ಕೃಷ್ಣಪ್ರಕಾಶ ಉಳಿತ್ತಾಯರ ಮನೆ – ‘ಈಶಾವಾಸ್ಯ’. ಇದು ಮಂಗಳೂರಿನಿಂದ ಸುಮಾರು ಹನ್ನೆರಡರಿಂದ ಇಪ್ಪತ್ತು ಕಿಮೀ ವರೆಗೆ ಹಲವು ಸಾಧನಾಪಥಗಳಿರುವ ಉಳಾಯಿಬೆಟ್ಟು, ಪೆರ್ಮಂಕಿಯಲ್ಲಿದೆ. ಇದನ್ನು ನಾನು ಐದು ತಿಂಗಳ ಹಿಂದೆ ಸೈಕಲ್ ಸರ್ಕೀಟಿನಲ್ಲಿ ಹುಡುಕಿ ಹಿಡಿದದ್ದು ನಿಮಗೆ ತಿಳಿದೇ ಇದೆ (ಫೇಸ್ ಬುಕ್: ೧೭-೩-೧೯, ಸೈಕಲ್ ಸರ್ಕೀಟ್ ೪೬೦). ಅಂದು ಉಳಿತ್ತಾಯರು ಮಾತಿನಲ್ಲಿ, ಅಲ್ಲೇ ತಾವು ನಡೆಸಿದ್ದೊಂದು ತಾಳಮದ್ದಳೆ ಪ್ರಯೋಗದ ಉಲ್ಲೇಖ ಮಾಡಿದ್ದರು. ಆ ಹೆಮ್ಮೆಯಲ್ಲಿ ‘ನನ್ನದು’ ಎನ್ನುವುದಕ್ಕಿಂತ ಹೆಚ್ಚಿನ ಕಲೋತ್ಕರ್ಷದ ಹೊಳಹಿತ್ತು. ಆಗ ಸಹಜವಾಗಿ ನನಗದು ತಪ್ಪಿತಲ್ಲಾ ಎನ್ನುವ ಕೊರಗು ನನ್ನದಾಗಿತ್ತು. ಅದಕ್ಕೆ ಪರಿಹಾರವೆನ್ನುವಂತೆ ಉಳಿತ್ತಾಯರು, “ಈ ವರ್ಷವೂ ಮಳೆಗಾಲದಲ್ಲಿ ಅಂಥದ್ದೇ ಇನ್ನೊಂದು ಮಾಡುತ್ತೇನೆ. ಆಗ ನೀವು ಸಪತ್ನೀಕರಾಗಿ ಅವಶ್ಯ ಬರಬೇಕು” ಎಂದೂ ಸೇರಿಸಿದ್ದರು. ಅದು ಇದೇ ಆಗಸ್ಟ್ ಹತ್ತು, ಶನಿವಾರ ಬೆಳಿಗ್ಗೆ ಸುಮಾರು ಒಂಬತ್ತರಿಂದ ರಾತ್ರಿ (ಅನಿರ್ದಿಷ್ಟ) ಎಂಟರವರೆಗೆ, ಒಂದು ಅಪೂರ್ವ ಅನುಭವವಾಗಿ ನಮಗೂ ಒದಗಿತು.

ಅಂದು ‘ಈಶಾವಾಸ್ಯ’ ಬೆಳಗ್ಗಿನ ಉಪಾಹಾರದಿಂದ ತೊಡಗಿ, ರಾತ್ರಿಯ ಊಟದವರೆಗೆ ನಮ್ಮದೇ ಮನೆಯಾಗಿತ್ತು. ಅಲ್ಲಿ ಕೃಷ್ಣಪ್ರಕಾಶ ಉಳಿತ್ತಾಯರೆಬ್ಬಿಸಿದ ಕಲಾಪ್ರೀತಿಯ ಅಲೆಗಳು ಅವರ ಹೆಂಡತಿ – ವಿಭಾ, ಎರಡು ಮಕ್ಕಳು, ತಂದೆ, ತಾಯಿ, ಮಾವ, ಅತ್ತೆ, ಭಾವ, ನಾದಿನಿ ಎಂದು ವಿಸ್ತರಿಸುತ್ತ ನಲ್ವತ್ತೈವತ್ತು ಮಂದಿಯನ್ನು ಒಳಗೊಂಡ ಪರಿ ಅನನ್ಯ. ದಿನದ ಕಲಾಪ ಮನೆಯ ದೇವರ ಕೋಣೆ ಎದುರಿನಲ್ಲಿ ಗಜಮುಖದವನಿಗೆ ಪ್ರಾರ್ಥನೆಯಿಂದ ತೊಡಗಿದ್ದು, ಎದುರು ಕೋಣೆಯಲ್ಲಿ ವಿವಿಧ ಭೀಷ್ಮ ಪ್ರಸಂಗಗಳೊಡನೆ ವಿಸ್ತರಿಸಿತು.ಅದಕ್ಕೆ ಪರಿವಿಡಿ ಬರೆಯುವುದಿದ್ದರೆ – ಪ್ರತಿಜ್ಞೆ, ಅಂಬಾ ಪ್ರಕರಣ, ಕುರು ಸೇನಾಧಿಪತ್ಯ, ಅಭಿಮನ್ಯು ಮತ್ತು ಕೃಷ್ಣಾರ್ಜುನ ಮುಖಾಮುಖಿ ಎಂದು ಮುಗಿಸಿಬಿಡಬಹುದು. ಆದರೆ ಅದು ಏನೂ ಹೇಳಿದಂತಲ್ಲ.

