ಪುಸ್ತಕ ವಿಭಾಗ

Sep 10, 2021 | 19 comments

ಕನ್ನಡ ವಿದ್ಯುನ್ಮಾನ (ವಿ)-ಪುಸ್ತಕಗಳು ಅತ್ರಿ ಬುಕ್ ವಿಪ್ರಕಾಶನ(ಉಚಿತ)
 
ಕನ್ನಡ ಪುಸ್ತಕೋದ್ಯಮದಲ್ಲಿ ಮುಖ್ಯವಾಗಿ ಬಿಡಿ ಮಾರಾಟಗಾರನಾಗಿ ಮತ್ತೆ ಪ್ರಕಾಶನವೇ ಮೊದಲಾದ ಕೆಲವು ಮುಖಗಳಲ್ಲಿ ಚೂರುಪಾರೆಂದು ಸುಮಾರು ಮೂವತ್ತಾರು ವರ್ಷ ಪ್ರಾಮಾಣಿಕ ದುಡಿದ ಅನುಭವ ನನ್ನದು. ಆ ಕೊನೆಯಲ್ಲಿ ಕನ್ನಡ ಮುದ್ರಣಪ್ರಕಾಶನ ಮಾಧ್ಯಮದ ಹುಸಿತನಕ್ಕೆ ರೋಸಿ ಪ್ರಕಾಶನವನ್ನು ಮುಚ್ಚಿದೆ, ಅನಂತರ ಸ್ವಯಂ ನಿವೃತ್ತಿ ಘೋಷಿಸಿ ಪುಸ್ತಕ ಮಾರಾಟವನ್ನೂ ನಿಲ್ಲಿಸಿದೆ. ಹಾಗೆಂದ ಮಾತ್ರಕ್ಕೆ ಕನ್ನಡದಲ್ಲಿ ಗಂಭೀರ ಓದುಗರಿಲ್ಲ ಅಥವಾ ಸಾರ್ವತ್ರಿಕ ಉಪಯುಕ್ತವಾದ ಅನುಭವಗಳಿಗೆ ಅಭಿವ್ಯಕ್ತಿ ಮಾಧ್ಯಮವೇ ಇಲ್ಲ ಎಂದಲ್ಲ ಎನ್ನುವಂತೆ ಅಂತರ್ಜಾಲದ ಜಾಲತಾಣಗಳು, ಜಾಲಪತ್ರಿಕೆಗಳು ವಿಕಸಿಸುವುದನ್ನು ಕಾಣುತ್ತಿದ್ದೇನೆ. ಸ್ವತಃ ನನ್ನದೇ ಆದ ಈ ಜಾಲತಾಣದ (www.athreebook.com) ವ್ಯಾಪ್ತಿ ಇನ್ನೂ ಅಚಿಂತ್ಯ, ಅನಂತವಾಗಿಯೇ ಕಾಣುತ್ತಿದೆ. ಜಾಲತಾಣದ ಬಹುಮುಖೀ ಸಾಧ್ಯತೆಗಳನ್ನು ಕಂಡುಕೊಳ್ಳುತ್ತಾ, ಕಾಲಕಾಲಕ್ಕೆ ಅವನ್ನು ನನ್ನ ಜಾಲತಾಣಕ್ಕೆ ಅಳವಡಿಸಿಕೊಡುತ್ತಲಿರುವವನು ನನ್ನ ಮಗ ಅಭಯಸಿಂಹಈ ಜಾಲತಾಣದ ನಿರ್ವಾಹಕ.
ನಾನು ಜಾಲತಾಣಕ್ಕಿಳಿಯುವ ಕಾಲದಲ್ಲಿ, ಇದು ಮುದ್ರಣ ಮಾಧ್ಯಮದಲ್ಲಿ ಬಂದ ನನ್ನ ಬರಹಗಳ ವಿದ್ಯುನ್ಮಾನ ದಾಸ್ತಾನು ಕೋಠಿ ಎಂದಷ್ಟೇ ಭಾವಿಸಿದ್ದೆ. ಆದರಿಂದು ಇಲ್ಲಿನ ಏಳ್ನೂರಕ್ಕೂ ಮಿಕ್ಕ ಸಚಿತ್ರ ಬರಹಗಳು, ಸಾವಿರಕ್ಕೂ ಮಿಕ್ಕು ಪ್ರತಿಕ್ರಿಯೆಗಳು, ಅಸಂಖ್ಯ ಸಂಪರ್ಕಸೇತುಗಳು, ಚಲನಚಿತ್ರ ಮತ್ತು ಧ್ವನಿದಾಖಲೆಗಳು, ಪರೋಕ್ಷವಾಗಿ ಇದರ ಪ್ರೇರಣೆಯಲ್ಲೇ ರೂಪುಗೊಳ್ಳುತ್ತಿರುವ ಪತ್ರಿಕಾ ಬರಹಗಳು, ಪುಸ್ತಕಗಳು ನಿಜ ಕನ್ನಡಕ್ಕೆ ಹೊಸದೇ ಆಯುಷ್ಯ ವಿಸ್ತರಣೆಯನ್ನು ಕೊಡುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ. ಅತ್ರಿ ಬುಕ್ ಸೆಂಟರಿನ ಹೆಸರಿನಲ್ಲಿ ನಾನು ಐವತ್ತಕ್ಕೂ ಮಿಕ್ಕು, ಅದರಲ್ಲೂ ಮುಖ್ಯವಾಗಿ ನನ್ನ ತಂದೆ ಜಿಟಿನಾರಾಯಣ ರಾಯರ ವಿಜ್ಞಾನ ಬರಹಗಳನ್ನು ಪ್ರಕಟಿಸಿದ್ದೆ. ಅವು ಮುಗಿಯುತ್ತ ಬಂದಂತೆ ಕಾಲನ ಅಟ್ಟಕ್ಕೆ ತಳ್ಳಿ, ಮರೆವಿನ ಹೊದಿಕೆ ಮುಚ್ಚುವುದರಲ್ಲಿದ್ದೆ. ಆಗ ಕಾಣಿಸಿದ ಸಾಧ್ಯತೆ ವಿಪುಸ್ತಕ.
ಇಂದು ಮುದ್ರಿತ ಪತ್ರಿಕೆಗಳ ಜೀವಾಳ ಜಾಹೀರಾತುಗಳು ಮತ್ತು ಪ್ರಾಯೋಜಿತ ಸುದ್ದಿಗಳು. ಜಾಹೀರಾತಿನ ಎಡೆ ತುಂಬುವುದಕ್ಕೆ ಎಷ್ಟೂ ಅಂಕಣ ಬರಹಗಾರರಿದ್ದಾರೆ. ಮತ್ತೆ ಈ ಅಂಕಣ ಸಂಕಲನವೂ ಮಹಾಪ್ರಸಾದ ಎನ್ನುವುದಕ್ಕೆ ಎಷ್ಟೂ ಪ್ರಕಾಶಕರು ಇದ್ದಾರೆ. ಈ ಪ್ರಕಾಶಕರು ಮುದ್ರಿಸಿದ್ದೆಲ್ಲಾ ಖರೀದಿಸಲು ನಮ್ಮಲ್ಲಿ ಎಷ್ಟೂ ಯೋಜನೆಗಳಿವೆ. ಪರೋಕ್ಷವಾಗಿ ಅಷ್ಟೂ ಮತ್ತು ಬರಲಿರುವ ಇನ್ನಷ್ಟೂ ಯೋಜನೆಗಳು ನಾಡಿನ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಉತ್ಥಾನಕ್ಕೆ ಅವಶ್ಯ ಎಂದು ಕಾಲಕಾಲಕ್ಕೆ ಆ ಎಲ್ಲ ಜಾಹೀರಾತುದಾರರು, ಲೇಖಕರು, ಪ್ರಕಾಶಕರು, ಯೋಜಕರು ಪ್ರಚುರಿಸುತ್ತಲೇ ಇದ್ದಾರೆ. ಆದರಿದು ಸುಳ್ಳನ್ನು ಹಲವು ಬಾರಿ ಹೇಳಿಸತ್ಯಕಾಣಿಸುವ ಪ್ರಯತ್ನ ಮಾತ್ರ. ಮುದ್ರಣದ ಪುಸ್ತಕೋದ್ಯಮ ನಿಸ್ಸಂದೇಹವಾಗಿ ತನ್ನ ಕೊನೆಗಾಲದಲ್ಲಿದೆ. ಹಾಗಾಗಿ ನಾನು ತಂದೆಯ ಪುಸ್ತಕಗಳನ್ನು ಸ್ವಂತ ನೆಲೆಯಲ್ಲಿ ಮರುಮುದ್ರಣ ಮಾಡಿಸಿ, ಮಾರಾಟಕ್ಕೆ ಒಡ್ಡಲಿಲ್ಲ. ಅಯಾಚಿತವಾಗಿಯೇ ಕೇಳಿ ಬಂದ ಅನ್ಯ ಪ್ರಕಾಶಕರಿಗೂ ಕೊಡಲಿಲ್ಲ.
