ಮೇಘಾಲಯದ ಗಿರಿಕೊಳ್ಳಗಳಲ್ಲಿ – ೪

ಫೆಬ್ರವರಿ ಎಂಟರ ಬೆಳಗ್ಗಿನಿಂದ ಹನ್ನೆರಡರ ರಾತ್ರಿಯವರೆಗೆ ಎಲ್ಲರು ಯೂಥ್ ಹಾಸ್ಟೆಲ್ಸ್ ಯೋಜಿಸಿದ್ದ ಕಲಾಪಗಳಲ್ಲೇ ಭಾಗಿಯಾಗಿದ್ದೆವು. ಅದರ ಮೇಲೆ ಒಂದು ದಿನವನ್ನು ಅವರು ನಮ್ಮ ಸ್ವತಂತ್ರ ಓಡಾಟಕ್ಕೂ ಹಾಸ್ಟೆಲ್ಲಿನ ಎಲ್ಲ ಸೌಲಭ್ಯಗಳನ್ನು (ಬುತ್ತಿ ಒಯ್ಯುವ ಆಹಾರ ಸಹಿತ) ಉಚಿತವಾಗಿಯೇ ಮುಕ್ತಗೊಳಿಸಿದ್ದರು. ನಾವಾದರೂ (ಆರು ಮಂದಿ) ತಲೆಯೊಳಗೆ ಹತ್ತೆಂಟು ಹೆಸರುಗಳ ಗೋಜಲಷ್ಟೇ ಇಟ್ಟುಕೊಂಡು, ಬೆಂಗಳೂರು ಹಾರಾಟಕ್ಕೆ (೧೬-೨) ಮುನ್ನ ನಾಲ್ಕು ಹಗಲುಗಳನ್ನೇ ಉಳಿಸಿಕೊಂಡಿದ್ದೆವು. ಸಂಘಟಕರ ಸಲಹೆ, ಇತರ ಶಿಬಿರವಾಸಿಗಳ ಒಲವು ನೋಡಿಕೊಂಡು, ಮೊದಲ ದಿನಕ್ಕೆ ಡಾವ್ಕೀಯಲ್ಲಿ ಉನ್ಗೊಟ್ ನದಿ ವಿಹಾರ, ಬಾಂಗ್ಲಾ ಗಡಿ ದರ್ಶನ ಮತ್ತು ಹಿಂದಿರುಗುವ ದಾರಿಯಲ್ಲಿ ‘ಸ್ವಚ್ಛ ಹಳ್ಳಿ’ ಎಂದೇ ಪ್ರಚಾರದಲ್ಲಿರುವ ಮೌಲಿನ್ನೊಂಗ್ ಭೇಟಿಗಳನ್ನು ಮುಖ್ಯ ಅಂಶವಾಗಿ ನಿಶ್ಚೈಸಿದೆವು. ನಮಗೆ ಕ್ರೆಂಪುರಿ ಗುಹೆ ತೋರಿಸುವಲ್ಲಿ ಹೆಚ್ಚಿನ ವಾಹನವಾಗಿ ಬಂದಿದ್ದ ವ್ಯಾನ್ (ಚಾಲಕ – ಡೇವಿಡ್) ನಿಕ್ಕಿ ಮಾಡಿದೆವು.

