(ಪರ್ವತಾರೋಹಣ ಸಪ್ತಾಹದ ಐದನೇ ಅಧ್ಯಾಯ)

ಸಪ್ತಾಹದ ಚತುರ್ಥ ನಡೆ ಅವಿಭಜಿತ ದಕ ಜಿಲ್ಲೆಯ ದಕ್ಷಿಣ ಭಾಗದ ಪುತ್ತೂರಿನಲ್ಲಾದರೆ, ಪಂಚಮಕ್ಕೆ ಉತ್ತರ ವಲಯದ ಕುಂದಾಪುರ ಆರಿಸಿಕೊಂಡಿದ್ದೆವು. ಭಂಡಾರ್ಕರ್ಸ್ ಕಾಲೇಜಿನ ವಿದ್ಯಾರ್ಥಿ ವೃಂದಕ್ಕೆ, ಆ ವಲಯದ ಜನತೆಗೇ ಸಮೀಪಿಸಿದ ಪಶ್ಚಿಮ ಘಟ್ಟ, ಅದರಲ್ಲೂ ಕೊಡಚಾದ್ರಿ ಬಲು ದೊಡ್ಡ ಆಕರ್ಷಣೆ. ಸಹಜವಾಗಿ ಅಲ್ಲಿನ ಭಾಷಣಕ್ಕೆ ವಿಷಯ ಘಟ್ಟದ್ದೇ ಆಗಬೇಕು. ಆದರೆ ಪೂರ್ಣ ಅವರು ಕಂಡದ್ದು ಆಗಬಾರದು ಎಂಬ ಕಾರಣಕ್ಕೆ ಕೊಡಚಾದ್ರಿ ಮಗ್ಗುಲಿನಲ್ಲೂ ಇರುವ ಜಲಪಾತಗಳನ್ನೇ ಆರಿಸಿಕೊಂಡಿದ್ದೆ. ವಿಷಯ ವಿವರಗಳ್ಯಾವವೂ ಇಂದು ನನ್ನ ನೆನಪಿನಲ್ಲುಳಿದಿಲ್ಲ. ಮೊದಲೇ ಹೇಳಿದಂತೆ, ಏಳು ದಿನಗಳ ಪ್ರಾಸ್ತಾವಿಕ ಹಾಗೂ ವಿಶೇಷ ಭಾಷಣಗಳೆಲ್ಲವನ್ನೂ ನಾನೊಬ್ಬನೇ ಮಾಡಿದ್ದಲ್ಲ.

ಆರೋಹಣ ಬಳಗದಲ್ಲಿ ಸಪ್ತಾಹದ ವೇದಿಕೆಗಳಿಂದ ನನ್ನನ್ನುಳಿದು ಮಾತಾಡಿದವರ ಕುರಿತು ಯೋಚಿಸಿದರೆ ಮಂಗಳೂರಿನಲ್ಲಿ ಶರತ್, ಉಜಿರೆಯಲ್ಲಿ ಸಮೀರ ರಾವ್ ಮಾತ್ರ ನನ್ನ ನೆನಪಿನಲ್ಲುಳಿದಿದ್ದಾರೆ. ಉಳಿದಂತೆ ಅಂದು ಕ್ರಿಯಾತ್ಮಕವಾಗಿ ಭಾಗಿಯಾದ ಕಿರಣ್ ಕುಲಕರ್ಣಿ, ಯಜ್ಞ, ಕೀರ್ತಿ, ಜಯಂತ, ಸುಬ್ರಾಯ ಕಾರಂತ, ಬಾಲಕೃಷ್ಣ, ಪ್ರಕಾಶ, ಸೂರ್ಯ, ರೊನಾಲ್ಡ್, ಶ್ರೀಕಂಠಯ್ಯಾದಿಗಳು ಮಾತು ಬಲ್ಲವರೇ ಇದ್ದರು. ಎಲ್ಲರಿಗೂ ವಿಷಯಗಳನ್ನು ಸೂಚಿಸಿ, ಖಚಿತ ಪ್ರಬಂಧ ತಯಾರಿಸಲು ಕೇಳಿಕೊಂಡಿದ್ದೆ.

