ಮೋಹಕ ಪಯಣ

ಕೊಯಮ್ಬತ್ತೂರು ತಮಿಳುನಾಡಿನಲ್ಲಿ ಚೆನ್ನೈಗೆ ಎರಡನೇ ದೊಡ್ಡ ನಗರ ಮತ್ತು ಯಂತ್ರೋಪಕರಣಗಳಿಗೆ ಪ್ರಸಿದ್ಧ ಕೇಂದ್ರ. ಆದರೆ ನನಗಿದು (ತಮ್ಮ ಅನಂತವರ್ಧನ ಮತ್ತು ರುಕ್ಮಿಣಿಮಾಲಾ ದಂಪತಿಗಳ) ಮಗಳು – ಅಕ್ಷರಿ, ಅಳಿಯ – ಮಹೇಶ ಮತ್ತು ಪುಳ್ಳಿ ಆರುಷರ ಹೊಸ ಊರು. ಅವರ ಪ್ರೀತಿಗೆ ನನ್ನ ಹೊಸತೊಂದು ‘ಸಾಹಸ’ ಅಗತ್ಯವನ್ನು ಬೆಸೆದು, ದೇವಕೀಸಮೇತನಾಗಿ ಹೊರಟೇಬಿಟ್ಟೆ.

ಶುಕ್ರವಾರ ಬೆಳಿಗ್ಗೆ ಹನ್ನೊಂದೂಮುಕ್ಕಾಲರ ಮಂಗಳೂರು – ಕೊಯಂಬತ್ತೂರು ಅಂತರ-ನಗರ ರೈಲೇರಿದ್ದೆವು. ಗೋಡೆಯಂಚಿನ ಉದ್ದಕ್ಕೆ ಹೋಗುವ ಕರಿಮಣಿ ಹುಳದಂತೆ, ಹಗಲಿಡೀ ಇತ್ತ ಕಡಲು ಅತ್ತ ಪ. ಘಟ್ಟಸಾಲು ಎಂದು ಮೂತಿಯಾಡಿಸುತ್ತ ಸಾಗಿದ ಬಂಡಿಗೆ ಪಾಲಕ್ಕಾಡ್ ಅಥವಾ ಪಾಲ್ಘಾಟ್ ಸಂದಿ (ಸುಪ್ರಸಿದ್ಧವೇ ಆದ ‘ಪಾಲ್ಘಾಟ್ ಗ್ಯಾಪ್’) ಅವಕಾಶ ಕೊಟ್ಟಿತು. ಅಸಾಧಾರಣ ಗಾಳಿ ಮಳೆ ರೂಪಿಸಿದ ಘಟ್ಟದ ಆ ಕೊನೆ ಸಂಜೆಯ ಸೂರ್ಯಸ್ನಾನದಲ್ಲಿತ್ತು. ಆ ಮೋಹಕ ಕ್ಷಣಗಳನ್ನು ನಮಗುಣಬಡಿಸುತ್ತ ರೈಲು, ಘಟ್ಟದ ತಪ್ಪಲಿನಲ್ಲೇ ದೀರ್ಘ ತಿರುವು ತೆಗೆಯುತ್ತ ಹೋದದ್ದು ನಿಜಕ್ಕೂ ಮೋಹಕ. ಪೂರ್ಣ ಕತ್ತಲಾವರಿಸಿದ ಹೊತ್ತಿನಲ್ಲಿ, ಅಂದರೆ ಸುಮಾರು ಏಳೂವರೆಗೆ ಕೊಯಂಬತ್ತೂರು ತಲಪಿದ್ದೆವು. ಅತ್ತ ನಾಲ್ಕು ದಿನ ಮೊದಲೇ ರುಕ್ಮಿಣಿ ಬಸ್ಸೇರಿ, ಅಂದೇ ಸಂಜೆಗೆ ಅನಂತ ಕಾರೇರಿ ಮಗಳ ಮನೆ ಸೇರಿದ್ದರು. ಅವರಿಬ್ಬರನ್ನೂ ಪುಳ್ಳಿಯನ್ನೂ ಸೇರಿಸಿಕೊಂಡೇ ಅಳಿಯ ಮಹೇಶ, ನಿಲ್ದಾಣಕ್ಕೆ ಬಂದು ನಮ್ಮನ್ನು ಎದುರುಗೊಂಡದ್ದಕ್ಕೆ ನಾವು ಬಚಾವ್! ಇಲ್ಲವಾದರೆ ಉಗ್ರ ತಮಿಳು ಭಾಷಾಮೋಹದವರ ನಡುವೆ ಪೀಲಮೇಡು ವಲಯಕ್ಕೆ, ಬಾಡಿಗೆ ವಾಹನ ಚಾಲಕನನ್ನು ತುಡುಕುವ, ವಿಳಾಸ ಹುಡುಕುವ ಸಂಕಟಕ್ಕೆ ಬೀಳುತ್ತಿದ್ದೆವು!

ತಮಿಳು ಪಾರಮ್ಯ

ಶನಿವಾರ ಬೆಳಿಗ್ಗೆ ನಾನೂ ಅನಂತನೂ ಹವಾ ಸೇವನೆಗೆಂಬಂತೆ ಮಂಜಿನ ವಾತಾವರಣದಲ್ಲಿ, ವೆಲ್ಲಂ ಕುರಚ್ಚಿ ದಾರಿಯಲ್ಲಿ ಏಳೆಂಟು ಕಿಮೀ ನಡೆದಿದ್ದೆವು. ತಮಿಳು ಸರಕಾರ ಕುಡುಕರ ಪಾಲನೆಯನ್ನು ಪರಭಾರೆ ಮಾಡಿಲ್ಲವಂತೆ. ಹಾಗಾಗಿ ಅಧಿಕೃತ ಅಡ್ಡೆಯ ಬಾಗಿಲು ತೆರೆಯುವುದನ್ನು ಕಾದವರಿಂದ ತೊಡಗಿ, ಕಸ, ಕೊಳಚೆವಾಹಿನಿ, ಅಭಿವೃದ್ಧಿ, ಸಮೃದ್ಧಿ, ಗಲ್ಲಿದೇವರುಗಳು….. ನೋಡನೋಡುತ್ತ ನಮ್ಮೂರಿನದೇ ವಾತಾವರಣವೇನೋ ಬಂತು. ಸಣ್ಣ ವ್ಯತ್ಯಾಸವೆಂದರೆ ಎಲ್ಲೂ ತಮಿಳೇತರ ಬೋರ್ಡು ಮಾತ್ರ ಇಲ್ಲದೇ ವಿಚಾರಿಸಿದಲ್ಲೆಲ್ಲ ತಮಿಳೇತರ ಉಲಿ ಕೇಳದೇ ಸೋತೆವು. ಕನ್ನಡಿಗರ ಭಾಷಾ ನಿರಭಿಮಾನಕ್ಕೆ ತದ್ವಿರುದ್ಧವಾಗಿ ತಮಿಳರ ಉಗ್ರ ಭಾಷಾಮೋಹದ ಅರಿವು ನನಗೆ ೧೯೬೭ರ ಸುಮಾರಿಗೇ ಆಗಿತ್ತು. ಅಂದು ನಾವು ಕೆಲವು ಮಿತ್ರರು ಚೆನ್ನೈ ಪ್ರವಾಸದಲ್ಲಿ ಸಿಟಿ ಬಸ್ಸಿನೊಳಗೆ ಪರಸ್ಪರ ಕನ್ನಡದಲ್ಲಿ ಮಾತಾಡಿಕೊಂಡದ್ದಕ್ಕೆ ಕಂಡಕ್ಟರ್ ಬೆದರಿಕೆಯೊಡನೆ, ನಿಷೇಧವನ್ನೇ ಹೇರಿದ್ದ!