ಕನ್ನಡದಲ್ಲೂ ವಿದ್ಯುನ್ಮಾನ ಪುಸ್ತಕಗಳು ರೂಪುಗೊಳ್ಳುವ ಮಾತುಗಳು ಬರುವಾಗ ನನ್ನಸನ್ಯಾಸಕ್ಕೆ ರಕ್ತಿ ಮೂಡಿತು. ಗೆಳೆಯ ಪಂಡಿತಾರಾಧ್ಯರು ಕನ್ನಡ ಗಣಕ ಪರಿಷತ್ತಿನ ಅಪರಿಮಿತ ಚಟುವಟಿಕೆಗಳ ಅಂಗವಾಗಿ ನನ್ನೆಲ್ಲ ಪ್ರಕಟಣೆಗಳನ್ನು ಅಂತರ್ಜಾಲಕ್ಕೆ ಮುಕ್ತಗೊಳಿಸುವ ಮಾತುಗಳನ್ನು ಕೆಲವು ಸಮಯದ ಹಿಂದೆಯೇ ಪ್ರಸ್ತಾವಿಸಿದ್ದರು. ಸರಕಾರದ ಕೃಪಾಪೋಷಿತ ಇಲಾಖೆಯೂ ಅಂತಹುದೇ ಮನವಿ ಸಲ್ಲಿಸಿತ್ತು. ತೀರಾ ಈಚೆಗೆ ಇನ್ನೋರ್ವ ಗೆಳೆಯ ಪವನಜರಂತೂ ವಿಪ್ರಕಾಶನದ ಆರ್ಥಿಕ ಸಾಧ್ಯತೆಗಳನ್ನೂ ವಿವರಿಸಿದ್ದರು. ಈ ಮೂರೂ ಶಕ್ತಿಗಳ ಹಿಂದಿನ ಆಶಯಗಳು ಮತ್ತು ವ್ಯಕ್ತಿಗಳು ನನಗೆ ಒಪ್ಪಿತವೇ. ಸ್ವತಂತ್ರ ಭಾರತದಲ್ಲಿ ಪ್ರಜಾಪ್ರಭುತ್ವದ ಒಳ್ಳೆಯ ಹೆಸರಿನಲ್ಲಿ ಅದೆಷ್ಟು ಉದಾತ್ತ ಆಶಯಗಳು ನಂಬಲಸಾಧ್ಯವಾದ ಕೆಳಮಟ್ಟವನ್ನು ಕಂಡಿವೆ ಎಂಬ ಕಹಿ ನನ್ನ ಗಂಟಲಲ್ಲಿ ಉಳಿದದ್ದಕ್ಕೆ ಅವೆಲ್ಲವನ್ನೂ ಸವಿನಯ ತಿರಸ್ಕರಿಸಿದ್ದೆ. ಆದರೀಗ ನನ್ನದೇ ಮಿತಿಯಲ್ಲಿ ಅವನ್ನು ವಿದ್ಯುನ್ಮಾನ ಅವತರಣಿಕೆಗಳಾಗಿ ಮೂಡಿಸಿ ಸಾರ್ವಜನಿಕಕ್ಕೆ ಮುಕ್ತಗೊಳಿಸುತ್ತಿದ್ದೇನೆ. ಇಲ್ಲಿ ಯಾವುದೇ ವಾಣಿಜ್ಯ ಅನುಸಂಧಾನವಿಲ್ಲ.
ಹೀಗೇ ಇನ್ಯಾರಿಗಾದರು ತಮ್ಮ ಬರಹಗಳನ್ನು ನನ್ನ ಜಾಲತಾಣದ ಮೂಲಕ ಸಾರ್ವಜನಿಕಕ್ಕೆ ಮುಕ್ತಗೊಳಿಸುವ ಬಯಕೆ ಇದ್ದರೆ ಅದಕ್ಕೂ ಆದರದ ಸ್ವಾಗತವಿದೆ. ಒಂದೇ ನಿಬಂಧನೆಕೃತಿಯ ವಿಮೂಲಪ್ರತಿಯನ್ನು ಅವರೇ ಸಂಯೋಜಿಸಿ ನಮಗೆ ಪೂರೈಸಬೇಕು.

