(ಜಮ್ಮು ಕಾಶ್ಮೀರ ಪ್ರವಾಸ ಕಥನ ೭)
“ಇದು ಯಾವುದು ಬೇಡ. ಮೊದಲು ಊಟ, ಅನಂತರ ನಮ್ಮ ಹೋಟೆಲಿಗೆ ಹೋಗಿ ಸೆಟಲ್ ಆಗುವ. ಅಲ್ಲಿ ಹೋಟೆಲಿನವರ ಪರಿಚಯದ ಜೀಪುಗಳನ್ನು ಹಿಡಿಯುವ” ಎಂದು ಒಮ್ಮೆಲೆ ಗಿರೀಶ್ ಘೋಷಿಸಿದರು. ಗಿರೀಶ್ ವರಸೆ ಯಾಕೆ ಬದಲಿಸಿದರೋ ತಿಳಿಯಲಿಲ್ಲ! ಇದ್ದಕ್ಕಿದ್ದಂತೆ ಅವರಿಗೆ ಆಗಲೇ ತಡವಾಗಿದ್ದ ನಮ್ಮ ಊಟದ ನೆನಪಾದಂತಿತ್ತು.
ಪೆಹೆಲ್ಗಾಂಗೆ ಬಂದಾಗ, ನಮ್ಮನ್ನು ಸ್ಥಳೀಯ ದಲ್ಲಾಳಿಗಳ ಕೈಗೊಪ್ಪಿಸುವಾಗಲೇ ಊಟದ ಹೊತ್ತಾಗಿತ್ತು. ಟ್ಯಾಕ್ಸೀ ಸ್ಟ್ಯಾಂಡಿನ ದಳ್ಳಾಳಿಗಳೊಡನೆ ಕಂಠಶೋಷಣೆ ಮಾಡಿಕೊಳ್ಳುವಾಗ `ಭಟ್ ಅಂಡ್ ಧನಂಜಯ್ ಕಂಪೆನಿ’ಯಾದರೂ ಊಟವನ್ನು ಮರೆತಿರಲಿಲ್ಲ. ಅವರು ಸ್ಟ್ಯಾಂಡಿನಿಂದ ಹೊರಗೆ ಇನ್ಯಾವ್ಯಾವುದೋ ಪ್ರವಾಸಿತಂಡಗಳಲ್ಲಿ ವಿಚಾರಿಸಿ, ಕಡಿಮೆ ದರಕ್ಕೆ ಜೀಪು ನಿಷ್ಕರ್ಷಿಸಿದಾಗಲೂ “ಊಟ ಮಾಡಿ ಹೋಗುವುದು” ಎಂದೇ ಒಪ್ಪಿಸಿದ್ದರು. ಅದನ್ನೆಲ್ಲ ಒಮ್ಮೆಲೆ ತಳ್ಳಿ ಹಾಕಿ ಗಿರೀಶ್ ತನ್ನ ಮಾತು ಹೇರಿದ್ದರು! ಚುನಾವಣೆ ತನ್ನ ಅನುಕೂಲಕ್ಕೆ ಒದಗಲಿಲ್ಲವೆಂದು ರಾಷ್ಟ್ರವನ್ನು ತುರ್ತು ಪರಿಸ್ಥಿತಿಗೆ ತಳ್ಳಿದವರ ನೆನಪು ಬಂತು. ಎಲ್ಲರು ಕೇವಲ ಮುಖದಾಕ್ಷಿಣ್ಯಕ್ಕೆ ಗಿರೀಶರ `ಸೆಟಲ್ಮೆಂಟ್’ ಒಪ್ಪಿಕೊಂಡೆವು; ಊಟ ಮಾಡಿ, ವ್ಯಾನೇರಿ ಪೂರ್ವ ನಿಗದಿತ ಹೋಟೆಲಿಗೆ ಹೋದೆವು.
ಟೂರಿಸ್ಟ್ ಪ್ಯಾಲೇಸ್ – ಚಂದನವಾಡಿ ದಾರಿಯಲ್ಲೇ (ಸುಮಾರು ಮೂರು ಕಿಮೀ ಅಂತರ) ಸಿಗುವ ಒಂದು ಸಾಮಾನ್ಯ ಹೋಟೆಲ್. ನಮ್ಮದು ಲೆಕ್ಕಕ್ಕೆ ಇಬ್ಬರ-ಕೋಣೆಯಾದರೂ ಮಂಚ, ಕುರ್ಚಿ, ಪುಟ್ಟ ಮೇಜು ತುಂಬಿ, ವಾಸಿಗಳಿಗೆ ಕಾಲಾಡಿಸಲು ಜಾಗವಿಲ್ಲದ ಕಿಷ್ಕಿಂಧೆ. ಆದರೆ ಹಿತ್ತಿಲಿಗೆ ತೆರೆದಂತೆ ಒಂದು ಬಾಲ್ಕನಿಯ ಸೌಕರ್ಯವಿತ್ತು. ಒಂದು ರಾತ್ರಿಯ ನಿದ್ರೆಗಷ್ಟೇ ಬೇಕಾದ ಕೋಣೆ ಎಂದ ಮೇಲೆ ಓಡಾಡುವ ಜಾಗ ಯಾಕೆ? ಹೊರಗೆ ಅಸಾಧ್ಯ ಚಳಿ ಇರುವಾಗ ಬಾಲ್ಕನಿಯ ವೈಭವ ಬೇಕೇ? ನಾವೇ ಸಮಾಧಾನಿಸಿಕೊಂಡೆವು. ಬಚ್ಚಲೊಳಗೆ ಮಾಮೂಲೀ ವ್ಯವಸ್ಥೆಯಲ್ಲದೆ ಆಶ್ಚರ್ಯಕರವಾಗಿ ಬಾಗಿಲಿನಲ್ಲೇ ಒಂದು ಜತೆ ಹವಾಯ್ ಚಪ್ಪಲಿಯಿಟ್ಟಿದ್ದರು. ಇದು ಯಾಕೋ ಅಂದುಕೊಳ್ಳುತ್ತಾ ದೇವಕಿ ಸಾದಾ ನಲ್ಲಿ ತಿರುಗಿಸುವಾಗ ಸಣ್ಣ ವಿದ್ಯುದಾಘಾತ ಸಿಕ್ಕಿತು! ಕೂಡಲೇ ದೂರು ಗಂಟೆ ಜಗ್ಗಿದೆವು. ಯಾರೋ ಹುಡುಗ ಬಂದ. `ಶಾಕಿಂಗ್ ನ್ಯೂಸ್’ ಕೊಟ್ಟೆವು. “ಏ ಹಾಗೇನೂ ಇಲ್ಲ” ಎನ್ನುತ್ತ ಅವನು ಕೈ ಹಾಕಿ ಒಂದು `ಒತ್ತ’ ತಿಂದ.
