(ಜಲಪಾತಗಳ ದಾರಿಯಲ್ಲಿ ಭಾಗ ನಾಲ್ಕು)

ಸರಬರ ಊಟ ಮುಗಿಸಿ ಸೊರಬದ ದಾರಿ ಹಿಡಿದೆವು. ನಮ್ಮ ಧಾವಂತ ನೋಡಿ ನಿಧಾನಿಸಲು ಯಾರೇ ಹೇಳಿದರೂ ಉತ್ತರ ಸಿದ್ಧವಿತ್ತು “ಆರು ಭರ್ಚಿಗಳಲ್ಲಿ ಚುಚ್ಚಿದರೂ ನಮ್ಮ ಗುರಿ ಬನವಾಸಿ ದೇಶ.” ಕಿಮೀ ಕಲ್ಲುಗಳನ್ನು ಎಳೆದೆಳೆದು ಹಿಂದಿಕ್ಕಿದಂತೆ ನಾವು ಸಾಗಿದ್ದರೂ ಮಳೆ ನಮ್ಮಿಂದ ಒಂದು ಕೈ ಮುಂದೆ ಇದ್ದದ್ದು ಒಮ್ಮೆಗೇ ಅರಿವಾಯ್ತು. ಬನವಾಸಿ ಪೇಟೆಯಂಚು ತಲಪುತ್ತಿದ್ದಂತೆ ಬಾನ ಬೋಗುಣಿ ಕವುಚಿದಂತಪ್ಪಳಿಸಿತು ಮಳೆ. ಪುಡಾರಿ ಭಾಷಣದಿಂದ ದಿಕ್ಕೆಟ್ಟು ಓಡಿದಂತೆ ನಾವು ದಾರಿ, ಬೈಕ್ ಬಿಟ್ಟು ಸಿಕ್ಕ ಅಂಗಡಿ, ಮನೆ, ಮರಗಳ ಮರೆಗೆ ಓಡಿದೆವು (ಇಲ್ಲವಾದರೆ ನೆನೆವುದೆಮ್ಮ ದೇಹಂ ಬನವಾಸಿ ದೇಶದಿಂ!). ಅರ್ಧ ಗಂಟೆಯಲ್ಲಿ ಆಕಾಶ ತಿಳಿಯಾದ ಮೇಲೆ ನಮ್ಮ ಸೈನ್ಯವನ್ನು ಮರುಸಂಘಟಿಸಿ ಮಹಾಕವಿ ಪಂಪನನ್ನು ಸ್ಮರಿಸುತ್ತಾ ಬನವಾಸಿಯ ಮಧುಕೇಶ್ವರ ದೇವಾಲಯಕ್ಕೆ ಮುತ್ತಿಗೆ ಹಾಕಿದೆವು.

ಕೊಳಕು ಸುರಿಯುವ ಪರಿಸರ, ಪಂಪನ ಕಾಲದ್ದೇ ದೂಳು ಜಿಡ್ಡುಗಳನ್ನು ಜತನವಾಗಿ ಕಾಪಾಡಿಕೊಂಡ ವಿಗ್ರಹಗಳು (ಐತಿಹಾಸಿಕ ಪ್ರಜ್ಞೆ ಅಷ್ಟೂ ಜಾಗೃತವಿರಬಹುದೇ?), ಕಲಾವಂತಿಕೆಯ ಅರಿವೇ ಇಲ್ಲದಂತೆ ಹೇರಿದ ಆಧುನಿಕ ರಚನೆಗಳು, ಒಡ್ಡುಬಡ್ಡಾದ ರಕ್ಷಣಾಕ್ರಮಗಳು, ಕೊಳಕನ್ನು ಎತ್ತಿ ತೋರಲೆಂಬಂತೆ ಭರ್ಜರಿ ಬೆಳಕಿನ ವ್ಯವಸ್ಥೆ (ಭರ್ಜರಿ ಕಂತ್ರಾಟೇ ಇರಬೇಕು!), ಎಲ್ಲಕ್ಕೂ ಪೂರಕವಾಗಿ ಪರಂಪರೆಯ ಗಂಧವಿಲ್ಲದ ಅರ್ಚಕರು ಮತ್ತು ಐತಿಹಾಸಿಕ ಪ್ರಜ್ಞೆಯಿಲ್ಲದ ಭಕ್ತರು, ಬಹುನಿರೀಕ್ಷೆಯೊಡನೆ ಓಡಿ ಬಂದ ನಮ್ಮನ್ನು ಗೇಲಿ ಮಾಡಿದವು. ಬನವಾಸಿಯ ಕೇಂದ್ರ ಆಕರ್ಷಣೆಯೇ ಹೀಗಾದಮೇಲೆ ಇನ್ನೆಲ್ಲೂ ಸಂತೋಷ ಹುಡುಕುವ ಪ್ರಯತ್ನ ಮಾಡದೆ ಶಿರಸಿಗೆ ಮರಳಿದೆವು. [ಅನಂತರದ ದಿನಗಳಲ್ಲಿ ರಾಜ್ಯ ಸರ್ಕಾರ ‘ಪಂಪ ಪ್ರಶಸ್ತಿ,’ ಮತ್ತದನ್ನು ಕೊಡಮಾಡುವ ಅದ್ದೂರೀ ಸಮಾರಂಭಗಳನ್ನೆಲ್ಲಾ ಈ ವಠಾರಕ್ಕೇ ಹೇರಿದ್ದು ಕೇಳಿದ ಮೇಲಂತೂ ಇನ್ನು ಅತ್ತ ತಲೆ ಹಾಕಿ ಮಲಗಲೂ ಬಾರದು ಎಂದು ನಿರ್ಧರಿಸಿದ್ದೇನೆ.]