ಡೇವಿಡ್ ಭಾರೀ ನಯಸಾಣೀ ಜಾಣ. ಆತ ಕತ್ತಲೊಳಗೆ ಡಾವ್ಕಿಯ ಸುಮಾರು ೮೧ ಕಿಮೀ ಮತ್ತು ವಾಪಾಸು ಅಂತರವನ್ನು ಹೆಚ್ಚು ಮೀರದಂತೆ ಸುಧಾರಿಸಿಬಿಟ್ಟ. ಆತ ನಮಗರಿವಿಗೆ ಬಾರದಂತೆ ಸಮಯದ ಔದಾರ್ಯ ತೋರಿ, ವ್ಯಾನಿನ ಹೆಚ್ಚಿನ ಓಟವನ್ನು ಉಳಿಸಿಕೊಂಡ! ಶಿಲ್ಲಾಂಗ್ ನಗರ ದರ್ಶನಕ್ಕೆ (ನಗರ ಮ್ಯೂಸಿಯಂ, ವಾಯುದಳದ ಮ್ಯೂಸಿಯಂ…) ಬೆಳಿಗ್ಗೆ “ಹೊರಟದ್ದು ಬೇಗಾಯ್ತು” ಎಂದೂ ಹಿಂದಿರುಗುವಾಗ “ತಡವಾಯ್ತು” ಎಂದು ಮಾತಿನಲ್ಲೇ ಮುಗಿಸಿದ. ಎಲಿಫೆಂಟ್ ಫಾಲ್ಸಿನಂತ ವೈಶಿಷ್ಟ್ಯಗಳನ್ನು “ಈಗ ನೀರಿಲ್ಲ” ಎಂದು ಹಾರಿಸಿದ. ನಗರದ ಹೊರವಲಯದಲ್ಲಿ ಸಣ್ಣ ಎಡ ಕವಲಿನಲ್ಲಿ ನೂರು ಮೀಟರ್ ನುಗ್ಗಿ, ಆತ ತೋರಿದ ದೈತ್ಯ ಪೈನ್ ಮರಗಳ ತೋಪು ಒಂದೇ ನಮಗೆ ಸಿಕ್ಕ ‘ಸಮಾಧಾನಕಾರ’ ಬಹುಮಾನ!

ಮುಂದೆ ಮುಖ್ಯ ದಾರಿ ದೊಡ್ಡ ಕಣಿವೆಯಂಚೊಂದನ್ನು ಸೇರುತ್ತಿದ್ದಂತೆ, ದಾರಿ ಬದಿಯ ಒಂದು ಖಾಸಗಿ ವಠಾರದಲ್ಲಿನ ಹತ್ತಿಪ್ಪತ್ತು ಅಡಿಯ ದಿಬ್ಬ ‘ವೀಕ್ಷಣ ಕಟ್ಟೆ’ ಬೋರ್ಡು ಹೊತ್ತಿತ್ತು. ಡೇವಿಡ್ ವ್ಯಾನ್ ನಿಲ್ಲಿಸಿದ. ನಾವು ವಿಶೇಷ ಯೋಚಿಸದೆ ಪ್ರವೇಶಕ್ಕೆ ತಲಾ ಹತ್ತು ರೂಪಾಯಿ ಕೊಟ್ಟು, ನೋಡಿದ್ದಾಯ್ತು. ಅಷ್ಟರೊಳಗೆ ಅಲ್ಲಿನದೇ ಪುಟ್ಟ ಹೋಟೆಲಿನಲ್ಲಿ ತನ್ನ ‘ನಾಷ್ಟಾ’ (ಉಚಿತ?) ಮುಗಿಸಿಕೊಂಡ! ಮೇಘಾಲಯ ಇರುವುದೇ ಭಾರೀ ಪರ್ವತಶ್ರೇಣಿಗಳ ಉತ್ತುಂಗದಲ್ಲಿ ಎನ್ನುವುದನ್ನು ಕಳೆದ ಐದು ದಿನಗಳಲ್ಲಿ ನಾವು ಕಂಡವರೇ, ಇದು ಡೇವಿಡ್ಡನಿಗೂ ಗೊತ್ತಿತ್ತು. ಸಾಲದ್ದಕ್ಕೆ, ಮುಂದಿನ ನಮ್ಮ ಓಟವೂ ದಿಬ್ಬದ ಮೇಲಿನಿಂದ ಕಂಡ ಕಣಿವೆಯಂಚಿನಲ್ಲೇ ಇತ್ತು. ಅಲ್ಲಿ ಕೆಲವೆಡೆ ಸಿಕ್ಕ ದೃಶ್ಯ ದಿಬ್ಬದ ಮೇಲಿನದಕ್ಕೂ ಚೆನ್ನಾಗಿಯೂ ಉಚಿತವಾಗಿಯೂ ಸಿಕ್ಕವು!

