ಪ್ರೊ| ಸಿ.ಎನ್. ರಾಮಚಂದ್ರನ್! ಆತ್ಮೀಯ ವಲಯಗಳಲ್ಲಿ ಸಿಎನ್ನಾರ್ ಎಂದೇ ಖ್ಯಾತರಾದ ಇವರ ಕಿರು ಕಾದಂಬರಿ – ಶೋಧವನ್ನು ನಾನು ಮಾರಿದವನೇ ಆದರೂ ಕನ್ನಡದ ವಿಮರ್ಶಕರಲ್ಲಿ ಇವರು ಗಣ್ಯರೆಂದು ತಿಳಿದವನೇ ಆದರೂ ಅವರು ಮಂಗಳೂರು ವಿವಿನಿಲಯಕ್ಕೆ (ಸ್ನಾತಕೋತ್ತರ ಕೇಂದ್ರದ) ಇಂಗ್ಲಿಶ್ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾಗಿ ಬರುವವರೆಗೆ ನನಗೆ ವೈಯಕ್ತಿಕ ಪರಿಚಯಕ್ಕೆ ದಕ್ಕಿರಲಿಲ್ಲ. ಅವರು ಮಂಗಳೂರಿಗೆ ಬಂದ ಹೊಸತರಲ್ಲೇ ಒಮ್ಮೆ ನನ್ನಲ್ಲಿಗೆ ಬಂದಾಗ ಮನವಿ ಮಾಡಿಕೊಂಡರು, “ದಯವಿಟ್ಟು ಇಂಗ್ಲಿಶ್ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಬಝಾರ್ ಗೈಡ್‌ಗಳನ್ನು ತರಿಸಬೇಡಿ.” ಗಮನಿಸಿ – ಇದು ಇಂಗ್ಲಿಶ್ ವಿಭಾಗ ಮುಖ್ಯಸ್ಥನ ಆಜ್ಞೆ ಅಲ್ಲ. ವ್ಯಾಪಾರಿಯೊಬ್ಬನ ಬೇಕು ಬೇಡಗಳನ್ನು ನಿರ್ದೇಶಿಸುವ, ಸ್ವಯಂ ಆರೋಪಿತ ಧರ್ಮದರ್ಶಿತ್ವದ ಗರ್ವವೂ ಅಲ್ಲ. ‘ಮಾಸ್ಟರ್’ಗಳಾಗಬೇಕಾದ ಅವರ ವಿದ್ಯಾರ್ಥಿಗಳು ಮೂಲ ಪಠ್ಯಗಳನ್ನು ಅರ್ಥೈಸಿಕೊಳ್ಳಲು ಒಳದಾರಿ ಹಿಡಿಯಬಾರದೆಂಬ ಕಾಳಜಿ. ನನ್ನಲ್ಲಿ ‘ಇಂಗ್ಲಿಶ್ ಎಮ್ಮೆ’ (ಗೊಡ್ಡು) ಗುರುತಿಸಿದ್ದರು ಮತ್ತು ತಮ್ಮ ಆಜನ್ಮ ಸಾಹಿತ್ಯ ಪ್ರಸಾರದ ಕೈಂಕರ್ಯದಲ್ಲಿ ನನಗೂ ಒಂದು ಗೌರವದ ಸ್ಥಾನ ಕಲ್ಪಿಸಿದ್ದರು, ಕಿರಿಯ ಗೆಳೆಯನಾಗಿ ವಿಶ್ವಾಸಕ್ಕೂ ತೆಗೆದುಕೊಂಡಿದ್ದರು! (ನಾನು ಮತ್ತೆ ಗೈಡ್‌ಗಳನ್ನು ತರಿಸಲಿಲ್ಲ ಎಂದು ಬೇರೆ ಹೇಳಬೇಕೇ?)

