ರಂಗಾಯಣ ಮೈಸೂರು, ಇದರ ‘ಭಾರತೀಯ ರಂಗಶಿಕ್ಷಣ ಕೇಂದ್ರ’ದ ಯೋಜನೆಯಲ್ಲಿ ಒಂಬತ್ತನೇ ಯುವ ನಾಟಕಕರ್ಮಿಗಳ ತಂಡ (೨೦೧೭-೧೮) ಸಜ್ಜಾಗಿ, ಇದೇ ಮೇ ಮೂವತ್ತೊಂದರಂದು ಲೋಕಾರ್ಪಣವಾಗಿದೆ. ಸುಮಾರು ಇಪ್ಪತ್ತು ಮಂದಿ, ಒಂದು ವರ್ಷದ ಅವಧಿಯಲ್ಲಿ, ನಾಟಕ ಶಿಕ್ಷಣದ ಕಡುಪಾಕವನ್ನು ರಂಗಾಯಣದ ಹಿರಿಯ ಮತ್ತು ಹೊರಗಿನ ಅನುಭವೀ ರಂಗಕರ್ಮಿಗಳಿಂದ ಪಡೆದಿದ್ದಾರೆ. ತಂಡ ಅಧ್ಯಯನದ ಭಾಗವಾಗಿ ನಾಲ್ಕು ವೈವಿಧ್ಯಮಯ ಪೂರ್ಣ ನಾಟಕಗಳಲ್ಲಿ, ಸಾರ್ವಜನಿಕ ಪ್ರದರ್ಶನಕ್ಕೂ ಒಡ್ಡಿಕೊಳ್ಳುವಂತೆ ಸಜ್ಜಾಗಿತ್ತು. ಹಿಂದೆಲ್ಲ ಮೈಸೂರಿಗೇ ಸೀಮಿತಗೊಳ್ಳುತ್ತಿದ್ದ ಆ ಪ್ರದರ್ಶನಗಳು (ಒಂದು – ‘ಜಟಾಯು ಮೋಕ್ಷ’ವನ್ನುಳಿದು) ಇದೇ ಮೊದಲು ಮೊನ್ನೆ ಮೂರು ದಿನ (ಮೇ ೨೮, ೨೯ ಮತ್ತು ೩೦) ಮಂಗಳೂರಿಗೆ ಒದಗಿತ್ತು. ಆತಿಥೇಯತ್ವವನ್ನು ವಹಿಸಿಕೊಂಡವರು ಜರ್ನಿ ಥೇಟರ್ ಮತ್ತು ಅರೆಹೊಳೆ ಪ್ರತಿಷ್ಠಾನ. ಆ ಯುವಪಡೆ, ಹಳೆಗಾಲದ ಡಾನ್ ಬಾಸ್ಕೋ ಹಾಲಿನ ಮಿತಿ ಮತ್ತು ಅಕಾಲಿಕವಾಗಿ ಬಂದ ಭಾರೀ ಮಳೆಯಿಂದ ಸೊರಗಿದ ಪ್ರೇಕ್ಷಾವರ್ಗದ ಎದುರೂ ಕುಂದದ ಉತ್ಸಾಹದಿಂದ ಭರ್ಜರಿ ಪ್ರದರ್ಶನವನ್ನೇ ಕೊಟ್ಟಿತು. ‘ನಾಂದಿ’ ಎಂಬ ಹೆಸರಿನ ಈ ತ್ರಿದಿನ ನಾಟಕೋತ್ಸವದ ಮೊದಲ ನಾಟಕ ವೇಣೀಸಂಹಾರ.

