ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ
ಒಡಿಶಾದ ಒಡಲೊಳಗೆ ಅಧ್ಯಾಯ (೮)

ರತ್ನಗಿರಿ, ಲಲಿತಗಿರಿ, ಉದಯಗಿರಿ, ಪುಷ್ಪಗಿರಿಗಳೆಂಬ ಗಿರಿಸಮುಚ್ಚಯಗಳು ಬೌದ್ಧರ ಪ್ರಾಬಲ್ಯವಿದ್ದ ಜಾಗಗಳು. ಹಿಂದೆ ಭಾರತಕ್ಕೆ ಭೇಟಿ ನೀಡಿದ್ದ ಚೀನೀ ಪ್ರವಾಸಿಗ ಹ್ಯೂ-ಯೆನ್-ತ್ಸಾಂಗ್ ನ ವರದಿಯಲ್ಲೂ ನಮೂದಿಸಲ್ಪಟ್ಟ ಜಾಗಗಳೆಂದು ಹೇಳುತ್ತಾರೆ. ಬೌದ್ಧರ ಚೈತ್ಯಗೃಹಗಳು, ವಿಹಾರಗಳು ಮತ್ತು ಸ್ತೂಪಗಳ ಸಮುಚ್ಚಯಗಳು ಇಲ್ಲಿವೆ. ಇಲ್ಲಿ ಬುದ್ಧನ ಕೂದಲು, ಹಲ್ಲು, ಮೂಳೆ ಹೀಗೆ ಕೆಲವು ವಸ್ತುಗಳನ್ನು ಜೋಪಾನವಾಗಿಟ್ಟು ಹುಗಿದಿಟ್ಟ ಸ್ತೂಪಗಳಿವೆಯಂತೆ. ಈ ಸ್ತೂಪಗಳು ಮಣ್ಣಿನ ಇಟ್ಟಿಗೆಗಳಿಂದ ರಚಿತವಾದವು. ಉತ್ಖನನವೀರರಿಗೆ ಸ್ವರ್ಗವೆಂದೇ ಹೇಳಬಹುದಾದ ಜಾಗಗಳಿವು. ಎಷ್ಟೋ ವರ್ಷಗಳ ಕಾಲ ಬರೀ ಗುಡ್ಡ, ಮರ, ಕಾಡುಗಳೆಂದು ಪರಿಚಿತವಾಗಿದ್ದ ಜಾಗಗಳಲ್ಲಿ ಭೂಮಿಯನ್ನು ಅಗೆಯುತ್ತಾ ಹೋದಂತೆ ಆ ನೆಲದ ಅಡಿಯಲ್ಲಿದ್ದ ಎರಡು ಸಾವಿರಕ್ಕೂ ಹಿಂದಿನ ವರ್ಷಗಳ ಸತ್ಯ, ಅಕ್ಷರಶಃ ಮೂರ್ತರೂಪವಾಗಿದ್ದನ್ನು ನೋಡಲು ನಾವಂತೂ ಉತ್ಸುಕರಾಗಿದ್ದೆವು.

ಸುಮಾರು ೨ ಗಂಟೆಗಳ ಪ್ರಯಾಣದ ಬಳಿಕ ರತ್ನಗಿರಿ ತಲಪಿದೆವು. ವ್ಯಾನ್ ನಿಲ್ಲಿಸಿ, ಟಿಕೆಟ್ ಖರೀದಿಸಿ ಪುಟ್ಟ ಬೆಟ್ಟವೊಂದನ್ನು ಏರಬೇಕು. ಇಲ್ಲಿನ ಗುಡ್ಡಗಳಲ್ಲಿ, ಹಸಿರು ಹುಲ್ಲುಗಾವಲುಗಳಲ್ಲಿ ದನ, ಆಡುಗಳು ಸ್ವಚ್ಛಂದವಾಗಿ ಮೇಯುತ್ತಿದ್ದವು. ಅವು ಎಷ್ಟು ಚೆನ್ನಾಗಿ ಮೇಯುತ್ತಿದ್ದವೆಂದರೆ ಯಾರೋ ಹುಲ್ಲು ಕತ್ತರಿಸುವ ಮೆಶಿನಿನಿಂದ ಉದ್ಯಾನವನದ ಹುಲ್ಲನ್ನು ಒಂದೇ ಹದಕ್ಕೆ ಕತ್ತರಿಸಿದಂತೆ ಕಾಣುತ್ತಿತ್ತು. ಈ ಗುಡ್ಡದ ದಾರಿಯುದ್ದಕ್ಕೂ ಬೌದ್ಧ ವಿಗ್ರಹಗಳು, ಸಣ್ಣಸಣ್ಣ ಸ್ತೂಪಗಳಂತಹ ರಚನೆಗಳನ್ನು