ಸಿಎನ್ನಾರ್ ತಮ್ಮ ವೈಯಕ್ತಿಕ ಪುಸ್ತಕ ಖರೀದಿಗೂ ಸಾಂಸ್ಥಿಕ ಪುಸ್ತಕ ಶಿಫಾರಸಿಗೂ ಸ್ವತಃ ಅಂಗಡಿಯ ಕಪಾಟುಗಳನ್ನು ನೋಡಿಯೇ ಮುಂದುವರಿಯುತ್ತಿದ್ದರು. ನಾನವರಿಗೆ ಭಾರೀ ಪುಸ್ತಕಗಳೇನೂ ಕೊಟ್ಟವನಲ್ಲ. ಆದರೆ ಇಂದು ಯೋಚಿಸುವಾಗ ಆ ಭೇಟಿಗಳು ಅವರಿಗೆ ಒಟ್ಟಾರೆ ಪುಸ್ತಕ ಮಾರುಕಟ್ಟೆಯ ಮನಸ್ಸನ್ನು ತಿಳಿದುಕೊಳ್ಳುವುದಕ್ಕೂ ಅನುಕೂಲವಾಗುತ್ತಿದ್ದಿರಬೇಕು ಅನಿಸುತ್ತದೆ. ಅದಕ್ಕೂ ಮಿಗಿಲಾಗಿ ಅವರು ಹಾಗೆ ಬಂದಾಗೆಲ್ಲಾ ನನ್ನ ಪುಸ್ತಕ ಮಾರಾಟದ್ದೂ ಇತರತ್ರವೂ (ಪರಿಸರ, ಬಳಕೆದಾರ, ಯಕ್ಷಗಾನ ಇತ್ಯಾದಿ) ಒದಗಿದ ಹೋರಾಟದ ಕಡತಗಳ (‘ಜಗಳಗಂಟ’ ಫೈಲ್ ಎಂದೇ ತಮಾಷೆಗೆ ಹೆಸರಿಸಿದ್ದೆ) ಎಷ್ಟು ಚಿಲ್ಲರೆ ಪ್ರಸಂಗವಾದರೂ ಕೇಳಿ ಪಡೆದು, ವಿವರವಾಗಿ ಓದಿ, ಚರ್ಚಿಸುತ್ತಿದ್ದರು. ಇದು ನನಗೂ ಹೆಚ್ಚಿನ ನೈತಿಕ ಬಲ ಕೊಡುತ್ತಿತ್ತು. ಅದಕ್ಕೂ ಮಿಗಿಲಾಗಿ ಈ ಮಥನದ ಒಳ್ಳೆಯ ಅಂಶಗಳನ್ನು ಸಿಎನ್ನಾರ್ ತಮ್ಮ ವ್ಯಾಪ್ತಿಯ ಕಾರ್ಯರಂಗದಲ್ಲಿ ಅಳವಡಿಸಿಕೊಂಡು, ಪುಸ್ತಕೋದ್ಯಮವನ್ನು ಹೆಚ್ಚು ಹಸನಾಗುವಂತೆ ಮಾಡಿದ್ದಕ್ಕೆ ನಾನೆರಡು ಉದಾಹರಣೆಗಳನ್ನು ಇಲ್ಲಿ ಹೇಳಲೇ ಬೇಕು.

ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ತನ್ನ ವರ್ಷಾವಧಿ ಪುರಸ್ಕಾರಕ್ಕೆ ಲೇಖಕ, ಪ್ರಕಾಶಕರಿಂದ ಅರ್ಜಿ ಕರೆಯುತ್ತಿದ್ದದ್ದನ್ನು (ಜೊತೆಗೆ ಆರೇಳು ಪ್ರತಿ ಪುಸ್ತಕ ಉಚಿತವಾಗಿ ಹೋಗಲೇಬೇಕಿತ್ತು) ಒಂದೋ ಎರಡೋ ವರ್ಷದ ಮಟ್ಟಿಗೆ ಪರಿಷ್ಕರಿಸಿಕೊಂಡದ್ದು ಸೀಯೆನ್ನಾರ್ ಪ್ರವೇಶದಿಂದಲೇ ಎಂದು ನಾನು ತಿಳಿದಿದ್ದೇನೆ. ಆಗ ಅಕಾಡೆಮಿಯ ಆಯ್ಕಾ ಸದಸ್ಯರಾದವರು ಪರಿಚಿತ ವಲಯಗಳಲ್ಲೂ ಸಮೀಪದ ಪುಸ್ತಕ ಮಳಿಗೆಗಳಲ್ಲೂ ಖುದ್ದು ಪುಸ್ತಕಗಳನ್ನು ನೋಡಿ, ಕೊಂಡು, ಶಿಫಾರಸು ಮಾಡಿದ್ದರು.

