ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ
ಒಡಿಶಾದ ಒಡಲೊಳಗೆ ಅಧ್ಯಾಯ (೯)


ಭುವನೇಶ್ವರದಲ್ಲಿ ಈಗಾಗಲೇ ೩ ಇರುಳು ಕಳೆದಿದ್ದರೂ ನಗರ ಪ್ರದಕ್ಷಿಣೆಯಾಗಿರಲಿಲ್ಲ. ನವೆಂಬರ್ ೨೬ರ ದಿನವನ್ನು ಅದಕ್ಕಾಗಿಯೇ ಇಟ್ಟಿದ್ದೆವು. ಡ್ರೈವರ್ ಬದಲಾವಣೆಯಾಗಿ ಅಂದು ನಮ್ಮನ್ನು ಚಾಲಕ ಸಂಗ್ರಾಮಸಿಂಗ್ ಸುತ್ತಿಸುವವನಿದ್ದ. ವ್ಯಾನ್ ಏರುವಾಗಲೇ ಆತ ಅನ್ವರ್ಥಕನಾಮಧಾರಿಯೆಂದು ಅರಿವಾಯಿತು. ಅದಾಗಲೇ ವ್ಯಾನಿನ ಹಿಂಬದಿ, ಹೋಟೆಲಿನ ಆವರಣ ಗೋಡೆಗೆ ಮುತ್ತಿಕ್ಕಿ ಕಿಟಿಕಿ ಗಾಜು ಪುಡಿಯಾಗಿತ್ತು. ಆ ದಿನ ನಾವು ನೋಡಲಿಕ್ಕಿರುವ ಜಾಗಗಳನ್ನು ಆತನಿಗೆ ತಿಳಿಸಿದೆ. ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ.

ಕ್ರಿಸ್ತಪೂರ್ವ ೪ನೆ ಶತಮಾನದಷ್ಟು ಹಿಂದಿನ ಚರಿತ್ರೆಗಳ ದಾಖಲೆ ಹೊಂದಿರುವ ಭುವನೇಶ್ವರ, ‘ದೇವಸ್ಥಾನಗಳ ನಗರ’ ಎಂದೇ ಹೇಳಬಹುದು. ಸುಮಾರು ೧೫ನೇ ಶತಮಾನದಲ್ಲಿ ಮೊಘಲರ ದಾಳಿಯಿಂದ ಇಲ್ಲಿದ್ದ ಹೆಚ್ಚಿನ ದೇವಸ್ಥಾನಗಳೆಲ್ಲ ನಾಶವಾದರೂ ಈಗ ಸುಮಾರು ೫೦೦ ರಷ್ಟು ಸುತ್ತಮುತ್ತಲಿವೆಯೆಂದು ಒಡಿಶಾ ಪ್ರವಾಸೋದ್ಯಮ ಜಾಲತಾಣ ತಿಳಿಸುತ್ತದೆ.

ಮೊತ್ತಮೊದಲಿಗೆ ನಾವು ರಾಜಾರಾಣಿ ದೇವಸ್ಥಾನ ನೋಡಲು ಹೋದೆವು. ಇದು ತನ್ನ ಸುಂದರ ಕೆತ್ತನೆಗಳಿಗೆ ಹೆಸರುವಾಸಿ. ರಾಜಾರಾಣಿ ಎಂಬುದು ಆ ದೇವಸ್ಥಾನವನ್ನು ಕಟ್ಟಿದ ಕಲ್ಲಿನ ಹೆಸರು. ಇದು ಈಗ ಯುನೆಸ್ಕೊ ಪರಂಪರೆ ತಾಣಗಳ ಗುಂಪಿಗೆ ಸೇರಿದೆ. ಅಂದರೆ ಅಲ್ಲಿ ಪೂಜೆ ನಡೆಯುವುದಿಲ್ಲ. ಪೂಜೆ ಇಲ್ಲವೆಂದಮೇಲೆ ಜನರೆಲ್ಲಿಂದ? ನಾವು ೯ ಜನ ಪ್ರವಾಸಿಗರು ಮಾತ್ರವೇ. ದೇವಸ್ಥಾನದ ಆವರಣದಲ್ಲಿದ್ದ ಸುಂದರ ಹುಲ್ಲುಹಾಸನ್ನು ನೋಡಿಕೊಳ್ಳುತ್ತಿದ್ದ ಮಾಲಿ ಅವನ ಪಾಡಿಗೆ ಕೆಲಸದಲ್ಲಿ ನಿರತನಾಗಿದ್ದ. ನಮಗೆ ವೀಕ್ಷಕ ವಿವರಣೆ ಕೊಡುವವರು ಯಾರೂ ಇರಲಿಲ್ಲ. ನಾವು ಊರಿಂದ ಬರುವಾಗ ತಂದಿದ್ದ ‘ಪೇಪರ್ಗೈಡ್’ನ್ನು ಹಿಡಿದು ಒಬ್ಬರು ಓದುತ್ತಾ ಹೋಗುವುದು, ಉಳಿದವರು ಅದರಲ್ಲಿದ್ದ ಶಿಲ್ಪಗಳು, ಅವುಗಳ ವಿಶೇಷತೆಗಳನ್ನೆಲ್ಲ ಹುಡುಕುತ್ತಾ ಹೋದೆವು.