ವರ್ಷದ ಮೊದಲಲ್ಲಿ ರಂಗಶಿಕ್ಷಣದ ವಿದ್ಯಾರ್ಥಿಗಳದು ರಾಜ್ಯದ ಎಲ್ಲ ಭಾಷಾರೂಢಿಗಳ (ವಿವಿಧ ಮಾತೃಭಾಷೆಯೊಡನೆ ಕನ್ನಡದ್ದೇ ಹಲವು ಪ್ರಬೇಧಗಳ) ಅಸಮ ಮಿಶ್ರಣ. ಅವನ್ನು ಪ್ರಾಥಮಿಕವಾಗಿ ಒಂದೇ ವಾಚಾ ಹದಕ್ಕೆ ತರುವಲ್ಲಿ ವೇಣೀಸಂಹಾರದ ಕೊಡುಗೆ ದೊಡ್ಡದು. (ಶಿಕ್ಷಣ ಕೇಂದ್ರದ ಮುಖ್ಯಸ್ಥರು ಹೇಳಿದ ಮಾತು.) ಇಂದು ಬಳಕೆಯಲ್ಲಿ ಯಾರದ್ದೂ ಅಲ್ಲದ, ವಾಸ್ತವದಲ್ಲಿ ಎಲ್ಲ ಕನ್ನಡಿಗರದ್ದೂ ಆದ ಹಳಗನ್ನಡದ ವೇಣೀಸಂಹಾರ ನಾಟಕವನ್ನು ಸಂದರ್ಭೋಚಿತ ಧ್ವನಿಭಾರಗಳೊಡನೆ ಕಲಾವಿದರು ಪ್ರಸ್ತುತಪಡಿಸಿದರು. ಸಂಸ್ಕೃತದಲ್ಲಿ ಭಟ್ಟನಾರಾಯಣ ವಿರಚಿಸಿದ ನಾಟಕ ಕೆಲವು ಕನ್ನಡಾನುವಾದಗಳನ್ನು ಕಂಡಿದೆ. ಇಲ್ಲಿ ಆಯ್ಕೆ ಮಾಡಿಕೊಂಡದ್ದು ಆಸ್ಥಾನ ವಿದ್ವಾನ್ ಎಂ ಸೀತಾರಾಮ ಶಾಸ್ತ್ರಿಗಳ ಹಳೆಗನ್ನಡ ಶೈಲಿಯದ್ದು. ನಿರ್ದೇಶಕ ಉಮೇಶ್ ಸಾಲಿಯಾನ್. ಶೈಲೀಕೃತ ಭಾಷೆ, ಸಾಮಾನ್ಯರಿಗೆ ಅಪರಿಚಿತವಾದ ಜಾಡುಗಳಲ್ಲೂ ಸಂಚರಿಸುವುದು ಸಹಜವಿತ್ತು. ಅವು ಉಚ್ಛಕಂಠದಲ್ಲಿ, ಸ್ಫುಟವಾಗಿ ಬರುತ್ತಿದ್ದರೂ ಸಭಾಭವನದ ಕೊರತೆಯೊಡನೆ ಮತ್ತು ತುಸು ವೇಗದ ನಡೆಯಿಂದ ಗ್ರಹಿಕೆಯೂ ಕಷ್ಟವಾಗುತ್ತಿತ್ತು. ಆದರೆ ಕತೆಯ ಬಹುಪಾಠಗಳನ್ನು, ಓದು, ಯಕ್ಷಗಾನ ಮುಂತಾದ ಬಹುಮಾಧ್ಯಮಗಳಲ್ಲಿ ಹೆಚ್ಚಿನ ಪ್ರೇಕ್ಷಾವೃಂದ ತಿಳಿದದ್ದೇ ಆದ್ದರಿಂದ ಕೊರತೆ ಕಾಡಲಿಲ್ಲ. ಅಲ್ಲದೆ, ಕಲಾವಿದರು ಯುಕ್ತ ರಂಗಪರಿಕರಗಳೊಡನೆ ಅರ್ಥಪೂರ್ಣವಾಗಿ ಕೊಟ್ಟ ಅಭಿನಯವಂತೂ ನಾಟಕವನ್ನು ನಿಸ್ಸಂದೇಹವಾಗಿ ಯಶಸ್ವೀಗೊಳಿಸಿತು.

