ನೀನಾಸಂಗೆ ಔಪಚಾರಿಕತೆಯ ಕಟ್ಟುಪಾಡುಗಳು ಹಿಡಿಸುವುದಿಲ್ಲ. ಅನಿವಾರ್ಯತೆಯಲ್ಲಿ ಉದ್ಘಾಟನೆ, ಸಮಾರೋಪ ಕಲಾಪಗಳು ನಡೆದರೂ ದೊಡ್ಡವಾಗುವುದಿಲ್ಲ, ಗಟ್ಟಿ ಕೆಲಸವನ್ನು ತೋರಿಸಿ, ಉಪಯುಕ್ತತೆಯನ್ನು ಸಾರುತ್ತವೆ. ರಂಗಶಿಕ್ಷಣ ಇದರ ಪ್ರಧಾನ ಲಕ್ಷ್ಯ. ಅದರ ಭಾಗವಾಗಿ ಸಜ್ಜುಗೊಳ್ಳುವ ಅನೇಕ ನಾಟಕಗಳು ಅಲ್ಲೇ ಒಂದೋ ಎರಡೋ ಸಾರ್ವಜನಿಕ ಪ್ರದರ್ಶನಕ್ಕಷ್ಟೇ ಉಳಿದು ಬರ್ಖಾಸ್ತಾಗುತ್ತವೆ. ಶಿಕ್ಷಣ ಕೇಂದ್ರದ ಚಟುವಟಿಕೆಯನ್ನು ವಿಸ್ತೃತ ಕನ್ನಡ ಜಗತ್ತಿಗೆ ಪರಿಚಯಿಸುವುದರೊಡನೆ, ರಂಗಾಸಕ್ತಿ ಪ್ರೇರಿಸಲೆಂದೇ ಪ್ರತ್ಯೇಕವಾಗಿ ಸಂಘಟನೆಗೊಳ್ಳುವ, ಆಹ್ವಾನಿತ ರಂಗ ಪರಿಣತರ ತಂಡ ತಿರುಗಾಟ. ಇವು ನಿರ್ದಿಷ್ಟ ರಂಗಕೃತಿಗಳೊಡನೆ ಎರಡು ಮೂರು ತಿಂಗಳು ‘ಕಸರತ್ತು’ ನಡೆಸಿ, ನೀನಾಸಂನ ವಾರ್ಷಿಕ ‘ಸಂಸ್ಕೃತಿ ಶಿಬಿರ’ದಲ್ಲಿ ಮೊದಲು ಸಾರ್ವಜನಿಕ ಪ್ರದರ್ಶನಕ್ಕಿಳಿಯುತ್ತವೆ. ಪ್ರತಿ ತಿರುಗಾಟ ತಂಡದ ಬಂಧ ಮತ್ತು ಪ್ರದರ್ಶನಾವಧಿ ಒಂದು ವರ್ಷಕ್ಕೇ ಸೀಮಿತ. ತಿರುಗಾಟದಲ್ಲಿ ಕೆಲವು ಮುಖಗಳು ಮತ್ತೆ ಮತ್ತೆ ಕಾಣಿಸಿದರೂ ವ್ಯವಸ್ಥೆಯಲ್ಲಿ ಅವು ಪ್ರತಿವರ್ಷ ಸ್ವಪ್ರೇರಣೆಯಿಂದ ಮರುನೇಮನಗೊಂಡೇ ಬರುತ್ತವೆ ಎನ್ನುವುದನ್ನು ಮರೆಯುವಂತಿಲ್ಲ. ಹೀಗಾಗಿ ನೀನಾಸಂನ ಯಾವ ರಂಗ ಪ್ರಯೋಗಗಳೂ ಖಾಯಂ ಅಲ್ಲ. ಆದರೆ ವೃತ್ತಿ ರಂಗಭೂಮಿಗಳಲ್ಲಿ ಒಮ್ಮೆ ಪ್ರದರ್ಶನಕ್ಕೆ ಬಂದ ಹೆಚ್ಚಿನ ಕೃತಿಗಳು (ಕೆಲವು ಪಾತ್ರಧಾರಿಗಳು ಬದಲಾದರೂ) ಚಿರಾಯುಗಳು. ಹೊಸ ನಾಟಕಗಳು ವಿರಳವಾಗಿ ಬರುತ್ತವೆ, ಅಷ್ಟೆ. ಸತ್ಯ ಹರಿಶ್ಚಂದ್ರ, ಲಂಚಾವತಾರ, ಸದಾರಮೆ, ಬಸ್ ಕಂಡಕ್ಟರ್ ಇತ್ಯಾದಿ ನಾಟಕಗಳ ನೂರಾರು ಪ್ರದರ್ಶನಗಳು ರಾಜ್ಯಾದ್ಯಂತ ಹಲವು ವರ್ಷಗಳ ಕಾಲ ನಡೆದಿವೆ. ಕನ್ನಡ ನಾಟಕಗಳ ಮಾತು ಬಂದಾಗೆಲ್ಲ ನಾವು ಮತ್ತೆ ಮತ್ತೆ ಗುಬ್ಬಿ, ಹಿರಣ್ಣಯ್ಯ, ಚಿಂದೋಡಿ ಇತ್ಯಾದಿ ತಂಡಗಳ ಹೆಸರು ಕೇಳುತ್ತಿರುವುದ್ದೂ ಅದೇ ಕಾರಣಕ್ಕೆ.