ಕೊರತೆ ಬಂದಲ್ಲಿ ತುಂಬಿ, ತಿದ್ದಿ, ವೇದಿಕೆ ಹಂಚಿಕೊಳ್ಳುವಲ್ಲಿ ನಾನು ಸಾಕಷ್ಟು ಶ್ರಮವನ್ನೂ ವಹಿಸಿದ್ದೆ. ಆದರೆ ಅನ್ಯರ ಪಾತ್ರಗಳ ನೆನಪು ಅಥವಾ ಅವರ ಪ್ರಬಂಧಗಳ ಪ್ರತಿ ಇಂದು ನನ್ನಲ್ಲುಳಿದಿಲ್ಲ. ಕುಂದಾಪುರದ ಭಾಷಣದಲ್ಲಿ ಕೊಡಚಾದ್ರಿಯದ್ದೇ ಮಗ್ಗುಲಿನ ಬೆಳ್ಕಲ್ ತೀರ್ಥ, ತಿಂಗಳೆ ಮೂಲೆಯ ಕೂಡ್ಲುತೀರ್ಥ, ಆಗುಂಬೆಯ ಒನಕೆ ಅಬ್ಬಿ, ಅದುವರೆಗೆ ದೂರದಿಂದಷ್ಟೇ ಕಂಡಿದ್ದ ಬರ್ಕಣ ಅಬ್ಬಿ, ಬಂಡಾಜೆ ಅಬ್ಬಿಗಳ ಉಲ್ಲೇಖ ಅವಶ್ಯ ಬಂದಿರಬೇಕು. ಅವುಗಳಲ್ಲಿ ಹೆಚ್ಚಿನವನ್ನು ಇಂದು ನೀವು ಆಯಾ ಹೆಸರಿನ ಮೇಲೆ ಅಥವಾ ಒಟ್ಟಾರೆ `ಜಲಪಾತಗಳ ಸರಣಿ’ ಎಂಬುದರ ಮೇಲೆ ಚಿಟಿಕೆ ಹೊಡೆದು ಇಲ್ಲೇ ಓದಿಕೊಳ್ಳಬಹುದು; ನಾನು ಮರು-ಲೇಖಿಸುತ್ತಿಲ್ಲ. ಇನ್ನೂ ಜಾಲತಾಣಕ್ಕೇರಿಸದ ಬಂಡಾಜೆ ಅಬ್ಬಿಯ ಬಗ್ಗೆ ಎರಡು ಮಾತು. ಈ ಸಪ್ತಾಹದ ಯಶಸ್ಸಿನ ಬೆಳಕಿನಲ್ಲಿ ಮರುವರ್ಷ ನಾವು ಎರಡು ದಿನಗಳ ಕೇವಲ `ನೀವೇ ಅನುಭವಿಸಿ – ಬಲ್ಲಾಳರಾಯನ ದುರ್ಗ ಮತ್ತು ಬಂಡಾಜೆ ಅಬ್ಬಿ’ ಕಲಾಪವನ್ನು ಸಾರ್ವಜನಿಕರಿಗೆ ಮುಕ್ತವಾಗಿರಿಸಿದ್ದೆವು. ಅದನ್ನು ಮುಂದೆ ಇದೇ ಮಾಲಿಕೆಯ ಸೆರಗಿನಲ್ಲಿ ಕಟ್ಟಿಕೊಡುತ್ತಿರುವುದರಿಂದ ಸದ್ಯ ವಿಸ್ತರಿಸುವುದಿಲ್ಲ.

ಆರೋಹಣದ ಸಪ್ತಾಹ ತನ್ನ ಸಾಧನೆಯ ಪರಿಚಯ, ಇತರರಿಗೆ ವ್ಯವಸ್ಥಿತ ಪರ್ವತಾರೋಹಣಕ್ಕೆ ಪ್ರೇರಣೆ ಮತ್ತು ಸೀಮಿತ ಪ್ರವೇಶಿಕೆ ಕೊಡುವುದಲ್ಲದೆ, ಮುಂದುವರಿದ ಕಾರ್ಯಕ್ರಮವಾಗಿ ಉಚಿತ ತರಬೇತಿ ಕೊಡುವುದನ್ನೂ ಉದ್ದೇಶಿಸಿತ್ತು. ಹಾಗಾಗಿ ನಾವು ಎಲ್ಲೆಡೆಗಳಲ್ಲೂ “ಪರ್ವತಾರೋಹಣದ ಕನಿಷ್ಠ ಸಲಕರಣೆಗಳನ್ನು ಸಂಗ್ರಹಿಸಿ, ಕೂಟ ಕಟ್ಟಿ, ತರಬೇತಿ ಉಚಿತವಾಗಿ ನಾವು ಕೊಡುತ್ತೇವೆ” ಎಂದೂ ಸಾರಿಕೊಂಡು ಬಂದಿದ್ದೆವು. ಸಪ್ತಾಹದಲ್ಲಿ ಭಾಗಿಯಾದವರಲ್ಲಿ ಸಲಕರಣೆ ಮತ್ತು ಕೂಟದ ಅನೌಪಚಾರಿಕತೆಗಳನ್ನು ಪೂರೈಸಿದ ಏಕೈಕ ಕಾಲೇಜು – ಭಂಡಾರ್ಕರ್ಸ್ ಕಾಲೇಜು. ಅಲ್ಲಿನ ಉತ್ಸಾಹೀ ಪ್ರಾಂಶುಪಾಲ ಪ್ರೊ| ಶಾಂತಾರಾಮ್ ನಿರ್ದೇಶನದಲ್ಲಿ, ಗಣಿತ ಪ್ರಾಧ್ಯಾಪಕ ಜಯರಾಮ್ ಸಪ್ತಾಹದ ನಮ್ಮ ಐದನೆಯ ದಿನವನ್ನು ಚಂದಗಾಣಿಸಿಕೊಟ್ಟರು. ಅವರ ಉತ್ಸಾಹದೆಣ್ಣೆ ವಾರದ ಕೊನೆಯಲ್ಲಿ ಯುವಪಡೆಯನ್ನು ಕಟ್ಟಿಕೊಂಡು ಉಜಿರೆಗೆ ಬಂದು `ನೀವೇ ಅನುಭವಿಸಿ’ಯನ್ನು ಉಜ್ವಲಗೊಳಿಸಿತು. ಮುಂದುವರಿದು, ಯುಕ್ತ ಸಲಕರಣೆಗಳನ್ನು ಕಾಲೇಜಿನ ಕ್ರೀಡಾ ವಿಭಾಗಕ್ಕೆ ತರಿಸುವವರೆಗೂ ಸಮೃದ್ಧವೇ ಇತ್ತು. ನಮ್ಮಿಂದ ತರಬೇತು ಪಡೆಯುವ ಹಂತಕ್ಕೆ ಮಾತ್ರ ಮುಟ್ಟಲೇ ಇಲ್ಲ. ಆ ಕಾಲೇಜಿನಿಂದ ಬಂದವರಲ್ಲಿ ಪ್ರೇರಣೆಯ