ಕತೆಯ ಹಂದರ ತುಸು ವಿಶಿಷ್ಟ. ಮಹಾಭಾರತ ಎಂದೇ ಪ್ರಸಿದ್ಧವಾದ ಕಥನದ ನಿಜ ಹೆಸರು ‘ಜಯ’. ಅರ್ಥಾತ್ ಮಹಾಯುದ್ಧದ ಮೂಲಕ ಅಧರ್ಮದ ಮೇಲಿನ ಜಯ. ಪ್ರಸ್ತುತ ಪ್ರಯೋಗವಾದರೂ ಆ ಮಹಾಕಾವ್ಯದ್ದೇ ತೆರೆದಿಟ್ಟ ಕೆಲವು ಪುಟಗಳು ಎಂಬಂತೆ ನಾಟಕದುದ್ದಕ್ಕೂ ಎದುರು ವ್ಯಾಸಪೀಠದಲ್ಲಿ ತೆರೆದಿಟ್ಟ ಪುಸ್ತಕವನ್ನೇ ಇರಿಸಿದ್ದರು. ಮತ್ತೆ ಮಹಾಭಾರತದ ನಿಜ ಸೂತ್ರಧಾರನೇ ಶ್ರೀಕೃಷ್ಣ ಎನ್ನುವುದನ್ನು ಸಂಕೇತಿಸುವಂತೆ ನವಿಲುಗರಿ ಮುಡಿದವನೇ ಈ ನಾಟಕಕ್ಕೂ ಸೂತ್ರಧಾರನಾಗಿ ಕಾಣಿಸಿದ್ದು ಹೆಚ್ಚು ಅರ್ಥಪೂರ್ಣವಾಗಿತ್ತು. ದ್ರೌಪದಿಯ ಮುಡಿಗೆ ದುಶ್ಶಾಸನ ಕೈಯಿಕ್ಕಿ ಮಲಿನಗೊಳಿಸಿದಲ್ಲಿಂದ ತೊಡಗಿ, ಭೀಮನ ಸಾಹಸಿಕಕೈಯಲ್ಲಿ ಅದು ಪವಿತ್ರಗೊಳ್ಳುವವರೆಗಿನ ದೃಶ್ಯರೂಪಕವೇ ವೇಣೀಸಂಹಾರ (=ಮುಡಿ ಕಟ್ಟುವುದು) ನಾಟಕ. ಹೆಚ್ಚು ಕಡಿಮೆ ಹದಿಮೂರು ವರ್ಷಗಳ, ಅಸಂಖ್ಯ ಘಟನೆಗಳ ವಿಸ್ತಾರವನ್ನು ಒಂದೆರಡು ಗಂಟೆಯ ಪ್ರದರ್ಶನದೊಳಗೆ, ಅದೂ ಸಾಂಪ್ರದಾಯಿಕ ರಂಗದ ಮಿತಿಯೊಳಗೆ, ಸಮರಸದೊಡನೆ ತರುವುದು ತಂಡದ ತಾಕತ್ತಿಗೆ ನಿಜದ ಸವಾಲು. ದುಷ್ಟ ಕೈಗಳು ಮುಡಿ ಎಳೆದು, ಸೀರೆ ಸುಲಿಯುವಲ್ಲಿಂದ ತೊಡಗಿ, ರಕ್ತಸಿಕ್ತವಾದರೂ ಕೃತಕೃತ್ಯ ಕೈಗಳು ಮುಡಿ ಕಟ್ಟುವವರೆಗಿನ ತಂಡದ ಪ್ರದರ್ಶನ ನಮ್ಮನ್ನು ಆಸನಗಳ ತುದಿಗೆ ಅಕ್ಷರಶಃ ಕಟ್ಟಿ ಇಟ್ಟಿತ್ತು!