ಪಶ್ಚಿಮ ಘಟ್ಟದ ಭಾಗ ನಮ್ಮ ಕೊಡಗಿನ ಬೆಟ್ಟ ಕಣಿವೆಗಳು. ಪ್ರಥಮ ನೋಟದಲ್ಲಿ ಅದರದ್ದೇ ರೂಪವನ್ನು ಮೇಘಾಲಯದಲ್ಲೂ ಕಾಣುತ್ತೇವೆ. ಆದರೆ ಪ್ರಾಯದಲ್ಲಿ ಮೇಘಾಲಯದ ಬೆಟ್ಟಗಳು ಹಿಮಾಲಯದ ಶ್ರೇಣಿಗಳಿಗೆ ಬಹುತೇಕ ಸಮಕಾಲೀನವಾದ್ದರಿಂದ, ಪಶ್ಚಿಮ ಘಟ್ಟಕ್ಕೆ ತುಂಬ ಕಿರಿಯವು. ಸವಕಳಿ, ಜಗ್ಗುವಿಕೆಯಲ್ಲಿ ಇವು ಹಿಂದಿರುವುದರಿಂದ ಇಲ್ಲಿನ ಆಳ ಎತ್ತರಗಳಲ್ಲಿ ಜನಜೀವನ, ಕೃಷಿ, ಚಾರಣ, ಮಾರ್ಗ ನಿರ್ಮಾಣಗಳಲ್ಲೆಲ್ಲ ನಿರ್ವಹಣಾ ಕಾಠಿಣ್ಯ ಹೆಚ್ಚು. ಇವು ಮೇಲ್ಮೈಗೆ ಹಸಿರು ಹೊದ್ದೋ ಭಾರೀ ಬಂಡೆಗಳನ್ನು ತೋರಿಯೋ (ಹಿಮಾಲಯದಂತಲ್ಲದೆ,) ಬಹಳ ಸ್ಥಿರವಾಗಿವೆ ಎಂಬ ಭಾವನೆ ಬರಬಹುದು. ಆದರೆ ನಿಜದಲ್ಲಿ ಅವೆಲ್ಲ ನೆಲ ಒತ್ತರಿಸಿ ಎಬ್ಬಿಸಿದ ಸಡಿಲ ಒಟ್ಟಣೆಗಳು. ಹಾಗಾಗಿಯೇ ಇಲ್ಲಿ ಗುಹಾಜಾಲಗಳು ಜಾಸ್ತಿ ಎನ್ನುವುದನ್ನೂ ಗಮನಿಸಬೇಕು. ಹಿಂದೆ ಹೇಳಿದಂತೆ ಇಲ್ಲಿನ ಕಲ್ಲು ಮಣ್ಣುಗಳ ಔದ್ಯಮಿಕ ಆಕರ್ಷಣೆ ಸಣ್ಣದಲ್ಲ. ಹೆಚ್ಚಿನ ಖನನ ಅಗತ್ಯವಿಲ್ಲದೇ ದೊರಕುವ ನಸು ಕೆಂಪು ಛಾಯೆಯಿರುವ ಕಗ್ಗಲ್ಲ ತುಣುಕುಗಳು ಸ್ಥಳೀಯವಾಗಿಯೂ ಕಟ್ಟಡ, ರಸ್ತೆ ನಿರ್ಮಾಣಕ್ಕೆಲ್ಲ ಅನಿವಾರ್ಯ ಮೂಲ ವಸ್ತು, ವಿದೇಶೀ ಮಾರಾಟಕ್ಕೂ ದೊಡ್ಡ ಮಾಲು. ಈ ಕಲ್ಲು, ಮಣ್ಣಿಗಾಗಿ ಡಾವ್ಕೀ ದಾರಿಯ ಮಗ್ಗುಲಿನಲ್ಲೇ ಒಂದು ಗುಡ್ಡೆಯ ನೂರಾರು ಅಡಿ ಎತ್ತರದ ಎಲ್ಲ ಬದಿಗಳನ್ನೂ ಭೀಕರವಾಗಿ ಕಳಚುತ್ತಿರುವುದನ್ನು ಕಂಡು ನಾವು ಬಹಳ ಆತಂಕ ವ್ಯಕ್ತಪಡಿಸಿದೆವು. ಮೇಘಾಲಯ ಪ್ರಕೃತಿ ಶೋಷಣೆಯಲ್ಲಿ (ಅಭಿವೃದ್ಧಿಯ ಗಿರ) ಇನ್ನೂ ಮೊದಲ ಹೆಜ್ಜೆಗಳನ್ನಷ್ಟೇ ಇಡುತ್ತಿದೆ. ಅದರ ಅನನುಭವೀ ಪ್ರಜೆಯಾದ ಡೇವಿಡ್, “ನಮ್ಮ ಬೆಟ್ಟಗಳೆಲ್ಲ ಬಹಳ ಗಟ್ಟಿ” ಎಂದೇ ಸಮರ್ಥಿಸಿಕೊಂಡ. ನಾವಾದರೂ ಮಡಿಕೇರಿ, ಶಿರಾಡಿ, ಚಾರ್ಮಾಡೀ…. ಭೂಕುಸಿತದ ದುರಂತಗಳನ್ನು ಅವನಲ್ಲಿ ಹೇಳಿ ಚರ್ಚೆ ಬೆಳೆಸಲಿಲ್ಲ.