ಈ ಬಾರಿ, ಕೊಯಂಬತ್ತೂರಿಗೆ ನಾನು ಸಣ್ಣ ‘ಹೊಸಸಾಹಸ’ವನ್ನು ತಳುಕು ಹಾಕಿಕೊಂಡೇ ಬಂದಿದ್ದೆ. ಮತ್ತದಕ್ಕೆ ಭಾಷೆ ಒಂದು ಗೋಡೆಯಾಗದಂತೆ ರಕ್ಷಣೆ ಕೊಡಲು ಮಹೇಶ, ಅನಂತ ಜತೆಯಾಗಿದ್ದರು. ಅದೃಷ್ಟಕ್ಕೆ ಆ ನನ್ನ ವ್ಯವಹಾರ ಮೊದಲು ಕಾರವಾರ ಮೂಲದ ಕನ್ನಡಿಗ ಉದ್ಯಮಿ ಲಕ್ಷ್ಮಣ ನಾಯಕ್ ಜತೆ ಆಯ್ತು. ಅದೃಷ್ಟ ಮುಂದುವರಿದಂತೆ ಮತ್ತೆ ಅವರೇ ಮಾಡಿಕೊಟ್ಟ ಇನ್ನೊಂದೇ ಉದ್ಯಮಿ ಸಂಪರ್ಕ – ಸೇಕರ, ‘ಬಡಗ’ ಸಮುದಾಯದವರು, ಅಂದರೆ ಮತ್ತೆ ಕನ್ನಡಿಗರೇ. ನನ್ನ ‘ಹೊಸ ಸಾಹಸ’ ಪೀಠಿಕೆ ಯಶಸ್ವಿಯಾಗುವಲ್ಲಿ ಅದೃಷ್ಟ ಮ್ಅಮುಪ್ಪುರಿಗೊಂಡದ್ದನ್ನೂ ನಾನಿಲ್ಲಿ ದಾಖಲಿಸಲೇಬೇಕು. ಈ ಓಡಾಟಗಳ ಕಾಲದಲ್ಲಿ, ಬೆಳಿಗ್ಗೆ ಮಂಜಾಗಿ ಕಾಣಿಸಿದ ಮೋಡ ಅನಿರೀಕ್ಷಿತವಾಗಿ ಮಳೆಯಾಗಿಯೇ ಸುರಿದಿತ್ತು. ನಾನು ಬೇಡವೆಂದರೂ ಕೇಳದೆ “ಶನಿವಾರ ನನಗೆ ರಜಾದಿನ ಮಾವ. ಮತ್ತೆ ಇಲ್ಲಿನ ದೇಶಭಾಷೆ ತಮಿಳು ನನಗೆ ಸಲೀಸು” ಎಂದು ಮಹೇಶ ನನ್ನನ್ನು ಕಾರಿನಲ್ಲೇ ಒಯ್ದಿದ್ದ; ನಾನು ತೊಯ್ಯಲಿಲ್ಲ! ನಿರ್ವಿಘ್ನವಾಗಿ ಕೆಲಸ ಪೂರೈಸಿತ್ತು. “ಅಂದರಾ ಸಾಹಸ ಏನೂ” ಎಂಬ ನಿಮ್ಮ ಸಹಜ ಪ್ರಶ್ನೆಗೆ ಉತ್ತರವನ್ನು ಸದ್ಯೋಭವಿಷ್ಯದಲ್ಲಿ ಕೊಡುತ್ತೇನೆ ಕಾದಿರಿ.

ಮರುದಮಲೈ

ರೈಲೇರಿ ಬಂದಾಗ ಹುಟ್ಟಿದ್ದ ಘಟ್ಟ-ಮೋಹಕ್ಕೆ ಸಣ್ಣ ಸಾಂತ್ವನ ಎನ್ನುವಂತೆ, ಮೊದಲ ಸಂಜೆಗೆ ಮಹೇಶ ನಮ್ಮೆಲ್ಲರನ್ನು ಊರ ಹೊರವಲಯದಲ್ಲೇ ಇರುವ ಮರುದಮಲೈಗೆ ಒಯ್ದ. ಸುಮಾರು ಹದಿಮೂರು ಹಿಮ್ಮುರಿ ತಿರುವಗಳನ್ನುತ್ತರಿಸಿ, ಘಟ್ಟದ ಮಡಿಲಿನ ಕಣಿವೆಯಲ್ಲಿ ನೆಲೆಸಿದ ಸುಬ್ರಹ್ಮಣ್ಯ ಕ್ಷೇತ್ರ ಕಂಡೆವು. ನಿಜದ ಬೆಟ್ಟ ಇನ್ನೂ ಮೂರುಪಟ್ಟು ಎತ್ತರವಿದ್ದಂತಿತ್ತು. ಈ ವಲಯದ ಆಕರ್ಷಕ ಶಿಖರಗಳೆಲ್ಲ ಮಾರುತನ (ಗಾಳಿ) ಹೊಡೆತದಿಂದ ಮಣ್ಣು, ಸಸ್ಯರಾಜಿಯನ್ನೆಲ್ಲ ಕಳಚಿಕೊಂಡು, ಕೊರಕಲಾಗಿರುವುದು ಕಾಣುತ್ತೇವೆ. ಕಣಿವೆ ಪಶ್ಚಿಮದ ಮಳೆಗಾಳಿಯ ನೇರ ಹೊಡೆತವನ್ನು ತಪ್ಪಿಸಿಕೊಂಡಿರುವುದರಿಂದ ಕಾಡು ವಿಕಸಿಸಿದೆ. ಅದನ್ನು ಪ್ರಾಕೃತಿಕ ಕಾಲಮಾನದಲ್ಲಿ ತೀರಾ ಈಚೆಗೆ ಎನ್ನುವಂತೆ (೧೨ನೇ ಶತಮಾನದ್ದು, ಸಂಗಮ್ ಕಾಲದ್ದು)ಮನುಷ್ಯ ದೇವ-ಕ್ಷೇತ್ರವಾಗಿಸಿಕೊಂಡಿದ್ದಾನೆ.

ಮರುದಮಲೈ- ಸ್ಥಳನಾಮಕ್ಕೆ ನನ್ನೊಳಗೇ ಒಂದು ಅರ್ಥ ಸುಳಿದಿತ್ತು – ‘ಮಾರುತನಿಂದ ರಕ್ಷಿಸಲ್ಪಟ್ಟ ಮಲೈ’. ಆದರೆ ವಿಕಿಪೀಡಿಯ ಇಲ್ಲಿ ಧಾರಾಳವಿರುವ ಮರುದ ಮರಗಳತ್ತ (‘ಅರ್ಜುನ’ ಮರ, Terminalia Arjuna) ಬೆರಳು ತೋರಿಸುತ್ತದೆ. ಮುಂದುವರಿದು ನೋಡಿದರೆ ಮಲೆಗಳಿಗೆ ಸಹಜವಾದ ಹಾವು, ಅದರ ಸಂಪರ್ಕಕ್ಕೆ ಬಂದ ಜನರ ವಿಷಹರಣಕ್ಕೆ ಶಕ್ತಿ ಬೆಳೆಸಿಕೊಂಡ ಸಿದ್ಧರು, ಅದರ ಆರಾಧನಾ ಮುಖವಾಗಿ ಸುಬ್ರಹ್ಮಣ್ಯ ಎಂದು ಕ್ಷೇತ್ರವೂ ಬೆಳೆದು ನಿಂತಿದೆ. ಕಾಲಕಾಲದ ಆಡಳಿತಗಾರರ ಮರ್ಜಿಗನುಗುಣವಾಗಿ ಗುಹೆ, ದೇವಳ, ಶಿಲ್ಪವೈಭವ, ಸೌಕರ್ಯಗಳ ಹೇರಾಟವೂ ಮೆರೆದಿದೆ. ಅಸ್ತಮಿಸುವ ಸೂರ್ಯನ ಬೆಳಕಿನಲ್ಲಿ ದೇವಳವಷ್ಟು ಸುತ್ತಾಡಿ, ಕತ್ತಲಿನೊಡನೆ ಮನೆಯತ್ತ ಹೊರಟೆವು.