ವೈವಿಧ್ಯಮಯ ಘಟನಾ ಸರಣಿ, ತೀವ್ರ ಭಾವಗಳ ಪ್ರದರ್ಶನ, ಪರಿಚಿತ ಕತೆ ಸೇರಿದ ವೇಣಿಸಂಹಾರದಷ್ಟು ಸುಲಭವಲ್ಲ – ದೇಹಭಾನ, ನಾಟಕೋತ್ಸವದ ಎರಡನೇ ಪ್ರಯೋಗ. ಮನೋದೈಹಿಕ ಸಂತುಲನೆಯ ಸಂಕೀರ್ಣ ವಿಷಯವನ್ನು ಆಧರಿಸಿ, ಮರಾಠಿಯಲ್ಲಿ ಅಭಿರಾಮ್ ಭಡ್ಕಮ್ಕರ್ ಬರೆದ ನಾಟಕವನ್ನು ಕನ್ನಡಿಸಿದವರು ಸರಜೂ ಕಾಟ್ಕರ್. ಪ್ರಸ್ತುತ ತಂಡಕ್ಕೆ ನಿರ್ದೇಶಿಸಿದವರು ಚಿತ್ತರಂಜನ್ ಗಿರಿ. ನಾಟಕ ಒಂದು ಕಾಲಸ್ತರದಲ್ಲಿ, ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಆದರ್ಶಗಳ ಚೌಕ ಚೌಕ ಇಟ್ಟಿಗೆಗಳನ್ನಿಟ್ಟು ಸಮಾಜ ಕಟ್ಟಬಯಸಿದವರ ವೈಚಾರಿಕ ಹೆಣಗಾಟವನ್ನು ಬಿಡಿಸಿಡುತ್ತ ಹೋಗುತ್ತದೆ. ಒಂದು, ಗಾಂಧಿ ಕಲ್ಪನೆಯ ಬ್ರಹ್ಮಚರ್ಯ ಬೋಧಿಸುವ ಬಾಲವಿಧವೆ ಮತ್ತು ಅನಾಥ ಮಹಿಳೆಯರ ಆಶ್ರಮ. ಇನ್ನೊಂದು, ವರ್ತಮಾನ ಕಾಲದಲ್ಲಿ ಅದೇ ಮೌಲ್ಯಗಳನ್ನು ವೇಷಪಲ್ಲಟಿಸಿ ರೂಢಿಸಲು ಯತ್ನಿಸುವ ಕಾಲೇಜು. ಇವನ್ನು ಮೊದಲು ಅಕ್ಕಪಕ್ಕದಲ್ಲೇ ಇಟ್ಟು ವಿಸ್ತರಿಸಿದರು. (ಹಳತಕ್ಕೆ ಕಂದು, ಹೊಸತಕ್ಕೆ ಹಸಿರು ದಾರಂದ!) ಆದರೆ ಮುಂದುವರಿದಂತೆ ಎರಡೂ ಕಾಲಗಳಲ್ಲಿ ಆಶಯದ ಆದರ್ಶ ಸೋತು, ಪ್ರಕೃತಿ ಸ್ಥಾಪಿತವಾಗುವ ಚಿತ್ರಗಳು ಸ್ಫುಟವಾಗುತ್ತಿದ್ದಂತೆ ದೃಶ್ಯಗಳು ಮಿಶ್ರವಾಗುವುದು ತುಂಬ ಪರಿಣಾಮಕಾರಿಯಾಗಿತ್ತು. ಹಿಂದಿನ ಕಾಲದ ಪ್ರಯೋಗ ವೈಫಲ್ಯದ ಸುಪ್ತಬೀಜ, ಇಂದಿನದ್ದರೊಡನೆ ಸೇರಿ, ನಿಜಕ್ಕೂ ವಿಕಸಿಸಿದ ಸಂತೋಷದ ಭಾವದೊಡನೆ ನಾಟಕ ಮನದುಂಬಿತು. ನಾಟಕಗಾತಿ (ಜಯಶ್ರೀ ಇಡ್ಕಿದು) ಮತ್ತು ಪ್ರಾಂಶುಪಾಲೆ (ರಂಜಿತಾ ಮತ್ತೂರು?) ಬಿಗು ವೈಚಾರಿಕ ಹಂದರದ ಪ್ರಧಾನ ಅಡ್ಡ ಮತ್ತು ನೀಟ ಎಳೆಗಳಾಗಿಯೇ ಕಾಣಿಸಿದರು.

