ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ
ನಾಳೆ ಇನ್ನೂ ಕಾದಿದೆ
ಅಧ್ಯಾಯ – ೩೯

ಮೈಸೂರು ಮಹಾರಾಜರ ಸೇವೆಯಲ್ಲಿ ರೇಂಜರ್ ಆಗಿದ್ದು, ಮುಂದೆ ಮೈಸೂರು ಮೃಗಾಲಯದ ಮೇಲ್ವಿಚಾರಕರಾಗಿದ್ದ ನಮ್ಮ ಮನಮೋಹನ ಅಂಕ್‌ಲ್ ಹಾಗೂ ಅವರ ಮೈಸೂರು ಖೆಡ್ಡಾ ಬಗ್ಗೆ ತರಂಗದಲ್ಲಿ ಮುಖಪುಟ ಲೇಖನ ಪ್ರಕಟವಾದ ಸಮಯವದು. ಮತ್ತನಿತರಲ್ಲೇ ಕಾಕನಕೋಟೆ ಸಿನೆಮಾ ಮಾಡುವ ಯೋಜನೆಯೊಂದಿಗೆ ತನ್ನನ್ನು ಸಂಪರ್ಕಿಸಲಾದ ಬಗ್ಗೆ ಅಂಕ್‌ಲ್ ನನಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

ಮೈಸೂರಿನಲ್ಲಿ ಫಾರೆಸ್ಟ್ ಡಿಪಾರ್ಟ್‌ಮೆಂಟ್‌ನ ಕ್ವಾರ್ಟರ್‍ಸ್‌ನಲ್ಲಿ ಸಕುಟುಂಬ ಸಮೇತ ವಾಸವಾಗಿದ್ದ ಅಂಕ್‌ಲ್, ಮಹಾರಾಜರಂತೇ ಉನ್ನತಾಕಾರಾದ ಧೃಢಕಾಯರು. ಅವರ ದನಿ, ಮಾತುಕತೆ ಮಾತ್ರ ಬಹಳ ಮಿದು. ಅಷ್ಟೇ ಹಾಸ್ಯಮಯ. ತಮ್ಮಂತೇ ಗುಂಡಗೆ, ಚೆಲುವೆಯರೂ ಆಗಿದ್ದ ತಮ್ಮ ಹೆಣ್ಮಕ್ಕಳಿಗೆ, ಮಳೆ ಸುರಿಯುವಾಗ ಅದರ ಹನಿಗಳೆಡೆಯಿಂದ ತೂರಿಕೊಂಡು ಹೋಗುವಷ್ಟು ತೆಳ್ಳಗಾಗ ಬೇಕೆಂದು ಆಶೆ, ಎಂದಂದು ನಗಿಸುತ್ತಿದ್ದರು.

ನನ್ನ ತಮ್ಮ ಮುರಲಿ ತನ್ನ ಕಾಲೇಜ್ ದಿನಗಳಲ್ಲಿ ಹಾಗೂ ಗೆಳತಿ ದಯಾ ಸ್ನಾತಕೋತ್ತರ ವಿದ್ಯಾಭ್ಯಾಸ ಕಾಲದಲ್ಲಿ ಮೈಸೂರಿನ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದರು. ನಿವೃತ್ತರಾದ ಬಳಿಕ ನಗರದ ಬಡಾವಣೆಯೊಂದರಲ್ಲಿ ಮನೆ ಮಾಡಿಕೊಂಡ ಅಂಕ್‌ಲ್, ಮತ್ತೆ ಅದನ್ನೂ ತ್ಯಜಿಸಿ, ಬೆಂಗಳೂರಿಗೆ ಬಂದು ನೆಲಸಿದರು. ವೃತ್ತಿ ಜೀವನದಲ್ಲಿ ವ್ಯಸ್ತರಾಗಿದ್ದ ಕಾಲದಲ್ಲಿ ಅವರು ಏರ್ಪಡಿಸಿದ ಖೆಡ್ಡಾಗಳ ಸಂದರ್ಭ ಮಹಾರಾಜರೊಡನೆ, ರಾಷ್ಟ್ರಪತಿ, ಉಪರಾಷ್ಟ್ರಪತಿಗಳೊಡನೆ, ಸರಕಾರೀ ಅಧಿಕಾರಿಗಳೊಡನೆ, ಕಾಡಿನ ಒಡನಾಡಿಗಳೊಡನೆ ಅವರಿರುವ ಅಮೂಲ್ಯ ಹಳೆ ಫೋಟೋಗಳ ನಿಧಿಯನ್ನು ಅವರ ಮಕ್ಕಳು ತಂದೆಯ ನಿಧನಾನಂತರ ನನಗೆ ಕಳುಹಿ ಕೊಟ್ಟರು. ಅಸೌಖ್ಯದಿಂದ ಧರ್ಮಪತ್ನಿ ಅಗಲಿದ ಬಳಿಕ, ಅಂಕ್‌ಲ್ ಹೆಚ್ಚುಕಾಲ ಇರದಾದರು. ಬೆಳಿಗ್ಗೆ ಎಂದಿನಂತೆ ವಾಯುವಿಹಾರಕ್ಕೆ ಹೋದಲ್ಲಿ ಹೃದಯಾಘಾತವಾಗಿ ನಮ್ಮನ್ನಗಲಿದರು. ಜೀವಮಾನದ ಬಹುಕಾಲವನ್ನು ಪ್ರಕೃತಿಯ ಮಡಿಲಲ್ಲಿ ಕಳೆದ ಅಂಕ್‌ಲ್, ಕೊನೆಗಾಲದಲ್ಲಿ ಕೋಣೆಯ ಗೋಡೆಗಳೊಳಗೆ ಬಂಧಿಯಾಗದೆ, ಪ್ರಕೃತಿಯ ಮಡಿಲಲ್ಲೇ ಪ್ರಕೃತಿಯಲ್ಲಿ ಲೀನವಾದುದು ನಿಜಕ್ಕೂ ಸೂಕ್ತವಾಗಿದೆ.

೨೦೧೫ ಫೆಬ್ರವರಿಯಲ್ಲಿ ಸ್ಪಾರೋ (ಸೌಂಡ್ ಆಂಡ್ ಪಿಕ್ಚರ್ ಆರ್ಕೈವ್ ಫಾರ್ ರಿಸರ್ಚ್ ಆನ್ ವಿಮೆನ್) ಸಂಸ್ಥೆಯ ಬೆಳ್ಳಿ ಹಬ್ಬದ ಸಲುವಾಗಿ ಮಹಾರಾಷ್ಟ್ರದ ಕರ್ಜತ್‌ನಲ್ಲಿ ಎರಡು ದಿನಗಳ ಮಹಿಳಾ ಸಾಹಿತ್ಯ ಸಮಾವೇಶವೊಂದನ್ನು ಏರ್ಪಡಿಸಲಾಗಿತ್ತು. ಕನ್ನಡದ ಬರಹಗಾರರಾಗಿ ಡಾ.ಗಿರಿಜಾ ಶಾಸ್ತ್ರಿ ತುಳಸೀ ವೇಣುಗೋಪಾಲ್ ಹಾಗೂ ನಾನು ಆಮಂತ್ರಿತರಾಗಿದ್ದೆವು. ಹಿಂದಿ, ಮರಾಠಿ, ಇಂಗ್ಲಿಷ್, ತಮಿಳು, ಗುಜರಾಥಿ ಮತ್ತು ಮಣಿಪುರಿ ಭಾಷಾ ಲೇಖಕಿಯರೂ ನಮ್ಮೊಡನಿದ್ದರು. ಸಮಾವೇಶದ ವಿಷಯ ಎಕ್ಸ್‌ಪೀರಿಯೆನ್ಸ್‌ಸ್ ಆಂಡ್ ಎಕ್ಸ್‌ಪ್ರೆಶ್ಶನ್ಸ್ ಎಂದಾಗಿತ್ತು. ಆತ್ಮಕಥನ ಹಾಗೂ ಕಥೆ ಕವನಗಳ ಹಿನ್ನೆಲೆಯಲ್ಲಿ ಮಹಿಳೆಯರ ಬದುಕು, ಬರಹದ ಬಗ್ಗೆ ಮಾತುಕತೆ ಮತ್ತು ಚರ್ಚೆ, ಸಮಾವೇಶದ ಉದ್ದೇಶವಾಗಿತ್ತು.

ಕರ್ಜತ್‌ನಲ್ಲಿ ನಟಿ ರಾಮೇಶ್ವರಿಯ ನಿಂಬಾಡಾ ರಿಸಾರ್ಟ್‌ಗೆ ಯೋಜಿತ ಬಸ್, ಮೂರು ಗಂಟೆಗಳಲ್ಲಿ ನಮ್ಮನ್ನ ತಲುಪಿಸಿತು. ಸ್ಪಾರೋ ಸಂಸ್ಥಾಪಕಿ, ನಿರ್ದೇಶಕಿ ಸಿ.ಎಸ್.ಲಕ್ಷ್ಮಿ ತನ್ನ ತಂಡದೊಂದಿಗೆ ನಮ್ಮನ್ನು ಎದುರ್ಗೊಂಡರು. ಪ್ರವೇಶದಲ್ಲೇ, ಸಮಾವೇಶದಲ್ಲಿ ಭಾಗವಹಿಸುವ ಎಲ್ಲ ಲೇಖಕಿಯರ ಪೋರ್ಟ್ರೇಟ್‌ಗಳ ಬ್ಯಾನರ್‌ಗಳು ನಮ್ಮನ್ನು ಎದುರ್ಗೊಂಡವು. ಒಳಗೆ ಹಾಲ್‌ನ ಗೋಡೆಗಳಲ್ಲಿ ಒಬ್ಬೊಬ್ಬರದಾಗಿ ಕಿರುಪರಿಚಯದೊಡನೆ ಫಲಕಗಳು ಪ್ರದರ್ಶಿತವಾಗಿದ್ದುವು. ನಮ್ಮೆಲ್ಲರ ಪರಸ್ಪರ ಸಂವಹನಕ್ಕೆ ಇದು ಒಳ್ಳೆಯ ಸಾಧನವಾಯ್ತು. ಎಲ್ಲವನ್ನೂ ಅಚ್ಚುಕಟ್ಟಾಗಿ ಸ್ಪಾರೋ ತಂಡ ನಿಯೋಜಿಸಿತ್ತು. “ದುಲ್ಹನ್ ವಹೀ ಜೋ ಪಿಯಾ ಮನ್ ಭಾಯೇ” ಚಿತ್ರದ ನಾಯಕಿ ನಟಿಯಾಗಿ ನಮ್ಮೆಲ್ಲರ ಮನದಲ್ಲಿ ಉಳಿದಿದ್ದ ರಾಮೇಶ್ವರಿ, ಸೌಹಾರ್ದ ಭೇಟಿ ನೀಡಿ ನಮ್ಮೆಲ್ಲರನ್ನು ಖುಶಿ ಪಡಿಸಿದರು. ನಿಂಬಾಡಾದ ನಿಂಬೂ ಶರಬತ್ ಮತ್ತು ಪಾವ್ ಭಾಜಿ, ಕಾಫಿ, ಚಾ ನಮ್ಮ ಹೊಟ್ಟೆಗಳನ್ನು ತಣಿಸಿದ ಮೇಲೆ ಪರಸ್ಪರ ಪರಿಚಯಿಸಿಕೊಳ್ಳುವ ಇನ್ಟ್ರಡಕ್ಟರಿ ಸೆಕ್ಷನ್ ನಡೆಯಿತು. ನಂತರ ಕಲಾವಿದೆ ಜಿ. ಮಾಲತಮ್ಮ ಬಗ್ಗೆ ಡಾಕ್ಯುಮೆಂಟರಿ ಪ್ರದರ್ಶಿತವಾಯ್ತು. ಪರದೆಯ ಮೇಲೆ ಅಂದಿನ ರಂಗ ಸಜ್ಜಿಕೆಯಲ್ಲಿ ಬಿ,ಜಯಶ್ರೀ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಮಾಲತಮ್ಮ ಸಂದರ್ಶನದ ಸಿ.ಡಿ.ಯ ಟ್ರಾನ್ಸ್‌ಕ್ರಿಪ್ಷನ್ ಮಾಡಿದ್ದ ನನಗೆ, ಕವಿಯುತ್ತಿದ್ದ ಮುಸ್ಸಂಜೆಯಲ್ಲಿ ತಾರಸಿಯ ಮೇಲಿನಈಪ್ರದರ್ಶನಮೈ ನವಿರೇಳಿಸಿತು.

ಮೂವರಿಗೊಂದರಂತೆ ವಿವಿಧ ಭಾಷೆಗಳ ಇಪ್ಪತ್ತೈದು ಲೇಖಕಿಯರಿಗೆ ರೂಮ್‌ಗಳು ಅಲಾಟ್ ಆಗಿದ್ದವು. ನಾವು ಕನ್ನಡದವರು ಒಬ್ಬರಿಗೊಬ್ಬರು ಅಂಟಿಕೊಂಡೇ ಇರುತ್ತೇವೆಂದು, ಮ್ಯಾಡಮ್ ಲಕ್ಮಿ, ನಮ್ಮನ್ನು ಬೇರ್ಪಡಿಸಿದ್ದರು! ನಮ್ಮ ಬೇಡಿಕೆಗೆ ತನಗೆ ಕಿವುಡು, ಎನ್ನುತ್ತಾ ಹೊರಟು ಹೋದರು. ತಮಿಳಿನ ಪುದಿಯಮಾಧವಿ ಹಾಗೂ ಮರಾಠಿಯ ಸವಿತಾ ದಾಮ್ಲೆ ನನಗೆ ಜೊತೆಯಾದರು. ಬೆಳಿಗ್ಗೆ ಬೇಗನೆದ್ದು, ಗಿರಿಜಾ, ತುಳಸಿ ಹಾಗೂ ನಾನು ಕರ್ಜತ್‌ನ ಗುಡ್ಡಗಳಲ್ಲಿ ವಾಕಿಂಗ್ ಹೋಗಿ ಬಂದೆವು. ಎಂದೂ ಸೀರೆ ಬಿಟ್ಟು ಬೇರೆ ಉಡುಪು ತೊಡದ ನನಗೆ, ತುಳಸಿ, ಪಟ್ಟು ಹಿಡಿದು, ವಾಕಿಂಗ್‌ಗೆ ಅದೇ ಹಿತವೆಂದು ತನ್ನ ಪಂಜಾಬಿ ಡ್ರೆಸ್ ತೊಡಿಸಿಯೇ ಬಿಟ್ಟಳು! ಸೊಗಸಾದ ಹಳ್ಳಿಯ ವಾತಾವರಣ!