ಆ ದಿನದ ಕೂಟದಲ್ಲಿ ಕೆಲವು ಪಾತ್ರಗಳನ್ನಷ್ಟೇ ಪಳಗಿದ ಕಲಾವಿದರಾದ ರಾಧಾಕೃಷ್ಣ ಕಲ್ಚಾರ್, ವಾಸುದೇವ ರಂಗಾಭಟ್ಟ, ಹರೀಶ ಬಳಂತಿಮೊಗರು ಮತ್ತು ವಾದಿರಾಜ ಕಲ್ಲೂರಾಯರು ವಹಿಸಿದ್ದರು. ಉಳಿದಂತೆ ಸುಮಾರು ಹತ್ತಕ್ಕೂ ಹೆಚ್ಚು ಪಾತ್ರಗಳನ್ನು ಅರ್ಥಧಾರಿತ್ವದ ಕಲಿಕೆಯ ದಾರಿಯಲ್ಲಿರುವ ಯುವ ಉತ್ಸಾಹಿಗಳು ಸಮರ್ಥವಾಗಿಯೇ ತುಂಬಿಕೊಟ್ಟರು. ಹಿಮ್ಮೇಳದಲ್ಲಿ ಕೆಲವೇ ಹವ್ಯಾಸೀ ಕಂಠ, ಬಡಿತ ಕೇಳಿತು. ಮುಖ್ಯವಾಗಿ ದಾರಿ ತೋರಿದವರೆಲ್ಲ ವೃತ್ತಿಪರರೇ ಎನ್ನಬಹುದು. ನನಗಷ್ಟು ಪರಿಚಿತರಲ್ಲದ ಎರಡು ಮೂರು ಹಿರಿಯರಲ್ಲದೆ (ಕ್ಷಮಿಸಿ, ಆ ಭಾಗವತ, ಮದ್ಲೆಗಾರರ ಹೆಸರು ನನ್ನ ನೆನಪಿನಲ್ಲುಳಿದಿಲ್ಲ), ಉಳಿತ್ತಾಯರಿಗೆ ಹೆಣ್ಣುಕೊಟ್ಟ ಮಾವನೂ ಆದ ಲಕ್ಷ್ಮೀಶ ಅಮ್ಮಣ್ಣಾಯ, ಗುರು ಸಮಾನರಾದ ಪದ್ಯಾಣ ಶಂಕರನಾರಾಯಣ ಭಟ್ಟ, ಸುರೇಂದ್ರ ಪಣಿಯೂರು, ಪೃಥ್ವೀರಾಜ ಕವತ್ತಾರು, ಚೈತನ್ಯಕೃಷ್ಣ ಪದ್ಯಾಣರೆಲ್ಲ ಭಾಗವತಿಕೆ, ಚಂಡೆ, ಮದ್ದಳೆ, ಚಕ್ರತಾಳ ನಡೆಸಿದರು. ಎಡೆಗಳಲ್ಲಿ ಸ್ವತಃ ಕೃಷ್ಣಪ್ರಕಾಶರೇ ಅನೇಕ ಕಡೆ ನುಡಿಸಿದರು ಎಂದು ಪ್ರತ್ಯೇಕ ಹೇಳಬೇಕೇ. ನನಗೆ ತಿಳಿದಿರದ ಮುಖ ತೋರುವಂತೆ, ಅರ್ಥಧಾರಿ ಹರೀಶ ಬಳಂತಿಮೊಗರು ಭಾಗವತಿಕೆಗೆ ಕುಳಿತದ್ದು, ಪತ್ರಕರ್ತ ಲಕ್ಷ್ಮೀ ಮಚ್ಚಿನ ಅವರಿಗೆ ಮದ್ದಳೆ (-ಯಲ್ಲಿ ಅಲ್ಲ!) ಬಾರಿಸಿದ್ದು ಹೊಸ ಸಂಗತಿ. ಅಗರಿ ಶೈಲಿಯ ಪರಿಚಯಕ್ಕೆನ್ನುವಂತೆ, ಅಗರಿಯವರ ನೇರ ಶಿಷ್ಯರಿಂದ ಹಾಡಿಸಿದ್ದರು. ಆದರೆ ಕೃಷ್ಣಪ್ರಕಾಶರ ಮೊದಲ ಗುರು – ಅವರ ತಂದೆ ಕುಪ್ಪಣ್ಣನವರ (ವೆಂಕಟೇಶ ಉಳಿತ್ತಾಯ) ಮದ್ದಳೆವಾದನವನ್ನು ಕೇಳುವ ನನ್ನ ಕುತೂಹಲ ಮಾತ್ರ ಹಿಂಗಲಿಲ್ಲ. ಊಟದ ಬಿಡುವಿನಲ್ಲಿ ನಾನೇ ಕುಪ್ಪಣ್ಣನವರಲ್ಲಿ ಇದನ್ನು ಪ್ರಸ್ತಾವಿಸಿದಾಗ, ಅವರು ಸವಿನಯ (ವ್ಯಂಗ್ಯವೇನೂ ಇಲ್ಲದೆ) “ನಾನು ಬಾರಿಸಿದರೆ ಮಗನ ಇಂದಿನ ಗೌರವಕ್ಕೆ ಕುಂದುಂಟಾದೀತು” ಎಂದು ಮನಸಾ ನಕ್ಕು ಬಿಟ್ಟರು!

ರಾಧಾಕೃಷ್ಣ ಕಲ್ಚಾರ್ ಸುಮಾರು ಆರೇಳು ಗಂಟೆಗಳ ಉದ್ದಕ್ಕೆ, ಅಂದರೆ ನಡುವೆ ಊಟದ ಬಿಡುವೊಂದನ್ನುಳಿದು ಪ್ರಾರ್ಥನೆಯಿಂದ ಮಂಗಳದವರೆಗೆ ಭೀಷ್ಮನಾಗಿ ಅರ್ಥ ಹೇಳಿದ್ದು ಅಸಾಧಾರಣವೇ ಸರಿ. ಅದರಲ್ಲಿ ಅಂಜುಕುಳಿಗಳ ಕೈ ಹಿಡಿದು ನಡೆಸಿದರು, ಅತ್ಯುತ್ಸಾಹದಲ್ಲಿ ‘ಪೆಟ್ಟು’ ಹಾಕಿ ಯುಕ್ತ ಪ್ರತಿಪೆಟ್ಟು ಕೊಟ್ಟರೆ ತಡೆದುಕೊಳ್ಳಲಾರದವರನ್ನು ಸುಧಾರಿಸಿದರು, ‘ಅತ್ಯಾಪ್ತ’ರಂಗದ ಕೊರತೆಗಳೇ ಆದ ನಡುನಡುವೆ ಓಡಾಡುವ, ಅನಪೇಕ್ಷಿತ ಗುಸುಗುಡುವವರನ್ನೆಲ್ಲ ಸಹಿಸಿಕೊಂಡರು, ಪಳಗಿದ ವಾಸುದೇವ ರಂಗಾಭಟ್ಟರೇ ಮೊದಲಾದ ಸಮಬಲರನ್ನು ನಿಭಾಯಿಸುವುದರಲ್ಲೂ ತಡವರಿಸಲಿಲ್ಲ. ಅವರ ಒಟ್ಟಾರೆ ಸಾಧನೆಗೂ ಅಂದಿನ ಪಾತ್ರ ನಿರ್ವಹಣೆಗೂ ಧನ್ಯವಾದ ಹೇಳುವಂತೆ, ದಿನದ ಕೊನೆಯಲ್ಲಿ ‘ವರ್ಷದ ಈಶಾವಾಸ್ಯ ಗೌರವ’ವನ್ನು ಗಣ್ಯರ ಕೈಯಲ್ಲಿ ಕಲ್ಚಾರರಿಗೇ ಕೊಡಿಸಿದ್ದು ಹೃದ್ಯವಾಯ್ತು. ಎಂದಿನಂತೆ ವಾಸುದೇವರಂಗಾಭಟ್ಟರು ಪರಶುರಾಮನ ಅರ್ಥದಲ್ಲಿ ಉತ್ತಮವಾದದ್ದನ್ನೇ ಅಭಿವ್ಯಕ್ತಿಸಿದರು. ಈಶಾವಾಸ್ಯ ಗೌರವದ ಮೊದಲ ಪಾತ್ರಿ (ಕಳೆದ ವರ್ಷ) ಅವರೇ ಆಗಿದ್ದರು ಎನ್ನುವುದನ್ನು ಶ್ರುತಪಡಿಸಿದರು. (ಹಾಗೆಂದ ಮಾತ್ರಕ್ಕೆ, ಅವರ ಯೋಗ್ಯತೆ ಕುರಿತು ಅಲ್ಲಿ ಯಾರಿಗಾದರೂ ಸಂಶಯ ಇತ್ತು ಎಂದಲ್ಲ!) ಹರೀಶ ಬಳಂತಿಮೊಗರು ಯುವ ಅರ್ಥಧಾರಿಗಳ ಸಮೀಕ್ಷಕ ಮಾರ್ಗದರ್ಶಕರಾಗಿಯೇ ಬಂದಿದ್ದರು. ನಡುವೆ ಅವರು ಸಣ್ಣ ಭಾಗವತಿಕೆ ನಡೆಸಿದ್ದಲ್ಲದೆ, ಅನಿವಾರ್ಯವಾಗಿ ಪಾತ್ರವೊಂದರ ಸಣ್ಣ ಅರ್ಥಧಾರಿಕೆಯನ್ನೂ ವಹಿಸಿಕೊಂಡರು. ಅವರ ಸಮೀಕ್ಷೆಯಾದರೋ ಮನೆಯ ಹಿರಿಯ ಮಕ್ಕಳೊಡನೆ ಸಲ್ಲಪಿಸಿದಷ್ಟೇ ಹಿತವಾಗಿತ್ತು, ಒಬ್ಬೊಬ್ಬರನ್ನೂ ಹೆಸರೆತ್ತಿ ಗುಣಕ್ಕೆ ಬೆನ್ನು ಚಪ್ಪರಿಸಿದರೂ ದೋಷಕ್ಕೆ ಒಟ್ಟಾರೆ ಕಲಾಶಯವನ್ನು ಸ್ಪಷ್ಟಪಡಿಸಿಕೊಟ್ಟರು. ಮೊದಲಿಗರಿಗೆ ಸಹಜವಾಗಿ ಮೂಡುವ ನಡುಕ, ಆಡುನುಡಿಯ ಬೆರಕೆ (ಗ್ಯಾರಂಟಿ, ಚಾನ್ಸ್, ಖಾಲಿ), ಮಾತಿನ ಶೈಲೀಕರಣದ ಎಚ್ಚರ, ಪಾತ್ರೌಚಿತ್ಯವೇ ಮೊದಲಾದ ವಿಚಾರಗಳು ಅಲ್ಲಿ ಉಲ್ಲೇಖಗೊಂಡವು. ಇವೆಲ್ಲಕ್ಕೂ ಅಲ್ಲಿನ ವಾತಾವರಣ, ಅಂದರೆ ಸಭೆ ಮತ್ತು ಪಾತ್ರಕ್ಕೆ ವಿಶೇಷ ಅಂತರವೇನೂ ಇಲ್ಲದ ಅತ್ಯಾಪ್ತ ಸ್ಥಿತಿಯ ಪ್ರಭಾವವೂ ಬಹಳ ಮುಖ್ಯವಾದ ಅಂಶ ಇದ್ದಿರಬಹುದು ಎಂದು ನನಗನ್ನಿಸಿತು.