ವೇಣಿಸಂಹಾರಕ್ಕೆ ಚಂಡೆಯಿಂದ ತೊಡಗಿ ಬಹುವಿಧವಾದ ಹಿಮ್ಮೇಳವೇ ಇತ್ತು. ಪರಿಸರದ ಸಮಸ್ಯೆಯೂ ಸೇರಿ ಅದು ಒಂದು ಮಿತಿಯಲ್ಲಿ ಗದ್ದಲವೆನಿಸಿದ್ದೂ ಇತ್ತು. ಆದರೆ ದೇಹಭಾನದಲ್ಲಿ (ಅನ್ಯೋದ್ದೇಶಗಳಲ್ಲಿ ರೂಪುಗೊಂಡ) ಪೂರ್ವಮುದ್ರಿತ ಧ್ವನಿಗಳನ್ನು (ಆಲಾಪ, ಭಾವಗೀತೆ…) ಅರ್ಥಪೂರ್ಣವಾಗಿ ಆಯ್ದು, ಕಸಿ ಮಾಡಿದ ಪರಿಯೂ ಪ್ರದರ್ಶನದ ಯಶಸ್ಸಿಗೆ ತುಂಬ ಗಮನಾರ್ಹವಾದ ಕೊಡುಗೆಯನ್ನೇ ಕೊಟ್ಟಿದೆ.

ಎರಡನೇ ನಾಟಕದಂದು ಮಂಗಳೂರು ನಗರ ವಿಪರೀತ ನೀರು ಕುಡಿದಿತ್ತು. ಪ್ರೇಕ್ಷಕ ಸಂಖ್ಯೆ ಹತ್ತಿಪ್ಪತ್ತು ಮೀರಲಿಲ್ಲ. ಅದರಲ್ಲೂ ನಾಲ್ಕೆಂಟು ಮಂದಿ ‘ಸಂಕಟಕ’ ಅರೆಹೊಳೆಯವರ ಬಾಲವೃಂದದವರು; ‘ದೇಹಭಾನ’ದ ವೈಚಾರಿಕ ಭಾರಕ್ಕೆ ಅತೀತರು! (ಗಮನಿಸಿ, ‘ಸಂಕಟಕ’! ತ್ರಿದಿನ ನಾಟಕೋತ್ಸವದ ಸಂಘಟನಾ ವೆಚ್ಚಗಳಲ್ಲಿ ಸ್ವಲ್ಪವಾದರೂ ಮರುಪೂರಣ ಮಾಡುತ್ತಿದ್ದ ಪ್ರವೇಶಧನವನ್ನೂ ಅಂದು ರದ್ದುಪಡಿಸಿ, ನಾಲ್ಕು ಪ್ರೇಕ್ಷಕರು ಹೆಚ್ಚಲಿ ಎಂದು ಹಾರೈಸಿದ ಅರೆಹೊಳೆ ಸದಾಶಿವರಾಯರಿಗೆ ಇದು ಅನ್ವರ್ಥ) ಎಲ್ಲ ಪ್ರದರ್ಶನ ಕಲಾವಿದರೂ ಕೆಲವೊಮ್ಮೆಯಾದರೂ ಅನುಭವಿಸುವ ಮತ್ತು ರೂಢಿಸಿಕೊಳ್ಳಲೇಬೇಕಾದ ಪಾಠ – the show must go on. ಅಂದು ರಂಗಶಿಕ್ಷಣಕೇಂದ್ರದ ಹೊಸ ಚಿಗುರುಗಳಿಗೆ ಈ ಪಾಠ ತೀರಾ ಮೊದಲಲ್ಲೇ ಮತ್ತು ಅಷ್ಟೇ ಅನಿರೀಕ್ಷಿತವಾಗಿ ಬಂದಿತ್ತು. ಆದರೆ ತಂಡ ಯಾವುದೇ ಉದಾಸೀನವಿಲ್ಲದೇ ಅದನ್ನು ಉತ್ತಮಾಂಕದಿಂದಲೇ ಉತ್ತೀರ್ಣಗೊಳಿಸಿದೆ.