ಯಾವುದೇ ರಂಗಕೃತಿಗಳು ನಿರ್ಮಾಪಕರ ಧೋರಣೆ ಮತ್ತು ಕಾಲದ ಕಟ್ಟಲೆಯಲ್ಲಿ ಮರವೆಗೆ ಸಂದು ಹೋಗುವುದನ್ನು ತಮ್ಮ ಸಣ್ಣ ಮಿತಿಯಲ್ಲಿ ಉಳಿಸಿಡುವ ಪ್ರಯತ್ನ ಸಂಚಿ ಟ್ರಸ್ಟಿನದ್ದು. ಸಂಚಿ ಅವನ್ನು ಬದಲಿದ ಮಾಧ್ಯಮದಲ್ಲಿ, ಅಂದರೆ ವಿಡಿಯೋದಲ್ಲಿ, ಶುದ್ಧವಾಗಿ ಹಿಡಿದು, ಯಾವ ಕಾಲಕ್ಕೂ ಸಾರ್ವಜನಿಕ ವೀಕ್ಷಣೆಗೆ, ಅಧ್ಯಯನಕ್ಕೆ ಮುಕ್ತವಾಗಿ ಲಭ್ಯವಿರುವಂತೆ (ಯೂ ಟ್ಯೂಬ್ ನೋಡಿ: ಸಂಚಿ ಪ್ರತಿಷ್ಠಾನ) ಮಾಡುತ್ತಿದೆ. ಈ ದಾಖಲೀಕರಣದ ಉಪಯುಕ್ತತೆಯನ್ನು ಪೂರ್ಣ ಮನಗಂಡದ್ದಕ್ಕೇ ನೀನಾಸಂ ಕಳೆದ ಮೂರು ನಾಲ್ಕು ವರ್ಷಗಳಿಂದ ತನ್ನೆಲ್ಲ ಸಾರ್ವಜನಿಕ ಕಲಾಪಗಳನ್ನೂ ಬಹಳ ಕಾಳಜಿಯಿಂದ, ಪೂರ್ಣ ಉಚಿತವಾಗಿ (ಅಂದರೆ ಅವರಿಗಾಗುವ ವೆಚ್ಚವನ್ನು ಸ್ವತಃ ಭರಿಸಿಕೊಂಡು) ಸಂಚಿ ಪ್ರತಿಷ್ಠಾನಕ್ಕೆ ಒಡ್ಡಿಕೊಳ್ಳುತ್ತಲೇ ಇದೆ. ದಾಖಲೀಕರಣದಲ್ಲಿ ನಾಟಕದ ಉತ್ತಮ ಅಭಿವ್ಯಕ್ತಿಯನ್ನೇ ಕೊಡಲು ವಿಶೇಷ ಮರುಪ್ರಯೋಗಗಳನ್ನೂ ಕೊಡುತ್ತಿದೆ. ಹೆಚ್ಚಿನ ವೆಚ್ಚವಿಲ್ಲದೆ ಆದಷ್ಟೂ ಮೂಲಕ್ಕೆ ಹೋಲುವ ರಂಗಗೀತೆಗಳನ್ನೂ ಮರುಸೃಷ್ಟಿ ಮಾಡಿ ಕೊಡುತ್ತಲಿದೆ. ನೀನಾಸಂ ತಮ್ಮ ಹಿಂದಿನ ಅನೇಕ ಪ್ರದರ್ಶನಗಳನ್ನು ಸ್ಪಷ್ಟ ಕಾರಣಗಳಿಲ್ಲದೆ ಸಾಮಾನ್ಯ ವಿಡಿಯೋ ಚಿತ್ರೀಕರಿಸಿ ಇಟ್ಟದ್ದಿತ್ತು. ಅವನ್ನೂ ಯಥಾಸ್ಥಿತಿಯಲ್ಲಿ ಈ ಯೋಜನೆಯ ಮೂಲಕ ಸಾರ್ವಜನಿಕಕ್ಕೆ ತೆರೆದಿಡುವುದು ಆಗುತ್ತಿದೆ. ಇದರಿಂದ ಇಂದು ಸಂಚಿ ಟ್ರಸ್ಟಿನ ಸಂಗ್ರಹದಲ್ಲಿರುವ ನೀನಾಸಂನದ್ದೇ ಹದಿನೈದಕ್ಕೂ ಮಿಕ್ಕು ಉತ್ತಮ ರಂಗಾನುಭವವನ್ನೇ ಕೊಡುವ ನಾಟಕಗಳು ಮತ್ತೂ ಹೆಚ್ಚಿನ ಸಂಖ್ಯೆಯಲ್ಲಿರುವ ಹಳಗಾಲದ (ತಾಂತ್ರಿಕ ಮಿತಿಗಳಲ್ಲಿ ಹಿಡಿದವಾದರೂ) ಕೆಲವು ಪೂರ್ಣ ಪ್ರಯೋಗಗಳನ್ನು ಜಗತ್ತಿನಾದ್ಯಂತ ಎಲ್ಲೂ ಯಾರೂ ಅಂತರ್ಜಾಲದ ಮೂಲಕ ಉಚಿತವಾಗಿ ಅನುಭವಿಸಬಹುದು. ನೀನಾಸಂನ ಇತರ ಕಲಾಪಗಳಾದ ರಂಗಗೀತೆಗಳು, ತಾಳಮದ್ದಳೆಗಳು, ಸಂವಾದಗಳು, ಸಂದರ್ಶನಗಳು, ಉಪನ್ಯಾಸಗಳಾದಿಯನ್ನೂ ಖಚಿತವಾಗಿ ಸ್ವಾಂಗೀಕರಿಸಿಕೊಳ್ಳಬಹುದು. ಆ ಪಟ್ಟಿಯನ್ನು ವಿಸ್ತರಿಸುವಂತೆ ನೀನಾಸಂ, ಮೊನ್ನೆ ಜುಲೈ ಹದಿನೇಳಕ್ಕೆ, ‘ಈಡಿಪಸ್’ ನಾಟಕದ ದಾಖಲೀಕರಣಕ್ಕೆ, ಸಂಚಿ ಪ್ರತಿಷ್ಠಾನ ಅಥವಾ ಅದರ ಕ್ರಿಯಾಮುಖನಾದ ಅಭಯನನ್ನು ಕೇಳಿಕೊಂಡಿತ್ತು. ಅದರ ಹಿನ್ನೆಲೆಯಲ್ಲಿ…….

