[ಅಮೆರಿಕಾದಲ್ಲಿರುವ ನನ್ನ ತಮ್ಮ – ಆನಂದವರ್ಧನ ಓದಿ, ಭಾರೀ ಕುಶಿಪಟ್ಟು “ನೋಡೋ” ಎಂದು ನನಗೂ ದೂಡಿದ ಲೇಖನವಿದು. ಪ್ರಸ್ತುತ ವೃತ್ತಿ, ವಾಸ್ತವ್ಯಗಳಲ್ಲಿ ನ್ಯೂ ಜೆರ್ಸಿಯ ಹೊಂಡೆಲ್ಲಿನಲ್ಲಿರುವ ಬಿ.ಎಸ್. ಪ್ರಸನ್ನ ಅಥವಾ ಬಾಲ ಪ್ರಸನ್ನರು ನಮಗೆ ಪೂರ್ವಪರಿಚಿತರಲ್ಲ. ಅವರು ವಿದ್ಯಾರ್ಥಿ ದೆಸೆಯಲ್ಲಿ (೧೯೬೦ರ ದಶಕ) ಬೆಂಗಳೂರಿನ ಸರಕಾರೀ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನನ್ನ ತಂದೆ – ಜಿಟಿನಾ ಶಿಷ್ಯರಂತೆ. ಪ್ರಸನ್ನರು ಆ ಪ್ರೀತಿ, ಗೌರವಗಳಿಗೆ ಮುಂದಿನ ದಿನಗಳಲ್ಲಿ ಜಿಟಿನಾ ಲಭ್ಯ ಕೃತಿಗಳನ್ನು ಓದಿ, ಸುದ್ಧಿಗಳ ಎಳೆ ಹಿಡಿದು ಪುಷ್ಟಿ ಕೊಡುತ್ತಲೇ ಬಂದಿದ್ದಾರೆ. ಅದರ ಫಲವಾಗಿ ಸಂಗೀತಗಾರನಾಗಿಯೂ ಬೆಳೆದ ತಮ್ಮ ಮಗ ವಿದ್ವಾನ್ ಸಂದೀಪ್, ಭಾರತ ಭೇಟಿ ಕೊಡುವ ಕಾಲಕ್ಕೆ (೨೦೦೬) ಜಿಟಿನಾ ಭೇಟಿಯಾಗುವುದನ್ನೂ ಖಾತ್ರಿ ಮಾಡಿಕೊಂಡಿದ್ದಾರೆ. ಅವೆಲ್ಲವುಗಳ ಫಲವಾಗಿ ತಮ್ಮ ‘ಓದಿದ್ದು, ನೆನಪಿನಲ್ಲಿ ಉಳಿದದ್ದು’ ಮಾಲೆಯಲ್ಲಿ ಜಿಟಿನಾ ಕುರಿತು ವಿಶೇಷ ಲೇಖನವನ್ನೇ ಮಾಡಿ, ಅಮೆರಿಕನ್ನಡಿಗರದೇ ‘ದರ್ಪಣ’ ಎನ್ನುವ ವಿದ್ಯುನ್ಮಾನ ನಿಯತ ಕಾಲಿಕದಲ್ಲಿ ಪ್ರಕಟಿಸಿದ್ದರು. ಮತ್ತೆ ನಮ್ಮ ಅಪಾರ ಸಂತೋಷಕ್ಕೆ ಅದನ್ನೇ ನನ್ನ ವಲಯದ ಹೆಚ್ಚಿನವರಿಗೆ ಮುಟ್ಟಿಸುವ ಅವಕಾಶವನ್ನೂ ಕೊಟ್ಟಿದ್ದಾರೆ. ಪ್ರಸನ್ನರಿಗೆ ಹಾರ್ದಿಕ ವಂದನೆಗಳು – ಅಶೋಕವರ್ಧನ]

ಕನ್ನಡ ಜನಪ್ರಿಯ ವಿಜ್ಞಾನ ಕ್ಷೇತ್ರದಲ್ಲಿ ವಿವಿಧ ಪ್ರಯೋಗಗಳನ್ನು ಮತ್ತು ವ್ಯವಸಾಯವನ್ನು ಮಾಡಿದ ಶ್ರೇಷ್ಠರಲ್ಲಿ ಶಿವರಾಮ ಕಾರಂತರು ಮೊದಲಿಗರಾದರೆ, ಜಿಟಿ ನಾರಾಯಣರಾಯರ (ಜೀಟಿಯೆನ್ ಅಥವಾ ಜಿಟಿನಾ) ಕೊಡುಗೆ ಅಷ್ಟೇ ಅಪಾರ, ಮಹತ್ವಪೂರ್ಣ, ಸಂದರ್ಭೋಚಿತ.