ಬೈಕೊಂದರ ಚಕ್ರಕ್ಕೆ ಮೊಳೆ, ಮತ್ತೆ ವಕ್ಕರಿಸಿತು ಮಳೆ! ಸಹಜವಾಗಿ ಕತ್ತಲ ಪತ್ತಲಕ್ಕೆ ಸಂಜೆಯ ಸೆರಗು ಬಿಗಿಗಂಟಾಗಿ ಸೇರಿತು. ಅಂದಿನ ನಮ್ಮ ರಾತ್ರಿಯ ಠಿಕಾಣಿ ಸುಮಾರು ಇಪ್ಪತ್ತು ಕಿಮೀ ದೂರದ ವಾನಳ್ಳಿಯ ಗೆಳೆಯ ನಿರಂಜನರ ಮನೆಯಲ್ಲೆಂದು ನಿಗದಿಯಾಗಿತ್ತು. ಮೊದಲೇ ಆ ದಾರಿಗಳು ನಮಗೆ ಹೊಸತು. (ನೆನಪಿರಲಿ, ಅದು ಚರವಾಣಿ ಇಲ್ಲದ ಕಾಲ!) ಇನ್ನು ಕತ್ತಲು ಬೇರೆ ಸೇರಿಕೊಂಡು ಗೊಂದಲ, ನಿಧಾನ ಹೆಚ್ಚಿ ಆತಿಥೇಯರಿಗೆ ಹೊರೆಯಾಗಬಾರದೆಂಬ ಎಚ್ಚರದಲ್ಲಿ ಐದು ಬೈಕುಗಳನ್ನು ಸೂಕ್ತ ಮಾರ್ಗದರ್ಶನದೊಡನೆ ಮುಂದಾಗಿ ಕಳಿಸಿಬಿಟ್ಟೆ. ರಿಪೇರಿಯವನ ಜೊತೆಗೆ ನಮ್ಮ ಜೋಡಿಯೂ ನಿಂತುಕೊಂಡಿತು. ಏಳೂವರೆಗೆ ರಿಪೇರಿ ಮುಗಿಸಿ ಗೂಡಂಗಡಿಯವರ ಸಹಾಯದಲ್ಲಿ ಹುಲೇಕಲ್ಲು ದಾರಿಯೇನೋ ಸರಿಯಾಗಿಯೇ ಹಿಡಿದೆವು. ಆದರೆ ಮೈಲು ಕಲ್ಲು, ಬೋರ್ಡು, ಜನ ಸಂಚಾರಗಳಿಂದ ದೂರವಾದ ಆ ಬಯಲದಾರಿ ನಮಗೊಂದು ವಿಶಿಷ್ಟ ಅನುಭವವನ್ನು ನೀಡಿತು. ಹಗಲಿನ ಬಿಸಿ ಹೀರಿದ್ದ ಡಾಮರು ದಾರಿ ಸಂಜೆಯ ತುಂತುರು ಮಳೆಯನ್ನು ನಿಶ್ಚಲ ಹಬೆಯಾಗಿಸಿ ಹೊದ್ದುಕೊಂಡಿತ್ತು. ನಮ್ಮೂರಿನ ದಾರಿಗಳಲ್ಲಿ ಹೊಗೆಯಂತೇ ಏಳುವುದು, ಮುಂಜಾನೆಯ ಮಂಜಿನಂತೆ ಸರ್ವವ್ಯಾಪೀಯಾಗಿರುವುದೆಲ್ಲಾ ನಾನು ಕಂಡವನೇ. ಇದು ಹಾಗಲ್ಲ, ಪಕ್ಕದ ಹುಲ್ಲು ಪೊದರುಗಳನ್ನೇ ದಂಡೆಯನ್ನಾಗಿಸಿಕೊಂಡು ನೆಲದಿಂದ ಎರಡೋ ಮೂರೋ ಅಡಿ ಎತ್ತರ ಮೀರದೆ, ದಾರಿಯುದ್ದಕ್ಕೂ ಚಾಚಿಕೊಂಡ ನಿಶ್ಚಲ, ದಟ್ಟ ಬಿಳಿಯ ಹಾಸು. ಬೈಕಿನ ಬೆಳಕೋಲು ನಮಗೆ ದಾರಿಯ ತಿರುವು, ಏರಿಳಿತಗಳ ಅಂದಾಜು ಮಾತ್ರ ಕೊಡುತ್ತಿತ್ತು. ಆದರೆ ಪಿ.ಡಬ್ಲ್ಯು.ಡಿ (ಪಕೋಡಾ ವಡಾ ದೋಸೆ) ದಕ್ಷತೆಯ ಕುರುಹಾದ ಹೊಂಡ, ವೇಗ ನಿಯಂತ್ರಕ ಡುಬ್ಬಗಳನ್ನು ಖಂಡಿತಾ ತೋರಿಸದಂತಿತ್ತು. (ನಗರವಾಗಿದ್ದರೆ ಒಂದಡಿ ಕುಸಿದ ಅಥವಾ ಮುಚ್ಚಳವಿಲ್ಲದ ಮ್ಯಾನ್ ಹೋಲ್ ಸೇರಿಕೊಳ್ಳುತ್ತಿತು. ನಮ್ಮ ಬಿಸಿಲೆ ದಾರಿಯ ಕಿರು ಸೇತುವೆಗಳಲ್ಲಿ ಆನೆಗಳನ್ನು ಹಿಡಿಯಲು ಹೊಂಚಿದಂತೆ ಒಂದೊಂದು ಚಪ್ಪಡಿಯೇ ಕಳಚಿರುವುದೂ ಉಂಟು! ಬಂಟವಾಳ ಜೋಡುಮಾರ್ಗದ ರೈಲ್ವೇ ಮೇಲ್ಸೇತುವೆಯಲ್ಲಿ ರೈಲಿನ ‘ವಿಶೇಷ ವೀಕ್ಷಣೆ’ಗಾಗಿ ನೆಲದಲ್ಲೇ ಕಿಂಡಿಗಳನ್ನು ‘ನಿರ್ಮಿಸಿ’ದ್ದನ್ನೂ ಹೇಗೆ ಮರೆಯಲಿ?) ಬಲು ಎಚ್ಚರದಿಂದ ಎನ್ನುವುದಕ್ಕಿಂತ ಕೆಲವೆಡೆಗಳಲ್ಲಿ ಪೂರ್ಣ ನಿಂತು, ಮಿನಿಟೊಂದು ಯೋಚಿಸಿಯೇ ಮುಂದುವರಿಯುವಂತಿತ್ತು. ಹುಲೇಕಲ್ಲಿನಿಂದ ಮುಂದೆ ಜಲ್ಲಿ ಹಾಸಿನ ಮಣ್ಣು ದಾರಿಯಲ್ಲಿ ಹಬೆಯ ಸಮಸ್ಯೆ ಬರಲಿಲ್ಲವಾದರೂ ಅದರದ್ದೇ ಮಿತಿ ಸೇರಿ, ನಂಬಿದರೆ ನಂಬಿ ಇಪ್ಪತ್ತು ಕಿಮೀ ಕ್ರಮಿಸಲು ನಾವು ಒಂದು ಗಂಟೆ ಕಳೆದಿದ್ದೆವು!

ನಿರಂಜನ ವಾನಳ್ಳಿ ವೃತ್ತಿಯಲ್ಲಿ ಪತ್ರಕರ್ತ, ಹವ್ಯಾಸದಲ್ಲಿ ಕಾಲೇಜು ಅಧ್ಯಾಪಕ ಎನ್ನುವಷ್ಟರ ಮಟ್ಟಿಗೆ ಸದಾ ಒಂದಲ್ಲೊಂದು ಪತ್ರಿಕೆ, ನಿಯತಕಾಲಿಕಗಳಲ್ಲಿ ವೈವಿಧ್ಯಮಯ ಬರಹಗಳನ್ನು ಪ್ರಕಟಿಸುತ್ತಿದ್ದ ಕಾಲವದು. ಲೆಕ್ಕಕ್ಕಿವರು ಯಾವುದೋ ಒಂದು ಹಂತದಲ್ಲಿ ನನ್ನ ತಮ್ಮನ ಹೆಂಡತಿ – ಜಯಶ್ರೀಯ ಸಹಪಾಠಿ ಎಂದೂ ಉಜಿರೆಯ ಕಾಲೇಜಿನ ಅಧ್ಯಾಪಕನಾದ ಕಾಲಕ್ಕೆ ಪುಸ್ತಕ ಪ್ರೇಮಿಯೆಂದೇ ನನಗೆ ಪರಿಚಯಕ್ಕೆ ಬಂದಿದ್ದರು. ಪ್ರವಾಸೋದ್ಯಮದ ಹಾನಿಕಾರಕ ಅಂಶಗಳು ಅದರಲ್ಲೂ ಮುಖ್ಯವಾಗಿ ಸಮಾಜದ್ರೋಹದ ಕುರಿತು ಬೆಂಗಳೂರಿನಲ್ಲಿ ಮೂರು ದಿನಗಳ ಕಮ್ಮಟವೊಂದು (ಆಯೋಜನೆ, ಈಕ್ವೇಶನ್ಸ್ ಎಂಬ ಸ್ವಯಂ ಸೇವಾ ಸಂಘಟನೆ) ನಡೆದಾಗಂತೂ ನನ್ನ ಆತ್ಮೀಯ ಬಳಗಕ್ಕೇ ಸೇರಿಹೋಗಿದ್ದರು. ನಾನು ಉತ್ತರಕನ್ನಡದ ಜಲಪಾತಗಳ ಅಂದಾಜು ಹಾಕುವಾಗಲೇ ಇವರನ್ನು ಕೇವಲ ಮಾಹಿತಿಗಾಗಿ ಸಂಪರ್ಕಿಸಿದ್ದೆ. ಆದರೆ ಈ ಪುಣ್ಯಾತ್ಮ ನಾವೆಷ್ಟು ಜನ ಬಂದರೂ ತನ್ನ ಮನೆಯಲ್ಲೇ (ಕನಿಷ್ಠ) ಒಂದು ರಾತ್ರಿಗೆ ಉಳಿಸಿಕೊಂಡು ಆಸುಪಾಸಿನ ಜಲಪಾತಗಳ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿ ನನ್ನನ್ನು ದಾಕ್ಷಿಣ್ಯಕ್ಕೆ ಸಿಕ್ಕಿಸಿಹಾಕಿದ್ದರು. ಮತ್ತೆ ಏನೋ ಅರಮನೆಯಂಥ ಮನೆಯಿರಬೇಕು, ಕೈಗೆ ಕಾಲಿಗೆ ಜನಗಳಿರಬಹುದು ಎಂದು ಕೊಂಡು ‘ಅಪರಾಧಿ ಪ್ರಜ್ಞೆಯನ್ನು’ ಕಡಿಮೆ ಮಾಡಿಕೊಂಡು ಆ ರಾತ್ರಿ ಅವರ ಮನೆಗೆ ನಾವು ಹದಿನಾಲ್ಕು ಮಂದಿ ದಾಳಿಯಿಟ್ಟಾಗ ತಿಳಿಯಿತು, ಈ ಪಾಪಾತ್ಮ ತನ್ನ ತಂದೆತಾಯಿಯರನ್ನು ಭಾರೀ ಸಂಕಷ್ಟಕ್ಕೆ ಒಡ್ಡಿಬಿಟ್ಟಿದ್ದರು!