ಜುಲೈ ಹದಿಮೂರಂದು ‘ಪಡ್ಡಾಯಿ’ ಸಿನಿಮಾದ ಲೋಕಾರ್ಪಣ ದಿನ. ನಿಮಗೆಲ್ಲ ತಿಳಿದಂತೆ (ಇಲ್ಲವಾದರೆ ನೋಡಿ: ಪಡ್ಡಾಯಿ), ಅಭಯನದ್ದೇ ಕತೆ – ನಿರ್ದೇಶನಗಳ ಒಂದು ವರ್ಷದ ತಪಸ್ಸಿನ ಫಲ ಈ ತುಳು ಸಿನಿಮಾ, ಇದು ರಾಷ್ಟ್ರಪ್ರಶಸ್ತಿ ಗಳಿಸಿದ್ದಲ್ಲದೆ, ವಿಶೇಷ ಪ್ರದರ್ಶನ ಕಂಡಲ್ಲೆಲ್ಲ ಹೊಗಳಿಕೆಯೊಂದನ್ನೇ ಪಡೆದಿತ್ತು. ಈಗ ಸಾರ್ವಜನಿಕ ವೀಕ್ಷಣೆಯೊಡನೆ ನಿಜ (ಆರ್ಥಿಕವೂ ಹೌದು) ಸಾರ್ಥಕ್ಯವನ್ನು ಕಂಡುಕೊಳ್ಳುವ ಕ್ಷಣ. ಅಭಯ ಬೆಂಗಳೂರಿನಲ್ಲಿದ್ದಂತೇ ಕೆಲಕಾಲದಿಂದ ಬಹುಮುಖೀ ಪ್ರಚಾರ ನಡೆಸಿದ್ದ. ‘ಪಡ್ಡಾಯಿ ಬಳಗ’ದ ಉಳಿದವರೂ (ನಟರು, ತಂತ್ರಜ್ಞರು) ಶ್ರಮಿಸಿದ್ದು ಕಡಿಮೆಯಿರಲಿಲ್ಲ, ಓಡಾಡಿದಲ್ಲೆಲ್ಲಾ ಒಂದೇ ಜಪ “ಪಡ್ಡಾಯಿ ತೂಲೇ.” ಅಷ್ಟು ಸಾಲದೆಂದು ಎಂಟು ಹತ್ತು ದಿನ ಮುಂಚಿತವಾಗಿಯೇ ಅಭಯ ಸಕುಟುಂಬ ಮಂಗಳೂರಿಗೇ ಬಂದು ಕೆಲಸ ನಡೆಸಿದ. ಇನ್ನಷ್ಟು ಪ್ರಚಾರ, ವಿತರಕ, ಪ್ರದರ್ಶನಾಲಯಗಳ ನಿಶ್ಚಯ, ವಿಶೇಷ ಸಮುದಾಯಗಳ ಸಗಟು ‘ಬೇಟೆ’ (ಉದಾ: ತುಳು ಭಾಷಿಕರೇ ಆದ ಬಂಟ ಬಿಲ್ಲವ ಇತ್ಯಾದಿ ಸಂಘಗಳು, ಸಾಹಿತ್ಯ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳು…) ಇತ್ಯಾದಿ ಆದಾಯದ ಮುಖ, ಸಿನಿಮಾವನ್ನು ಬುದ್ಧಿವಂತರು ಮಹಾ ಹಡಗಿಗೆ ಹೋಲಿಸಿದ್ದಾರೆ. ಸಹಜವಾಗಿ ಆ ಹಡಗಿನ ಪಯಣಿಗರೇ ಆದ ಪ್ರೇಕ್ಷಕರ ವೀಕ್ಷಣಾ ಅಥವಾ ಯಾನಸುಖವನ್ನು ಖಾತ್ರಿ ಪಡಿಸಿಕೊಳ್ಳುವ ಹೊಣೆಯೂ ಕಪ್ತಾನ ಅಥವಾ ನಿರ್ದೇಶಕ ಅಭಯನಿಗಿತ್ತು. ಇದು ಶುದ್ಧ ತಾಂತ್ರಿಕ ಮತ್ತು ಹೆಚ್ಚಾಗಿ ಸಾರ್ವಜನಿಕರ ಆರಿವಿಗೇ ಬಾರದ ಸಂಕೀರ್ಣ ಮುಖ.