ಮಾವಿನ ತೋಪುಗಳು! ಸ್ಥಳ ಕೊಂಡವರು ಕಂಪೌಂಡ್ ಗೋಡೆ ಕಟ್ಟಿಸಿಟ್ಟ ಖಾಲಿ ನಿವೇಶನಗಳೇ ಎಲ್ಲೆಲ್ಲೂ ಕಾಣಿಸುತ್ತಿದ್ದುವು. ಸುತ್ತಾಡುತ್ತಾ ಹೋದ ನಾವು ಈ ಗೋಡೆಗಳಿಂದಾಗಿ ಹಿಂದಿರುಗುವ ದಾರಿ ಕಾಣದೆ ಪರದಾಡಿದ್ದೂ ಆಯ್ತು. ಕೊನೆಗೂ ಒಂದೆಡೆ ಎತ್ತು ಬಿಚ್ಚಿ ಬಂಡಿ ಇಳುಹಿದ್ದ ಪುಟ್ಟ ಗುಡಿಸಲೊಂದರಲ್ಲಿ ವಿಚಾರಿಸಿ, ದಾರಿ ಕಂಡುಕೊಂಡೆವು. ನಿಂಬಾಡಾ ತಲುಪುವಾಗ ಅದಾಗಲೇ ಉಪಾಹಾರ ಶುರುವಾಗಿತ್ತು. ಒಳ ಬಂದಾಗ, “ಪುನಃ ಒಂದಾದಿರಾ?”, ಎಂದು ಮಾಡಮ್ ಲಕ್ಷ್ಮಿ ಹುಸಿಯೆ ಗದರಿದರು. ಹಾಗೂ ನನ್ನ ಹೊಸ ಅವತಾರವನ್ನು ಕಂಡು ಸಂತೋಷದಿಂದ ಅಪ್ಪಿಕೊಂಡರು. ಸೆಶ್ಶನ್ ಆರಂಭವಾದಾಗ ಅಲ್ಲಿ ಸಂಪೂರ್ಣ ಸಾಹಿತ್ಯಿಕ ವಾತಾವರಣವಿತ್ತು. ಲಕ್ಷ್ಮಿ ಸಂವಹನ ಆರಂಭಿಸಿ ಅನುಗೊಳಿಸಿದಂತೆ, ತಮ್ಮ ಕಥೆ, ಕವನ, ಆತ್ಮಕಥನ ಪ್ರಸ್ತುತ ಪಡಿಸುವ ಲೇಖಕಿಯರ ಪ್ರಸ್ತುತಿ, ಪಕ್ಕದ ಪರದೆಯಲ್ಲಿ ಮೂಡತೊಡಗಿತು. ಇದು ಸಾಧ್ಯವಾಗುವಂತೆ ಲೇಖನಗಳನ್ನು ಪೂರ್ವಭಾವಿಯಾಗಿ ನಮ್ಮಿಂದ ಪಡೆಯಲಾಗಿತ್ತು. ಪ್ರಸ್ತುತ ಪಡಿಸಲಾಗುವ ಎಲ್ಲ ಬರಹಗಳನ್ನು ಸಂಕಲಿಸಿದ ಫೈಲ್‌ಗಳನ್ನೂ ಎಲ್ಲರಿಗೂ ನೀಡಲಾಗಿತ್ತು. ತಮಿಳಿನ ದಮಯಂತಿ, ಪದ್ಮಜಾ ನಾರಾಯಣನ್ ಮತ್ತು ಪುದಿಯಮಾಧವಿಯರ ಪ್ರಸ್ತುತಿಯ ಬಳಿಕ ನಮ್ಮ ಕನ್ನಡದ ಸರದಿ ಆರಂಭ ಆದಾಗ, ನನ್ನ ಸರದಿ. ಮಯೂರದಲ್ಲಿ ಪ್ರಕಟವಾಗಿದ್ದ ನನ್ನ `ಪ್ರಸ್ಥಾನ’ ಕಥೆಯನ್ನು ಇಲ್ಲಿ ಪ್ರಸ್ತುತ ಪಡಿಸಲೆಂದು ನಾನು ಇಂಗ್ಲಿಷ್‌ಗೆ ಅನುವಾದಿಸಿ, `ಎಕ್ಸಿಟ್’ ಎಂದು ಶೀರ್ಷಿಕೆಯಿತ್ತಿದ್ದೆ. ಸಮಯ ಹೊಂದಿಸಿ ಸ್ವಲ್ಪ ಮೊಟಕು ಗೊಳಿಸಿ ಅಲ್ಲಿ ಓದಿದೆ. `ಡೌನ್ ಮೆಮೊರಿ ಲೇನ್’ ನನ್ನ ಆತ್ಮಕಥನ. ಅದಕ್ಕೆ ಪೂರಕವಾಗಿ ಮ್ಯಾಡಮ್ ಲಕ್ಷ್ಮಿ ಪ್ರಶ್ನೆಗಳನ್ನು ಕೇಳಿದ್ದರು. ಪ್ರತಿ ಪ್ರಸ್ತುತಿಯ ಬಳಿಕ ಸಂವಾದವಿತ್ತು.

