾತ್ತ!)”.

(ಒಡಿಶಾದ ಒಡಲೊಳಗೆ ಧಾರಾವಾಹಿ ಮುಗಿಯಿತು)