ಬಾಗಲೋಡಿ ದೇವರಾಯರ ಸ್ಮರಣ ಸಂಪುಟ
(ಭಾಗ ೧)

೨೦೦೨ರ ಒಂದು ಆಕಸ್ಮಿಕದಲ್ಲಿ ನನ್ನ ತಂದೆ – ಜಿ.ಟಿ. ನಾರಾಯಣ ರಾವ್, ತನ್ನ ಆತ್ಮೀಯ ಗೆಳೆಯ, ಕೀರ್ತಿಶೇಷ ಬಾಗಲೋಡಿ ದೇವರಾಯರನ್ನು ಜೋಡುಮಾರ್ಗದಲ್ಲಿ ಸಾರ್ವಜನಿಕವಾಗಿ ಸ್ಮರಿಸಿಕೊಂಡರು. ಇದು ಹೆಚ್ಚಿಸಿದ ಸಾರ್ವಜನಿಕ ಬೇಡಿಕೆಗೆ ಮಣಿದು, ದೇವರಾಯರ ಕುರಿತು ಅಸಂಖ್ಯ ಆತ್ಮೀಯರ ಬರಹ ಮತ್ತು ನೆರವು ಪಡೆದು ೨೦೦೩ರಲ್ಲಿ ದೇವಸ್ಮರಣೆ ಎಂಬ ಹೆಸರಿನಲ್ಲಿ ಸುಮಾರು ೧೩೫ ಪುಟಗಳ ಸ್ಮರಣ ಸಂಪುಟವನ್ನೇ ಸಂಪಾದಿಸಿದರು. ಅದನ್ನು ಪ್ರಕಟಿಸುವ ಭಾಗ್ಯ ನನ್ನದಾಯ್ತು. ಪುಸ್ತಕದ ಘನ ಹೂರಣಕ್ಕೂ ಮುಂದೆ ಪ್ರತಿಗಳು ಬಹುಬೇಗನೆ ಮಾರಿಮುಗಿಯುವುದಕ್ಕೂ ದೇವರಾಯರ ಸಂಬಂಧಿಕರಷ್ಟೇ ಅಸಂಖ್ಯ ಅಭಿಮಾನಿಗಳೂ ಕಾರಣರಾಗಿದ್ದರು. ಅವರಲ್ಲಿ ಹೆಸರು ಕಾಣಿಸದೆಯೂ ದುಡಿದ ಒಬ್ಬ ಸೋದರಳಿಯ ಬಿ. ಸುರೇಂದ್ರ ರಾವ್.

ಪುತ್ತೂರಿನ ಖ್ಯಾತ, ವಕೀಲ (ಕೀರ್ತಿಶೇಷ) ಬಿ. ಶ್ರೀಪತಿ ರಾವ್ (ನೋಡಿ:ಅಸಾಧ್ಯ ಅಮೆದಿಕೆಲ್) ಸುರೇಂದ್ರರಾಯರ ತಂದೆ. ಅವರ ಮೂಲಕವೂ ವಿವೇಕಾನಂದ ಕಾಲೇಜಿನಲ್ಲಿ ಇತಿಹಾಸ ಅಧ್ಯಾಪಕನಾಗಿಯೂ ಬಹಳ ದೊಡ್ಡ ಪುಸ್ತಕ ಪ್ರೇಮಿ ಮತ್ತು ವಿಚಾರವಂತನಾಗಿಯೂ ಸುರೇಂದ್ರರಾಯರು ನನಗೆ ಆತ್ಮೀಯ (ನಾಲ್ಕೇ ವರ್ಷಕ್ಕೆ ಹಿರಿಯ) ಗೆಳೆಯರು. ಪ್ರಸ್ತುತ ಇವರು ಮಂಗಳೂರು ವಿವಿನಿಲಯದ ಇತಿಹಾಸ ವಿಭಾಗ ಮುಖ್ಯಸ್ಥ ಪ್ರಾಧ್ಯಾಪಕರಾಗಿ ನಿವೃತ್ತಿ ಕಂಡು ಮಂಗಳೂರಿನಲ್ಲೇ ನೆಲೆಸಿದ್ದಾರೆ. ಈಚೆಗೆ (೨೦೧೬) ಇವರು ಕಾಂತಾವರದ ಕನ್ನಡ ಸಂಘದ ‘ನಾಡಿಗೆ ನಮಸ್ಕಾರ’ ಗ್ರಂಥ ಮಾಲೆಗೆ ಬರೆದು ಕೊಟ್ಟು, ಪ್ರಕಟವಾದ ಬಾಗಲೋಡಿ ದೇವರಾಯರ ಜೀವನ ಚಿತ್ರಣದ ಕಿರು ಹೊತ್ತಗೆ – ‘ಬದುಕಿನ ಸತ್ಯವನ್ನರಸಿದ ಕತೆಗಾರ’ದ ಒಂದು ಪ್ರತಿಯನ್ನು ನನಗೆ ಪ್ರೀತಿಯಲ್ಲಿ ಕೊಟ್ಟಿದ್ದರು. ಬಾಗಲೋಡಿ ದೇವರಾಯ’ ಪುಸ್ತಕದಲ್ಲಿ ಸುರೇಂದ್ರ ರಾಯರು ರಕ್ತಸಂಬಂಧದ ಭ್ರಮೆ ಇಟ್ಟುಕೊಳ್ಳದೆ, ಇತಿಹಾಸಕಾರನ ಬಲ ಮತ್ತು ಸಾಹಿತ್ಯಾಸಕ್ತನ ರುಚಿಯ ಹದ ಓದುಗರಿಗೆ ಉಣಿಸಿದ್ದಾರೆ. ೪೪ ಪುಟಗಳ ಪುಸ್ತಿಕೆಗೆ ನಿಸ್ಸಂದೇಹವಾಗಿ ‘ದೇವಸ್ಮರಣೆ’ ಅಡಿಪಾಯ ಒದಗಿಸಿದೆ. ಅದರ ಮೇಲೆ ಸುರೇಂದ್ರರಾಯರು ತನ್ನ ಕೌಟುಂಬಿಕ ಜಾಲದ ಎಳೆಗಳಿಂದ ಸುಫಲಗಳನ್ನೂ ಒಟ್ಟಿ ಪುಸ್ತಕವನ್ನು ಶ್ರೀಮಂತಗೊಳಿಸಿದ್ದಾರೆ. ಪುಸ್ತಕದಲ್ಲಿ ಮುಖ್ಯವಾಗಿ ಮೂರು ವಿಚಾರಗಳು ನನ್ನನ್ನು ವಿಶೇಷವಾಗಿ ಆಕರ್ಷಿಸಿದವು.

