“ಹೆಗ್ಗೋಡಿನಲ್ಲಿ ಮತ್ತೆ ಮೂರು ನಾಟಕಗಳ, ನಾಲ್ಕು ಪ್ರದರ್ಶನ” ಎಂದು ಅಭಯ (ಮಗ) ನಮಗೆ ಕೊಟ್ಟದ್ದು ವೈಯಕ್ತಿಕ ಸೂಚನೆ ಮಾತ್ರ. ಆದರೆ ನಾನು, ದೇವಕಿ ಎಂದಿನಂತೆ ಅದನ್ನು ಆಮಂತ್ರಣವಾಗಿಯೇ ಗ್ರಹಿಸಿ, ಮಂಗಳೂರಿನಿಂದ ಬಸ್ಸು ಹಿಡಿದು ೧೬-೭-೧೭ರ ಮಧ್ಯಾಹ್ನಕ್ಕೇ ನೀನಾಸಂ ಸೇರಿಕೊಂಡೆವು. ಅಲ್ಲಿನ ಪ್ರದರ್ಶನಗಳನ್ನು ದಾಖಲೀಕರಣಕ್ಕೊಳಪಡಿಸುವ ಯೋಜನೆಯಂತೆ, ಅಭಯ ಅವನ ಕ್ಯಾಮರಾ ತಂಡದೊಡನೆ ಹಿಂದಿನ ರಾತ್ರಿ ಬೆಂಗಳೂರು ಬಿಟ್ಟು, ಅಂದೇ ಬೆಳಿಗ್ಗೆ ಅಲ್ಲಿಗೆ ತಲಪಿದ್ದ. ಅವನಿಗೆ ನೀನಾಸಂ ಕೊಟ್ಟಿದ್ದ ವಸತಿ ವ್ಯವಸ್ಥೆಗೆ ನಾವೂ ಸೇರಿಕೊಂಡೆವು.

ಅಭಯನ ತಂಡಕ್ಕೆ ಎಂದಿನಂತೆ ವಸತಿಯಾಗಿ ಒದಗಿದ್ದು ಅದೇ ನೀನಾಸಂ ವಠಾರದ ಒಂದು ಮೂಲೆಯ ಮೂರು ಕೊಠಡಿಗಳ, ಸಾದಾಸೀದಾ ಹಳೆಗಾಲದ ರಚನೆ. ಹಿಂದೆ ಯು.ಆರ್. ಅನಂತಮೂರ್ತಿಯವರು ನೀನಾಸಂನ ವಾರ್ಷಿಕ ಸಂಸ್ಕೃತಿ ಶಿಬಿರಗಳ ನಿರ್ದೇಶನ ಸೇರಿಸಿದಂತೆ ಇಲ್ಲಿನ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾದಾಗೆಲ್ಲಾ ಅವರಿಗೆ ಇದೇ ವಸತಿಯಾಗಿ ಒದಗುತ್ತಿತ್ತಂತೆ. ಹಾಗಾಗಿ ಹೆಗ್ಗೋಡಿನ `ಜನಪದ’ದಲ್ಲಿ ಅದು `ಅಜ್ಜರ ಮನೆ’ ಎಂದೇ ಖ್ಯಾತವಾಗಿದೆ. ಇಂದು ಊರೂರೆಲ್ಲಾ ಕವಿಮನೆಗಳು (ಕುವೆಂಪು, ಕಾರಂತ, ಬೇಂದ್ರೆ, ಗೋವಿಂದಪೈ, ಆರ್ಕೆ ನಾರಾಯಣ್ ಇತ್ಯಾದಿ), ಏನೂ ಇಲ್ಲದಲ್ಲಿ ಮಹಾ ಆದರ್ಶಗಳ (ಬಸವ, ಕನಕ, ಗಾಂಧಿ, ಅಂಬೇಡ್ಕರ್, ನೆಹರೂ, ಹಜ್, ಸಮುದಾಯ ಇತ್ಯಾದಿ) ಹೆಸರಿನಲ್ಲಿ ಭಯಂಕರ ಭವನಗಳು ಸಾರ್ವಜನಿಕ ವೆಚ್ಚದಲ್ಲಿ ಮೇಲೆದ್ದು, ನಿಕೃಷ್ಟ `ಭಜನಾಗೃಹ’ಗಳಾಗುತ್ತಿರುವುದನ್ನು ಕಾಣುತ್ತಲೇ ಇದ್ದೇವೆ.

ಆದರೆ ನೀನಾಸಂನ ಮೂಲಪುರುಷ ಕೆವಿ ಸುಬ್ಬಣ್ಣ, ಮತ್ತವರನ್ನು ವೈಚಾರಿಕವಾಗಿಯೂ ಅನುಸರಿಸಿ ನಡೆದಿರುವ (ಅವರ ಮಗ) ಕೆವಿ ಅಕ್ಷರ, ಜೀವವಿಲ್ಲದ ಸ್ಮರಣಿಕೆಗಳನ್ನು (ಮ್ಯೂಸಿಯಂ) ಬುದ್ಧಿಪೂರ್ವಕವಾಗಿ ನಿರಾಕರಿಸಿದವರು. ಹಾಗಾಗಿ ಅನಂತಮೂರ್ತಿಯವರ ಕಾಲಾನಂತರ `ಅಜ್ಜರ ಮನೆ’ ಯಾವುದೇ ವಿಶೇಷಾಲಂಕಾರ ಅಥವಾ ಹಿಂಸಾಪೂಜ್ಯತೆಗಳಿಲ್ಲದೆ ನಮಗೊದಗಿತ್ತು. ಅನಂತಮೂರ್ತಿ ಎಂದಲ್ಲ, ನೀನಾಸಂನ ವಠಾರದಲ್ಲಿ ಸ್ವತಃ ಸುಬ್ಬಣ್ಣನವರ ಕುರಿತೇ ನೀವು ಯಾವುದಾದರೂ `ವೈಭವೀಕೃತ ಗೋರಿ’ ಹುಡುಕಿದರೆ ನಿರಾಶರಾಗುತ್ತೀರಿ. ಎಲ್ಲೋ ಕೆಲವು ಖಾಲಿಗೋಡೆಗಳಲ್ಲಿ, ಸರಳವಾಗಿ ಒಂದೆರಡು ಪಟಗಳನ್ನು ಬಿಟ್ಟರೆ ಬೇರೇನೂ ಕಾಣಲಾರಿರಿ. ಹಾಗೆಂದು ಎಲ್ಲ ಮರೆತು ನಡೆದರೇ ಎಂದು ಯಾರೂ ಭಾವಿಸಬೇಕಿಲ್ಲ. ಶಿವರಾಮ ಕಾರಂತ ರಂಗಮಂದಿರ, ರಂಗಶಿಕ್ಷಣ ಕೇಂದ್ರ ಮತ್ತು ಆ ವಿದ್ಯಾರ್ಥಿಗಳ ವಸತಿ ಸಮುಚ್ಚಯ, ಪುಟ್ಟ ಸ್ವಾಗತ ಕಛೇರಿ, ಅಕ್ಷರಪ್ರಕಾಶನ, ಗ್ರಂಥಾಲಯ, ಆಹಾರ್ಯ, ಅತಿಥಿಗೃಹಗಳು ಎಲ್ಲವೂ ಹಿಂದಿನ ನೆನಪುಗಳನ್ನು ಗಾಢವಾಗಿ ಹೊತ್ತು, ಇಂದಿನ ದಿನಗಳನ್ನು ತುರುಸಿನಿಂದ ಅನುಭವಿಸಿ, ಅವರ ಇನ್ನಷ್ಟು ಕನಸುಗಳಿಗೆ ದಿಗಂತವನ್ನು ವಿಸ್ತರಿಸುವುದು ಸಾಮಾನ್ಯವೇ?! ಯಾವುದೋ ಮಾತಿನ ನಡುವೆ ಅಕ್ಷರ ಗೇಲಿಯ ನಗುವಿನೊಡನೆ “ಯಾರೋ ಸುಬ್ಬಣ್ಣನ ನೆನಪಿಗೆ ಒಂದು ಮೂರ್ತಿಯನ್ನೂ ನಿಲ್ಲಿಸಲಿಲ್ಲವೇ ಎಂದು ವಿಚಾರಿಸಿದ್ದರು” ಎಂದು ಹೇಳಿದ್ದು ಅವರ ನಿಲುವನ್ನು ನನಗೆ ನಿಸ್ಸಂದಿಗ್ಧವಾಗಿಸಿತು. ಆ ಉದಾತ್ತತೆಯ ಭಾಗವಾಗಿಯೇ ನೀನಾಸಂ ತನ್ನ ರಂಗಕರ್ಮಗಳ (ನಾಟಕ, ರಂಗಗೀತೆ, ವಿಶೇಷ ಸಂದರ್ಶನ, ಭಾಷಣ ಇತ್ಯಾದಿ) ದಾಖಲೀಕರಣ ಮತ್ತು ಉಚಿತ ಪ್ರಸರಣದ ಸಂಚಿ ಫೌಂಡೇಶನ್ ವ್ಯವಸ್ಥೆಯಲ್ಲಿ ಪೂರ್ಣ ತೊಡಗಿಕೊಂಡಿದೆ.