ಪೆರೂರು ಪತ್ತೀಶ್ವರಾರ್

ಮರುದಮಲೈಯಿಂದ ಮರಳುವಲ್ಲಿ ಕಾಲಕೋಶವೂ ಹಿಂದೆ ಸರಿದಂತೆ ಹನ್ನೆರಡನೇ ಶತಮಾನದಿಂದ ಎರಡನೇ ಶತಮಾನಕ್ಕೆ ಇಳಿದಿದ್ದೆವು. ಆದರೆ ಯೋಗ್ಯತಾನುಸಾರ, ಸುಬ್ರಹ್ಮಣ್ಯನಿಂದ ಅವನಪ್ಪ – ಪರಮೇಶ್ವರನ ಕ್ಷೇತ್ರ, ಪೆರೂರು ಪತ್ತೀಶ್ವರಾರ್ ದೇವಳಕ್ಕೆ ಏರಿದ್ದೆವು. ಇದು ಮೂಲತಃ ಚೋಳವಂಶದ ಕೊಡುಗೆ. ಆದರೆ ಸಂದ ಶತಮಾನಗಳಲ್ಲಿ ನಮ್ಮ ವಿಜಯನಗರವೂ ಸೇರಿದಂತೆ ಬಂದ ಅರಸೊತ್ತಿಗೆಗಳೆಲ್ಲ ಇದನ್ನು ಸಮೃದ್ಧವಾಗಿಸಿವೆ. ಪೂರ್ಣ ಶಿಲಾಮಯ, ಭವ್ಯ, ಅಸಂಖ್ಯ ಕೆತ್ತನೆಗಳು, ವಿಸ್ತಾರ ಓಣಿಗಳು, ವಿನಾಯಕಾದಿ ‘ಪರಿವಾರ ದೇವರುಗಳ’ ಗರ್ಭಗುಡಿಗಳು, ಸ್ವತಂತ್ರ ಗಂಟಾ ಸೇರಿದಂತೆ ಹಲವು ಗೋಪುರಗಳೂ ಅಲ್ಲದೆ ಛತ್ತಿನ ವರ್ಣಚಿತ್ರಗಳು ನೋಡಿದಷ್ಟೂ ಮುಗಿಯದು. ನಾನು ಎಂದಿನ ಉತ್ಸಾಹದಿಂದಲೇ ಛತ್ತಿನ ಒಂದು ಚಿತ್ರ ತೆಗೆದಾಗಿತ್ತು. ಆಗ ದೇವಳದ ತಮಿಳನೊಬ್ಬ ನನ್ನ ತಮಿಳು ಅಜ್ಞಾನವನ್ನು ಕ್ಷಮಿಸಿ, ‘ಚಿತ್ರ ನಿಷೇಧ’ದ ಬೋರ್ಡ್ ಅನುವಾದಿಸಿದ; ಹೆಚ್ಚಿನ ಚಿತ್ರಗಳಿಲ್ಲ!

ಗಂಧರ್ವಗಾನ

ಪತ್ತೀಶ್ವರಾರ್ ದೇವಳದೊಳಗಿನ ಮಾಮೂಲು ಆರಾಧನೆಯ ಗುನುಗು, ಗಂಟಾನಾದ, ಭಕ್ತಾದಿಗಳ ಕಚಪಿಚ ಮೀರಿದಂತೆ, ತುಂಬು ಕೊರಳಿನ ನಾದವೊಂದು ಅಲ್ಲಿ ನಿಧಾನಕ್ಕೆ ಹರಿದಿತ್ತು. “ಹಾಂ ಯಾರದೋ ಧ್ವನಿಮುದ್ರಿಕೆ” ಎಂದು ಉಪೇಕ್ಷಿಸದೆ, ಅದರ ಮೂಲ ಹುಡುಕಿ ಹೊರಟ ನಾನು ದೂಳು ತುಂಬಿದ ಮೂಲೆ ಸೇರಿದ್ದೆ. ಅಲ್ಲೊಂದು ‘ಮಾಸಲು ಕಬ್ಬಿಣ ಪಂಜರ’ದೊಳಗೆ, ಏನೋ ದೇವಳದ ಕಡತಗಳ ರಾಶಿಯ ನಡುವೆ, ಹಿರಿಯ ಕಲಾವಿದರೊಬ್ಬರು ಎಲೆಕ್ಟ್ರಾನಿಕ್ ಶ್ರುತಿ ಹಚ್ಚಿ, ಪೂರ್ಣ ಸ್ವಾಂತಸುಖಾಯ ಎನ್ನುವಂತೆ ಕೇವಲ ಮೈಕ್ ಕಂಬಕ್ಕೆ ಆಲಾಪಿಸಿದ್ದರು. ಪಂಜರದ ಹೊರಗೆ ನಿಂತಂತೆ ನಾನು ಎರಡು ಮಿನಿಟು ಗಾನಧ್ಯಾನಿಯಾದೆ. ಆತ ಪುಟ್ಟ ತಾಳ ಕೈಗೊಂಡು ಮುಂದುವರಿದಾಗ, ನಾನು ಸನ್ನೆಯಲ್ಲೇ ಅವರ ಅನುಮತಿ ಪಡೆದು, ಕಿಸೆ ಸೇರಿದ್ದ ಚರವಾಣಿ ತೆಗೆದು ಈ ತುಣುಕನ್ನಷ್ಟೆ ದಾಖಲಿಸಿಕೊಂಡೆ. ಕಾಲದ ಹಂಗೊಂದು ಇರದಿದ್ದರೆ, ನಾನು ಈ ನಿಜದ ಆರಾಧನೆಯ ಉದ್ದಕ್ಕೆ ಕೂರುವವನೇ!

ಪ್ರಸಾದಪ್ರಿಯ!

ಅಶೋಕನಾಮಕನಾದರೂ ನಾನು ದೇವನಾಂಪ್ರಿಯನಲ್ಲ. ಹಾಗೆಂದು ಚಪ್ಪರಿಸುವ ಯಾವುದೇ ತೀರ್ಥ ಪ್ರಸಾದ ವಿರೋಧಿಯೂ ಅಲ್ಲ! ಯಾವುದೋ ತಾಯಿ, ಮಗಳ ಜೋಡಿಯೊಂದು ಪತ್ತೀಶ್ವರನಿಗೇನೋ ಹರಿಕೆ ಸಂದಾವಣೆಗೆ ಬಂದಂತ್ತಿತ್ತು. ಎರಡು ದೊಡ್ಡ ಚರಿಗೆ ತುಂಬ ಬಿಸಿ ಪುಳಿಯೋಗರೆ ತಂದು, ದೇವರಿಗೆ ನೈವೇದ್ಯ ಮಾಡಿ, ಸಾರ್ವಜನಿಕ ವಿತರಣೆ ನಡೆಸಿದ್ದರು. ನಾವೂ ಮನಃಪೂರ್ವಕವಾಗಿ ದೊನ್ನೆ ತುಂಬ ಪ್ರಸಾದ ಪಡೆದು, ತನುಪೂರಣ ಮಾಡಿಕೊಂಡೇ ಹೊರನಡೆದೆವು.