ಡಾ| ಶಿವರಾಮ ಹೆಗಡೆ – ನಿರಂಜನರ ತಂದೆ, ಆ ಹಳ್ಳಿಮೂಲೆಯ ಧನ್ವಂತರಿ. ಹಾಗೆಂದು ಭವ್ಯ ಚಿಕಿತ್ಸಾಲಯ, ಸಾಲುಗಟ್ಟಿದ ರೋಗಿಗಳನ್ನು ಕಲ್ಪಿಸಿಕೊಳ್ಳಬೇಡಿ. ‘ಬರಿಗಾಲು ವೈದ್ಯ’ ಎಂಬ ಕಲ್ಪನೆ ಮೂರ್ತಿವೆತ್ತಂತೆ ಹಲವು ದಶಕಗಳಿಂದ (೧೯೯೧ರ ಮಾತು. ಸದ್ಯ ನಿವೃತ್ತರು.) ವಾನಳ್ಳಿಯ ಆಸುಪಾಸೆಲ್ಲಾ ನಡೆದು, (ಮಳೆಗಾಲದಲ್ಲಿ ಅನಿವಾರ್ಯವಾದಲ್ಲಿ ಈಜಿ,) ದಾರಿಕೇರಿ ಮೂಡಿದಂತೆಲ್ಲಾ ಗಾಡಿ ಸೈಕಲ್ಲು, ಸ್ವಂತ ಮೋಟಾರ್ ಸೈಕಲ್ಲಿನಲ್ಲೂ ಹೋಗಿ ರೋಗಿಗಳ ಸಂಕಟಕ್ಕೆ ಒದಗಿದವರು. ಹತ್ತು ದಿಕ್ಕಿನ ನಗಣ್ಯ ಸಂಗತಿಗಳಲ್ಲೂ ಸುದ್ದಿಯರಸುವ ನಿರಂಜನ ವಾನಳ್ಳಿಗೆ ಸ್ವಂತ ಅಪ್ಪನೆಂದಲ್ಲದೇ ಇದ್ದಿದ್ದರೆ ಮೊದಲ ಪ್ರಾಶಸ್ತ್ಯದಲ್ಲಿ ಸುದ್ದಿಯಾಗಲೇ ಬೇಕಾದ ಮಹಾ ಸಂಪತ್ತು ಇವರು. ಮತ್ತೆ ನಿರಂಜನರ ತಾಯಿ – ಲಕ್ಷ್ಮಿ ಹೆಗಡೆ, ಹಳ್ಳಿ ಮೂಲೆಯಲ್ಲಿದ್ದೂ ಗಮಾರಿಕೆಗೆ ಪಕ್ಕಾಗದ ಚಟುವಟಿಕೆಯ ಹೆಂಗಸು. ಗೃಹ ಕೃತ್ಯ, ಕೈತೋಟ ಇದ್ದದ್ದೇ. ಪುಟ್ಟ ತೋಟ ಹಾಗೂ ಹಳ್ಳಿಯ ಆಂಶಕಾಲಿಕ ಅಂಚೆ ಮಾಸ್ತರ‍್ಗಿರಿ ಇವರ ಹೆಚ್ಚುಗಾರಿಕೆ. ಈ ದಂಪತಿ ತಮ್ಮ ಸಹಜ ಮನುಷ್ಯ ಪ್ರೀತಿಗೆ ಮಗನ ಮಿತ್ರರೆಂದು ಅಚ್ಚೇರು ಸಕ್ಕರೆ ಹೆಚ್ಚೇ ಬೆರೆಸಿ ನಮ್ಮನ್ನು ಸ್ವಾಗತಿಸಿದರು, ಉಪಚರಿಸಿದರು.

ಹಳೆಮನೆ ಬಿಚ್ಚಿಯಾಗಿತ್ತು. ಹೊಸಮನೆ ಅರೆಬರೆ ಕೆಲಸ ನಡೆದೇ ಇದ್ದಂತೆ ಇವರು ವಾಸ್ತವ್ಯ ಹೂಡಿಯಾಗಿತ್ತು. ಮಾಮೂಲಿನಂತೆ ಇಬ್ಬರೇ ಹೆಚ್ಚೆಂದರೆ (ನಿರಂಜನ ಮತ್ತವರ ಬೆಂಗಳೂರಿನಲ್ಲಿ ಕಲಿಯುತ್ತಿದ್ದ ತಮ್ಮ, ಅಂದು ಅಲ್ಲಿರಲಿಲ್ಲ) ನಾಲ್ವರನ್ನು ಸುಧಾರಿಸಿಕೊಳ್ಳಬಹುದಾದ ಆ (ಅ)ವ್ಯವಸ್ಥೆಯಲ್ಲಿ ನಮ್ಮ ಹದಿನಾಲ್ಕೂ ಮಂದಿಗೆ ಬಿಸಿನೀರ ಸ್ನಾನ, ಸುಗ್ರಾಸ ಭೋಜನ, ಮಲಗುವ ಜಾಗ ಮತ್ತು ಸಾಹಿತ್ಯವನ್ನು, ಬೆಳಗ್ಗಿನ ತಿಂಡಿ ತೀರ್ಥವನ್ನೂ ಏನೂ ಹೆಚ್ಚುಗಾರಿಕೆ ಮೆರೆಸದೇ ಕೊರತೆಯೂ ಆಗದಂತೆ ಒದಗಿಸಿದ ಆ ಕುಟುಂಬದ ಪ್ರೀತಿ (ನೆನಪಿಡಿ, ಅಡಿಗೆಗೆ, ಮನೆ ಕೆಲಸಕ್ಕೆ ಅವರಲ್ಲಿ ಪ್ರತ್ಯೇಕ ಜನವಿರಲಿಲ್ಲ) ಪಂಚತಾರಾ ಹೋಟೆಲ್ ಸಂಸ್ಕೃತಿಗೆ ಮಾರುಹೋಗುವ ನಮ್ಮಲ್ಲಿನ ಬಹುತೇಕ ನಾಗರಿಕರಿಗೆ ಬಿಡಿಸಲಾಗದ ಒಗಟೇ ಆಗಿಯೋಯ್ತು! (ಅವರ ಅಪ್ಪಿ ಮಿಡಿಯ ರುಚಿ ಹತ್ತಿದ ಕೆಲವರು ಅದನ್ನು ಸಾಂಬಾರು ಪಲ್ಯದಂತೆ ಊಟದೊಡನೆ ಮೇದದ್ದಲ್ಲದೇ ಬೆಳಗ್ಗಿನ ತಿಂಡಿಗೂ ಹಾಕಿಸಿಕೊಂಡು ಅವರ ವರ್ಷಕ್ಕಿದ್ದ ದಾಸ್ತಾನೆಲ್ಲವನ್ನೂ ಖಾಲಿ ಮಾಡಿದ್ದು ಶುದ್ಧ ನಾಚಿಕೆಗೇಡೇ ಆದರೂ ಅವರು ಸಮ್ಮಾನವೆಂದೇ ಸ್ವೀಕರಿಸಿದ್ದು ನಾನಂತೂ ಮರೆಯಲಾರೆ)