ಮೇಘಾಲಯದ ಗಡಿ ದಾಟಿದ್ದೇ ಸಿಗುವ ಬಾಂಗ್ಲಾದ ನೆಲ ಪೂರ್ಣ ಬಯಲಂತೆ. ಅಲ್ಲಿನ ಎಲ್ಲ ರಚನೆಗಳಿಗೂ ಇಲ್ಲಿನ ಕಗ್ಗಲ್ಲೆ ಆಗಬೇಕಂತೆ. ಅದಕ್ಕೆ ಸರಿಯಾಗಿ, ಡಾವ್ಕಿಯ ಅಂತರ್ದೇಶೀಯ ಗಡಿಯಲ್ಲಿ, ಕಲ್ಲು ಮಾರುವ ಲಾರಿಗಳಿಗೆ ಹೋಗಿ ಮರಳಲು, ಒಂದು ದಿನದ ಪರ್ಮಿಟ್ ಕೊಡುವ ವ್ಯವಸ್ಥೆ ಇದೆ. ಆ ಪರ್ಮಿಟ್ ಪಡೆಯಲು ಕಲ್ಲು ಹೇರಿಕೊಂಡು ಬಂದು ಸರತಿ ಸಾಲಿನಲ್ಲಿ ಕಾಯುವ ಲಾರಿಗಳನ್ನು ನಾವು ಹತ್ತಿಪ್ಪತ್ತು ಕಿಮೀ ಉದ್ದಕ್ಕೆ ನೋಡಿ ಬೆರಗಾದೆವು. (ವಿಡಿಯೋ ತುಣುಕು ನೋಡಿ.) ಇದು ನಿತ್ಯದ ಕತೆ ಎಂದು ಕೇಳಿದಾಗ ನಮ್ಮೂರ ಕತೆ ನೆನಪಾಗದಿರಲಿಲ್ಲ. ಬಳ್ಳಾರಿಯ ಕಲ್ಲು ತಿಂದ ದೇಶಭುಕ್ತರ ಚಟುವಟಿಕೆಗಳಿಗೆ ಕಡಿವಾಣ ಬಿದ್ದ ಮೇಲೆ ನಿರುದ್ಯೋಗಿಗಳಾದ ಚಾಲಕರೆಲ್ಲಾ ಇಲ್ಲಿಗೆ ಬಂದಿರಬಹುದೇ ಎಂಬ ಕುಹಕ ಮನದಲ್ಲಿ ಮೂಡದಿರಲಿಲ್ಲ. ಆದರೆ ನೆನಪಿರಲಿ, ಬಳ್ಳಾರಿಯಿಂದ ಕರಾವಳಿಗೆ ಓಡಾಡುತ್ತಿದ್ದ ಭಾರೀ ಲಾರಿಗಳು ಮಾತ್ರ ಮೇಘಾಲಯದ ದಾರಿಗೆ ಒಗ್ಗಲಾರವು. ಡೇವಿಡ್ ಶಿಲಾಂಗ್ ಬಿಟ್ಟಾಗಲೇ ನಮ್ಮ ಹಿತ ಕೇಳಿಕೊಂಡು ಮೆಲುದನಿಯಲ್ಲಿ ಹಳೇ ಹಿಂದೀ ಚಿತ್ರಗೀತೆಗಳನ್ನು ಹಾಕಿದ್ದ. ನಾವು ಮೇಘಾಲಯದ ಜನಪದ ಗೀತ ಪ್ರಸ್ತುತಿಗಳನ್ನು ಬಯಸಿದಾಗ ಆತ ನಿರುತ್ತರನಾದ.

