ಜೂನ್ ೨೦೦೯ರ ಚರ್ಚೆಗೊಂದು ಚಾವಡಿ ಬಂದ ಕ್ಷಣವೇ ಮಗುಚಿಹಾಕಿ ಮಿತ್ರ ನರೇಂದ್ರ ಪೈ ಅವರಿಗೆ ದೂರವಾಣಿಸಿ ಅಭಿನಂದಿಸಿದೆ; ‘ತಮ್ಮ ಹೆಸರು ಪತ್ರಿಕೆಗಳಲ್ಲಿ ಬರಲಿ ಎಂಬ ಕಾರಣಕ್ಕಾಗಿ ಪತ್ರಿಕೆಗಳಿಗೆ ಪತ್ರ ಬರೆಯುವವರ ಸಾಲಿನಲ್ಲಿ ಸೇರದವರು ನರೇಂದ್ರ ಎಂದೇ ಈ ಆಪ್ತ ಪತ್ರಿಕೆ ಗುರುತಿಸಿಬಿಟ್ಟಿತ್ತು. ಅಂಗೈ ಅಗಲದ ಕೇವಲ ನಾಲ್ಕು ಪುಟದ ಈ ಪತ್ರಿಕೆ ಹೀಗೇ ಹಲವರನ್ನು ಅತಿಪ್ರಚುರಿತರೇ ಇದ್ದರೂ ಅವರ ಅಪ್ರಚುರಿತ ಮಗ್ಗುಲುಗಳಿಗೆ ಬೆಳಕು ಚೆಲ್ಲುತ್ತ ಒಂಬತ್ತು ವರ್ಷಗಳುದ್ದಕ್ಕೆ ನಡೆದುಬಂದಿತ್ತು. ಇದರಲ್ಲಿ ನನ್ನ ತಂದೆಯ ಆತ್ಮಕಥೆ – ಮುಗಿಯದಪಯಣದ ಬಗ್ಗೆ ಆಪ್ತಪರಿಚಯ ಬಂತು. ಆ ಸುಮಾರಿಗೆ ನನಗೂ ಈ ಪತ್ರಿಕೆ ಬರತೊಡಗಿತು. ಎಂದೋ ನಾನಿದಕ್ಕೆ ಚಂದಾ ಕಟ್ಟಿಲ್ಲವಲ್ಲಾ ಎಂದು ಎಚ್ಚರವಾಗಿ ವಿಚಾರಿಸಿದ್ದೂ ಉಂಟು. ‘ಹಣ ಕಳಿಸುವ ಬಗ್ಗೆ ಯೋಚಿಸಬೇಡಿ, ಪತ್ರಿಕೆಗೊಬ್ಬ ಸಹೃದಯೀ ಓದುಗ ಸಿಕ್ಕಿದನೆಂಬುದೇ ಮುಖ್ಯ’ ಎಂಬ ಅರ್ಥದ ಇ-ಪತ್ರ ಬಂತು. (ಈಚೆಗೆ ನರೇಂದ್ರ ಪೈಗೂ ಈ ಅನುಭವ ಆಗಿದೆ!) ನನ್ನ ತಂದೆ ತೀರಿಹೋದ ಮುನ್ನೆಲೆಯಲ್ಲಿ ಇದೇ ಬ್ಲಾಗಿನಲ್ಲಿ ನಾನು ದೇಹದಾನದ ಕುರಿತೊಂದು ಬರಹ ಪ್ರಕಟಿಸಿದೆ. ಅದಕ್ಕೆ ಪ್ರತಿಕ್ರಿಯಾರೂಪದಲ್ಲಿ ಚಾವಡಿಯ ಸಂಪಾದಕಿ ಹೀಗೆ ಬರೆದರು:

ಛಾವಡಿ ಶುರುವಿನಲ್ಲೆ ನಿಮ್ಮ ತಂದೆಯವರು ಅದರ ಬಗ್ಗೆ ಅಸಕ್ತಿ ತೊರಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರ ಅತ್ಮಕಥೆಯನ್ನು ನಾನು ಓದಿ ಅದರ ಬಗ್ಗೆ ಛಾವಡಿಯಲ್ಲೂ ಬರದಿದ್ದೆ ಕೂಡ. ನೀವು ಮಕ್ಕಳಾಗಿ ಅವರನ್ನು ಕಂಡಿದ್ದೀರಿ. ಇಂಥಾ ಖಾಸಗಿ ಚಿತ್ರಗಳು ಸಾರ್ವಜನಿಕರ ಕಣ್ಣಿಗೆ ಬೀಳದಿರೋ ಅನೇಕ ಸಂಗತಿಗಳನ್ನು ಜನರಿಗೆ ತಿಳಿಸಿಕೊಡುತ್ತದೆ. ನಾನು ಹಿಂದೆ ಮಯೂರಕ್ಕೆ ಪತ್ನಿಯರು ಕಂಡಂತೆ ಪ್ರಸಿದ್ಧರು ಅನ್ನೋ ಕಾಲಂ ಸುಮಾರು ಐದು ವರ್ಷಗಳ ಕಾಲ ಬರೆದೆ. ಮನೆಯವರನ್ನು ಮಾತನಾಡಿಸಿದಾಗ ಅವರ ಮಾತುಗಳಲ್ಲಿ ಸಿಂಸಿಯಾರಿಟಿ ಇರುತ್ತದೆ. ಎಷ್ಟೋ ಸಲ ಲೇಖಕರಂಥವರು ಹೇಳುವುದಕ್ಕಿಂತಲೂ ಪರಿಣಾಮಕಾರಿಯಾಗಿ ಇವರು ಮನಸ್ಸನ್ನು ಮುಟ್ಟುವಂತೆ ನಮ್ಮ ಮುಂದೆ ಪ್ರೀತಿಯಿಂದ ಎಲ್ಲವನ್ನೂ ಬಿಚ್ಚಿಡುತ್ತಾರೆ. ನಿಮ್ಮ ಪತ್ನಿ ಅಥವಾ ನಿಮ್ಮ ತಾಯಿಯವರ ಕೈಲಿ ನಿಮ್ಮ ತಂದೆಯವರ ಬಗ್ಗೆ ಮಾತನಾಡಿದರೆ, ಅವರ ಮತ್ತೊಂದು ಮಗ್ಗುಲೇ – ನಿಮಗೂ ತಿಳಿದಿರದಂಥಾ – ಜಿ.ಟಿ.ಎನ್ ಅನಾವರಣಗೊಳ್ಳಬಹುದು!

ಹೀಗೆ ಹಿನ್ನೆಲೆಯೂ ಮುನ್ನೋಟವೂ ಇದ್ದ ಪತ್ರಿಕೆ ನಿಜದಲ್ಲಿ ಏಕವ್ಯಕ್ತಿ ಪ್ರಯೋಗ! ಆ ವ್ಯಕ್ತಿ – ಬಿ.ಎಸ್. ವೆಂಕಟಲಕ್ಷ್ಮಿ. ಅವರ ಅನ್ಯ ಪರಿಚಯವಿಲ್ಲದೆ ಪತ್ರಿಕೆ ಮತ್ತು ಅಂಚೆಗಳಲ್ಲಷ್ಟೇ ಕಂಡವರು (ನಾನು, ನರೇಂದ್ರ ಪೈ) ಅವರ ಉತ್ಸಾಹ, ವಿನಯಗಳಿಂದ ಪ್ರಭಾವಿತರಾಗಿ ಎಲ್ಲೋ ನಲ್ವತ್ತರ ಆಸುಪಾಸಿನ ಪ್ರಾಯದ ತರುಣಿಯನ್ನು ಕಲ್ಪಿಸಿಕೊಳ್ಳುವುದು ಸಾಧ್ಯವಿತ್ತು. ಆದರೆ ಇಂದಿನ ಪ್ರಜಾವಾಣಿ ತನ್ನ ಅಂಕಣದಲ್ಲಿ ದಾಖಲಿಸಿದಂತೆ ಈಕೆ ಅರುವತ್ಮೂರರ ಹಿರಿಯೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಹದಿನೈದು ವರ್ಷಕಾಲ ವಾರ್ತಾ ಇಲಾಖೆಯಲ್ಲಿ ದುಡಿದು ಸ್ವಂತ ಆಸಕ್ತಿಯ ಬೆನ್ನು ಹಿಡಿದು ಚರ್ಚೆಗೊಂದು ಚಾವಡಿಯನ್ನು ಏಕವ್ಯಕ್ತಿ ಪ್ರಯೋಗವಾಗಿಯೇ ನಡೆಸಿಕೊಂಡು ಬಂದವರು.

ಇದೇ ಜೂನ್ ತಿಂಗಳ ಸಂಚಿಕೆಯ ಕೊನೆಯಲ್ಲಿ ಅವರು ಚಾವಡಿ ವಿತರಣೆಯ ಕುರಿತು ವಿಶೇಷ ಟಿಪ್ಪಣಿ ಸೇರಿಸುತ್ತಾ ಸಂಚಿಕೆಯನ್ನು ತಾರೀಕು ತಪ್ಪಿ ಕಳಿಸುವಂತಾದರೆ ಎದುರಾಗುವ ದುಬಾರಿ ಅಂಚೆವೆಚ್ಚದ ಕುರಿತು ದಿಗಿಲು ಹೇಳಿಕೊಂಡಿದ್ದಾರೆ. ಆದರಿಂತಾ ಆತಂಕಗಳನ್ನು ಮೀರುವಂತೆ, ಚಾವಡಿಯನ್ನು ಬಯಲುಗೊಳಿಸಿ ವೆಂಕಟಲಕ್ಷ್ಮಿಯವರು ನಮ್ಮನ್ನು ಅಗಲಿದ್ದಾರೆ. ಅಲ್ಲೂ ನೇತ್ರದಾನದಿಂದ ತೊಡಗಿ ದೇಹದಾನದಂಥಾ ಆದರ್ಶವನ್ನು ಮೆರೆದಿದ್ದಾರೆ.