ಕಿಡಿಯುಳಿಸಿಕೊಂಡ ವಿದ್ಯಾರ್ಥಿ ಮಿತ್ರ ಶಶಿಧರ ಹಾಲಾಡಿ (ಇಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಮ್ಯಾನೇಜರ್ ಆಗಿ ನಿವೃತ್ತಿಯ ಹೊಸ್ತಿಲಲ್ಲಿದ್ದಾರೆ), ಪಾಂಡುರಂಗ (ಇವರು ನಮ್ಮ ದಿಕ್ಕೆಲ್ ಕಲ್ಲಿಗೆ ಲಗ್ಗೆ ಹಾಕುವಾಗ ಜತೆಗೊಟ್ಟಿದ್ದರು) ನನ್ನ ನೆನಪಿನಲ್ಲಿದ್ದಾರೆ. ಶಶಿಧರ ಸ್ವತಂತ್ರವಾಗಿ ಹಲವು ಚಾರಣಗಳನ್ನು ಇಲ್ಲೂ ಹಿಮಾಲಯದಲ್ಲೂ ನಡೆಸಿ `ಹಿತ್ತಲಿನಿಂದ ಹಿಮಾಲಯಕ್ಕೆ’ ಎಂಬ ಪುಸ್ತಕ ಪ್ರಕಟಿಸುವವರೆಗೂ ಮುಂದುವರಿದು, ಈಗಲೂ ನನ್ನ ಸಂಪರ್ಕದಲ್ಲಿದ್ದಾರೆ. ಆದರೆ ಈಗಾಗಲೇ ಆ ನೆಪದಲ್ಲಿ ನಾನು ನೆನಪಿಸಿಕೊಂಡ ಅಸಂಖ್ಯ ವ್ಯಕ್ತಿಗಳಂತೆ ಅನೇಕ ವಿಚಾರಗಳೂ ಇದಕ್ಕೆ ಹೇಗೆ ಜೋಡಿಕೊಂಡವು ಎನ್ನುವುದಕ್ಕೆ ಪತ್ರಕರ್ತ ಗೆಳೆಯ ಮಂಜುನಾಥ ಭಟ್ಟರು ನವಭಾರತ ಪತ್ರಿಕೆಯಲ್ಲಿ ಪ್ರಕಟಿಸಿದ ಲೇಖನ ಒಂದು ಉತ್ತಮ ಉದಾಹರಣೆ. ಭಟ್ಟರು ನಮ್ಮ ಮೊದಲ ದಿನದ ಕಲಾಪಗಳಿಗೆ ಪ್ರತ್ಯಕ್ಷದರ್ಶಿಯಾಗಿದ್ದರು. ಅದರ ವರದಿಯನ್ನು ೯-೧೨-೧೯೮೦ರ ನವಭಾರತದ ಮುಖಪುಟದಲ್ಲೇ ಕೊಟ್ಟರು. ಅಷ್ಟು ಸಾಲದೆಂಬಂತೆ ಒಳಪುಟದಲ್ಲಿ ದೀರ್ಘ ಲೇಖನವನ್ನೇ ಬರೆದು ಸಮ್ಮಾನ ಮಾಡಿದರು. ಈಗ ಅವರ ಲೇಖನದ ಯಥಾರೂಪ:

ಆರೋಹಣದ ಪರ್ವತಾರೋಹಣ ವಗೈರೆ: ಎಚ್. ಮಂಜುನಾಥ ಭಟ್:
`ಮೋಹನ ಮುರಳಿ’ ಕವನದಲ್ಲಿ ಕವಿ ಗೋಪಾಲಕೃಷ್ಣ ಅಡಿಗರು `ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಜೀವನ’ ಎನ್ನುವ ಪ್ರಶ್ನೆಯನ್ನು ನಮ್ಮ ಮುಂದಿಡುತ್ತಾರೆ. ಅಂದರೆ ತಾನಿರುವ ವಾತಾವರಣದಿಂದ ಆಚಿನದಕ್ಕಾಗಿ ವ್ಯಕ್ತಿ ಹಂಬಲಿಸುತ್ತಾನೆ. ಕಾಡುಮೇಡುಗಳಲ್ಲಿ ಅಲೆಯುವ ಪರ್ವತಾರೋಹಣ ಎನ್ನುವ ಕ್ರೀಡೆಯೂ ಹೀಗೆ ಆಧುನಿಕ ನಾಗರಿಕ ಜಗತ್ತಿನ ಶಿಶು ಎನಿಸುತ್ತದೆ. ಒಂದೆರಡು ದಶಕಗಳ ಹಿಂದೆ ಸಾಕಪ್ಪಾ ಸಾಕು, ಈ ಮಲೆನಾಡು ಎನ್ನುವವರು ನಮ್ಮಲ್ಲಿ ತುಂಬಾ ಇದ್ದರು. ನಗರಗಳು ಬೆಳೆದಂತೆ ಮಲೆನಾಡುಗಳ ಆಕರ್‍ಷಣೆಯು ಹೆಚ್ಚುತ್ತದೆ. ಸಂಪತ್ತು ನಾಗರಿಕತೆಗಳ ತುತ್ತತುದಿಯಲ್ಲಿರುವ ಅಮೆರಿಕದ ಜನ ಮನೆಗಳನ್ನು ಕಟ್ಟಿಕೊಳ್ಳಲು ಈಗ ಗುಡ್ಡ ಬೆಟ್ಟಗಳನ್ನೇ ಹೆಚ್ಚು ಹೆಚ್ಚಾಗಿ ಆರಿಸಿಕೊಳ್ಳುತ್ತಿದೆಯಂತೆ.

ಬೆಟ್ಟದ ದೇವರು:: ಮನುಷ್ಯನಿಗೆ ಹಲವು ಬಗೆಯ ತುರಿಕೆಗಳಿದ್ದು, ಪುರಾತನರು ಅವುಗಳನ್ನು ತೃಪ್ತಿಪಡಿಸುವ ರೀತಿಯಲ್ಲಿ ನಮ್ಮ ಬದುಕನ್ನು ರೂಪಿಸಿದಂತೆ ಕಾಣುತ್ತದೆ. ಆಧ್ಯಾತ್ಮಿಕವು ಮನುಷ್ಯನಿಗೆ ಒಂದು ತುರಿಕೆಯಾದರೆ ಗುಡ್ಡಗಳನ್ನೇರಬೇಕೆನ್ನುವುದು ಇನ್ನೊಂದು ತುರಿಕೆ. ದೇವಾಲಯಗಳನ್ನು ಬೆಟ್ಟಗಳ ಶಿಖರಗಳಲ್ಲಿ ಸ್ಥಾಪಿಸುವ ಮೂಲಕ ಪ್ರಾಚೀನರು ಒಂದೇ ಕ್ರಿಯೆಗಳಿಂದ ಎರಡು ಉದ್ದೇಶಗಳನ್ನು ಸಾಧಿಸಿದರು ಎನಿಸುತ್ತದೆ. ಬೆಟ್ಟದ ತುದಿಯ ತೀರ್ಥ ಕ್ಷೇತ್ರ ಭಕ್ತನಿಂದ ಪರಿಶ್ರಮ, ಸಾಧನೆಗಳನ್ನು ಬೇಡುತ್ತದೆ. ಮತ್ತು ಶುದ್ಧ ಗಾಳಿ ಬೆಳಕುಗಳ ಮೂಲಕ ತನ್ನದೇ ಆದ ಪವಿತ್ರ ಪರಿಸರವನ್ನು ಒದಗಿಸುತ್ತದೆ. ಹಿಮಾಲಯವನ್ನು ಪರಿಚಯಿಸಿಕೊಳ್ಳದಿದ್ದರೆ ಭಾರತೀಯ ಸಂಸ್ಕೃತಿಯು ಅಪರಿಚಿತವಾಗಿಯೇ ಉಳಿಯುತ್ತದೆ ಎನ್ನುವ ಸಾಹಿತಿ ಡಾ| ಎಸ್.ಎಲ್ ಭೈರಪ್ಪನವರ ಮಾತು ಈ ಅರ್ಥದಲ್ಲಿ ತುಂಬಾ ಮಹತ್ವಪೂರ್ಣ ಎನಿಸುತ್ತದೆ.

ಎಂತಹ ಬೆಟ್ಟವೇ ಇರಲಿ, ವಾಹನಗಳಲ್ಲಿ ಗರ್ಭಗುಡಿಯವರೆಗೆ ಹೋಗುವಷ್ಟು ನಾವಿಂದು ಮುಂದುವರಿದಿದ್ದೇವೆ. ಪೂರ್ಣ ಆಗದಿದ್ದರೂ ಹೆಚ್ಚಿನ ಪಾಲು ಕಾಲ್ನಡಿಗೆಯ ತೀರ್ಥಯಾತ್ರೆಯಂತೂ ಇಲ್ಲವೇ ಇಲ್ಲ. ಹಿಂದೆ ತೀರ್ಥಯಾತ್ರೆಯು ಬದುಕಿನ ಸಾಫಲ್ಯವನ್ನು ತರುತ್ತಿದ್ದರೆ ಇಂದು ಅದು ಮೋಜಾಗಿದೆ, ಹಣ ವ್ಯಯಿಸುವ ಮಾರ್ಗವಾಗಿದೆ. ಬೆಟ್ಟ ಹತ್ತಬೇಕು, ಕಾಡುಮೇಡುಗಳಲ್ಲಿ ಅಲೆಯ ಬೇಕೆನ್ನುವ ಮಾನವನ ತುರಿಕೆಯು ಬೇರೆ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ. ಹೀಗೆ ಪರ್ವತಾರೋಹಣವು ನಿರಪೇಕ್ಷವಾದ ಸಾಹಸವೆನ್ನುವ ಜಾಡು ಹಿಡಿದು ಬೆಳೆಯುತ್ತಿದೆ.