ಖಾಸೀ ಭಾಷೆ, ಲಿಪಿ, ಸಾಹಿತ್ಯದ ಕುರಿತು ವಿಚಾರಿಸಿದಾಗಲೂ ಆತನಲ್ಲಿ ಉತ್ತರವಿರಲಿಲ್ಲ. ಇಂದಿನ ಬಳಕೆಯಲ್ಲಿ ಇಂಗ್ಲೀಷ್ ಲಿಪಿಯೇ ಮುಖ್ಯ ಎಂದ ಮತ್ತು ದಾರಿ ಬದಿಯ ಹೋಟೆಲಿನ ಮೇಜಿನ ಮೇಲೆ ಬಿದ್ದಿದ್ದ ಒಂದು ಖಾಸೀ ದಿನಪತ್ರಿಕೆಯನ್ನೂ ತೋರಿದ. ಅದರಲ್ಲಿ ಪೂರ್ಣ ಇಂಗ್ಲಿಷ್ ಲಿಪಿ ಇದ್ದರೂ ನಮಗೇನೂ ಅರ್ಥವಾಗಲಿಲ್ಲ. ದಾರಿ ಕಳೆಯುವ ಮಾತುಗಳಲ್ಲಿ, ಡೇವಿಡ್ಡನ ಸ್ಥಿತಿಗತಿ ತಿಳಿಯುವುದರೊಡನೆ, ಅಲ್ಲಿನ ಭಾಷೆ ಮತ್ತು ಸ್ತ್ರೀಪ್ರಧಾನ ಕುಟುಂಬ ಪದ್ಧತಿಯನ್ನೂ ತಿಳಿದುಕೊಳ್ಳಲು ಪ್ರಯತ್ನಿಸಿದ್ದೆವು. ಅಧಿಕೃತ ‘ಜಾತಿ’ ಲೆಕ್ಕದಲ್ಲಿ ಅಲ್ಲಿನ ಬಹುಸಂಖ್ಯಾತರು (ಎರಡು ಮೂರು ತಲೆಮಾರುಗಳಷ್ಟೇ ಹಿಂದೆ ಮತಾಂತರಿತ) ಕ್ರಿಶ್ಚಿಯನ್ನರು. ಆದರೆ ವ್ಯವಹಾರಗಳೆಲ್ಲ ಖಡಕ್ಕಾಗಿ ಹಳೇ ಸಾಮುದಾಯಿಕವೇ (ಖಾಸೀ…) ಉಳಿದಂತಿದೆ! ಖಾಸೀ ಡೇವಿಡ್ಡನದು ಪ್ರೇಮ ವಿವಾಹ. ಅವನ ಹೆಂಡತಿ ಪುರುಷಪ್ರಧಾನ ಸಂಪ್ರದಾಯದ ಮಣಿಪುರಿ. ಹಾಗಾಗಿ ಹೆಂಡತಿ ಕಡೆಯಿಂದ ಇವನಿಗೇನೂ ಬರಲಿಲ್ಲ. ಇತ್ತ ಡೇವಿಡ್ ಅವನ ತಂದೆತಾಯಿಯರ ಏಕೈಕ ಸಂತಾನವಾದ್ದರಿಂದ ವಾಸಕ್ಕೆ ಮನೆ ಏನೋ ದಕ್ಕಿದೆಯಂತೆ. ಆದರೆ ಸ್ತ್ರೀ ಉತ್ತರಾಧಿಕಾರದ ನಿಯಮದಲ್ಲಿ, ಡೇವಿಡ್ ಅದರಲ್ಲಿ ವಾಸಿಸುವ ಉಸ್ತುವಾರಿ ಮಾತ್ರ. (ಇಂದು ಡೇವಿಡ್ಡನ ಅಪ್ಪಮ್ಮ ಉಳಿದಿಲ್ಲ.) ಡೇವಿಡ್ಡನಿಗೆ ಎರಡು ಹೆಣ್ಣು ಮಕ್ಕಳು. ಮನೆಯ ಹಕ್ಕು ಅವನ ತಾಯಿಯ ಖಾತೆಯಿಂದ ನೇರ ಕೊನೇ ಮಗಳಿಗೆ ವರ್ಗಾವಣೆಗೊಳ್ಳುತ್ತದಂತೆ! ಹೆಚ್ಚಿನ ತಮಾಷೆಯನ್ನೂ ಡೇವಿಡ್ಡನೇ ಹೇಳಿದ – ‘ಬಹು ಫಲ’ (ಮೂರ್ನಾಲ್ಕು ಮಕ್ಕಳು) ಅಥವಾ ‘ಮಿಶ್ರ ಫಲ’ (ಗಂಡೂ ಹೆಣ್ಣೂ) ಕುಟುಂಬಗಳಲ್ಲಿ ಕೊನೇ ಮಗಳಿಗೆ ಒಟ್ಟು ಆಸ್ತಿಯ ಅರ್ಧ ಪಾಲಂತೆ, ಉಳಿದದ್ದರಲ್ಲಿ ಉಳಿದ ಹೆಮ್ಮಕ್ಕಳಿಗೆ ಸಮಪಾಲು. ಅಲ್ಲೆಲ್ಲ ಮಿಶ್ರಫಲದಲ್ಲಿ ಗಂಡೆಷ್ಟಿದ್ದರೂ (ಇಬ್ಬರೇ ಇದ್ದರೆ ಹೆಣ್ಣಿಗೇ ಪೂರ್ತಿ) ಅದಕ್ಕೆ ಸಿಗುವ ಪಾಲು ಸೊನ್ನೆ! ಇದು ನಾನು ಡೇವಿಡ್ಡನ ಮಾತುಗಳಲ್ಲಿ ಗ್ರಹಿಸಿದ ವಿಚಾರ. ಸಣ್ಣಪುಟ್ಟ ತಪ್ಪಿದ್ದರೆ, ನಿಸ್ಸಂದೇಹವಾಗಿ ನನ್ನ ಗ್ರಹಿಕೆಯ ಕೊರತೆ ಎಂದೇ ಭಾವಿಸಿ, ಕ್ಷಮಿಸಿ. ಹನ್ನೊಂದೂಮುಕ್ಕಾಲರ ಸುಮಾರಿಗೆ ನಾವು ಡಾವ್ಕೀಯಲ್ಲಿ ಉನ್ಗೊಟ್ ನದಿಯ ಬಲ ದಂಡೆಯಲ್ಲಿ ಕಾರಿಳಿದೆವು. ಡೇವಿಡ್ಡನ ಸೂಚನೆಯಂತೆ ದಾರಿಯ ಬದಿಯ ಕಲ್ಲಗೋಡೆಗೇ ಹೊಂದಿಸಿದ್ದ ಬಿದಿರ ಮೆಟ್ಟಿಲ ಸರಣಿಯಲ್ಲಿಳಿದು ದೋಣಿ ಗುತ್ತಿಗೆದಾರನನ್ನು ಮಾತಾಡಿಸಿದೆವು. ಭಾರೀ ಖಡಕ್ಕಾಗಿ “ದೋಣಿಗೆ ನಾಲ್ಕೇ ಮಂದಿ. ಸುಮ್ನೇ ಒಂದು ಸುತ್ತಾದರೆ ರೂ ೯೦೦. ಜೀರೋ ಪಾಯಿಂಟ್ ತೋರಿಸಿ, ಐಲ್ಯಾಂಡ್ ವಿಹಾರಕ್ಕೆ ಬಿಟ್ಟು, ಬಾಂಗ್ಲಾ ಶೋರ್ ತೋರ್ಸೋದಕ್ಕೆ ರೂ ೧೨೦೦” ಎಂದ. ಇಷ್ಟು ದೂರ ಬಂದು, ಮುನ್ನೂರು ರೂಪಾಯಿಗೆ ಜಿಪುಣತನ ಯಾಕೆಂದು ದೊಡ್ಡ ಪಟ್ಟಿ ಹಿಡಿದೆವು. ದೋಣಿಯಲ್ಲಿ ಆರು ಜನಕ್ಕೆ ಧಾರಾಳ ಜಾಗವಿದ್ದರೂ ಅನಿವಾರ್ಯವಾಗಿ ಎರಡನ್ನೂ ಒಪ್ಪಿಕೊಂಡೆವು.