ಮೊದಲು ದೇವಸ್ಥಾನದ ಹೊರಗೋಡೆಯ ಮೇಲಿದ್ದ ಸುಂದರವಾದ ಶಿಲ್ಪಗಳನ್ನು ನೋಡಿ ಖುಶಿಪಟ್ಟೆವು. ೧೮ ಮೀಟರ್ ಎತ್ತರದ ಶಿಖರದಲ್ಲಿ ಅಷ್ಟ ದಿಕ್ಪಾಲಕರನ್ನು ಎಂಟು ಮೂಲೆಗಳಲ್ಲಿ, ಅವರಿಗೆ ಸಂಬಂಧಿಸಿದ ವಿಶೇಷಗಳ ಸಹಿತ ಕೆತ್ತಿದ್ದಾರೆ. ಉಳಿದಂತೆ ನಾಗನಾಗಿಣಿಯರು, ಶಿಲಾಬಾಲಿಕೆಯರ ನೃತ್ಯಭಂಗಿಗಳು, ಕಲಾವಿದರ ಮುಖಭಾವ, ಲಾಸ್ಯ ಎಲ್ಲವೂ ಸುಂದರವಾಗಿವೆ. ಸಾಕಷ್ಟು ಕೆತ್ತನೆಗಳು ಅದರಲ್ಲೂ ನಗ್ನವಾದವುಗಳನ್ನು ಭಗ್ನಮಾಡಿದ್ದನ್ನು ಗುರುತಿಸಬಹುದು.