ಆ ಮೇಲೆ, ಭಾರೀ ಜಾಣನಂತೆ ರಬ್ಬರ್ ಚಪ್ಪಲಿ ಯಾಕಿಟ್ಟದ್ದು ಎಂದು ನಮಗೆ ವಿವರಿಸಿದ! ಗೀಸರ್ ಸ್ವಿಚ್ ಹಾಕಿದರೆ ಇನ್ನು ಹೇಗೋ ಎಂಬ ಭಯ ಅವನಿಗೂ ಇದ್ದಿರಬೇಕು. ಎಲ್ಲ ರಿಪೇರಿ ಮಾಡಿಸುವುದಾಗಿ, ಬಿಸಿ ನೀರು ಪ್ರತ್ಯೇಕ ಕೊಡುವುದಾಗಿ ಹೇಳುತ್ತ ಜಾರಿದ. ರಾತ್ರಿ ಊಟ ಮಾಡಿ ನಾವು ಮಲಗುವವರೆಗೂ ನಮ್ಮ ಬಿಸಿನೀರ ಬೇಡಿಕೆಗೆ ಹೋಟೆಲಿಗರ ಮಧುರಪಲ್ಲವಿ ಒಂದೇ “ಆಯೆಗಾ ಆಯೆಗಾ, ಗರಂ ಪಾನೀ ಆಯೆಗಾ!” ಅಲ್ಲಿ ನಿಂತ ಸಣ್ಣ ಅವಧಿ ಮತ್ತು ಅಲ್ಲಿನ ಚಳಿ ನಮ್ಮ ಸ್ನಾನದ ಆಸೆಯಿರಲಿ, ನೀರಿನ ಬಳಕೆಯನ್ನೇ ಕಡಿಮೆ ಮಾಡಿತ್ತು. ಮೊದಲೇ ಇದರ ಅರಿವಾಗದೆ ಗೀಸರನ್ನೇ ಚಾಲೂ ಮಾಡಿ, ಸ್ನಾನಕ್ಕೇನಾದರೂ ಇಳಿದಿದ್ದರೆ ಆಘಾತಕ್ಕೆ ನಾವು `ಬ್ರೇಕಿಂಗ್ ನ್ಯೂಸ್’ಗೆ ಸುದ್ಧಿಯಾಗುತ್ತಿದ್ದೆವೋ ಆರ್ಕಿಮಿಡೀಸನಂತೆ ಬಚ್ಚಲಿನ ಬಾಗಿಲು ಹಾರುಹೊಡೆದು, ಹುಟ್ಟುಡುಗೆಯಲ್ಲಿ ಬೊಬ್ಬೆ ಹಾಕಿ ಓಡುತ್ತಿದ್ದೆವೋ ಹೇಳುವುದು ಕಷ್ಟ!
ಹೋಟೆಲಿನಲ್ಲಿ ಹೆಚ್ಚು ವೇಳೆಗಳೆಯದೆ, ಅವರು ಮಾಡಿಕೊಟ್ಟ ಎರಡು ಜೀಪೇರಿ ಪೆಹೆಲ್ಗಾಂ ವೀಕ್ಷಣೆಗೆ ಹೊರಟೆವು. ಕಾಶ್ಮೀರದ ಮಾನಕದಲ್ಲಿ ಹೇಳುವುದಿದ್ದರೆ ಅದು `ಮೂರು ಪಾಯಿಂಟ್’ ಯಾತ್ರೆ. `ಆರೋ-ಅರು’ ಕಣಿವೆ ಅಥವಾ `ಅರು ವೈಲ್ಡ್ ಲೈಫ್ ಸ್ಯಾಂಕ್ಚುರಿ’ – ಪಾಯಿಂಟ್ ನಂಬರ್ ಒನ್. ಪೆಹೆಲ್ಗಾಂಗೇ ಮರಳಿ ಬೇರೊಂದು ದಾರಿ ಹಿಡಿದರೆ ಸುಮಾರು ಆರು ಕಿಮೀ ಅಂತರದಲ್ಲಿ ಸಿಗುವ ಈ ಕಣಿವೆಯಲ್ಲಿ ವಿಶಿಷ್ಟವಾದ್ದೇನೂ ಕಾಣಿಸಲಿಲ್ಲ. ಹಸಿರು ಹುಲ್ಲಿನ ವಿಸ್ತಾರ ಬಾಣೆಯ ಮೂಲೆಯಲ್ಲಿ ಹಳೆಗಾಲದ ಒಂದು ಪ್ರವಾಸಿ ಬಂಗ್ಲೆ. ಹಿನ್ನೆಲೆಯ ಭಾರೀ ಪರ್ವತಗಳಲ್ಲಿ ದೂರದವು ಸಹಜವಾಗಿ ಬೆಳ್ಳಿ ಕಲಶಗಳನ್ನು (ಹಿಮದ ಟೊಪ್ಪಿ) ಹೊತ್ತಿದ್ದವು.
ಈ ವಠಾರ ಹಲವು ಹಿಂದೀ ಸಿನಿಮಾಗಳಲ್ಲಿ ಜನಪ್ರಿಯ ದೃಶ್ಯವಾಗಿ ಮೆರೆದಿದೆಯಂತೆ. ಆದರೆ ವಾಸ್ತವದಲ್ಲಿ ಕ್ಯಾಮರಾದ ಸುಂದರ ಚೌಕಟ್ಟು ತಪ್ಪಿಸಿದ ಅವ್ಯವಸ್ಥೆಗಳು ನಮ್ಮನ್ನು ಅಣಕಿಸುತ್ತಿದ್ದವು. ಬಾಣೆಯ ಇನ್ನೊಂದು ಮಗ್ಗುಲಿಗೆ ತುಸು ಆಳದ ಕಣಿವೆಯಲ್ಲಿ ಹೊಳೆ, ಮತ್ತಾಚೆ ಪೈನ್ ಮರಗಳ ಕಾಡು. ಐದು ಹತ್ತು ಮಿನಿಟಿನಲ್ಲಿ ಎಲ್ಲಕ್ಕು ಒಂದು ಸುತ್ತು ಹಾಕಿ, ಪಾಯಿಂಟ್ ನಂಬರ್ ಟೂಗೆ ಸಜ್ಜಾಗಿದ್ದೆವು.
