ಮಹಾಲಿಂಗ ಭಟ್ಟರ ಅಂಕಣದಿಂದ

Jul 6, 2010 | 5 comments

ಪ್ರಜಾವಾಣಿಯ ಶನಿವಾರದ ಕರಾವಳಿ ಪುರವಣಿಯಲ್ಲಿ ಗೆಳೆಯ ಮಹಾಲಿಂಗ ಭಟ್ಟರು ಕೆಲವು ಸಮಯದಿಂದ ಒಂದು ಅಂಕಣ ನಡೆಸುತ್ತಾ ಇಲ್ಲ! ಬದಲು ಅವರ ಚಿತ್ರ ಮತ್ತು ಹೆಸರು ಹೊತ್ತು ಅವರ ಸಾಹಿತ್ಯ, ಸಂಸ್ಕೃತಿಗಳ ಬಹುಮುಖೀ ಆಸಕ್ತಿಗಳೇ ಸುಮಾರು ಕಾಲುಪುಟದ ಹರವಿನಲ್ಲಿ ಮಾತಾಡುತ್ತವೆ. ವಾಸ್ತವದಲ್ಲಿ ಈ ಅಂಕಣ ಸದಾ ಕರಾವಳಿ ಎಂಬ ಪ್ರಾದೇಶಿಕ ಮಿತಿಯನ್ನು ಮೀರಿ ಕನ್ನಡ ವಲಯದಲ್ಲೇ ಪ್ರಸಾರ ಕಾಣಬೇಕಾದ ಯೋಗ್ಯತೆಯವು ಎಂಬುದು ನನ್ನನ್ನು ಕಾಡುವ ಕೊರಗು. ನಿಮ್ಮದೇ ಒಂದು ಬ್ಲಾಗ್ ತೆರೆಯಿರಿ. ಅದರ ತಾಂತ್ರಿಕ ಕಿರಿಕಿರಿಗಳು ಬೇಡವೆಂದಾದರೆ ಕನಿಷ್ಠ ಅವಧಿ, ಕೆಂಡಸಂಪಿಗೆ, ಸಂಪದಗಳಂತ ಅಂತರ್ಜಾಲ ಪತ್ರಿಕೆಗಳಿಗಾದರೂ ದಾಟಿಸಿ ಪುಣ್ಯ ಕಟ್ಟಿಕೊಳ್ಳಿ ಎಂದದ್ದೂ ಇದೆ. ಇನ್ನೂ ಹೆಚ್ಚಿನ ನನ್ನ ಮಾತಿನ ಹೊರೆಯಲ್ಲಿ ನೀವು ಬಳಲುವ ಬದಲು ಮೊದಲು ಇದೇ ಶನಿವಾರ (೩-೭-೨೦೧೦) ಪ್ರಕಟವಾದ ಲೇಖನದ ಯಥಾ ಪ್ರತಿಯನ್ನು ನಿಮ್ಮ ಓದಿಗೆ ಪ್ರಸ್ತುತಪಡಿಸುತ್ತೇನೆ. ಈ ಪ್ರಕಟಣೆಗೆ ಸಂತೋಷದಿಂದ ಒಪ್ಪಿಗೆ ಕೊಟ್ಟ ಮಹಾಲಿಂಗ ಭಟ್ಟರಿಗೂ ಸಹಕರಿಸಿದ ಪ್ರಜಾವಾಣಿ ಬಳಗಕ್ಕೂ ಕೃತಜ್ಞತೆಗಳು.

ದಾಖಲಾತಿ ವಿಚಾರದಲ್ಲಿ: ೧. ಸುಮಾರು ಇಪ್ಪತ್ತೈದು ವರ್ಷದ ಹಿಂದೆ ಕುಶಿ ಹರಿದಾಸ ಭಟ್ಟರು, ಅವರ ಮತ್ತು ನನ್ನ ತಂದೆಯ ಸಹಪಾಠಿ, ಮಿತ್ರ, ಆಗ ವಿದೇಶದಲ್ಲಿ ಭಾರತದ ರಾಯಭಾರಿಯಾಗಿದ್ದವರು, ಖ್ಯಾತ ಕತೆಗಾರ ಬಾಗಲೋಡಿ ದೇವರಾಯರನ್ನು ನನ್ನಂಗಡಿಗೆ ಕರೆದುಕೊಂಡು ಬಂದಿದ್ದರು. ಕುಶಿಯವರು ಅವರದೇ ವರಸೆಯಲ್ಲಿ ನನ್ನ ಕಾಡುಬೆಟ್ಟ ಸುತ್ತುವ ಹುಚ್ಚನ್ನು ದೇವರಾಯರಿಗೆ ಪರಿಚಯಿಸಿದರು. ಕೂಡಲೇ ದೇವರಾಯರು ಹೇಳಿದ ಮಾತಿನ ಸಾರಾಂಶ – ‘ನಿನ್ನ ಅನುಭವವನ್ನು ಅದೆಷ್ಟೇ ಕಚ್ಚಾವಾದರೂ ಲೇಖನ ಟಿಪ್ಪಣಿಗಳಲ್ಲಿ, ಫೋಟೋಗಳಲ್ಲಿ ದಾಖಲಿಸು. ಅದು ನಿಜವಾದ ದೇಶಸೇವೆ. ವಿದೇಶಿಯರು (ಬ್ರಿಟಿಷರೋ ಮೇಲಿನ ಲೇಖನ ಪ್ರಸ್ತುತಪಡಿಸುವ ಜರ್ಮನ್ ಮಿಶನರಿಗಳೋ) ಯಾವುದೇ ಕಾರಣಕ್ಕೆ ಇದನ್ನು ಮಾಡಿರಲಿ, ಮಾಡಿದ್ದು ನಮಗಿಂದು ಅಪೂರ್ವ ಮತ್ತು ಅನುಪಮ.