೧೯೬೮ ರ ಜುಲೈನಲ್ಲಿ, ಬೆಂಗಳೂರು ವಿಶ್ವವಿದ್ಯಾಲಯ ವಿಜ್ಞಾನ ವಿಷಯಗಳಲ್ಲಿ ಕನ್ನಡದಲ್ಲಿ ಬರೆದ ನಾಲ್ಕು ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಿದಾಗ, ಅದರ ಕೀರ್ತಿ ಭಾರತದಾದ್ಯಂತ ಹಬ್ಬಿತು. ಕಾರಣ – ಇವು ಏಕಕಾಲದಲ್ಲಿ ಇಂಗ್ಲಿಷ್ ಹಾಗೂ ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ವಿಷಯಗಳನ್ನು ಪರಿಚಯಿಸುತ್ತಿದ್ದವು. ಈ ಯೋಜನೆಯ ಪ್ರಾರಂಭ ಅದೇ ವರ್ಷದ ಫೆಬ್ರುವರಿ ತಿಂಗಳಿನಲ್ಲಿ ಎಂದಾಗ, ಈ ಕಾರ್ಯದ ತೆರೆಯ ಹಿಂದಿನ ಕಾರ್ಯಸ್ವರೂಪ, ಅದರ ಕ್ಲಿಷ್ಟತೆಯ ಸ್ವಲ್ಪ ಅಂಶವನ್ನಾದರೂ ನಾವು ಗ್ರಹಿಸಬಹುದು. ಈ ಕಾರ್ಯದ ಸೂತ್ರಧಾರಿ, ಪಾತ್ರಧಾರಿಯಾಗಿ ನಡೆದ ಜಿಟಿ ನಾರಾಯಣರಾಯರು ಆ ಸಂದರ್ಭದಲ್ಲಿ ಹೇಳಿದ್ದು, “ಎನಗಿಂಥ ಕಿರಿಯರಿಲ್ಲ ಎಂಬುದು ನನ್ನ ನಂಬಿಕೆ ಮತ್ತು ಆ ಪ್ರಕಾರ ವರ್ತನೆ. ಇಂತಹ ಕೆಲಸಗಳಲ್ಲಿ ಅವಶ್ಯವಾದ ಧಾತುಗಳು ಐದು: ನೈತಿಕತೆ, ಮಗ್ನತೆ, ಉತ್ಕೃಷ್ಟತೆ , ಪಾರದರ್ಶಕತೆ , ಮತ್ತು ಉತ್ತರದಾಯಿತ್ವ (ethics, involvement, excellence, transparency, and accountability)” ಜಿಟಿನಾ ೧೯೪೮ರಿಂದ ೧೯೬೮ ರವರೆಗೆ (ನಡುವೆ ಎರಡು ವರ್ಷ ಬಿಟ್ಟು) ಗಣಿತಶಾಸ್ತ್ರದ ಅಧ್ಯಾಪಕರಾಗಿ ಬಹಳ ಹೆಸರು ಮಾಡಿ ಅಪಾರ ಶಿಷ್ಯವರ್ಗವನ್ನು ಸಂಪಾದಿಸಿದ್ದರು. ಇವರ ಕರ್ತವ್ಯನಿಷ್ಠೆ, ಶಿಸ್ತು, ಸಮಯಕ್ಕೆ ಸರಿಯಾಗಿ ಪಾಠ ಪ್ರಾರಂಭ, ಅನನ್ಯ ಶೈಲಿಯಲ್ಲಿ ಸರಳವಾಗಿ ಅರ್ಥವಾಗುವಂತೆ ಕಠಿಣ ಪಾಠಗಳ ಬೋಧನೆ ಆ ಕಾಲದ ದಂತಕಥೆಯಾಗಿತ್ತು. ಇವರು ಎನ್.ಸಿ.ಸಿ ಯಲ್ಲಿ ಮೇಜರ್ ಹುದ್ದೆಯ ಕಮಿಷನ್ ಸಂಪಾದಿಸಿದ್ದು, ಬಹುಮಂದಿಗೆ ಮಾರ್ಗದರ್ಶಕರೂ ಆಗಿದ್ದರು. ಇವರ ಕಾರ್ಯಶೈಲಿಯ, ಜೀವನದೃಷ್ಟಿಯ ಪರಿಚಯ ಲಾಭ ಪಡೆದವರ ಸಂಖ್ಯೆ ಅಪಾರವೆ ಹೌದು. ಯಾವುದೇ ಬಗೆಯ ರಾಜಕೀಯ, ಆರ್ಥಿಕ, ಜಾತೀಯ, ಸಾಹಿತ್ಯಕ ಪ್ರಭಾವಗಳಾಗಲಿ ಇಲ್ಲದೆ ಬೆಳೆದ, ಕಂಗೊಳಿಸಿದ ಉದಾತ್ತ ಜೀವ ಜಿಟಿನಾ ಅವರದ್ದು. ಇವರ ತ್ವರಿತ ಗತಿಯ ಮಾತು ಮತ್ತು ನಡೆದಾಟಗಳಿಗೆ ಶಿಷ್ಯರಿಂದ ಕರೆಸಿಕೊಂಡದ್ದು – Grand Trunk Express Rail – GTN ಎಂದು! (ಗ್ರಾಂಡ್ ಟ್ರಂಕ್ ಎಕ್ಸ್ಪ್ರೆಸ್ ಮದ್ರಾಸಿನಿಂದ ದೆಹಲಿಗೆ ವೇಗಗತಿಯಲ್ಲಿ ಓಡುತ್ತಿದ್ದ ಟ್ರೈನ್.)