ಐದಾರು ವರ್ಷಗಳ ಹಿಂದಿನವರೆಗೂ ಸಿನಿಮಾಗಳ ರೀಲು, ಪ್ರಾಜೆಕ್ಟರ್ ಎಂದು ನಿರ್ಮಾಪಕ ಮತ್ತು ವಿತರಕ ಹೆಣಗುತ್ತಿದ್ದರು. ಆದರಿಂದು ಎಲ್ಲ ಅಂತರ್ಜಾಲವೆಂಬ ಮಹಾ ಮಾಯಾವಶವಾಗಿದೆ. ‘ಪಡ್ಡಾಯಿ’ ಚಿತ್ರೀಕರಣ ಕರಾವಳಿಯಲ್ಲೂ ಸಂಕಲನ ಬೆಂಗಳೂರಿನಲ್ಲೂ ಮತ್ತೆರಡು ಹಂತದ ಸಂಸ್ಕರಣಗಳು ಹೈದರಾಬಾದ್ ಹಾಗೂ ಬೆಂಗಳೂರಿನ ಲ್ಯಾಬ್‍ಗಳಲ್ಲೂ (ಸಿನಿಮಾ ಲ್ಯಾಬ್ ಪ್ರತ್ಯೇಕ) ನಡೆದು, ಅಂತಿಮವಾಗಿ ಯಾವುದೇ ಥಿಯೇಟರ್ ಪ್ರದರ್ಶನಕ್ಕೂ ದಕ್ಕುತ್ತಿದ್ದುದು ಚೆನ್ನೈಯ ಮತ್ತೊಂದೇ ಉಪಗ್ರಹಬಿತ್ತರಣೆಯ ಕೇಂದ್ರದಿಂದ. ಈ ಎಲ್ಲ ತಾಂತ್ರಿಕತೆಯಲ್ಲೂ ಅಭಯ ತೀವ್ರವಾಗಿ ತೊಡಗಿಕೊಂಡಿದ್ದ.

ಆತನ ಚರವಾಣಿ ಕಿವಿ ಬಿಟ್ಟದ್ದಿಲ್ಲ, ಓಡಾಟ, ಮಾತು ಬೆಳಿಗ್ಗೆ ಎಂಟೂವರೆಗೆ ತೊಡಗಿದರೆ ಎಷ್ಟೋ ಬಾರಿ ಸರಿ ರಾತ್ರಿಯವರೆಗೂ ಮುಗಿದದ್ದಿಲ್ಲ! ಅವೆಲ್ಲ ‘ಬಿಡುಗಡೆಯ ದಿನ’ಕ್ಕೆ ಒಂದು ಮಗ್ಗುಲು ಮಾತ್ರ. ಸಿನಿಮಾದ ಆರ್ಥಿಕ ಯಶಸ್ಸಿಗೆ ಮುಂದಿನ ದಿನಗಳಲ್ಲೂ ಅದನ್ನು ನೋಡಬರುವ ಜನಗಳ ಸಂಖ್ಯೆ, ಅದು ಪ್ರದರ್ಶನಾಲಯಗಳಲ್ಲಿ ಉಳಿಯುವ ದಿನಗಳೂ ಹೆಚ್ಚಬೇಕು. ಇದಕ್ಕೆ ಸಿನಿಮಾ ಬಿಡುಗಡೆಗೊಂಡು ಕನಿಷ್ಠ ಒಂದು ವಾರಕಾಲವಾದರೂ ‘ಪಡ್ಡಾಯಿ ಬಳಗ’ದೊಡನೆ ಪ್ರದರ್ಶನಾಲಯಗಳನ್ನು ಸಂದರ್ಶಿಸಿ, ಪ್ರೇಕ್ಷಕರ ಅಭಿಪ್ರಾಯ ಸಂಗ್ರಹಿಸಿ, ಅವಕ್ಕೂ ಪ್ರಚಾರದ ರಂಗೇರಿಸುವುದನ್ನೂ ಯೋಜಿಸಿದ್ದ. (ಅದನ್ನು ಪಡ್ಡಾಯಿ ಬಳಗದ ಇತರರು ಮಿತಿಗಳಲ್ಲೂ ಚೆನ್ನಾಗಿಯೇ ನಡೆಸಿಕೊಟ್ಟರು.) ಇವೆಲ್ಲವುಗಳ ಜತೆಗೇ ಆತ ಅಷ್ಟೇ ಇಷ್ಟಪಟ್ಟು, ಹಿಂದಿನಿಂದಲೇ ನಡೆಸಿಕೊಂಡು ಬಂದ ನೀನಾಸಂ ಮತ್ತು ಇನ್ನೊಂದು (ಸಂಚಿ ಪ್ರತಿಷ್ಠಾನಕ್ಕೆ) ಎರಡು ದಾಖಲೀಕರಣದ ಕಲಾಪಗಳೂ ಸೇರಿಕೊಂಡು ಬಂದದ್ದು ತುಸು ಹೆಚ್ಚೇ ಆಗಿತ್ತು.