ನಾವದನ್ನು ಬೆಳೆಸುವುದಿರಲಿ, ಊರ್ಜಿತದಲ್ಲೂ ಇಡದೆ…’ ಮಹಾಲಿಂಗರು ಎತ್ತಿ ತೋರಿಸಿರುವ ಕೆಟಿಸಿಯ ಸಾಹಸವನ್ನು ವಿಚಾರವಂತರು, ಮುಖ್ಯವಾಗಿ ವಿದ್ಯೆಗೇ ಮೀಸಲೆನಿಸಿಕೊಳ್ಳುವ ವಿವಿನಿಲಯಾದಿ ಶಾಲೆ ಕಾಲೇಜುಗಳು, ಇನ್ನೂ ಮುಖ್ಯವಾಗಿ ದಿನ ಬೆಳಗಾದರೆ ಅಂಕಿಸಂಕಿಗಳ (ಹೆಚ್ಚಿನ ಸಮಯ ಸುಳ್ಳೇ) ಡೊಂಬರಾಟ ತೋರಿಸಿ ಸಂದ ಪ್ರಗತಿಪಥ ಬೆಳಗುವ ಅಥವಾ ಅಭಿವೃದ್ಧಿ ಆಶಯಗಳ ರೇಖೆ ಎಳೆಯುವ ಆಡಳಿತಗಾರರು (ಜನಪ್ರತಿನಿಧಿಗಳೂ ಅಧಿಕಾರಿಗಳೂ) ಗಮನಿಸಲೇಬೇಕು.

೨. ಬೆನೆಟ್ ಅಮ್ಮನ್ನ – ವೃತ್ತಿ ಮತ್ತು ಹವ್ಯಾಸಗಳ ಸಮಪ್ರಮಾಣದ ಮಿಶ್ರಣದಲ್ಲಿ ಮೂಡಿದ ವ್ಯಕ್ತಿ. ಇವರ ಬಗ್ಗೆ ಮಹಾಲಿಂಗರ ಮಾತಿನ ಮುಂದೆ ನಾನು ಹೇಳುವುದೇನೂ ಉಳಿದಿಲ್ಲ.

5 Comments

  1. Laxminarayana Bhat P

    ಪ್ರಿಯ ಅಶೋಕವರ್ಧನರೆ ಮತ್ತು ಮಹಾಲಿಂಗ ಭಟ್ಟರೇ,ಈ ಲೇಖನ ನಿಜಕ್ಕೂ ಇನ್ನಷ್ಟು ಜನರನ್ನು ತಲುಪಬೇಕಾದದ್ದೆ! ಓದಿ ತುಂಬಾ ಖುಷಿ ಆಯಿತು. ನಮಸ್ಕಾರ.

    Reply
  2. ಪೆಜತ್ತಾಯ ಎಸ್. ಎಮ್

    ಅಶೋಕ ವರ್ಧನರೇ! ತಮ್ಮ ಬ್ಲಾಗಿನ ಜಾಡು ಹಿಡಿದು ಸಾಗುತ್ತಿರುವ ಓದುಗರಾದ ನಮಗೆ ಇಂದು ಶ್ರೀ ಅಮ್ಮನ್ನ ಮತ್ತು ಶ್ರೀ ಮಾಲಿಂಗರ ಪರಿಚಯ ಮಾಡಿಕೊಟ್ಟುದಕ್ಕೆ ನಾನು ಆಭಾರಿ. ಇಂತಹಾ ಜನ ಸಾಮಾನ್ಯ ರೂಪಿನ ಸಮಾಜ ವಿಜ್ಞಾನಿಗಳಿಗೆ ಹಾರ್ದಿಕವಾಗಿ ಶುಭಹಾರೈಸುತ್ತಿದ್ದೇನೆ. ಒಳ್ಳೆಯ ಪ್ರಯತ್ನಗಳನ್ನು ಕಂಡಾಗ ನನ್ನಂತಹಾ ಜನ ಸಾಮಾನ್ಯರು ಕೈ ಮುಗಿದು ಶ್ಲಾಘಿಸ ಬೇಕಾದುದು ನಮ್ಮ ಆದ್ಯ ಕರ್ತವ್ಯ ಅಲ್ಲವೇ? ನಮಸ್ಕಾರಗಳು.- ಪೆಜತ್ತಾಯ ಎಸ್. ಎಮ್.