ಜಿಟಿನಾ ಬಗ್ಗೆ ನನ್ನ ಸೋದರಮಾವಂದಿರಿಂದ ಅಷ್ಟಿಷ್ಟು ಕೇಳಿದ್ದರ ಕಾರಣದಿಂದಾಗಿ, ನಾನು ಅವರ ವಿದ್ಯಾರ್ಥಿಯಾಗಲು ಒಂದು ಬಗೆಯಲ್ಲಿ ತಯಾರಾಗಿದ್ದೆ. ಆಗ ಕಳೆದ ಒಂದು ವರ್ಷ ಸದಾ ಸ್ಮರಣೀಯ. ಸದಾ ಪ್ರೇರಿತ ಎಂದೂ ಹೇಳಬಹುದು. ಅವರ ವಿಜ್ಞಾನದ ಕಿರುಪುಸ್ತಕಗಳನ್ನು ಕೊಂಡು ಓದಿದ್ದು, ಅದರ ಬಗ್ಗೆ ಸಮವರ್ತಿಗಳ ಜೊತೆ ಆಗಾಗ್ಗೆ ಮಾತನಾಡುತ್ತಿದ್ದುದ್ದು ಈಗಲೂ ನನ್ನ ಸವಿ ನೆನಪು.

ಜಿಟಿಎನ್ ಸುಮಾರು ೧೯೬೮ರಲ್ಲಿ ಮೈಸೂರಿಗೆ ಬಂದು ನೆಲೆಸಿದರು. ಕನ್ನಡ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ಕನ್ನಡ ವಿಶ್ವಕೋಶದ ವಿಜ್ಞಾನ ವಿಭಾಗದ ಸಂಪಾದಕರಾಗಿ ಅಪೂರ್ವ, ಅಸಾಮಾನ್ಯ ಸೇವೆಯನ್ನು ಸಲ್ಲಿಸಿದ್ದಾರೆ. ವೈಜ್ಞಾನಿಕ, ಮಾನವಿಕ , ತಾಂತ್ರಿಕ – ಯಾವುದೇ ವಿಷಯವನ್ನಾದರೂ ಕನ್ನಡದಲ್ಲಿ ಸುಲಭವಾಗಿ ಸರಳವಾಗಿ ಹೃದಯವೇದ್ಯವಾಗುವಂತೆ ತಲುಪಿಸಲು ಸಾಧ್ಯ ಎಂಬುದನ್ನು ಪ್ರಮಾಣಿಸಿದ್ದಾರೆ. ಸಂಸ್ಕೃತ, ಪ್ರಾಕೃತ, ಅಪಭ್ರಂಶ, ಇಂಗ್ಲಿಷ್ ಇತ್ಯಾದಿ ಹಲವಾರು ಭಾಷೆಗಳ ಸಾರವನ್ನು ಹೀರಿ ಬೆಳೆದು ಸುಪುಷ್ಟವಾಗಿರುವ ಕನ್ನಡ ಭಾಷಾ ಸಂಪತ್ತಿಗೆ ಜಿಟಿನಾ ಸೃಜನ ಕೊಡುಗೆ ಸಮೃದ್ಧ ಎಂದು ಹೇಳಲೇಬೇಕು.

ಜಿಟಿನಾ ಥಟ್ಟನೆ ನೇರ ಮತ್ತು ಸ್ಪಷ್ಟ ಮಾತುಗಳನ್ನೇ ಆಡುತ್ತಿದ್ದರು. ಸತ್ಯವನ್ನು ಮರೆಮಾಚುವಂತೆ ಮೃದುವಾದ ಮಾತುಗಳನ್ನಾಡುವ ಜಾಣ್ಮೆ ಇಲ್ಲದ ಸ್ವಭಾವದಿಂದ, ಹಲವಾರು ಸಮಕಾಲೀನರ ಕೋಪದೃಷ್ಟಿ ಶಾಪದೃಷ್ಟಿಗಳಿಗೆ ಈಡಾಗಿದ್ದಾರೆ. ಈ ಅನುಭವಗಳಿಂದ ಅವರೂ ಬೆಳೆದಿದ್ದಾರೆ, ಸುತ್ತಲಿದ್ದವರನ್ನು ಬೆಳೆಸಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.

ಜಿಟಿನಾ ಮೈಸೂರಿನ ಸಂಗೀತ ವೃತ್ತದಲ್ಲಿಯೂ ಸಹ ವಿಮರ್ಶಕರಾಗಿ, ಟೀಕಾಕಾರರಾಗಿ ಹೆಸರು ಮಾಡಿದ್ದರು. ಇವರ ಭಾಷಾಜ್ಞಾನದ ಸ್ಫುಟತೆ, ಪುರಂದರ ಕನಕ ತ್ಯಾಗರಾಜಾದಿ ಕೃತಿಶ್ರೇಷ್ಠರ ಕೊಡುಗೆಯ ಪೂರ್ಣ ಪರಿಚಯ, ಸಂಗೀತಜ್ಞಾನದ ಸಮ್ಮಿಶ್ರಣಗಳಿಂದ ಭವಿಸಿದ ಟೀಕೆಗಳು – ಕಟು ವಿಮರ್ಶೆಗಳು, ಹಲವಾರು ಸಂಗೀತಗಾರರನ್ನು ತಿದ್ದಿ ತೀಡಿ ಉತ್ತಮ ಸಂಗೀತಗಾರರಾಗಲು ಪ್ರೇರಣೆಯಾದವು, ಉಳಿದವರನ್ನು ಉತ್ತಮ ಶ್ರೋತೃಗಳನ್ನಾಗಿ ಮಾಡಿದವು.