ಮೊದಲನೇದು, ಜುಲೈ ಹದಿನೈದರಂದು ಉಡುಪಿಯಲ್ಲಿ ನಡೆಯಲಿದ್ದ ಕರುಣ ಸಂಜೀವ – ಬನ್ನಂಜೆ ಸಂಜೀವ ಸುವರ್ಣ ಅಭಿನಂದನ. ಇದರಲ್ಲಿ ಅಭಯನಿಗೆ ದ್ವಿಪಾತ್ರಾಭಿನಯ! ಒಂದು ಸಮಾರಂಭದಲ್ಲಿ ಪ್ರದರ್ಶಿಸುವಂತೆ ಬನ್ನಂಜೆ ಸಂಜೀವ ಸುವರ್ಣರ ಬಗ್ಗೆ ಸಾಕ್ಷ್ಯಚಿತ್ರ. ಇದನ್ನು ಸ್ವತಃ ಅಭಯನೇ ‘ಅವಸರದ ಅಡುಗೆ, ನಿಜ ಸಾಕ್ಷ್ಯಚಿತ್ರ ಅಲ್ಲ’ ಎಂದೇ ಹೇಳಿದ್ದು ನಿಮಗೆ ತಿಳಿದೇ ಇದೆ (ಇಲ್ಲದವರು ನೋಡಿ: ಕರುಣ ಸಂಜೀವ). ಅದರ ಜತೆಗೇ ಸಂಜೀವ-ಅಭಿನಂದನ ದಿನದ ಎಲ್ಲ ಕಲಾಪಗಳನ್ನೂ ಇವನೇ ನಿಂತು ಚಿತ್ರೀಕರಣ ಮಾಡಿ ಕೊಳ್ಳುವುದೂ (ಸಂಕಲನ, ಲೋಕಾರ್ಪಣ ವಿರಾಮದಲ್ಲಾದರೂ ನಡೆಯುತ್ತಿತ್ತು) ಆಗಬೇಕಿತ್ತು. ಅದಕ್ಕಾಗಿ ಅಭಯ ನಿಯೋಜಿಸಿದ ಮೂರು ಕ್ಯಾಮರಾ ಮತ್ತು ವಿವಿಧ ಸಲಕರಣೆಗಳೊಂದಿಗೆ ಒಂದು ತಾಂತ್ರಿಕ ವರ್ಗ, ೧೪ರ ಹಗಲೇ ಬೆಂಗಳೂರಿನಿಂದ ಕಾರೇರಿ ಬಂದು ಉಡುಪಿಯಲ್ಲಿ ತಂಗಿತ್ತು. ಅದರ ಶಬ್ದಗ್ರಹಣಕ್ಕೆ ನಿಗದಿಯಾಗಿದ್ದ ಇನ್ನೋರ್ವ ತಂತ್ರಜ್ಞ, ಬೆಂಗಳೂರಿನಿಂದಲೇ ರಾತ್ರಿ ಬಸ್ಸು ಹಿಡಿದು ಬಂದು, ಕಲಾಪದ ದಿನದ ಬೆಳಿಗ್ಗೆ ಉಡುಪಿಯಲ್ಲಿ ಹಾಜರಿರಬೇಕಿತ್ತು. ಅಭಯನೇ ಆತನಿಗೆ ಬಸ್ ಟಿಕೆಟ್ ಮಾಡಿಸಿ, ವಾಟ್ಸಪ್ಪಿನಲ್ಲಿ ಕಳಿಸಿದ್ದ. ಸಂಜೆ ವಿಚಾರಿಸಿದಾಗ “ಟಿಕೆಟ್ ಬಂದಿದೆ. ಬಸ್ ಹತ್ತಾ ಇದ್ದೀನಿ ಸಾ” ಎಂದಿದ್ದ. ಬಸ್ಸು ಹೊರಡುವ ಸಮಯಕ್ಕೆ ಕೇಳಿದಾಗ “ಹೂಂ ಬತ್ತಾ ಇದ್ದೀನಿ, ಫೋನ್ ಚಾರ್ಜ್ ಕಡ್ಮೆ ಐತೆ. ಈಗ ಸ್ವಿಚ್ಚಾಫ್ ಮಾಡಿರ್ತೀನಿ. ಉಡುಪಿ ರೀಚಾಗ್ತಾ ಕಾಂಟ್ಯಾಕ್ಟ್ ಮಾಡ್ತೀನಿ ಸಾ” ಎಂದೂ ಧೈರ್ಯ ತುಂಬಿದ್ದ. ಆದರೆ ಬೆಳಿಗ್ಗೆ ಕಾಂಟಾಕ್ಟ್ ಮಾಡಲೇ ಇಲ್ಲ. ವಿಪರೀತ ಮಳೆ, ದಾರಿಲಿ ಬಿದ್ದ ಮರದಿಂದ ಬಸ್ ಲೇಟು ಎಂದೆಲ್ಲಾ ಕಾದದ್ದೂ ವ್ಯರ್ಥವಾಯ್ತು; ಆಸಾಮಿ ವಂಚಿಸಿದ್ದ. ತಡವಾಗಿ ತಿಳಿಯಿತು, ಹಿಂದಿನ ರಾತ್ರಿ “ಬೆಂಗಳೂರು ಬಿಟ್ಟೆ” ಎನ್ನುವಲ್ಲಿಂದ ಆತ ಹೇಳಿದ್ದೆಲ್ಲ ಸುಳ್ಳಿನ ಸರಮಾಲೆ! ಅಭಯ ಹೇಗೋ ಸಮರ್ಥ ಪರ್ಯಾಯ ವ್ಯವಸ್ಥೆ ಮಾಡಿಕೊಂಡ.