ದಕ್ಷಿಣ ಕನ್ನಡ: ಸಾಹಿತಿ ಡಾ| ಶಿವರಾಮ ಕಾರಂತರು ದಕ್ಷಿಣ ಕನ್ನಡ ಪ್ರಾಕೃತಿಕ ಸ್ವರೂಪವೂ ವೈವಿಧ್ಯಗಳಿಂದ ಕೂಡಿದಂಥದ್ದು, ಏನು ಬೇಕಾದರೂ ಇಲ್ಲಿದೆಯೆಂದು ಶ್ಲಾಘಿಸುತ್ತಾರೆ. ಹತ್ತು ಹಲವು ನದಿಗಳಿವೆ, ತಗ್ಗು ಭಾಗಗಳಿವೆ, ಬೆಟ್ಟ ಗುಡ್ಡ ಬಂಡೆಗಳಿವೆ, ಪರ್ವತ ಶ್ರೇಣಿಗಳಿವೆ. ನಾಲ್ಕು ವರ್ಷಗಳ ಹಿಂದೆ ಮಂಗಳೂರಲ್ಲಿ ಆರಂಭಗೊಂಡ ಆರೋಹಣವು ಬಂಡೆ ಹಾಗೂ ಪರ್ವತಶ್ರೇಣಿಗಳನ್ನು ಸಾಹಸದ ಸವಾಲಾಗಿ ಸ್ವೀಕರಿಸಿದೆ. ಜಿಲ್ಲೆಯಲ್ಲಿ ಪರ್ವತಾರೋಹಣ ಹವ್ಯಾಸವನ್ನು ನಿರಂತರವಾಗಿ ಕಾಯ್ದುಕೊಂಡು ಬಂದವರು ಪ್ರಾಯಶಃ ಆರೋಹಣದವರು ಮಾತ್ರ. ಹಲವು ಪ್ರಥಮಗಳನ್ನು ಈ ತಂಡವು ತನ್ನ ಬಗಲಿಗೆ ಹಾಕಿಕೊಂಡಿದೆ. ಇದರ ಹಿಂದಿರುವ ವ್ಯಕ್ತಿ ಯಾರು ಎನ್ನುವ ಆಸಕ್ತಿಯು ಹುಟ್ಟಬಹುದಲ್ಲವೇ? ೧೯೭೫ರಲ್ಲಿ ನಗರದಲ್ಲಿ ಸ್ಥಾಪನೆಗೊಂಡ ಅತ್ರಿ ಬುಕ್ ಸೆಂಟರ್ ಸಾಹಿತ್ಯಾಭಿಮಾನಿಗಳಿಗೂ ಪರಿಚಿತ. ಸಾಹಿತ್ಯ ಕಲೆಗಳಲ್ಲಿ ಆಸಕ್ತರಾದ ಸ್ನೇಹಿತರನ್ನು ಭೇಟಿ ಮಾಡಬೇಕೆಂದಿದ್ದರೆ ನೀವು ಈ ಪುಸ್ತಕದಂಗಡಿಗೆ ಹೋದರಾಯ್ತು. ಇಲ್ಲಿ ಬಂದು ಹೋಗುವ ಸಾಹಿತ್ಯಪ್ರಿಯರಿಗೆಲ್ಲಾ ಮಾಲಕ ಜಿ.ಎನ್. ಅಶೋಕವರ್ಧನರು ಬಹು ಬೇಗ ಆತ್ಮೀಯರಾಗಿಬಿಡುತ್ತಾರೆ. ಇವರ ಮೀಸೆ ನೋಡಿ ಇವರೊಬ್ಬ ಆರೆಸೆಸ್ ಸದಸ್ಯರೆಂದು ನೀವು ಸಂಶಯಪಟ್ಟೀರಿ. ಹಾಗೇನೂ ಇಲ್ಲ. ಏನಾದರೂ ಆಗಿದ್ದರೆ, ಅಶೋಕವರ್ಧನರ ಮೀಸೆ ಸಾಹಸ ಪೌರುಷಗಳ ಪ್ರತೀಕವಾದುದು. ಇವರು ಏರು ತಗ್ಗುಗಳ ಕೊಡಗು ಜಿಲ್ಲೆಯವರೆಂದು ಹೇಳುವುದು ಇಲ್ಲಿ ಪ್ರಸ್ತುತವೆನಿಸೀತು.