೨೦೦೫ರ ಜುಲೈ ಹದಿನಾರರಂದು ಕೆವಿ ಸುಬ್ಬಣ್ಣ ತೀರಿಕೊಂಡಿದ್ದರು. ಅದನ್ನು ನೆಪವಾಗಿಟ್ಟುಕೊಂಡು, ನೀನಾಸಂ ಕಳೆದ ಹನ್ನೆರಡೂ ವರ್ಷಗಳಲ್ಲಿ ಹಲವು ವಿಶಿಷ್ಟ ಕಲಾಪಗಳನ್ನು ನಡೆಸಿಕೊಂಡು ಬಂದಿದೆ. ಅದು ಈ ವರ್ಷವೂ ನಡೆಯುವುದಿತ್ತು. ಯೋಜನೆಯಿಲ್ಲದೆ ಬೆಳಗ್ಗಿನ ಬಸ್ಸು ಹಿಡಿದು ಹೋಗಿದ್ದ ನಾವು ನಿಜದ ಊಟವನ್ನು ನಗರದ ಹೋಟೆಲಿನಲ್ಲಿ ಮುಗಿಸಿ, ಹೆಗ್ಗೋಡಿಗೆ ಅಪರಾಹ್ನ ತಲಪಿದರೂ `ಪುಣ್ಯ ತಿಥಿ’ಯ ಭರ್ಜರಿ ಭಕ್ಷ್ಯಗಳೇ ಸಿಕ್ಕ ಹಾಗಾಯ್ತು!

ಸುಬ್ಬಣ್ಣ ನೀನಾಸಂ ಚಟುವಟಿಕೆಗಳನ್ನು ಕೇವಲ ಪ್ರದರ್ಶನ ಕಲೆಗಳ (ನಾಟಕ, ಸಿನಿಮಾ, ಗಾಯನ) ಚೌಕಟ್ಟಿನಲ್ಲಿಟ್ಟವರಲ್ಲ. ಹಾಗಾಗಿ ಇಂದು ಅದು ತನ್ನ ಪರಿಸರ ಮತ್ತು ಜನಪದವನ್ನು ರಾಜ್ಯ ದೇಶಗಳ ಮಿತಿ ಹರಿದು, ವಿಶ್ವತೋಮುಖಿಯಾಗಿಸುವ ಪಣ ತೊಟ್ಟು, ಏಳು ದಶಕಗಳಿಗೂ ಮಿಕ್ಕು ನಡೆಯುತ್ತ ಬಂದಿದೆ. ಸೂಕ್ಷ್ಮದಲ್ಲಿ ಹೇಳುವುದಿದ್ದರೆ, ಇದಕ್ಕೆ ವರ್ಷಕ್ಕೊಂದು ಸಂಸ್ಕೃತಿ ಶಿಬಿರವೋ ನಾಟಕಗಳ ತಿರುಗಾಟವೋ ಸಾಕಾಗದೆಂದೇ ಮನಗಂಡು, ಪ್ರಕಾಶನ (ಅಕ್ಷರ ಪ್ರಕಾಶನ), ಸಾಹಿತ್ಯಕ ನಿಯತಕಾಲಿಕ (ಮೊದಲು ಸಾಕ್ಷಿ, ಈಗ ಮಾತುಕತೆ), ಶಾಲಾ ಕಾಲೇಜುಗಳಲ್ಲಿ ವಿವಿಧ ಕಮ್ಮಟಗಳನ್ನೆಲ್ಲ ನಡೆಸುತ್ತಲೂ ಬಂದಿದೆ. ಅದೇ ರೀತಿಯಲ್ಲಿ ಸುಬ್ಬಣ್ಣನವರ ಸ್ಮೃತಿ ದಿನವನ್ನು ಕಳೆದ ಹನ್ನೆರಡೂ ವರ್ಷಗಳಲ್ಲಿ ಹೆಗ್ಗೋಡಿನ ಹತ್ತೂ ಸಮಸ್ತರನ್ನೊಳಗೊಂಡು ತಯಾರಾಗುವ ಒಂದು ನಾಟಕ ಪ್ರದರ್ಶನ ಮತ್ತು ಒಂದು ವಿಶೇಷ ಭಾಷಣವನ್ನು ಆಯೋಜಿಸುತ್ತಲೇ ಬಂದಿದ್ದಾರೆ.

ಈಚಿನ ದಿನಗಳಲ್ಲಿ ಕಸಕೊಳಚೆಯ ನಗರಗಳನ್ನು ಬಿಡಿ, ಪ್ರಾಕೃತಿಕ ಸಮೃದ್ಧಿಯ ಖಾಯಂ ನೆಲೆಗಳೆಂದೇ ಭ್ರಮಿಸಿದ್ದ ಹಳ್ಳಿ ಮೂಲೆಗಳಲ್ಲೂ ನೀರು ಎಲ್ಲರನ್ನೂ ಕಾಡುವ ವಿಷಯವಾಗಿದೆ. ಕಳೆದ ಮತ್ತು ಈ ವರ್ಷದ ಮಳೆಗಾಲದ ವಿಪರೀತವಂತೂ ಗಾಯದ ಮೇಲೆಳೆದ ಬರೆಯಾಗಿದೆ. ಸುಮಾರು ಹದಿನೆಂಟು ವರ್ಷಗಳ ಹಿಂದೆ ನಾನು ಸಹಜ ಸಸ್ಯ ಪುನರುತ್ಥಾನ ಕ್ಷೇತ್ರವಾಗಿ – ಅಭಯಾರಣ್ಯ ತೊಡಗಿದ್ದು ಈ ಜಾಲತಾಣದ ಬಹುತೇಕ ಓದುಗರಿಗೆ ತಿಳಿದೇ ಇದೆ. ಅದಕ್ಕೆ ಪ್ರೇರಣೆಯಾದ ಮೂಡಬಿದ್ರೆಯ ಎಲ್.ಸಿ.ಸೋನ್ಸ್, ಅದರ ಔಪಚಾರಿಕ ಪ್ರಾರಂಭದ ಮಾತುಗಳಾಡಿದ ಶ್ರೀಪಡ್ರೆಯಾದಿ ಮಿತ್ರರೆಲ್ಲ ಹಸಿರುಳಿದರೆ ನೀರುಳಿದಂತೇ, ಜಲ ಸಂರಕ್ಷಣೆ ಆದ್ಯತೆಯ ನೆಲೆಯಲ್ಲಾಗಬೇಕೆಂದೆಲ್ಲಾ ಹೇಳಿದ್ದು ಸ್ವಾನುಭವದ ಗಟ್ಟಿ ನೆಲದಿಂದ. ಇಂಥಾ ಜಲಸಂರಕ್ಷಣೆಯ ಇನ್ನೊಂದೇ ಮುಖ – ಹೊಳೆ ಪುನರುಜ್ಜೀವನ. ಅದನ್ನು ಈಚೆಗೆ ಹೆಗ್ಗೋಡು ವಲಯವೂ ಕೈಗೊಂಡಿರುವುದನ್ನು ನಾವು ಅಲ್ಲಿದ್ದಾಗಲೇ ಕೆಲವು ಮಿತ್ರರು ಮನಗಾಣಿಸಿದರು. ಶರಾವತಿ ನದಿಯ ಒಂದು ಪುಟ್ಟ ಉಪನದಿ – ದ್ಯಾವಾಸ. ಇದು ಹೊನ್ನೇಸರ, ಕಿಲಗೇರಿ, ಗಡಿಕಟ್ಟೆ, ಉಂಬೆಸರ, ಕೆಳಮನೆ, ಕಲ್ಕೊಪ್ಪ ಎಂದಿತ್ಯಾದಿ ಹತ್ತೆಂಟು ಕೆರೆಗಳ ಕೋಡಿ ಪೋಷಿತ ಕೂಸು. ಅದಿಂದು ಬತ್ತಿಹೋಗಿದೆ. ಬೆಂಗಳೂರು ನೆಲೆಯ ಕಾಕಾಲ್ ಫೌಂಡೇಶನ್ನಿನ ನೇತೃತ್ವದಲ್ಲಿ ಈಗ ದ್ಯಾವಾಸ ಹೊಳೆಯ ಪುನರುತ್ಥಾನದ ಪ್ರಯತ್ನ ನಡೆದಿದೆ. ಮುಖ್ಯ ಕೆರೆಗಳ ಹೂಳೆತ್ತಿ, ಹೊಳೆಪಾತ್ರ ಮುಕ್ತಗೊಳಿಸುವ ಜನ-ಸಹಕಾರದ ಈ ಯೋಜನೆ ರಾಜಸ್ತಾನ, ಮಹಾರಾಷ್ಟ್ರದ ಜಲಸಂರಕ್ಷಣೆಯ ಭಗೀರಥ ಯತ್ನಗಳಿಗೆ ಸಾಟಿಯಾಗಲಿ ಎಂದು ಹಾರೈಸುತ್ತೇನೆ.