ಉಮ್ಗೊಟ್ ನದಿ ಕಗ್ಗಲ್ಲ ಹಾಸನ್ನು ಬಹಳ ಆಳಕ್ಕೆ, ಸಾಕಷ್ಟು ವಿಸ್ತಾರಕ್ಕೇ ಕೊರೆದು ಪಾತ್ರೆ ನಿರ್ಮಿಸಿಕೊಂಡಿದೆ. ಈ ಋತುಮಾನಕ್ಕೆ ಸಹಜವೆಂಬಂತೆ ನೀರು ತುಂಬ ಕಡಿಮೆಯಿದ್ದರೂ ಆ ವಲಯದಲ್ಲಿ ಮಡುಗಟ್ಟಿ, ಸೆಳೆತವೇ ಇಲ್ಲದಂತಿತ್ತು. ನೀರು ತೋರಿಕೆಯಲ್ಲಿ ಡೈಂತ್ಲೆನ್ ಚಾರಣದಲ್ಲಿ ಕಂಡ ಜಲಮೂಲಗಳಷ್ಟೇ ಪಾರದರ್ಶಕವೂ ನೀಲಛಾಯೆಯದ್ದೂ ಆಗಿ ಜನಾಕರ್ಷಣೆ ಗಳಿಸಿದ್ದು ತಪ್ಪಲ್ಲ. ತಳದ ವಿವಿಧ ವರ್ಣಗಳ ಕಲ್ಲಗುಂಡುಗಳ ಹಾಸಂತು ಮೇಲೆದ್ದು ಬಂದಂತೆ ಸ್ಪಷ್ಟವಿತ್ತು. ಅಂಬಿಗರು ಹರಿವಿನ ಎದುರಿಗೆ ಹುಟ್ಟು ಹಾಕುತ್ತ, ನಾವೇರಿದ ಬಲದಂಡೆಗೇ ಸಮೀಪದಲ್ಲಿ ಸಾಗಿದರು. ಎರಡು ದಂಡೆಯನ್ನು ಬಹು ಎತ್ತರದಲ್ಲಿ ಒಂದು ಮಾಡುವ, ವಾಹನಯೋಗ್ಯ ತೂಗು ಸೇತುವೆಯಡಿಯಲ್ಲಿ ಹಾಯ್ದೆವು. ಮತ್ತೆ ಸುಮಾರು ನೂರು ಮೀಟರ್ ಅಂತರದಲ್ಲಿ ನದಿಯ ಮಡುವಿನಂತ ಸ್ಥಿತಿ ಮರೆಯಾಯ್ತು. ಅಲ್ಲಿ ಕಲ್ಲು ಮರಳ ಹಾಸಿನಲ್ಲಿ ನದಿಯೇನೋ ಕಲಕಲಿಸಿ ಬರುತ್ತಿದ್ದರೂ ದೋಣಿ ಮುಂದುವರಿಯುವುದು ಅಸಾಧ್ಯವೇ ಇತ್ತು. ಅದೇ “ಜೀರೋ ಪಾಯಿಂಟ್” ಎಂದಾಗ ನಮ್ಮ ಕಲ್ಪನಾ ಬುಗ್ಗೆಯ ಗಾಳಿ ಸ್ವಲ್ಪ ಸೋರಿತು. ಹಾಗೆ ಹಿಂದಕ್ಕೆ ತಿರುಗಿ, ಅದೇ ಬಲ ದಂಡೆಯಲ್ಲಿ ಹರಡಿದ್ದ ಗುಂಡು ಕಲ್ಲುಗಳ ಮಹಾರಾಶಿಯಂತಿದ್ದ ದಂಡೆಯಲ್ಲಿ ತಂಗುತ್ತಾ “ಐಲ್ಯಾಂಡ್” ಎಂದಾಗ ನಮ್ಮ ಅರ್ಧಕ್ಕರ್ಧ ಗಾಳಿ ಖಾಲಿ.