ಕಾಣಬಹುದು. ಗುಡ್ಡದ ತುದಿಯಲ್ಲಿ ಕ್ರಿಸ್ತಪೂರ್ವ ೨ನೆಯ ಶತಮಾನದ ಬೃಹತ್ ಮಂದಿರದ ಭಾಗಗಳು ಕಾಣಸಿಗುತ್ತವೆ. ಬುದ್ಧನ ಭಾರೀ ಪ್ರಮಾಣದ ವಿಗ್ರಹವಿದೆ. ಒಟ್ಟೂ ಜಾಗದಲ್ಲಿ ಎಲ್ಲೆಂದರಲ್ಲಿ ಬುದ್ದನ ವಿಗ್ರಹಗಳು. ಆ ಮಂದಿರದ ದ್ವಾರಕ್ಕೆ ಅತ್ಯಾಕರ್ಷಕ ಹಸಿರು ಕಲ್ಲಿನ ಳಕೆಯಾಗಿದ್ದು, ಸುಂದರ ಕೆತ್ತನೆಗಳಿವೆ. ದೊಡ್ಡ ಅಂಗಳದಂತಹ ಪ್ರದೇಶವಿದೆ. [ picture 174, 175, 176 ]ಇವನ್ನೆಲ್ಲಾ ನೋಡುತ್ತಾ ಹೊರಬಂದು ಆ ಗುಡ್ಡದಲ್ಲೇ ಸ್ವಲ್ಪ ಅಡ್ಡಾಡುತ್ತಿದ್ದೆವು. ಕಾಲಿಗೆ ಏನೋ ಕಲ್ಲು ಎಡವಿದಂತಾಗಿ ನೋಡಿದರೆ ಗುಂಗುರು ಕೂದಲಿನ ಕಲ್ಲು, ಬಹುಶಃ ಬುದ್ಧನ ಮೂರ್ತಿ ಬಿದ್ದಿರಬೇಕು. ಆಚೀಚೆ ನೋಡಿದರೆ ಹಲವಾರು ಕಡೆ ಅಂತಹ ವಿಗ್ರಹಗಳು ಇರಬಹುದೆನಿಸುತ್ತಿತ್ತು.

ಈ ಕೌತುಕವನ್ನು ಹೇಳಲು ಒಬ್ಬರನ್ನೊಬ್ಬರು ಕರೆದು, “ಇಲ್ಲಿ ನೋಡಿ ಬುದ್ಧ, ಅಲ್ಲಿ ನೋಡಿ ಬುದ್ಧ, ಜಗವೆಲ್ಲ ಮಲಗಿರಲು ಇವನೊಬ್ಬ ಎದ್ದ” ಎಂದು ಕೂಗುತ್ತಿದ್ದೆವು. ಅಷ್ಟರಲ್ಲಿ “ನೀವು ಕನ್ನಡಿಗರಾ?” ಪ್ರಶ್ನೆ ಬಂದಕಡೆ ತಿರುಗಿ ನೋಡಿದೆ. ಒಬ್ಬ ೬೦-೬೫ ರ ಬೆಂಗಳೂರಿನ ಹಿರಿಯರು, ಸಂಸಾರ ಸಮೇತ ಪ್ರವಾಸಕ್ಕೆ ಬಂದವರು. ಪರಸ್ಪರ ಪರಿಚಯ ಮಾಡಿಕೊಂಡು ಸ್ವಲ್ಪ ಪಟ್ಟಾಂಗ ನಡೆಸಿದೆವು. ನಾವು ಹಿಂದಿನ ದಿನ ರಾಮ್ ಚಂಡಿ ದೇವಸ್ಥಾನದಲ್ಲಿ ನೋಡಿದ್ದವರೇ. ತಮ್ಮ ಹೆಂಡತಿ, ಇಬ್ಬರು ಮಗಳಂದಿರು – ಒಬ್ಬಾಕೆ ಆಸ್ಟ್ರೇಲಿಯಾ, ಮತ್ತೊಬ್ಬಾಕೆ ಕೆನಡಾದಲ್ಲಿರುವವರು, ಅವರ ಮಕ್ಕಳು, ಅಳಿಯಂದಿರು ಹೀಗೆ ಒಂದು ವ್ಯಾನ್ ಜನ ಬಂದಿದ್ದರು. ಇವರುಗಳ ಜತೆ ಈ ಪರಂಪರಾ ತಾಣಗಳನ್ನು ನೋಡಲು ಬಂದದ್ದು ತುಂಬಾ ಅರ್ಥಪೂರ್ಣವಾಗಿದೆಯೆಂದೂ, ತಾವು ಭುವನೇಶ್ವರ ಮತ್ತು ಅದರ ಸುತ್ತಲಿನ ಜಾಗಗಳನ್ನು ಆಯ್ಕೆ ಮಾಡಿಕೊಂಡದ್ದು