ಈಗ ತೆಗೆದುಕೊಳ್ಳಿ…

ಜಿ.ಟಿ. ನಾರಾಯಣ ರಾವ್ ಎಲ್ಲ ಕೃತಿಗಳ ಉಚಿತ ವಿದ್ಯುನ್ಮಾನ ಪುಸ್ತಕಗಳಿಗೆ – https://bit.ly/3t6kudc

 

ಜಿ.ಟಿ. ನಾರಾಯಣ ರಾವ್ ಬರಹಗಳು
ಅನ್ಯ ಲೇಖಕರ  ಬರಹಗಳು
ಮನಿಯಾರ್ಡರ್ ಕಳಿಸಬೇಕಾದ ವಿಳಾಸ 
ಜಿ.ಎನ್.ಅಶೋಕವರ್ಧನ
ಅಭಯಾದ್ರಿ, ಪಿಂಟೋರವರ ಓಣಿ, ಕರಂಗಲ್ಪಾಡಿ, ಮಂಗಳೂರು ೫೭೫೦೦೩
ದೂ – ೦೮೨೪-೨೯೮೨೩೯೭ ಮಿಂಚಂಚೆ:athreebook@gmail.com

19 Comments

  1. Anonymous

    nimma pustakagalannu post mukahaantara tarisi kolluvudakke avakaasha videye.. hege.. tilisi..

    Reply
  2. Anonymous

    ಮೇಲೆ ಹೇಳಿದಂತೆ ನನ್ನ ವಿ-ಪುಸ್ತಕಗಳು ಉಚಿತ. ಮುದ್ರಿತ ಪುಸ್ತಕಗಳ ಮುದ್ರಣ ಬೆಲೆಯನ್ನು, ತಮ್ಮ ಅಂಚೆ ವಿಳಾಸದೊಡನೆ ಕಳಿಸಿಕೊಟ್ಟವರಿಗೆ ನನ್ನದೇ ವೆಚ್ಚದಲ್ಲಿ, ಆದರೆ ಸಾದಾ ತೆರೆದಂಚೆಯಲ್ಲಿ ಕಳಿಸಿಕೊಡುತ್ತೇನೆ. ನೋಂದಾಯಿತ ಅಂಚೆ ಬೇಕಿದ್ದರೆ ಆ ವೆಚ್ಚವನ್ನು ಖರೀದಿದಾರರೇ ಅಂದಾಜಿನಲ್ಲಿ ಮುಂಗಡ ಕಳಿಸಿಕೊಡಬೇಕು. ಮೇಲೆ ಪಟ್ಟಿ ಮಾಡಿದ ಪುಸ್ತಕಗಳ ಕೆಲವೇ ಪ್ರತಿಗಳು ಉಳಿದಿರುವುದರಿಂದ ಅಪೇಕ್ಷಿತರು ಮುಂದಾಗಿ ನನ್ನನ್ನು ವಿ-ಅಂಚೆಯಲ್ಲಿ ಸಂಪರ್ಕಿಸಿ, ಖಾತ್ರಿ ಪಡಿಸಿಕೊಂಡು ಹಣ ಕಳಿಸಬೇಕು. ನನ್ನ ಮಿಂಚಂಚೆ ವಿಳಾಸ, ಮನೆ ವಿಳಾಸವೆರಡೂ ಮೇಲೆ ಕೊಟ್ಟಿದೆ.

    Reply
  3. Anonymous

    ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಶುಭವಾಗಲಿ. ಒಮ್ಮೆ ಸುಚಿತ್ರದ ಸಾಹಿತ್ಯ ಸಂಜೆ ಕಾರ್ಯಕ್ರಮಕ್ಕೆ ಬನ್ನಿ ನಮಗೂ ಒಂದಿಷ್ಟು ಸಲಹೆ ಸೂಚನೆ ಕೊಡಿ ನಮ್ಮೊಂದಿಗೆ ಇರುತ್ತೀರೆಂದು ಭಾವಿಸುತ್ತೇನೆ

    Reply
  4. Anonymous

    ಬೆಂಗಳೂರಿನಲ್ಲೇ ಇರುವ ನನ್ನ ಮಗ, ಅಭಯಸಿಂಹನ ಮೂಲಕ ನಾನತ್ತ ಬಂದಾಗ jack of many trade, master of none ಎಂಬ ಮಟ್ಟದಲ್ಲಿ ಸಂವಾದ (ನಿಮಗೆ ಬೇಕಾದರೆ) ನಿಶ್ಚಯಿಸಬಹುದು 🙂

    Reply
  5. Anonymous

    Ashoka Vardhana Sir…ನನಗೆ ಆಸಕ್ತಿಯಿದೆ..ನಿಮಗೆ ಸಾಫ಼್ಟ್ ಕಾಪಿಯನ್ನು ಇ ಮೈಲ್ ಮಾಡಲು ಕನ್ನಡ ಯೂನಿಕೋಡ್, ನುಡಿ, ಅಥವಾ PDF/ EPUB ಮತ್ಯಾವ ರೀತಿಯಲ್ಲಿ ಕಳಿಸಬೇಕು ..ವಿವರಿಸುತ್ತೀರಾ?