ಜಿಟಿನಾ ಸುಮಾರು ಮೂವತ್ತು ಪುಸ್ತಕಗಳನ್ನು ಬರೆದಿದ್ದಾರೆ. ಅದರಲ್ಲಿ ಸಿಂಹಪಾಲು ಕನ್ನಡದ್ದು, ಅದೂ ವಿಜ್ಞಾನಕ್ಕೆ ಸಂಬಂಧಪಟ್ಟ ವಿಷಯಗಳು ಮತ್ತು ವ್ಯಕ್ತಿಗಳ ಬಗ್ಗೆ. (ಆಲ್ಬರ್ಟ್ ಐನ್ಸ್ಟೈನ್ ಬಾಳಿದರಿಲ್ಲಿ, ಕೃಷ್ಣ ವಿವರಗಳು, ಸೂಪರ್ನೋವಾ, ವಿಜ್ಞಾನದ ಸಪ್ತರ್ಷಿಗಳು, ಎನ್.ಸಿ.ಸಿ ದಿನಗಳು, ಶ್ರುತಗಾನ, ಸವಾಲನ್ನು ಎದುರಿಸುವ ಛಲ…) ವಸ್ತು, ಶೈಲಿ, ವಿನ್ಯಾಸದ ಬಗ್ಗೆ ಅಪಾರ ಕಾಳಜಿ. Scientific Temper ಅವುಗಳಲ್ಲೊಂದು ಪುಸ್ತಕ (ಇದರ ವಿಸ್ತೃತ ಕನ್ನಡ ರೂಪ, ಅವರೇ ಬರೆದು ನವಕರ್ನಾಟಕ ಪಬ್ಲಿಕೇಶನ್ಸ್ ಪ್ರಕಟಿಸಿದ – ವೈಜ್ಞಾನಿಕ ಮನೋಧರ್ಮ, ವಾಸ್ತವದಲ್ಲಿ ಮೊದಲು ಪ್ರಕಟವಾಗಿತ್ತು ಮತ್ತು ಇಂದಿಗೆ ಒಂಬತ್ತನೇ ಮುದ್ರಣ.

ಇತರೆರಡರಲ್ಲಿ With great Minds ಸಹ ಇದೆ). ಸರ್ ಸಿ ವಿ ರಾಮನ್ ಮತ್ತು ಖಗೋಳಶಾಸ್ತ್ರಜ್ಞ ಡಾ.ಎಸ್. ಚಂದ್ರಶೇಖರ್ ರವರ ಜೊತೆ ಸ್ವಲ್ಪ ಸಮಯ ಕಳೆದದ್ದು ಅವರ ಹೆಗ್ಗಳಿಕೆ. ಕನ್ನಡದಲ್ಲಿ ಇರುವ ಶ್ರೇಷ್ಠಮಟ್ಟದ ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕವೊಂದಾದ, ಸುಬ್ರಹ್ಮಣ್ಯನ್ ಚಂದ್ರಶೇಖರ್, ಸುಮಾರು ೪೦೦ ಪುಟಗಳ ಪುಸ್ತಕ ಜಿಟಿನಾರ ಕ್ಲಿಷ್ಟ ವಸ್ತು ನಿರೂಪಣಾ ಸಾಮರ್ಥ್ಯ ಮತ್ತು ಶೈಲಿಗೆ ಸಾಕ್ಷಿ. ೪೩೦ ಪುಟಗಳ ಮುಗಿಯದ ಪಯಣ – ಅವರ ಆತ್ಮ ಚರಿತ್ರೆ. ೧೯೯೫ರಲ್ಲಿ ಸುಬ್ರಹ್ಮಣ್ಯಮ್ ಚಂದ್ರಶೇಖರವರನ್ನು ಚಿಕ್ಯಾಗೋನಲ್ಲಿ ಭೇಟಿಯಾದ ಪರಿಣಾಮವಾಗಿ Crossing The Dateline ಇಂಗ್ಲಿಷ್ನಲ್ಲಿ ಬರೆದ ಮತ್ತೊಂದು ಸ್ತುತ್ಯಾರ್ಹವಾದ ಪುಸ್ತಕ (ಇದರ ಸ್ವತಂತ್ರ ಕನ್ನಡ ರೂಪ – ಸಪ್ತ ಸಾಗರಗಳಾಚೆಯೆಲ್ಲೋ.. ಕೂಡಾ ಲಭ್ಯ). ರಾಜ್ಯೋತ್ಸವ ಪ್ರಶಸ್ತಿ, ಗೌರವ ಡಿ.ಲಿಟ್ ಪದವಿ, ಕರ್ನಾಟಕ ಸಾಹಿತ್ಯ ಪರಿಷತ್ ಪ್ರಶಸ್ತಿ, ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮೊದಲಾದ ಪ್ರಶಸ್ತಿ ಮನ್ನಣೆಗಳು ಅವರದಾದುವು.