ಅಂತಿಮ ದಿನದ ನಾಟಕ – ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್, ಮೂಲ ಮಹಾಕವಿ ಶೇಕ್ಸ್‍ಪಿಯರ್, ಕನ್ನಡಾನುವಾದ ನಿಸಾರ್ ಅಹಮದ್ ಮತ್ತು ನಿರ್ದೇಶಕಿ ಭಾಗೀರಥಿ ಬಾಯಿ ಕದಂ. ಹಳಗಾಲದ ರಂಗವನ್ನೇ (ಸಭಾಂಗಣವನ್ನೂ ಸ್ವಲ್ಪ ಸೇರಿಸಿಕೊಂಡು) ಯಥಾನುಕೂಲ ವಿಸ್ತರಿಸಿ, ಮೂರೂ ಲೋಕ ಕಾಣಿಸಿ (ಗಗನ, ಭುವಿ, ಪಾತಾಳ), ಮಾಯಾ ಬೆಸುಗೆಯಲ್ಲಿ ಅವನ್ನು ಚೊಕ್ಕ ಮೇಳೈಸಿ, ಕಳೆದೆರಡು ದಿನಗಳ ಮನಸ್ಸಿನ ಭಾರವನ್ನು ಹಗುರಾಗಿಸಿದ ಭಾರೀ ಗಮ್ಮತ್ತಿನ ಪ್ರಹಸನ. ಕಿನ್ನರಲೋಕದ ದಾಂಪತ್ಯ-ಮುನಿಸನ್ನೂ ಲೌಕಿಕದ ವರ-ನಿಶ್ಚಯದ ಗೇಲಿಯನ್ನೂ ತತ್ಕಾಲೀನ ಪ್ರೀತಿ-ಪ್ರೇಮದ ಸತ್ವವನ್ನೂ ಒಂದೇ ಹಗುರ ಎಳೆಯಲ್ಲಿ ಬಂಧಿಸಿ, ಲವಲವಿಕೆಯ ಜಾಡಿನಲ್ಲಿ ಮೆರವಣಿಗೆ ಮಾಡಿ ಸುಖಾಂತ್ಯ ಕಾಣಿಸಿತು ನಾಟಕ. ಮೊದಲ ಎರಡು ನಾಟಕಗಳಲ್ಲಿ ಅನಿವಾರ್ಯವಾದ ಗಾಂಭೀರ್ಯವನ್ನು ಕಳಚಿ, ಶುದ್ಧ ಜನಪ್ರಿಯವನ್ನೂ ಈ ತಂಡ ಕೊಡುವಲ್ಲಿ ಸಮರ್ಥವಿದೆ ಎಂದೂ ನಿಸ್ಸಸ್ಂದೇಹವಾಗಿ ಸಾರಿತ್ತು ಪ್ರದರ್ಶನ. (ಕನ್ನಡದ ಆಡುನುಡಿಯ ಪ್ರಬೇಧ, ಉದಾಹರಣೆಗೆ ಮಂಡ್ಯ, ದಕ, ಧಾರವಾಡ… ಇತ್ಯಾದಿಗಳನ್ನು ಇಲ್ಲಿ ದುಡಿಸಿಕೊಂಡದ್ದು, ಒಟ್ಟಾರೆ ತಂಡದ ಮೂಲವಾಸನೆಯನ್ನು ಪ್ರೇಕ್ಷಕರಿಗೆ ನೆನಪಿಸಿದಂತೆಯೂ ಇತ್ತು.)