    Reply
  6. Anonymous

    Galaganatha Kadambari Samputa – Set Of 6 Vols books PDF/ please help.

    Reply
  7. Anonymous

    ಅಜ್ಞಾತ ಮಹನೀಯರೇ ಅತ್ರಿ ಬುಕ್ ಸೆಂಟರ್ ಮುಚ್ಚಿ ನಾಲ್ಕೂವರೆ ವರ್ಷಗಳಾದುವು. ಮತ್ತೆ ಗಳಗನಾಥರ ಮುದ್ರಿತ ಸಂಪುಟಗಳ ಪ್ರಕಾಶನವೂ ನನ್ನದಲ್ಲ.

    Reply
  8. Anonymous

    ಪಕ್ಕಾ ತಲೆಬುಡವಿಲ್ಲದ, ಭಾರತೀಯ, ಸಿನಿಮೀಯ (ಈಚಿನ ಬಾಹುಬಲಿ ಇದ್ದಂತೆ) ಕಥಾನಕಕ್ಕೆಲ್ಲೋ ನೀವು ಎಡವಿದ್ದೀರಿ. ನಾನು ಅಸಹಾಯಕ 🙂 (ಮತ್ತಿಂಥ ಪ್ರಶ್ನೆಗಳಿಗೆ ನನ್ನ ಜಾಲತಾಣ ಪ್ರಚೋದನೆ ನೀಡಿದ್ದರೆ ತೀವ್ರ ವಿಷಾದಿಸುತ್ತೇನೆ)

    Reply
  9. Anonymous

    ನೃತ್ಯಲೋಕ – ಪುಸ್ತಕದ ಪ್ರತಿ ಎಲ್ಲಿ ಲಭ್ಯ ಇದೆ? ದಯವಿಟ್ಟು ತಿಳಿಸಿ. aniven47@rediffmail.com

    Reply
  10. Anonymous

    ಸರ, ದೀವಟಿಗೆ ಪುಸ್ತಕ ಸಿಗುತ್ತದೆಯೇ?

    Reply
  11. Anonymous

    ಹೌದು, ಅದಕ್ಕೇ ಇಲ್ಲಿ ನನ್ನ ಲಭ್ಯ ಪುಸ್ತಕಗಳ ಪಟ್ಟಿಯಲ್ಲಿದೆ. ಅಲ್ಲಿ ಕೊಟ್ಟ್ ಸೂಚನೆಯಂತೆ ಹಣ ಕಳಿಸಿದರೆ ಪ್ರತಿಗಳನ್ನು ಕಳಿಸಬಲ್ಲೆ. ಹೆಚ್ಚಿನ ಸಂಪರ್ಕಕ್ಕೆ ನನ್ನ ಮಿಂಚಂಚೆ (ಇಮೇಲ್) ವಿಳಾಸ – athreebook@gmail.com ಬಳಸಿ

    Reply
  12. Anonymous

    ಹೌದು, ಅದಕ್ಕೇ ಇಲ್ಲಿ ನನ್ನ ಲಭ್ಯ ಪುಸ್ತಕಗಳ ಪಟ್ಟಿಯಲ್ಲಿದೆ. ಅಲ್ಲಿ ಕೊಟ್ಟ್ ಸೂಚನೆಯಂತೆ ಹಣ ಕಳಿಸಿದರೆ ಪ್ರತಿಗಳನ್ನು ಕಳಿಸಬಲ್ಲೆ. ಹೆಚ್ಚಿನ ಸಂಪರ್ಕಕ್ಕೆ ನನ್ನ ಮಿಂಚಂಚೆ (ಇಮೇಲ್) ವಿಳಾಸ – athreebook@gmail.com ಬಳಸಿ

    Reply
  13. Anonymous

    ಇದು ಕೇವಲ ನನ್ನ ಪ್ರಕಟಣೆಗಳಲ್ಲಿ ಉಳಿದ ಪುಸ್ತಕಗಳ ವಿಭಾಗ ಮಾತ್ರ. ನನ್ನಲ್ಲೀಗ ಪುಸ್ತಕದಂಗಡಿ ಇಲ್ಲ.

    Reply
  14. Anonymous

    ಚನ್ನಾಗಿ ಬರೆದಿದ್ದೀರಿ .. ನಿಮಗೆ ಗೊತ್ತೇ ಕನ್ನಡದ ಬ್ಲಾಗ್ ಬೆಳಗಾವಿ ಕುಂದ belagavikunda.inಹಾಗು ಮ್ಯಾಟ್ರಿಮೋನಿ ಸೈಟ್ nodowryindia.com ಕನ್ನಡದ ಸೈಟ್ ಇದೆ ..