ಕರುಣ ಸಂಜೀವದ ದಾಖಲೀಕರಣಕ್ಕೆ ಬೆಳಿಗ್ಗೆ ಉಡುಪಿಗೆ ಹೊರಟ ಅಭಯನೊಡನೆ ನಾನೂ ಸೇರಿಕೊಂಡೆ. ಅಭಿನಂದನಾ ಕಲಾಪಗಳೆಲ್ಲ ಒಂಬತ್ತಕ್ಕೆ ಶುರುವಾದರೆ ರಾತ್ರಿ ಸುಮಾರು ಏಳು ಗಂಟೆಯವರೆಗೂ ಅವಿರತ ನಡೆಯುವುದಿತ್ತು. ಅಭಯನ ನಿರ್ದೇಶನದಂತೆ ಮೂರು ಕ್ಯಾಮರಾ ಹಾಗೂ ಸಂಕಲನಕಾರ ಒಂದು ಗಂಟೆ ಮೊದಲೇ ಸಜ್ಜಾಗಿದ್ದು, ನಿರಾತಂಕವಾಗಿ ನಡೆಸಿದರು. ಸಾಲದ್ದಕ್ಕೆ ಪ್ರಾದೇಶಿಕ ಟೀವೀ ಚಾನೆಲ್ಲೊಂದೂ ಇವರಿಂದಲೇ ಉಚಿತವಾಗಿ ವಾಹಿನಿಯನ್ನು ಪಡೆದು, ತನ್ನ ಗ್ರಾಹಕರಿಗೆ ಪ್ರಸಾರವನ್ನೂ ಮಾಡಿಕೊಂಡಿತು. ಈ ದಾಖಲೀಕರಣದ ನಡುವೆ ಸ್ವತಃ ಅಭಯನೇ ನಿರ್ವಹಿಸಬೇಕಾದ ಇನ್ನೊಂದು ಸಣ್ಣ ಜವಾಬ್ದಾರಿಯಿತ್ತು. ವಾರದ ಹಿಂದೆಯೇ ಉಡುಪಿಯ ಯಾವುದೋ ಟೀವೀ ಚಾನೆಲ್ ಅಂದೇ ತನ್ನ ಪ್ರಸಾರದ ನಡುವೆ ‘ಪಡ್ಡಾಯಿ ನಿರ್ದೇಶಕನೊಂದಿಗೆ ಸಂವಾದ’ವನ್ನು ಇಟ್ಟುಕೊಂಡಿತ್ತು. ಕರುಣ ಸಂಜೀವದ ಕಲಾಪಗಳು ಶಿಸ್ತಿನಲ್ಲಿ ನಡೆಯುತ್ತಿದ್ದುದರಿಂದ, ಅಭಯ ನಡುವೆ ಸುಮಾರು ಎರಡು ಗಂಟೆಗಳ ಕಾಲ ಬಿಡುವು ಮಾಡಿಕೊಂಡು, ಅದನ್ನೂ ಸಸೂತ್ರವಾಗಿ ನಿರ್ವಹಿಸಿದ. ಆದರೆ ಇಂದಿನ ಬಹುತೇಕ ಮಾಧ್ಯಮಗಳ ಪೊಳ್ಳಿನ ಮೆರವಣಿಗೆಯೇ ಆ ಸಂವಾದದಲ್ಲೂ ಆಯ್ತೆಂದು, ಹಿಂದೆ ಬಂದ ಮೇಲೆ ತುಸು ವಿಷಾದದಲ್ಲೇ ಹೇಳಿಕೊಂಡ. ಪಡ್ಡಾಯಿ ಸಿನಿಮಾ ನೋಡದ, ನಿರ್ದೇಶಕನ ಪೂರ್ವಾಪರದ ಬಗ್ಗೆ ಏನೂ ತಯಾರಿಮಾಡಿಕೊಳ್ಳದ, ಕೊನೆಗೆ ಸರಿಯಾಗಿ ಯಾವುದೇ ಭಾಷೆಯೂ ಬಾರದವ ಸಂದರ್ಶನ ನಡೆಸಿದನಂತೆ!

ರುಣ ಸಂಜೀವದ ದಾಖಲೀಕರಣವನ್ನು ಅಭಯ ವಾರದೊಳಗೇ ಶುದ್ಧ ಮಾಡಿ, ಯೂ ಟ್ಯೂಬ್ ಮೂಲಕ ಲೋಕಾಂತರಗೊಳಿಸಿದ. ಹಾಗಾಗಿ ಅವನ್ನೆಲ್ಲ ನಾನು ಕರುಣ ಸಂಜೀವದ ಕುರಿತ ನನ್ನ ಜಾಲತಾಣದ ಲೇಖನದೊಡನೆಯೇ ಹೆಚ್ಚಿನ ಪ್ರಸಾರ ಕಲ್ಪಿಸುವುದೂ ಸಾಧ್ಯವಾಯ್ತು. ಉದ್ಘಾಟನೆ ಹಾಗೂ ಗಣ್ಯರ ನುಡಿಗಳು, ಪ್ರಾತ್ಯಕ್ಷಿಕೆಗಳು, ಏಕವ್ಯಕ್ತಿ ಪ್ರದರ್ಶನ, ಕತ್ರೀನ್ ಬೈಂದರ್ ವಿಶೇಷ ಸಂವಾದ, ಅಭಿನಂದನೆ ಸಮಾರಂಭ ಮತ್ತು ಟಿ. ಎಂ ಕೃಷ್ಣ ಸಂಗೀತವೆಂಬ ವಿಭಾಗಗಳ ಆರು ಯೂ ಟ್ಯೂಬ್ ನಮೂದುಗಳನ್ನು ಆಸಕ್ತರು ಈಗಲೂ ಸ್ವತಂತ್ರವಾಗಿಯೂ ನನ್ನ ಜಾಲಲೇಖನ – ಕರುಣ ಸಂಜೀವದ ಮೂಲಕವೂ ಹೋಗಿ ನೋಡಬಹುದು. (ಸಂಜೀವ ಸುವರ್ಣ ಅಭಿನಂದನೆ). ಎರಡನೇ ದಾಖಲೀಕರಣವೇ ನಾನು ಮೊದಲು ಹೇಳಿದ ನೀನಾಸಂನದ್ದು. ಹೆಗ್ಗೋಡು ಪ್ರತಿವರ್ಷದಂತೆ ಈ ಬಾರಿಯೂ ಜುಲೈ ಹದಿನಾರರಂದು ಕೆವಿ ಸುಬ್ಬಣ್ಣನವರ ಸ್ಮೃತಿದಿನವನ್ನಾಚರಿಸಿತು. ಅಂದು ಊರವರ ಪ್ರೀತಿಯ ಪ್ರಸ್ತುತಿಯಾಗಿ ಒಂದು ನಾಟಕ – ‘ಈಡಿಪಸ್’, ನಿರ್ದೇಶನ – ಗಣೇಶ ಮಂದಾರ್ತಿ. ಮುಂದುವರಿದು, ಮರುದಿನವೇ (೧೭-೭-೧೮) ಸಂಚಿ ದಾಖಲೀಕರಣಕ್ಕಾಗಿ ಅದರ ವಿಶೇಷ ಪ್ರದರ್ಶನವನ್ನೂ ಇಟ್ಟುಕೊಂಡಿದ್ದರು. ಕರುಣ ಸಂಜೀವಕ್ಕೆ ಬಂದಿದ್ದ ಕ್ಯಾಮರಾದಿ ತಾಂತ್ರಿಕ ವರ್ಗವನ್ನು ಉಡುಪಿಯಿಂದಲೇ ಹೆಗ್ಗೋಡಿಗೆ ಹೋಗಿರಲು ಅಭಯ ಸೂಚಿಸಿದ ಮೇಲೆ ನಾವು ಮಂಗಳೂರಿಗೆ ಮರಳಿದ್ದೆವು. ಇಷ್ಟರಲ್ಲಿ ಪ್ರದರ್ಶನದ ನಾಲ್ಕನೇ ದಿನ ತಲಪಿದ್ದ ‘ಪಡ್ಡಾಯಿ’ಯ ಕುರಿತ ಪ್ರೇಕ್ಷಕ ಜಾಗೃತಿ ಅಭಯನಿಗೆ ಭ್ರಮನಿರಸನಮಾಡಿತ್ತು. ವೇದಿಕೆಗಳ ಮೇಲಿನ ‘ತುಳುವಪ್ಪೆನ ಮೋಕೆ’, ಭಾವನಾತ್ಮಕ ‘ತುಳುನಾಡು’, ಚಲನಚಿತ್ರದ ಗುಣಕ್ಕೆ ರಾಷ್ಟ್ರೀಯ ಪ್ರಮಾಣಪತ್ರ, ಅಷ್ಟೇ ಯಾಕೆ ಅಪರಿಚಿತ ಪ್ರೇಕ್ಷಕರಿಂದಲೂ ಬಂದ ಒಳ್ಳೇ ಮಾತುಗಳೂ ಸಿನಿಮಾಲಯಗಳನ್ನು ತುಂಬುವಲ್ಲಿ ಪ್ರಯೋಜನಕ್ಕೆ ಬರಲೇ ಇಲ್ಲ. ಹಾಗಾಗಿ ಅಭಯ ಹೆಗ್ಗೋಡಿನಿಂದ ಮತ್ತೆ ಮಂಗಳೂರಿಸುವ ಯೋಜನೆ ಬದಲಿಸಿದ. “ಹೆಗ್ಗೋಡು ಕೆಲಸ ಮುಗಿದ ಮೇಲೆ ಬೆಂಗಳೂರು ಸೇರಿಕೊಳ್ಳುತ್ತೇವೆ” ಎಂದ. ಅವನ ದಾಖಲೀಕರಣದ ತಂಡದ ಜೊತೆ ನಾಟಕ ನೋಡುವ ಸಂತೋಷಕ್ಕಾಗಿ ನಾನೂ ಸೇರಿಕೊಂಡೆ. (ದೇವಕಿ ಸಣ್ಣ ಶೀತದ ನೆಪ ಹಿಡಿದು ಬಾರದುಳಿದಳು)

ಲೆಕ್ಕಕ್ಕೆ ಒಂದೆರಡು ಗಂಟೆಯ ಪ್ರದರ್ಶನ, ದಾಖಲಾತಿಗೆ ನಾಲ್ಕೈದು ಗಂಟೆಗಳನ್ನೇ ತೆಗೆದುಕೊಂಡಿತು. ಈ ಪ್ರಯೋಗ ಹೆಗ್ಗೋಡಿನ ಊರಮಂದಿಯ ತಂಡದ್ದು, ಅದನ್ನು ಹಿಂದಿನ ದಿನ ತುಂಬಿದ ಭವನಕ್ಕೆ, ಬಹುತೇಕ ತಮ್ಮದೇ ಜನಗಳ ಎದುರು, ತಮ್ಮದೇ ಪರಿಸರದ ವಿಶ್ವಾಸದಲ್ಲಿ ಅವರು ಸಾಕಷ್ಟು ಚೆನ್ನಾಗಿಯೇ ಪ್ರದರ್ಶಿಸಿದ್ದಿರಬೇಕು. ಆದರೆ ಇಂದಿನ ಪ್ರದರ್ಶನ ಖಾಲೀ ಭವನದಲ್ಲಿ, ಜಾಗತಿಕ ಮತ್ತು ಸಾರ್ವಕಾಲಿಕ ಊಹಾ ಪ್ರೇಕ್ಷಕರಿಗೆ! ಇದು ಒಟ್ಟು ತಂಡವನ್ನು ಎರಡು