ನೇರ ನಾನನುಭವಿಸಿದ ಇನ್ನೊಂದು ಪರಿಣಾಮ – ಮಂ.ವಿ.ವಿ ನಿಲಯದ ಗ್ರಂಥಾಲಯಕ್ಕೆ ಸಂಬಂಧ ಪಟ್ಟದ್ದು, ನಭೂತೋ ಎನ್ನುವಂತದ್ದು! ಗ್ರಂಥಾಲಯಕ್ಕೆ (ಸಾಮಾನ್ಯವಾಗಿ ಎಲ್ಲಾ ಸರಕಾರೀ ಅನುದಾನಿತ ಸಂಸ್ಥೆಗಳಿಗೂ ಇದು ಬಿಟ್ಟದ್ದಲ್ಲ!) ಸದಾ ದಾನಿ-ನಾನುತನದ ಶ್ರೇಷ್ಠಸ್ತಿಕೆ (superiority complex), ಪುಸ್ತಕ ಒದಗಣೆದಾರರಿಗೆ ದೀನ-ನಾನುತನವೇ (inferiority complex) ರೂಢಿಸಿಹೋಗಿದೆ! ಆದರೆ ನನ್ನ ಧೋರಣೆ – ಸ್ಪಷ್ಟ ಸೂಚನೆಯಿಲ್ಲದೆ ಎಂದೂ ಯಾವುದೇ ಸಂಸ್ಥೆಯನ್ನು, ಇಲಾಖಾ ಅಧ್ಯಾಪಕ ಅಥವಾ ಅಧಿಕಾರಿಯನ್ನು ನನ್ನಿಂದ ಪುಸ್ತಕ ಕೊಳ್ಳಲು ಕೇಳಿಕೊಂಡದ್ದಿಲ್ಲ, ವ್ಯಾಪಾರಕ್ಕಾಗಿ ಸ್ನೇಹ ಬೆಳೆಸಿದ್ದೂ ಇಲ್ಲ. ಆದರೂ ನನ್ನ ಪುಸ್ತಕ ವ್ಯಾಪಾರೀತನದ ಮೊದಲ ದಿನಗಳಲ್ಲಿ, ಯಾವುದೇ ಗುಣಪಕ್ಷಪಾತಿಯಾದ ವಿವಿ ಅಧ್ಯಾಪಕನೊಬ್ಬ ತಾನಾಗಿಯೇ ಒಂದಷ್ಟು ಪುಸ್ತಕಗಳು ಬೇಕೆಂದು ಆರಿಸಿದರೆ ನಾನು ಸಹಕರಿಸುತ್ತಿದ್ದೆ. ವಿವಿನಿಲಯದ ನಿಯಮಾನುಸಾರ ಅದನ್ನು ದ್ವಿಪ್ರತಿಗಳಲ್ಲಿ ‘ಆಯ್ಕಾಪಟ್ಟಿ’ (Approval Note) ಮಾಡಿ ನನ್ನ ಪ್ರತಿನಿಧಿಯ ಮೂಲಕ ಕೊಣಾಜೆಗೆ ಕಳಿಸಿಕೊಡುತ್ತಿದ್ದೆ. ನನ್ನ ಪ್ರತಿನಿಧಿ ಗ್ರಂಥಾಲಯದ ರಿಜಿಸ್ಟರಿನಲ್ಲಿ ಒಪ್ಪಿಸಲು ಒಯ್ದ ಅಷ್ಟೂ ಪುಸ್ತಕಗಳನ್ನು ನಮೂದಿಸಿ, ನಮ್ಮ ಪಟ್ಟಿಯೊಂದರ ಮೇಲೆ ‘ಆಯ್ಕೆಗೆ ಬಂದಿದೆ’ ಮುದ್ರೆ ಒತ್ತಿಸಿಕೊಂಡು ಬರಬೇಕು. ಅನಂತರ ಅವರ ಅನುಕೂಲದಲ್ಲಿ ಗ್ರಂಥಾಲಯ ‘ಇದು ಇಲ್ಲ’ ಎಂದೋ ಅಕಸ್ಮಾತ್ ಇದ್ದರೆ ‘ಹೆಚ್ಚುವರಿ ಪ್ರತಿ ಬೇಕೋ’ ಎಂದು ಷರಾ ಹಾಕಿ ವಿಷಯಕ್ಕೆ ಸಂಬಂಧಿಸಿದ ಇಲಾಖೆಗೆ ಕಳಿಸುತ್ತಿತ್ತು. ಅಲ್ಲಿನ ‘ಬೇಕು/ಬೇಡ’ಗಳನ್ನು ತರಿಸಿಕೊಂಡು ನನಗೆ ಬಿಲ್ ಮಾಡಲು ಆದೇಶ ಹೊರಡುತ್ತಿತ್ತು. ಬಿಲ್ ತ್ರಿಪ್ರತಿಗಳಲ್ಲಿ ಕೊಟ್ಟು, ಹೆಚ್ಚುವರಿ ಪ್ರತಿಗಳನ್ನು ಕೊಡುವುದೋ ತಿರಸ್ಕೃತ ಪುಸ್ತಕಗಳನ್ನು ವಾಪಾಸು ತರುವುದೋ ಮತ್ತೆ ನನ್ನ ಪ್ರತಿನಿಧಿಯೇ ಕೊಣಾಜೆಗೆ ಹೋಗಿ ಮಾಡಬೇಕಾಗುತ್ತಿತ್ತು. ಗಮನಿಸಿ, ಪ್ರತಿ ಓಡಾಟಕ್ಕೂ (ಖರ್ಚಂತೂ ಉಂಟೇ) ನಾನು ಪ್ರತಿನಿಧಿಯನ್ನು ಅರ್ಧ ದಿನದ ಮಟ್ಟಿಗೆ ನಿತ್ಯದ ಕೆಲಸದಿಂದ ಕಳೆದುಕೊಳ್ಳಬೇಕಾಗುತ್ತಿತ್ತು. ಇಷ್ಟೆಲ್ಲಾ ಆದ ಮೇಲೂ ಬಿಲ್ಲು ಅಲ್ಲೇ ಸುಮಾರು