ಪೆಹೆಲ್ಗಾಂಗೆ ಮರಳಿ, ನಮ್ಮ ಹೋಟೆಲ್ ದಾರಿಯಲ್ಲೇ ಸುಮಾರು ಹದಿನಾರು ಕಿಮೀ ದೂರದ ಚಂದನವಾಡಿಗೇ ಹೋದೆವು. ಇದು ಅಮರನಾಥ ಯಾತ್ರೆಗೆ ಹೊಸ್ತಿಲು. ಅಲ್ಲಿನ ಪುಟ್ಟ ಪೇಟೆಗೂ ಮೊದಲೇ ಸಿಗುವ ಸಣ್ಣಪುಟ್ಟ ತಟ್ಟುಗಳಲ್ಲಿ ಅಮರನಾಥ ಯಾತ್ರಿಗಳ ಕನಿಷ್ಠ ಆವಶ್ಯಕತೆಗಳಿಗೆ ಬೇಕಾದ ತತ್ಕಾಲೀನ ರಚನೆಗಳು ಕಾಣಸಿಕ್ಕವು. “ತಿಂಗಳು ಕಳೆದು ಬಂದರೆ ಇಲ್ಲಿನ ಜೀವಕಳೆಯೇ ಬೇರೆ” ಎನ್ನುವಾಗಿನ ನಮ್ಮ ಜೀಪ್ ಚಾಲಕನ ಉತ್ಸಾಹ, ನಮ್ಮಲ್ಲೇನೂ ಪ್ರೀತಿ ಹುಟ್ಟಿಸಲಿಲ್ಲ. ಅವರಿಗೋ ಊರ ಏಕಮಾತ್ರ ಜಾತ್ರೆ, ವರ್ಷದಲ್ಲಿ ಒಂದೇ ಹೆಚ್ಚಿನಾದಾಯದ ಶ್ರಾಯ. ಚಂದನವಾಡಿಯ ಪುಟ್ಟ ಪೇಟೆಯಂಚಿನ ಕಾಡು, ಮತ್ತಿನ ಬೆಟ್ಟದ ನೆಲವೆಲ್ಲ ಹಿಮದ ಹೊದಿಕೆಯಲ್ಲೇ ಇದ್ದವು.
ಪೆಹೆಲ್ಗಾಂ ಅಮರನಾಥ ನೆಪವಲ್ಲದಿದ್ದರೆ ಜನಪ್ರಿಯ ಪ್ರವಾಸೀ ಕೇಂದ್ರಗಳಿಗೆ ತುಸು ದೂರದ ಸ್ಥಳ. ಹಾಗಾಗಿ ಇಲ್ಲಿ ಇತರ `ಅಭಿವೃದ್ಧಿ’ಯ ಹಾವಳಿಯೂ ಕಡಿಮೆಯೇ ಇತ್ತು. ಗುಲ್ಮಾರ್ಗ್ ಅನುಭವದನಂತರ ನಾವು ಅಲ್ಲಿನ `ಜನಪ್ರಿಯ’ ಪ್ರವಾಸಿ ತಾಣಗಳೆಂದರೇ ಕೀಳಂದಾಜು ಮಾಡುವ ಹಾಗಾಗಿತ್ತು. ಅದಕ್ಕೆ ಸರಿಯಾಗಿ ಸೋನ್ಮಾರ್ಗಿನ ಎರಡೂ ಹಿಮಸಂಪರ್ಕದ ತಾಣಗಳಲ್ಲಿ ಗಂಬೂಟು, ಭಾರೀ ಬಿಸಿಯುಡುಪುಗಳ ಆವಶ್ಯಕತೆ ನಮಗೆ ಕಾಣಲೂ ಇಲ್ಲ. ಇಲ್ಲಿಯೂ ಇತರರಿಗೆ ವಿಶೇಷ ಚಳಿಬಾಧೆ ಕಾಡಲಿಲ್ಲ. ನನ್ನನ್ನು ಮಾತ್ರ ಚಳಿ ಸ್ವಲ್ಪ ಕಾಡಿತ್ತು. ಬರಿಯ ಸ್ವೆಟ್ಟರ್, ಮಂಗನತೊಪ್ಪಿ ಧರಿಸಿ `ಮಂಗ’ನಂತಾಗಿ ಮೊದಲಲ್ಲಿ ನಾನು ಹಿಮದಿಂದ ದೂರವೇ ಉಳಿದುಬಿಟ್ಟೆ. ಇತರರು ಮುಂದುವರಿದ ಮೇಲೆ, ಡಾಮರು ದಾರಿಯಲ್ಲೇ ಶತಪಥ ಹಾಕಿ, ಡಾಬಾದಲ್ಲಿ ಬಿಸಿ ಡಬ್ಬಲ್ ಚಾ ಹೀರಿ ಒಳಗಿನ ಕಿಚ್ಚು ಕೆರಳಿಸಿದೆ! (ದೇವಕಿ ಮೇಲಿನ ಹೊಟ್ಟೆಕಿಚ್ಚು ಎನ್ನುವುದು ನಂಬಲನರ್ಹ ಮತ್ತು ಅಪಪ್ರಚಾರ ಎಂದು ತಳ್ಳಿಹಾಕುತ್ತೇನೆ!) ಇನ್ನು ಅಡ್ಡಿಯಿಲ್ಲ ಎಂದುಕೊಂಡು ಹಿಮ ಸಮೀಪಿಸುವಾಗ ಉಳಿದವರು “ಎಂಥ ವಿಶೇಷ ಇಲ್ಲ” ಅಂದುಕೊಂಡು ವಾಪಾಸು ಹೊರಟಿದ್ದರು. ಬೇಜಾರವೇನೂ ಇಲ್ಲದೆ ನಾನೂ ಸೇರಿಕೊಂಡೆ.
ಕೊನೆಯ ಪಾಯಿಂಟ್ – ಬೇತಾಬ್ ಕಣಿವೆ. ಕೈಗಡಿಯಾರ (ಸಂಜೆ) “ಏಳು” ಎಂದರೂ ನಮ್ಮ ಧೈರ್ಯಕ್ಕೆ ದಿನದ ಪ್ರಕಾಶ ಇನ್ನೂ ಗಟ್ಟಿಯಾಗಿಯೇ ಕುಳಿತಿತ್ತು! ಚಂದನವಾಡಿಯಲ್ಲಿ ನಮ್ಮ ಜೀಪು ರಿವರ್ಸ್ ಮಾಡುವಾಗ “ರೈ, ರೈ…” ಹೇಳುತ್ತಿದ್ದ ಇಬ್ಬರು, ಜೀಪು ಮುಂದಕ್ಕೆ ಹೊರಟಾಗ ದಡಬಡ ಹಿಂದಿನ ಏಣಿಯೇರಿ ತಗಡು ಮಾಡಿನಲ್ಲಿ ಕುಳಿತರು.