ಅಪ್ಪನಿಗೆ ನಜರೊಪ್ಪಿಸಿದ ಮಗ ಇಂದು ಪತ್ತೀಶ್ವರಾರ್ ದೇವಳವನ್ನು ನಗರ ಪೂರ್ಣ ಆವರಿಸಿದೆ. ಧ್ವಜಸ್ತಂಭದ ಎಡ ಬಲಗಳಲ್ಲಿ ವಾಹನಗಳು ತಂಗುತ್ತವೆ. ಮುಖಮಂಟಪ ಮತ್ತು ಧ್ವಜಸ್ತಂಭದ ನಡುವೆ ನಿರಂತರ ವಾಹನ ಸಂಚಾರದ ದಾರಿಯೇ ಹರಿದಿದೆ. ಇವೆಲ್ಲವುಗಳ ಗದ್ದಲ ಮೀರಿಸಿದಂತೆ, ಬೆಳಗ್ಗಿನ ಮಳೆಯ ಕೆಸರು ಕೊಚ್ಚೆ ಲೆಕ್ಕಕ್ಕಿಲ್ಲದಂತೆ, ಕರಿಪಂಚೆ ಬಳಗವೊಂದು ಚಂಡೆ, ಜಾಗಟೆ, ಶಂಖ, ಕೊಂಬುಗಳ ಭರ್ಜರಿ ಮೇಳದಲ್ಲಿ, ಹರಿಹರಪುತ್ರ – ಅಯ್ಯಪ್ಪನ, ಪುಟ್ಟ ತೇರು ತಂದರು. ಮತ್ತೆ ಅಪ್ಪ – ಪತ್ತೀಶ್ವರನ, ಮುಖಮಂಟಪದೆದುರೇ ಸಮ್ಮಾನ ನಡೆಸುತ್ತಿದ್ದಂತೆ ನಾವು ನಮ್ಮದೇ ದಾರಿ ಹಿಡಿದು ಮನೆ ಸೇರಿದೆವು.

ಜಗ್ಗಿವಾಸುದೇವ ಪುರ – ಅರ್ಥಾತ್ ಈಶ ಪ್ರತಿಷ್ಠಾನ

ಹಿಂ-ದಿನದ ಎರಡೂ ಪ್ರೇಕ್ಷಣೆಯಲ್ಲಿ ಒದಗಿದ ಪುರಾತನ ಮಹೇಶನ ರೂಪಗಳಿಗೆ ಭಿನ್ನವಾಗಿ, ಮೂರನೇ ಸಂಜೆ ಆತನ ಆಧುನಿಕ ಅವತಾರ ದರ್ಶನಕ್ಕೆ ಹೊರಟೆವು. ಅಳಿಯ ಮಹೇಶನ ಕಾರಿಗೆ ಮಹಾನಂದಿಯ ಇಚ್ಛಾಸಂಚಾರ ಸಾಮರ್ಥ್ಯವೇನೂ ಇಲ್ಲ. ಅದು ಕೊಯಂಬತ್ತೂರು ನಗರದ ಜಿಡುಕು ಬಿಡಿಸಿಕೊಂಡು, ಹಳ್ಳಿ ಬಳುಕುಗಳಲ್ಲಿ ಸುಳಿದುಕೊಂಡು ಸುಮಾರು ಇಪ್ಪತ್ತೈದು ಕಿಮೀ ದೂರದ ಕೈಲಾಸ, ಅಲ್ಲಲ್ಲ ‘ನವ ಈಶ-ಪುರಿ’ ಮುಟ್ಟುವಾಗ ಒಂದೂವರೆ ಗಂಟೆಯನ್ನೇ ಕಳೆದುಕೊಂಡಿದ್ದೆವು. ಭವ್ಯ ಪಾಲ್ಘಾಟ್ ಶ್ರೇಣಿಯ ಮುನ್ನೆಲೆಯಲ್ಲಿ, ಬಹುತೇಕ ನೇರ ತಪ್ಪಲಿನ ವಿಸ್ತಾರ ಹಸಿರು ಮೈದಾನದಲ್ಲಿ, ‘ಆದಿಯೋಗಿ’ ಎಂದೇ ಕರೆಸಿಕೊಂಡ, ಎದೆಮಟ್ಟದ ಭಾರೀ ಶಿವಮೂರ್ತಿ (೧೧೨ ಅಡಿ ಎತ್ತರ, ಗಿನ್ನೆಸ್ ದಾಖಲೆಯೂ ಹೌದಂತೆ) ದೂರದಿಂದಲೇ ನಮ್ಮನ್ನು ಆಕರ್ಷಿಸಿತ್ತು. ಇದು ಕೇವಲ ಎರಡು ವರ್ಷಗಳ ಹಿಂದಷ್ಟೇ (೨೦೧೭) ಲೋಕಾರ್ಪಣಗೊಂಡ ರಚನೆ.

ಈಶ ಪ್ರತಿಷ್ಠಾನದ ಪೂರ್ಣ ವಠಾರಕ್ಕೆ ಭಾರೀ ಬಂಡೆ ತುಂಡುಗಳ ಪೇರಿಕೆಯ ಪ್ರಾಕಾರ ಇನ್ನೂ ರಚನೆಯಲ್ಲೇ ಇದೆ. ಅದು ಪೂರ್ಣಗೊಂಡದ್ದು ಹೇಗೋ ತಿಳಿದಿಲ್ಲ. ಸದ್ಯ ಕಾರಿನ ಲೆಕ್ಕದಲ್ಲಿ ರೂ. ಮೂವತ್ತನ್ನಷ್ಟೇ ಪಾವತಿಸಿ, ವಠಾರ ಪ್ರವೇಶಿಸಿದ್ದೆವು. ಮಹಾವಿಗ್ರಹದ ದೂರದ ಮೂಲೆಯಲ್ಲಿನ ಹಲವು ಓಣಿಗಳ ‘ಕಾರ್ ಪಾರ್ಕ್’ ಕೂಡಾ ಅಬಿವೃದ್ಧಿಪಥದಲ್ಲಿದೆ. ಇಂದು ಅದು ಅಕಾಲಿಕ ಮಳೆ, ಸಾವಿರಾರು ವಾಹನಗಳ ಓಡಾಟದಲ್ಲಿ ಕೆಸರೆದ್ದು, ವಾಹನ ಸಂಚಾರ, ಇಳಿದು ನಡೆಯುವುದು ಎಲ್ಲರಿಗೂ ಸಮಸ್ಯೆಯೇ ಆಗಿತ್ತು. ಹತ್ತೆಂಟು ಓಣಿಗಳಲ್ಲಿ ನೂರಾರು ಬೈಕು, ಕಾರು, ವ್ಯಾನು, ಬಸ್ಸುಗಳು ತಂಗಿದ್ದವು, ಜನರ ಓಡಾಟವೂ ಸಾಕಷ್ಟಿತ್ತು. ಮೈದಾನದ ಆ ತಲೆಯಿಂದ ತೊಡಗಿದಂತೆ ಮೂರ್ತಿವರೆಗೆ ಸುಂದರ ವಿನ್ಯಾಸದ ಕಲ್ಲ ಹಾಸಿನ ದಾರಿಯಿದೆ. ಮೂರ್ತಿ ಸಮೀಪಿಸುವಲ್ಲಿ ಅದನ್ನು ವಿಸ್ತರಿಸಿ, ಪ್ರದಕ್ಷಿಣಾಪಥದಲ್ಲಿ ಅದನ್ನು ಎತ್ತರಿಸಿಯೂ ಕೊಟ್ಟಿದ್ದಾರೆ. ಸಾರ್ವಜನಿಕರು ಅದರ ಸುತ್ತೂ ನೂರೆಂಟು ವಿಧಗಳಲ್ಲಿ. ಚಿತ್ರಗ್ರಹಣದ ಮೋಜು-ಭಕ್ತಿಗಳಲ್ಲಿ, ಎದುರಿನ ಮಂಟಪದ ಸಣ್ಣ ಆರಾಧನಾ ವಿಗ್ರಹಗಳಿಗೆ ಪೂಜೆ ಸಲ್ಲಿಸುವಲ್ಲಿ ಹೆಚ್ಚುತ್ತಲೇ ಇದ್ದರು. ಆರಾಧನಾ ಮಂಟಪದ ವಲಯದವೊಂದನ್ನುಳಿದು, ಇಲ್ಲಿ ಚಪ್ಪಲಿ, ಚಿತ್ರಗ್ರಹಣ, ಓಡಾಟಗಳಿಗೆಲ್ಲ ಯಾವುದೇ ಶಿಸ್ತಿನ ಬಿಗಿತಗಳಿಲ್ಲ. ನಾನು ವರ್ಷದ ಹಿಂದೆ ನರ್ಮದಾ ಸಾಗರ್ ತಟಿಯಲ್ಲಿ, ಇದೇ ಶೈಲಿಯಲ್ಲಿ (ಉಕ್ಕಿನ ಹಾಳೆಗಳ ಜೋಡಣೆಯಲ್ಲಿ ಮೂಡಿದ ಮೂರ್ತಿ) ಮೋದಿಯ ವಲ್ಲಭಾಯ್ ಪಟೇಲರ ವಿಗ್ರಹವನ್ನು ನೋಡಿದ್ದೆ. (ಬರೆಯುವುದು ಇನ್ನೂ ಆಗಿಲ್ಲ!) ಎರಡರ ಹಿಂದಿನ ಮನೋಸ್ಥಿತಿ ಒಂದೇ! ಮೋದಿ ತನ್ನ ರಾಜಕೀಯ ಮಹತ್ವಾಕಾಂಕ್ಷೆಗೆ ಪಟೇಲ್ ವಿಗ್ರಹದ ಪಣ ಇಟ್ಟರೆ, ಇಲ್ಲಿ ಜಗ್ಗಿ ತನ್ನ ಭಕ್ತ್ಯೋದ್ದಿಮೆಯ ಬಹುದೊಡ್ಡ ಸಂಕೇತವಾಗಿ ಈ ವಿಗ್ರಹ ನಿಲ್ಲಿಸಿದ್ದಾರೆ; ಎರಡೂ ನಿಸ್ಸಂದೇಹವಾಗಿ ಸಾರ್ವಜನಿಕ ಮೌಢ್ಯವನ್ನು ಮಾತ್ರ ನಗದೀಕರಿಸುತ್ತವೆ.