ಅವಸ್ಥಾಂತರಗಳನ್ನು ದಾಟಿ ನನಗೆ ಪಾವತಿ ಬರುವಾಗ ತಿಂಗಳು ಎರಡು ಮೂರು ಬಿಡಿ, ಎಷ್ಟೋ ಬಾರಿ ಆರ್ಥಿಕ ವರ್ಷವೇ ಕಳೆದು ಹೋದದ್ದೂ ಇತ್ತು. ವಿವಿನಿಲಯದೊಡನೆ ಅಂಥಾ ಅನುಭವಗಳು ಹೆಚ್ಚಿದ ಮೇಲೆ, ಅಂದರೆ ಸಿಎನ್ನಾರ್ ಬರುವ ಕಾಲಕ್ಕೆ, ನಾನು ‘ವಿವಿನಿಲಯಕ್ಕೆ ಪುಸ್ತಕ ಮುಟ್ಟಿಸಲು ಅನುಕೂಲವಿಲ್ಲ’ ಎಂದು ಹೇಳಲು ಕಲಿತಿದ್ದೆ. ಆಯ್ಕಾಪಟ್ಟಿಯ ಅವಕಾಶ ಹಾಗಿರಲಿ, ಪಾವತಿ ಕೊಡದೇ ಪುಸ್ತಕವನ್ನೇ ಕೊಡುವುದಿಲ್ಲ ಎನ್ನುವ ‘ದೊಡ್ಡಸ್ತಿಕೆ’ ಬೆಳೆಸಿಕೊಂಡಿದ್ದೆ! ಸಿಎನ್ನಾರ್ ವಸ್ತುಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡರು. ದಿನಕ್ಕೆ ಹತ್ತೆಂಟು ಸಲ ಯಾವ್ಯಾವುದೋ ಕೆಲಸಕ್ಕೆ ಮಂಗಳೂರಿಗೆ ಓಡಾಡುವ ವಿವಿನಿಲಯದ ವ್ಯಾನ್ ಮೂಲಕ ಪುಸ್ತಕದ ಕಟ್ಟು ತರಿಸಿಕೊಳ್ಳುತ್ತಿದ್ದರು. ಎಷ್ಟೋ ಬಾರಿ ಪೂರ್ಣ ಮುಂಪಾವತಿ ಕೊಟ್ಟು, ಇಲ್ಲವಾದರೆ ವೈಯಕ್ತಿಕ ಜವಾಬ್ದಾರಿಯ ಮೇಲೆ (ನನ್ನ ಒಪ್ಪಿಗೆಯೊಡನೆ) ಹದಿನೈದೇ ದಿನಗಳಲ್ಲಿ ಪಾವತಿ ಒದಗಿಸುವ ವ್ಯವಸ್ಥೆಯನ್ನು ಯಾವುದೇ ಪಕ್ಷಪಾತದ ಸೋಂಕಿಲ್ಲದಂತೆ ನಡೆಸಿಕೊಟ್ಟಿದ್ದರು. (ಈ ವಿಚಾರದಲ್ಲಿ ವಿವಿನಿಲಯದ ಕನ್ನಡ ವಿಭಾಗದ ಹಲವು ಅಧ್ಯಾಪಕ ಗೆಳೆಯರೂ ಸ್ಮರಣಾರ್ಹರೇ) ಅಂಥಲ್ಲೂ ಒಮ್ಮೆ ಯಾವುದೋ ಪ್ರಾಮಾಣಿಕ ಕಾರಣಕ್ಕೆ ವಿವಿನಿಲಯ ಪಾವತಿ ವಿಳಂಬಿಸಿದಾಗ ಸಿಎನ್ನಾರ್ ನನಗೆ ವೈಯಕ್ತಿಕ ಚೆಕ್ ಕೊಟ್ಟು “ವಿವಿನಿಲಯದಿಂದ ನಿಮಗೆ ಚೆಕ್ ಬಂದಾಗ ನನ್ನ ಹಣ ಮರಳಿಸಿದರೆ ಸಾಕು” ಎಂದದ್ದು ನನ್ನ ಲೆಕ್ಕಕ್ಕೆ ನಭೂತೋ ಎನ್ನುವ ನೆನಪು!
ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಕನ್ನಡ ಕಾದಂಬರಿಯ ನೂರು ವರ್ಷದ ಕುರಿತೊಂದು ವಿಶೇಷ ಗೋಷ್ಠಿ ನಡೆಸಿದಾಗ ಸಿಎನ್ನಾರ್ ಒಂದು ಅವಧಿಯ ಅಧ್ಯಕ್ಷ, ನಾನು ಓರ್ವ ಪ್ರಬಂಧ(ಕೋ)ಕಾರ. ಬಸ್ಸಿನಲ್ಲಿ ಹೋಗಿ ಬರುವ ದಾರಿಯುದ್ದಕ್ಕೂ ಪುಸ್ತಕೋದ್ಯಮದ ಕುರಿತು ಅವರು ನನ್ನೊಡನೆ ನಡೆಸಿದ ವೈಚಾರಿಕ ಚರ್ಚೆ ತುಂಬಾ ಅರ್ಥಪೂರ್ಣವಾಗಿತ್ತು ಎಂದಷ್ಟೇ ಇಂದು ನೆನಪಿಸಿಕೊಳ್ಳಬಲ್ಲೆ. ನನ್ನ ಐತಿಹಾಸಿಕ ಪ್ರಜ್ಞೆಯ ಕೊರತೆಯಿಂದ ಅದನ್ನಂದು ದಾಖಲಿಸಿಕೊಳ್ಳಲಿಲ್ಲ ಮತ್ತು ಇಂದು ನೆನಪಿಸಿಕೊಳ್ಳಲಾರೆ ಎನ್ನುವುದಕ್ಕೆ ವಿಷಾದವಿದೆ.

ಸಿಎನ್ನಾರ್ ತನ್ನನುಭವಕ್ಕೆ ಹೊರಗಿನದ್ದೇ ಆದರೂ ತಾತ್ವಿಕ ಚರ್ಚೆಗಳಿಗೆ ಅವಕಾಶ ಸಿಕ್ಕಲ್ಲೆಲ್ಲಾ ಭಾಗಿಯಾಗುವ ಉತ್ಸಾಹ ಉಳಿಸಿಕೊಂಡಿದ್ದಾರೆ. ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಪ್ರಯೋಗದ ಕುರಿತು ತೀವ್ರ ಚರ್ಚೆ ನಡೆಯುತ್ತಿದ್ದ ದಿನಗಳಲ್ಲಿ ನಾನೊಂದು ಅನೌಪಚಾರಿಕ ಚರ್ಚಾಕೂಟ (ಸಾರ್ವಜನಿಕಕ್ಕೆ ತಿಳಿಸಿ ಅಲ್ಲ) ನನ್ನ ಮನೆಯಲ್ಲೇ ನಡೆಸಿದ್ದೆ. ಒಟ್ಟಾರೆ ಪರಿಕಲ್ಪನೆಯ ಮಿದುಳು – ಶತಾವಧಾನಿ ಗಣೇಶ್ ಮತ್ತು ಪ್ರಯೋಗ ಪಟು ಉಪಾಧ್ಯ ಅವರ ಹಿಮ್ಮೇಳದ ಕಲಾವಿದರೂ ಅಂದು ಬಂದಿದ್ದರು. ಆ ಪ್ರಯೋಗಗಳ ಬಗ್ಗೆ ದೊಡ್ಡ ಅಪಸ್ವರ ತೆಗೆದ ದೇವು ಹನೆಹಳ್ಳಿಯೂ ಇದ್ದರು. ನನ್ನ ಒತ್ತಾಯಕ್ಕೆ ಪ್ರಭಾಕರ ಜೋಶಿ ಮತ್ತು ಸ್ಥಳೀಯರೇ ಆದ ಕುಂಬಳೆ ಸುಂದರರಾವ್, ಮುರಳೀಧರ ಪ್ರಭು, ಮನೋಹರ ಉಪಾಧ್ಯ ಮುಂತಾದವರೂ ಉಡುಪಿಯಿಂದ ಮುರಳಿ ಕಡೆಕಾರ್ ವಿಶೇಷ ಕಾರು ಮಾಡಿ ಸೇರಿಸಿಕೊಂಡು ಬಂದಿದ್ದ ರಾಘವ ನಂಬಿಯಾರ್, ಬನ್ನಂಜೆ ಸಂಜೀವ ಸುವರ್ಣ, ಉದ್ಯಾವರ ಮಾಧವಾಚಾರ್ ಕೂಡಾ ಭಾಗವಹಿಸಿದ್ದರು. ಮುಂದಾಗಿಯೇ ಈ ಕಲಾಪದ ಸುಳಿವು ಸಿಕ್ಕಿದ ಸಿಎನ್ನಾರ್, ತನಗೆ ಭಾರೀ ಯಕ್ಷಗಾನವಾಗಲೀ ಸದ್ಯ ಚರ್ಚೆಯಲ್ಲಿರುವ ಏಕವ್ಯಕ್ತಿ ಪ್ರಯೋಗದ್ದೇ ಆದರೂ ವೀಕ್ಷಣಾನುಭವ ಇಲ್ಲ. ಆದರೆ ನಡೆಯುವ ಚರ್ಚೆಯನ್ನು ಮುಖ್ಯವಾಗಿ ಕೇಳುವ ಕುತೂಹಲವಿದೆ. ಭಾಗವಹಿಸಬಹುದೇ ಎಂದು ಕೇಳಿ, ಬಂದು ತೊಡಗಿಕೊಂಡಿದ್ದರು. ಅದಕ್ಕೆ ಅವರ ಮೌಲಿಕ ಅಭಿಪ್ರಾಯಗಳನ್ನೂ ಕೊಟ್ಟದ್ದನ್ನು ಇಲ್ಲೇ ಹಿಂದಿನ ನನ್ನ ಲೇಖನಗಳಲ್ಲಿ ನೀವು ಗಮನಿಸಬಹುದು.