ನಾವು ತುಸು ಆತಂಕದಲ್ಲೇ ಇದನ್ನು ಚಾಲಕ – ಜುಲ್ಫೀ, ಗಮನಕ್ಕೆ ತಂದಾಗ, ಆತ ನಕ್ಕು ಬಿಟ್ಟ. “ಅವರು ನನ್ನ ಖಾಸಾ ಗೆಳೆಯರು…” ಎಂದು ತೊಡಗಿದ ಸಂವಾದ ನಮಗೆ ಅಲ್ಲಿನ ಬದುಕಿನ ಸಣ್ಣ ದರ್ಶನವನ್ನೇ ಕೊಟ್ಟಿತು. ಪೆಹೆಲ್ಗಾಂ ಚಂದನವಾಡಿಯ ನಡುವೆ ಸಿಗುವ ಹಜನ್ (ಅಥವಾ ಫ್ರಸ್ಲನ್) ಜುಲ್ಫಿಯ ಹಳ್ಳಿ. ತೀವ್ರ ಚಳಿಗಾಲದಲ್ಲಿ ಚಂದನವಾಡಿಯೂ ನಿರ್ಜನವಾದಾಗ ಹಜನ್ ಆ ದಾರಿಯ ಕೊನೆಯ ಸಾರ್ವಕಾಲಿಕ ಜನವಸತಿಯ ಸ್ಥಳವಾಗುಳಿಯುತ್ತದಂತೆ. ಜೀಪಿನ ಮೇಲೆ ಹತ್ತಿದವರು ಕೆಲಸದ ಮೇಲೆ ಚಂದನವಾಡಿಗೆ ಬಂದಿದ್ದವರು ವಾಪಾಸು ಊರಿಗೆ `ಬಿಟ್ಟಿ ಸವಾರಿ’ ಪಡೆಯುತ್ತಿದ್ದರು. ಬಶೀರ್, ಜೋಜಿಯಾ (ಇಬ್ಬರೂ ಶಬೀರ್ ಟೂರ್ಸಿನ ನಮ್ಮ ಚಾಲಕರು) ಮತ್ತೂ ಈ ಜುಲ್ಫೀ ಸೇರಿದಂತೆ ಆ ಘಟ್ಟ ನಾಡಿನ ಎಲ್ಲ ವಾಹನ ಚಾಲಕರು ಬಹು ವೇಗಪ್ರಿಯರು ಮತ್ತು ನಿಯಂತ್ರಣದಲ್ಲಿ ಅಷ್ಟೇ ಸಮರ್ಥರು. ಜುಲ್ಫೀ ನಮ್ಮ ಹೆದರಿಕೆಗೆ ಮನ್ನಣೆ ಕೊಟ್ಟು ಕಡಿಮೆ ವೇಗದಲ್ಲಿದ್ದರೂ ವೇಗಸೂಚಕ ಮುಳ್ಳು ಎಪ್ಪತ್ತರಿಂದ ಕೆಳಗಿಳಿಯುತ್ತಿರಲಿಲ್ಲ. ಸಾಲದ್ದಕ್ಕೆ ಚಳಿ ಬೇರೆ. ಮೇಲೆ ಕುಳಿತವರು ಕೊರಡುಗಟ್ಟಿ, ಜೀಪಿನ ಜಂಪಿಗೋ ದಾರಿಯ ಕೊಂಕಿಗೋ ಅನೂಹ್ಯ ಆಳಕ್ಕೆ ಉಡಾವಣೆಗೊಂಡರೆ ಎಂದೇ ನಾವು ಆತಂಕ ವ್ಯಕ್ತಪಡಿಸಿದೆವು. ಮತ್ತು ಅವರನ್ನು ಒಳಗೆ ಸೇರಿಸಿಕೊಳ್ಳಲು ಒತ್ತಾಯಿಸಿದೆವು. ಜುಲ್ಫೀ “ಇದೆಲ್ಲಾ ಮಾಮೂಲು” ಎಂದು ಜೋರಾಗಿ ನಕ್ಕು ಬಿಟ್ಟ! ಇಳಿಯುವ ಸ್ಥಳ ಬಂದಾಗ ಅವರು ಮಾಡು ಬಡಿದರು. ಜೀಪು ನಿಧಾನಿಸಿದೊಡನೇ ಬೆಟ್ಟದಾಡುಗಳ ಹಾಗೆ ಜಿಗಿದೋಡಿದರು.
ಹಜನ್ನಿನಲ್ಲಿ ಸಣ್ಣದಾಗಿ ಕೃಷಿಯೂ ಇದ್ದ ಜುಲ್ಫೀಯ ಕುಟುಂಬದಲ್ಲಿ ಅಪ್ಪ, ಅಣ್ಣರೂ ಪ್ರವಾಸೀ ಶ್ರಾಯದಲ್ಲಿ ಸ್ವಂತ ಜೀಪುಗಳನ್ನು ಬಾಡಿಗೆಗೆ ಓಡಿಸುವವರೇ. ಒಂದು ಪಕ್ಕದಲ್ಲಿ ಹತ್ತಲು ಹೋದರೆ ಊಹಿಸಲಾಗದೆತ್ತರಕ್ಕೆ ಕಡಿದಾದ ಬೆಟ್ಟ, ಇನ್ನೊಂದು ಪಕ್ಕದಲ್ಲಿ ಮಗುಚಿದರೆ ಎಲುಬಿನ ಪುಡಿಯಷ್ಟೇ ಹೆಕ್ಕಬೇಕಾಗುವ ಕಮರಿ. ಇವುಗಳೆಡೆಯಲ್ಲಿ ಹಾವಾಡುವ ದಾರಿ ಪ್ರತಿ ತಿರುವಿನಲ್ಲು ಕೊಳ್ಳ ಹಾರಿಕೊಂಡಂತೇ ಕಾಣುತ್ತದೆ. ಇಲ್ಲೇ ಹುಟ್ಟಿ, ಸುಮಾರು ಇಪ್ಪತ್ತೈದು ಶಿಶಿರಗಳುದ್ದಕ್ಕೆ ಜೀವಿಸಿ, ಜೀಪನ್ನು ಬಾಳಿನ ಭಾಗವಾಗಿಸಿಕೊಂಡವನಿಗೆ ನಮ್ಮ ಕಾಳಜಿಗಳು ನಗೆ ತರಿಸುವುದು ಸಹಜವೇ.