ಪ್ರಸಂಗಗಳ ಆಯ್ಕೆ, ಪಾತ್ರ ಹಂಚಿಕೆ ಹಾಗೂ ಎತ್ತಿಕೊಂಡ ಪದ್ಯಗಳನ್ನೆಲ್ಲ ನಿರ್ವಹಿಸಿದವರು ಕೃಷ್ಣಪ್ರಕಾಶರ ಗೆಳೆಯ ಸುಧಾಕರ ಜೈನ್ ಹೊಸಬೆಟ್ಟು. ಇವರು ಸಂಜೆ ತಾಳಮದ್ದಳೆ ಮುಗಿದ ಮೇಲೆ, ಸುಮಾರು ಅರ್ಧ ಗಂಟೆಯ ಕಾಲ ಕಲ್ಚಾರ್ ಜೊತೆಗೆ ಅನೌಪಚಾರಿಕ ಸಂವಾದವನ್ನೂ ನಡೆಸಿಕೊಟ್ಟರು. ಇದು ಸಹಜವಾಗಿ ಸಭಿಕರೊಡನೆಯೂ ಪ್ರಶ್ನೋತ್ತರವಾಗಿಯೂ ವಿಸ್ತರಿಸಿಕೊಂಡಿತ್ತು. ಇದರಲ್ಲಿ ವಿಶೇಷವಾಗಿ ನಾನು ಬಯಸಿದ ವಿಚಾರ, ಕಲಾನಿಷ್ಠೆ ಮತ್ತು ಜೀವನನಿಷ್ಠೆಯ ದ್ವೈತ, ಸರಿಯಾಗಿಯೇ ಹೆಚ್ಚು ಸ್ಪಷ್ಟವಾಯ್ತು.

ಪುರಾಣ ಆಧಾರಿತ ಕಲಾಪ್ರಕಾರಗಳೆಲ್ಲ ಬಹುಮಂದಿ ನಂಬಿದಂತೆ, ಆರಾಧನೆಯ ವಿಸ್ತರಣೆ ಆಗಬೇಕಿಲ್ಲ. ಜಿಟಿ ನಾರಾಯಣ ರಾವ್ – ನನ್ನ ತಂದೆ, ವೈಯಕ್ತಿಕವಾಗಿ ದೇವರು, ತತ್ಸಂಬಂಧಿತ ಆರಾಧನಾ ನಂಬಿಕೆಗಳನ್ನು ಒಪ್ಪಿಕೊಂಡವರಲ್ಲ. ಅವರು ಪುರಾಣ ಕಥನಗಳನ್ನು ಸಾಹಿತ್ಯವಾಗಿ, ಕಲೆಯಾಗಿ, ಜೀವನಾದರ್ಶಗಳ ರೂಪಕವಾಗಿ ಸದಾ ಮೆಚ್ಚಿ, ಸಂಭ್ರಮಿಸುತ್ತಿದ್ದರು. ಅದು ನನಗೂ ಆದರ್ಶವಾಗಿಯೇ ಇದೆ. ಅವರನ್ನು ಅಲ್ಲಿ ಇಲ್ಲಿ ಕಾಡುತ್ತಿದ್ದ ಪ್ರಶ್ನೆಯೇ “ಕಲ್ಚಾರ್ ಸರ್ ನೀವು ನಾಸ್ತಿಕರೇ?” ಎಂದೊಬ್ಬರು ಆತಂಕಪೂರಿತವಾಗಿಯೇ ಕೇಳಿದ್ದರು. ಕಲ್ಚಾರ್ ಕೊಟ್ಟ ಉತ್ತರ ನನ್ನ ತಂದೆಯ ಮಾತುಗಳಿಗೆ ಸಂವಾದಿಯಾಗಿದ್ದದ್ದು ನನಗಂತೂ ತುಂಬಾ ಕುಶಿಕೊಟ್ಟಿತು.