‘ಆದಿಯೋಗಿ’ಯ ಬೆನ್ನಿಗೆ, ಸುಮಾರು ಒಂದು ಕಿಮೀ ಆಚೆಗೆ ಮತ್ತೊಂದಷ್ಟು ಭಾರಿಯೇ ಇರುವ ಪೂರಕ ರಚನೆಗಳನ್ನು ಹೊಸೆದಿದ್ದಾರೆ. ಅಲ್ಲಿವರೆಗೂ ದೃಢ ಸುವಿಸ್ತಾರ ಕಾಂಕ್ರೀಟ್ ಮಾರ್ಗವನ್ನೂ ಮಾಡಿದ್ದಾರೆ. ಅದೂ ನಡೆದು ನೋಡುವ ಸಾರ್ವಜನಿಕರಿಗೆ ಮುಕ್ತವೇ ಇದೆ. ದೈಹಿಕ ನಿತ್ರಾಣರಿಗೆ, ಕಡಿಮೆ ವೆಚ್ಚದ ಎತ್ತಿನ ಗಾಡಿ ಅಥವಾ ವಿದ್ಯುತ್ ಕಾರ್ ಸೌಕರ್ಯಗಳ ವ್ಯವಸ್ಥೆ ಇದೆ. ಆ ಮಾರ್ಗದ ಒಂದು ಪಾರ್ಶ್ವದಲ್ಲಿ ಸಣ್ಣದಾಗಿ ಸಸ್ಯವಾಟಿ ಇದೆ. ಇನ್ನೊಂದು ಮಗ್ಗುಲನ್ನು ಜಿಹ್ವಾಚಾಪಲ್ಯಕ್ಕೆ ತೆರೆದುಕೊಳ್ಳುವ ಖಾದ್ಯರ ಮತ್ತು ಸ್ಮರಣಿಕೆ ಮಣಿಸರಕುಗಳ ಆರಾಧ್ಯರ ಅಡ್ಡೆಗಳು ವ್ಯಾಪಿಸಿವೆ. ನಾವು ನಡೆದೇ ಸಾಗಿದೆವು. ಧ್ಯಾನಕೇಂದ್ರ ನೋಡಿ ಮರಳುವಾಗ, ಅಲ್ಲಿನ ದೊಡ್ಡ ಹೋಟೆಲಿನಲ್ಲಿ ನಾವು ತಿನಿಸು ಪಾನೀಯಗಳನ್ನು ಕೊಂಡು ಅನುಭವಿಸಿದೆವು. ಬೆಲೆ ವಿಶೇಷವಿರಲಿಲ್ಲ, ಶುಚಿರುಚಿಗಳು ಚೆನ್ನಾಗಿಯೇ ಇದ್ದವು.

ಪೂರಕ ರಚನೆಗಳ ವಲಯದಲ್ಲಿ ಭಾರೀ ಧ್ಯಾನಮಂದಿರವೊಂದಿದೆ. ಆದಿಯೋಗಿಯ ಎದುರು ಮುಕ್ತವಿದ್ದ ಚಿತ್ರಗ್ರಹಣಕ್ಕಿಲ್ಲಿ ನಿಷೇಧವಿದೆ. ಹಾಗಾಗಿ ಅಲ್ಲಿನ ನಿಜ ಚಿತ್ರಗಳ (ಅಂತರ್ಜಾಲದಲ್ಲಿ ಎಷ್ಟೂ ಲಭ್ಯ) ಕೊರತೆಗೆ ನಾನು ಸಂಕ್ಷಿಪ್ತ ನುಡಿ ಚಿತ್ರವನ್ನಷ್ಟೇ ಕೊಡಬಲ್ಲೆ: ಮೊದಲನೇ ಕಟ್ಟಡ ಪರೀಕ್ಷಾಗೃಹ. ಚಪ್ಪಲಿ, ಚರವಾಣಿ, ಖಾಸಾ ಚೀಲಾದಿಗಳನ್ನು ಭದ್ರ ಕೊಟ್ಟಡಿಗೆ ಕೊಟ್ಟು, ದೇಹವನ್ನು ಶೋಧಕಕ್ಕೆ ಒಡ್ಡಿಸಿಕೊಂಡು ಮುಂದುವರಿಯಬೇಕು. ಮುಂದಿನದು ಸ್ನಾನಗೃಹ! ಎತ್ತರಿಸಿದ ಮಂದಿರದ ಒಳಾಂಗಣ ಕೆರೆಯಲ್ಲಿ, ಸಾಂಕೇತಿಕ ಹಣ ಕೊಟ್ಟವರಿಗೆ ಸಣ್ಣ ಸ್ನಾನದ ಜತೆ, ಕೆರೆಯಲ್ಲೇ ಸ್ಥಿತವಾದ ಲಿಂಗಾರ್ಚನೆಯ ಅವಕಾಶವೂ ದಕ್ಕುತ್ತದೆ. ನಾವು ಅಲ್ಲಿ ಸ್ನಾನ ಬಯಸದಿದ್ದರೂ ಮುಕ್ತವಿರುವ ಗಂಡಸರ ವಿಭಾಗದ ಕೆರೆಯನ್ನು ಮೆಟ್ಟಿಲುಗಳ ಮೇಲೇ ನಿಂತು ನೋಡಿದೆವು. ಅದು ಸುಮಾರು ಮೂರುನಾಲ್ಕಡಿ ಆಳಕ್ಕೇ ಸೀಮಿತಗೊಂಡ ಪುಟ್ಟ ಈಜುಕೊಳ, ನಡುವೆ ಒಂದು (ಸ್ಫಟಿಕ?) ಲಿಂಗ. ಕೊಳದ ಎತ್ತರಿಸಿದ ಎದುರು ದಂಡೆಯಿಂದ ಒಳಬರುವ ಹೊಸನೀರು ಪುಟ್ಟ ಜಲಪಾತದಂತೇ ಇದೆ. ಆಸಕ್ತರು ಯುಕ್ತ ದಿರುಸಿನಲ್ಲಿ ಕೊಳಕ್ಕಿಳಿದು, ನಡೆದು, ಜಲಪಾತಕ್ಕೆ ತಲೆಕೊಟ್ಟು, ಲಿಂಗಕ್ಕೆ ಪ್ರದಕ್ಷಿಣೆ ಹಾಕುತ್ತ ಅಭಿಷೇಕ ಮಾಡುತ್ತಿದ್ದರು. ಬಸ್ಸುಗಟ್ಟಳೆ ಬಂದಿದ್ದ ಅಯ್ಯಪ್ಪ ಭಕ್ತರಿಂದ ‘ಪುಣ್ಯಸ್ನಾನ’ದ ಕೊಳ ಗಿಜಿಗುಟ್ಟಿತ್ತು.