ಈತ ಕಷ್ಟದಲ್ಲೇ ಹನ್ನೆರಡನೇ ತರಗತಿಯ ಪರೀಕ್ಷೆವರೆಗೆ ಕಲಿತಿದ್ದನಂತೆ. ಅಲ್ಲಿ ಶೇಕಡಾ ಇಪ್ಪತ್ತರ ಅಂಕಗಳು ಬಂದು ಡುಮ್ಕಿ ಹೊಡೆದನಂತೆ. ಅವರಿವರ ಒತ್ತಾಯಕ್ಕೆ, ಹೆಚ್ಚು ಸಿದ್ಧತೆಯೊಡನೆ ಮರಳಿಯತ್ನವ ನಡೆಸಿದನಂತೆ. ಅಂಕಗಳು ಶೇಕಡಾ ಹದಿನೈದಕ್ಕೆ ಕುಸಿದದ್ದು ಕಂಡ ಮೇಲೆ ಈತ ಮತ್ತೆ ಅತ್ತ ತಲೆ ಹಾಕಲಿಲ್ಲ! ಆಗಸ್ಟಿನಲ್ಲೇ ಒಂದು ದಿನ ಇವರ ಒತ್ತಿನ ಹಳ್ಳಿಯ ಹುಡುಗಿ ಇವನಿಗೆ ವಧುವಾಗಿ ಬರುತ್ತಿದ್ದಾಳೆಂದು ತಿಳಿಯಿತು. ಹುಡುಗಿಗೆ ಗೃಹಿಣಿತ್ವ ಮತ್ತು ಕೃಷಿ ಸಹಕಾರಗಳಿಂದಾಚೆಗೊಂದು ವ್ಯಕ್ತಿತ್ವ ಇರಬಹುದೆಂಬ ಅರಿವೇ ಜುಲ್ಫಿಗೆ ಇದ್ದಂತಿರಲಿಲ್ಲ. ಆದರೆ ಮೂರು ಗಳಿಗೆ ಸವಾರಿಗಷ್ಟೇ ಹಕ್ಕುದಾರರಾದ ನಾವು ಕೊನೆಯಲ್ಲಿ, ಉಪದೇಶಾಮೃತ ಹರಿಸದೆ, ಜೀಪ್ ಬಾಡಿಗೆಯೊಡನೆ ಬಾಯ್ತುಂಬ ಶುಭಾಶಯವನ್ನಷ್ಟೇ ಕೊಟ್ಟಿದ್ದೆವು.
ಹಜನ್ನಿನಿಂದ ತುಸು ಮುಂದೆ, ಎಡ ನೇರ ಕೊಳ್ಳದಾಳದ ಬೇತಾಬ್ ವ್ಯಾಲೀ – ಇನ್ನೊಂದು ಸರಕಾರೀ ಪ್ರವಾಸೋದ್ಯಮ ಸರ್ಕಸ್. ಹೊಳೆ ಪಾತ್ರೆಯ ಮೈದಾನಕ್ಕೆ ಭರ್ಜರಿ ಪಾಗಾರ ಕಟ್ಟಿ, ಹುಚ್ಚುಚ್ಚು ಬೋರ್ಡು ಹಚ್ಚಿ, ಟಿಕೆಟ್ ವ್ಯವಸ್ಥೆ ಮಾಡಿದ್ದರು. ಒಳಗೆ ಕಬ್ಬಿಣದ ಬೇಲಿ, ಹಾಳುಬೀಳಲು ನಾಲ್ಕೆಂಟು ಕಟ್ಟಡ, ಹೊಳೆ ದಾಟಲು ಅಂಕಾಡೊಂಕಿ ಸೇತುವೆ, ಗುರಿಯಿಲ್ಲದೆ ಸುತ್ತಾಡಿಸುವ ಇಂಟರ್ಲಾಕ್ ಪುಟ್ಟಪಥ, ಅಲಂಕಾರದ ದಾರಿದೀಪ, ಉಳಿದಂತೆ ವಿರಳ ಸಣ್ಣ ಮರಗಳ ನಡುವೆ ಹುಲ್ಲ ಹಾಸು. ಮುಳಿಹುಲ್ಲು, ಮುರದ ಚರಳು ಮರೆಸಿ ಇಟ್ಟ ಕದ್ರಿ ಉದ್ಯಾನವನದ ಪುಟ್ಟಪಥದ್ದೇ ನೆನಪಾಯ್ತು. ಅಲ್ಲೂ ಇಲ್ಲೂ ರಜಾವಧಿಗಳಲ್ಲಿ ಪ್ರದಕ್ಷಿಣೆ ಹಾಕುವುದರಿಂದಲೇ ಆರೋಗ್ಯಪುಣ್ಯ ಹೆಚ್ಚಿಸಿಕೊಳ್ಳುವವರ ಭಕ್ತಿಯಲ್ಲೇ (ಪ್ರವೇಶ ಹಾಸಲು ಕೊಟ್ಟ ತಪ್ಪಿಗೆ ಪ್ರಾಯಶ್ಚಿತ್ತವಾಗಿಯೂ) ನಾವೂ ಒಂದು ಸುತ್ತು ಹಾಕಿ ಮರಳಿದೆವು. ಇಲ್ಲಿ ಮಂಜಿನ ದರ್ಶನವಿಲ್ಲದಿದ್ದರೂ ನೇರ ಮಂಜು ಕರಗಿದ ನೀರೇ ಸುತ್ತುವರಿದು ಹರಿಯುತ್ತಿದ್ದುದರಿಂದ ಚಳಿ ಜೋರಾಗಿಯೇ ಇತ್ತು. ಆದರೆ ನಾನು ಚಂದನವಾಡಿಪೇಟೆಯ ಶತಪಥದಲ್ಲಿ ಗಳಿಸಿದ್ದ
ತುಸು ಬಿಸಿಯನ್ನು ಇಲ್ಲಿ ಉತ್ತಮಪಡಿಸಿಕೊಂಡು ಗೆದ್ದೆ. ಮತ್ತೆ ಜೀಪೇರಿ, ಇದೇ ಹೊಳೆಯ ತುಸು ಕೆಳದಂಡೆಯಲ್ಲಿರುವ ನಮ್ಮ ಹೋಟೆಲಿಗೆ ಮರಳುವುದರೊಡನೆ ಪೆಹೆಲ್ಗಾಂನ ನಮ್ಮ ಆಖ್ರೀ ಪಾಯಿಂಟ್ ಕೂಡಾ ಮುಗಿಸಿದ್ದೆವು. ಗಿರೀಶ್ ಹೇಳಿದ ಜೀಪ್ ಬಾಡಿಗೆ ಕೊಟ್ಟು ಕೃತಾರ್ಥರಾದೆವು! ನಾವು ತಿರುಗಾಟಕ್ಕೆ ಹೊರಡುವ ಮುನ್ನವೇ ಬಿಸಿನೀರಿಗಿಟ್ಟಿದ್ದ ಅರ್ಜಿ, ಆಗೀಗ ಲಘು ವಿದ್ಯುದಾಘಾತ ಕೊಡುತ್ತಿದ್ದ ನಲ್ಲಿಯ ಸಮಸ್ಯೆಗಳ ವಿಚಾರಣೆಯನ್ನೇನೋ ಮಾಡಿದೆವು. “ಹೋಜಾಯೇಗಾ, ಹೋಜಾಯೇಗಾ” – ಚಂದದ ಮಾತಷ್ಟೇ ನಮಗೆ ಸಿಕ್ಕಿದ ಲಾಭ. ಅಲ್ಲಿ ರಾತ್ರಿಯೂಟವನ್ನು ತುಂಬಾ ನಿಧಾನಕ್ಕೆ ಕೊಟ್ಟರು. ಊಟದ ಕೋಣೆ ಹೊಟೆಲ್ಲಿನ ಆವರಣ ಮೀರಿದಂತೆ ಹಿತ್ತಲಿನಲ್ಲಿತ್ತು. ಅಲ್ಲಿಗೆ ಹೋಗುವಾಗ ಹೊಳೆಯತ್ತಣಿಂದ ಬಂದ ಶೀತಮಾರುತ ನನ್ನನ್ನಂತೂ ಅಕ್ಷರಶಃ ನಡುಗಿಸಿಬಿಟ್ಟಿತು. ದೇವಕಿ ಮತ್ತೆ ನಮ್ಮ ಕೋಣೆಗೆ ಓಡಿಹೋಗಿ ವಿಶೇಷ ಶಾಲು ತಂದು ನನಗೆ ಹೊದೆಸಿದ್ದು ಸ್ಮರಣೀಯ. ಹೇಗೋ ಊಟ ಮುಗಿಸಿ, ಕೋಣೆ ಸೇರಿದವನಿಗೆ ಒಂದಡಿ ದಪ್ಪದ ಹಾಸಿಗೆ, ಮೂರು ಪದರದ ವಿಭಿನ್ನ ಹೊದಿಕೆಗಳಲ್ಲಿ ಹುಗಿದು ಹೋದದ್ದಷ್ಟೇ ನೆನಪು. (ಇಲ್ಲಿ ವಿದ್ಯುತ್ ಸಂಪರ್ಕದಲ್ಲಿ ಬಿಸಿಯಾಗುವ ಹೊದಿಕೆಯನ್ನೂ ಕೊಟ್ಟಿದ್ದರು. ವಿದ್ಯಾ ಮನೋಹರ ತಮ್ಮ ಚಳಿಯ ಅನುಭವ ಹೇಳಿದಾಗ, ಅಂಥದ್ದೊಂದನ್ನು ಬಳಸಿದ್ದನ್ನೂ ಹೇಳಿದ್ದರು. ಆದರೆ ತಣ್ಣೀರ ನಲ್ಲಿಯಲ್ಲೂ ವಿದ್ಯುತ್ ಹರಿಸುವ ನಮ್ಮ ಹೋಟೆಲಿನ ವಿದ್ಯುತ್ ರಗ್ಗನ್ನು ಬಳಸಿದ್ದರೆ, ನಾವು ಖಾಯಂ ನಿದ್ರೆಗೆ ಜಾರುವ ಅಪಾಯವಿತ್ತೋ ಏನೋ!!)
ನಮ್ಮ ಪ್ರವಾಸ ಯೋಜನೆಯಲ್ಲಿ ನಭೂತೋ ನಭವಿಷ್ಯತ್ ಎನ್ನುವಂತೆ ನಾವು ಬೆಳಗ್ಗೆ ಆರೂವರೆಗೇ ಕಾರ್ಯರಂಗಕ್ಕೆ ಇಳಿದಿದ್ದೆವು. ವಾಸಕ್ಕಿದ್ದ ಹೋಟೆಲಿನಲ್ಲಿ ಬರಿಯ ಚಾ ಕುಡಿದರೂ ಕಟ್ಟಿ ಒಯ್ದ ಬುತ್ತಿಯನ್ನು (ಅವಲಕ್ಕಿ, ಬ್ರೆಡ್ಡು) ದಾರಿಯ ಯಾವುದೋ ಹೋಟೆಲಿನ ಚಾದೊಡನೆ ನಂಚಿಕೊಂಡು ಮುಂದುವರಿದೆವು. ಮತ್ತೆ ಜಮ್ಮು-ಶ್ರೀನಗರ ದಾರಿ ಸೇರಿದ್ದೆವು. ಇಲ್ಲಿ ನಾವು ಪ್ರಾಕೃತಿಕ ದೃಶ್ಯವೈವಿಧ್ಯದ ಬಗ್ಗೆ ಭಯಮೂಲವಾದ ಆಶ್ಚರ್ಯವನ್ನೂ ಮಾನವಕೃತ ಟ್ರಾಫಿಕ್ ಜ್ಯಾಂನ ಬಗ್ಗೆ ತಿರಸ್ಕಾರ ಪ್ರಧಾನವಾದ ರೋಷವನ್ನೂ ನಿರಂತರ ಅನುಭವಿಸಿದೆವು! ಬನಿಹಾಲ್ ಎಂಬಲ್ಲಂತೂ ಭರ್ತಿ ಎರಡು ಗಂಟೆಯಷ್ಟು ಕಾಲ ನಮ್ಮ ವ್ಯಾನಿನ ವೇಗ ಗಂಟೆಗೆ ನೂರು ಮೀಟರ್; ಸರಿಯಾಗಿ ಓದಿಕೊಳ್ಳಿ, ಕಿಲೋಮೀಟರಲ್ಲ, ಗಂಟೆಗೆ ನೂರು ಬರಿಯ ಮೀಟರ್! ನಮ್ಮ ಅದೃಷ್ಟಕ್ಕೆ ಅಂದು ಮೊದಲೆಂಬಂತೆ ಮಧ್ಯಾಹ್ನದ ಊಟದ ಸಮಯಕ್ಕೆ ನಾವು ಮುಖ್ಯ ಭೂಕುಸಿತದ ವಲಯ ಕಳೆದು ಒಂದು ಉತ್ತಮ ಡಾಬಾ ತಲಪಿದ್ದೆವು. ಅಲ್ಲಿ ಮುಂದೆ ಸಿಗಬಹುದಾದ ಟ್ರಾಫಿಕ್ ಜ್ಯಾಮಿನ ಅರಿವಿದ್ದಂತೆ ಬಹುಚಕ್ರಗಳ ಈ ಕೆಲವು ಲಾರಿಗಳು ನಿಂತಿದ್ದುವು. ಅದರ ಮೇಲಿದ್ದ ವ್ಯಾನುಗಳು ಶ್ರೀನಗರಕ್ಕೆ ಎಷ್ಟು ತುರ್ತಿನದ್ದೇ ಆದರೂ ಎಂದು ತಲಪೀತು ಎಂದು ಯಾರೂ ಹೇಳುವಂತಿರಲಿಲ್ಲ! ಕೇವಲ ನಾಲ್ಕು ಚಕ್ರದ ನಾವೇ ದಾರಿಯಲ್ಲಿ ವ್ಯರ್ಥ ಗಂಟೆಗಳನ್ನು ಕಳೆದಿದ್ದರೆ, ಈ ಲಾರಿ ಶ್ರೀನಗರ ತಲಪುವಾಗ ಕೆಲವು ದಿನಗಳನ್ನೇ ಕಳೆಯಬೇಕಾದೀತೋ ಏನೋ.