ಕೆಲವು ವರ್ಷಗಳ ಹಿಂದೆ, ನನ್ನಂಗಡಿಯಲ್ಲಿ ಕೇವಲ ಪುಸ್ತಕಪ್ರಿಯನಾಗಿ ಪರಿಚಯಕ್ಕೆ ಸಿಕ್ಕವರು ತರುಣ ಕೃಷ್ಣಪ್ರಕಾಶ ಉಳಿತ್ತಾಯ. ಇವರು ವೃತ್ತಿಯಲ್ಲಿ ಬ್ಯಾಂಕ್ ಅಧಿಕಾರಿ. ಆದರೆ ಪ್ರವೃತ್ತಿಯಲ್ಲಿ ಚಂಡೆ ಮದ್ದಳೆವಾದನಾ ಸಾಮರ್ಥ್ಯದೊಡನೆ ತೀವ್ರ ಯಕ್ಷಗಾನಪ್ರೇಮಿ ಎಂದು ತಿಳಿದಾಗ ಪರಿಚಯ ಗೆಳೆತನಕ್ಕೆ ತಿರುಗಿತ್ತು. ಮತ್ತೆ ದೇವಕಿಗೆ ತವರುಮನೆ – ಕೊಂದ್ಲಕಾನದ, ಪರಿಚಯವೂ ತಿಳಿದ ಮೇಲೆ ಆತ್ಮೀಯತೆಯೇ ಬಂದಿತ್ತು. ಕೃಷ್ಣಪ್ರಕಾಶ್ ತನ್ನ ವೈವಿಧ್ಯಮಯ ಓದು ಮತ್ತು ಗಂಭೀರ ಕಲಾಭ್ಯಾಸಗಳಿಗೆ ಕಿರೀಟದಂತೆ ಫೇಸ್ ಬುಕ್ಕಿನಲ್ಲಿ ಚೊಕ್ಕ ಟಿಪ್ಪಣಿಗಳು ಬರೆಯತೊಡಗಿದಾಗ, ನಾನು ಸಹಜವಾಗಿ ಮೆಚ್ಚಿಕೊಂಡಿದ್ದೆ. ಅದು ಸಂಶೋಧನಾ ಮಟ್ಟಕ್ಕೇರಿದ್ದಕ್ಕೆ ಸಾಕ್ಷಿ ಎನ್ನುವಂತೆ, ಉಳಿತ್ತಾಯರ ಪ್ರಥಮ ಪುಸ್ತಕ – ಅಗರಿ ಮಾರ್ಗದ, ಲೋಕಾರ್ಪಣವೂ ಈಶಾವಾಸ್ಯದ ಕಲಾಪದಲ್ಲಿ ಸೇರಿಕೊಂಡಿತು. ಕೀರ್ತಿಶೇಷ ಅಗರಿ ಶ್ರೀನಿವಾಸ ಭಾಗವತರು ಯಕ್ಷಗಾನರಂಗದಲ್ಲಿ ನಿಸ್ಸಂದೇಹವಾಗಿ ವಿಶಿಷ್ಟ ಮಾರ್ಗದರ್ಶೀ ಪ್ರತಿಭೆ. ಆ ಪ್ರತಿಭೆಯನ್ನು ವೈಯಕ್ತಿಕ ಜೀವನದ ವಿವರಗಳಲ್ಲಿ ಮುಳುಗಿಸದೆ, ಉತ್ಪ್ರೇಕ್ಷೆಗಳಲ್ಲಿ ಉಡಾಯಿಸದೆ ಸ್ಪಷ್ಟ ಸಾಕ್ಷಿ, ವಿಶ್ಲೇಷಣೆ ಮತ್ತು ಶಾಸ್ತ್ರಾಧಾರದೊಡನೆ ನಿರೂಪಿಸುವ ಪುಸ್ತಕ – ಅಗರಿ ಮಾರ್ಗ. ವಿಖ್ಯಾತ ಮತ್ತು ಹಿರಿಯ ಅರ್ಥಧಾರಿಯ ನೆಲೆಯಲ್ಲಿ, ಪೂರ್ಣ ಯಕ್ಷಗಾನದ ಒಳಗಿದ್ದುಕೊಂಡೂ ಅದರ ವಸ್ತುನಿಷ್ಠ ವಿಮರ್ಶೆಯ ಹದವನ್ನು ಬಹುಶಃ ಸರ್ವಪ್ರಥಮವಾಗಿ ತೋರಿಕೊಟ್ಟವರು, ಇಂದಿಗೂ ತಮ್ಮ ಮಾತು, ಕೃತಿಗಳಲ್ಲೂ ಪ್ರಕಟಿಸುತ್ತಲೇ ಇರುವವರು ಎಂ. ಪ್ರಭಾಕರ ಜೋಶಿ. (ಕೃಷ್ಣ ಸಂಧಾನ: ಪ್ರಸಂಗ ಮತ್ತು