ಹೀಗೆ ಜಲಸಂರಕ್ಷಣೆಯ ಅಗತ್ಯ ಮತ್ತು ಪ್ರಯತ್ನಗಳಿಗೆ ಹೆಚ್ಚಿನ ಕುಮ್ಮಕ್ಕು ಕೊಡುವಂತೆ ಸುಬ್ಬಣ್ಣ ಸ್ಮೃತಿ ಭಾಷಣಕ್ಕೆ ಎ.ಆರ್. ಶಿವಕುಮಾರ್ ಎನ್ನುವವರನ್ನು ಕರೆಸಿದ್ದರು. ವೃತ್ತಿತಃ ಬೆಂಗಳೂರಿನಲ್ಲಿ ನೆಲೆಸಿರುವ ಶಿವಕುಮಾರ್, ಔಪಚಾರಿಕ ಕಲಿಕೆಯ ಮಾನಕದಲ್ಲಿ ಮೈಸೂರು ವಿವಿನಿಲಯದ ಬಿ.ಇ ಪದವಿ ಗಳಿಸಿ, ಐ.ಐ.ಎಸ್.ಸಿ ಮತ್ತು ಭಾರತೀಯ ವಿದ್ಯಾಭವನಗಳಲ್ಲಿ ಉನ್ನತ ವ್ಯಾಸಂಗವನ್ನೂ ಮಾಡಿದ್ದಾರೆ. ಹಾಗೇ ವೃತ್ತಿ ಮಾನಕದಲ್ಲೂ ಬೆಂಗಳೂರಿನ ಐಐಎಸ್ಸಿಯಲ್ಲಿ ಸಂಶೋಧಕ, ವೈಜ್ಞಾನಿಕ ಸಲಹೆಗಾರನಾಗಿಯೂ ಇದ್ದಾರೆ. ಆದರೆ ಇವರದು ಕೇವಲ ಉಪದೇಶ ಪಾಂಡಿತ್ಯವಲ್ಲ; ತಾನು ಹೇಳಿದ್ದನ್ನು ತನ್ನ ಮನೆಯಲ್ಲೂ ಸಂಪರ್ಕಕ್ಕೆ ಬಂದೆಲ್ಲರಲ್ಲೂ ಅನುಷ್ಠಾನಿಸಿ ಯಶಸ್ಸನ್ನು ಕಾಣುತ್ತಲೇ ಬಂದಿದ್ದಾರೆ. ಅವಕ್ಕೆ ಪೂರಕವಾಗಿ ಹಲವು ಸರಳ ಯಂತ್ರ, ತಂತ್ರಾಂಶಗಳನ್ನೂ ಸಂಶೋಧಿಸಿ, ಸಾರ್ವಜನಿಕಕ್ಕೆ ಮುಕ್ತಗೊಳಿಸಿದ್ದಾರೆ. ಇವೆಲ್ಲಕ್ಕಿಟ್ಟ ಚಂದದ ಮುಗುಳಿಯಂಥಾ ಮಾತು – ಶಿವಕುಮಾರ್ ಕಳೆದ ಸುಮಾರು ಎರಡೂವರೆ ದಶಕಗಳಿಂದ ತಮ್ಮ ಮನೆಯ ಎಲ್ಲಾ ನೀರಿನಗತ್ಯಗಳಿಗೆ ಯಾವುದೇ ಬಾವಿ ತೆಗೆಯದೆ, ಬೆಂಗಳೂರು ನೀರು ಸರಬರಾಜು ಮಂಡಳಿಯ ಸಂಪರ್ಕವನ್ನೂ ಪಡೆಯದೆ, ಕೇವಲ ಮಳೆನೀರನ್ನು ಅವಲಂಬಿಸಿದ್ದಾರೆ! ಪ್ರಜಾಪ್ರಭುತ್ವದಲ್ಲಿ ಆಡಳಿತಾಂಗಗಳ ಎಷ್ಟೋ ನಿರ್ಧಾರಗಳು ತಪ್ಪು ಎಂದು ಕಂಡಾಗ ಗೊಣಗುವುದರಿಂದ ತೊಡಗಿ, ಭಾರೀ ಮೆರವಣಿಗೆ ಮೂಲಕ ಸಭೆ ನಡೆಸಿ ಮೇಜು ಗುದ್ದುವವರೆಗಿನ ಪ್ರತಿಭಟನೆಗಳನ್ನು ತುಂಬಾ ಜನ ಮಾಡುತ್ತಾರೆ. ಆದರೆ ಯೋಗ್ಯತೆ ಮತ್ತು ಪ್ರಾತಿನಿಧ್ಯಗಳಿಂದ ವ್ಯವಸ್ಥೆಯ ಒಳಗೇ ಸೇರಿ, ತಪ್ಪುಗಳನ್ನು ನೇರ್ಪುಗೊಳಿಸಿ, ವಿಸ್ತೃತ ಸಾಮಾಜಿಕ ಹಿತವನ್ನು ಸಾಧಿಸುವ ಧೋರಣೆಗಳನ್ನೇ ರೂಪಿಸುವಲ್ಲಿ ಶಿವಕುಮಾರ್ ನಿಜಕ್ಕೂ ಪ್ರಭಾವಿಯಾಗಿದ್ದಾರೆ. ಇವರ ಇನ್ನೂ ಹೆಚ್ಚಿನ ಪರಿಚಯ, ಚಿತ್ರ, ಭಾಷಣಗಳನ್ನು ಅಂತರ್ಜಾಲ ಧಾರಾಳ ಕೊಡುತ್ತಿರುವುದರಿಂದ (ಅಂತರ್ಜಾಲದಲ್ಲಿ arshivakumar ಹುಡುಕಿ ನೋಡಿ) ನಾನು ಹೇಳ ಹೋಗುವುದಿಲ್ಲ.