೧. ದೇವರಾಯರ ದೈಹಿಕ ಸೂಕ್ಷ್ಮವನ್ನು ತಿಳಿದೂ ಅವರನ್ನು ವರಿಸಿ, ಉದ್ದಕ್ಕೂ ಕಾಪಿಟ್ಟ ಶ್ರೀಮತಿ ವಿಜಯಲಕ್ಷ್ಮಿಯವರ ಕೊಡುಗೆ.

೨. ದೇವರಾಯರ ಸ್ವಾತಂತ್ರ್ಯ ಹೋರಾಟದ ಕುರಿತು ‘ವೈಚಾರಿಕ ಪ್ರೀತಿಯಿದ್ದರೂ ಕಾರ್ಯೋನ್ಮುಖಿಯಲ್ಲ’ ಎಂಬ ಸುರೇಂದ್ರರಾಯರ ವಿಶ್ಲೇಷಣೆ. ಸ್ವಾತಂತ್ರ್ಯ ಹೋರಾಟಕ್ಕಿಳಿಯದಿದ್ದದ್ದು ಹೇಡಿತನವಲ್ಲ ಎಂಬಂತೆ ಜೀವನದ ಮುಂದೊಂದು ಭಾಗದಲ್ಲಿ ರಾಷ್ಟ್ರ ರಾಯಭಾರಿ ದೇವರಾಯರನ್ನು ಸುರೇಂದ್ರ ರಾಯರು – ‘ದೇಶಪ್ರೇಮಿಯಾಗಿಯೂ ವಿಶ್ವಪ್ರಜೆಯಾಗಿಯೂ’ ಗುರುತಿಸಿದ್ದು ಮನನೀಯವಾಗಿದೆ.

ಕೊನೆಯದಾಗಿ ೩. ಎಸ್. ದಿವಾಕರ್ ಅವರಿಗೆ ಸ್ವತಃ ದೇವರಾಯರೇ ಬರೆದ ಪತ್ರವನ್ನುದ್ಧರಿಸುತ್ತಾ ದೇವರಾಯರ ನಾಡು, ನುಡಿಯ ಕುರಿತ ಆಂತರಂಗಿಕ ಕೊರಗಿನ ನಿರೂಪಣೆ.

‘ದೇವಸ್ಮರಣೆ’ ಬರಿಯ ಹೊಗಳು ಸಾಹಿತ್ಯವಲ್ಲ. ಹಾಗಾಗಿ ಮುಂದುವರಿದ ಪುಸ್ತಕ ಕೋರಿಕೆಗೆ, “ಅಲಭ್ಯ” ಎಂದುತ್ತರಿಸುವಾಗೆಲ್ಲ ನನಗೆ ಮರುಮುದ್ರಣದ ಯೋಚನೆ ಬಂದದ್ದಿತ್ತು. ಸುರೇಂದ್ರ ರಾಯರ ಪುಸ್ತಿಕೆ ಓದಿದ ಮೇಲೆ ನಾನು ದೇವಸ್ಮರಣೆಯನ್ನು ವಿದ್ಯುನ್ಮಾನ ಮಾಧ್ಯಮದಲ್ಲಿ ಮರುಮುದ್ರಣಗೊಳಿಸಿ ಸಾರ್ವಕಾಲಿಕವಾಗಿ ಮುಕ್ತಗೊಳಿಸುವ ಕೆಲಸಕ್ಕೇ ಇಳಿದೆ. ದೇವಸ್ಮರಣೆಯ ಬಹುತೇಕ ಲೇಖಕರ ಪರಿಚಯ ಮತ್ತು ಸಂಪರ್ಕ ವಿಳಾಸ ನನ್ನಲ್ಲಿಲ್ಲ. ಆದರದು ಸುರೇಂದ್ರರಾಯರ ಮೂಲಕ ಸಾಧಿಸಬಹುದು ಎಂದನ್ನಿಸಿದ್ದಕ್ಕೆ ಅವರನ್ನು ಭೇಟಿಯಾಗಿ ಮಾತಾಡಿದೆ. ಮತ್ತು ಮನೆಗೆ ಮರಳಿದ ಮೇಲೆ, ಸುರೇಂದ್ರರಾಯರನ್ನು ಉದ್ದೇಶಿಸಿದಂತೆ ತೋರಿದರೂ ಸ್ಮರಣ ಸಂಪುಟದ ಲೇಖಕರುಗಳನ್ನು ಮತ್ತೂ ಸಂಪರ್ಕಕ್ಕೆ ಒದಗಿದ ವಿಸ್ತೃತ ಸಾಹಿತ್ಯಾಸಕ್ತರಿಗೂ ಮುಟ್ಟುವಂತೆ ಹೀಗೊಂದು ಪತ್ರವನ್ನು ಮಿಂಚಂಚೆಯಲ್ಲಿ ಕಳಿಸಿಕೊಟ್ಟೆ.