ಮೊದಲೇ ನಿಶ್ಚಯವಾಗಿದ್ದಂತೆ ನಮ್ಮ ಮೂರನೇ ದಿನದ ಪೂರ್ವಾಹ್ನದ ಟೂರ್ ಮ್ಯಾನೇಜರ್ ನಿರಂಜನವಾನಳ್ಳಿ. ಇನ್ನೂ ಹತ್ತರ ಹುಡುಗನಾಗಿದ್ದ ಅಭಯನನ್ನು ನನ್ನ ಬೈಕಿನಲ್ಲೇ ಹೊಂದಿಸಿಕೊಂಡು ನಿರಂಜನರನ್ನು ಕೃಷ್ಣಮೋಹನ್ ಬೆನ್ನಿಗೇರಿಸಿದ್ದಾಯ್ತು. ರಾತ್ರಿ ಬಂದ ಮಣ್ಣು ದಾರಿಯದ್ದೇ ಮುಂದುವರಿಕೆಯಲ್ಲಿ ಸುಮಾರು ಹತ್ತು ಕಿಮೀ ಸಾಗಿದೆವು. ವಾನಳ್ಳಿಯವರೆಗಿದ್ದ ಜಲ್ಲಿ ಹಾಸೂ ಇಲ್ಲದ ಅಗಲಕ್ಕಿಂತ ಉದ್ದ ಹೆಚ್ಚಿದ್ದ ಕಾಡು ತೆರವಾದ ಜಾಗವನ್ನು ದಾರಿಯೆಂದು ನಂಬುವ ಸ್ಥಿತಿ. ಅದರಲ್ಲೂ ಎಲ್ಲೂ ಅಲ್ಲದೊಂದೆಡೆ, ಅಂದರೆ ತೋರಿಕೆಗೊಂದು ಕೈಕಂಬ ವಿಚಾರಣೆಗೊಂದು ನರಹುಳವೂ ಇಲ್ಲದ ಜಾಗದಲ್ಲಿ ಎಡ ಕಾಡಿಗೇ ನುಗ್ಗಿಸಿದರು ನಿರಂಜನ್. ಎಷ್ಟೋ ದಶಕಗಳ ಹಿಂದೆ ಕಾಡು ಹೊರುವ ಲಾರಿ ಅಲ್ಲಿ ನುಗ್ಗಿದ್ದ ಲಕ್ಷಣವಿತ್ತು. ತೀವ್ರ ಇಳುಕಲಿನ ಸಪುರ ಜಾಡು ಬಿಟ್ಟು ಉಳಿದೆಲ್ಲವನ್ನು ಮರಗಿಡ ಬಳ್ಳಿ ನಾಟಿ ನೇಯ್ಗೆಯಲ್ಲಿ ಮುಚ್ಚಿತ್ತು. ಬಹುಶಃ ಈ ಮುಚ್ಚಿಗೆಯೇ ನಮಗೆ ಕೊಳ್ಳದಾಳದ ಭಯವಿಲ್ಲದೆ ಬೈಕ್ ನುಗ್ಗಿಸಲು ಪ್ರೇರಣೆ ಕೊಟ್ಟಿರಬೇಕು. ಆದರೆ ಸುಮಾರು ಒಂದು ಕಿಮೀಯೊಳಗೆ ಫಸ್ಟ್ ಗೇರ್, ಎರಡೂ ಬ್ರೇಕ್ ಹಿಡಿತ ಮೀರಿ ತರಗೆಲೆ ಮೊತ್ತ ನೂಕಿಕೊಂಡೂ ಬೈಕ್ ಇಳಿಯುತ್ತಿದೆ ಎಂದನ್ನಿಸತೊಡಗಿದಲ್ಲಿ ಬೈಕ್ ಇಳಿದೆವು. ನೆಪಕ್ಕೊಂದು ಭಾರೀ ಮರ ಅಡ್ಡಬಿದ್ದಿತ್ತು, ಅಷ್ಟೇನೂ ನೀರಿಲ್ಲದ ಝರಿಯನ್ನೂ ದಾಟುವುದಿತ್ತು. ಹಿಂದಿನ ಮೆತ್ತನೆ ಸೀಟಿನಲ್ಲಿ ಕುಳಿತು, ಸವಾರರ ಕೌಶಲದಲ್ಲೇ ಬಚಾವಾದರೂ ತಮ್ಮ ಬಿಟ್ಟಿ ಸಲಹೆಗಳ ಪಟ್ಟು ಬಿಡದೇ ವಾದಿಸುವ ಸಹವಾರರಿಗೀಗ ಸ್ವಂತ ತಾಕತ್ತನ್ನು ಒರೆಗೆ ಹಚ್ಚುವ ಸ್ಥಿತಿ. ಕಾಲಿನ ಗ್ರಿಪ್ಪು, ಮೀನಖಂಡದ ಬ್ರೇಕು, ಅಸಡ್ಡಾಳ ದೇಹದ ಬ್ಯಾಲೆನ್ಸೂ ಪರೀಕ್ಷೆಗೊಳಗಾದವು. ಗಿಡಬಳ್ಳಿ ಹಿಡಿದು ನೇತದ್ದು, ಅಲ್ಲಿ ಜಾರಿದ್ದು, ಇಲ್ಲಿ ಕುಕ್ಕರಿಸಿದ್ದು ಕಥೆಯೋ ಕಥೆ.