ಕೊಡಗಿನಲ್ಲಿ ನೆಲೆಸಿದ್ದ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಬೆಳೆದ ಜಿಟಿನಾ ಅವರ ವ್ಯಕ್ತಿತ್ವವನ್ನು ಅನೇಕ ಮಹನೀಯರ ಸಂಪರ್ಕ, ಸ್ಫೂರ್ತಿ, ಪಾಠ ಪ್ರವಚನಗಳು, ಆದರ್ಶಗಳು, ಲೋಕಾನುಭವಗಳು ಬೆಳೆಸಿತ್ತು, ಬೆಳಗಿಸಿತ್ತು. ಇವರು ನಾಸ್ತಿಕರಾಗಿಯೂ ವೈಚಾರಿಕ ಧರ್ಮ-ಕರ್ಮಿಯಾಗಿಯೂ ಹೆಸರಾಂತವರು. ಮಂತ್ರ, ಭಕ್ತಿ ಮತ್ತು ದೈವನಿಷ್ಠೆ ಎಂಬ ಸ್ವಯಂ ವಿಧಿತ ಬಂಧನಗಳಿಂದ ವಿಮುಕ್ತರಾಗಲು ಹಲವಾರು ಕಾರಣಗಳನ್ನು ಅವರ ಆತ್ಮ ಚರಿತ್ರೆಯಲ್ಲಿ ಹೇಳಿದ್ದಾರೆ. ಅವರ ಜೀವನುದ್ದಕ್ಕೂ ಅವರನ್ನು ಕಾಪಾಡಿದ್ದು ಅವರ ಗೃಹಸಂಸ್ಕಾರ, ಸಂಸ್ಕೃತಿ, ರಾಮಾಯಣ ಮಹಾಭಾರತಾದಿ ಉದ್ಗ್ರಂಥವಾಚನಗಳಿಂದ ಪಡೆದ ರುಚಿ ಶುಚಿತ್ವ.

ಮಾಧ್ಯಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗ, (೧೯೪೦ ರ ಸಮಯದಲ್ಲಿ) ಮಡಿಕೇರಿಗೆ ಬಂದ ಗಾಂಧಿಯವರನ್ನು ನೋಡುವ ಅವಕಾಶ. ಬ್ರಾಹ್ಮಣ ಭೋಜನಗಳಲ್ಲಿ ಸಂಪಾದಿಸಿದ ಚಿಲ್ಲರೆ ನಾಣ್ಯಗಳನ್ನು ಗಾಂಧಿಯವರಿಗೆ ಪಾದಮುಟ್ಟಿ ಸಮರ್ಪಿಸಿದಾಗ ಅವರು ತಲೆ ಮುಟ್ಟಿ ಏನನ್ನೋ ಹೇಳಿದಾಗ ಆದ ಕೃತಾರ್ಥತೆ – ಪುರಂದರದಾಸರ “ನಾರಾಯಣನೆಂಬೋ ನಾಮದ ಬೀಜವ ನಾರದ ಬಿತ್ತಿದ ಧರೆಯೊಳಗೆ” ಸಾಲಿನಂತೆ ಮನದಲ್ಲಿ ಮೈದಾಳಿತ್ತು. ಮುಂದೆ ಮದ್ರಾಸಿನಲ್ಲಿದ್ದಾಗ ಗಾಂಧಿಯವರ ಪ್ರಾರ್ಥನಾ ಸಭೆಗಳಲ್ಲಿ ಅವರು ಕೇಳುತ್ತಿದ್ದ ಗಾಂಧಿಯವರ ಜೀವನಧರ್ಮ ಬೋಧನೆಗೂ ಮತ್ತು ಕಲಿಯುತ್ತಿದ್ದ ಅಮೂರ್ತ ಗಣಿತಕ್ಕೂ ಇದ್ದ ನಿಕಟ ಸಂಬಂಧ ಕಂಡು ಬೆರಗಾಗುತ್ತಿದ್ದರೆಂದು ಹೇಳುತ್ತಾರೆ.

ಇತ್ತೀಚೆಗೆ ನಮ್ಮನ್ನಗಲಿದ ನಿಸಾರ್ ಅಹ್ಮದ್ ಜಿಟಿನಾರ ಸ್ನೇಹಿತರು, ಸಹೋದ್ಯೋಗಿಗಳೂ ಆಗಿದ್ದರು. ಅವರು ಒಂದು ಕವನದಲ್ಲಿ ಜಿಟಿನಾ ಬಗ್ಗೆ ಹೇಳುತ್ತಾರೆ –

ಜಿಟಿಯೆನ್ ಮಾತ್ರ ಅಪ್ಪರಾಣೆಗೂ
ಬದಲಾಗುವುದಿಲ್ಲ
ಮಾತಿಗೆ ಕೂತರೆ
ಅಂದಿನ ಅದೇ ಆತುರ, ತ್ವರೆ ಬುಡ ಬಿಳಿಲು
ಹರೆಯಿಂದ ಹರೆಗೆ ಜಿಗಿಯುವ ಅಳಿಲು

ಕನ್ನಡದಲ್ಲಿ ಜನಪ್ರಿಯ ವಿಜ್ಞಾನ
ಬರೆದು ಯಾರಾದರು ಪಾವನ
ಜಾಳುಜಾಳಾದ ಸೀರೆ
ಕಂಕಾಪಿರದ ಮರಿಗುದುರೆ
ಎನ್ನುವವರೇ ಓದಿ ಇವರನ್ನ
ತಪಶೀಲು ಪೇರಿಕೆಯ, ಹುಮ್ಮಸ್ಸು ಹಾರಿಕೆಯ
ಬಿಗಿಮೊಗದ ವಿಜ್ಞಾನಕ್ಕೆ
ಕಾವ್ಯತೆಯ ಕಚಗುಳಿಯಿಟ್ಟು
ನಗೆಯ ಬಿಡಿಸಲು ಇವರು ಸುರಿಸಿರುವ ಬೆವರನ್ನ
ಏರಿರುವ ತೆವರನ್ನ ..