    Reply
  15. ರಾಮಚಂದ್ರನ್

    ಪ್ರಿಯ ಅಶೋಕವರ್ಧನ ಅವರಿಗೆ:ನೀವು ಶೋಧಿಸಿರುವ ಕಿಬ್ಬಚ್ಚಲ ಮಂಜಮ್ಮ ಎಂಬುವವರ ಯಕ್ಷಗಾನ ಕೃತಿಯನ್ನು ಅರ್ಧ ಓದಿ ಈಗ ಈ ಕಾಗದವನ್ನು ನಿಮಗೆ ಬರೆಯುತ್ತಿದ್ದೇನೆ. ಪ್ರಾಯಃ ಈ ಪ್ರಸಂಗವೇ ಕನ್ನಡದಲ್ಲಿ ಮೊಟ್ಟ ಮೊದಲಿಗೆ ’ಅನ್ಯೋಕ್ತಿ’ (’ಅಲಿಗರಿ’) ಪ್ರಕಾರದಲ್ಲಿ ಬಂದಿರುವ ಕೃತಿಯೆಂದು ತೋರುತ್ತದೆ. “ಪಿಲ್ಗ್ರಿಮ್ಸ್ ಪ್ರೋಗ್ರೆಸ್” ಕೃತಿಯಂತೆ ಎಲ್ಲಾ ಅಮೂರ್ತ ಗುಣಾವಗುಣಗಳನ್ನು ಪಾತ್ರಗಳಂತೆ ಮಾನುಷೀಕರಣಗೊಳಿಸಿ, ಸತ್ ಹಾಗೂ ಅಸತ್ ಗುಣಗಳ ಯುದ್ಧವನ್ನು ವರ್ಣಿಸಿರುವ ಬಗೆಯೇ ಅದ್ಭುತ, ಆಶ್ಚರ್ಯಕಾರಕ. ಮನೆಯಲ್ಲಿಯೇ ಇರುತ್ತಿದ್ದ ಗೃಹಿಣಿ ಇಂತಹ ಸಾಹಿತ್ಯಕೃತಿಯನ್ನು ರಚಿಸಿದ್ದಾಳೆಂಬುದು ನಮ್ಮೆಲ್ಲರ ’ಕೃತಿಕಾರರೆಂಬ’ ಅಹಂಗೆ ಅಗತ್ಯವಾದ ಪೆಟ್ಟು. ಮತ್ತೊಮ್ಮೆ ಕೃತಿಯನ್ನು ಪೂರಾ ಓದಿ ಬರೆಯುತ್ತೇನೆ. ಅವರ ಕೃತಿಯನ್ನು ಜಾಲತಾಣದಲ್ಲಿ ಸೇರಿಸಿ, ಅನುಕರಣೀಯ ಕಾರ್ಯವನ್ನು ಮಾಡಿದ್ದೀರಿ; ಅಭಿನಂದನೆಗಳು.

    Reply
  16. ಲೆರೊಯ್ ವಿಕ್ಕಿ ಕ್ಯಾಸ್ಟಲಿನೊ

    ಪ್ರಿಯ ಅಶೋಕವರ್ಧನ ಇವರಿಗೆ,ಮಾನ್ಯರೇ, ನನ್ನ ಬಗ್ಗೆ ನಿಮಗೆ ಗೊತ್ತಿಲ್ಲದಿರಬಹುದು. ಆದರೆ ನಿಮ್ಮ ಪರಿಚಯ ಚೆನ್ನಾಗೆ ಇದೆ ನನಗೆ. ಚಿಕ್ಕವನಾಗಿನಿಂದ ಅತ್ರಿ ಬುಕ್ ಸೆಂಟರ್ ನನ್ನ ಅಚ್ಚಿಮೆಚ್ಚಿನ ತಾಣ. ಮನೆಯಲ್ಲಿ ಪಾಕೆಟ್ ಮನಿ ಅಂತ ಕೊಟ್ಟ ಅಲ್ಪ ಸ್ವಲ್ಪ ದುಡ್ಡನ್ನು ಉಳಿಸಿ ಮೂಡಬಿದಿರೆಯಿಂದ ಮಂಗಳೂರಿಗೆ ದೌಡಾಯಿಸುತ್ತಿದ್ದೆ .. ನೀವೂ ಉದಾರವಾಗಿ ಡಿಸ್ಕೌಂಟ್ ಕೊಟ್ಟು ನನ್ನ ಸಾಹಿತ್ಯದ ಹಸಿವು ನೀಗಿಸುತ್ತಿದ್ದೀರಿ . ನಿಮ್ಮ ಕೃಪೆಯಿಂದ ಇವತ್ತು ನನ್ನ ಬಳಿ ಖಾಸಗಿ ಗ್ರಂಥಾಲಯ ಎನ್ನಬಹುದಾದಷ್ಟು ಪುಸ್ತಕಗಳಿವೆ. ನಿಮಗೆ ನಾನು ಯಾವಾಗ್ಲೂ ಚಿರಋಣಿ . ಕರುನಾಡಿನಿಂದ ಒಂದೂವರೆ ಸಾವಿರ ಮೈಲು ದೂರ ಇದ್ದುಕೊಂಡು ಕನ್ನಡ ಸಾಹಿತ್ಯ ಓದಲು ಸಿಗದೇ ಪರಿತಪಿಸುವಾಗ ಆಕಸ್ಮಿಕವಾಗಿ ನಿಮ್ಮ ಬ್ಲಾಗ್ ಹೊಕ್ಕೆ. ನಿಮ್ಮ ಬರಹ , ಚಿತ್ರಗಳನ್ನು ಕಂಡು ನಿಮ್ಮನ್ನು ಮುಖತಃ ನೋಡಿದಷ್ಟು ಖುಷಿಯಾಯಿತು . ಒಂದೇ ಒಂದು ವಿಷಯ ನನ್ನನ್ನು ಕಾಡುವುದೆಂದರೆ , ನಿಮ್ಮ ಅತ್ರಿ ಬುಕ್ ಸೆಂಟರ್ ಈವಾಗ ನವಕರ್ನಾಟಕ ಪ್ರಕಾಶನ ಆಗಿದೆ. ಈ ವರ್ಷ ವಿದೇಶದಿಂದ ಬಂದವನು ಮರುದಿನ ನಿಮ್ಮ ಅಂಗಡಿಗೆ ಹೋಗಿದ್ದೆ. ನಿಮ್ಮ ಕೊರತೆ ಅಲ್ಲಿ ಎದ್ದು ಕಾಣುತ್ತಿದೆ. ದಯವಿಟ್ಟು ಮಗದೊಮ್ಮೆ ಅತ್ರಿ ಬುಕ್ ಸೆಂಟರ್ ತೆರೆಯಿರಿ. ನಮ್ಮಂಥ ಸಾಹಿತ್ಯಾಸಕ್ತರಿಗೆ ಎಶ್ಟೋ ಉಪಯೋಗ ಆಗುತ್ತೆ .ಮರಳಿ ಬನ್ನಿ , ಇಂತಿ ನಿಮ್ಮ ವಿಶ್ವಾಸಿ ಲೆರೊಯ್ ವಿಕ್ಕಿ ಕ್ಯಾಸ್ಟಲಿನೊ ೦೦೯೭೧ ೫೨ ೬೭೫೦೦೫೯೦೦೯೧ ೯೯೦೧೩೨೫೭೭೫