ಬೈಕ್ ನಿಲ್ಲಿಸಿದಾಗ ಎಲ್ಲೋ ಕಾಡಂಚಿನ ಮಳೆಯಂತೊಂದು ಸದ್ದು ಕೇಳತೊಡಗಿತ್ತು. ನಾವು ಕಣಿವೆಯ ತಳ ಸೇರುತ್ತಿದ್ದಂತೆ ಅದೇ ಕಿವಿ ಬಿಡಲಾಗದ ಮೊರೆತವಾಗಿ, ಎವೆ ಮುಚ್ಚಲಾಗದ ಅಚ್ಚರಿಯಾಗಿ ಪ್ರತ್ಯಕ್ಷವಾಯ್ತು – ಶಿವಗಂಗೆ ತಡಸಲು. ಪ್ರಕೃತಿ ಬಂಡೆ ಗುಂಡುಗಳನ್ನು ಕಣಿವೆಯಲ್ಲಿ ಗಿಡಿದು, ಶಾಲ್ಮಲಾ ನದಿಯನ್ನು ಹಿಡಿದಿಡಲು ಇಲ್ಲಿ ಸಂಚು ಮಾಡಿದಂತಿತ್ತು. ತಡೆಯಲಾಗದ ದೇವಗಂಗೆಯಂತೆ ಈಕೆ ದಕ್ಷಿಣೋತ್ತರವಾಗಿ ಸುಮಾರು ನೂರು ಮೀಟರ್ ಆಳದ ಕೊಳ್ಳಕ್ಕೆ ಧುಮುಕಿದ್ದಾಳೆ. ಶಿವಜಟಾಜೂಟದಂತೆ ಅಲ್ಲಿ ಮತ್ತೆ ಬಂಡೆಗಳ ಮಸಲತ್ತು. ಅಡ್ಡಗಟ್ಟಿದ ಕಗ್ಗಲ್ಲ ಮೂಲೆಯಿಂದ ಪುಟ ನೆಗೆದು, ಪಶ್ಚಿಮಕ್ಕೆ ಹೊರಳಿ ಮತ್ತೆ ಸುಮಾರು ಅರುವತ್ತು ಮೀಟರ್ ಆಳದ ಹಾಸು ಬಂಡೆಯ ಮೇಲೂ ಈಕೆಯ ಸೊಕ್ಕು ಮೆರೆದಿದೆ. ಕಣಿವೆಯೆಲ್ಲಾ ಸೀರ್ಪನಿ ಮುಸುಕಿ, ಬಿಸಿಲ ಮಾಯಾದಂಡದಲ್ಲಿ ಅಸಂಖ್ಯ ಕಾಮನ ಬಿಲ್ಲುಗಳಾದ ದೃಶ್ಯ ರುದ್ರ ಮನೋಹರ, ಅವರ್ಣನೀಯ. ನಾವಿಳಿದು ನಿಂತ ಹಾಸು ಬಂಡೆಯ ಕೆಳ ಅಂಚಿನಲ್ಲಿ ದಪ್ಪ ಎಣ್ಣೆ ಹಾಸಿನಂತೆ ಮುಂದುವರಿಯುವ ಆ ಮಾಯಾವಿನಿ ಕಟ್ಟೊಡೆದ ಸಮಾಧಾನದಲ್ಲಿ ಮೌನಿ. ಮತ್ತೂ ಆಚೆ, ಪಾತ್ರೆ ಪೂರ್ತಿ ಮುಕ್ತವಾದಲ್ಲಿ ಈಕೆ ಸ್ನೇಹಶೀಲೆ. ಪುಟ್ಟಪುಟ್ಟ ಬಂಡೆಗಳ ಸುತ್ತ ಆಡುತ್ತಾ ಬಾಗಿದ ಬಳ್ಳಿಯನ್ನು ಜೀಕುತ್ತಾ ಉದುರೆಲೆ ಕಡ್ಡಿಯನ್ನು ರಿಂಗಣ ಕುಣಿಸಿ, ಕೆಲೆದು ಸಾಗಿದ್ದಾಳೆ, ಸಾಗುತ್ತಲೇ ಇದ್ದಾಳೆ – ನಿನ್ನೆಯಿಂದ ನಾಳೆಗೆ.

ಇಳಿಯುವಾಗ ಅಂಡೂರಿದವರು ಮರಳುವಾಗ ನಾಲ್ಗಾಲರು! (ಮತ್ತೆ ಡಾರ್ವಿನ್ ಹೇಳಿಲ್ಲವೇ- ಹರಿದಾಡುವ ಜೀವಿಗಳಿಂದ ಓತಿಗಳು ಬಂತೂಂತ!) ಸಡಿಲ ಮಣ್ಣು, ತರಗೆಲೆ ರಾಶಿಗಳ ನಡುವೆ ದೃಢ ಹೆಜ್ಜೆಗೆ ಪರದಾಟ, ಕೈಯಾಧಾರಕ್ಕೆ ಹುಡುಕಾಟ. ಗಟ್ಟಿಯೆಂದು ಹಿಡಿದ ಬಂಡೆ ಮೈಮೇಲೇ ಜಾರುವಾಗ ತಪ್ಪಿಸಿಕೊಳ್ಳುತ್ತಾ ಕೋಲೆಂದು ಊರಿದ್ದು ಕುಂಬು ಪುಡಿಯಾದಾಗ ಮುಗ್ಗರಿಸುತ್ತಾ ಬಳ್ಳಿಯಾಧಾರ ಎಂದು ಬಾಚಿದ್ದು ಮುಳ್ಳ ಸರಿಗೆಯಾದಾಗ ಸಾವರಿಸಿಕೊಳ್ಳುತ್ತಾ ಹೆಜ್ಜೆ ಕಿತ್ತು ಹೆಜ್ಜೆ ಪೇರಿಸುತ್ತಾ ಬಂದು ಬೈಕ್ ಮುಟ್ಟಿದರೂ ಪೂರ್ತಿ ಮುಗಿದಂತಲ್ಲ. ಸವಾರ ಇಂಜಿನ್ ಚಾಲೂ ಮಾಡಿ, ಶಕ್ತಿಯೂಡಿದರೂ ನೆಲ ಕಚ್ಚಿಕೊಳ್ಳದು ಹಿಂದಿನ ಚಕ್ರ. ಬೇರಗಟ್ಟೆ, ಹುಡಿಮಣ್ಣಿನ ಅಡ್ಡ ಸೆಳೆತಗಳಲ್ಲಿ ನೇರ ಹಿಡಿದಿಡಲಾಗದ ಹ್ಯಾಂಡಲ್. ಉಂಚಳ್ಳಿಯಲ್ಲಿ ಪ್ರಾಥಮಿಕ ಪಾಠ ಪಡೆದಿದ್ದ ಸಹವಾರರೆಲ್ಲ ಇಲ್ಲಿ ಪರಿಣತ ಬೈಕ್ ನೂಕರು! ಸಾಲದೆನ್ನುವಂತೆ ಕೆಲವು ಬಾರಿ ಇಬ್ಬಿಬ್ಬರು ಅಕ್ಕಪಕ್ಕಕ್ಕೆ ನಿಂತು ಬೈಕಿನ ಕ್ರ್ಯಾಶ್ ಗಾರ್ಡ್ ಎಳೆದು ಪಾರುಗಾಣಿಸಿದ್ದೂ ಆಗಿ ಮೇಲೆ ಬರುವಾಗ ನಮ್ಮ ಲೋಕ ದೃಷ್ಟಿಯೇ ಬದಲಿತ್ತು! ‘ಎಲ್ಲೂ ಅಲ್ಲದೊಂದೆಡೆ’ ಈಗ ನಮಗೆ ‘ಎಂಥ ಸುಂದರ ಮೈದಾನ!!’