ನಮ್ಮ ಪ್ರವಾಸ ಯೋಜನೆಯ ಕೊನೆಯ ಮುಖ್ಯ `ಪಾಯಿಂಟ್’ – ವೈಷ್ಣೋದೇವಿ ದರ್ಶನ. ಅಪರಾಹ್ನದ ಓಟದಲ್ಲಿ ತಿರಿಕಿ ಎಂಬಲ್ಲಿ ಹೆದ್ದಾರಿ ಬಿಟ್ಟು ಬಲಗವಲಿಗೆ ತಿರುಗಿ, ಸಂಜೆಗೆ ಕತ್ರ ಎಂಬ ಊರು ಸೇರಿದೆವು. ಏಳು ಬೆಟ್ಟದ ಯಜಮಾನ ವೇಂಕಟೇಶ್ವರನ ತಿರುಮಲ ಕ್ಷೇತ್ರಕ್ಕೆ, ತಪ್ಪಲಿನಲ್ಲಿ ತಿರುಪತಿ ಪೇಟೆ ಇದ್ದ ಹಾಗೇ ಮೂರು ಬೆಟ್ಟಗಳ (ತ್ರಿಕೂಟಾಚಲ) ಯಜಮಾಂತಿ ವೈಷ್ಣೋದೇವಿಗೆ ಈ ಕತ್ರ. ಸ್ಥಳಪುರಾಣದ ಪ್ರಕಾರ, ಭೂಲೋಕ ಕಲ್ಯಾಣಕ್ಕಾಗಿ ತ್ರಿಶಕ್ತಿಗಳ (ಪಾರ್ವತಿ, ಲಕ್ಷ್ಮಿ ಮತ್ತು ಸರಸ್ವತಿ) ಸಂಯುಕ್ತ ರೂಪ ವೈಷ್ಣವಿ ಅಥವಾ ಕುಮಾರಿ ಎಂಬ ಹುಡುಗಿಯ ರೂಪದಲ್ಲಿ ತ್ರೇತಾಯುಗದಲ್ಲೇ ದಕ್ಷಿಣ ಭಾರತದಲ್ಲಿ ಅವತರಿಸುತ್ತದೆ. ಈಕೆಯ ದೇವತ್ವದ ವಿಕಸನ ವಿಷ್ಣುಶಕ್ತಿಯಲ್ಲಿ ಲೀನವಾಗುವುದರೊಡನೆ ಪೂರ್ಣಗೊಳ್ಳುತ್ತದೆ ಎನ್ನುತ್ತದೆ ನಿಯತಿ. ಆ ಉದ್ದೇಶದಲ್ಲೇ ಈಕೆ ವನವಾಸದ ಶ್ರೀರಾಮನನ್ನು ಸಂಪರ್ಕಿಸುತ್ತಾಳೆ. ಆಗ ರಾಮ ತನ್ನ ಕಲ್ಕ್ಯಾವತಾರದವರೆಗೆ ತಪೋನಿರತಳಾಗಲು ಸೂಚಿಸುತ್ತಾನೆ.
ವೈಷ್ಣವಿ ಹಿಮಾಯಲದ ಸಾನ್ನಿಧ್ಯಕ್ಕೆ ಬಂದು, ತ್ರಿಕೂಟಪರ್ವತಗಳ ತಪ್ಪಲಿನಲ್ಲಿ (ಅಧ್ಕವಾರಿ) ತಪೋನಿರತಳಾಗುತ್ತಾಳೆ. ಅಲ್ಲಿ ಗೋರಖನಾಥನ ಶಿಷ್ಯ ಭೈರೋನಾಥ ಈಕೆಯನ್ನು ಪರೀಕ್ಷಿಸಲು ಬಂದು, ಮೋಹಪಾಶಕ್ಕೊಳಗಾಗುತ್ತಾನೆ. ಆತನನ್ನು ತಿರಸ್ಕರಿಸಿ ವೈಷ್ಣವಿ ಬೆಟ್ಟದ ಮೇಲಿನ ಗುಹೆಯನ್ನು ಸೇರುತ್ತಾಳೆ. ಅಲ್ಲೂ ಆತನ ಕಾಟ ತಪ್ಪದಾಗ ಕನಲಿ ರುಂಡವನ್ನು ಚೆಂಡಾಡುತ್ತಾಳೆ. ಭೈರೋನಾಥನ ತಲೆ ಬೆಟ್ಟದ ಶಿಖರವಲಯದಲ್ಲಿ ಬೀಳುತ್ತದೆ. (ಆಗ ಸಿಡಿದ ರಕ್ತದ ಹನಿಯೇ ಈ `ಕತ್ರ’ವೋ [ಶಬ್ದಾರ್ಥ – ಹನಿ] ಏನೋ.) ಮರಣಕಾಲದಲ್ಲಿ ಭೈರೋನಾಥ ಪಶ್ಚಾತ್ತಾಪದಿಂದ ಪ್ರಾರ್ಥಿಸಿದಂತೆ ವೈಷ್ಣವಿ ಆತನನ್ನು ಕ್ಷಮಿಸುತ್ತಾಳೆ. ಮತ್ತು ಕಾಲಾನಂತರದಲ್ಲಿ ತನ್ನನ್ನು ದರ್ಶಿಸಲು ಬರುವ ಭಕ್ತಾದಿಗಳು, ಮೇಲೇರಿ ಭೈರೋನಾಥನ ದರ್ಶನ ಪಡೆಯದೆ ಹೋದರೆ “ಪೂರ್ಣ ಪುಣ್ಯಪ್ರಾಪ್ತಿ ನಾಸ್ತಿ” ಎಂಬಂಥ ಅಭಯವನ್ನೂ ನೀಡುತ್ತಾಳೆ.