ನೀನಾಸಂ ವಠಾರದೊಳಗೆ ನಡುವಿಗೊಂದು ತಗ್ಗು ನೆಲ, ಸುತ್ತಲೂ ವಿಸ್ತಾರ ಜಗುಲಿ ಇರುವ ಬಯಲು ರಂಗಮಂದಿರವಿದೆ. ಯಾವುದೇ ಕಲಾಪದ ಅಗತ್ಯಕ್ಕೆ ತಕ್ಕಂತೆ ವೇದಿಕೆ ಅಥವಾ ರಂಗ ಮತ್ತು ಪ್ರೇಕ್ಷಾಂಗಣವನ್ನು ಇಲ್ಲಿ ಎಲ್ಲೂ ಸುಲಭದಲ್ಲಿ ಅಳವಡಿಸಿಕೊಳ್ಳಬಹುದು. ಅಲ್ಲೇ ಶಿವಕುಮಾರ್ ಅವರ ಸ್ಲೈಡ್ ಪ್ರಸ್ತುತಿಯೊಂದಿಗಿನ ಭಾಷಣ, ಸಂವಾದ ಸುಬ್ಬಣ್ಣ ಸ್ಮೃತಿಯ ಮೊದಲ ಕಲಾಪವಾಗಿ ನಡೆಯಿತು. ಊರು ಪರವೂರುಗಳಿಂದ ಜನ ಬಂದು, ಭವನ ಕಿಕ್ಕಿರಿದು ತುಂಬಿ, ಕಲಾಪವನ್ನು ಮರವಟ್ಟು ಗ್ರಹಿಸಿ, ಚರ್ಚೆಯನ್ನು ಅರ್ಥಪೂರ್ಣಗೊಳಿಸಿದ ಪರಿ ಬೆರಗು ಹುಟ್ಟಿಸುವಂತಿತ್ತು. ಸುಬ್ಬಣ್ಣ ಸ್ಮೃತಿಯ ಔಪಚಾರಿಕ ಉದ್ಘಾಟನೆಯನ್ನು ಕೇವಲ ದೀಪೋಜ್ವಲನದ ಮೂಲಕ (ಗಮನಿಸಿ – ಮಾತಿಲ್ಲ!) ಕಡಿದಾಳು ಶಾಮಣ್ಣನವರು ಮಾಡಿದ್ದರು. ನೀನಾಸಂ ರಂಗಶಾಲೆಯ ಹಿರಿಯ ಗುರುಗಳಾದ ವೆಂಕಟ್ರಮಣ ಐತಾಳರು ಶಿವಕುಮಾರರನ್ನು ಚುಟುಕದಲ್ಲಿ ಸಭೆಗೆ ಪರಿಚಯಿಸಿದರು. ಶಿವಕುಮಾರ್ ಸುಮಾರು ಒಂದೂವರೆ ಗಂಟೆಗಳ ಕಾಲ ಮಾತಾಡಿದರು, ಸಂಶಯಗಳಿಗೆ ಉತ್ತರವಾದರು. ಇಷ್ಟು ದೂರ ಬಂದ ತನ್ನ ಸಾಮಾಜಿಕ ಉಪಯುಕ್ತತೆ ಊರಿನವರಿಗೆ (ಉಚಿತವಾಗಿ) ಹೆಚ್ಚು ದೊರಕುವಂತೆ, ಮರುದಿನವಿಡೀ ನೀನಾಸಂ ಸ್ವಾಗತ ಕಚೇರಿಯಲ್ಲಿ ತನ್ನ ಲಭ್ಯತೆಯನ್ನೂ ಮುಕ್ತವಾಗಿ ಘೋಷಿಸಿಕೊಂಡರು. ಕೊನೆಯಲ್ಲಿ ಕೆವಿ ಅಕ್ಷರರ ಸಂಕ್ಷಿಪ್ತ ವಂದನಾರ್ಪಣೆ. ಸಭಾಕಲಾಪದ ತಾಜಾ ಅನುಭವವನ್ನೇ ಸಂಚಿ ಫೌಂಡೇಶನ್, ತನ್ನ ಸಮೃದ್ಧ ಜಾಲತಾಣದಲ್ಲಿ ಸದ್ಯದಲ್ಲೇ ಸಾರ್ವಜನಿಕರಿಗೆ ಮುಕ್ತವಾಗಿ ಬಡಿಸಲಿರುವುದರಿಂದ ನಾನು ಹೆಚ್ಚು ಬರೆದು ನಿಮ್ಮ ರುಚಿಗೆಡಿಸುವುದಿಲ್ಲ. ನೀನಾಸಂ ಬಂದಷ್ಟೂ ಜನಗಳಿಗೆ ಗಟ್ಟಿ ಉಪಾಹಾರ ಕೊಟ್ಟು, ಸ್ಮೃತಿ ಕಲಾಪದ ಇನ್ನೊಂದೇ ಕಲಾಪ – ಇಳಿ ಸಂಜೆಯ ನಾಟಕ, ಪಕ್ಕದ ಶಿವರಾಮ ಕಾರಂತ ರಂಗಮಂದಿರಲ್ಲಿದೆ ಎಂದೂ ನೆನಪಿಸಿತು.

ಕನ್ನಡದ ಹಳೆತಲೆಯ ಕವಿ, ಲೇಖಕರು – ಮಾಸ್ತಿ, ಡಿವಿಜಿಯಾದಿಗಳಿಂದ ತೊಡಗಿ ಈಚಿನ ನಿಸಾರ್ ಅಹಮದ್, ಪ್ರಸನ್ನಾದಿಗಳು ಇಂಗ್ಲಿಷಿನ ಶೇಕ್ಸ್‍ಪಿಯರನನ್ನು ಬಹುತರದಲ್ಲಿ ಕನ್ನಡಿಸಿರುವುದು ನಮಗೆ ತಿಳಿದೇ ಇದೆ. ಕಡಿಮೆ ಪ್ರಚಾರದ ಶ್ರೀಕಂಠೇಶ ಗೌಡರಂಥವರಿಂದ ಹಿಡಿದು ತೀರಾ ಈಚಿನವರೆಗೂ ಅನೇಕರು ಆತನ ನಾಟಕಗಳಿಗೆ ಭಾರತೀಯ ಐತಿಹಾಸಿಕ ಆಯಾಮ ಕೊಟ್ಟದ್ದೂ ಆಗೀಗ ಕೇಳಿದ್ದೋ ಕಂಡದ್ದೋ ಇದೆ. ಇನ್ನು ಆ ಕೃತಿಗಳ (ಶೇಕ್ಸ್‍ಪಿಯರ್ ಕವನಗಳನ್ನೂ ಬರೆದಿದ್ದಾನೆ) ತತ್ವವನ್ನು ತಮ್ಮದೇ ಕಲ್ಪನೆಯ ವಸ್ತುಗಳ ಮೇಲೆ ಆರೋಪಿಸಿ ನಾಟಕವೋ ಇನ್ನೊಂದೋ ಹೊಸೆದವರೂ ಸಾಕಷ್ಟು ಇದ್ದಾರೆ. ಈ ತೆರನ ಪುನರ್ರೂಪಣದಲ್ಲಂತೂ ಹದಿನೈದನೇ ಶತಮಾನದ ಶೇಕ್ಸ್‍ಪಿಯರ್ ಕಾಲದ ಗಡಿಯನ್ನೂ ಮೀರಿ ಬೆಳೆದದ್ದನ್ನು, ಸಾರ್ವತ್ರೀಕರಣ ಅಥವಾ ಸಾರ್ವಕಾಲಿಕ ಎನ್ನುವ ಮೌಲ್ಯಗಳನ್ನು ಎತ್ತಿ ತೋರಿಸುವಂತಾದ್ದನ್ನು ನಾವು ಗಮನಿಸಬಹುದು. ಅಂಥಾ ಒಂದು ನಾಟಕ, ಹೆಗ್ಗೋಡು ಊರವರ ಸುಬ್ಬಣ್ಣ-ಪ್ರೀತಿಯ ದ್ಯೋತಕದಂತೆ, ಸ್ಮೃತಿಯ ಎರಡನೇ ಕಲಾಪವಾಗಿ ಮುಸ್ಸಂಜೆ ಪ್ರದರ್ಶನಗೊಂಡಿತು.