ರಂಗಶಿಕ್ಷಣ ಕೇಂದ್ರದ ಮುಖ್ಯಸ್ಥರಾದ ಎಸ್. ರಾಮನಾಥ್ ಅವರೊಡನೆ ನನಗೊಂದು ಅನೌಪಚಾರಿಕ ಮಾತುಕತೆಯ ಅವಕಾಶ ಒದಗಿತ್ತು. ಆಗ ತಿಳಿದಂತೆ, ಈ ಒಂದು ವರ್ಷದ ಕಲಿಕೆ ಮುಗಿಸಿ, ಡಿಪ್ಲೊಮಾ ಪದವಿ (ಕನ್ನಡ ವಿವಿ, ಹಂಪಿ ಅನುಮೋದಿತ) ಪಡೆಯುತ್ತಿರುವ ಯುವ ಕಲಾವಿದರು, ವಾಸ್ತವದಲ್ಲಿ ಕನಿಷ್ಠ ಪದವಿಪೂರ್ವ ಕಾಲೇಜು ಪೂರೈಸಿದ್ದರೆ ಸಾಕಿತ್ತಂತೆ. ಕನ್ನಡ ಓದಿ ಬರೆಯಲು ತಿಳಿಯುವುದಷ್ಟೇ ಕಡ್ಡಾಯ. ಆದರೆ ಹೆಚ್ಚಿನವರು ಪ್ರದರ್ಶನ ಕಲೆಯ ಮೋಹ, ಅದಕ್ಕೂ ಮಿಗಿಲಾಗಿ ಟೀವಿ, ಸಿನಿಮಾಗಳ ಪ್ರವೇಶಕ್ಕೆ ಇದು ಒಳ್ಳೆಯ ಮೆಟ್ಟುಗಲ್ಲು ಎಂದೇ ಭಾವಿಸಿ, ರಾಜ್ಯದ ಎಲ್ಲ ಮೂಲೆಗಳಿಂದಲೂ ಬಂದು ಸೇರಿದವರಂತೆ. ಪ್ರಸ್ತುತ ತಂಡದಲ್ಲಿ ಇಂಜಿನಿಯರಿಂಗ್, ಸ್ನಾತಕೋತ್ತರ ಪದವೀಧರರೂ ಇರುವುದು ಆಕಸ್ಮಿಕವಾದರೂ ಆಶ್ಚರ್ಯವೇನೂ ಅಲ್ಲ! ಆದರೆ ರಂಗಶಿಕ್ಷಣದ ಶಾಲೆ, ವಿದ್ಯಾರ್ಥಿಗಳ ಕನಿಷ್ಠ ಹಿನ್ನೆಲೆಯನ್ನಷ್ಟೇ ಲೆಕ್ಕಕ್ಕಿಟ್ಟುಕೊಂಡು, ಎಲ್ಲರಿಗೂ ಒಂದೇ ತೆರನ ಮತ್ತು ಬಹಳ ಬಿಗಿಯಾದ ಶಿಕ್ಷಣಾವಧಿಯನ್ನೇ ವಿಧಿಸಿತ್ತು. ವಾರದ ಏಳೂ ದಿನ, ವಿರಾಮಗಳು ಸೇರಿದಂತೆ ಬೆಳಿಗ್ಗೆ ಆರರಿಂದ ರಾತ್ರಿ ಎಂಟು ಮತ್ತು ಅವಶ್ಯವಿದ್ದಲ್ಲಿ ಸಂದರ್ಭಾನುಸಾರ ಹೆಚ್ಚೇ ದುಡಿಸಿತ್ತು. ರಾಮನಾಥರ ಮಾತನ್ನೇ ಉದ್ಧರಿಸುವುದಾದರೆ “ವೀಕ್ಲಿ ಹಾಲಿಡೇ ಆ ಹಬ್ಬ ಈ ಹಬ್ಬಾಂತ ವಿದ್ಯಾರ್ಥಿಗಳಿಗೆ ನಾವು ರಜೆ ಇಟ್ಟುಕೊಳ್ಳಲೇ ಇಲ್ಲ. (ಇಲ್ಲಿ ವಿದ್ಯಾರ್ಥಿಗಳಿಗಿಂತ ಶಿಕ್ಷಕ ವೃಂದದ ಶ್ರಮ, ತ್ಯಾಗ ತುಂಬ ದೊಡ್ಡದು) ಕಳೆದ ಇಡೀ ವರ್ಷದಲ್ಲಿ ನಾವಿವರಿಗೆ ಒಟ್ಟಾರೆ ಕೊಟ್ಟ ರಜೆ ಆರೇ ದಿನ!