ದೇವಸ್ಥಾನದ ಹೊರಗೋಡೆ ವೃತ್ತಾಕಾರದ ಭಾವನೆ ಕೊಟ್ಟರೂ ಒಳಗಡೆ ಗರ್ಭಗುಡಿ ಚೌಕಾಕಾರದಲ್ಲಿ ಇದೆಯಂತೆ. ಒಳಗೆ ನೋಡೋಣವೆಂದರೆ ಬರೀ ಬಾವಲಿಗಳದ್ದೇ ಸಾಮ್ರಾಜ್ಯ. ಗರ್ಭಗುಡಿ, ಜಗಮೋಹನ, ನಾಟ್ಯಮಂದಿರಗಳೆಲ್ಲ ಸುಂದರ ವಿನ್ಯಾಸದಲ್ಲಿ ಇವೆಯಾದರೂ ಒಳಹೋಗಲು ಮನಸ್ಸೇ ಬಾರದಂತೆ ಪರಂಪರಾ ತಾಣ ಸಂರಕ್ಷಿಸಲ್ಪಟ್ಟಿದೆ – ಹೊರಲೋಕದ ಲೌಕಿಕ ಪ್ರಪಂಚದಲ್ಲೇ ಉಳಿಯಲು ಬಯಸುವ, ಒಳನೋಟಕ್ಕೆ, ಅಂತರ್ಯಾನಕ್ಕೆ ಎಳಸದ ಇಂದಿನ ಮನಸ್ಸುಗಳ ಸಂಕೇತವೆಂಬಂತೆ.
ಇಲ್ಲಿಂದ ಮುಂದೆ ಲಿಂಗರಾಜ ದೇವಸ್ಥಾನಕ್ಕೆ ಹೋದೆವು. ತ್ರಿಭುವನೇಶ್ವರನೆಂದೂ ಕರೆಯಲ್ಪಡುವ ಇಲ್ಲಿಯ ದೇವರು ಮೊದಲು ಒಂದು ಮಾವಿನ ಮರದ (ಏಕಾಮ್ರ) ಬುಡದಲ್ಲಿ ಸಿಕ್ಕಿದ ಕಾರಣ ಇದು ‘ಏಕಾಮ್ರಕ್ಷೇತ್ರ’ವೂ ಹೌದು. ಹೀಗೆ ಭೂಮಿ, ವನ ಮತ್ತು ಈಶ್ವರರು ಸೇರಿದ ಭುವನೇಶ್ವರ. ಲಿಂಗರಾಜ ಮಂದಿರದಲ್ಲಾದರೋ ಎಲ್ಲೆಂದರಲ್ಲಿ ಗುಡಿಗಳು, ಭಕ್ತರು, ಪಾಂಡಾಗಳು. ಸೆಕ್ಯೂರಿಟಿ ಗಾರ್ಡ್‍ಗಳು. ದೇವಸ್ಥಾನ ಜನರಿಂದ ತುಂಬಿ ಗಿಜಿಗುಡುತ್ತಿತ್ತು. ೧೧ನೇ ಶತಮಾನದ ಈ ದೇವಸ್ಥಾನದಲ್ಲಿ ಗರ್ಭಗುಡಿ, ಜಗಮೋಹನ, ನಾಟ್ಯಮಂದಿರಗಳಲ್ಲದೇ ಭೋಗಮಂಟಪವೂ ಸೇರ್ಪಡೆಯಾದುದನ್ನು ಕಾಣಬಹುದು. ಹೊರ ಗೋಡೆಗಳ ಕೆತ್ತನೆ, ಶಿಖರ, ಅದರ ತುಂಬಾ ಕೆತ್ತನೆಗಳು, ಯಮಧರ್ಮರಾಯನೂ ಸೇರಿದಂತೆ ಹೆಚ್ಚಿನ ಎಲ್ಲಾ ದೇವರುಗಳಿಗೆ ನಿರ್ಮಿತವಾದ ಸುಮಾರು ೧೫೦ ಗುಡಿಗಳು, ಕಳಿಂಗ ಶೈಲಿಯ ೧೮೦ ಅಡಿ ಎತ್ತರದ ಚೂಪು ಶಿಖರ. ಶಿಖರದ ಶಿಲ್ಪಗಳಲ್ಲಿ ಮುಖಕ್ಕೆ ಬೂದಿ ಬಳಿದ ನಾಗಾ ಸಾಧುಗಳ ಕೆತ್ತನೆ, ಶಾಕ್ತ ಪರಂಪರೆಗೆ ಸಂಬಂಧಿಸಿದ ಕೆತ್ತನೆಗಳನ್ನೂ ಕಂಡೆ.

ಕೆಂಪುಕಲ್ಲಿನಲ್ಲಿ ಕಟ್ಟಿದ ಗುಡಿಗಳು, ಏಳೂವರೆ ಅಡಿ ದಪ್ಪದ ಕೆಂಪುಕಲ್ಲಿನ ಆವರಣ ಗೋಡೆ, ಅದರ ಮೇಲೆ ಇಳಿಜಾರಿನ ಕೆಂಪುಕಲ್ಲಿನ ಪಟ್ಟಿ ಮುಂತಾದ ವೈಶಿಷ್ಟ್ಯಗಳನ್ನು ಕಂಡೆವು. ಪೂಜೆ, ಆರತಿ, ಅರ್ಚನೆ, ಧೂಪ, ಅಲಂಕಾರಗಳಿಂದ ದೇವಸ್ಥಾನದಲ್ಲಿ ಜೀವಕಳೆ ತುಂಬಿತ್ತು. ಎಲ್ಲೆಂದರಲ್ಲಿ ಮೂರ್ತಿಗಳ ಸ್ಥಾಪನೆ ಮಾಡಿ ಮೂಲ ಸೌಂದರ್ಯಕ್ಕೆ ಧಕ್ಕೆ ತರುವಂತಹ ಕೆಲಸವೂ ಸಾಕಷ್ಟು ನಡೆದಿತ್ತು. ಇಲ್ಲಿ ಛಾಯಾಚಿತ್ರ ತೆಗೆಯಲು ಅವಕಾಶವಿಲ್ಲ.