ವ್ಯಾಪಾರದ ಆಚೆಗೆ: ಪುಸ್ತಕ ಖರೀದಿಗೆ ಬಂದವರ ತೂಕವನ್ನೂ ಇವರು ಅಳೆಯುತ್ತಾರೆ. ಹುರುಳಿರುವ ವ್ಯಕ್ತಿ ಎನಿಸಿದರೆ ಸ್ನೇಹವು ವ್ಯಾಪಾರದ ಆಚೆಗೂ ಬೆಳೆಯುತ್ತದೆ. ಬರುವ ಆದಿತ್ಯವಾರ ಅವರೊಂದಿಗೆ ಹೊರಟೆವೆಂದರೆ ಅಂದೇ ನೀವು ಆರೋಹಣದ ಸದಸ್ಯರು. ಒಮ್ಮೆ ಭಾಗವಹಿಸಿದವರು ಆರೋಹಣದ ಆಜೀವ ಸದಸ್ಯರು ಎಂದೇ ಅಶೋಕವರ್ಧನ ಹೇಳುತ್ತಾರೆ. ಇದರಲ್ಲಿ ಮುಲಾಜಿಗೆ ಅವಕಾಶವಿಲ್ಲ. ಅವರವರ ಖರ್ಚು ಹಾಗೂ ಪರ್ವತಾರೋಹಣದ ಹೊತ್ತಿಗೆ ಬೇಕಾಗುವ ವೈಯಕ್ತಿಕ ಸಲಕರಣೆಗಳನ್ನು ಆಯಾ ಸದಸ್ಯರು ಹೊಂದಬೇಕು. ಶಿಸ್ತು ಪ್ರಥಮ ಆವಶ್ಯಕತೆ. ಅಶೋಕವರ್ಧನರು ಬದುಕಿನ ಅಂಗುಲ ಅಂಗುಲದಲ್ಲೂ ಶಿಸ್ತಿದೆ. ಅತ್ರಿ ಬುಕ್ ಸೆಂಟರಿನ ಓರಣವಾದ ಪುಸ್ತಕದ ಸಾಲುಗಳು ಇದನ್ನೇ ಹೇಳುತ್ತವೆ.

ಗುಹಾಪ್ರವೇಶ: ಪರ್ವತ ಶ್ರೇಣಿಯಲ್ಲಿ ನಡಿಗೆ, ಬಂಡೆ ಏರುವುದು, ಜಲಪಾತ ದರ್ಶನ, ಗುಹಾ ಪ್ರವೇಶ ಹಾಗೂ ಸೈಕಲ್ ಸವಾರಿ ಕೂಡಾ ಆರೋಹಣದ ಚಟುವಟಿಕೆಗಳಲ್ಲಿ ಸೇರಿವೆ. ಎಲ್ಲ ಹೋಗುವ ಮಾಮೂಲು ದಾರಿಯಲ್ಲಿ ಹೋಗುವುದಿಲ್ಲ. ಒಮ್ಮೆ ಹೋದ ದಾರಿಯಲ್ಲಿ ಮತ್ತೆ ಹೋಗುವುದಿಲ್ಲ. ಇದು ಆರೋಹಣ ಹಾಕಿಕೊಂಡಿರುವ ಅಲಿಖಿತ ಸಂವಿಧಾನ. ನಮ್ಮೂರ ಬಳಿ ಇಂತಹ ಒಂದು ಅದ್ಭುತ ಇದೆಯೆಂದು ಯಾರಾದರೂ ಹೇಳಿದರೆ ಸಾಕು, ಮುಂದಿನ ಆದಿತ್ಯವಾರ ಇವರ ತಂಡ ಅಲ್ಲಿರುತ್ತದೆ. ಹೆಸರುವಾಸಿಯಾದ ಯಾವುದನ್ನೂ ಬಿಟ್ಟಿಲ್ಲವೆಂದು ಅಶೋಕವರ್ಧನ್ ಹೇಳುತ್ತಾರೆ. ತಾನೊಬ್ಬ ದೊಡ್ಡ ಪರ್ವತಾರೋಹಿ ಎಂದು ಕೊಚ್ಚಿಕೊಂಡ ಜಿಲ್ಲೆಯ ಕೆಲವರ ಹಮ್ಮು ಆರೋಹಣದ ಮುಂದೆ ಹರಾಜಾದುದೂ ಬಹಳಷ್ಟಿದೆ. ಬೆಟ್ಟ ಹತ್ತುವುದರಲ್ಲಿ ಚಾಣಾಕ್ಷರಾದ ಮಲೆಕುಡಿಯರನ್ನು ಜನಕ್ಕಿಬ್ಬರಂತೆ ಕರೆದುಕೊಂಡು ಹೋಗಿ ಅಮೆದಿಕ್ಕೆಲ್ ಏರಿದೆ, ಏರುಗಲ್ಲು ಹತ್ತಿದೆ ಎನ್ನುವ ಅಸಾಮಿಗಳೂ ಇಲ್ಲಿ ಸಿಗುತ್ತಾರೆ. ಆದರೆ ಆರೋಹಣಕ್ಕಿದು ನಿಷಿದ್ಧ. ಕಾಡಾನೆಯ ಹಾವಳಿಯಿದ್ದ ಕಡೆ ಆನೆಯ ಸ್ವಭಾವ ತಿಳಿದವರು ಎನ್ನುವುದಕ್ಕಾಗಿ ಮಾತ್ರ ಆರೋಹಣ ತಂಡ ಮಲೆಕುಡಿಯರ ಸಹಾಯ ಪಡೆದದ್ದಿದೆ ಅಷ್ಟೇ. ಮತ್ತೆಲ್ಲ ಕಡೆ ಇವರ ಮಾರ್ಗದರ್ಶಕರೆಂದರೆ ಬೆಟ್ಟಗಳ ನಕಾಶೆಗಳು ಮಾತ್ರ. ಹೀಗೆ ಇದು ಅಪ್ಪಟ ಸಾಹಸ.