ಸಿಎನ್ನಾರ್ ನನ್ನದೇ ವ್ಯವಸ್ಥೆಯ ಮೂರು ಔಪಚಾರಿಕ ಕಾರ್ಯಕ್ರಮಗಳಲ್ಲಿ ತುಂಬಾ ಪ್ರೀತಿಯಿಂದ, ಶ್ರದ್ಧೆಯಿಂದ (ಇವೆರಡೂ ಅವರು ವಹಿಸಿಕೊಂಡ ಯಾವುದೇ ಹೊಣೆಯಲ್ಲೂ ಎದ್ದು ಕಾಣುವ ಗುಣಗಳೇ ಆಗಿವೆ) ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಭಯಾರಣ್ಯದಲ್ಲಿ ನಡೆದ ಶಿಬಿರದಲ್ಲಿ ಅವರ ಪಾತ್ರ ನೀವೀಗಾಗಲೇ ಓದಿದ್ದೀರಿ, ನಾನು ಮರುಜಪಿಸುವುದಿಲ್ಲ. ಮತ್ತೊಂದು ಕನ್ನಡದ ಖ್ಯಾತ ಕತೆಗಾರ ಬಾಗಲೋಡಿ ದೇವರಾಯರ (೧೯೨೭-೮೫) ಕುರಿತು ನಾನು ಪ್ರಕಟಿಸಿದ ಸಂಸ್ಮರಣ ಗ್ರಂಥ – ‘ದೇವಸ್ಮರಣೆ’ಯ (೨೦೦೩, ಸಂಪಾದಕ: ಜಿ.ಟಿ. ನಾರಾಯಣ ರಾವ್, ಸದ್ಯ ಪ್ರತಿಗಳು ಮುಗಿದಿವೆ) ಲೋಕಾರ್ಪಣೆ. ಅದರ ಕುರಿತ ವಿವರಗಳನ್ನು ಮುಂದೆಂದಾದರೂ ನಾನು ವಿಸ್ತರಿಸುತ್ತೇನೆ.

ಮೂರನೆಯದೂ ಹೀಗೇ ನನ್ನ ಇನ್ನೊಂದು ಪ್ರಕಟಣೆ – ದುಃಖಾರ್ತರು (೨೦೦೨, ವಿಕ್ಟರ್ ಹ್ಯೂಗೋನ ಕಾದಂಬರಿಯ ಕನ್ನಡ ಅವತರಣಿಗೆ – ಎ.ಪಿ.ಸುಬ್ಬಯ್ಯ. ಪರಿಷ್ಕೃತ ಎರಡನೇ ಮುದ್ರಣ ಬೆಲೆ ರೂ ಎಪ್ಪತ್ತು ಮಾತ್ರ) ಲೋಕಾರ್ಪಣದ್ದೇ ವೃತ್ತಾಂತ. ಆದರೆ ಇಲ್ಲಿನೊಂದು ಸಿಎನ್ನಾರ್ ವೈಶಿಷ್ಟ್ಯವನ್ನು ನಾನು ಎತ್ತಿ ಆಡಲೇಬೇಕು.

ದುಃಖಾರ್ತರು ಅನುವಾದಕ ಎ.ಪಿ.ಸುಬ್ಬಯ್ಯನವರ (೧೯೦೧-೭೭, ನನ್ನ ಅಜ್ಜ) ಕಾರ್ಯಕ್ಷೇತ್ರ ಪುತ್ತೂರು. ಸಹಜವಾಗಿ ನಾನು ಲೋಕಾರ್ಪಣ ಸಮಾರಂಭವನ್ನು ಪುತ್ತೂರಿನ ಸಭಾಭವನವೊಂದರಲ್ಲಿ, ಅದೊಂದು ಆದಿತ್ಯವಾರ ಸಂಜೆ, ಸುಪ್ರಸಿದ್ಧ ಸಾಹಿತ್ಯ ಪರಿಚಾರಕ ಬೋಳಂತಕೋಡಿ ಈಶ್ವರ ಭಟ್ಟರ ಸಹಯೋಗದಲ್ಲಿ ಆಯೋಜಿಸಿದ್ದೆ. ಅದರ ಖಾಸಾ ಸಂಭ್ರಮವನ್ನು ನನ್ನೆಲ್ಲಾ ಸೋದರ ಮಾವಂದಿರು, ಚಿಕ್ಕಮ್ಮಂದಿರೂ ಬೆಳಿಗ್ಗೆಯೇ ಒಟ್ಟಾಗಿ ಮೂಲ ಮನೆಯಲ್ಲಿ ನಡೆಸಲಿದ್ದರು. ಅದರಲ್ಲೂ ಭಾಗವಹಿಸಲು ನನ್ನೆಲ್ಲಾ ಒತ್ತಾಯವನ್ನು ಸಿಎನ್ನಾರ್ ಸವಿನಯ ನಿರಾಕರಿಸಿದರು. ಮತ್ತು ತಾನು ಸ್ವತಂತ್ರವಾಗಿ ಸಭಾಭವನಕ್ಕೆ ಸಕಾಲದಲ್ಲಿ ಬರುವ ಭರವಸೆಯನ್ನೂ ಕೊಟ್ಟುಬಿಟ್ಟರು. ಹೇಳಿದಂತೆ ಅರ್ಧ ಗಂಟೆ ಮುಂಚಿತವಾಗಿಯೇ ಬಂದರು, ಆದರೆ ಒಳಗೆ ಬರಲಿಲ್ಲ. ಎದುರುಗೊಂಡ ಈಶ್ವರ ಭಟ್ಟರು ಅವರಿಗೆ ಆತ್ಮೀಯರೇ ಇದ್ದರು. ಆದರೂ ಸಿಎನ್ನಾರ್, “ಮೊದಲು ಅಶೋಕವರ್ಧನ್ ಅವರನ್ನು ಕರೀರಿ. ಆಮೇಲೆ ನಾನು ಒಳಗ್ ಬರ್ತೀನಿ” ಎಂದರು. ಭವನದೊಳಗೇನೋ ವ್ಯವಸ್ಥೆಯಲ್ಲಿದ್ದ ನಾನು ಸ್ವಲ್ಪ ಆತಂಕದಲ್ಲೇ ದೌಡಾಯಿಸಿದೆ. ಇಲ್ಲ, ಅವರ ಮುಖಭಾವದಲ್ಲಿ ಏನೂ ಅಸಮಾಧಾನ ಕಾಣಲಿಲ್ಲ. ಆತ್ಮೀಯತೆಯಲ್ಲೇ ನನ್ನ ಭುಜಕ್ಕೆ ಕೈಹಾಕಿ ಪಕ್ಕಕ್ಕೆ ಕರೆದೊಯ್ದು ಮೆಲು ಧ್ವನಿಯಲ್ಲಿ ಹೇಳಿದರು, “ನೋಡಿ, ಮೊದಲೇ ಹೇಳಿದಂತೆ ನನ್ನದೇ ವ್ಯವಸ್ಥೆಯಲ್ಲಿ ಬಾಡಿಗೆ ಕಾರು ಮಾಡಿಕೊಂಡು ಬಂದಿದ್ದೀನಿ. ನೀವೇನಾದರೂ ಬಾಡ್ಗೇ ಗೀಡ್ಗೇ ಕೊಡೋದಿದ್ರೆ ಈಗ್ಲೇ ಹೇಳಿ. ನಾನು ಕಲಾಪ ನಿರಾಕರಿಸಿ ವಾಪಾಸ್ ಹೋಗ್ತೀನಿ.” ಮೊದಲು ತಮ್ಮನ್ನು ಹೇರಿಕೊಳ್ಳುವ, ಮತ್ತೆ ಕೊಡಲಿಲ್ಲ ಅಥವಾ ಕೊಟ್ಟದ್ದು ಕಡಿಮೆಯಾಯ್ತು ಅಥವಾ ಕಂಡುಕೊಂಡದ್ದು ಸಾಕಾಗಲಿಲ್ಲ ಎಂದು ಗೊಣಗುವ ಅಥವಾ ಆಟೋಪವನ್ನು ಪ್ರದರ್ಶಿಸುವ, ಮತ್ತೇನಲ್ಲದಿದ್ದರೂ ಕಲಾಪದಲ್ಲಿ ಔದಾಸೀನ್ಯ ತೋರುವ ಅಸಂಖ್ಯ ‘ಮುಖ್ಯ ಅತಿಥಿ’ಗಳ ಕಥೆ ಕೇಳಿದ್ದ ನನಗೆ ಇದು ಪೂರ್ತಿ ಹೊಸಪರಿ. ಸ್ಮರಿಸಿಕೊಂಡಾಗ ಇಂದಿಗೂ ಹೃದಯ ತುಂಬಿದ ಭಾವ ಉಕ್ಕಿಸುವ ಸಿಎನ್ನಾರ್ ವೈಖರಿ!