ತಮಿಳು, ಕನ್ನಡವಲ್ಲದೆ ಇಂಗ್ಲಿಷ್ ಲೇಖಕಿಯರು ಮೇನಕಾ ಶಿವದಾಸಾನಿ ಮತ್ತು ಅಂಜಲಿ ಪುರೋಹಿತ್, ಮಣಿಪುರಿ ಲೇಖಕಿ ಯೋಂಗ್ಕೋಮ್ ಇಂದಿರಾ, ಗುಜರಾಥಿಯ ಪುಷ್ಪಾ ಮೆಹತಾ ಮತ್ತು ಗೀತಾ ನಾಯಕ್, ಹಿಂದಿಯ ಸುಧಾ ಅರೋರಾ ಹಾಗೂ ಮರಾಠಿಯ ಊರ್ಮಿಲಾ ಪವಾರ್, ಆಶಾಲತಾ ಕಾಂಬ್ಳೆ ಮತ್ತು ಸವಿತಾ ದಾಮ್ಲೆ ಈ ಎರಡು ದಿನಗಳಲ್ಲಿ ಇಲ್ಲಿ ತಮ್ಮ ಬರಹ ಹಾಗೂ ಕಥನಗಳನ್ನು ಪ್ರಸ್ತುತ ಪಡಿಸಿದವರು.

ರಂಗ ಕಲಾವಿದರೂ, ಲೇಖಕಿಯರೂ ಆದ ಸುಷ್ಮಾ ದೇಶಪಾಂಡೆ ಮತ್ತು ಅನಿತಾ ದೇಸಾಯಿ ಎರಡು ದಿನಗಳ ಸಾಹಿತ್ಯೋತ್ಕರ್ಷಕ್ಕೆ ರಂಗು ತುಂಬಿದವರು. ಯೋಂಗ್‌ಕೋಮ್ ಇಂದಿರಾ ಅವರು ತಮ್ಮ ಸತ್ಯಹರಿಶ್ಚಂದ್ರದ ತಾರಾಮತಿ ವಿಲಾಪದಿಂದ ಎಲ್ಲರ ಮನಸೂರೆಗೈದರು. ನನ್ನನ್ನು ಬಹಳವಾಗಿ ಹಚ್ಚಿಕೊಂಡ ಅವರಿಂದ ಆಗಾಗ ಪ್ರೀತಿಯ ಫೋನ್ ಕರೆ ಬರುತ್ತಿರುತ್ತದೆ.

ಇಳಿಸಂಜೆ ಹೊತ್ತಲ್ಲಿ, ಮೇಲೆ ತಾರಸಿಯಲ್ಲಿ, ಮರಾಠಿ ಲೇಖಕಿ ಊರ್ಮಿಳಾ ಪವಾರ್ ಅವರ ಆತ್ಮಕಥನ, `ಆಯದಾನ್’ – `ದ ವೀವ್ ಆಫ್ ಮೈ ಲೈಫ್’, ಸುಷ್ಮಾ ದೇಶಪಾಂಡೆ ಬಳಗದಿಂದ ಅತ್ಯಂತ ಚಲೋದಾಗಿ ಪ್ರಭಾವಪೂರ್ಣವಾಗಿ ನಾಟಕ ರೂಪದಲ್ಲಿ ಪ್ರದರ್ಶಿಸಲ್ಪಟ್ಟಿತು. ದಲಿತ ಬದುಕಿನ ಕಥನವುಳ್ಳ, ಬಹಳಷ್ಟು ಮನ್ನಣೆ , ಪ್ರಶಸ್ತಿ ಪಡೆದ ಕೃತಿ, ಆಯದಾನ್!