ರೀತಿಯಲ್ಲಿ ಪ್ರಭಾವಿಸಿರಬೇಕು. ದಾಖಲಾತಿಯ ತಂತ್ರಜ್ಞರು ಕ್ಯಾಮರಾ ಮತ್ತು ಧ್ವನಿ ಗ್ರಹಣಗಳ ಹೊಂದಾಣಿಕೆ ನಡೆಸಿಕೊಳ್ಳುತ್ತಿದ್ದ ಕಾಲದಲ್ಲೇ ನಾಟಕ ನಿರ್ದೇಶಕ – ಗಣೇಶ್ ಮಂದಾರ್ತಿ, ಪ್ರಯೋಗವನ್ನು ಹೆಚ್ಚು ಬಿಗುಗೊಳಿಸುತ್ತಿದ್ದರು. ತಿಂಗಳುಗಳ ತಯಾರಿ ಮತ್ತು ಒಂದೆರಡು ಯಶಸ್ವೀ ಪೂರೈಕೆಗೂ ಒಲಿದಿದ್ದ ಓಟಕ್ಕೆ, ‘ಕಡೇ ಗಳಿಗೆ’ಯ ಪರಿಷ್ಕರಣೆಗಳು, ಪ್ರದರ್ಶನ ಕಾಲದಲ್ಲಿ ಒಂದೆರಡು ಕಡೆ ತೊಡರಾದಂತಿತ್ತು. ಮತ್ತೆ ನಟವರ್ಗಕ್ಕೂ ತಕ್ಷಣದ ಪ್ರೇಕ್ಷಕ ಪ್ರತಿಸ್ಪಂದನದ ಕೊರತೆ ಸ್ವಲ್ಪ ಕಾಡಿದಂತೆಯೂ ಇತ್ತು. ಆದರೆ ಅಂಥಲ್ಲೆಲ್ಲ ಚಿತ್ರೀಕರಣದ ಸೌಲಭ್ಯ ಧಾರಾಳ ಒದಗಿತು. ನಿಜ ಸಿನಿಮಾ ಚಿತ್ರೀಕರಣದಲ್ಲಿ ನಿರ್ದೇಶಕ ಹೇಳುವ “ಕಟ್”ನ್ನು ನಾಟಕದ ದಾಖಲಾತಿಯಲ್ಲಿ ತರಬಾರದೆನ್ನುವುದೇ ಅಭಯನ ಅಭಿಪ್ರಾಯ. ಆದರೆ ಈ ಸೌಲಭ್ಯವನ್ನು ತಿಳಿದುಕೊಂಡಿದ್ದ ಕಲಾವಿದರು, ತಮಗೆ ಕೊರತೆ ಕಂಡಲ್ಲಿ, ತಾವೇ ‘ಕಟ್’ ಮಾಡಿ, ಸಂಕಲನದ ಅಗತ್ಯಕ್ಕೆ ಆವಶ್ಯವಿದ್ದಷ್ಟು ಹಿಂದಿನಿಂದ ಮತ್ತೆ ತೊಡಗಿ, ಒಟ್ಟಾರೆ ಅತ್ಯುತ್ತಮವಾದ್ದನ್ನೇ ನೀಡಿದರು. ಉತ್ತರೋತ್ತರವಾಗಿ ಸಂಕಲನದಲ್ಲಿ ಬಿಗಿಗೊಂಡು ‘ಈಡಿಪಸ್’ ಒಂದು ಒಳ್ಳೆಯ ಪ್ರಯೋಗವಾಗಿ ಅಂತರ್ಜಾಲಕ್ಕೆ ಸೇರಿಕೊಳ್ಳಲಿದೆ. ಕೆ.ವಿ ಸುಬ್ಬಣ್ಣ ಸ್ಮರಣ ದಿನದ ಪ್ರದರ್ಶನ ಸಾರ್ವಜನಿಕ ಪ್ರದರ್ಶನವೇ ಆದರೂ ಮೊದಲೇ ಹೇಳಿದಂತೆ ಅದರ ಬಹುತೇಕ ಪ್ರೇಕ್ಷಾವರ್ಗ ಸ್ಥಳೀಯರದೇ ಇರುತ್ತದೆ. ಅದು ನಿಜವಾದ ಲೋಕಾರ್ಪಣವನ್ನು ಕಾಣುವುದು ನೀನಾಸಂನ ವಾರ್ಷಿಕ ‘ಸಂಸ್ಕೃತಿ ಶಿಬಿರ’ದಲ್ಲಿ. ಅದು ಇದೇ ಅಕ್ಟೋಬರಿನಲ್ಲಿ (ಶಿಬಿರದ ಸಾಂಸ್ಕೃತಿಕ ಕಲಾಪದ ಆಮಂತ್ರಣ ಗಮನಿಸಿ) ನಡೆಯಲಿದೆ. ಅಲ್ಲಿನ ರಂಗ ಪ್ರದರ್ಶನದ ಬಳಿಕ ಈ ದಾಖಲಾತಿಯನ್ನು ಸಂಚಿ ಅಂತರ್ಜಾಲದಲ್ಲಿ ಮುಕ್ತಗೊಳಿಸಲಿದೆ. ಹೆಗ್ಗೋಡಿನ ಸಂಸ್ಕೃತಿ ಶಿಬಿರದ ದೊಡ್ಡ ಆವೇಶದಲ್ಲಿ ಇದನ್ನೂ ನೋಡುವ ಅವಕಾಶ ತಪ್ಪಿಸಿಕೊಳ್ಳಬೇಡಿ. ಅಸಾಧ್ಯವಾದರೆ, ಮುಂದೆ ಇಲ್ಲಿ, ಉಳಿದ ನೂರಕ್ಕೂ ಮಿಕ್ಕು ರಂಗಾನುಭವಗಳೊಡನೆ, ‘ಈಡಿಪಸ್’ ನಿಮ್ಮನ್ನು ಕಾದೇ ಇರುತ್ತದೆ ಎನ್ನುವುದನ್ನು ಮರೆಯದಿರಿ.