ಪಂಕ್ತಿಬೇಧವನೆಣಿಸದವರು
ಭೂತಗಣವನ್ನ ಕುಣಿಸದವರು
ಹೆರರಲ್ಲಿ ಸಕ್ಕರೆಯ ತುಣುಕು ಕಂಡರೂ
ಕಬ್ಬಿನ ತೋಟ ಪತ್ತೆ ಹಚ್ಚಿ
ಹತ್ತು ಕಡೆ ಸುದ್ದಿ ಬಿತ್ತುವವರು
ಎತ್ತರಕ್ಕೆತ್ತುವವರು

ಡಿವಿಜಿಯವರ ಕಗ್ಗದ ಶೈಲಿಯಲ್ಲಿ ಅತ್ರಿಸೂನು ಅಂಕಿತದಲ್ಲಿ ಹಲವಾರು ಕಿರುಪದ್ಯಗಳನ್ನು ಜಿಟಿನಾ ಬರೆದಿದ್ದಾರೆ. ಇದು ಅವರ ಬಾಳಿನ ಸೂತ್ರವೂ ಹೌದು, ವಿದ್ಯಾರ್ಥಿಗಳಿಗೆ ಕಲಿಸಿದ ಪಾಠವೂ ಹೌದು.
ಸಂಕಲ್ಪ ಶುದ್ಧವಿದ್ದರೆ ಮಾರ್ಗ ಸುಸ್ಪಷ್ಟ
ಶಂಕೆ ತೊರೆ ನಚಿಕೇತ ನಿಷ್ಠೆಯಿಂ ಮುನ್ನಡೆಯೋ |
ಸಂಕಷ್ಟ ಸರ್ವಸ್ವ ಮರೆಯಾಗಿ ಬಾಳಿನಲಿ
ಶಂಕರತೆ ನಳನಳಿಸುವುದು ದಿಟವೋ ಅತ್ರಿಸೂನು ||

ಸಂಕಲ್ಪ ಧೃಢನಾಗಿ ಮೊದಲ ಹೆಜ್ಜೆಯನಿಟ್ಟು
ಸಂಕಷ್ಟಗಳ ಲೆಕ್ಕಿಸದೆ ಸದಾ ನಡೆಯುತಿರು |
ಶಂಕೆ ತೊರೆ, ನಚಿಕೇತನೋಲ್ ಸತ್ಯದರ್ಶನಕೆ
ಕೈಂಕರ್ಯವೊಪ್ಪಿಸೋ ಜಯಸಿದ್ಧ ಅತ್ರಿಸೂನು ||

ಕನ್ನಡ ವಿಜ್ಞಾನ ವಾಙ್ಮಯ ರಚನೆ ಕುರಿತ ಒಂದು ಗೋಷ್ಠಿಯಲ್ಲಿ ಒಡ್ಡಿದ ಇಂಗ್ಲಿಷ್ ಸವಾಲು ಮತ್ತು ಕನ್ನಡದಲ್ಲಿ ಜಿಟಿನಾ ಮಾರುತ್ತರ ಹೀಗಿದೆ:
There was a young girl named Miss Bright
Who could run much faster than light
She travelled one day
In an Einsteinian way
And arrived on the previous night

ಬೆಳಕಿನ ವೇಗಕ್ಕಿಂತಲೂ ರಭಸದಿ
ಓಡುವ ಪೋಕರಿ ಹುಡುಗಿ ಉಷಾ
ಐನ್ಸ್ಟೈನ್ರ ರಿಲೇಟಿವಿಟಿ ಕ್ರಮದಲಿ
ಜಿಗಿಯುತಲಿಳಿದಳು ಕಳೆದ ನಿಶಾ ||