ಬಹಳ ಉತ್ತಮ ನಿರ್ಧಾರವೆಂದು ಅನಿಸುತ್ತಿದೆಯೆಂದೂ ಹೇಳಿ ಖುಶಿಪಟ್ಟರು. “ನಮ್ಮ ಸಂಸ್ಕೃತಿ, ಪರಂಪರೆ, ವಾಸ್ತು, ಶಿಲ್ಪ ಎಲ್ಲಾ ಎಷ್ಟು ಭವ್ಯವಾದುದು” ಎಂದು ಭಾವಪೂರಿತರಾದರು. ಅವರು ಹಿಂದಿನ ದಿನ ದೇವಸ್ಥಾನದಲ್ಲಿ ತಮ್ಮ ಮೊಮ್ಮಕ್ಕಳನ್ನು ದೇವರಿದಿರು ಸಾಷ್ಟಾಂಗ ನಮಸ್ಕಾರ ಮಾಡಿಸಲು ಪ್ರಯಾಸಪಡುತ್ತಿದ್ದುದು ನೆನಪಾಯಿತು. ಕಾಲಿನ ಶೂಗಳನ್ನು ಕಳಚಿ ಬರಿಗಾಲಲ್ಲಿ ನಡೆಯಲೂ ಒಪ್ಪದ ಆ ಪುಟ್ಟ ಮಕ್ಕಳು, ಎಷ್ಟೋ ಜನ, ದನ, ನಾಯಿಗಳು ಓಡಾಡಿದ, ಎಲ್ಲರ ಪಾದಧೂಳಿನಿಂದ ತುಂಬಿದ್ದ ಆ ಭೂಮಿಯನ್ನು ತಾಯಿ ಎಂದು ಪರಿಗಣಿಸಿ, ಎಲ್ಲವೂ ನಿನ್ನ ಸೃಷ್ಟಿಯ ಅದ್ಭುತವೆಂದು ಸ್ವೀಕರಿಸಿ, ಶರಣಾಗತಿಯ ಭಾವ ನೆಲೆನಿಲ್ಲಲು, ಈ ಮಣ್ಣನ್ನು ಒಪ್ಪಿ, ಅಪ್ಪಿ, ಪವಿತ್ರವೆಂದು ಹಣೆಗೆ ಹಚ್ಚಿಕೊಳ್ಳಲಿಕ್ಕುಂಟೇ? ಎಂದು ಯೋಚಿಸುತ್ತಿದ್ದೆ. ಆವಾಗಲೇ ಅಂದುಕೊಂಡಿದ್ದೆ, ಇವು ಈ ಮಣ್ಣಿನಲ್ಲಿ ಬೆಳೆಯುವ ಮಕ್ಕಳಲ್ಲವೆಂದು. ಆದರೂ ಆ ಹಿರಿಯರಿಗೆ ಎಲ್ಲವನ್ನೂ ಮೊಮ್ಮಕ್ಕಳಿಗೆ ತೋರಿಸುವ ಆಸೆ, ಕಲಿಸುವ ಆಸೆ. ಇನ್ನುಳಿದ ತಮ್ಮ ಜೀವಿತದ ಅವಧಿಯಲ್ಲಾದರೂ ಎಲ್ಲವನ್ನೂ ಧಾರೆಯೆರೆಯಬೇಕೆಂಬ, ದಾಟಿಸಬೇಕೆಂಬ ಆಸೆಯಿಂದ ತಮ್ಮ ಇಳಿವಯಸ್ಸನ್ನು ಮರೆತು ಮೊಮಕ್ಕಳನ್ನು ಎತ್ತಿ, ಹೊತ್ತು ಓಡುತ್ತಿದ್ದರು. “ಅತ್ತ ಅಪ್ಪನೂ ಸರಿ, ಇತ್ತ ಮಕ್ಕಳೂ ಸರಿ” ಎಂಬ ಗೊಂದಲದಲ್ಲಿ ಅವರ ಹಿಂದಿನಿಂದ ಏದುಸಿರು ಬಿಡುತ್ತಾ ಓಡುತ್ತಿದ್ದ ಅವರ ಮಗಳಂದಿರು, ಅಳಿಯಂದಿರು. ಓಡಲು ಬಿಡಿ, ನಡೆಯಲೂ ಸಾಧ್ಯವೇ ಇಲ್ಲವೆಂದು ವ್ಯಾನಿನಲ್ಲೇ ಕೂತು ಕಾಯುತ್ತಾ, ಅವರಿಂದ ಪಡೆವ ವೀಕ್ಷಣಾ ವಿವರಣೆಯಲ್ಲೇ ಖುಶಿಕಾಣುವ ಮೊಣಗಂಟು ನೋವಿನ ಅವರ ಹೆಂಡತಿ ಎಲ್ಲವೂ ನನಗೆ ಮನೆಮನೆಯ ಕಥೆಯಂತೆ ಅನಿಸುತ್ತಿತ್ತು.

ಹೀಗೆ ಯೋಚಿಸುತ್ತಾ ವಾಪಾಸು ಹೊರಟ ನಮ್ಮನ್ನು “ಅಲ್ಲೇ ಮುಂದೆ ಹೋಗಿ, ಮಹಾಕಾಲನಿದ್ದಾನೆ” ಎಂದು ಹಿಂದಿಯಲ್ಲಿ ಯಾರೋ ಕೂಗಿ ಹೇಳಿದರು. ಅಲ್ಲಿಯ ಕಾವಲುಗಾರ, ನಾವು ಆಸಕ್ತಿಯಿಂದ ಎಲ್ಲವನ್ನೂ ನೋಡುತ್ತಿದ್ದ ಕಾರಣ, “ಇನ್ನೂ ಮುಂದೆಹೋಗಿ” ಎಂದು ಸೂಚಿಸಿದ. “ನೋಡಿ, ಆ ಮಹಾಕಾಲ, ಇಲ್ಲಿಯೇ ಸಿಕ್ಕಿದ್ದು, ಆದರೆ ಅವನ ಮೂರ್ತಿಯನ್ನು ಮಾತ್ರ ಇಲ್ಲಿಂದ ತೆಗೆದು ಅಲ್ಲಿ ದೂರದಲ್ಲಿ ಗುಡಿಕಟ್ಟಿ ಇಟ್ಟಿದ್ದಾರೆ, ನೋಡಿಕೊಂಡುಬನ್ನಿ” ಎಂದ. ಅವನ ನಿರ್ದೇಶನದಂತೆ ಮಹಾಕಾಲನನ್ನೂ,[ picture 152] ಅಲ್ಲಿಯೇ ಮೇಯುತ್ತಿದ್ದ ಬಸವನನ್ನೂ ನೋಡಿಕೊಂಡು ಬಂದೆವು. ಅದ್ಯಾಕೆ ಮಹಾಕಾಲನನ್ನು ಎತ್ತಂಗಡಿ ಮಾಡಿದ್ದಾರೋ ಅರ್ಥವಾಗಲಿಲ್ಲ.

ರತ್ನಗಿರಿಯಲ್ಲಿ ಪುರಾತತ್ವ ಇಲಾಖೆಯವರ ಮ್ಯೂಸಿಯಂ ಕೂಡಾ ಇದೆ. ಆದರೆ ಅಂದು ಶುಕ್ರವಾರ ರಜೆ ಇತ್ತು. ಹಾಗಾಗಿ ನೋಡಲಾಗಲಿಲ್ಲ. ರತ್ನಗಿರಿಯಲ್ಲಿದ್ದ ತೋಶಾಲಿ ಎಂಬ ಹೋಟೆಲಿನಲ್ಲಿ ಬಹಳ ರುಚಿಯಾದ ಒಡಿಶಾದ ಸಾಂಪ್ರದಾಯಿಕ ವ್ಯಂಜನಗಳಿಂದ ಕೂಡಿದ್ದ ಊಟವನ್ನು ಸವಿದೆವು. ಇನ್ನೂ ಕೆಲವು ಉತ್ಖನನ ಜಾಗಗಳಿದ್ದವು. ಎಲ್ಲವನ್ನೂ ನೋಡಲು ಸಮಯ ಸಾಲದು. ಹಾಗಾಗಿ ಉದಯಗಿರಿ ಮತ್ತು ಲಲಿತಗಿರಿಗಳಿಗೆ ಹೋದೆವು.

ಉದಯಗಿರಿಯಲ್ಲಿ ೨ಕಡೆ ಬೌದ್ಧರ ವಿಹಾರಗಳಿವೆ. ಒಂದು ಕಡೆ ದೇವಾಲಯ, ಕಲ್ಲುಕಟ್ಟಿದ್ದ ಬಾವಿ, ಬೆಟ್ಟದ ತುದಿಗೆ ಹೋಗಲು ಮಣ್ಣಿನ ಪಾವಟಿಕೆಗಳು, ಸ್ತೂಪಗಳು, ಧ್ಯಾನ ಮಂದಿರ ಮತ್ತು ವಾಸಕ್ಕಾಗಿ ನಿರ್ಮಿಸಿದ್ದ ತಂಪಾದ ಕೊಠಡಿಗಳು. ದೀಪವಿಡಲು ಮಾಡಿದ್ದ ಶೆಲ್ಫ್ ಗಳು, ಎಷ್ಟೋ ನೂರು ವರ್ಷಗಳ ಕಾಲ ಭೂಗರ್ಭದಲ್ಲಿದ್ದರೂ ಹಾಳಾಗದೇ ಹಾಗೇ ಇವೆ. ಇಲ್ಲಿ ಮಲಗಿರುವ ಬುದ್ಧನ ಬೃಹತ್ ವಿಗ್ರಹವನ್ನು ಕೆತ್ತಲು ಆರಂಭಿಸಿ ಹಾಗೇ ಬಿಟ್ಟದ್ದು ಕಾಣುತ್ತದೆ. ಇಲ್ಲಿನ ಕೊಠಡಿಗಳ ಒಳಹೊಗುವಾಗಲೇ ತಂಪುತಂಪಾದ ಹವಾನಿಯಂತ್ರಿತ ಕೋಣೆಯ ಒಳಹೊಕ್ಕ ಹಾಗೆ ಅನಿಸುತ್ತದೆ. ಮುಂದುವರಿದ ಜನಾಂಗದ ಕಾಂಕ್ರೀಟ್ ಕಾಡುಗಳಲ್ಲಿ ಕಿಟಿಕಿ, ಬಾಗಿಲು ಮುಚ್ಚಿ ಹವಾನಿಯಂತ್ರಕ ಒತ್ತಿ ‘ಹಾಯ್’ ಆಗುವ ಮನಸ್ಸಿಗೆ ಎರಡು ಸಾವಿರ ವರ್ಷಗಳ ಹಿಂದಿನ ವಾಸ್ತುವಿಜ್ಞಾನದ ಗುಟ್ಟು ರಟ್ಟಾಗದೇ ಉಳಿದದ್ದು ಇಂದಿನ ದುರಂತವೆನಿಸಿತು.