“ಪ್ರಿಯ ಸುರೇಂದ್ರರಾಯರೇ, ಇಂದು ನಿಮ್ಮಲ್ಲಿ ಮುಖತಃ ಮಾತಾಡಿದಂತೆ, ಏರ್ಯ ಲಕ್ಷ್ಮೀನಾರಾಯಣ ಆಳ್ವ, ವಿ.ಆರ್. ಹೆಬ್ಬಾರ್, ಎಂ. ಅರವಿಂದ ಶರ್ಮ, ಕುಶಿ ಹರಿದಾಸ ಭಟ್ಟ, ಪಿ.ಸೇತುಮಾಧವ ರಾವ್, ಕೆ. ರಾಘವೇಂದ್ರ ರಾವ್, ಎಂ. ಪಂಚಪ್ಪ, ವಿ.ಗುರುಮೂರ್ತಿ, ಕೆ. ಮಹಾಲಿಂಗ ಭಟ್, ಎಸ್. ದಿವಾಕರ್, ಎಂ. ರಾಮಚಂದ್ರ, ಹಾಮಾ ನಾಯಕ, ಎಲ್.ಎಸ್.ಶೇಷಗಿರಿ ರಾವ್, ವಿಜಯಲಕ್ಷ್ಮಿ ರಾವ್ ಮುಂತಾದವರ ಅಪರಿಮಿತ ಪ್ರೀತಿ ಮತ್ತು ಸಹಕಾರದಿಂದ ನನ್ನ ತಂದೆ (ಜಿ.ಟಿ. ನಾರಾಯಣ ರಾವ್) ೨೦೦೩ರಂದು ಬಾಗಲೋಡಿ ದೇವರಾಯ ಸಂಸ್ಮರಣ ಗ್ರಂಥ ದೇವಸ್ಮರಣೆಯನ್ನು ಸಂಪಾದಿಸುವುದಾಯ್ತು. ಆ ಪುಸ್ತಕವನ್ನು ನೆಪಮಾತ್ರಕ್ಕೆ ನಾನು (ಅತ್ರಿಯಿಂದ) ಪ್ರಕಟಿಸಿದರೂ ಮತ್ತೆ ನಿಮ್ಮೆಲ್ಲರ ಮಿತಿಯಿಲ್ಲದ ಉತ್ಸಾಹದಿಂದ ಬಹುಬೇಗನೆ ಪ್ರತಿಗಳು ನನಗೇನೂ ಆರ್ಥಿಕ ಹೊರೆಯಾಗದೆ ಮುಗಿದೂ ಹೋಯ್ತು. ಅನಂತರದ ದಿನಗಳಲ್ಲಿ ಆಗೀಗ ಅದರ ಒಂದೆರಡು ಪ್ರತಿಗಳಿಗೆ ಬೇಡಿಕೆ ಬರುವುದಿತ್ತಾದರೂ ಮರುಮುದ್ರಣ (ಕನಿಷ್ಠ ೫೦೦, ೧೦೦೦ ಪ್ರತಿ ಮಾಡುವುದು) ಆರ್ಥಿಕವಾಗಿ ಯಶಸ್ವಿಯಾಗದು ಎಂದೇ ನನಗನ್ನಿಸಿ ಮರೆತುಬಿಟ್ಟಿದ್ದೆ. ಈಚೆಗೆ ನಾನು ನನ್ನ ಜಾಲತಾಣದ ಮೂಲಕ ನನ್ನ ತಂದೆಯ ಕೆಲವು ಪುಸ್ತಕಗಳನ್ನು ವಿ-ಪುಸ್ತಕವಾಗಿ, ಉಚಿತವಾಗಿ ಲೋಕಾರ್ಪಣಗೊಳಿಸಿದಂತೇ (ನೋಡಿ: ನನ್ನ ಜಾಲತಾಣದ ಪುಸ್ತಕ ವಿಭಾಗ) ದೇವಸ್ಮರಣೆಯನ್ನೂ ಅಂತರ್ಜಾಲದ ಮೂಲಕ ‘ಶಾಶ್ವತ’ಗೊಳಿಸುವ ಯೋಚನೆ ಬಂದು, ನಾನೇ ಬಹುತೇಕ ಬೆರಳಚ್ಚನ್ನು ನಡೆಸಿದ್ದೇನೆ. ಬಹುಶಃ ಇನ್ನು ಮೂರು ನಾಲ್ಕು ವಾರಗಳಲ್ಲಿ ಅವನ್ನು ವಾರಕ್ಕೊಂದು ಅಧ್ಯಾಯದಂತೆ ನನ್ನ ಜಾಲತಾಣದಲ್ಲಿ ಪ್ರಕಟಿಸಿ, ಎಂದಿನಂತೆ ಫೇಸ್ ಬುಕ್ಕಿನಲ್ಲೂ ಪ್ರಚುರಿಸುವವನಿದ್ದೇನೆ. ಇದು ನನಗೆ ಯಾವುದೇ ಆರ್ಥಿಕ ಆದಾಯ ತರುವಂತದ್ದಲ್ಲ ಎನ್ನುವುದರಿಂದಲೂ ಮೊದಲ ಪ್ರೀತಿಯಿಂದಲೇ ಲೇಖಕ ಬಳಗವೆಲ್ಲ ಒಪ್ಪಿಗೆ ಕೊಟ್ಟಿದೆ ಎಂದು ಭಾವಿಸಿ ಮುಂದುವರಿಯುತ್ತಿದ್ದೇನೆ. “ಏತನ್ಮಧ್ಯ

೧. ಯಾರಿಗಾದರೂ ಅವರ ಲೇಖನದಲ್ಲಿ ಹೆಚ್ಚುವರಿ ಮಾಹಿತಿ ಸೇರಿಸುವ ಉತ್ಸಾಹವಿದ್ದರೆ, ಅವಶ್ಯ ಬೆರಳಚ್ಚಿಸಿ ನನಗೆ ಮಿಂಚಂಚೆ (ಇಮೇಲ್) ಮಾಡಿ, ಮತ್ತು ಅದನ್ನು ಮೂಲ ಲೇಖನದಲ್ಲಿ ಎಲ್ಲಿ ಅಳವಡಿಸಿದರೆ ಉತ್ತಮ ಎಂಬ ಸೂಚನೆಯನ್ನೂ ದಯವಿಟ್ಟು ಕಳಿಸಿ.