ಪ್ರಯೋಗ, ಮಾರುಮಾಲೆ, ಜಾಗರ, ಕೇದಗೆ, ಯಕ್ಷಗಾನ ಪದಕೋಶ ಮುಂತಾದವು ಜೋಶಿಯವರ ಕೃತಿಗಳು.) ಜೋಶಿಯವರು ರೂಪಿಸಿದ ರಾಜಮಾರ್ಗವನ್ನು ಅನುಸರಿಸುವಲ್ಲಿ ಎರಡನೆಯವರಿಲ್ಲ ಎನ್ನಲಾಗದಂತೆ, ಇಂದು ಕಿರಿಯ ಕೃಷ್ಣಪ್ರಕಾಶ ಉಳಿತ್ತಾಯರು ‘ಅಗರಿಮಾರ್ಗ’ದೊಡನೆ ನಿಂತಿದ್ದಾರೆ. ಜೋಷಿಯವರು ಕಾಲಧರ್ಮದಲ್ಲಿ ತಮ್ಮ ಅಧ್ಯಯನಾತ್ಮಕ ಸಾಧನೆಗಳನ್ನು ಕೇವಲ ಮುದ್ರಣ ಮಾಧ್ಯಮಕ್ಕೆ ಸೀಮಿತಗೊಳಿಸಿಕೊಳ್ಳಬೇಕಾಯ್ತು. ಕೃಷ್ಣಪ್ರಕಾಶರು ಹೊಸ ಮಾಧ್ಯಮಗಳನ್ನು, ಮುಖ್ಯವಾಗಿ ಅಂತರ್ಜಾಲ ಸಾಧ್ಯತೆಗಳನ್ನು ಕಂಡು, ಬಳಸಿ ಬೆಳೆಯುತ್ತಿರುವವರು. ಇವರು ಪ್ರಸ್ತುತ ‘ಅಗರಿಮಾರ್ಗ’ ಸೇರಿದಂತೆ, ತನ್ನ ಮುಂದಿನ ಕೃತಿಗಳನ್ನೂ ಧ್ವನಿ, ಚಲಚಿತ್ರ ಮಾಧ್ಯಮಗಳ ಸಹಾಯದೊಡನೆ ಹೆಚ್ಚಿನ ಪುಷ್ಟಿ ಕೊಟ್ಟು ವಿದ್ಯುನ್ಮಾನ ಮಾಧ್ಯಮದಲ್ಲಿ ತರುವಂತಾಗಲಿ ಎಂದಷ್ಟೇ ಹಾರೈಸಬಲ್ಲೆ.

ನೆನಪಿರಲಿ, ಆ ವಾರವಿಡೀ ಭೋರ್ಗುಟ್ಟಿದ ಮಳೆ, ಶನಿವಾರವೂ ಸಣ್ಣ ಸಣ್ಣ ಬಿಡುವು ಕೊಡುತ್ತ ಮುಂದುವರಿದೇ ಇತ್ತು. ಪೆರ್ಮಂಕಿಗೆ ವಿಶೇಷ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ. ಹಾಗಾಗಿ ನಾನು ಮತ್ತು ದೇವಕಿ ಮೋಟಾರ್ ಬೈಕಿನಲ್ಲಿ ಹೋಗುವ ಅಂದಾಜನ್ನು ಕಾರಿಗೆ ಬದಲಿಸಿಕೊಂಡಿದ್ದೆವು. ಮತ್ತೆ ದಾರಿಯಾದರೋ ನೀರ್ಮಾರ್ಗದ ಎತ್ತರದ್ದನ್ನೇ ಆಯ್ದುಕೊಂಡಿದ್ದೆವು. ಅನಿವಾರ್ಯವಾಗಿ ಫಲ್ಗುಣೀ ಕಣಿವೆಯ ದಾರಿಯಲ್ಲಿ ಬಂದವರು, ಅದರಲ್ಲೂ ತಡವಾಗಿ ಬಂದವರು ಯಾವ್ಯಾವುದೋ ದಾರಿಗಳು ನೆರೆ ನೀರಿನಲ್ಲಿ ತಡೆಯುಂಟುಮಾಡಿದ ಕತೆ ಹೇಳುವುದು ಕೇಳಿತ್ತು. ಆದರೆ ಈಶಾವಾಸ್ಯದ ಅನೌಪಚಾರಿಕ ಆತಿಥ್ಯದ ಬಿಸುಪು, ಅಲ್ಲಿನ ಕಲಾಪಗಳಿಗೆ ಹೊರತಾದ ವಿಚಾರಗಳ ಕುರಿತು