ಲಿಂಗರಾಜ ದೇವಾಲಯದ ಇನ್ನೊಂದು ವಿಶೇಷವಿರುವುದು ಹರಿಹರರಿಬ್ಬರನ್ನು ಒಟ್ಟಿಗೇ ಸಂಕೇತಿಸುವ ಲಿಂಗದಲ್ಲಿ. ಶಿವಲಿಂಗದ ಮಧ್ಯ ಭಾಗದಲ್ಲಿ ಬೆಣ್ಣೆಯಂತಹ ಲಿಂಗವಿದ್ದು ಇದು ಹರಿಯನ್ನು ಪ್ರತಿನಿಧಿಸುತ್ತದೆ. ದೇವಸ್ಥಾನದ ಶಿಖರದ ತುದಿಯಲ್ಲಿ ಕವುಚಿದ ಗಂಟೆಯಾಕಾರದ ರಚನೆ, ಅದರ ಮೇಲೆ ಕಲಶ, ಅದರ ಮೇಲೆ ಲೋಹದಲ್ಲಿ ಮಾಡಿದ ಬಿಲ್ಲಿನಾಕಾರದ ತ್ರಿಶೂಲವಿದ್ದು ಇದೂ ಹರಿಹರರ ಸಂಕೇತವಿರಬೇಕು. ಇದರ ಮೇಲೆ ಧ್ವಜ ಹಾರಾಡುತ್ತಿತ್ತು. ಒಡಿಶಾದ ಪ್ರಮುಖ ದೇವಾಲಯಗಳಲೆಲ್ಲಾ ಈ ರೀತಿ ಚೂಪಾದ, ಎತ್ತರದ ಶಿಖರ ಅದರ ಮೇಲೆ ಲೋಹದ ಆಯುಧ, ಅದರ ಮೇಲೆ ಧ್ವಜ ಹಾರಾಡುತ್ತಿರುವುದನ್ನು ನೋಡಿದೆ.

ಲಿಂಗರಾಜ ದೇವಸ್ಥಾನದಲ್ಲಿ ಪಾಂಡಾಗಳು ‘ಗೈಡ್’ಗಳಾಗಿ ಬರಲು ಮುಗಿಬೀಳುತ್ತಿದ್ದರು. ರಾಜಾರಾಣಿಯಲ್ಲಿ ಅನಾವೃಷ್ಟಿಯಾದರೆ ಇಲ್ಲಿ ಅತಿವೃಷ್ಟಿ! ಕಳಿಂಗ ಶೈಲಿಯ ದೇವಸ್ಥಾನಗಳ ವಿಶೇಷತೆ, ವಾಸ್ತುವಿನ್ಯಾಸ, ಶಿಲ್ಪವೈವಿಧ್ಯ, ಅರ್ಥ, ಸಂಕೇತಗಳು, ಕ್ರಮಗಳನ್ನೆಲ್ಲಾ ಸರಿಯಾಗಿ ವಿವರಿಸುವ ಸಮವೃಷ್ಟಿಗಾಗಿ ಮನ ಹಾತೊರೆಯುತ್ತಿತ್ತು. ಈ ಹಾರೈಕೆಯೂ ಬೇಗನೇ ಈಡೇರಿದ್ದು ನಿಜಕ್ಕೂ ದೇವರ ಕೃಪೆಯೇ!