“ರುದ್ರೆಯನ್ನು ನೋಡಿದ್ದಾಯ್ತು, ಇನ್ನು ಸರದಿ ಶಿವೆಯದ್ದು” ಎಂದು ದಾರಿ ತೋರಿದರು ನಿರಂಜನ್. ಮತ್ತೆ ಹಳೆ ದಾರಿಯದೇ ಮುಂದುವರಿಕೆ. ದಾರಿ ಯುಪಟೋರಿಯಂ ಕೋಟೆಯಲ್ಲಿ ಕಳೆದೇ ಹೋಯ್ತೋ ಎನ್ನುವ ಹಂತದಲ್ಲಿ ಮತ್ತದೇ ಶಾಲ್ಮಲೆ ಪ್ರತ್ಯಕ್ಷಳಾದಳು. ಶಿವಗಂಗೆಯಿಂದ ತುಂಬಾ ಮೇಲಿರುವ ಈ ಪಾತ್ರೆಯಲ್ಲಿ ಈಕೆ ಮಂದಗಾಮಿನಿ. ವಿಸ್ತಾರ ಬಂಡೆ ಹಾಸಿನಲ್ಲಿ ತನ್ನೊಂದು ಕಲಾ ಜಾತ್ರೆ ನಡೆಸಿದ್ದಾಳೆ. ಯುಗಾಂತರಗಳಿಂದ ಕಲ್ಲನ್ನು ವಿವಿಧ ಲಹರಿಗಳಲ್ಲಿ ಮತ್ತು ಅಸಂಗತ ಭಾವಾಭಿವ್ಯಕ್ತಿಗಳಲ್ಲಿ ಕೊರೆದು ಪ್ರದರ್ಶನಕ್ಕಿಟ್ಟದ್ದಲ್ಲದೆ ಪ್ರತಿನಿತ್ಯವೂ ಪರಿಷ್ಕರಿಸುತ್ತಾ ಸಾಗಿದ್ದಾಳೆ. ವರ್ಣ ಸಂಯೋಜನೆಗಳು, ಬೆಳಕು ನೆರಳಿನ ಹಿಕ್ಮತ್ತುಗಳು, ಎಲೆಹೂಹಣ್ಣುಗಳ ಋತುಮಾನದ ಅಲಂಕಾರಗಳು, ನೀರ ಮೆಲುಗಾನ ಇತ್ಯಾದಿ ಸದಾ ಉಚಿತ. ಚಿಕ್ಕಮಗಳೂರ ಬಳಿಯ ಕುದುರೆಗುಂಡಿ, ಮೂಡಬಿದ್ರೆ ಬಳಿಯ ಹನ್ನೆರಡು ಕವಲು (ಈಚೆಗೆ ಬಂದ ಕಿರು ಜಲವಿದ್ಯುತ್ ಯೋಜನೆಯ ಅಡಿಯಲ್ಲಿ ಮುಳುಗಿದೆಯೋ ತಿಳಿದಿಲ್ಲ), ಧರ್ಮಸ್ಥಳದ ಬಳಿಯ ಪಾರ್ಪಿಕಲ್ಲು, ಕಳಸದ ಬಳಿಯ ಭದ್ರಾ ಪಾತ್ರೆ ಇತ್ಯಾದಿ ಬೆಳೆಯುವ ಇಂಥವೇ ರಚನೆಗಳ ಪಟ್ಟಿಯಲ್ಲಿ ಇದಕ್ಕೆ, ಓ ನಾನು ಹೆಸರೇ ಹೇಳಲಿಲ್ಲ, ಗಣೇಶಫಾಲ, ಹೌದು, ಗಣೇಶಫಾಲಕ್ಕೆ ಸ್ಥಾನ ಶಾಶ್ವತ. (ಅಲ್ಲೆಲ್ಲಾದರೂ ಗಣೇಶನ ಗುಡಿಯಿತ್ತೇ? ಇಂಗ್ಲಿಶಿನ ಫಾಲ್ಸಿನ ತದ್ಭವ ಈ ಫಾಲ ಇರಬಹುದೇ? ತಿಳಿದವರು ಹೇಳಬೇಕು. ವಾಸ್ತವದಲ್ಲಿ ಇಲ್ಲಿ ಫಾಲ್ಸ್ ಕಾಣುವುದಿಲ್ಲ, ರ‍್ಯಾಪಿಡ್ಸ್ ಸರಿ ಹೊಂದುತ್ತಿತು.) ಬಲುದೂರದಿಂದ ಎಲ್ಲ ಬಿಟ್ಟು ಬರುವಷ್ಟು ಗಣೇಶಫಾಲ ಅದ್ಭುತವಲ್ಲ. ಆದರೆ ಅವಕಾಶ ಸಿಕ್ಕರೆ ನೋಡದುಳಿಯುವಷ್ಟು ಸಣ್ಣದೂ ಅಲ್ಲ.

ಹೀಗೇ ಪ್ರಾಕೃತಿಕವಾಗಿ ಕಲ್ಲುಗಳು ಗಿಡಿದ ನದಿ ಪಾತ್ರೆಗೆ ಮನುಷ್ಯ ಸಂಸ್ಕಾರ ಸಿಕ್ಕರೇನಾಗಬಹುದು ಎನ್ನುವುದಕ್ಕೆ ನಾವು ಅಂದೇ ನಿರಂಜನರನ್ನು ಬಿಟ್ಟು ಮುಂದುವರಿದಾಗ ಬಲಕ್ಕೆ ಕವಲಾಗಿ ಒಂದು ದಂಡೆಯಿಂದಲೂ ಮಾರಣೇ ದಿನ ಯಲ್ಲಾಪುರ ಶಿರಸಿ ದಾರಿಯಲ್ಲಿ ಬರುವಾಗಲೂ ಬಲಕ್ಕೆ ಕವಲೊಡೆದು ಎದುರು ದಂಡೆಯಿಂದಲೂ ನೋಡಿದ ಸಹಸ್ರಲಿಂಗ ಒಳ್ಳೆಯ ಉದಾಹರಣೆ. ಇಲ್ಲೂ ಶಾಲ್ಮಲಾ ನದಿ ಪಾತ್ರೆಯ ಕಲ್ಲ ಹಾಸುಗಳಲ್ಲಿ, ಗುಂಡುಗಳಲ್ಲಿ ಪ್ರಾಚೀನ ಕಾಲದ ಭಕ್ತಾದಿಗಳು (ಆಧುನಿಕರೂ ಇರಬಹುದು) ವಿವಿಧ ಗಾತ್ರದ ಮತ್ತು ರೂಪದ ಶಿವಲಿಂಗ ಮತ್ತು ನಂದಿಯರನ್ನು ಕಟೆದು ಇಟ್ಟಿದ್ದಾರೆ. ಇಲ್ಲಿ ನೀರ ಹರಿವು ಇಳಿಯುತ್ತಿದ್ದಂತೆ ಅನಾವರಣಗೊಳ್ಳುವ ದೇವಬಿಂಬಗಳ ಸಂಖ್ಯೆ ಏರುತ್ತಾ ಹೋಗುತ್ತದಂತೆ. ಮಳೆಗಾಲದ ಸೊಕ್ಕನ್ನೂ ಮೀರಿ ನಿಂತ ಬೃಹದೀಶ್ವರ, ಮೆಟ್ಟುಗಲ್ಲಿನಂತೆಯೂ ಒದಗಿ ಪೂಜಿಸಲ್ಪಡುವ ಕಣ್ಣಪ್ಪಪ್ರಿಯ, ನೀರ ಸೆಳವಿಗೆ ಮುಗ್ಗರಿಸಿದವರ ತಬ್ಬುಗೆಗೊದಗುವ ಮಾರ್ಕಾಂಡೇಯ ಬಂಧು, ಬರಿದೆ ಹೊಳೆನೀರ ಮೊಗೆದು ಎರಚಿದರೂ ಸಾಕೆನ್ನುವ ಭೋಳೇ ಶಂಕರ, ಹೊತ್ತುಗೊತ್ತಿಲ್ಲದೆ ಬಂದು ಅರ್ಚಿಸುವವರ ಕಾಲಾತೀತ ಪುರುಷ, ಪುರೋಹಿತರನ್ನಿಟ್ಟು ವೇದೋಕ್ತ ಅರ್ಚನೆಯನ್ನು ಸ್ವೀಕರಿಸುವ ಪುರಾಣಮಹಿಮರೂ ಇಲ್ಲಿದ್ದಾರೆ. ಮಳೆ ನೀರೇ ಅರ್ಚನೆ, ಹಕ್ಕಿ ಹಿಕ್ಕೆಯೇ ಗಂಧ, ಯಾವುದೋ ಉದುರೆಲೆಯೇ ಪತ್ರೆ ಎಂದೂ ಒಪ್ಪಿಕೊಳ್ಳುವ ಈ ಬಯಲು ಆಲಯ, ಸಹಸ್ರಲಿಂಗ ಕ್ಷೇತ್ರ ನಮಗೆ ಪ್ರಿಯವಾಯ್ತು. ಇಲ್ಲಿ ದೇವದರ್ಶನ ಮತ್ತು ಆರಾಧನೆಗಳಿಗೆ ಸಾಮಾನ್ಯವಾಗಿ ಯಾವುದೇ ವಿಧಿ ನಿಷೇಧಗಳೂ ಇಲ್ಲ. ಅದೆಲ್ಲವನ್ನೂ ಬಯಸುವ ಔಪಚಾರಿಕ ದೇವಳವೊಂದು ಅಲ್ಲೇ ದಂಡೆಯಲ್ಲಿದ್ದರೂ ನಮಗದರ ಗರ್ಜು ಮೂಡದ್ದು ಯಾಕೋ ಶಿವನೇ ಬಲ್ಲ.