೨. ದೇವರಾಯರ ಚಟುವಟಿಕೆಗಳ ಯಾವುದೇ ಛಾಯಾಚಿತ್ರಗಳಿದ್ದರೆ ಹೀಗೇ (ಸ್ಕ್ಯಾನ್ ಮಾಡಿಯೋ ಡಿಜಿಟಲ್ ಫೋಟೋ ಪ್ರತಿ ಮಾಡಿಯೋ) ಕಳಿಸಿಕೊಡಿ. ಹಿಂದೆ ಮುದ್ರಣದಲ್ಲಿ ಚಿತ್ರಗಳನ್ನು ಹೆಚ್ಚಿಸಿದರೆ ಮುದ್ರಣ ವೆಚ್ಚ ಹೆಚ್ಚುವ ಸಂಭವವಿತ್ತು. ಇಲ್ಲಿ ಆ ಭಯವಿಲ್ಲವಾದ್ದರಿಂದ ಎಲ್ಲಾ ಕಂತುಗಳ ನಡುವೆ ನೀವು ಕಳಿಸಿದ ಚಿತ್ರಗಳನ್ನು ಹಂಚಿ ಹಾಕಿ, ಅಷ್ಟು ವೀಕ್ಷಣೆಯನ್ನೂ ಸಮೃದ್ಧಗೊಳಿಸುವ ಅಂದಾಜು ನನ್ನದು.

೩. ಹಾಗೇ ದೇವರಾಯರ ಧ್ವನಿ ಮುದ್ರಿಕೆಗಳು, ಚಲಚಿತ್ರ (ವಿಡಿಯೋ ಇತ್ಯಾದಿ) ತುಣುಕುಗಳು ಡಿಜಿಟಲ್ ಮಾಧ್ಯಮದಲ್ಲಿ ಇದ್ದರೂ ದಯವಿಟ್ಟು ಸೇತು ಕಳಿಸಿಕೊಡಿ, ಲೇಖನಗಳ ನಡುವೆ ಅಳವಡಿಸಿಬಿಡುತ್ತೇನೆ.

೪. ಹಿಂದೆ ದೇವಸ್ಮರಣೆ ಪುಸ್ತಕವನ್ನು ಕೊಂಡೋದಿದ ಸಂತೋಷದಲ್ಲಿ ಅದೇ ಕಿನ್ನಿಕಂಬಳದ ಮೂರಿಹೊತ್ತ ಕೆ.ಪಿ. ರಾವ್ ಅವರು ಸುರೇಂದ್ರ ರಾಯರಲ್ಲಿ ಲೋಕಾಭಿರಾಮವಾಗಿ “ಅಯ್ಯೋ ದೇವರಾಯರ ಬಗ್ಗೆ ನನಗೆ ಸುಮಾರು ಹೇಳುವುದಿತ್ತು” ಎಂದದ್ದಿತ್ತಂತೆ. ಕೆಪಿ ರಾಯರನ್ನು ಕಂಡವರಿಗೆಲ್ಲ ತಿಳಿದೇ ಇದೆ, ಅವರು ಪುಸ್ತಕದಲ್ಲಿ ಕೊರತೆ ಕಂಡದ್ದಲ್ಲ, ದೇವರಾಯರ ಪ್ರತಿಭೆಯ ದಾಖಲೀಕರಣದ ಆವಶ್ಯಕತೆಯನ್ನು ಎತ್ತಿ ಆಡಿದ್ದೆಂದು. ಈ ಪತ್ರದ ಮೂಲಕ ನಾನು ಕೆ.ಪಿ. ರಾಯರನ್ನು ಪ್ರತ್ಯೇಕವಾಗಿ ಕೇಳಿಕೊಳ್ಳುತ್ತೇನೆ – ದಯವಿಟ್ಟು ಈಗ ನೀವು ಬಿಡುವು ಮಾಡಿಕೊಂಡು, ನಿಮ್ಮ ಮಿತಿಯಲ್ಲಿ ದೇವರಾಯರ ಕುರಿತು ಸಾಧ್ಯವಾದ್ದೆಲ್ಲವನ್ನೂ ನನಗೆ ಬರೆದು ಮಿಂಚಂಚೆ ಮಾಡಿ. ಅದನ್ನು ನಾನು ಧಾರಾವಾಹಿಯ ಕೊನೆಯ ಕಂತಾಗಿ ಪ್ರಕಟಿಸಿಬಿಡುತ್ತೇನೆ.