ಲಲಿತಗಿರಿಯಲ್ಲಿ ಒಂದು ಮಹಾಸ್ತೂಪವಿದ್ದು, [ picture 159 ]ಅದನ್ನು ಅಗೆದು ತೆಗೆದು ನೋಡಿದಾಗ ಒಂದು ಪೆಟ್ಟಿಗೆ, ಅದರ ಒಳಗೆ ೩ ಪೆಟ್ಟಿಗೆಗಳು ಸಿಕ್ಕವಂತೆ. ಅದರಲ್ಲೊಂದು ಚಿನ್ನದ್ದು ಅದರೊಳಗೊಂದು ಮೂಳೆಯಂತಹ ವಸ್ತು ಲಭಿಸಿದ್ದು, ಅದು ಬುದ್ಧನದ್ದೆಂದು ಹೇಳಲಾಗುತ್ತದೆ. ಈ ಬೆಲೆಬಾಳುವ ವಸ್ತುವನ್ನು ಭುವನೇಶ್ವರದ ಮ್ಯೂಸಿಯಂನಲ್ಲಿ ಸಂರಕ್ಷಿಸಿಟ್ಟಿದ್ದಾರಂತೆ. ನಮಗೆ ಲಲಿತಗಿರಿಯಲ್ಲಿ ನೋಡಲು ಸಿಗುವುದು ಈ ಪೆಟ್ಟಿಗೆಯ ಚಿತ್ರ ಮತ್ತು ಅಗೆದು, ತೆಗೆದು ಪುನಃ ನಿರ್ಮಾಣ ಮಾಡಿದ ಮಹಾಸ್ತೂಪ. ಲಲಿತಗಿರಿಯಲ್ಲೂ ಮ್ಯೂಸಿಯಂ ಇದೆ. ಅಲ್ಲೆ ಆ ಪೆಟ್ಟಿಗೆಗಳ ಚಿತ್ರವಿತ್ತು. ಉಳಿದಂತೆ ಆ ಸಂಗ್ರಹಾಲಯದಲ್ಲಿ ಬುದ್ಧ, ಬುದ್ಧ, ಬುದ್ಧನ ವಿಗ್ರಹಗಳೇ. ಜತೆಗೆ ಅವಲೋಕಿತೇಶ್ವರ. ಹರಿತಿ, ಮೈತ್ರೇಯಿ, ಬೋಧಿಸತ್ವರ ವಿಗ್ರಹಗಳು. ಬೌದ್ಧ ಧರ್ಮದ ಸರಿಯಾದ ಪರಿಚಯವಿದ್ದರೆ ಹೆಚ್ಚು ಅರ್ಥಮಾಡಿಕೊಳ್ಳಲು ಸಾಧ್ಯ. ಲಲಿತಗಿರಿಯಲ್ಲೇ ಪ್ರಾಚ್ಯ ಮತ್ತು ಪುರಾತತ್ವ ಇಲಾಖೆಯವರು ಒಂದು ಬೃಹತ್ ಗ್ರಂಥಾಲಯದ ನಿರ್ಮಾಣದಲ್ಲಿದ್ದಾರೆ.

ಲಲಿತಗಿರಿಯಿಂದ ವಾಪಾಸು ಬರುವಾಗ ಕಟಕ್ ನಲ್ಲಿ ರಸಗುಲ್ಲಾಗಳಿಗೆ ಪ್ರಸಿದ್ಧವಾದ ಜಾಗ – ಪಹಾಲಾ ಸಿಗುತ್ತದೆ. ಇಲ್ಲಿ ಸುಮಾರು ೧ ಕಿ.ಮೀ. ದೂರಕ್ಕೆ ರಸ್ತೆಯ ಎರಡೂ ಕಡೆ ಶೆಡ್ ಗಳು ಕಾಣಸಿಗುತ್ತವೆ. ದೊಡ್ಡ ದೊಡ್ಡ ಅಲ್ಯೂಮಿನಿಯಂ ಬಾಣಲೆಗಳನ್ನು ಇಟ್ಟುಕೊಂಡು ಸೌದೆ ಒಲೆಗಳಲ್ಲಿ ರಸಗುಲ್ಲಾ ತಯಾರಿಸುವ ಬಾಣಸಿಗರು ಇದ್ದಾರೆ. ರಸಗುಲ್ಲಾದ ಬಗ್ಗೆ ಬಂಗಾಳಿಗಳಿಗೂ. ಒರಿಯಾಗಳಿಗೂ ಎಂದೂ ಮುಗಿಯದ ಯುದ್ಧ. ಮೊತ್ತಮೊದಲಿಗೆ ರಸಗುಲ್ಲಾ ತಯಾರಿಸಿದ್ದು ಒರಿಯಾಗಳೆಂದೂ ಬಂಗಾಳಿಗಳು ಅದನ್ನು ಕದ್ದು ತಮ್ಮದೆಂದು ಜಗತ್ಪ್ರಸಿದ್ಧಗೊಳಿಸಿದರೆಂದೂ ಕೆಲವರ ಅಂಬೋಣ. ರಸಗುಲ್ಲಾದ ‘ಪ್ರಾದೇಶಿಕ ವಿಶೇಷತೆ’ ಎಂಬ ವಿಶ್ವಮಾನ್ಯ ಗುರುತಿಗಾಗಿ ಇಬ್ಬರೂ ಕೋರ್ಟಿನ ಮೆಟ್ಟಲು ಹತ್ತಿದ್ದಾರೆ. ವಿಚಿತ್ರವೆಂದರೆ ಈ ಎರಡೂ ಕಡೆಗಳಲ್ಲಿ ಸಿಗುವ ರಸಗುಲ್ಲಾ ಬೇರೆಬೇರೆ ಬಣ್ಣ, ರುಚಿ, ಹದವನ್ನು ಹೊಂದಿವೆ. ಬಂಗಾಳಿಗಳ ರಸಗುಲ್ಲಾ ಅಚ್ಚಬಿಳಿಯದ್ದೂ ದೊಡ್ಡದು. ಕಚ್ಚಿ ತಿನ್ನುವಾಗ ರಬ್ಬರಿನ ಅನುಭವ ಕೊಡುವಂತಹದ್ದು. ಒರಿಯಾ ರಸಗುಲ್ಲಾ ಗಾತ್ರದಲ್ಲಿ ಸಣ್ಣದು, ತಿಳಿಹಳದಿ ಬಣ್ಣದ್ದೂ ಆಗಿದ್ದು ಬಾಯಿಯಲ್ಲಿ ಇಟ್ಟೊಡನೆ ‘ಆಹಾ!’ ಎನ್ನುತ್ತಾ ಅಲ್ಲೇ ಕರಗಿಹೋಗುವ ಮೃದುತ್ವವುಳ್ಳದ್ದೂ ಆಗಿದೆ. ಬಹುಶಃ ಈಗ ಪ್ರಾದೇಶಿಕ ಮಾನ್ಯತೆಯನ್ನು ಎರಡೂ ಕಡೆಗಳಿಗೆ ಕೊಟ್ಟಿರಬೇಕು. ಕೆ.ಸಿ.ದಾಸ್ ಸಂಸ್ಥೆಯ ಮೂಲಕ ವಿಶ್ವದಾದ್ಯಂತ ಪ್ರಚಾರವಾದದ್ದು ಬಂಗಾಳೀ ರಸಗುಲ್ಲಾ. ಒರಿಯಾ ರಸಗುಲ್ಲಾಕ್ಕೆ ಬಾಳಿಕೆಯ ಗುಣವಿಲ್ಲ. ಹಾಗಾಗಿ ಇದರ ತಾಜಾರುಚಿ ಸವಿಯಲು ಕಟಕದ ಬಾಗಿಲು ಕುಟ್ಟಬೇಕು.

ನಮ್ಮ ರಸಗುಲ್ಲಾ ಆಸೆ ಈಡೇರಿಸಲು ಸಂತೋಷ ವ್ಯಾನನ್ನು ಹೆದ್ದಾರಿಯಿಂದ ಕೆಳಗಿಳಿಸಿ ಅವನಿಗೆ ಪರಿಚಯವಿರುವ ಅಂಗಡಿಗೆ ಕರಕೊಂಡು ಹೋದ. ಆ ದಿನವೆಲ್ಲಾ ಗಿರಿಗಳ ದರ್ಶನದಲ್ಲಿ ಏರಿಳಿದು, ಕಾಲು ಸವೆಸಿ ಸುಸ್ತಾಗಿದ್ದೆವು. ತೋಶಾಲಿಯ ಮೃಷ್ಟಾನ್ನ ಭೋಜನವನ್ನು ವ್ಯಾನಿನ ಜೊಂಪು ನಿದ್ದೆಯಲ್ಲಿ ಅರಗಿಸಿಕೊಂಡು, ಬಾಯಲ್ಲಿ ನೀರೂರಿಸುತ್ತಾ ಬಿಸಿಬಿಸಿ ರಸಗುಲ್ಲಾಗಳನ್ನು ಸವಿದೇ ಸವಿದೆವು. ಒಂದು ರಸಗುಲ್ಲಾಕ್ಕೆ ಕೇವಲ ೫ ರೂಪಾಯಿಗಳು. “ಇವ ಈ ರೇಟಿಗೆ ಕೊಟ್ರೆ ಊಟದ ಬದಲು ಇದನ್ನೇ ತಿನ್ನಬಹುದು” ಎನ್ನುತ್ತಾ ಸ್ವಾದಭರಿತ ರಸಗುಲ್ಲಾಗಳನ್ನು ‘ಸ್ವಾಹಾ’ ಮಾಡಿದೆವು. ರಸಗುಲ್ಲಾಗಳಲ್ಲದೇ ಹಾಲಿನಿಂದ ತಯಾರಿಸಿದ ಕೋವಾದಂತಹ ಇನ್ನಿತರ ಸಿಹಿತಿಂಡಿಗಳಿಗೂ ಪುರಿ ಮತ್ತು ಸುತ್ತಮುತ್ತಲಿನ ಜಾಗಗಳು ಪ್ರಸಿದ್ಧ.