ನೀನಾಸಂನ ಇನ್ನೊಂದು ಆಧಾರ ಸ್ತಂಭ – ಟಿ.ಪಿ.ಅಶೋಕ, ಪ್ರದರ್ಶನಕ್ಕೂ ಮುನ್ನ ಅಂದಿನ ನಾಟಕದ ಔಚಿತ್ಯವನ್ನು ಸಂಕ್ಷಿಪ್ತವಾಗಿ ಪರಿಚಯಿಸಿದರು. ಶೇಕ್ಸ್‍ಪಿಯರ್ ಬಹುಮುಖದ ಕನ್ನಡೀಕರಣದ ಪ್ರಯತ್ನಗಳು ಇಪ್ಪತ್ತನೇ ಶತಮಾನದ ಆದಿಭಾಗದಲ್ಲೇ ನಡೆದಿದ್ದವು. ಅವುಗಳಲ್ಲಿ ೧೯೨೦ರ ಸುಮಾರಿಗೆ ಬಂದ ಗದಿಗಯ್ಯ ಹುಚ್ಚಯ್ಯ ಎನ್ನುವವರ – ತ್ರಾಟಿಕಾ ನಾಟಕ, ಇನ್ಯಾರೋ ಗೋಂದಪಲ್ಲಿಯವರು ಚಂಡೀ ಮದಮರ್ದನ ಎಂದೂ ಕೆ. ಲಕ್ಷ್ಮಣರಾವ್ ಎಂಬುವವರೂ ಇನ್ನೇನೋ ಹೆಸರಿನಲ್ಲೂ ಕನ್ನಡಕ್ಕೆ ತಂದ ಶೇಕ್ಸ್‍ಪಿಯರ್ನ ನಾಟಕ – ಟೇಮಿಂಗ್ ಆಫ್ ದ ಶ್ರ್ಯೂ! ಅವುಗಳನ್ನೆಲ್ಲ ಕ್ರೋಢೀಕರಿಸಿ ತಾಟಕೀ ಪರಿಣಯ ಎಂಬ ಹೆಸರಿನಲ್ಲಿ, ತಮ್ಮದೇ ವಿನ್ಯಾಸ ರೂಪಿಸಿಕೊಂಡು, ಹೆಗ್ಗೋಡಿನ ಪ್ರದರ್ಶನಕ್ಕೆ ನಿರ್ದೇಶನವನ್ನೂ ಮಾಡಿದವರು, ಇಲ್ಲಿನದೇ ಹಳೆಯ ವಿದ್ಯಾರ್ಥಿ ಮಂಜುನಾಥ ಎಲ್.ಬಡಿಗೇರ್. ತಾಟಕೀ ಪರಿಣಯ, ಸುಮಾರು ಒಂದು ನೂರು ವರ್ಷಗಳ ಹಿಂದಿನ ಕನ್ನಡದ ಸಾಮಾಜಿಕ ಮೌಲ್ಯವನ್ನು ನಾಟಕೀಯವಾಗಿ ಕಟ್ಟಿಕೊಟ್ಟಿತು. ದಿನದಿನವೆನ್ನುವಂತೆ ಸಾಮಾಜಿಕ ಪರಿವರ್ತನೆ ತಳೆಯುತ್ತಿರುವ ವಿಶಿಷ್ಟ ರೂಪಗಳ ಮುನ್ನೆಲೆಯಲ್ಲಿ, ಮೂಲತಃ ಪ್ರಹಸನವೇ ಆದ ತಾಟಕೀ ಪರಿಣಯ, ಇನ್ನೂ ಹೆಚ್ಚಿನ ನಗೆಹೊನಲನ್ನೇ ಹರಿಸಿತು. ಆ ಹಳ್ಳಿ ಮೂಲೆಯ, ಕಾಣಲು ತೀರಾ ಸರಳ ಶಿವರಾಮ ಕಾರಂತ ರಂಗಮಂದಿರಕ್ಕೆ, ಸನಿಹದ ನಗರ ಸಾಗರದಿಂದ ತೊಡಗಿ, ಜೋಗ, ಶಿರಸಿ, ಶಿವಮೊಗ್ಗ, ಮಂಗಳೂರಿನ ದೂರಗಳಿಂದಲೂ ನಾಟಕಕ್ಕೆಂದೇ ಬಂದ ಜನ, ತಲಾ ರೂ ಐವತ್ತರ ಟಿಕೆಟ್ ಖರೀದಿಸಿ ಆಸನಗಳೆಲ್ಲ ಭರ್ತಿಯಾದ ಮೇಲೆ ನೆಲದ ಮೇಲೂ ಒಂದು ಕೊಸರು, ಗೊಣಗು ಇಲ್ಲದೆ ಕುಳಿತು ವೀಕ್ಷಿಸಿದ್ದು ನನಗಂತು ಇನ್ನೊಂದು ಬೆರಗು. ಇದೇ ನಾಟಕ ಮರುದಿನ ಕೇವಲ ದಾಖಲೀಕರಣಕ್ಕಾಗಿ ಪ್ರದರ್ಶನಗೊಳ್ಳಲಿದ್ದ ಕಾರಣ, ಸಂಚಿ ಬಳಗ ವಿರಾಮದಲ್ಲಿ ಪ್ರೇಕ್ಷಕ ಭಾವವನ್ನಷ್ಟೇ ಸಂಗ್ರಹಿಸಿಕೊಂಡಿತು. ಸಂಚಿಯ ದಾಖಲಾತಿಗಳೆಲ್ಲ ಹಲವು ಕ್ಯಾಮರಾ ಬಳಸಿದರೂ ಪ್ರಯೋಗಾಲಯದ ಶಿಸ್ತಿನ ಧ್ವನಿ ಬೆಳಕುಗಳನ್ನೇ ಗ್ರಹಿಸಿ ಅಂತಿಮವಾಗಿ ವೀಕ್ಷಕ ಪರಿಣಾಮದಲ್ಲಿ ರಂಗದ ಅನುಭವವನ್ನೇ ಕೊಡುತ್ತದೆ. ಹಾಗಾಗಿ ಅಂದು ಹೆಗ್ಗೋಡಿಗೆ ಬರಲಾಗದ ಬಹುದೊಡ್ಡ ಪ್ರೇಕ್ಷಕವರ್ಗ, ಮುಂದೆಯೂ ಏನೇನೋ ಕಾರಣಗಳಿಗೆ ನಿಗದಿತ ಸಮಯ ಮತ್ತು ಸ್ಥಳಗಳ ಹೊಂದಾಣಿಕೆ ಮಾಡಿಕೊಳ್ಳಲಾಗದೆ ಪರಿತಪಿಸುವ ರಸಿಕವರ್ಗದ ಕಾಯುವಿಕೆ ತಾಪವಾಗುವುದು ಬೇಡ, ತಪಸ್ಸಾಗಲಿ; ಕೆಲವೇ ದಿನಗಳಲ್ಲಿ ಈ ಒಂದೊಂದು ಪ್ರದರ್ಶನದ ಉತ್ತಮ ನಕಲು ಅಂತರ್ಜಾಲದ ಮೂಲಕ ನೀವು ಆಯ್ದ ತಾಣ, ಸಮಯದಲ್ಲಿ, ಅದೂ ಉಚಿತವಾಗಿ ಲಭ್ಯವಾಗಲಿದೆ. (ಸಂಚಿ ಟ್ರಸ್ಟಿನ ಜಾಲತಾಣಕ್ಕೆ Subscribe ಆಗಿ.)

ನೀನಾಸಂ ಹೆಗ್ಗೋಡಿನ ನೆಲೆ ಕಳಚಿಕೊಂಡು, ಶಾಖೋಪಶಾಖೆಗಳೊಡನೆ ರಾಜ್ಯವನ್ನು ವ್ಯಾಪಿಸಿಕೊಳ್ಳುವ ಮಹತ್ವಾಕಾಂಕ್ಷೆಯನ್ನು ಬಹುಶಃ ಎಂದೂ ಇಟ್ಟುಕೊಂಡದ್ದಿಲ್ಲ. ಹಾಗೇ ತನ್ನ ಚಟುವಟಿಕೆಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವ ಎಚ್ಚರದಲ್ಲಿ `ಕಾಲಕ್ಕೊಂದು ಕೋಲ’ ಎನ್ನುವಂತೆ ಯೋಜನಾರಹಿತ ಧೋರಣೆಗಳನ್ನು ತಳೆದದ್ದೂ ಇಲ್ಲ. ಇದಕ್ಕೆ ಪರೋಕ್ಷ ಉದಾಹರಣೆಯಾಗಿ, ಶಿವರಾಮ ಕಾರಂತರ ಒಂದು ಪ್ರಸಂಗ ನೆನಪಾಗುತ್ತದೆ. ಕಾರಂತರ ಯಕ್ಷ-ರೂಪಕವನ್ನು ನೋಡಿದವರ್ಯಾರೋ ಉದ್ದಕ್ಕೆ ಪತ್ರಿಸಿದರಂತೆ. ಅದರಲ್ಲಿ ಕಾರಂತರು ಮಾಡಿದ್ದೇನು ಎನ್ನುವುದನ್ನು ಬಿಟ್ಟು, ಹೇಗೆ ಮಾಡಬೇಕಿತ್ತು ಎಂದು ದೊಡ್ಡ ಪಟ್ಟಿಯೇ ಇತ್ತಂತೆ. ಯಾವುದೇ ಪತ್ರಕ್ಕೆ ಠಪ್ಪೆಂದು ಉತ್ತರಿಸುವ ಶಿಸ್ತಿನ ಕಾರಂತರು, ನಿರ್ಭಾವದಲ್ಲಿ ಅಂಚೆ ಕಾರ್ಡಿನಲ್ಲಿ ಒಂದೇ ಸಾಲು ಬರೆದರಂತೆ – “ಧನ್ಯವಾದಗಳು. ನೀವೇ ಮಾಡಿನೋಡಿ!”