ದಿನದ ಕೊನೆಯ ಊಟ, ಸಂತೋಷಕೂಟಗಳ ಕೊನೆಗೆ ಈಜ ಬಯಸುವವರಿಗೆ ಈಜುಕೊಳ ತೆರವಿತ್ತು. ತಡರಾತ್ರಿಯವರೆಗೂ ಮಾತುಕತೆಗಳು ಸಾಗಿದುವು. ಮರುಬೆಳಗು ಆ ದಕ್ಷನಿರ್ವಹಣೆಯ, ಉತ್ಸಾಹಪೂರ್ಣ ಸ್ಪಾರೋ ತಂಡದಿಂದ ಬೀಳ್ಕೊಂಡು ಹೊರಡುವಾಗ ನಾವು ನಿಜಕ್ಕೂ ಅನುಭವ ಸಂಪನ್ನರಾಗಿದ್ದೆವು.

ಸ್ಪಾರೋಗಾಗಿ ಟ್ರಾನ್ಸ್ಕ್ರಿಪ್ಷನ್, ಟ್ರಾನ್ಸ್‌ಲೇಶನ್ ಮಾಡುತ್ತಿದ್ದಾಗ, ಅಲ್ಲಿನ ಕನ್ನಡ ವಿಭಾಗದ ನಿರ್ವಾಹಕಿಯಾಗಿದ್ದ ನಮ್ಮ ತುಳಸೀ ವೇಣುಗೋಪಾಲ್, ಅಲ್ಲಿ ಕಂಪ್ಯೂಟರ್ ಉಪಯೋಗಿಸುವದನ್ನು ಕಂಡು ನಾನೂ ಗಣಕದತ್ತ ಆಕರ್ಷಿತಳಾಗಿದ್ದೆ. ಟೈಪಿಂಗ್ ಎಂದೂ ಕಲಿತಿರದಿದ್ದರೂ, ಮನೆಯಲ್ಲಿದ್ದ ಕಂಪ್ಯೂಟರ್‌ನಲ್ಲಿ ಸುಲಭವಾಗಿ ಮೇಲ್ ಮಾಡ ತೊಡಗಿದೆ. ಅದುವರೆಗಿನ ಕಾಯುವಿಕೆ ಇಲ್ಲವಾಗಿ ತಕ್ಷಣ ಗಮ್ಯ ತಲುಪುವ ಈಮೇಲ್ ನನಗೆ ತುಂಬ ಪ್ರಿಯವಾಯ್ತು. ನುಡಿ ಉಪಯೋಗಿಸುವ ಬಗ್ಗೆ ಆತ್ಮೀಯ ಕೆ.ಟಿ.ಗಟ್ಟಿ ಅವರ ಒತ್ತಾಸೆಗೆ ಸರಿಯಾಗಿ ಕೆಂಡಸಂಪಿಗೆಯ ಅಬ್ದುಲ್ ರಶೀದ್, ನುಡಿ ಲಿಂಕ್ ಕಳುಹಿ ಕೊಟ್ಟರು. ಗಟ್ಟಿಯವರಂದಂತೆ ನುಡಿ ಅರ್ಧಗಂಟೆಯಲ್ಲೇ ಕರಗತವಾಯ್ತು. ತುಷಾರ್, ಕೆಲಸದ ನಿಮಿತ್ತ ತನ್ನ ಅಮೆರಿಕಾ ಭೇಟಿಯಲ್ಲಿ ಡಿಜಿಟಲ್ ಕ್ಯಾಮೆರಾ ಒಂದನ್ನು ತಂದಿತ್ತಾಗ, ಕೆಂಡಸಂಪಿಗೆಗೆ ಚಿತ್ರ ಲೇಖನ ಬರೆದು ಕಳುಹುವುದು ಮತ್ತೂ ಸುಲಭವಾಯ್ತು. ಅದುವರೆಗೆ ನನಗೆ ಬಹುಪ್ರಿಯವಾಗಿ ಎಂದೂ ದೂರಾಗದೆಂದುಕೊಂಡ ಪೆನ್ ಬಳಕೆ ದೂರವಾಯ್ತು.