ಕಟಕ್ ನಲ್ಲಿ ಬೆಳ್ಳಿಯ ಆಭರಣಗಳು ತುಂಬಾ ಸುಂದರವೂ ಉತ್ಕೃಷ್ಟವೂ ಆಗಿವೆ ಎನ್ನುವುದನ್ನು ಓದಿದ್ದೆ. ಬೆಳ್ಳಿ ಆಭರಣಗಳ ಬೀದಿಯ ಕಡೆಗೊಮ್ಮೆ ಕಣ್ಣು ಹಾಯಿಸಬೇಕೆಂಬ ಆಸೆಯಿತ್ತು. ಸಂತೋಷನಲ್ಲಿ “ಕಟಕ್ ಊರಿನೊಳಗೊಮ್ಮೆ ಕರ್ಕೊಂಡು ಹೋಗು ಮಾರಾಯ” ಎಂದರೆ, “ಅದು ತುಂಬಾ ಹಳೆಯ ಊರು, ರಸ್ತೆಗಳು ಕಿರಿದು, ಜನಸಂದಣಿಯೂ ಜಾಸ್ತಿ, ಈ ವ್ಯಾನಿನಲ್ಲಿ ಹೋಗುವುದು ಕಷ್ಟ” ಎಂದ. “ಇಲ್ಲಿಯ ‘ಫಿಲಿಗ್ರೀ’ (Filigree – ಎಳೆಗಳ ಕುಸುರಿ ಕೆಲಸದ) ಆಭರಣಗಳನ್ನು ಒಮ್ಮೆ ಕಣ್ಣಿಂದ ನೋಡಬೇಕಲ್ಲಾ” ಎಂದೆ. “ಅದಕ್ಕೇನಂತೆ, ಭುವನೇಶ್ವರದ ಪ್ರಸಿದ್ಧ ಮಳಿಗೆಗಳಲ್ಲೇ ಅವುಗಳು ಮಾರಾಟವಾಗುವುದು, ಅಲ್ಲಿಗೇ ಹೋಗೋಣವಂತೆ” ಎಂದ. ಹೀಗೆ ಸೀದಾ ಭುವನೇಶ್ವರದ ಬೆಳ್ಳಿಯಂಗಡಿಗೆ ಬಂದೆವು. ೩ ಅಂತಸ್ತುಗಳ ಬೃಹತ್ ಮಳಿಗೆ. ಕಾಲುಂಗರದಿಂದ ಹಿಡಿದು ಒಡಿಸ್ಸೀ ನೃತ್ಯಗಾರರು ಧರಿಸುವ ಆಭರಣಗಳವರೆಗೆ ಎಲ್ಲವೂ ಲಭ್ಯ. ೧೦೦-೨೦೦ ರೂಪಾಯಿಗಳಿಗೆ ಫಳಫಳ ಹೊಳೆಯುವ, ಮಧ್ಯದಲ್ಲಿ ಕಲ್ಲಿಟ್ಟು ಬೆಳ್ಳಿಯಲ್ಲಿ ಕಟ್ಟಿದ ಪುಟ್ಟಪುಟ್ಟ ಆಕರ್ಷಕ ಕಿವಿಯೋಲೆಗಳಿದ್ದವು. ಹಲವು ಸಾವಿರ ರೂಪಾಯಿಗಳವರೆಗಿನ ಬೆಳ್ಳಿಯ ಸರಗಳೂ ಇದ್ದವು. ಆಭರಣವನ್ನು ತೂಗಿ ಅದರ ಕ್ರಯ ಹೇಳುತ್ತಿದ್ದರು. ‘ಫಿಲಿಗ್ರೀ’ ಎಂಬ ಆಭರಣಗಳ ವಿಶೇಷತೆಯೆಂದರೆ ಅವುಗಳನ್ನು ಅಕ್ಕಸಾಲಿಗರು ಬಹಳ ತೆಳುವಾಗಿ ಎಳೆದ ಬೆಳ್ಳಿಯ ಸರಿಗೆಗಳಿಂದ ಕೈಯಿಂದಲೇ ಮಾಡುತ್ತಾರೆ. ಮೆಶಿನ್ ಗಳ ಬಳಕೆ ಇಲ್ಲ. ತುಂಬಾ ಸುಂದರವೂ ಕಲಾತ್ಮಕವೂ ಆದ ಆಭರಣಗಳಿವು.