೫. ದಯವಿಟ್ಟು ಎಲ್ಲರೂ ತಂತಮ್ಮ ಮಿಂಚಂಚೆ ವಿಳಾಸವನ್ನು ಕೂಡಲೇ ನನಗೆ ಕಳಿಸಿಕೊಡಿ. ಆಗ ಈ ಪುಸ್ತಕದ ಕಂತುಗಳು ಪ್ರಕಟವಾದಂತೆಲ್ಲ ನಿಮಗೆ ನಾನೇ ನೇರ ಪತ್ರಿಸಿ ತಿಳಿಸಲು ಅನುಕೂಲವಾಗುತ್ತದೆ. ಅಕಸ್ಮಾತ್ ನಿಮಗೆ ಮಿಂಚಂಚೆ ವಿಳಾಸವಿಲ್ಲವೆಂದಾದರೆ ದಯವಿಟ್ಟು ನಿಮ್ಮ ಸಮೀಪಸ್ಥ ಬಂಧುಗಳ ವಿಳಾಸ ಕೊಟ್ಟು ಅವರಿಂದ ಸೂಚನೆ ಸಂಗ್ರಹಿಸಿಕೊಳ್ಳುವ ವ್ಯವಸ್ಥೆ ಮಾಡುವುದಿದ್ದರೂ ಸಂತೋಷ. ಹಾಗೇ ಇದರ ಕುರಿತು ಕಾಲಕಾಲದ ಮಾಹಿತಿಯನ್ನು ನೀವು ಬಯಸಿದ ಅನ್ಯ ಆಸಕ್ತರಿಗೂ ಕೊಡಬೇಕೆಂದಿದ್ದರೆ ಅವಶ್ಯ ಅವರ ಮಿಂಚಂಚೆ ವಿಳಾಸವನ್ನೂ ನನಗೆ ಕಳಿಸಿ, ಸಂತೋಷದಲ್ಲಿ ಪತ್ರಿಸುತ್ತಿರುತ್ತೇನೆ. (ಉದಾಹರಣೆಗೆ: ಸದ್ಯ ಎಂ. ರಾಮಚಂದ್ರ ಅವರಿಗೆ ಅವರ ಮಗ ರಾಜಮೋಹನರ ಮೂಲಕ ಈ ಪತ್ರ ಹೋಗುತ್ತಿದೆ. ಇಷ್ಟರಲ್ಲೇ ರಾಮಚಂದ್ರರು ಗಣಕ ಪ್ರಪಂಚಕ್ಕೆ ಪ್ರವೇಶಿಸಿದ್ದರೆ ದಯವಿಟ್ಟು ವಿಳಾಸ ಕಳಿಸಿ).

೬. ಈ ಕುರಿತು ಇನ್ನು ಏನು ತಿಳಿಸುವುದಿದ್ದರೂ ಅವಶ್ಯ ನನ್ನನ್ನು ಹೀಗೇ ಸಂಪರ್ಕಿಸಬೇಕಾಗಿ ಕೇಳಿಕೊಳ್ಳುವುದರೊಡನೆ ವಿರಮಿಸುತ್ತೇನೆ” ಎಂದು ಪತ್ರ ಮುಗಿಸಿದ್ದೆ.

ಸುರೇಂದ್ರರಾಯರ ಭೇಟಿಯಂದು ಸಾಂದರ್ಭಿಕವಾಗಿ ಅವರ ಪುಸ್ತಕದ ಕುರಿತು ಮೆಚ್ಚುಗೆಯ ನುಡಿಯಾಡಿದೆ. ಆದರೆ ಅವರು ಪುಸ್ತಕದ ಕುರಿತು ತನ್ನ ಸಣ್ಣ ಅಸಮಾಧಾನವನ್ನು ನನ್ನಲ್ಲಿ ತೋಡಿಕೊಂಡರು. “ಬಾಗಲೋಡಿ’ ಮನೆತನಕ್ಕೊಂದು ಘನ ಶ್ರೀಮಂತಿಕೆಯ ಹಿನ್ನೆಲೆ ಇದೆ. ಅದನ್ನು ಪುಸ್ತಕದ ಆದಿಯಲ್ಲಿ ವಿಸ್ತರಿಸಿದ್ದೆ. ಇದು ಸಹಜವಾಗಿ ದೇವರಾಯರ ಜೀವನದ ಕೊನೆಯ ಭಾಗದಲ್ಲಿ ಕಾಣಿಸಿದ ಆರ್ಥಿಕ ಸೋಲಿಗೆ ಹೆಚ್ಚಿನ ಅರ್ಥಭಾರ ಕೊಡುತ್ತದೆ ಎಂದು ಭಾವಿಸಿದ್ದೆ. ಆದರೆ ಸಂಪಾದಕೀಯ ಎಡವಟ್ಟಿನಿಂದಾಗಿ ಪುಸ್ತಕದಲ್ಲಿ ಆ ಭಾಗವೇ ಬಿಟ್ಟು ಹೋಗಿದೆ.”

ಆ ಕೊರತೆ ಇಲ್ಲಿನ ‘ದೇವಸ್ಮರಣೆ’ ಧಾರಾವಾಹಿಗೆ ನಾಂದಿಗೀತೆಯಾಗುವಂತೆ ಸುರೇಂದ್ರರಾಯರೇ ಕೊಟ್ಟು ಕೃಪೆ ಮಾಡಿದ್ದಾರೆ: ಆ ಅಧ್ಯಾಯದ ಪೂರ್ಣ ಪಾಠ ಹೀಗಿದೆ (ಬಿಟ್ಟು ಹೋದ ಭಾಗ ಹಳದಿ ವರ್ಣದಲ್ಲಿದೆ!):

ಬಾಗಲೋಡಿ

(ಲೇ: ಬಿ. ಸುರೇಂದ್ರ ರಾವ್)

ಬಾಗಲೋಡಿ (ಕೆಲವರಿಗೆ ಅದು ಬಾಗ್ಲೋಡಿ) ಒಂದು ಊರಿನ ಹೆಸರು. ಒಂದು ಕಾಲಕ್ಕೆ ಅದು ಬರೇ ಕುಗ್ರಾಮ ಎಂದು ಪ್ರಸಿದ್ಧ. ಹೀಗೆಂದದ್ದು ನಾನಲ್ಲ, ಅಲ್ಲಿ ನೆಲೆಸಿ ಬಾಳಿದ್ದ ಬಾಗಲೋಡಿ ಸಂತತಿಯ ಒಂದು ಕವಲಿನ ಪ್ರತಿನಿಧಿಯೊಬ್ಬರು, ಇನ್ನೊಂದು ರೀತಿಯಲ್ಲಿ ನನಗೆ ಸಂಬಂಧವಿದ್ದವರು. ಬಾಗಲೋಡಿ ಎಂಬುದು ಮಾಣಿ-ಉಪ್ಪಿನಂಗಡಿ ಮಾರ್ಗದಲ್ಲಿರುವ ಪೆರ್ನೆ ಎಂಬಲ್ಲಿಗೆ ಹತ್ತಿರದಲ್ಲಿರುವ ಹಳ್ಳಿ. ಆ ಸಂತತಿಯ ಒಂದು ಕವಲಿನ ಕುಟುಂಬವೊಂದು ಇನ್ನೂ ಅಲ್ಲಿದೆ. ಅಂತಹ ಅನೇಕ ಕವಲುಗಳು, ಅದರ ಪ್ರತಿನಿಧಿಗಳು ಈಗ ಜಿಲ್ಲೆಯ, ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಪಸರಿದ್ದಾರೆ. ಬಾಗಲೋಡಿ ಕುಗ್ರಾಮವಾದರೂ ಮನೆತನದ ನಾಮಧ್ವಜವಾಗಿ ಅದಕ್ಕೆ ಸಾಕಷ್ಟು ಪ್ರಸಿದ್ಧಿ ಹಾಗೂ ಆಕರ್ಷಣೆಯಿದೆ ಎಂದೇ ಹೇಳಬೇಕು. ಮನೆತನಕ್ಕೆ ಸೇರಿದ ಸಾಮಾನ್ಯ ಪ್ರತಿಯೊಬ್ಬರೂ ಆ ಹೆಸರನ್ನು ತಮ್ಮ ನಾಮಧೇಯದ ಹಿಂದೆಯೋ ಮುಂದೆಯೋ ಅಂಟಿಸಿಕೊಳ್ಳುವುದನ್ನು ಕಂಡಿದ್ದೇನೆ. ಇದಕ್ಕೆ ಕಾರಣವಿಷ್ಟೆ. ಒಂದಾನೊಂದು ಕಾಲದಲ್ಲಿ ಆ ಮನೆತನಕ್ಕೆ ಸಾಕಷ್ಟು ಜಮೀನು, ಅಧಿಕಾರ ಇತ್ತು. ಬಾಗಲೋಡಿಯ ಹೆಸರನ್ನು ಹೊತ್ತುಕೊಂಡೇ ಆ ಮನೆತನದ ಕೆಲವರು ಅಲ್ಲಲ್ಲಿ ಆಸ್ತಿಪಾಸ್ತಿ ಮಾಡಿದ್ದರು. ಕೆಲವರು ಶಾನುಭೋಗರ ಅಧಿಕಾರವನ್ನು ಪಡೆದು, ಅದನ್ನು ಚಲಾಯಿಸಿ, ಆ ಹೆಸರನ್ನೂ ತಮ್ಮ ಹೆಸರಿಗೆ ಪೋಣಿಸಿ ಮೆರೆದಿದ್ದುಂಟು. ಅವರಲ್ಲಿ ಕೆಲವರು ಅಧಿಕಾರ ಬಲ ಹಾಗೂ ರಟ್ಟೆಬಲದಿಂದ ಜನರನ್ನು ಮಣಿಸಿ, ದಣಿಸಿ, ಕುಣಿಸಿದ ಕೆಲವು ಕಥೆಗಳನ್ನು ನನ್ನ ಅಜ್ಜ ಬಾಗಲೋಡಿ ಕೃಷ್ಣರಾಯರಿಂದ ಹಾಗೂ ಅವರ ಹಿರಿಯ ಮಗಳು (ನನ್ನ ದೊಡ್ಡಮ್ಮ) ಇಂದಿರಾ ಹೆಬ್ಬಾರ್ ಅವರಿಂದ ನಾನು ಕೇಳಿದ್ದೆ: ನನ್ನ ಅಜ್ಜನ ದೊಡ್ಡಪ್ಪ (ಅವರ ನಾಮಧೇಯ ಕೊರಗಪ್ಪ ಶಾನುಭಾಗರು ಎಂದು ಕೇಳಿದ್ದು ನೆನಪು) ಭಯ ಎಂದರೇನೆಂದು ಅರಿಯದ ಭೂಪನಂತೆ. ತನ್ನ ಕೆಲಸಕ್ಕೆ ಎಲ್ಲಿಗಾದರೂ ಹೋಗಬೇಕಾದರೆ ಮಧ್ಯರಾತ್ರಿಯೇ, ಒಬ್ಬನೇ ಕೈಯಲ್ಲಿ ದೊಣ್ಣೆ, ಲಾಟೀನನನ್ನು ಹಿಡಿದು ಹೊರಟು ಬಿಡುವನಂತೆ. ಹೋಗುವಾಗ ಮನೆ ದೈವ ಪಂಜುರ್ಲಿಯೊಡನೆ, “ಪಂಜುರ್ಲೀ! ನನ್ನ ಹೆಂಡತಿ ಮನೆಯಲ್ಲಿ ಒಬ್ಬಳೇ ಇದ್ದಾಳೆ. ಮನೆಯನ್ನು ಜಾಗ್ರತೆಯಿಂದ ಕಾಯ್ದುಕೊಂಡಿರು!” ಎಂದು ಆತ ಆದೇಶಿಸಿದರೆ, ಆಜ್ಞೆಯನ್ನು ಶಿರಸಾವಹಿಸುವೆನು ಎಂಬ ಪಂಜುರ್ಲಿಯ ಆಶ್ವಾಸನೆಯ ಉತ್ತರವಾಗಿ ಗಗ್ಗರದ ಸದ್ದಾಗುತ್ತಿತ್ತಂತೆ! ಅವರಿಲ್ಲದಾಗ ಅವರ ಹೆಂಡತಿ ಮನೆಯ ಪಕ್ಕದ ಎತ್ತರದ ರೆಂಜೆ ಮರದಲ್ಲಿ ಹೇರಳವಾಗಿ ಹೂ ಬಿಟ್ಟದ್ದನ್ನು ಕಂಡು, ಅದನ್ನು ಮರ ಹತ್ತಿ ಕುಯ್ಯುವರಾರು ಎಂದು ಅಸಹಾಯಕಳಾಗಿ ನಿಟ್ಟುಸಿರು ಬಿಟ್ಟು ಆಕೆ ಮನೆಯೊಳಗೆ ನಿರ್ಗಮಿಸಿದರೆ, ಮುಂಜಾನೆ ಮನೆ ಬಾಗಿಲ ಎದುರು ರೆಂಜೆ ಹೂವಿನ ದೊಡ್ಡ ರಾಶಿಯೇ ಬಿದ್ದಿತ್ತಂತೆ! ಇಂತಹ ’ಅಂತೆ’ಗಳನ್ನು, ದೈವಕ್ಕೇ ಆಜ್ಞೆಮಾಡುವ ಈ ಪ್ರಭೃತಿಯ ಧೈರ್ಯ ಮತ್ತು ಪ್ರತಾಪವನ್ನು, ಅವರಿಗೆ ಪಂಜುರ್ಲಿ ನೀಡಿದ ಕೈಂಕರ್ಯಗಳ ಕಥೆಗಳನ್ನು ನಾನು ಕೇಳಿ ದಂಗಾಗಿದ್ದೆ. ಇತರರನ್ನು ಗದರಿಸುವುದು ಹೊಡೆಯುವುದು ಆ ಮಹಾನುಭಾವನಿಗೆ ಕರಗತವಾದ ಕೌಶಲ. ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾಗ ಚಿಕ್ಕವನಾಗಿದ್ದ ನನಗೂ ಹೆಮ್ಮೆಯಾಗಿತ್ತು, ನನ್ನ ಕೈಲಾಗದ್ದು ನನ್ನ ಪೂರ್ವಜರು ಸಾಕಷ್ಟು ಮಾಡಿ ಮೆರೆದಿದ್ದರಲ್ಲ, ಎಂದು. ಈಗ ಆ ಹೆಮ್ಮೆ ನನ್ನಲ್ಲಿಲ್ಲ.