ಲಿಂಗರಾಜ ದೇವಸ್ಥಾನದಿಂದ ಹೊರಟು ಸಿದ್ಧೇಶ್ವರ, ಮುಕ್ತೇಶ್ವರ, ಪರಶುರಾಮೇಶ್ವರ ಹೀಗೆ ಇನ್ನೂ ಹಲವು ದೇವಾಲಯಗಳಿರುವ ಸಮೂಹಕ್ಕೆ ಬಂದೆವು ನಮ್ಮ ಪೇಪರ್ ಗೈಡಿನ ಜೊತೆಗೆ. ನಾವು ಅಂತರ್ಜಾಲದಿಂದ ಭಟ್ಟಿಯಿಳಿಸಿ, ಮುದ್ರಿಸಿ ತಂದ ಕಾಗದದ ಹಾಳೆಗಳನ್ನು ತಿರುವುತ್ತಾ ಅದರಲ್ಲಿ ಕೊಟ್ಟ ಇಂಗ್ಲೀಷ್ ಪದಗಳಿಗೆ ನಮ್ಮ ಭಾಷೆಯ ಪರ್ಯಾಯ ಪದಗಳನ್ನು ಹಾಕುತ್ತಾ ಕತ್ತು ತಿರುವುತ್ತಾ ಕುತ್ತಿಗೆ ಎತ್ತುತ್ತಾ ಸರ್ಕಸ್ ಮಾಡುತ್ತಿರುವುದನ್ನು ಮುಕ್ತೇಶ್ವರದ ಒಬ್ಬ ಅರ್ಚಕರು ನೋಡುತ್ತಿರುವುದನ್ನು ನಾವೂ ಗಮನಿಸಿದೆವು. ಆದರೆ ಪಾಂಡಾಗಳನ್ನು ಕಣ್ಣೆತ್ತಿಯೂ ನೋಡಬಾರದೆಂಬ ಮೂಲ ಪಾಠವಿತ್ತಲ್ಲಾ. ಹಾಗಾಗಿ ನಮ್ಮಷ್ಟಕ್ಕೇ ನಾವು ಒದ್ದಾಡುತ್ತಾ ಇರುವಾಗ ಅವರು ನಮ್ಮ ಸಮೀಪ ಬಂದು “ನೋಡಿ, ಕ್ರಿಸ್ತ ಶಕ ೯೦೦ರಲ್ಲಿ ಕಟ್ಟಲ್ಪಟ್ಟ ದೇವಸ್ಥಾನ. ಇದು ಸುಂದರ ಕೆತ್ತನೆಗಳ ಕಲ್ಲಿನ ತೋರಣ, ಇಲ್ಲಿನ ವಿಶೇಷ. ಇದು ಪಶ್ಚಿಮಕ್ಕೆ ಮುಖ ಮಾಡಿ ಅಸ್ತಮಿಸುವ ಸೂರ್ಯನ ಕಿರಣಗಳು ಒಳ ಬರುವಂತೆ ರಚಿತವಾದ ಗರ್ಭಗುಡಿ. ಈ ಗುಡಿಯಲ್ಲಿ ವಿಮಾನ, (ಗರ್ಭಗುಡಿ), ಜಗಮೋಹನ, ನಾಟ್ಯಮಂದಿರಗಳಿವೆ. ಭೋಗಮಂಟಪವಿಲ್ಲ. ಇಲ್ಲಿ ಕಲ್ಲಿನ ಕೆತ್ತನೆಗಳನ್ನು ಗೋಡೆ, ಕಂಬ ಮಾತ್ರವಲ್ಲ, ಒಳಭಾಗದ ಮೇಲ್ಛಾವಣಿಯಲ್ಲೂ ಕಾಣುವಿರಿ. ಮೇಲೆ ನೋಡಿ ಅಲ್ಲಿ ಎಂಟು ದಳಗಳ ತಾವರೆಯ ಕೆತ್ತನೆಯಿದೆ,” ಎಂದು ಒಳಗೆ ಕರೆದುಕೊಂಡು ಹೋದರು. ಅಲ್ಲಿ ಶಿವಲಿಂಗದ ಎದುರು ಕುಳಿತು ಇನ್ನೊಬ್ಬ ಅರ್ಚಕರು ಮತ್ತು ಭಕ್ತದಂಪತಿ ಪೂಜೆ ಮಾಡುತ್ತಿದ್ದರು.

ಮುಂದೆ ನಮ್ಮನ್ನು ದೇವಸ್ಥಾನದ ಸುತ್ತಲೂ ಕರೆದುಕೊಂಡು ಹೋಗಿ ಬ್ರಹ್ಮ, ವಿಷ್ಣು, ಮಹೇಶ್ವರ – ಹೀಗೆ ತ್ರಿಮೂರ್ತಿಗಳು ಸ್ಥಿತರಾಗಿರುವ ಲಿಂಗ, ವ್ಯಾಲಮೃಗದಮೇಲೆ ಕುಳಿತವೀರನಾರಿ, ಈ ದೇವಸ್ಥಾನ ಕಟ್ಟಡ ನಿರ್ಮಾಣದಲ್ಲಿ ಕಲ್ಲು ಹೊತ್ತ ಪುರುಷ, ಸ್ತ್ರೀ ಕಾರ್ಮಿಕರು, ಒಂದೇ ಕೆತ್ತನೆಯಲ್ಲಿ ಮೂರು ರೀತಿಯ ಪ್ರಾಣಿಗಳು, ಪಂಚತಂತ್ರ ಕಥೆಗಳು, ಚೀನೀ ಮುಖದವರು, ಒಂದೇ ಮೂರ್ತಿಯಲ್ಲಿ ೨ ದೇಹ ಯೋಗ ಮಾಡುತ್ತಿರುವ ರಚನೆ, ಸ್ತ್ರೀಶಿಲ್ಪಗಳ ಸುಂದರ ಆಭರಣ ವಿನ್ಯಾಸಗಳು ಮುಂತಾದವುಗಳನ್ನೆಲ್ಲಾ ತೋರಿಸಿದರು. ಅವರ ವಿವರಣೆ ಕೇಳಿ ಅವಾಕ್ಕಾದೆವು.