ಅಲ್ಲಿಂದ ಮುಂದೆ ‘ಉತ್ಕಾಲಿಕಾ’ ಎಂಬ ಒಡಿಶಾ ಸರ್ಕಾರದ ಕೈಮಗ್ಗ, ಕರಕುಶಲ ವಸ್ತುಗಳ ಮಾರಾಟ ಮಳಿಗೆಗೆ ಭೇಟಿಕೊಡಬೇಕೆಂದು ಆಸೆಪಟ್ಟೆವು. ಭುವನೇಶ್ವರದ ರಸ್ತೆಗಳಲ್ಲೂ ಸಾಕಷ್ಟು ವಾಹನ ದಟ್ಟಣೆಯಿದ್ದು, ವ್ಯಾನಿಗಿಂತ ನಡಿಗೆಯೇ ಸುಲಭವೆಂದು ಮನೋಹರ್ ಅಭಿಪ್ರಾಯಪಟ್ಟರು. ಹೊಟ್ಟೆಯಲ್ಲಿದ್ದ ರಸಗುಲ್ಲಾ ಕೂಡಾ ‘ಹೂಂ’ಗುಟ್ಟಿತು. ಆದರೆ ದಾರಿ ಹುಡುಕುವುದು ಹೇಗೆ? ಸಂತೋಷನನ್ನೂ, ವ್ಯಾನನ್ನೂ ದೂರದಲ್ಲಿ ಒಂದೆಡೆ ತಂಗುದಾಣದಲ್ಲಿರಲು ಸೂಚಿಸಿದೆವು. ನಾವು ೬ ಜನ ಮಹಿಳಾಮಣಿಗಳು ಬಟ್ಟೆ ವ್ಯಾಪಾರಕ್ಕೆ ಹೊರಟೆವೆಂದರೆ ಸಂತೋಷನಿಗೂ ಗೊತ್ತಿತ್ತು ತನಗೆ ಸಾಕಷ್ಟು ಸಮಯಾವಕಾಶವಿದೆಯೆಂದು, ಅವ ಎಲ್ಲಿಗೋ ಹೋದ. ಈಗ ಮನೋಹರ್ ಧೈರ್ಯದಿಂದ ಜಿ.ಪಿ.ಎಸ್ ಹಾಕಿ ನಮಗೆ ಮಾರ್ಗದರ್ಶಿಯಾದರು. “ಇಲ್ಲೆ, ಇಲ್ಲೆ, ಹತ್ತಿರ, ಹತ್ತಿರ” ಎನ್ನುತ್ತಾ ಪುಸಲಾಯಿಸುತ್ತಾ ಎರಡು ಕಿ.ಮೀ ನಡೆಸಿದರು.

‘ಉತ್ಕಾಲಿಕಾ’ದಲ್ಲಿ ಕನ್ನಡ ಗೊತ್ತಿದ್ದ ಮ್ಯಾನೇಜರ್ ನಮ್ಮನ್ನು ವ್ಯಾಪಾರಕ್ಕೆ ಹುರಿದುಂಬಿಸಿದ. ನಾವು ಅಲ್ಲಿದ್ದಾಗ ಬೆಂಗಳೂರಿನಿಂದ ಬಂದಿದ್ದ ಕನ್ನಡಿಗರೊಬ್ಬರು ಸಿಕ್ಕರು. ಅವರಿಗೆ ಒಡಿಶಾದ ಮಗ್ಗದ ಬಟ್ಟೆಗಳು ತುಂಬಾ ಇಷ್ಟವಂತೆ, ಹಗುರವೂ, ಉತ್ತಮ ಗುಣಮಟ್ಟದವೂ ಆಗಿರುತ್ತವೆ ಎಂದರು. ಈಗ ಬೆಂಗಳೂರಿನಲ್ಲೂ ಸಿಗುತ್ತವೆ, ಆದರೆ ಇಲ್ಲಿರುವಷ್ಟು ವೈವಿಧ್ಯ ಅಲ್ಲಿರುವುದಿಲ್ಲ ಎಂದರು.

ಅಂಗಡಿ ಬಾಗಿಲು ಎಳೆಯುತ್ತೇವೆನ್ನುವಾಗ ಅಲ್ಲಿಂದ ಹೊರಬೀಳಲೇಬೇಕಾಯಿತು. ವಾಪಾಸು ಬರುವಾಗ ಸಂತೋಷ “ನಿಮ್ಮ ಮುಂದಿನ ಕಾರ್ಯಕ್ರಮಗಳಿಗೆ ನಾನು ಬರಲಿಕ್ಕಾಗುವುದಿಲ್ಲ. ನಾಳೆಯಿಂದ ಬದಲಿ ವ್ಯವಸ್ಥೆ ಮಾಡಿದ್ದೇನೆ” ಎಂದ “ಯಾಕೆ?” ಎಂದು ಕೇಳಿದ್ದಕ್ಕೆ “ಗಾಡಿಯಲ್ಲಿ ಏನೋ ತೊಂದರೆ ಇದೆ, ರಿಪೇರಿಗೆ ಹೋಗಬೇಕು” ಎಂದ. “ನಾವು ಅಂಗಡಿಯಲ್ಲಿದ್ದಾಗ ಏನೋ ಮಸಲತ್ತು ಮಾಡಿದ್ದಾನೆ, ಗರ್ಲ್ ಫ್ರೆಂಡ್ ಜತೆಗೆ ತಿರುಗಾಟಕ್ಕೆ ಇರಬಹುದೇನೊ, ನಾಳೆ ಶನಿವಾರ, ಆಕೆಗೂ ರಜೆ ಅಂತ ಕಾಣ್ತದೆ” ಎಂದು ಸಣ್ಣಗೆ ನಕ್ಕೆವು.

(ಮುಂದುವರಿಯಲಿದೆ)