ನದಿ ಪಾತ್ರೆಯ ರಚನೆಯ ಭಿನ್ನರೂಪವನ್ನು ಹೇಳುವ ಭರದಲ್ಲಿ ಗಣೇಶನಿಂದ ಅವನಪ್ಪನವರೆಗೆ ಕುರುಹುಳಿಸದೆ ಹಾರಿದ್ದೆ. ಈಗ ಸರಿ ಮಾಡ್ತೇನೆ. ಗಣೇಶಫಾಲದಿಂದ ನಾವು ಮತ್ತೆ ವಾನಳ್ಳಿ ಮುಖರಾದೆವು. ಬೆಳಿಗ್ಗೆ ಹೊರಡುವಾಗ ನಿರಂಜನರ ಅಮ್ಮ ನಮ್ಮ ಹೊಟ್ಟೆಗೇನೂ ಕಡಿಮೆ ಮಾಡಿರಲಿಲ್ಲ. ಆದರೆ ಅಪ್ಪಟ ಗ್ರಾಮೀಣ ಹೋಟೇಲಿನ ಒಂದು ರುಚಿ ತೋರಿಸುವ ಸಲುವಾಗಿಯೇ ನಿರಂಜನ್ ದಾರಿ ಬದಿಯ ಕುಗ್ರಾಮ – ಜಡ್ಡಿಗದ್ದೆ ಎಂಬಲ್ಲಿ ಒಂದು ಸೋಗೇ ಮಾಡಿನ ಹೋಟೆಲಿಗೆ ನುಗ್ಗಿಸಿದರು. “ನಮಗೇನೂ ಬೇಡಾ” ಎನ್ನುತ್ತಾ ಒಳಗೆ ಹೋದವರು ಅಲ್ಲಿನ ತಾಜಾ ರುಚಿಗೆ, ಅಪ್ಪಟ ಗ್ರಾಮೀಣ ಸೊಗಡಿಗೆ ನಾಲಿಗೆ ಸೋತು, ಕೊನೆಯಲ್ಲಿ ಗಣೇಶನ ಹೊಟ್ಟೆ ಹೊತ್ತು ಹೊರಟದ್ದು ಹೇಳದಿದ್ದರೆ ಅನ್ಯಾಯವಾದೀತು. (ಆಗ ತಾನೇ ಗಣೇಶ ಫಾಲ ಬಿಟ್ಟುಬಂದ ನೆನಪಿನಲ್ಲಿ ಪುರಾಣಲೋಕದಲ್ಲಿ ಹೊಟ್ಟೆಭಾರಕ್ಕೆ ಗಣೇಶ ಬಿದ್ದದ್ದು ಅರ್ಥಾತ್ ಗಣೇಶಾಸ್ ಫಾಲನ್ನು ನೆನೆಸಿಕೊಂಡು ಜಾಗೃತರಾಗಿದ್ದೆವು). ವಾನಳ್ಳಿಯಲ್ಲಿ ನಿರಂಜನ್ ಮತ್ತು ಕುಟುಂಬದವರಿಂದ ಮುಂದಿನ ದಾರಿಗೆ ಸಲಹೆಗಳನ್ನು ಪಡೆದು, ವಿದಾಯ ಹೇಳಿದೆವು. ಅಂದು ಕೆಂಗಣ್ಣಿನಿಂದ ಬಳಲುತ್ತಿದ್ದ ನಿರಂಜನ್ ದಾರಿಯ ದೂಳಿಗೋ ಬೈಕಿನ ಹೊಗೆಗೋ ಕಣ್ಣೀರಿಟ್ಟದ್ದು ಇರಬಹುದು. ಆದರೆ ನಮಗಂತೂ ಅವರ ಕುಟುಂಬದ ಆತ್ಮೀಯತೆಗೆ ಎದೆ ತುಂಬಿ ಕಣ್ಣು ಮಂಜಾಗಿತ್ತು.

ಹುಲೇಕಲ್ಲಿನಿಂದ ನಾವು ಶಿರಸಿ ದಾರಿ ಬಿಟ್ಟು ಎಡದ ಯಲ್ಲಾಪುರದ ದಾರಿ ಹಿಡಿದೆವು. ವಾಸ್ತವವಾಗಿ ಅದು ಶಿರಸಿ-ಯಲ್ಲಾಪುರಗಳ ನಡುವಣ ಮುಖ್ಯ ದಾರಿಗೆ ವಾನಳ್ಳಿ, ಹುಲೇಕಲ್ಲು ವಲಯದವರಿಗೊಂದು ಒಳದಾರಿ. ಇದರಲ್ಲಿ ನಾಲ್ಕು ಕಿಮೀ ಅಂತರದಲ್ಲಿ ಬಲಕ್ಕೆ ನಮಗೆ ಸಿಕ್ಕಿದ ದೇವಳ ಹುಣಸೇಹೊಂಡ. ಆದರೇನು ಅದಿಂದು (ರುಚಿ ಅರ್ಥಾತ್ ಹುಳಿ ಕಳೆದುಕೊಂಡು) ಚಪ್ಪೆ! ದೊಡ್ಡ ಖಾಲೀ ಮೈದಾನದ ಅಂಚಿನಲ್ಲಿರುವ ರಚನೆ ಪ್ರಾಚೀನ ಮತ್ತು ದೃಢವೇ ಇದ್ದರೂ ಜನರ ಅನಾಸ್ಥೆಯಿಂದ ಜೀರ್ಣ ಸ್ಥಿತಿಗೆ ತಲಪಿತ್ತು. ದೇವರು, ಭಕ್ತಿಯೂ ಕಾಲಕ್ಕೆ ತಕ್ಕಂತೆ (ಹೊಸತು ಬರುವುದೂ ಸೇರಿ) ಪರಿಷ್ಕರಣೆಗೆ ಒಳಪಡಬೇಕಾಗುತ್ತದೆ. ಆದರೆ ಜೀರ್ಣೋದ್ಧಾರಕ್ಕೆ ವಿವೇಚನೆಯ ಲಕ್ಷ್ಮಣ ರೇಖೆ ಸ್ಪಷ್ಟ ಇರಲೇಬೇಕು. ಹಾಗಿಲ್ಲವಾದ್ದಕ್ಕೇ ಮುರುಡೇಶ್ವರದ ಜೀರ್ಣೋದ್ಧಾರ, ಇಸ್ಕಾನಿನ ಭಕ್ತಿಯ ರಚನೆಗಳು ನನಗಂತೂ ವೈಭವವಾಗಿ ತೋರುವುದಿಲ್ಲ; ವಿಕಾರ, ಅತಿರೇಕ. ಮೈಸೂರಿನಲ್ಲಿ ನನ್ನ ತಮ್ಮ – ಅನಂತವರ್ಧನ (ಇವನು ಭಕ್ತಿ ಪಂಥದವನೇನೂ ಅಲ್ಲ) ಕೆ.ಹೆಮ್ಮನ ಹಳ್ಳಿಯ ಮಹಾಲಿಂಗೇಶ್ವರ ದೇವಸ್ಥಾನವನ್ನು ಒಂದು ಸಾಮಾಜಿಕ ಸಂಘಟನೆಯ ಮಟ್ಟದಲ್ಲಿ ಜೀರ್ಣೋದ್ಧಾರ ನಡೆಸಿದ ಕ್ರಮ ನನಗೊಂದು ಆದರ್ಶವಾಗಿ ಕಾಣುತ್ತದೆ. ಅದರ ಕುರಿತು ಎರಡು ಮಾತಿನ ಪರಿಚಯ ತೀರಾ ಅಪ್ರಸ್ತುತವಾಗಲಾರದು ಎಂದು ಭಾವಿಸುತ್ತೇನೆ.