ನಾವೀಗಾಗಲೇ ನೋಡಿದ್ದ ಪುರಿ, ಕೋನಾರ್ಕ, ರಾಜಾರಾಣಿ, ಲಿಂಗರಾಜಗಳಲ್ಲದೇ ಆ ಭಾಗದಲ್ಲಿರುವ ನೂರಾರು ದೇವಸ್ಥಾನಗಳಲ್ಲಿರುವ ಇಂತಹ ಎಷ್ಟೊಂದು ಶಿಲ್ಪಗಳು, ಸಂಕೇತಗಳು, ಕತೆಗಳು, ಜನಪದರು ದಾಖಲಾಗಿರಬಹುದು! ಯಾವುದೇ ವಿಷಯವನ್ನು ಆಳವಾಗಿ ಅಧ್ಯಯನ ಮಾಡದೇ ನಮ್ಮ ಸಂಸ್ಕೃತಿ, ಪರಂಪರೆ, ಕಲೆ, ಮನೋಭಾವ, ಸಾಮರ್ಥ್ಯಗಳ ಬಗ್ಗೆ ಲಘುವಾಗಿ ಟೀಕೆ ಟಿಪ್ಪಣಿಗಳನ್ನು ಹರಿಬಿಡುವಾಗ ಆಗುವ ಅನರ್ಥ ಎಂತಹದು ಎಂದು ಬೇಸರವಾಯಿತು. ವಿದೇಶೀ ಆಕ್ರಮಣಪೂರ್ವದ ಪುರಾತನ ಭಾರತದಲ್ಲಿದ್ದ ಜನಜೀವನ, ಧರ್ಮ, ಆಚರಣೆಗಳ ಅರಿವು ನಮ್ಮೊಳಗಿರುವ ಕೀಳರಿಮೆ, ತಪ್ಪುಕಲ್ಪನೆಗಳನ್ನು ತಿದ್ದಿಕೊಳ್ಳಲು, ಈ ನೆಲದಲ್ಲಿ ಪೂರ್ವಗ್ರಹ ರಹಿತ ವಿದ್ವಾಂಸರ ಮುಕ್ತ ಮನಸ್ಸಿನ ನೋಟಕ್ಕೆ ಅವಕಾಶವಿದೆಯೆನಿಸಿತು. ನಾವು ಕಳೆದುಕೊಂಡದ್ದೆಷ್ಟು, ಪಡೆದುಕೊಂಡದ್ದೆಷ್ಟು ಎನ್ನುವ ಲೆಕ್ಕಾಚಾರಗಳ ಜತೆಗೇ ತಾಳಿಕೊಂಡದ್ದೆಷ್ಟು, ಉಳಿಸಿಕೊಂಡದ್ದೆಷ್ಟು ಎನ್ನುವುದನ್ನೂ ನೋಡಬೇಕಾಗುತ್ತದೆ ಎನಿಸಿತು.