ಕೊಯಂಬತ್ತೂರಿನಲ್ಲಿ ಸಾರ್ವಜನಿಕಕ್ಕೆ ಖಾಸಗಿ ಸ್ಮಶಾನ! ಕೊನೆಯ ಕಟ್ಟಡ ಸಮುಚ್ಚಯ – ವಿಸ್ತೃತ ಗುಮ್ಮಟದಂತೆ ತೋರುವ ಧ್ಯಾನ ಕೇಂದ್ರ. ಅಂಗಳದಲ್ಲಿ ಎರಡಾಳೆತ್ತರದ ವಿಭಿನ್ನ ಶೈಲಿಯ ನಂದಿ ಕುಳಿತಿದೆ. ಅದರ ಜಗುಲಿಯ ಭಾರೀ ಕಲ್ಲಿನ ಸ್ತಂಭಗಳನ್ನು ಅಷ್ಟೇ ಭಾರೀ ಆಮೆ, ರಾಕ್ಷಸಾದಿ ಶಿಲ್ಪಗಳು ಹೊತ್ತಂತೆ ರೂಪಿಸಿದ್ದಾರೆ. ಧ್ಯಾನಲಿಂಗ ವಠಾರದ ದ್ವಾರದಲ್ಲೇ ಮೆರೆಯುವ ಮಹಾನಾಗ ಶಿಲ್ಪ ಸಂಸ್ಥೆಯ ಪ್ರಧಾನ ಚಿಹ್ನೆ. ಅದರ ಕೆಲವು ಮರಿರೂಪಿಗಳು, ನೈಜ ಗಾತ್ರದ ಹಾವುಗಳಂತೇ ಕಲ್ಲ ಸ್ತಂಭಗಳ ಎತ್ತರದಿಂದ ಜೋತು ಬಿದ್ದಿರುವವು, ಒಮ್ಮೆಗೆ ಯಾರಿಗೂ ಗಾಬರಿ ಹುಟ್ಟಿಸುವಂತಿವೆ. ಈ ‘ನಾಗಮೋಹ’ ಬೇಲಿಗೂಟಗಳ ಲೋಹದ (ಹಿತ್ತಾಳೆ?) ಟೊಪ್ಪಿಗೆಯ ಮೇಲೂ ಕಿರುನಾಗರದಂತೆ ಮೂಡಿಸಿದ್ದೂ ಅಷ್ಟೇ ಪರಿಣಾಮಕಾರಿಯಾಗಿ ಇದೆ. ಜಗುಲಿ, ಒಳಗಿನ ಓಣಿಗಳಲ್ಲಿ ಹಲವು ಉಬ್ಬುಚಿತ್ರ, ವಿಗ್ರಹಗಳ ಪ್ರದರ್ಶನವೂ ಇದೆ. ಅಲ್ಲಿನೊಂದು ಕೊಠಡಿಯಲ್ಲಿ ಸಾಂಪ್ರದಾಯಿಕ ಅರ್ಚನೆ, ತೀರ್ಥ ಪ್ರಸಾದದ ಔಪಚಾರಿಕತೆ ಮುಗಿಸಿಕೊಂಡ ಮೇಲೆ, ಶುದ್ಧ ಧ್ಯಾನಕ್ಕೆ ಗುಮ್ಮಟದಡಿಯ ಮುಖ್ಯ ಒಳಾಂಗಣಕ್ಕೆ ಬಿಡುತ್ತಾರೆ. ಇದರ ಸಂದರ್ಶನ ಹೀಗೆ ನುಗ್ಗಿ, ಹಾಗೆ ಹೊರಡುವ ಔಪಚಾರಿಕತೆಯನ್ನು ಮೀರಬೇಕೆನ್ನುವಂತೆ ವ್ಯವಸ್ಥೆ ಮಾಡಿದ್ದಾರೆ. ಬಿಡಿಬಿಡಿಯಾಗಿ ಬಂದವರನ್ನು ಹದಿನೈದಿಪ್ಪತ್ತು ಮಿನಿಟು ತಡೆದು, ಸುಮಾರು ನೂರಿನ್ನೂರರ ಗುಂಪುಗಳಲ್ಲಿ ಒಳ ಬಿಡುತ್ತಾರೆ. ಗುಮ್ಮಟದ ನಡುವಿನೆತ್ತರಕ್ಕೆ (ಸುಮಾರು ೨೦-೩೦ ಅಡಿ?) ನಿಲುಕುವಂತೆ ಭಾರೀ ಲಿಂಗವಿದೆ. ಅದರ ಸುತ್ತಣ ಕಲ್ಲ ಹಾಸಿನ ಮೇಲೆ ಜನ ಖಾಸಾ ಭಂಗಿಗಳಲ್ಲಿ ಹತ್ತಿಪ್ಪತ್ತು ಮಿನಿಟಿನ ಕಾಲ ಮೌನಧ್ಯಾನ ನಡೆಸಬಹುದು. ಗುಮ್ಮಟದ ಛತ್ತಿನ ವಿಶಿಷ್ಟ ವಿನ್ಯಾಸದ ಪರಿಣಾಮವೂ ಸೇರಿ ಒಳಗಿನ ಗಾಢ ಮೌನ ಭಕ್ತಾದಿಗಳಿಗೆ ನಿಜಕ್ಕೂ ಪ್ರೇರಣೆ ಕೊಡುವುದಿರಬಹುದು. ನಾವು ಮಾತ್ರ ಇನ್ನೇನಾದರೂ ಕ್ರಿಯೆಗಳಿವೆಯೇ ಎಂಬ ನಿರೀಕ್ಷೆಯಲ್ಲಿ ಎರಡು ಮಿನಿಟು ಕುಳಿತಿದ್ದೆವು. ಜನ ಕುಶಿವಾಸಿ ಎದ್ದು ಹೋಗುತ್ತಿದ್ದದ್ದು ನೋಡಿದ ಮೇಲೆ ನಾವೂ ಹೊರಬಂದೆವು.