ನೀನಾಸಂ ತನ್ನ ಖ್ಯಾತಿಯ ಸ್ವಾಮ್ಯಕ್ಕೆ ಹೆಣಗಿದ್ದೂ ಇಲ್ಲ, ಚಟುವಟಿಕೆಗಳ ವಿಕೇಂದ್ರೀಕರಣವನ್ನು ನಿರಾಕರಿಸಿದ್ದೂ ಇಲ್ಲ. ಇಲ್ಲಿಂದ ಕಳಚಿಕೊಂಡ ವ್ಯಕ್ತಿಗಳು (ಒಂದು ಉದಾಹರಣೆ – ನೀನಾಸಂ ಸತೀಶ್) ಸ್ವೇಚ್ಛೆಯ ಮೇಲೆ ತಮ್ಮ ಹೆಸರಿನ ಮುಂದೆ `ನೀನಾಸಂ’ನ್ನು ಪ್ರಮಾಣಪತ್ರದಂತೆ ಹಚ್ಚಿಕೊಂಡು ಕೆಲಸ ಮಾಡುವುದನ್ನು ನಾವು ಕಂಡಿದ್ದೇವೆ. ಹಾಗೇ ಇಲ್ಲಿ ಇದ್ದೂ ಹೊರಗಿದ್ದೂ ಏನೇನೋ ಅಗತ್ಯಗಳಿಗೆ ಕೆಲವು ಕಲಾವಿದರುಗಳು ಪ್ರತ್ಯೇಕ ಕೂಟಗಳನ್ನು (ಉದಾಹರಣೆಗೆ ಕಿರು ತಿರುಗಾಟ, ಜನಮನದಾಟ, ಥಿಯೇಟರ್ ಸಮುರಾಯ್ ಇತ್ಯಾದಿ) ಮಾಡಿಕೊಂಡದ್ದೂ ಕಾಣುತ್ತೇವೆ. ಅಂಥ ಒಂದು ತಂಡ ಚಾವಡಿ ಥಿಯೇಟರ್ಸ್ (ಕಾಸರಗೋಡು?). ಕಳೆದ ವರ್ಷಗಳಲ್ಲಿ ನೀನಾಸಂ ತಿರುಗಾಟಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ – ಅವಿನಾಶ್ ರೈ, ಮೋಹನ್ ಶೇಣಿ, ಬಿಂದು ರಕ್ಷಿದಿ, ಶ್ರೀನಾಥ್ ಮುಂತಾದವರು – ಬಹುತೇಕ ಕರಾವಳಿ ವಲಯದ ಕಲಾವಿದರು, ಕಟ್ಟಿಕೊಂಡ ಕೂಟವಿದು. ಚಾವಡಿ ಥಿಯೇಟರ್ ಮಲ್ಲಿಕಾರ್ಜುನ ಬಡಿಗೇರ ನಿರ್ದೇಶನದಲ್ಲಿ ಸಾಫಲ್ಯ ಎಂಬ ನಾಟಕವನ್ನು ಮಾಡಿಕೊಂಡು, ಅನೇಕ ಊರುಗಳಲ್ಲಿ ಯಶಸ್ವಿ ಪ್ರದರ್ಶನಗಳನ್ನು ಕೊಡುತ್ತಾ ಇದೆ. ಅವುಗಳ ನಡುವೆ ಹೆಗ್ಗೋಡಿನ ಅಭಿಮಾನ ಮತ್ತು ಸಂಚಿ ದಾಖಲಾತಿಯ ಮೌಲ್ಯಗಳನ್ನು ಸರಿಯಾಗಿಯೇ ಅರ್ಥಮಾಡಿಕೊಂಡು, ಯೋಜನೆಯಂತೇ ಕಾಸರಗೋಡಿನ ದೂರದಿಂದ ಸ್ವಂತ ಖರ್ಚು ಹಾಕಿಕೊಂಡು ಹಿಂದಿನ ರಾತ್ರಿಯೇ ಹೆಗ್ಗೋಡಿಗೆ ಬಂದಿತ್ತು. ಮತ್ತೆ ತಮ್ಮ ಪ್ರದರ್ಶನದ ಅವಿಳಂಬ ದಾಖಲಾತಿಯ ಅನುಕೂಲಕ್ಕಾಗಿ ರಾತೋರಾತ್ರಿ ತಮ್ಮ ರಂಗಸಜ್ಜಿಕೆಗಳನ್ನೂ ಮಾಡಿ ಮುಗಿಸಿಕೊಂಡಿತ್ತು. ಹಾಗಾಗಿ ೧೭ರ ಬೆಳಿಗ್ಗೆ ಎಂಟು ಗಂಟೆಯ ಸುಮಾರಿಗೇ ದಾಖಲಾತಿಯ ಕಲಾಪ ತೊಡಗಿದ್ದು `ಸಾಫಲ್ಯ’ದಿಂದಲೇ!

ಟಿ.ಪಿ.ಕೈಲಾಸಂ ಅವರ ಇಂಗ್ಲಿಷ್ ನಾಟಕವೊಂದನ್ನು (ಬಹುಶಃ Fulfilment) ಶ್ರೀಲೇಖಾ ಸಾಫಲ್ಯ ಎನ್ನುವ ಹೆಸರಿನಲ್ಲಿ ಕನ್ನಡಿಸಿದ್ದರೆ, ಮಂಜುನಾಥ ಎಲ್.ಬಡಿಗೇರ್ ಅದನ್ನು ಚಾವಡಿ ಥಿಯೇಟರ್ಸಿಗೋಸ್ಕರ ನಿರ್ದೇಶಿಸಿದ್ದರು. ನಿಮಗೆಲ್ಲ ತಿಳಿದಂತೆ, ನಾಟಕಗಳ ಸಂಭಾಷಣೆಗಳು (ಯಕ್ಷಗಾನದಂತಲ್ಲದೆ) ಪೂರ್ವನಿರ್ಧಾರಿತ. ಹಾಗಾಗಿ ತಂಡದಲ್ಲಿ ಯಾವುದೇ ವೈಯಕ್ತಿಕ ತುರ್ತು ಪರಿಸ್ಥಿತಿ ಉಂಟಾದರೆ, ಅಂದರೆ ಮುಖ್ಯವಾಗಿ ಒಬ್ಬಿಬ್ಬ ನಟರ ಗೈರುಹಾಜರಿ ಅನಿವಾರ್ಯವಾದರೆ, ಯಾವುದೇ ತಂಡ ಪ್ರದರ್ಶನವನ್ನು ಚಾಲ್ತಿಯಲ್ಲಿಡಲು ಅನ್ಯರನ್ನು ಸಜ್ಜುಗೊಳಿಸಿಕೊಂಡಿರುತ್ತದೆ. ಅಂಥಲ್ಲಿ, ಬದಲಿ ನಟನ ದೈಹಿಕ ಮತ್ತು ಅಭಿನಯ ಸಾಮರ್ಥ್ಯಾನುಸಾರ ಪ್ರೇಕ್ಷಕಾನುಭವ ಬಹುತೇಕ ಪೇಲವವೂ ಕೆಲವೊಮ್ಮೆ ಉತ್ತಮವೂ ಆದ ಪ್ರಸಂಗಗಳನ್ನು ಕೇಳಿದ್ದೇವೆ. ಹೀಗೊಂದು ಅನುಭವವನ್ನೂ ದಾಖಲೀಕರಣಗೊಳಿಸುವ ಪ್ರಯತ್ನಕ್ಕೆ ಉದ್ದೇಶಪೂರ್ವಕವಾಗಿ, ಅವಕಾಶ ಮಾಡಿಕೊಟ್ಟಿತು ಚಾವಡಿ ಥಿಯೇಟರ್ಸ್. ಕುರುಕ್ಷೇತ್ರದ ಯುದ್ಧಪೂರ್ವದಲ್ಲಿ ಕೃಷ್ಣ ಮತ್ತು ಏಕಲವ್ಯರ ಮುಖಾಮುಖಿಯನ್ನಾಧರಿಸಿದ ನಾಟಕವನ್ನು, ಅದದೇ ನಿರ್ದೇಶಕ, ರಂಗಸಜ್ಜಿಕೆಯೊಡನೆ ಆದರೆ ಪೂರ್ಣ ಬದಲೀ ನಟರೊಡನೆ ಎರಡು ಅದ್ಭುತ ಪ್ರದರ್ಶನಗಳನ್ನು ಕೊಟ್ಟರು. ಇಲ್ಲಿ ದಾಖಲೀಕರಣದ ಅನುಕೂಲವನ್ನು ನೋಡಿಕೊಂಡದ್ದು ಬಿಟ್ಟರೆ, ಮರುಕ್ಷಣದಲ್ಲಿ ಎಂಬಂತೆಯೇ ಇನ್ನೊಂದರ ಪ್ರದರ್ಶನ ನಡೆದಿತ್ತು. ಇವೆರಡರ ಚಂದವೂ ಸದ್ಯದಲ್ಲೇ `ಸಂಚಿ ಪ್ರತಿಷ್ಠಾನದ ಅಕ್ಷಯ ತುಣೀರದಲ್ಲಿ ಹೊಸ ಅಸ್ತ್ರಗಳಾಗಿ ಶೋಭಿಸಲಿವೆ.