೧೭-೭-೨೦೧೧ರಂದು ನನ್ನ ಮಿಂಚಂಚೆ ಡಬ್ಬಿಯಲ್ಲಿ ಒಂದು ಪತ್ರ:

“ನಿಮ್ಮ ವಿಶಿಷ್ಟ ಶಿಬಿರವನ್ನು ಕುರಿತ ಐದನೆಯ ಕಂತನ್ನು ಓದಿ, ಮತ್ತೆ ಮೊದಲಿನಿಂದ ಇಡೀ ಲೇಖನಮಾಲೆಯ ಮೇಲೆ ಕಣ್ಣಾಡಿಸಿ… ನಿಮ್ಮ ತಂದೆಯವರ ಬಗ್ಗೆ ಬರೆದದ್ದು ಓದಿ, ಜಿಟಿಎನ್ ಅವರನ್ನು ಕುರಿತ ನನ್ನ ನೆನಪು-ಅನುಭವಗಳನ್ನು ದಾಖಲಿಸಬೇಕೆಂದು ಒಂದು ಬಗೆಯ ತೀವ್ರ ಕಾಂಕ್ಷೆಯಾಗುತ್ತಿದೆ. ದಾಖಲೆಯೇಕೆ? ಗೊತ್ತಿಲ್ಲ. ಹಾಗೆಯೇ, ಒಬ್ಬರ ಬ್ಲಾಗ್‌ನಲ್ಲಿ ಮತ್ತೊಬ್ಬರು ಬರೆಯಬಹುದೋ ಇಲ್ಲವೋ ಗೊತ್ತಿಲ್ಲ. ನನ್ನದು ಇಂಗ್ಲೀಷ್ ಬ್ಲಾಗ್ ಆದುದರಿಂದ ಅದರಲ್ಲಿ ಈ ಲೇಖನವನ್ನು ಸೇರಿಸಲಾಗುವುದಿಲ್ಲ. ಆದುದರಿಂದ – ಜಿಟಿಎನ್ ಕುರಿತು ನನ್ನ ಅನುಭವಗಳನ್ನು ಕಥನದ ರೂಪದಲ್ಲಿ ಬರೆದರೆ, ನಿಮ್ಮ ಬ್ಲಾಗ್‌ನಲ್ಲಿ ಸೇರಿಸಲು ಸಾಧ್ಯವೆ? ಸಾಧುವೆ? ಇವೆರಡು ಪ್ರಶ್ನೆಗಳಿಗೂ ನೀವು ‘ಅಹುದು’ ಎಂದು ಹೇಳಿದರೆ, ಇನ್ನೊಂದು ೮-೧೦ದಿನಗಳಲ್ಲಿ ಒಂದು ಲೇಖನವನ್ನು ಬರೆದು ಕಳಿಸುತ್ತೇನೆ – ಎಷ್ಟು ದೀರ್ಘವಾಗುತ್ತದೋ ಗೊತ್ತಿಲ್ಲ. ನೀವು ‘ಇದು ಬೇಡ’ ಎಂದು ಹೇಳಿದರೂ ನನಗೇನೂ ಬೇಜಾರಾಗುವುದಿಲ್ಲ. ನಿಮ್ಮ ನಿರ್ಧಾರವನ್ನು ತಿಳಿಸಿ. ನಿಮ್ಮ ರಾಮಚಂದ್ರನ್”

ಇದನ್ನೋದಿದ ಮರುಕ್ಷಣದಲ್ಲಿ ಬರೆದೆ, “ನೀವಾಗಿಯೇ ಬರೆಯುತ್ತೇನೆಂದದ್ದು ನನ್ನ ಮತ್ತು ಬ್ಲಾಗ್ ಓದುಗರ ಭಾಗ್ಯ. ಶಬ್ದ, ಕಾಲಮಿತಿಗಳಿಲ್ಲದೆ ಧಾರಾಳ ಬರೆದು ಕಳಿಸಿ – ಮೊದಲ ಓದುಗ ನಾನೇ ಆಗಿ ಪ್ರಕಟಿಸುತ್ತೇನೆ. ನಾನು ಈ ಬ್ಲಾಗನ್ನು ಸದಾ ಅರೆ -ಖಾಸಗಿ ಸಾರ್ವಜನಿಕ ಮಾಧ್ಯಮ ಎಂದೇ ಗ್ರಹಿಸಿಕೊಂಡು ನಡೆಸಿಕೊಂಡು ಬಂದವನು. ಹಲವು ಹಿರಿಯರ, ಮಿತ್ರರ ಉದ್ದುದ್ದ ಲೇಖನಗಳನ್ನು ನಾನು ಈಗಾಗಲೇ ಹಾಕಿದ್ದೇನೆ. ಮತ್ತೆ ನನ್ನ ಓದುಗರಲ್ಲಿ ಸದಾ ನನ್ನ ಮನವಿಯೂ ಒಂದೇ – ಬರಿದೇ ಔಪಚಾರಿಕ ಮಾತುಗಳನ್ನು ಪ್ರತಿಕ್ರಿಯೆ ರೂಪದಲ್ಲಿ ತುಂಬಬೇಡಿ. ನಿಮ್ಮ ಸಮ-ಅನುಭವಗಳನ್ನು ವಿಷಯಾಂತರದ ಭಯ ಮತ್ತು ಸ್ಥಳಾವಕಾಶದ ಸಂಕೋಚ ಇಟ್ಟುಕೊಳ್ಳದೆ ಬರೆದು ಬ್ಲಾಗ್ ಒಂದು ಸಾರ್ವಜನಿಕ ಉಪಯುಕ್ತ ವೇದಿಕೆಯಾಗುವಂತೆ ಸಹಕರಿಸಿ.”

***********
ಮುಂದಿನವಾರ ಪ್ರೊ| ಸಿ.ಎನ್. ರಾಮಚಂದ್ರನ್ ಅವರ ಭಾವಲಹರಿ