    Reply
  17. ಎಂ ಮಹೇಶ್

    ಸುಮಾರು ವರ್ಷಗಳ ಹಿಂದೆ ಒಂದು ಕಾದಂಬರಿ ಓದಿದೆ ಅದರ ಹೆಸರು ಮತ್ತು ಬರೆದವರ ಹೆಸರು ನೆನಪಿಲ್ಲ. ಆದರೆ ಕಥೆ ನೆನಪಿದೆ . ಪ್ರಾರಂಭದಲ್ಲಿ ಕೃಷ್ಣಾದೇವರಾಯ ರಾಜ್ಯವನ್ನು ವಿಸ್ತಾರಕ್ಕಾಗಿ ಯುದ್ಧ ಮಾಡುತ್ತಿರುತ್ತಾನೆ. ಆದರೆ ಗೆಲ್ಲುವಲ್ಲಿ ವಿಫಲನಾಗುತ್ತಾನೆ. ಆಗ ಅವನ ಸೇನಾಧಿಪತಿ ಬಂದು ತಾನು ಯುದ್ಧಕ್ಕೆ ಹೋಗುವುದಾಗಿ ಹೇಳಿ ಅಪ್ಪಣೆ ಪಡೆದು ಹೊರಡುತ್ತಾನೆ. ಅವನು ತುಂಬಾ ಪ್ರರಾಕ್ರಮಿ ಇನ್ನೇನು ಯುದ್ಧ ಗೆದ್ದು ಬಿಡುತ್ತಾನೆ ಅಂದುಕೊಳ್ಳುವಷ್ಟರಲ್ಲಿ ಅವನದೇ ರಾಜ್ಯದ ಮಂತ್ರಿಯ ಕುತಂತ್ರದಿಂದ ಶತ್ರು ರಾಜನಿಂದ ಹತನಾಗುತ್ತಾನೆ.ಸಾಯುವ ಮುಂಚೆ ಮುಂದಿನ ಜನುಮದಲ್ಲಿ ನಿನನ್ನು ಹುಡುಕಿ ಸಾಯಿಸುತ್ತೇನೆ ಎಂದು ಮಂತ್ರಿಗೆ ಹೇಳಿ ಸಾಯುತ್ತಾನೆ. ಮುಂದಿನ ಕಥೆಯಲ್ಲಿ ಕೋಟ್ಯಾಧಿಪತಿಯೊಬ್ಬ ತನ್ನ ಭವಿಷ್ಯ ವನ್ನು ತಿಳಿಯಲು ಹಿಮಾಲಯ ಪರ್ವತ, ನಾಡಿ ಭವಿಷ್ಯದ ಬಗ್ಗೆ ತಿಳಿಯುತ್ತಾನೆ. ಅಲ್ಲಿ ತನ್ನ ಮರಣದ ಸಮಯವನ್ನು ತಿಳಿದುಕೊಂಡಿರುತ್ತಾನೆ.ಅಲ್ಲಿ ಅವನಿಗೆ ಸಮಯಕ್ಕೆ ಮುಂಚೆಯೇ ಸತ್ತರೆ ಮುಂದಿನ ಜನುಮದಲ್ಲಿ ತನ್ನ ಅಸ್ಥಿಯನ್ನು ಅನುಭವಿಸಬಹುದು ಎಂದು ತಿಳಿಯುತ್ತದೆ. ಅದ್ಕಕಾಗಿ ಸಮಯಕ್ಕೆ ಮುಂಚೆ ಸಾಯಲು ವಿಷ ಕುಡಿಯುತ್ತಾನೆ.ಆದರೆ ಅವನಿಗೆ ಗೊತ್ತಿರುವುದಿಲ್ಲ ಪ್ರಕೃತಿಯ ವಿರುದ್ದ ಹೋಗಲು ಸಾಧ್ಯವಿಲ್ಲ ಎಂದು. ನಂತರ ಮುಂದಿನ ಜನುಮದಲ್ಲಿ ಆ ವ್ಯಕ್ತಿ ಪೋಲಿಸ್ ಅಧಿಕಾರಿಯಾಗಿ ಹುಟ್ಟುತ್ತಾನೆ.ಎರಡು ಜನುಮದ ಹಿಂದೆ ಇದ್ದ ಮಂತ್ರಿ ಕೂಡ ಹುಟ್ಟಿರುತ್ತಾನೆ. ನಂತರ ಮುಂದಿನ ಕತೆ ತನ್ನ ಆಸ್ತಿ ಉಳಿಸುಕೊಳ್ಳಲು ಪೊಲೀಸ್ ಅಧಿಕಾರಿ ಶತ್ರುವಿನ ಜೊತೆ ಹೋರಾಡಿ ಕೊನೆಗೆ ಜಯ ಸಾಧಿಸುತ್ತಾನೆ.ಇದು ಕಾದಂಬರಿ ಕತೆ. ದಯವಿಟ್ಟು ನಿಮಗೆ ಗೊತ್ತಿದ್ದರೆ ಮಾಹಿತಿ ನೀಡಲು ಮನವಿ ಮಾಡುತ್ತೇನೆ. 9632034332

    Reply
  18. ವಾಸುಕಿ, ಬೆಂಗಳೂರು

    ನಮಸ್ತೆ,ಅತ್ರಿಸೂನು ಉವಾಚ ಪುಸ್ತಕ ಲಭ್ಯವಿದೆಯೇ? ಪಡೆದುಕೊಳ್ಳುವ ಬಗೆ ತಿಳಿಸಿಧನ್ಯವಾದಗಳು

    Reply
  19. ಉಮಾಶಂಕರ ಸುಳ್ಯ

    ಸರ್ ನಮಸ್ತೇ ಈ ಕೆಳಗಿನ ಪುಸ್ತಕ ನಿಮ್ಮಲ್ಲಿ ಸಿಗಬಹುದೇ?'ಬಾಣಭಟ್ಟನ ಆತ್ಮಕಥೆ'ಹಿಂದೀ ಮೂಲ: ಹಜಾರಿ ಪ್ರಸಾದ್ ದ್ವಿವೇದಿಕನ್ನಡದಲ್ಲಿ ಅನುವಾದ: ಕೃಷ್ಣಮೂರ್ತಿ (ಇನಿಷಿಯಲ್ ಮರೆತಿದ್ದೇನೆ)ಧನ್ಯವಾದಗಳು

    Reply

Submit a Comment

Your email address will not be published. Required fields are marked *