ನಮಗೆ ತತ್ಕಾಲೀನ ಮರವೆಯನ್ನೇ ತಂದಿತ್ತು. ಮುಖ್ಯ ಸಭೆ ಎದುರು ಕೋಣೆಯಲ್ಲಿದ್ದರೂ ಮುಖಮಂಟಪದ ಕಟ್ಟೆಗಳ ಮೇಲೆ, ನಡುಕೋಣೆಯ ಚದುರಿದ ಕುರ್ಚಿಗಳ ಮೇಲೆ, ಅಡುಗೆಮನೆಯ ಒಳಗೆ ಎಂದೆಲ್ಲ ಭಾಗಿಗಳು ಹಂಚಿಹೋಗಿದ್ದರೂ ಭೀಷ್ಮ ಪ್ರಸಂಗಗಳಿಗೆ ಕಿವಿಯಾಗುತ್ತ, ಸ್ಪಂದಿಸುವಲ್ಲಿ ಒಂದಾಗಿಯೇ ಇದ್ದರು. ಬೆಳಗ್ಗಿನ ಉಪಾಹಾರದಿಂದ ತೊಡಗಿ ರಾತ್ರಿಯ ಊಟದವರೆಗೂ ಎಲ್ಲರ ಹೊಟ್ಟೆಯ ಅಗತ್ಯಗಳನ್ನು ಸರಳ, ರುಚಿಕರ ಮತ್ತು ಯಥೇಚ್ಛವಾಗಿರುವಂತೆ ನೋಡಿಕೊಂಡವರು ಸ್ವತಃ ಕೃಷ್ಣಪ್ರಕಾಶರ ತಂದೆ (ಕುಶಲ ಬಾಣಸಿಗ) ಮತ್ತು ತಾಯಿ. ಕೃಷ್ಣಪ್ರಕಾಶ ದಂಪತಿಯ ಎಳೆಹರಯದ (ನಾಲ್ಕೈದರ ಪ್ರಾಯವಿರಬಹುದು) ಬಾಲರು, ಮತ್ತವರ ಭಾವನ ತೀರಾ ಎಳೆ ಕಂದನ (ಒಂದೂವರೆ ವರ್ಷ) ಕೊಂಡಾಟಗಳು ನಮಗೆ ಮುಖ್ಯ ಕಲಾಪದ ಗಾಂಭೀರ್ಯಕ್ಕೆ ಅಡ್ಡಿ ತಾರದ, ಉಲ್ಲಾಸದ ತಾಣಗಳು. ಅಜ್ಜ – ಲಕ್ಷ್ಮೀಶ ಅಮ್ಮಣ್ಣಾಯರು ಮಗುವನ್ನು ಮಡಿಲಲ್ಲಿ ಕೂರಿಸಿಕೊಂಡೇ ಮದ್ದಳೆ ನುಡಿಸುತ್ತಿದ್ದ ಚಂದ ನೋಡಿಯೇ ಅನುಭವಿಸುವಂತದ್ದು.

ಬೆಳಗ್ಗೆ ಕಲಾಪಗಳ ಬಂಡಿಯ ಚಾಲನೆಗಷ್ಟೇ ಓರ್ವ ಅತಿಥಿಯ ಚುಟುಕು ಬಾಷಣವಿತ್ತು. ಉಳಿದಂತೆ ಕೃಷ್ಣಪ್ರಕಾಶರು ಕೊಡುತ್ತಿದ್ದ ನೇರಾನೇರ ನಿರೂಪಣೆಯೊಂದೇ ಎಲ್ಲವನ್ನೂ ನಡೆಸಿತು. ಸಂಜೆಯ ವೇಳೆಗೆ ಪುಸ್ತಕ ಅನಾವರಣ, ಸಮ್ಮಾನಕ್ಕೆ ಕೆಲವು ಗಣ್ಯರು ಬಂದಿದ್ದರೂ ಯಾರೂ ಮಾತಿನ ಹೊರೆ ಹೇರಲಿಲ್ಲ. ಅಲ್ಲಿನ ಭೀಷ್ಮ ಪ್ರಸಂಗಗಳು ಭಾರೀ ಹೊಸ ಹೊಳಹನ್ನು ಕೊಟ್ಟಿಲ್ಲವೆಂದು ಭಾವಿಸಿದರೂ ಒಟ್ಟಾರೆ ಮೈದಳೆದ ಭಾವಸಂತೃಪ್ತಿ ಅನನ್ಯ. ಇಂಥ ಇನ್ನೊಂದಕ್ಕೆ ವರ್ಷವೊಂದರಷ್ಟು ಕಾಯಬೇಕಲ್ಲಾ ಎಂಬ ಬೇಸರದ ಎಳೆ ಹೊತ್ತೇ ನಾವು ಬಂದ ದಾರಿಯಲ್ಲೇ ಮರಳಿದೆವು.