    Reply
  3. benet g amanna

    thank you sir

    Reply
  4. my pen from shrishaila

    ಆಶೋಕಭಾವ,ನಿನ್ನ ಅನುಭವವನ್ನು ಅದೆಷ್ಟೇ ಕಚ್ಚಾವಾದರೂ ಲೇಖನ ಟಿಪ್ಪಣಿಗಳಲ್ಲಿ, ಫೋಟೋಗಳಲ್ಲಿ ದಾಖಲಿಸು. ಅದು ನಿಜವಾದ ದೇಶಸೇವೆ. ವಿದೇಶಿಯರು (ಬ್ರಿಟಿಷರೋ ಮೇಲಿನ ಲೇಖನ ಪ್ರಸ್ತುತಪಡಿಸುವ ಜರ್ಮನ್ ಮಿಶನರಿಗಳೋ) ಯಾವುದೇ ಕಾರಣಕ್ಕೆ ಇದನ್ನು ಮಾಡಿರಲಿ, ಮಾಡಿದ್ದು ನಮಗಿಂದು ಅಪೂರ್ವ ಮತ್ತು ಅನುಪಮ.ನಾನೆಂದೂ ಈ ದಿಕ್ಕಿನಲ್ಲಿ ಯೋಚಿಸಿಲ್ಲ. ಇದು ನಿಜವಾಗಿಯೂ ಒಳ್ಳೆ ಸಲಹೆ ಮತ್ತು ಉಪಯೋಗಕರ.ನಾನಿದನ್ನು ಖಂಡಿತವಾಗಿಯೂ ಪ್ರಾರಂಭಿಸುತ್ತೇನೆ.ಏನಿಲ್ಲವೆಂದರೂ ನನ್ನ ಸ್ವಂತಕ್ಕಾದರೂ ಉಪಯೋಗವಾದೀತು.ಶೈಲ

    Reply
  5. Gladson Jathanna

    ಧನ್ಯವಾದಗಳು ಪ್ರೀತಿಯ ಅಶೋಕವರ್ಧನರಿಗೆ ಈ ವಿಶಿಷ್ಟ ಮತ್ತು ಬಹು ಬೆಲೆಬಾಳುವ ಲೇಖನವನ್ನು ಪರಿಚಯಿಸಿದ್ದಕ್ಕೆ.ಮಾನ್ಯ ಮಹಾಲಿಂಗ ಭಟ್ಟರಿಗೆ ವಂದನೆಗಳು ಈ ಲೇಖನದ ಸಾಕಾರಕ್ಕೆ. ನಿಜ, KTC ಪತ್ರಾಗಾರ ಒಂದು ಅದ್ವಿತೀಯ ಸ್ಥಳ ಸಂಶೋಧನಾ ಚಟುವಟಿಕೆಗೆ. ಜಾಗತಿಕ ಮಟ್ಟದ ಸಾಂಸ್ಕೃತಿಕ ಕೊಡು-ತೆಗೆದುಕೊಳ್ಳುವಿಕೆಗಳ ಚಾರಿತ್ರಿಕ ಅಧ್ಯಯನಕ್ಕೆ ಹೇಳಿ ಮಾಡಿಸಿದ ಜಾಗ. ಇಂತಹ ಒಂದು ವಿಶಿಷ್ಟ ಸ್ಥಳವನ್ನು ಕನ್ನಡದ ಜನತೆಗೆ ಪರಿಚಯಿಸಿ ಕೊಟ್ಟಿದುದಕ್ಕೆ ತಮಗೆ ಆಭಾರಿ.ಬೆನೆಟ್ ಅಮ್ಮನ್ನರ ಕುರಿತ ಭಟ್ಟರ ಮಾತು ಅಕ್ಷರಶಃ ದಿಟ. ಈ ಪುಣ್ಯಾತ್ಮನಿಗೆ ಬರೇ ಪುಸ್ತಕಗಳ ಮೇಲಷ್ಟೇ ಪ್ರೀತಿಯಲ್ಲ. ಪುಸ್ತಕವನ್ನು ಪ್ರೀತಿಸುವವರ ಮೇಲೂ ಎಲ್ಲಿಲ್ಲದ ಗೌರವ ಮತ್ತು ಅಕ್ಕರೆ. ಭಟ್ಟರೇ ಹೇಳಿದಂತೆ ಈ ಆರ್ಕೈವ್ ನ ಯಶಸ್ಸಿನ ಹಿಂದೆ ಬೆನೆಟ್ ರ ಪಾತ್ರ ಅತ್ಯಂತ ಹಿರಿದು.ಬರೆಯುತ್ತಿರಿ ಭಟ್ಟರೇ…

    Reply

Submit a Comment

Your email address will not be published. Required fields are marked *