ಯುಗ ಮೂರರ ಸಾಕ್ಷಿ, ಮಹಿಮಾನ್ವಿತ ಕ್ಷೇತ್ರ – ಕತ್ರದಲ್ಲಿ, ನಾವು ಇನ್ನೂ ಕಾಮಗಾರಿ ಪೂರ್ಣಗೊಳ್ಳದ ಶ್ರೀಧರ ರೆಸಿಡೆನ್ಸಿ, ಎಂಬ ಹೋಟೆಲ್ ಸೇರಿದೆವು. ಇಲ್ಲಿಗೆ ಮುಟ್ಟಿಸಿದ್ದೇ ನಮ್ಮನ್ನು ನಾಲ್ಕು ದಿನಗಳುದ್ದಕ್ಕೆ ಮುಖ್ಯವಾಗಿ ಓಡಾಡಿಸಿದ್ದ ಶಬೀರ್ ಟೂರ್ಸ್, ಅದರ ಪ್ರಾತಿನಿಧಿಕ ವ್ಯಕ್ತಿ – ಚಾಲಕ ಬಶೀರನ್ನು ಬೀಳ್ಕೊಂಡೆವು. ಇಲ್ಲಿ ವಿಕ್ರಮ್ ಟ್ರಾವೆಲ್ಸ್ ನಮಗೆ ಎಂದಿನ ಊಟ ತಿಂಡಿಯೊಡನೆ, ಎರಡು ರಾತ್ರಿಯ ಹೊಟೆಲ್ ವಾಸ ಮಾತ್ರ ಖಚಿತವಾಗಿ ಕೊಡುತ್ತದೆ. ನಡುವಣ ಹಗಲಿನಲ್ಲಿ (ಅಗತ್ಯವಿದ್ದರೆ ಎರಡು ರಾತ್ರಿಯನ್ನೂ ಸೇರಿಸಿಕೊಂಡು ಮೂವತ್ತಾರು ಗಂಟೆ ಎನ್ನಿ) ತ್ರಿಕೂಟ ಪರ್ವತವನ್ನು ಏರಿ, ವೈಷ್ಣೋದೇವಿಯ ದರ್ಶನಾದಿಗಳನ್ನು ಮಾಡಿಕೊಳ್ಳಲು ನಾವು ಸ್ವತಂತ್ರರು. ಬೆಟ್ಟವನ್ನು ಖಡಕ್ಕಾಗಿ ಏರುವವರಿಗೆ ಮೆಟ್ಟಿಲಸಾಲು, ಕಾಲೆಳೆದು ಸಾಗುವವರಿಗೆ ಒರಟು ಕಾಂಕ್ರೀಟ್ ಹಾಸಿನ ಪುಟ್ಟಪಥಗಳಿವೆ.
ಕಾಂಕ್ರೀಟ್ ಪಥದಲ್ಲೇ ಸಾಗುವ ಕುದುರೆ (ಹೇಸರಗತ್ತೆ), ಡೋಲಿಗಳಂಥ ಪರ್ಯಾಯ ವ್ಯವಸ್ಥೆಗಳೂ ಧಾರಾಳ ಲಭ್ಯ. ಬೆಟ್ಟದ ಇನ್ನೊಂದೇ ಪಾರ್ಶ್ವದಿಂದ ವಿದ್ಯುತ್ ಕಾರಿನ ವ್ಯವಸ್ಥೆ ಸದ್ಯ ಅರ್ಧ ದಾರಿಯ ಹಂತದವರೆಗೆ ಸಿಗುತ್ತದೆ. ದೊಡ್ಡ ಅಂಶದ ಏರಿಕೆಯನ್ನು ನಿವಾರಿಸುವಂತೆ ಹೆಲಿಕಾಪ್ಟರ್ ಹಾರಾಟವೂ ಇಲ್ಲಿದೆ. ಗಿರೀಶ್ ವ್ಯವಸ್ಥೆಯಲ್ಲಿ, ಬೆಳಿಗ್ಗೆ ಎಂಟರ ಸುಮಾರಿಗೆ ತಿಂಡಿ ಕೊಟ್ಟು, ಒಂಬತ್ತು – ಹತ್ತರ ಸುಮಾರಿಗೆ ಬೆಟ್ಟದ ಬುಡಕ್ಕೆ ವಾಹನದಲ್ಲಿ ತಲಪಿಸುವ ಯೋಚನೆ ಇತ್ತು. ನಾವಿಬ್ಬರು ಮಾತ್ರ ಆ ವಲಯದ ಬೇಗದ ಬೆಳಗನ್ನು ಬಳಸಿ, ನಡೆಯುವುದನ್ನೇ ಬಯಸಿದೆವು. ಹೊತ್ತೇರಿದಂತೆ
ಕನಲುವ ಸೂರ್ಯನ ಎದುರು ಬೆಟ್ಟದೆತ್ತರದ ಗಾಳಿ ಅನುಭವಿಸುವ ಆಸೆ ನಮ್ಮದು. ಮೆಟ್ಟಿಲ ಉದ್ದಕ್ಕೂ ಸೌಕರ್ಯಗಳ ಸಾಲೇ ಇರುವಾಗ ತಿಂಡಿ ಸಮಸ್ಯೆಯೇ ಅಲ್ಲ. ಇದನ್ನು ಹೋಟೆಲಿನವರು ಅನುಮೋದಿಸಿ, ಬೆಳಿಗ್ಗೆ ನಮ್ಮನ್ನು ಕಾರಿನಲ್ಲಿ ಮಹಾದ್ವಾರ ಕಾಣಿಸುವ ಆಶ್ವಾಸನೆ ಕೊಟ್ಟರು. ಹಾಗಾಗಿ ನಾವು ಬೇಗ ಊಟ ಮುಗಿಸಿ, ಅಲಾರಾಂ ಇಟ್ಟು ಮಲಗಿದೆವು.
(ಮುಂದುವರಿಯಲಿದೆ)
[ಅಲ್ಲಿನ ಒಂದು ರಾತ್ರಿಯನ್ನು ಇಲ್ಲಿನ ವಾರಕ್ಕೆ ಸಮೀಕರಿಸುತ್ತೇನೆ. ನನ್ನ ವಾರಪೂರ್ತಿ ನಿದ್ರೆಗೆ ಗುಣಪಕ್ಷಪಾತಿ ವಿಮರ್ಶಕರಾದ ನೀವು ಎಚ್ಚರಿದ್ದು, ಟಿಪ್ಪಣಿಗಳಲ್ಲಿ ಮೃದುವಾಗಿ ತಟ್ಟುತ್ತೀರಿ, ವಿಕಲ್ಪಗಳಿಗೆ ತಡೆಗಾವಲಿಗರಾಗಿಯೂ ಎಚ್ಚರಿಕೆಗೆ ಶೀಟಿ ಹೊಡೆಯುತ್ತೀರಲ್ಲಾ? ಮತ್ತೆ ಮುಂದಿನ ವಾರದ ಬೆಳೀಈಈಗ್ಗೆ ವೈಷ್ಣೋದೇವಿ ಭೇಟಿಗೆ ಸಜ್ಜಾಗಿಯೂ ಇರುತ್ತೀರಿ ಎಂದು ಭಾವಿಸುತ್ತೇನೆ.]
ಜೈ ವೈಷ್ಣೋದೇವಿಗೆ
Mundina kantige kaytiddene.Sundara drushyagalige dhanyavaadagalu.