ಕನ್ನಡದ ಆಸ್ತಿ ಮಾಸ್ತಿಯವರ ಸಂಗಡ ಕಳೆದ ದೀರ್ಘ ಸಮಯವನ್ನು, ರಸಯಾನವೆಂದು ವರ್ಣಿಸಿ ಬರೆದ ಭಾಗವನ್ನು ಓದಿದಾಗ, ಮಾಸ್ತಿ ಮತ್ತು ಜಿಟಿನಾರ ಮೇಲೆ ನಮ್ಮ ಗೌರವ ಮತ್ತು ಅಭಿಮಾನ ಕನಿಷ್ಠ ಇಮ್ಮಡಿಯಾದರು ಆಗುತ್ತದೆ. (ಮಾಸ್ತಿಯವರು ತಮ್ಮ ಚಿಕವೀರ ರಾಜೇಂದ್ರ ಪುಸ್ತಕವನ್ನು ಬರೆಯುತ್ತಿದ್ದಾಗ ಜಿಟಿನಾರ ತಂದೆ ವಸ್ತುಸಂಗ್ರಹ ಇತ್ಯಾದಿಗಳಿಗೆ ಸಹಾಯಮಾಡಿದ್ದರು ಎಂಬ ಹಿನ್ನೆಲೆಯಿದೆ.) ಮಾಸ್ತಿಯವರ ಭಾವ ಎಂಬ ಆತ್ಮ ಚರಿತ್ರೆಯ ಸುಮಾರು ೬೦೦ ಪುಟಗಳ ಹಸ್ತಪ್ರತಿಯನ್ನು ಸಿದ್ಧಮಾಡಿದ್ದು ಜಿಟಿನಾರವರೆ. ಅರೆತೆರೆದ ಕಣ್ಣುಗಳಿಂದ ಧ್ಯಾನಸ್ಥರಾಗಿರುವಂತೆ ಕುಳಿತು, ಅಂತರ್ಮುಖಿಯಾಗಿ ಹಿಂದೆ ನಡೆದ ಸಂಗತಿಗಳನ್ನು ಚಲನ ಚಿತ್ರದಂತೆ ಕಂಡು, ಚಿತ್ರಕ್ಕೆ ಸರಿಹೊಂದುವ ಮಾತನ್ನು ಸಾವಕಾಶವಾಗಿ ಪೋಣಿಸುತ್ತಾ, ಅರ್ಥಕ್ಕೆ ಲೋಪಬಾರದಂತೆ ಬರೆದುಕೊಳ್ಳಲು ವಾಕ್ಯಗಳನ್ನು ಒಡೆದು ಹೇಳುತ್ತಿದ್ದ ಮಾಸ್ತಿಯವರ ಪರಿಗೆ ಜಿಟಿನಾ ಇನ್ನೊಮ್ಮೆ ಹೇಳಿ ಎಂದು ಕೇಳುವ ಅವಕಾಶವೇ ಆಗಲಿಲ್ಲವೆಂದು ಸ್ಮರಿಸುತ್ತಾರೆ. ಒಮ್ಮೆ ಮಾಸ್ತಿ ಜಿಟಿನಾ ಜೊತೆ ಪುತ್ತೂರಿಗೆ ಹೋದಾಗ, ಲೀಲಾ ಕಾರಂತರ ಜೊತೆ ಲಘು ಹಾಸ್ಯದ ಸಂದರ್ಭದಲ್ಲಿ ಉಕ್ಕಿ ಬಂದ ನಗುವಿನಿಂದ ಲೀಲಾ ಕಾರಂತರ ತಾಂಬೂಲರಸ ತುಂಬಿದ್ದ ಬಾಯಿ ಬಿರಿದು ಎದುರಿಗಿದ್ದ ಜಿಟಿನಾಗೆ ಸಮೃದ್ಧ ಲಾಲಾರಸದ ಅಭಿಷೇಕವಾಯಿತು. ಆಗ ಮಾಸ್ತಿಯವರು “ಅಯಾಚಿತವಾಗಿ ಗುರು ಪತ್ನಿಯ ಉಚ್ಚಿಷ್ಟ ಲಭಿಸಿರುವ ನೀವು ಅದೃಷ್ಟವಂತರು” ಎಂದು ಹೇಳಿದ ಸುಸಂಸ್ಕೃತ ಪ್ರದರ್ಶನವನ್ನು ಸ್ಮರಿಸುತ್ತಾರೆ. “ಒಳ್ಳೆಯದನ್ನು ನೋಡಿ, ಒಳ್ಳೆಯದನ್ನು ಕೇಳಿ, ಒಳ್ಳೆಯದನ್ನು ಹೇಳಿ” ಎಂಬ ಮಾಸ್ತಿಯವರ ಜೀವನ ಮಂತ್ರದ ಸಾಕ್ಷಾತ್ ಪ್ರದರ್ಶನ, ನಿದರ್ಶನಗಳನ್ನು ನೋಡಿದ್ದ ಭಾಗ್ಯ ಜಿಟಿನಾ ಪಾಲಿಗೆ.

ಜಿಟಿನಾ ಸರ್ ಸಿ ವಿ ರಾಮನ್‍ರ ಬಗ್ಗೆ ಪುಸ್ತಕ , ಲೇಖನಗಳನ್ನು ಬರೆಯುವಾಗ ಅನೇಕ ಬಾರಿ ಅವರನ್ನು ಭೇಟಿಮಾಡಿ ಅವರ ಸಮೀಪವರ್ತಿಗಳು ಆಗಿದ್ದರು. ಸರ್ವರಿಗೂ ಅರ್ಥವಾಗುವಂತೆ ಅತಿ ಸಂಕೀರ್ಣ ಹಾಗು ಆಧುನಿಕ ವಿಜ್ಞಾನ ಪರಿಕಲ್ಪನೆಗಳನ್ನು ಅತಿ ಸುಲಭವಾಗಿ ಮನೋಜ್ಞವಾಗಿ ಲಘು ವಿನೋದ ಮಿಶ್ರಿತ ಭಾಷಣಮಾಡುತ್ತಿದ್ದುದು ರಾಮನ್ನರ ವೈಶಿಷ್ಟ್ಯ ಎಂದು ಗಮನಿಸಿದ್ದಾರೆ .