ಆದಿಯೋಗಿ ವಿಗ್ರಹದ ಮೈಯ ಮೇಲೆ ಪ್ರತಿ ಶನಿ ಮತ್ತು ಆದಿತ್ಯವಾರ, ಹುಣ್ಣಿಮೆ ಅಮಾವಾಸ್ಯೆ ಮತ್ತು ಹಬ್ಬದ ದಿನಗಳಂದು ರಾತ್ರಿ ಎಂಟು ಗಂಟೆಯಿಂದ ತೊಡಗಿದಂತೆ ಸುಮಾರು ಇಪ್ಪತ್ತು ಮಿನಿಟಿನ ವಿಶೇಷ ಬೆಳಕಿನ ಪ್ರದರ್ಶನವೊಂದನ್ನು ಕೊಡುತ್ತಾರೆ. ನಾವದನ್ನು ನೋಡಲೂ ಅಂದಾಜಿಸಿಯೇ ಹೋದವರು. ಹಾಗಾಗಿ ಸುಮಾರು ಅರ್ಧ ಗಂಟೆಯಷ್ಟು ಕಾಲ ಮಾತ್ರ ಕಾಯಬೇಕಾಯ್ತು. ಆ ಬೆಳಕಿನ ಪ್ರದರ್ಶನದ ಖ್ಯಾತಿಗೆ ಸರಿಯಾಗಿ ಆದಿಯೋಗಿಯ ಎದುರಿನ ಮೈದಾನ ಪೂರ್ತಿ ಗಿಜಿಗಿಜಿ ಜನ ತುಂಬಿದ್ದರು. ಪ್ರವಾಸ, ಪ್ರವಚನ ಎಂದು ವರ್ಷದ ಬಹುಕಾಲ ಹೊರ ಊರು, ವಿದೇಶಗಳಲ್ಲಿರುವ ಜಗ್ಗಿ ವಾಸುದೇವರೂ ಅಂದು ಹಾಜರಿದ್ದದ್ದು ಭಕ್ತಾದಿಗಳಿಗೆ ಹೆಚ್ಚಿನ ಆಕರ್ಷಣೆ ಕೊಟ್ಟಂತಿತ್ತು. ಪರಿಸರ, ನಿರೀಕ್ಷೆಗಳನ್ನು ಸಮರ್ಥವಾಗಿ ಬಳಸಿಕೊಂಡ ಪೀಠಿಕಾರೂಪದ ಭಜನೆ, ಅನಂತರದ ಆದಿಯೋಗಿಯ ವಿಕಾಸದ ಲೇಸರ್ ಬೆಳಕಿನ ಪ್ರದರ್ಶನ, ಸಮರ್ಥ ಧ್ವನಿವ್ಯವಸ್ಥೆ ಮತ್ತು ನಿರೂಪಣೆಯಲ್ಲಿನ ಕಥನ, ನನಗಂತೂ ಉತ್ತಮ ನಾಟಕದ ಭಾವನೆಯನ್ನಷ್ಟೇ ಕೊಟ್ಟಿತು.

ನಮ್ಮ ಹಿಮ್ಮುಖದ ಪಯಣ, ಆಶ್ಚರ್ಯಕರವಾಗಿ ತುಂದ್ಬ ಒಳ್ಳೆಯ ದಾರಿಯಲ್ಲೇ ಇತ್ತು. ಹಿಂದೆ ನಾಲ್ಕೈದು ಬಾರಿ ಈಶ ಪ್ರತಿಷ್ಠಾನಕ್ಕೆ ಬಂದು ಮರಳಿದಾಗಲೂ ಹೀಗೇ ಆಗಿತ್ತು ಎಂದು ನಮ್ಮ ಮಹೇಶ ಆಶ್ಚರ್ಯಪಟ್ಟದ್ದು  ಮಾತ್ರ ನನಗೆ ಹೆಚ್ಚಿನ ಆಶ್ಚರ್ಯವನ್ನೆ ಉಂಟು ಮಾಡಿತು. ಅವನಿಗೆ ಪ್ರತಿ ಬಾರಿಯೂ ಕೊಯಂಬತ್ತೂರಿನಿಂದ ಬರುವಾಗ ಈ ದಾರಿ ಸಿಕ್ಕಿದ್ದೇ ಇಲ್ಲವಂತೆ!! ಭಕ್ತ್ಯೋದ್ದಿಮೆಯ ಜಗ್ಗೀ ಬ್ರಾಂಡ್ ವಿಕಸಿಸಿದ ದಾರಿಯಾದರೂ ಭಿನ್ನವಲ್ಲ ಎನ್ನುವುದೇ ನನ್ನ ವಿಶೇಷ ಆಶ್ಚರ್ಯಕ್ಕೆ ಕಾರಣ.

ರುಚಿ ಹೆಚ್ಚಿಸುವ ಲೋಟ

ಹೊಟೆಲುಗಳಲ್ಲಿ ರುಚಿ ಮತ್ತು ಧಾರಾಳಕ್ಕೆ ತಮಿಳುನಾಡು ಯಾವತ್ತೂ ಪ್ರಸಿದ್ಧ. ಕೇರಳ ತದ್ವಿರುದ್ಧ – ಸಾಂಪ್ರದಾಯಿಕ ಸಸ್ಯಾಹಾರಿಗಳಾದರೆ ಎಷ್ಟೋ ಊರುಗಳಲ್ಲಿ ಬಲವಂತದ ಉಪವಾಸವನ್ನೇ ನೆಚ್ಚಬೇಕು. ಕೊಯಂಬತ್ತೂರಿನ ಅವಿನಾಶಿ ರಸ್ತೆಯ ‘ಕಾರಂ ಅಂಡ್ ಕಾಪಿ’ ಹೋಟೆಲ್ ಉತ್ತಮ ಫಿಲ್ಟರ್ ಕಾಫಿಯನ್ನು ‘ಸುವರ್ಣ ಲೋಟ’ದ (ಹಿತ್ತಾಳೆಯಿರಬೇಕು) ಚಂದದಲ್ಲಿ ಕೊಡುವುದನ್ನು ಅನುಭವಿಸಿದೆವು.

ಬನ್ನಾರಿ ಅಮ್ಮನ ದೇವಳ

“ಚಾಮರಾಜನಗರದಿಂದ ತಲೈಮಲೈ ಎತ್ತರಕ್ಕೇರಿ, ದಿಂಬಂ ಘಾಟಿ ಇಳಿದು ಬನ್ನಾರಿ ಅಮ್ಮನ ಪಾದ……” ನಾಲ್ಕು ವರ್ಷಗಳ ಹಿಂದೆ ನಾನೂ ಊಟಿಗೆ ಸೈಕಲ್ ಬಿಟ್ಟ ಕಥೆಯಾಯ್ತು (ನೋಡಿ: ನೀಲಗಿರಿಗೆ ಸೈಕಲ್ ಸವಾರಿ). ಆಗ ದೀರ್ಘ ಸೈಕಲ್ ಓಟದ ಲಕ್ಷ್ಯದಲ್ಲಿ ಹೆಚ್ಚಿನ ಸ್ಥಳ ವಿಶೇಷಗಳೆಲ್ಲ ಕೇವಲ ಸ್ಥಳನಾಮದ ಮಟ್ಟಕ್ಕೇ ಉಳಿದಿದ್ದವು. ಮೊನ್ನೆ ಕೊಯಂಬತ್ತೂರಿನಿಂದ ಮರಳುವಲ್ಲಿ, ತಮ್ಮ ಅನಂತ ರುಕ್ಮಿಣಿಯರ ಮೈಸೂರು ಕಾರಿಗೆ ನಾವೂ ಸೇರಿಕೊಂಡದ್ದರಿಂದ, ನಮ್ಮದೇ ಸಮಯದಲ್ಲಿದ್ದೆವು. ಹಾಗಾಗಿ ಪಶ್ಚಿಮ ಘಟ್ಟದ ಗಗನದೆತ್ತರದ ಗೋಡೆಯ ಮುನ್ನೆಲೆಯಲ್ಲಿ ವರ್ಣಮಯವಾಗಿ ನಿಂತ ಅರುಲ್ಮಿಗು ಬನ್ನಾರಿ ಅಮ್ಮನ (ಮಾರಿಯಮ್ಮ) ದೇವಳಕ್ಕೆ ಐದು ಹತ್ತು ಮಿನಿಟಿನ ಭೇಟಿ ನೀಡಿದ್ದೆವು. ಸ್ಥಳಪುರಾಣ (ವಿಕಿಪೀಡಿಯಾ) ಇದನ್ನು ಸುಮಾರು ಮೂರು ಶತಮಾನಗಳಷ್ಟು ಪುರಾತನವೆಂದರೂ ಬಹುತೇಕ ರಚನೆಗಳು ತೀರಾ ಅಧುನಿಕದಂತೇ ತೋರುತ್ತವೆ. ಹೊರ ಸುತ್ತಿನ ಎತ್ತರ ಮಾಡಿನ ಉದ್ದಾನುದ್ದ ಜಗುಲಿಗಳು, ಗರ್ಭ ಗುಡಿಯನ್ನಾವರಿಸಿದಂತೆ ಪೇರಿಸಿದ ನೂರಾರು (ಬಹುಶಃ) ಸಿಮೆಂಟ್ ವಿಗ್ರಹಗಳು, ಛತ್ತಿನಡಿಯಲ್ಲಿನ ರೇಖಾವಿನ್ಯಾಸಗಳು ಸೇರಿದಂತೆ ಎಲ್ಲವೂ ನೂರೆಂಟು ಕಣ್ಣುಕುಕ್ಕುವ ಬಣ್ಣಗಳಲ್ಲಿ ಮೆರೆದಿದ್ದವು. ಕೊಯಂಬತ್ತೂರು, ಮೆಟ್ಟುಪಾಳ್ಯ ಮತ್ತು ಚಾಮರಾಜನಗರ ದಾರಿಗಳ ಸಂಗಮದಲ್ಲೇ ಇರುವ ದೇವಳದ ಜನಪ್ರಿಯತೆಯನ್ನೂ ವರ್ಣವೈಭವ ಸಾರುತ್ತದೆ. ಹೊರಾಂಗಣದ ಒಂದು ವಿಭಾಗದಲ್ಲಿ ಅಯ್ಯಪ್ಪ ಭಕ್ತರ ಉಪ್ಪಿನ ಹರಿಕೆಯ ರಾಶಿ ನಾನು ಇದು ಮೊದಲು ಕಂಡು, ತಿಳಿದೆ.