ಅವರು ಮೊದಲು ಅನುಭವಿಸಿದ ಪರಂಪರಾಗತ ಶಿಕ್ಷಣಾವಧಿಗಳಲ್ಲಿ (ಪಿಯುಸಿ, ಡಿಗ್ರಿ, ಇಂಜಿನಿರ್ ಇತ್ಯಾದ್ದಿ), ಸಿಲೆಬಸ್ಸಿನ ಓದು, ಅವಕಾಶ ಸಿಕ್ಕರೆ ಮಾರ್ಕು ಗಳಿಸಲು ಒಳದಾರಿ, ಮುಟ್ಟಿದ್ದಕ್ಕೆ ಬಿಟ್ಟದ್ದಕೆ ರಜೆ ಎಲ್ಲ ಅನುಭವಿಸಿದ್ದಿರಬಹುದು. ಆದರೆ ಇದು ಅವರು ಒಲವಿನಿಂದ ಆಯ್ದುಕೊಂಡ ವಿಶೇಷ ಶಿಕ್ಷಣವಾದ್ದರಿಂದ ತುಂಬ ಗಂಭೀರವಾಗಿಯೇ ಸ್ವೀಕರಿಸಿದರು. ಅವರ ಉತ್ಸಾಹ ನಮ್ಮ ನಿರೀಕ್ಷೆಯನ್ನು ಮೀರಿಯೇ ಇತ್ತು. ಬೆಳಿಗ್ಗೆ ನಾಲ್ಕಕ್ಕೇ ಎದ್ದು, ಸ್ವತಂತ್ರವಾಗಿ ಸ್ವರಾಭ್ಯಾಸದಲ್ಲಿ ತೊಡಗುತ್ತಿದ್ದರು. ದಿನದ ಚಟುವಟಿಕೆಗಳ ಎಡೆಯ ಅಲ್ಪ ಬಿಡುವಿನಲ್ಲೂ ಜಡಬೀಳದೆ, ನಮ್ಮ ಸಮೃದ್ಧ ಗ್ರಂಥಾಲಯವನ್ನು ಧಾರಾಳ ಬಳಸಿಕೊಳ್ಳುತ್ತಿದ್ದರು. ನಾಟಕರಂಗದ ತಿಳುವಳಿಕೆಯ ದಿಗಂತ ವಿಸ್ತರಿಸಲು ಇನ್ನಿಲ್ಲದಂತೆ ಪುಸ್ತಕಗಳ ಓದನ್ನು ಹಚ್ಚಿಕೊಂಡಿದ್ದಾರೆ. ಇಂದು ನಾನು ಧೈರ್ಯದಿಂದ ಹೇಳಬಲ್ಲೆ, ನಾವಿವರಿಗೆ ಕೊಟ್ಟದ್ದು ಕೇವಲ ಒಂದು ವರ್ಷದ ತರಬೇತಿ. ಆದರೆ ಅವರಲ್ಲಿ ಬಹುತೇಕರು ಬರುವಾಗ ಕಟ್ಟಿಕೊಂಡು ಬಂದ ರಂಗಿನ ಕಲ್ಪನೆಗಳನ್ನು ಈಗ ಬದಲಿಸಿಕೊಂಡಿದ್ದಾರೆ. ಇಪ್ಪತ್ತರಲ್ಲಿ ಕನಿಷ್ಠ ಎಂಟು ಹತ್ತು ಮಂದಿಯಾದರೂ ತಮ್ಮ ಜೀವಮಾನವನ್ನೇ ನಾಟಕರಂಗಕ್ಕೆ ಮೀಸಲಿಡುವುದು ಖಂಡಿತ.”