೧೯೨೬ ರಲ್ಲಿ ನಡೆದ ಒಂದು ಪದವಿ ಪ್ರದಾನ ಸಮಾರಂಭದಲ್ಲಿ ರಾಮನ್ನರು ಹೇಳಿದ “… ನಾವಿಂದು ವೇದಕಾಲದಲ್ಲಿ ಜೀವಿಸುತ್ತಿಲ್ಲ. ಆಧುನಿಕ ಯುಗದಲ್ಲಿದ್ದೇವೆ. ಸಂಶೋಧನೆಯ ಯುಗದಲ್ಲಿದ್ದೇವೆ. ಕಲ್ಪನೆ ಹೊಸ ಹೊಸ ಕ್ಷೇತ್ರಗಳಲ್ಲಿ ವಿಹರಿಸಿ ಸಂಶೋಧನೆ ನಡೆಸಿ ನಿಸರ್ಗದ ನಿಗೂಢ ಸಮಸ್ಯೆಗಳನ್ನು ಬಗೆಹರಿಸುವ ದಾರಿಯಲ್ಲಿದ್ದೇವೆ. ವ್ಯಕ್ತಿಯ ಸಕಲ ಶಕ್ತಿಗಳು ಈ ದಾರಿಯಲ್ಲಿ ಕೇಂದ್ರೀಕೃತವಾಗಿವೆ. ಇಂತಹ ಮಾನವ ಶಕ್ತಿಯ ಪ್ರವಾಹದ ವೇಳೆಯಲ್ಲಿ ಭಾರತದಲ್ಲಿರುವ ನಾವು ದಂಡೆಯಲ್ಲಿ ನಿಂತು ಬೆರಗಾಗಿ ನೋಡುತ್ತಿರಬಾರದು. ಹೀಗೆ ನಿಂತರೆ ನಾವು ಅಸಮರ್ಥರು, ಗೂಡಿನಲ್ಲಿ ಬೀಗ ಹಾಕಿಸಿಟ್ಟುಕೊಳ್ಳಲು ಮಾತ್ರ ಯೋಗ್ಯರು ಎಂದು ಒಪ್ಪಿಕೊಂಡಂತೆ. ಆರ್ಥಿಕವಾಗಿಯೂ ರಾಜಕೀಯವಾಗಿಯೂ ಅದು ನಮ್ಮ ಸರ್ವ ನಾಶ ..” ಕರೆಯನ್ನು ಜಿಟಿನಾ ನಮಗೆ ನೆನಪಿಸುತ್ತಾರೆ.

ನಮ್ಮ ಮಗ ಚಿ. ಸಂದೀಪನು ಜಿಟಿನಾರನ್ನು ೨೦೦೬ ರಲ್ಲಿ ಭೇಟಿ ಮಾಡಿ ಕೆಲವು ದಾಸರ ಕೃತಿಗಳನ್ನು ಹಾಡಿ ಅವರ ಪ್ರಶಂಸೆ ಮತ್ತು ಪ್ರೋತ್ಸಾಹಗಳನ್ನು ಪಡೆದಿದ್ದನು. ಆ ಸಮಯದಲ್ಲಿ ಬಹುಮಾನ ರೂಪದಲ್ಲಿ ಜಿಟಿನಾ ಕೆಲವು ಪುಸ್ತಕಗಳನ್ನು ಕೊಟ್ಟರು. ಅವು ನಮ್ಮ ಬೆಲೆ ಕಟ್ಟಲಾಗದ ಸಂಪತ್ತು. ಅವರಿಗೆ ಸಮಯಕ್ಕೆ ಸರಿಯಾಗಿ ವಂದನೆಗಳು ಮತ್ತು ಧನ್ಯವಾದಗಳನ್ನು ಹೇಳಲಿಲ್ಲವೆಂಬುದೇ ನನ್ನ ದುಃಖ, ಕೊರಗು.

ಜಿಟಿನಾ ಪುಸ್ತಕಗಳನ್ನು ಓದುವುದೇ ಒಂದು ಭಾಗ್ಯ. ಅವರ ಹೆಚ್ಚಿನ ಪುಸ್ತಕಗಳು ಅವರ ಮಗನಾದ ಅಶೋಕವರ್ಧನ ನಡೆಸುತ್ತಿದ್ದ ಅತ್ರಿ ಬುಕ್ ಸೆಂಟರ್, ಮಂಗಳೂರು (athreebook@gmail.com), ಇಲ್ಲಿನ ಪ್ರಕಟಣೆಗಳಾಗಿದ್ದವು, ಅಲ್ಲದಿದ್ದರೂ ದೊರೆಯುತ್ತಿದ್ದವು. ಆ ಪುಸ್ತಕಗಳ ಓದುಗರಿಗೆ ಒಂದು ಅಪೂರ್ವವಾದ ಅನುಭವ ಯಾನ ಕಾದಿರುತ್ತದೆ ನಿಸ್ಸಂಶಯವಾಗಿ.

(ವಿಶೇಷ ಸೂಚನೆ: ಅತ್ರಿ ಬುಕ್ ಸೆಂಟರ್ (ಮುಚ್ಚಿ, ವಾನಪ್ರಸ್ಥ – ಓದಿ) ೨೦೧೨ರಲ್ಲಿ ಕಾರ್ಯಾಚರಣೆ ನಿಲ್ಲಿಸಿತು.)