ಬಾಗಲೋಡಿ ಮನೆತನದ ಇನ್ನೊಂದು ಕವಲಿನ ಮಹಾಶಯರೊಬ್ಬರು, ಬಾಗಲೋಡಿ ಭೋಜರಾಯರು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದರು. ಇಪ್ಪತ್ತನೇ ಶತಮಾನದ ಎರಡನೇ ಅಥವಾ ಮೂರನೇ ದಶಕಗಳಲ್ಲಿ. ಆ ಕಾಲಕ್ಕೆ ದೇವಸ್ಥಾನದ ಆದಾಯ ಕಡಿಮೆಯಾಗಿ ದೇವಳದಲ್ಲಾಗಬೇಕಾದ ವಿಧಿವತ್ತಾದ ಕಾರ್ಯಕ್ರಮಗಳನ್ನು ನಿಭಾಯಿಸುವುದು ದುಸ್ತರ ಎಂಬ ಸ್ಥಿತಿ ಬಂದೊದಗಿತ್ತು. ಆಗ ಭೋಜರಾಯರು ಸುಬ್ರಹ್ಮಣ್ಯದಿಂದ ಮೈಸೂರಿಗೆ ಕಾಲ್ನಡಿಗೆಯಲ್ಲಿ ಹೋಗಿ ಅಲ್ಲಿ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರನ್ನು ಕಂಡರಂತೆ. ಭರ್ಜರಿ ಮೀಸೆ, ಅಮೋಘ ಮುಖಕಾಂತಿಯ ಭೋಜರಾಯರು ದರ್ಬಾರು ಪೋಷಾಕಿನಲ್ಲಿ ಇನ್ನೂ ಹೆಚ್ಚಾಗಿ ಕಂಗೊಳಿಸಿದ್ದರಂತೆ. ಸ್ವಲ್ಪ ಹೊತ್ತು ಅವರನ್ನು ದಿಟ್ಟಿಸಿನೋಡಿದ ಮಹಾರಾಜರು, ಇಷ್ಟು ದೂರ ಏಕೆ ಬಂದಿರಿ ಎಂದು ಕೇಳಿದಾಗ “ನಮ್ಮ ಸುಬ್ಬಪ್ಪನಿಗೆ ಊಟಕ್ಕಿಲ್ಲ! ಮಹಾರಾಜರು ಕೃಪೆ ಮಾಡಬೇಕು” ಎಂದರು ಭೋಜರಾಯರು. “ನೀವು ಈಗ ಊರಿಗೆ ಹೋಗಿ, ನಿಮಗೆ ಬೇಕಾದದ್ದನ್ನು ನಾನು ಕಳುಹಿಸುತ್ತೇನೆ,” ಎಂದರು ಮಹಾರಾಜರು. ಭೋಜರಾಯರು ಊರಿಗೆ ಬಂದರು. ದೇವಳಕ್ಕೆ ಸಕಾಲದಲ್ಲಿ ಅರಮನೆಯ ದೇಣಿಗೆ ಬಂತು. ಆದರೆ ಊರಿಗೆ ಬಂದ ಕೆಲವೇ ದಿನದಲ್ಲಿ ಭೋಜರಾಯರು ಸನ್ನಿಪಾತ ಜ್ವರಕ್ಕೆ ತುತ್ತಾಗಿ ಮರಣಹೊಂದಿದರು. ಅವರಿಗೆ ರಾಜದೃಷ್ಟಿಯಾಗಿತ್ತಂತೆ, ಆದರಿಂದಾಗಿಯೇ ಅವರಿಗೆ ಆ ಗತಿ ಬಂತು ಎಂದು ನಂಬಿದವರು ಅನೇಕರು. ಪ್ರಯಾಣದಲ್ಲಿ ಎಲ್ಲೆಲ್ಲಿ ಯಾವ್ಯಾವ ನೀರು ಕುಡಿದಿದ್ದರೇನೋ. ಅದರಿಂದ ಸನ್ನಿಪಾತ ಜ್ವರ ಅವರಿಗೆ ಬಂದಿರಬಹುದು. ಆದರೆ ಕುಟುಂಬದವರ, ಜನರ ನಂಬಿಕೆ ಬೇರೆ. ನೋಡುವಾಗ ರಾಜನಂತೆ ಕಾಣುತ್ತಿದ್ದ ಭೋಜರಾಯರಿಗೆ ರಾಜದೃಷ್ಟಿಯಾಯಿತು ಎಂಬುದು ಹೆಮ್ಮೆಯೇ, ಭ್ರಮೆಯೇ ಅಥವಾ ಸ್ವಪ್ರಶಂಸನೆಯೇ ಎಂಬುದನ್ನು ನಿರ್ಧರಿಸುವುದು ಸುಲಭವಲ್ಲ. ಬಾಗಲೋಡಿಯವರೊಬ್ಬರು ನೋಡುವುದಕ್ಕಾದರೂ ರಾಜನಿಗೇನೂ ಕಡಿಮೆಯಿರಲಿಲ್ಲ ಎಂಬ ಭಾವನೆಯನ್ನು ವ್ಯಕ್ತಪಡಿಸಿ ಈ ಕಥೆಯನ್ನು ಹೆಮ್ಮೆಯಿಂದಲೇ ಹೇಳುತ್ತಿದ್ದನ್ನು ನಾನು ಕೇಳಿದ್ದೇನೆ.