[ಆಶುವಾಗ್ವೈಭವದ ತಾಳ ಮದ್ದಳೆಯಲ್ಲಿ ಇಂಥದ್ದೇ ಒಂದು ಪ್ರಯೋಗವನ್ನು, ಇದೇ ಜನವರಿಯಲ್ಲಿ ಇಲ್ಲಿ ಸಂಚಿ ದಾಖಲೀಕರಣ ನಡೆಸಿತ್ತು. ಅಲ್ಲಿ ಸಂಧಾನಕ್ಕೆ ಹೊರಟ ಕೃಷ್ಣ ಭೀಮನ ಅಭಿಪ್ರಾಯ ಸಂಗ್ರಹಿಸುವ ಸನ್ನಿವೇಶವನ್ನು ಐದು ಭಿನ್ನ ಪಾಠಗಳಲ್ಲಿ ನೀವು ಕಾಣುತ್ತೀರಿ. ಅಂತರ್ಜಾಲಕ್ಕೇರಿದ ಮೇಲೆ ಆರೇ ತಿಂಗಳಲ್ಲಿ ಅದು ಸುಮಾರು ಐದೂವರೆ ಸಾವಿರ ವೀಕ್ಷಕರನ್ನು ಸೆಳೆದಿದೆ. ನಿಮಗದು ತಿಳಿದಿರಲಿಲ್ಲವಾದರೆ ಕೂಡಲೇ ಅಥವ ಎಂದೂ ಇಲ್ಲಿ ಚಿಟಿಕೆ ಹೊಡೆದು ಸವಿಯಬಹುದು:

ದಿನದ ಮೂರನೇ ಪ್ರದರ್ಶನವಾಗಿ ಹಿಂದಿನ ದಿನದ ತಾಟಕಾ ಪರಿಣಯದ ಮರುಪ್ರದರ್ಶನ, ಮತ್ತೆ ಕಾರಂತ ರಂಗಮಂದಿರದಲ್ಲೇ ನಡೆಯಿತು. ಇದು ಕೇವಲ ಕ್ಯಾಮರಾಕ್ಕಾಗಿ. ಸಿನಿಮಾ ನಟನೆಯ ಕುರಿತು ಸರಳವಾಗಿ ಹೇಳುವುದಿದ್ದರೆ, ತಾಂತ್ರಿಕ ಸಂಕಲನದ ಮಹಾಶಕ್ತಿಯ ಮುಂದೆ, ಕಲ್ಪಿತ ಪ್ರೇಕ್ಷಕರಿಗೆ ಕೊಡುವ ಅಸಂಬದ್ಧ ತುಂಡು ಚಟುವಟಿಕೆಗಳು. ಇದರಲ್ಲಿ ನಟ ಪಾತ್ರವೇ ಆಗುವ, ಭಾವಪರವಶನಾಗುವ ಕತೆಗಳನ್ನು ಎಷ್ಟೋ ಬಾರಿ ಕೇಳುತ್ತೇವಾದರೂ ಅದರಲ್ಲಿ ಉತ್ಪ್ರೇಕ್ಷೆಯ ಪಾತ್ರ ದೊಡ್ಡದು. ಅಲ್ಲಿನ ತಾಂತ್ರಿಕ ಮಿತಿಗಳು ತುಂಬ ಸಂಕೀರ್ಣ ಮತ್ತು ಪರವಶತೆ ಎಂಬುದು ಬಹುತೇಕ ಫಲಿಸುವುದು, ಎಲ್ಲ ಸಂಸ್ಕಾರಗಳನ್ನು ಪೂರೈಸಿದ ಚಿತ್ರ ಕತ್ತಲ ಕೋಣೆಯಲ್ಲಿ ಪ್ರದರ್ಶನಕ್ಕೆ ಬಂದಾಗ ಪ್ರೇಕ್ಷಕರ ಚಿತ್ತಭಿತ್ತಿಯಲ್ಲಷ್ಟೇ!

ಆದರೆ ನಾಟಕ ಹಾಗಲ್ಲ. ಇದು ಒಂದೇ ಹರಿವಿನಲ್ಲಿ ಅರಳುತ್ತ ಹೋಗಬೇಕು.ಇದರ ಪ್ರತಿ ನಡೆ, ಪ್ರತಿ ಮಾತಿಗೂ ಜೀವಂತ ಪ್ರೇಕ್ಷಕನ ಸಾನ್ನಿಧ್ಯ, ಪ್ರತಿಕ್ರಿಯೆ ಕೊಡುವ ಬಲ ಅಸಾಧಾರಣವಾದದ್ದು. ಪ್ರೇಕ್ಷಕ ಸಂದೋಹ ಸೊರಗಿದಾಗ ಪ್ರದರ್ಶನಗಳು ಸೊರಗಿದ್ದೂ ಉಂಟು. ಇಂಥದ್ದೇ ಸ್ಥಿತಿ, ದಾಖಲೀಕರಣಕ್ಕಾಗಿ ಖಾಲೀ ಭವನದ ಪ್ರದರ್ಶನ ಕೊಡುವಾಗ ಹಿಂದೆ ಕೆಲವು ತಂಡಗಳ ಚಡಪಡಿಕೆಯಲ್ಲಿ ಕಂಡದ್ದುಂಟು. ಹಾಗೇ ಹಿಂದಿನ ದಿನ ನಗೆಯ ಪ್ರಚಂಡ ಅಲೆಗಳ ಮೇಲಾಡಿದ ತಾಟಕಾ ಪರಿಣಯ ಒಂದೆರಡು ಕಡೆ ತಡವರಿಸಿದ್ದು ವಿಶೇಷವೆನಿಸಲಿಲ್ಲ. ಆದರೆ ಅವನ್ನೆಲ್ಲ ಜೀರ್ಣಿಸಿಕೊಂಡು ಉತ್ತಮವಾದ್ದನ್ನೇ ಕೊಡುವ ತಾಂತ್ರಿಕ ಪರಿಣತಿ ಸಂಚಿ ಬಳಗದಲ್ಲಿದೆ. ಅದರ ಯಶಸ್ಸಿನ ಫಲವೂ ಸದ್ಯದಲ್ಲೇ ನಿಮ್ಮ ಗಣಕಗಳಲ್ಲಿ, ನಿಮ್ಮ ಪರಿಸರ ಮತ್ತು ಅನುಕೂಲದಲ್ಲಿ ಹಾಜರಾಗಲಿದೆ. ಆ ಕಾಲಕ್ಕೆ ಧಾರಾಳ ನುಡಿಕಾಣಿಕೆಯನ್ನು, ಮುಖ್ಯವಾಗಿ ನಾಟಕದ ನಿರ್ದೇಶಕ ಮತ್ತು ನಟವರ್ಗಕ್ಕೆ ಕೊಟ್ಟು ಪ್ರೋತ್ಸಾಹಿಸಲು ಮರೆಯದಿರಿ.