ಕೆ.ಹೆಮ್ಮನಹಳ್ಳಿಯಲ್ಲಿ ಅನಂತ ಸುಮಾರು ಎರಡು ದಶಕದ ಹಿಂದೆ ಹೊಸದಾಗಿ ಕೊಂಡ ನೆಲದಲ್ಲಿ ಕೃಷಿ ನಡೆಸಿದ್ದ. ಅದಕ್ಕೆ ಸೊಪ್ಪಿನ ಗೊಬ್ಬರ ಸಂಗ್ರಹಕ್ಕೆಂದು ಒತ್ತಿನ ಕಾಡುಬಿದ್ದ ಜಾಗದಲ್ಲಿ ಕೆಲಸ ನಡೆಸುತ್ತಿದ್ದಾಗ ತೊಡರಿಕೊಂಡಿತೊಂದು ಪಾಳು ದೇಗುಲ. ಸರಕಾರೀ ದಾಖಲೆಗಳಲ್ಲಿ ತನಿಖೆ ಮಾಡುವಾಗ ಅದು ಕೆಲವು ಶತಮಾನಗಳ ಸ್ಪಷ್ಟ ಇತಿಹಾಸವೂ ಸಾಮಾಜಿಕ ಉಪಯುಕ್ತತೆಯೂ ಇರುವ ಮಹಾಲಿಂಗೇಶ್ವರ ದೇವಸ್ಥಾನವೆಂಬುದು ಇವನ ಅರಿವಿಗೆ ಬಂತು. ಒಂದು ಸಾಮಾಜಿಕ ಬದ್ಧತೆಯಲ್ಲಿ ಇವನು ಅದರ ಜೀರ್ಣೋದ್ಧಾರಕ್ಕೆ ಸುತ್ತಣ ಹಳ್ಳಿಗರನ್ನು ಸಂಘಟಿಸಿ ತೊಡಗಿಕೊಂಡ. ಧರ್ಮಸ್ಥಳದ ಪ್ರಾಚ್ಯ ತಜ್ಞರ ಸಂಪೂರ್ಣ ಸಹಕಾರದೊಡನೆ ಪುನಾರಚನೆಯ ಇತಿಮಿತಿಗಳನ್ನು ರೇಖಿಸಿಕೊಂಡ. ಪ್ರಥಮವಾಗಿ ತನ್ನ ತಾಕತ್ತು ಮತ್ತೆ ಪರಿಚಿತರ ಸಹಾಯದೊಡನೆ ಪೂರಕ ಬಲ ಸಂಚಯಿಸಿ, ಧರ್ಮಸ್ಥಳದ್ದೇ ದೇವಾಲಯ ಪುನರುತ್ಥಾನ ಟ್ರಸ್ಟ್ ಕೊಡಮಾಡುವ ಮತ್ತುಳಿದ ಅರೆವಾಸಿ ಆರ್ಥಿಕ ಸಹಾಯವನ್ನು ಅರ್ಥಪೂರ್ಣವಾಗಿ ಬಳಸಿಕೊಂಡು ಗುಡಿ ಊರ್ಜಿತಕ್ಕೆ ತಂದ. ನೋಟಕ್ಕೆ ತೀರಾ ಸರಳ ಮತ್ತು ಸಾಮಾನ್ಯವಾಗಿ ತೋರುವ ಈ ಕೆ.ಹೆಮ್ಮನಹಳ್ಳಿಯ ಮಹಾಲಿಂಗೇಶ್ವರ ದೇವಾಲಯ ಇಂದು ಆಸುಪಾಸಿನ ಮುಗ್ಧ ಹಳ್ಳಿಗರಿಗೆ ಜಾತ್ಯಾತೀತತೆ, ಮೌಢ್ಯ ನಿರಾಕರಣೆ, ದೈನಂದಿನ ಕಲಾಪಗಳ ಪರಿಷ್ಕಾರಕ್ಕೊಂದು ಸ್ಪಷ್ಟ ಆಧಾರ ಸ್ತಂಭವಾಗಿ ರೂಪುಗೊಂಡಿದೆ. ಸರಳ ಸಾಮೂಹಿಕ ಮದುವೆ, ಆರೋಗ್ಯ ಶಿಬಿರ, ವಯಸ್ಕ ಶಿಕ್ಷಣ, ಅರ್ಥಪೂರ್ಣ ಹಬ್ಬ ಮತ್ತು ಜನಪದ ಉತ್ಸವಗಳ ಪುನರುಜ್ಜೀವನ ಹೀಗೇ ಇದರ ಕೊಡುಗೆಗಳು ಅಸಂಖ್ಯ, ಅಪೂರ್ವ.

ಮೈಸೂರಿನ ಮಹಾಲಿಂಗೇಶ್ವರ ಮಹಾತ್ಮ್ಯೆಯನ್ನಷ್ಟಕ್ಕೇ ಬಿಟ್ಟು ಮತ್ತೆ ಉತ್ತರಕನ್ನಡದ ಹುಣಸೇಹೊಂಡದಿಂದ ಮುಂದುವರಿಯೋಣ. (ಇಂದಿನ ಹುಣಸೇಹೊಂಡ ಹೇಗಿದೆ ಎನ್ನುವುದನ್ನು ಪ್ರತ್ಯಕ್ಷದರ್ಶಿಗಳು ಪ್ರತಿಕ್ರಿಯಾ ಅಂಕಣದಲ್ಲಿ ತುಂಬಿದರೆ ತಿಳಿದುಕೊಳ್ಳಲು ನಾನೂ ಕಾತರನಾಗಿದ್ದೇನೆ.) ಮುಂದೆರಡು ಕಿಮೀ ಅಂತರದಲ್ಲಿ ಇನ್ನೊಂದು ಬಲಕವಲಿನಲ್ಲಿ ಮೊದಲೇ ಹೇಳಿದ ಸಹಸ್ರಲಿಂಗೇಶ್ವರ ಕ್ಷೇತ್ರ ನೋಡಿ ಮರಳಿದ್ದೂ ಆಯ್ತು. ಶಿರಸಿ-ಯಲ್ಲಾಪುರದ ದಾರಿ ಸೇರಿ ಹೊಸ ನಿರೀಕ್ಷೆಗಳತ್ತ ಧಾವಿಸೋಣವೆಂದರೆ ಅಯ್ಯೋ ಮತ್ತೆ ಪಿರಿಪಿರಿ ಮಳೆ ಕಾಟ! ಏಕ ದಿನ ವಿಶ್ವ ಕಪ್ ಪಂದ್ಯಗಳೇ ಮಳೆ ಬಂದಾಗ ಪಿಚ್ಚಿಗೆ ಹೊದಿಕೆ ಹೊಚ್ಚಿ, ವಟವಟ ಕಾಯಿಸುವಾಗ ತಿರುಗಾಡಿಗಳು ನಾವೇನು ಮಾಡಬಹುದು? ಅದೋ ಪೇಟೆ ಮನೆ ಬಿಟ್ಟು ಹಳ್ಳಿಮೂಲೆಯ ಬಸ್ ಕಾಯುವ ಚಪ್ಪರವೂ ಇಲ್ಲದ ಕಾಡು ದಾರಿ. ಬದಿಯ ಮರಗಳನ್ನು ಆಶ್ರಯಿಸಿ ನಿಂತು, ತೊಟ್ಟಿಕ್ಕುವ ಹನಿಗಳನ್ನು ಲೆಕ್ಕ ಹಾಕುವುದಷ್ಟೇ ಉಳಿಯಿತು. ಅಲ್ಲೇ ಎಲ್ಲೋ ಹೆಬ್ಬಲಸು ಮರದ ಮೇಲೆ ಹಣ್ಣು ಚಪ್ಪರಿಸುವ ಕೆಂಜಳಿಲು ನಮ್ಮ ಇರವಿಗೆ ಬೆದರಿ ಕಾಡೇ ಅನುರಣಿಸುವಂತೆ ಲೊಚಗುಡುವ ಚಂದಕ್ಕೆ ಕಿವಿಯಾಗಿ ಕಾಯುತ್ತಾ ನಿಂತೆವು. ನೀವೂ ಮುಂದಿನ ವಾರದವರೆಗೆ ಕಾಯ್ತೀರಲ್ಲಾ?

(ಮುಂದುವರಿಯಲಿದೆ)