ಲಿಪಿಕಾರ ಬೃಹಸ್ಪತಿ!

ಬನ್ನಾರಿ ಅಮ್ಮನ ದೇವಳದ ಒತ್ತಿನಲ್ಲೇ ಇದ್ದ ಬಸ್ ನಿಲ್ದಾಣದ ಮೂತ್ರಿಯತ್ತ ನಡೆದಿದ್ದೆವು. ಆಗ ಕಾಣಿಸಿದ ಚೋದ್ಯವಿದು. ಅಪ್ಪಟ ಕನ್ನಡಿಗರು ಇಲ್ಲೇನಾದರೂ ಅವಸರದ ‘ಒಂದ’ನಾರ್ಪಣೆಗೆ ಇಳಿದರೆ, ಹಿಂದಿಯ ‘ಕ’ಕ್ಕೆ ಕನ್ನಡೌಕಾರದ ಕೊಂಬು, ಕನ್ನಡದ ‘ಬಿ’ಗೆ ದೀರ್ಘದ ಕೊಂಬು ಮತ್ತು ಉಳಿದ ‘ಲಯ’ವನ್ನು ಅರ್ಥೈಸಿಕೊಳ್ಳುವ ಗೋಜಿನಲ್ಲಿ ಕಳೆದುಹೋದರೆ, ನೀನಾಸಂ ತಿರುಗಾಟದ ನಾಟಕ ‘ರಾಕ್ಷಸ ತಂಗಡಿ’ಯ ಅಳಿಯ ರಾಮರಾಯನಂತೆ ಬಟ್ಟೆ ಒದ್ದೆ ಮಾಡಿಕೊಳ್ಳುವ ಅಪಾಯವಿದೆ!

ಸಕಲ ವಿದ್ಯಾಕೇಂದ್ರ ಚಾಮರಾಜನಗರದ ದಾರಿಯಲ್ಲಿ ಎದುರು ಸಿಕ್ಕ ಬಸ್ಸಿನ ಹಿಂದಿನ ಜಾಹೀರಾತಿನ ವಿವರಗಳು ನೋಡಿ ನನಗಂತೂ ನಮ್ಮ ‘ವಿಶ್ವವಿದ್ಯಾನಿಲಯ’ಗಳ ಅದ್ಭುತ ವ್ಯಂಗ್ಯರೂಪಕದಂತೇ ಕಾಣಿಸಿತು. ಪ್ರಶ್ನಪತ್ರಿಕೆ ಸೋರಿಕೆ, ಉತ್ತರ ಬರೆಯುವಲ್ಲಿನ ಕಳ್ಳಮಾರ್ಗಗಳು, ಅಂಕಿ ತುಂಬುವಲ್ಲಿನ ವಂಚನೆ, ನಕಲಿ ಪ್ರಮಾಣಪತ್ರಗಳು, ಅನ್ಯರ ಸಂಪ್ರಬಂಧದ ಕಳ್ಳಪ್ರತಿ ಇಳಿಸಿದ ‘ಡಾಕ್ಟರ್’ಗಳು…. ಇಂಥ ಯಾವ ಗೋಠಾಳೆ ಇಲ್ಲದೆ ಎಲ್ಲವನ್ನೂ ಒಂದೇ ಛತ್ತಿನಡಿಯಲ್ಲಿ ಸಾರ್ವಜನಿಕವಾಗಿ ಘೋಷಿಸಿ ಕೊಡುವ ‘ಭಾರತೀದಾಸ’ ನಿಸ್ಸಂದೇಹವಾಗಿ ದೇಶಭಕ್ತನೇ ಸರಿ! ಆ ಜಾಹೀರಾತಿನ “… all UG, PG, M.Phil, Ph.D…” ಪಟ್ಟಿಯ ಕೊನೆಯಲ್ಲಿ etc ಬಿಟ್ಟುಹೋಗಿದೆ ಎಂದೊಂದೇ ನನ್ನ ದೂರು! ಈ ವಿದ್ಯ-ಲಯವಿರುವ ‘ಈರೋಡ್’ ಸ್ಥಳನಾಮ, ಭಾರತದ ಸವಕಲು (erode) ಪದವಿಗಳಿಗೆ ಸಮರ್ಥ ವಿದ್ಯಾಕೇಂದ್ರವೆಂದೇ ಅರ್ಥೈಸಬಹುದೇ?

ಮೊದಲೇ ಹೇಳಿದಂತೆ ನಾನು ಸೈಕಲ್ಲಿನಲ್ಲಿ ದಿಂಬಂ ಘಾಟಿಯನ್ನು ಇಳಿದು ಅನುಭವಿಸಿದ್ದೆ. ಈ ಬಾರಿ ಕಾರಿನೊಳ ಕುಳಿತು ಏರಿ, ಅತ್ತ ಪುಣಜನೂರಿಗಾಗಿ ಮೈಸೂರಿಗೆ ಸ್ವಲ್ಪ ಮಟ್ಟಿಗೆ ಇಳಿದೆ. ಇಪ್ಪತ್ತೇಳು ಹಿಮ್ಮುರಿ ತಿರುವುಗಳ ಘಾಟಿ ಭಾರೀ ಲಾರಿಗಳಿಗೆ ಅನಗತ್ಯ ಸುಸ್ತು ಮಾಡಿಸುತ್ತದೆ. ಕೆಲವೊಂದು ತಿರುವು ನಿಭಾಯಿಸುವಲ್ಲಿ ಲಾರಿಗಳು ಹಿಂದು ಮುಂದಾಡಿ, ಇತರ ವಾಹನಗಳಿಗೆ ಎಡಬಲ ತಪ್ಪಿಸಿ ಸಾಗುವುದು ಅನಿವಾರ್ಯ. ಇದನ್ನು ಯಾರೂ ಅಪರಾಧವೆಂದು ತಿಳಿಯದ ಸ್ಥಿತಿ ಇಲ್ಲಿದೆ. ವ್ಯವಸ್ಥೆಯೂ ಇದನ್ನೊಪ್ಪಿಕೊಂಡಂತೆ ತಿರುವುಗಳಲ್ಲಿ ಕೇವಲ ಉಬ್ಬುಗನ್ನಡಿಗಳನ್ನಿಟ್ಟು “ಹೇಗಾದರೂ ಹೋಗಿ, ನೋಡಿಕೊಂಡು ಹೋಗಿ” ಎಂದು ಇಂದಿನ ಭಾರತದ ಪರಿಸ್ಥಿತಿಯನ್ನೇ ಪ್ರತಿಫಲಿಸಿದಂತೆ ಮಾಡಿದೆ!!