ಈ ಸಾಲಿನ ದಾಖಲೀಕರಣದ ಕೊನೆಯ ಪ್ರದರ್ಶನ ಮತ್ತೆ ಬಯಲು ರಂಗಭೂಮಿಯಲ್ಲೇ ಇತ್ತು. ಲಂಕೇಶರ ನಾಟಕ ಅಂತಿಗೊನೆಯನ್ನು, ಇಕ್ಬಾಲ್ ಥಿಯೇಟರ್ ಸಮುರಾಯ್ ಬಳಗಕ್ಕೆ (ನೀನಾಸಂನ ಹಳೆಯ ವಿದ್ಯಾರ್ಥಿಗಳ ಕೂಟ) ನಿರ್ದೇಶಿಸಿದ್ದರು. ಗ್ರೀಕ್ ಮೂಲದ ಅಂತಿಗೊನೆ ಕೆಲವು ಶತಮಾನಗಳ ಹಿಂದಿನ, ಅಂದರೆ ನಿಸ್ಸಂದೇಹವಾಗಿ `ಐತಿಹಾಸಿಕ’ ಯುಗಕ್ಕೆ ಸಂದ ಕಥಾನಕ. ಆದರೆ ಇಲ್ಲಿ ವರ್ತಮಾನ ಕಾಲದ ಸಾಮಾಜಿಕ `ನಾಟಕ’ವೊಂದನ್ನು ಬೆಸೆದಿದ್ದರು. ಉದ್ದಕ್ಕೂ ನಟ ಮತ್ತು ಪಾತ್ರಗಳ ಭಾವಸ್ತರಗಳು ಭಿನ್ನ ನೆಲೆಗಳಲ್ಲಿ ವಿಸ್ತರಿಸುವ ಪರಿ ತುಂಬ ಹೊಸ ಅನುಭವವನ್ನೇ ನೀಡಿತು. ಇದು ಮೂಲ ಲಂಕೇಶರ ನಾಟಕದ್ದೇ ಕೊಡುಗೆಯೋ ನಿರ್ದೇಶಕರ ಸ್ವಾತ್ರಂತ್ರ್ಯವೋ ನಾನರಿಯೆ.
ಇಕ್ಬಾಲ್ ನಿರ್ದೇಶನದ ಅಂತಿಗೊನೆಯ ಪ್ರದರ್ಶನದುದ್ದಕ್ಕೂ ನನ್ನ ಮನಸ್ಸಿನಾಳದಲ್ಲಿ ಪ್ರತ್ಯೇಕ ಕಾಡಿದ ನಾಟಕ ನಾನು ಕಳೆದ ವರ್ಷ ಮಣಿಪಾಲದಲ್ಲಿ ನೋಡಿದ – ಅಕ್ಷಯಾಂಬರ! ಅದನ್ನು ಶರಣ್ಯಾ ರಾಮಪ್ರಕಾಶ್ ರಚಿಸಿ, ನಿರ್ದೇಶಿಸಿ, ಪ್ರಸಾದ್ ಚೇರ್ಕಾಡಿಯೊಡನೆ ಅಭಿನಯಿಸಿದ್ದರು. ಅಲ್ಲಿ ಯಕ್ಷಗಾನೀಯವಾಗಿ ದ್ರೌಪದಿಯ ವಸ್ತ್ರಾಪಹಾರ – ಪೌರಾಣಿಕ ಪ್ರಸಂಗ ನಡೆದರೆ, ಜತೆಜತೆಗೆ ಭಿನ್ನ ಸ್ತರದಲ್ಲಿ ತುಂಬ ಗಂಭೀರವಾಗಿ ಸಾಮಾಜಿಕ ನಾಟಕವೂ ಅನಾವರಣಗೊಂಡದ್ದು ಬಹುದೊಡ್ಡ ಸಾಧನೆ.

ಒಂದೇ ಹಗಲಿನಲ್ಲಿ ಮೂರು ನಾಟಕಗಳ ನಾಲ್ಕು ಪ್ರದರ್ಶನಗಳನ್ನು ನೋಡಿದ ಭಾಗ್ಯ ನಮ್ಮದು. ತಾಟಕಾ ಪರಿಣಯದ ಮರುಪ್ರದರ್ಶನಕ್ಕೆ ಹಿಂದಿನ ದಿನ ಅನ್ಯ ಕಾರ್ಯನಿಮಿತ್ತ ಪರಊರಲ್ಲಿದ್ದ ಚಿದಂಬರ ರಾವ್ ಜಂಬೆ ಬಂದಿದ್ದರು. ಜಂಬೆಯವರು ನೀನಾಸಂ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲನಾಗಿ, ಅನೇಕಾನೇಕ ನಾಟಕಗಳ ನಿರ್ದೇಶಕನಾಗಿ ಹೆಸರಾಂತವರು. ಅವರ ಹಿರಿತನಕ್ಕೆ ಪರೋಕ್ಷ ಮನ್ನಣೆ ಎಂಬಂತೆ ಒದಗಿದ್ದ ಧಾರವಾಡ ರಂಗಾಯಣದ ನಿರ್ದೇಶಕತ್ವದ ಹೊಣೆಯನ್ನೂ ಮುಗಿಸಿ ಈಗ `ಮನೆಗೆ ಮರಳಿದ್ದರು.’

ಉಳಿದ ಮೂರು ಪ್ರದರ್ಶನಗಳಿಗೆ ರಂಗಶಿಕ್ಷಣ ಶಾಲೆಯ ಕೆಲವು ವಿದ್ಯಾರ್ಥಿಗಳನ್ನು ಬಿಟ್ಟರೆ, ನಾವಿಬ್ಬರೇ ಪ್ರೇಕ್ಷಕರು. ನಾಟಕ ಪ್ರಪಂಚದ ಗಹನತೆ, ಅವುಗಳ ಪ್ರದರ್ಶನದ ತತ್ಕಾಲೀನತೆಯಲ್ಲಿ ಕಳೆದು ಹೋಗದಂತೆ ಸಂಚಿ ಟ್ರಸ್ಟ್ ತುಂಬ ಮುತುವರ್ಜಿಯಿಂದ ನಡೆಸಿರುವ ದಾಖಲೀಕರಣವನ್ನು ಸಾರ್ವಜನಿಕರ ಗಮನಕ್ಕೆ ತರುವುದಷ್ಟೇ ನನ್ನೀ ಬರಹದ ಉದ್ದೇಶ. ಯಂತ್ರ ಮಾಧ್ಯಮದ ಸಂಸ್ಕಾರಗಳಿಗೊಳಪಟ್ಟು ಕಾಲಾನುಕ್ರಮದಲ್ಲಿ ಬರಲಿರುವ ಅವುಗಳನ್ನು ನೋಡಿ ಸಂತೋಷಿಸುವ, ವಿಮರ್ಶಿಸುವ ನಿಮ್ಮ ಸ್ವಾತಂತ್ರ್ಯಕ್ಕೆ ಹೊರೆಯಾಗದ ಎಚ್ಚರದಲ್ಲಿ ವಿರಮಿಸುತ್ತೇನೆ. ಅಂದ ಮಾತ್ರಕ್ಕೆ ನನ್ನೀ ಬರವಣಿಗೆಯನ್ನು ಮೆಚ್ಚುವ ಅಥವಾ ಚಚ್ಚುವ ಅವಕಾಶ ನಿಮಗೆ ಖಂಡಿತವಾಗಿಯೂ ಮುಕ್ತವಿದೆ – ಬರಲಿ, ಕಾಮೆಂಟ್ಸ್ ಬಾಕ್ಸ್ ತುಂಬಿ ಬರಲಿ!