೨೦೦೩ರ ಫೆಬ್ರವರಿಯಲ್ಲಿ ಮುಂಬೈ ಯೂನಿವರ್ಸಿಟಿ ಕನ್ನಡ ವಿಭಾಗದ ಡಾ.ತಾಳ್ತಜೆ ವಸಂತ ಕುಮಾರರ ಮನೆಯಲ್ಲಿ ಅಸ್ತಿತ್ವಕ್ಕೆ ಬಂದ ನಮ್ಮ ಸೃಜನಾ ಬಳಗದ ಸಂಸ್ಥಾಪಕಿ, ಹಿರಿಯರಾದ ಡಾ| ಸುನೀತಾ ಶೆಟ್ಟಿ ಅವರು. ಮರಾಠಿ ಸಾಹಿತಿ ಊರ್ಮಿಳಾ ಪವಾರ್ ಅವರಿಂದ ಉದ್ಘಾಟನೆಗೊಂಡ ಸೃಜನಾ, ವರ್ಷವೊಂದರಲ್ಲೇ ತನ್ನ ಸದಸ್ಯೆಯರ ಪ್ರಥಮ ಕೃತಿಯಾಗಿ `ಕತೆ ಹೇಳೇ’ ಕಥಾ ಸಂಕಲನವನ್ನು ಹೊರ ತಂದಿತು. ಉಮಾ ರಾವ್ ಅವರ ಮುನ್ನುಡಿ ಹಾಗೂ ನಮ್ಮ ಮಹಾನ್ ಕತೆಗಾರ ಯಶವಂತ ಚಿತ್ತಾಲರ ಬೆನ್ನುಡಿಯೊಂದಿಗೆ ಹೊರ ಬಂದ ಈ ಸಂಕಲನದಲ್ಲಿ ಹದಿನೈದು ಲೇಖಕಿಯರ ಹದಿನೈದು ಕತೆಗಳಿದ್ದುವು. ಮತ್ತೆರಡು ವರ್ಷಗಳಲ್ಲಿ ಹದಿನೇಳು ಲೇಖಕಿಯರ ಸಾಹಿತ್ಯಿಕ ಲೇಖನಗಳ ಸಂಕಲನ `ಬೆಳಕಿನೆಡೆಗೆ’ ಪ್ರಕಟವಾಯ್ತು. ಇನ್ನೆರಡು ವರ್ಷಗಳಲ್ಲಿ ಡಾ| ತಾಳ್ತಜೆ ವಸಂತಕುಮಾರರಿಗೆ ಬೀಳ್ಕೊಡುಗೆಯ ಗೌರವಾರ್ಥ, `ನುಡಿನಮನ’ ಎಂಬ ಕಿರುಸಂಕಲವನ್ನು ಸಮರ್ಪಿಸಿತು. ಕಥಾ ಕಮ್ಮಟ, ಕಾವ್ಯಕಮ್ಮಟಗಳನ್ನು ನಡೆಸಿದಂತೇ ಅನುವಾದ ಅಕಾಡೆಮಿಯೊಡಗೂಡಿ ಅನುವಾದ ಕಮ್ಮಟವನ್ನೂ ನಡೆಸಿ, ಅನುವಾದಿತ ಕಥೆ, ಕವನಗಳ ಸಂಕಲನ, `ಮುಂಬೈ ಬಿಂಬ’ ಕೃತಿಯನ್ನು ಹೊರತಂದಿತು. ಡಾ| ಸುನೀತಾ ಶೆಟ್ಟಿ ಅವರ ಉತ್ಸಾಹ, ಮಾರ್ಗದರ್ಶನದಿಂದ ಹೊಸಬರನ್ನೂ ಸೃಜನಾದ ತೆಕ್ಕೆಗೆ ತಂದುಕೊಂಡು ರಚಿಸಿದ ಮೂವತ್ಮೂರು ಆತ್ಮಕಥಾನಕ ಕಥನಗಳ ಸಂಕಲನ `ಹಚ್ಚಿಟ್ಟ ಹಣತೆಗಳು’ ೨೦೧೪ರಲ್ಲಿ ಬೆಳಕು ಕಂಡಿತು. ನಮ್ಮವರೇ ಆದ ಜಯಂತ್ ಕಾಯ್ಕಿಣಿ ಅವರು, ನಮ್ಮ ಕೋರಿಕೆಯಂತೆ ಕೃತಿಯನ್ನೋದಿ ಬರೆದಿತ್ತ ಬೆನ್ನುಡಿ, `ಮುಕ್ತ ಸ್ವರಗಳ ಸಿಂಫನಿ’, ಸೃಜನಾ ಬಗ್ಗೆ ಅವರ ಪ್ರೀತ್ಯಭಿಮಾನದ ದ್ಯೋತಕವೇ ಆಗಿದೆ. ಸೃಜನಾ, ತನ್ನ ಮಹತ್ವಾಕಾಂಕ್ಷೆಯ ಈ ಕೃತಿಯನ್ನು, ಅಗಲಿದ ತನ್ನ ಪ್ರೇರಕ ಶಕ್ತಿ, ಯಶವಂತ ಚಿತ್ತಾಲರಿಗೆ ಸಮರ್ಪಿಸಿದೆ. `ಹಚ್ಚಿಟ್ಟ ಹಣತೆಗಳು’ ವಿದ್ವಜ್ಜನರ, ವಿಮರ್ಶಕರ ಮೆಚ್ಚುಗೆ ಗಳಿಸಿತು. ಆದರೆ ಉಚಿತವಾಗಿಯೇ, ಡಾ. ಸುನೀತಾ ಶೆಟ್ಟಿ ಅವರ ಜನ್ಮದಿನದ ಕೊಡುಗೆಯಾಗಿ ನೀಡಲೆಂದು ಮುನ್ನೂರು ಪ್ರತಿಗಳಷ್ಟೇ ಅಚ್ಚಾಗಿದ್ದ ಈ ಮಹತ್ವದ ಕೃತಿ, ನಾಡಿನಾದ್ಯಂತ ಓದುಗರಿಗೆ ಲಭ್ಯವಾಗುವಂತೆ ಮಾರಾಟಕ್ಕಾಗಿ ಇರಬೇಕಿತ್ತು, ಎಂಬ ಮಾತು ಅಡಿಗಡಿಗೆ ಕೇಳಿ ಬಂದಿದೆ. ಪ್ರಕಾಶಕರು ಸಿಕ್ಕಿದಾಗ ಮುಂದೆಂದಾದರೂ ………..