ಇಲ್ಲಿಂದ ಮುಂದೆ ಅಲ್ಲೇ ಪಕ್ಕದಲ್ಲಿರುವ ಸಿದ್ಧೇಶ್ವರ ದೇವಸ್ಥಾನಕ್ಕೆ ಕರೆದುಕೊಂಡು ಹೋದರು. ಇದು ಪೂರ್ವಕ್ಕೆ ತೆರೆದುಕೊಂಡಿದ್ದು ಬೆಳಗಿನ ಸೂರ್ಯಕಿರಣಗಳು ಲಿಂಗಕ್ಕೆ ತಾಕುವಂತೆ ರಚಿತವಾಗಿದೆ. ಇಲ್ಲಿನ ಲಿಂಗದ ವೈಶಿಷ್ಟ್ಯವೆಂದರೆ ನಾವು ಲಿಂಗವನ್ನು ಮುಟ್ಟಿ ಪ್ರಾರ್ಥಿಸಬಹುದು. ಹೀಗೆ ಮುಟ್ಟಿದಾಗ ಲಿಂಗದಲ್ಲಿ ಎರಡು ಭಾಗಗಳಿರುವುದು ಗೊತ್ತಾಗುತ್ತದೆ.ಇದೂ ಕೂಡಾ ಹರಿಹರರನ್ನು ಜೊತೆಯಾಗಿ ಪೂಜಿಸುವ ಆಚರಣೆಗೆ ಸೇರಿದೆ. ನಮಗೆ ಇಷ್ಟೆಲ್ಲಾ ವಿವರ ಕೊಟ್ಟ ಅರ್ಚಕರ ಹೆಸರು ಮನೋಜ್ ಎಂದು. ಇದುವರೆಗೆ ಶುದ್ಧ ಇಂಗ್ಲೀಷಿನಲ್ಲಿ ಮಾತಾಡುತ್ತಿದ್ದವರು ಈಗ ಇಂಪಾದ ಸಂಸ್ಕೃತದಲ್ಲಿ ಪೂಜೆ ನೆರವೇರಿಸಿಕೊಟ್ಟರು. ಸಿದ್ಧೇಶ್ವರನಲ್ಲಿ ಸ್ವಲ್ಪ ಹೊತ್ತು ಧ್ಯಾನಸ್ಥರಾಗಿ ಕುಳಿತೆವು. ಸುತ್ತಲಿನ ಶಾಂತತೆ, ಆವಾಗಾವಾಗ ಕೇಳಿ ಬರುತ್ತಿದ್ದ ಗಂಟೆಯ ಸದ್ದು, ನಮ್ಮ ಪೂರ್ವಿಕರ ಬುದ್ಧಿಮತ್ತೆ, ಶ್ರಮ, ಸಂಸ್ಕೃತಿ, ಸಹಬಾಳ್ವೆಗಳ ಬಗೆಗಿನ ಅರಿವು ಮೂಡಿಸಿದ ಹೆಮ್ಮೆ ಯಾವುದೇ ದುಡ್ಡಿನ ಲೇಪವಿಲ್ಲದೆ ನಡೆದ ಸೇವೆ ಎಲ್ಲವೂ ಅನಿರ್ವಚನೀಯವಾದ ಆನಂದವನ್ನು ಕೊಟ್ಟವು. ನಾವು ಬೀಳ್ಕೊಡುವ ಮುನ್ನ ವ್ಯಾವಹಾರಿಕ ಶಿಷ್ಟಾಚಾರಕ್ಕಾದರೂ ಕಾಣಿಕೆ ಸ್ವೀಕರಿಸಲು ಮನೋಜರನ್ನು ಕೇಳಿದೆವು, ಅವರು ನಿರಾಕರಿಸಿದರು. ಆಸಕ್ತ ಭಕ್ತಾದಿಗಳಿಗೆ ತಿಳಿಸಿಕೊಡುವುದು ತಮ್ಮ ಖುಶಿಯ ಕಾಯಕವೆಂದರು.

ಅಲ್ಲಿಂದ ಮುಂದೆ ಸಮೀಪದ ಪರಶುರಾಮೇಶ್ವರ ದೇವಸ್ಥಾನಕ್ಕೆ ಬಂದೆವು. ಇದು ಒಂದು ಪುರಾತನ ದೇವಾಲಯ, ಕ್ರಿಸ್ತ ಶಕ ೬೫೦ರಲ್ಲಿ ರಚಿತವಾದದ್ದು. ಇಲ್ಲಿನ ದೇವಸ್ಥಾನದ ರಚನೆ, ಕೆತ್ತನೆಗಳು ಉಳಿದವುಗಳಿಗೆ ಹೋಲಿಸಿದರೆ ಸರಳವಾಗಿ ಕಾಣುತ್ತವೆ. ಶಿವನ ದೇವಾಲಯವಾದರೂ ಶಕ್ತಿರೂಪಿಣಿಯರಾದ ಸಪ್ತ ಮಾತೃಕೆಯರ ಕೆತ್ತನೆಗಳನ್ನು ಕಾಣಬಹುದು. ಇದು ಶಾಕ್ತ ಪರಂಪರೆಯ ಸಂಕೇತವೆಂದು ಹೇಳುತ್ತಾರೆ. ಗಣೇಶ, ಸುಬ್ರಹ್ಮಣ್ಯರ ಕೆತ್ತನೆಗಳೂ ಇವೆ. ಅಲಂಕಾರಿಕ ಬಳ್ಳಿ, ಹೂಗಳು, ಇತರ ಕೆತ್ತನೆಗಳು ಸುಂದರವಾಗಿದ್ದು, ಆರಂಭಿಕ ದಿನಗಳ ಸರಳತೆಯ ದಾಖಲೆಯಾಗಿವೆ.