ಜಮ್ಲಾಬಾದ್ ನೇರಮೈ:: ಇವರ ಸಾಧನೆಯಲ್ಲಿ ಹಲವು ಪ್ರಥಮಗಳಿದ್ದರೂ ಯಾವುದು ಪ್ರಥಮ ಯಾವುದು ಪ್ರಥಮವಲ್ಲ ಎನ್ನುವ ವಿಭಜನೆಯೇ ಕಷ್ಟ. ಬೆಳ್ತಂಗಡಿ ಸಮೀಪದ ಜಮ್ಲಾಬಾದ್ ಬಂಡೆಯ ನೇರಮೈಯನ್ನು ಪ್ರಥಮವಾಗಿ ಏರಿದವರು ಆರೋಹಣ ತಂಡದವರೆಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ದಾಖಲೆಯಾಗಿದೆ. ಏನಿದ್ದರೂ ಜಿಲ್ಲೆಯ ಪರ್ವತಶ್ರೇಣಿ, ಬಂಡೆ, ಗುಹೆಗಳೆಲ್ಲಾ ಅಶೋಕವರ್ಧನರಿಗೆ ಅಂಗೈ ನೆಲ್ಲಿ. ಕೆಲವು ತಿಂಗಳ ಹಿಂದೆ `ನವಭಾರತ’ದಲ್ಲಿ ಪಾಣಾಜೆ ಸಮೀಪದ ಸ್ವಯಂಭೂ ಗುಹೆಯ ಬಗ್ಗೆ ಮಹನೀಯರೊಬ್ಬರು ಬರೆದ ಲೇಖನದಲ್ಲಿ ವಾಸ್ತವವನ್ನು ಬಿಟ್ಟು ಇಲ್ಲಸಲ್ಲದ ಕಾರಣಿಕಗಳಿಂದ ತುಂಬಿಸಿದ್ದರು. ಒಳಗಿನ ವಿವರ ಯಾರೂ ಬಲ್ಲವರಿಲ್ಲ. ಒಳಗೆ ಭಸ್ಮ ಹಾಗೂ ಮೃತ್ತಿಕೆಗಳ ರಾಶಿಯಿದೆ. ಬೊಂಡ ಕುಡಿದು ಬಿಸಾಡಿದ ಬ್ರಿಟಿಷ್ ಪಾದ್ರಿಗೆ ಅನಿಷ್ಠ ಪರಂಪರೆ ಬಂತು ಇತ್ಯಾದಿ. ಅಶೋಕವರ್ಧನರು ಗುಹೆಯ ಒಳಗೆ ಏನೆಲ್ಲಾ ಇದೆಯೆನ್ನುವ ವಿವರಣೆ ನೀಡಿ ಪುರಾಣ ಇರಲಿ, ಅದರೊಂದಿಗೆ ಪುರಾವೆಯನ್ನೂ ಕೊಡಿ ಎಂದು ಕಿವಿಮಾತು ಹೇಳಿದರು. ತಾವು ಕಾಣದುದೇನನ್ನೂ ಅವರು ಹೇಳುವುದಿಲ್ಲ. ಪರ್ವತಾರೋಹಣದ ವರ್ಣನೆಯನ್ನು ಅಶೋಕವರ್ಧನರಿಂದ ಕೇಳುವಾಗ ನಾವು ತನ್ಮಯರಾಗಿ ಬಿಡುತ್ತೇವೆ. ಅವರ ಶೈಲಿ ಅವರ ತಂದೆ – ಸಾಹಿತಿ, ಜಿಟಿ ನಾರಾಯಣ ರಾಯರ ಶೈಲಿಗೆ ತುಂಬ ಹೋಲುವಂಥದ್ದು. ಪರ್ವತಾರೋಹಣದ ಬಗ್ಗೆ ಕನ್ನಡದ ಸ್ವತಂತ್ರ ಪ್ರಥಮ ಕೃತಿ ತಂದೆಯ `ಕುದುರೆಮುಖದೆಡೆಗೆ’ ಆದರೆ, ಮಗನ `ತಾತಾರ್ ಶಿಖರಾರೋಹಣ’ ಎರಡನೆಯದ್ದು. ಆರೋಹಣವು ಮೊದಲ ಬಾರಿಗೆ ಆಚರಿಸುತ್ತಿರುವ ಪರ್ವತಾರೋಹಣ ಸಪ್ತಾಹದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಅಶೋಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.