೨೦೧೬ರಲ್ಲಿ ಸೃಜನಾ ಬಳಗ, ಬಹುಭಾಷಾ ಜಾನಪದ ವಿಚಾರಗೋಷ್ಠಿಯೊಂದನ್ನು ಆಯೋಜಿಸಿತು. ಕನ್ನಡ, ತುಳು, ಕೊಂಕಣಿ, ಬ್ಯಾರಿ, ಕೊಡವ, ಬೋವಿ ಮಲಯಾಳ ಭಾಷೆಗಳ ಜಾನಪದ ಸಂಪತ್ತಿನ ಬಗ್ಗೆ ಸಂಶೋಧನಾತ್ಮಕ ವಿಚಾರಗಳನ್ನು ಪ್ರಸ್ತುತ ಪಡಿಸಲಾಯ್ತು. ಅಂದಿನ ಈ ಜಾನಪದ ನಿಧಿಯನ್ನು ಪುಸ್ತಕವಾಗಿ ಸಂಕಲಿಸಿ, `ಮಹಿಳಾ ಜಾನಪದ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಲಾಯ್ತು. ಸೃಜನಾ ಬಳಗ ತನ್ನ ಸದಸ್ಯೆಯರ ಕೃತಿಗಳ ಅನಾವರಣ ಸಮಾರಂಭವನ್ನೂ ಕೃತಿಗಳು ಬೆಳಕು ಕಂಡಂತೆ ನಡೆಸುತ್ತಾ ಬಂದಿದೆ. ಚಿತ್ತಾಲರ ಲೇಖನ ಸಂಕಲನ, `ಅಂತಃಕರಣ’ ಕೃತಿ ಲೋಕಾರ್ಪಣಾ ಕಾರ್ಯಕ್ರಮವನ್ನು ಏರ್ಪಡಿಸುವ ಭಾಗ್ಯವೂ ಸೃಜನಾ ಪಾಲಿಗೊದಗಿತು. ಎಲ್ಲ ಕಾರ್ಯಕ್ರಮಗಳಂತೆ ಇಲ್ಲೂ ಮುಂಬೈ ಕರ್ನಾಟಕ ಸಂಘದ ಸಹಾಯ, ಸಹಕಾರ ಸೃಜನಾ ಪಾಲಿಗಿತ್ತು.

ಮುಂಬೈ ಕನ್ನಡ ಸಂಘವೂ ಕೇಳಿದಾಗಲೆಲ್ಲ ಸೃಜನಾ ಬಳಗಕ್ಕೆ ಸ್ಥಳ ಸಹಾಯವನ್ನೀಯುತ್ತಾ ಬಂದಿದೆ. ಮೈಸೂರು ಅಸೋಸಿಯೇಶನ್, ಹೀಗೇ ನೆರವನ್ನಿತ್ತು ನಮ್ಮನ್ನು ಸಲಹಿದೆ. ಮುಂಬೈ ಯೂನಿವರ್ಸಿಟಿ ಕನ್ನಡ ವಿಭಾಗದಿಂದಲೂ ಸಹಕಾರ, ಪ್ರೋತ್ಸಾಹ ಸೃಜನಾ ಪಾಲಿಗೆ ಒದಗಿದೆ. ಅಲ್ಲಿ ನಡೆವ ಕನ್ನಡ ಕಾರ್ಯಕ್ರಮಗಳಿಂದ ಸೃಜನಾ ಬೆಳೆದಿದೆ. ದೂರದ ಈ ಹೊರನಾಡಿನಲ್ಲಿ ನಾವು ನಮ್ಮ ಕನ್ನಡತನವನ್ನು ಉಳಿಸಿ ಬೆಳೆಸಬೇಕು; ಕನ್ನಡದಾರತಿಯನ್ನು ಬೆಳಗಬೇಕು; ಇಲ್ಲಿ ನಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿ ಕನ್ನಡದ ಧ್ವನಿಯಾಗಬೇಕು; ಆ ಧ್ವನಿ ಒಳನಾಡನ್ನೂ ತಟ್ಟಬೇಕು, ಎಂಬುದೇ ಸೃಜನಾ ಬಳಗದ ಆಶಯ.

(ಮುಂದುವರಿಯಲಿದೆ)