ಒಡಿಶಾದಲ್ಲಿ ಕ್ರಿಸ್ತ ಪೂರ್ವದ ಕೆಲ ಶತಮಾನಗಳಿಂದ ಆರಂಭವಾದ ಜೈನ, ಬೌದ್ಧ, ಶೈವ, ಶಾಕ್ತ, ವೈಷ್ಣವ ಮಂದಿರಗಳು ಮುಂದೆ ವಿಕಸಿಸುತ್ತಾ ಹೋದ ವಿವಿಧ ಹಂತಗಳ ರಚನೆಗಳನ್ನು ಕಳಿಂಗ ಭಾಗದಲ್ಲೇ ಕಾಣಬಹುದು. ಮೊದಲು ರಚಿತವಾದ ಪರಶುರಾಮೇಶ್ವರ ದೇವಸ್ಥಾನದಲ್ಲಿ ಗರ್ಭಗುಡಿ, ಜಗಮೋಹನಗಳೆರಡೇ ಇದ್ದರೆ, ರಾಜಾರಾಣಿ, ಮುಕ್ತೇಶ್ವರಗಳಲ್ಲಿ ಇವೆರಡರ ಜತೆ ನಾಟ್ಯ ಮಂದಿರವೂ ಇದೆ. ಹಾಗಾಗಿ ಈ ದೇವಸ್ಥಾನಗಳ ಸಮ್ಮುಖದಲ್ಲಿ ನೃತ್ಯ, ಸಂಗೀತ ಉತ್ಸವಗಳು ನಡೆಯುತ್ತವೆ. ಮುಂದೆ ಲಿಂಗರಾಜ, ಪುರಿ, ಕೋನಾರ್ಕಗಳಲ್ಲಿ ನಾಲ್ಕನೆಯ ರಚನೆಯಾದ ಭೋಗಮಂಟಪ – ಆಹಾರದ ಮೂಲಕ ದೇವರನ್ನು ಸಂತೃಪ್ತಿಗೊಳಿಸುವ ಆಚರಣೆ ಸೇರಿಕೊಂಡಿತು. ಇದಕ್ಕೆ ಅಗತ್ಯವಿರುವ ಸಾಮೂಹಿಕ ಊಟ ತಯಾರಿಯ ಅಡಿಗೆಮನೆಗಳೂ ಸೇರಿಕೊಂಡವು. ಸಮೂಹ ಜೀವನ, ಸಹಬಾಳ್ವೆಗೆ ಉದಾಹರಣೆಯಾದವು. ಆದರೆ ಅತ್ಯಂತ ವಿಕಸಿತವಾದ ಸಂಕೀರ್ಣವಾದ ಭವ್ಯ, ದಿವ್ಯ ಅದ್ಭುತವೆನಿಸುವ ಕಳಿಂಗದ ಉತ್ತುಂಗ ರಚನೆಯಾದ ಕೋನಾರ್ಕ ಮಾತ್ರ ಗರ್ಭಗುಡಿಯನ್ನೂ ದೇವರ ವಿಗ್ರಹವನ್ನೂ ಕಳೆದುಕೊಂಡು ನಮ್ಮ ಹಿರಿಮೆಯ ಅವಶೇಷದ ರೂಪವಾದದ್ದು, ಇಂದಿನ ಮನಸ್ಥಿತಿಯ ವಿಡಂಬನೆಯಾದದ್ದು ಒಂದು ವಿಪರ್ಯಾಸ ಹಾಗೂ ಅತ್ಯಂತ ಖೇದಕರ.

(ಮುಂದುವರಿಯಲಿದೆ)