ಅಪಾಯವಿಲ್ಲ:: ಚಿಕ್ಕಪುಟ್ಟ ತರಚಿದ ಗಾಯ ಹಾಗೂ ಕೊಡಂಜೆಕಲ್ಲಿನಲ್ಲೊಮ್ಮೆ ಜೇನು ಕಡಿದುದನ್ನು ಬಿಟ್ಟರೆ (ಇಬ್ಬರು ಆಸ್ಪತ್ರೆಗೆ ಸೇರಬೇಕಾಯ್ತು) ನಮ್ಮ ಅನುಭವದಲ್ಲಿ ಯಾರಿಗೂ ಪೆಟ್ಟಾದುದಿಲ್ಲ. ಎಲ್ಲ ರಕ್ಷಣೆಯಲ್ಲೇ ಪರ್ವತಾರೋಹಣ ನಡೆಯುತ್ತದೆ. ಮೊದಲಿಗೆ ಭಯ ಹೋಗುವ ಸಲುವಾಗಿ ಸೊಂಟಕ್ಕೆ ಹಗ್ಗ ಹಾಕಿ ದೂಡುವುದೂ ಇದೆ ಎಂದವರು ಹೇಳುತ್ತಾರೆ.

ಈವರೆಗೆ ಆರೋಹಣವು ನಾವು ಸಾಮಾನ್ಯವಾಗಿ ಹೇಳುವ ಅರ್ಥದಲ್ಲಿ ರಿಜಿಸ್ಟರಾದ ಸಂಘಟಿತ ಸಂಸ್ಥೆ ಅಲ್ಲ. ಕೆಲವು ಕಾಲೇಜಿನವರು ಸೇರಿದಂತೆ ಹಲವರು ಸಲಹೆ ಪಡೆದು ಹೋಗಿದ್ದಾರೆ. ಜಿಲ್ಲೆಯಲ್ಲಿ ಒಂದುನೂರು ಮಂದಿ ತಂಡದ ಚಟುವಟಿಕೆಗಳಲ್ಲಿ ಪಾಲ್ಗೊಂಡವರಿದ್ದಾರೆ. ಮೊದಲ ವರ್ಷ ಸದಸ್ಯತನ ಸಂಗ್ರಹಿಸಿದ್ದರಂತೆ. ಆದರೆ ಆ ದಾರಿಯಲ್ಲಿ ಹೋಗಿ ರಿಜಿಸ್ಟರಾದಲ್ಲಿ ಆಸಕ್ತಿ ಸಾಯುತ್ತದೆ ಎಂದು ಅಶೋಕವರ್ಧನರು ಬಹು ಬೇಗ ಅರಿತುಕೊಂಡರು. ಈಗ ಅವರ ಮಾತಿನಲ್ಲೇ ಹೇಳುವುದಾದರೆ – ಏನಾದರೂ ಒಂದು ಆಗಬೇಕಲ್ಲಾ ಎಂದು ಅವರು ನಾಯಕ, (ಭಾಗವಹಿಸುವ) ಇತರರು (ಆಜೀವ) ಸದಸ್ಯರು.

ಯಾವ ಚಟುವಟಿಕೆ ಮಾಡದಿದ್ದರೂ ಅಧ್ಯಕ್ಷ, ಕಾರ್ಯದರ್ಶಿ, ಕಾರ್ಯಕಾರಿ ಸಮಿತಿ ಮುಂತಾಗಿ ಇದ್ದಿದ್ದರೆ ಪರ್ವತಾರೋಹಣ ಸಪ್ತಾಹಕ್ಕೆ ಸರಕಾರದ ಸಹಾಯವನ್ನು ದೊರಕಿಸಿಕೊಳ್ಳಬಹುದಿತ್ತು. ಆದರೆ ಸರಕಾರಿ ಯಂತ್ರಕ್ಕೆ ಇದೆಲ್ಲ ಹೇಗೆ ಅರ್ಥವಾಗಬೇಕು? ಆರೋಹಣದವರಿಗೆ ಸರಕಾರಿ ಸಹಾಯ ಗಗನ ಕುಸುಮವಾಯ್ತು. ಚಿಂತಿಲ್ಲ, ಚಟುವಟಿಕೆಗಳ ಪ್ರಚಾರ ಪರ್ವತಾರೋಹಣದ ಪ್ರಚಾರ ಎಂದು ತಿಳಿದು, ಈಗ ಸಪ್ತಾಹವನ್ನು ಆಚರಿಸುತ್ತಿದ್ದಾರೆ. ಎಷ್ಟು ಮಂದಿ ಯುವಕರನ್ನು ಕಾಲೇಜು ವಿದ್ಯಾರ್ಥಿಗಳನ್ನು ಇದು ತಟ್ಟುತ್ತದೆ ನೋಡಬೇಕು.

(ಮುಂದುವರಿಯಲಿದೆ)