ಜಮೀನ್ದಾರಿಕೆ, ಶ್ಯಾನುಭೋಗರ ಅಥವಾ ಇತರ ವಿಧದ ಅಧಿಕಾರಗಳು ಕಳಚಿಹೋದರೂ ಅದರ ಗುಂಗಿನಿಂದ ಮುಕ್ತಿಪಡೆಯುವುದು ಸುಲಭವಲ್ಲ. ಬಾಗಲೋಡಿ ಮನೆತನದ ಹಲವು ಹಿರಿಯರಲ್ಲಿ ಹಳೆಯ ಪಳೆಯುಳಿಕೆಗಳನ್ನು ನಾನು ಕಂಡಿದ್ದೇನೆ. ಒಂದು ವಿಧವಾದ ಠೀವಿ, ಆಗಾಗ ತುಂತುರಿಸುವ ಪ್ರತಿಷ್ಠೆಯ ಮಾತುಗಳು, ಹಿಂದಿನ ದಿನಗಳ ವೈಭವಗಳನ್ನು ಮೆಲುಕುಹಾಕುವ ಪ್ರವೃತ್ತಿ, ಇನ್ನೊಬ್ಬರನ್ನು ಏಕವಚನದಲ್ಲೇ ಸಂಬೋಧಿಸುವ ಚಾಳಿ, ಮುಂತಾದುವುಗಳನ್ನು ಅಳವಡಿಸಿಕೊಂಡದ್ದನ್ನು ಗಮನಿಸಿದ್ದೇನೆ. ಅವುಗಳೆಲ್ಲವೂ ವಾಸ್ತವಕ್ಕೆ ಹೊಂದಿಕೆಯಾಗಿರಲಿಲ್ಲ. ಎಷ್ಟೋಬಾರಿ ನಾವು ನಮ್ಮ ಗತಕಾಲದ ವೈಭವಗಳನ್ನು ನೆನೆಪಿಸಿ, ಹಿಗ್ಗಿಸಿ ಸಂಭ್ರಮಿಸಿಕೊಂಡು ತಮ್ಮ ವರ್ತಮಾನದಲ್ಲಿ ತಾನು ಜನಸಾಮಾನ್ಯನಾಗಿರುವ ಸ್ಥಿತಿ, ಬಡತನ, ನಿರ್ಲಕ್ಷ್ಯಗಳನ್ನು ಮೀರಲು, ಮರೆಯಲು ಪ್ರಯತ್ನಿಸುವುದು ನಮ್ಮ ಸ್ವಭಾವವಷ್ಟೆ.

ಬಾಗಲೋಡಿ ದೇವರಾಯರ ತಂದೆ ಬಾಗಲೋಡಿ ಕೃಷ್ಣರಾಯರು (೧೮೯೩-೧೯೭೫) ಹಾಗೇನೂ ಮಹಾ ಪ್ರತಾಪಿಯಲ್ಲ. ಅವರಿಗೆ ಜಮೀನ್ದಾರಿಕೆಯ ಮಬ್ಬು ನೆನಪಿದ್ದಿರಬಹುದು, ಆದರೆ ಅದರ ಹೊರೆಯಿರಲಿಲ್ಲ. ಅವರು ಕಿನ್ನಿಕಂಬಳದಲ್ಲಿ (ಕೈಕಂಬದಿಂದ ಬಜಪೆ ಹೋಗುವ ದಾರಿಯಲ್ಲಿ ಸುಮಾರು ಒಂದು ಕಿಲೋಮೀಟರ್ ದೂರದ ಹಳ್ಳಿಯಲ್ಲಿ ವಾಸವಾಗಿದ್ದರು……..

(‘ಬದುಕಿನ ಸತ್ಯವನ್ನರಸಿದ ಕತೆಗಾರ – ಬಾಗಲೋಡಿ ದೇವರಾಯ’ದ ಮುಂದಿನ ಓದಿಗೆ ಕಾಂತಾವರ ಕನ್ನಡ ಸಂಘ ಅಥವಾ ತತ್ಸಂಬಂಧಿತ ಪುಸ್ತಕ ಮಳಿಗೆಗಳಿಂದ ಪುಸ್ತಕವನ್ನೇ ಕೊಂಡುಕೊಳ್ಳಿ!)

(‘ದೇವಸ್ಮರಣೆ’ ಪುಸ್ತಕದ ಬೀಜಾರೋಪ ಮತ್ತು ಸಂಪಾದಕೀಯ ಮುಂದಿನ ಭಾಗದಲ್ಲಿ)