ಬಂಡೆ ಗುಂಡುಗಳು ಮಾತ್ರ ಒಂದಕ್ಕಿಂತೊಂದು ಆಕರ್ಷಕ ವರ್ಣ ಹಾಗೂ ವಿನ್ಯಾಸವೈಖರಿಯನ್ನು ಪ್ರದರ್ಶಿಸುತ್ತಿದ್ದವು. ಕಾಲರ್ಧ ಗಂಟೆ ಅದರ ಉದ್ದಗಲಕ್ಕೆ ಸರ್ಕಸ್ ನಡೆ ಮಾಡಿದೆವು. ನಮಗೆ ಸಾಕೆನ್ನಿಸುವ ಹೊತ್ತಿಗೆ ಅಂಬಿಗರ ಬುಲಾವ್ ಕೂಡಾ ಬಂತು. ಹಿಂಪ್ರಯಾಣವನ್ನು ಎಡದಂಡೆಗೆ ಹತ್ತಿರದಲ್ಲಿ ಮಾಡಿಸಿದರು. ಅಲ್ಲಿನ ಬಂಡೆಗಳ ಮೇಲೆ ಸ್ಥಳಿಯರು ಬಟ್ಟೆ ಒಗೆದು ಹರಹಿ, ಒಣಗುವ ಹೊತ್ತಿನಲ್ಲೆಂಬಂತೆ ಗಾಳ ಎಸೆದು ಕೂತದ್ದು ಕಂಡೆವು. ಮುಂದುವರಿದಂತೆ ಪಕ್ಕಾ ಮಹಾಗೋಡೆಯಂತಿದ್ದ ಬಂಡೆಯ ಬುಡದವರೆಗೂ ನೀರ-ಮಡು ವಿಸ್ತರಿಸಿತ್ತು. ಅಲ್ಲೊಂದೆಡೆ ಅಖಂಡ ಶಿಲಾಭಿತ್ತಿಯಲ್ಲಿ ಯಾರೋ ಶಿವಲಿಂಗ ಮತ್ತು ಪಾಣಿಪೀಠಗಳ ಉಬ್ಬುಮೂರ್ತಿಗಳನ್ನು ಕಡಿದಿದ್ದರು. ಅದು ನೀರು ಇನ್ನೂ ಹೆಚ್ಚಿದ್ದ ಕಾಲದಲ್ಲಿ, ಅಜ್ಞಾತ ಶಿಲ್ಪಿ ದೋಣಿಯಲ್ಲಿ ನಿಂತೇ ಕೆತ್ತಿದ್ದಿರಬೇಕು. ಲಂಬಕೋನದ ಗೋಡೆ, ಕೆಲವೆಡೆಗಳಲ್ಲಿ ನಮ್ಮ ಮೇಲೇ ಎರಗುತ್ತದೇನೋ ಎಂದು ಭಯ ಹುಟ್ಟಿಸುವಂತೆ ಮುಂಚಾಚಿಕೊಂಡೇ ನಿಂತಿತ್ತು. ಆದರೆ ಒಟ್ಟಾರೆ ಎರಡೂ ದಂಡೆಗಳ ಎತ್ತರದಲ್ಲಿ ಕವಿದು ಬಿದ್ದ ದಟ್ಟ ಹಸಿರು, ಬೀಸುತ್ತಿದ್ದ ನಸು ಗಾಳಿ ಕಾವ್ಯದ ಗಂಧ ಹೊತ್ತಿತ್ತು. ದೋಣಿ ಚಾಲನೆಯ ತೆಳುತರಂಗಗಳಲ್ಲಿ ಆ ನೀರ ಮಡು, ಕಂಪಿಸುವ ಮರಕತದಂತೇ ಕಾಣಿಸಿತು. ಅದರಾಳದಲ್ಲಿನ ಕಲ್ಲಗುಂಡುಗಳು, ಅಲ್ಲಲ್ಲ ಸಿರಿಗಟ್ಟಿಗಳು ಬಿಸಿಲಕೋಲಿನೊಡನೆ ಚಿನ್ನಾಟದಲ್ಲಿದ್ದಾಗ ಅರಸಿಕನೂ ಗಾನಪ್ರವೀಣನೇ ಸರಿ. ನಾವು ಹೀಗೊಂದು ರಾಗಲೋಕದ ಕಲ್ಪನೆಯಲ್ಲಿದ್ದಾಗ, ರಸಭಂಗವಾಗುವಂತೆ ಅಂಬಿಗರು ನಾವು ಬಂದ ನೆಲಕ್ಕೇ ದೋಣಿ ತಿರುಗಿಸತೊಡಗಿದ್ದರು. ಇಷ್ಟರಲ್ಲಿ ಮತ್ತೆ ಇನ್ನೂರು ಮೀಟರ್ ಕೆಳದಂಡೆಯಲ್ಲಿ ಕಾಣುತ್ತಿದ್ದ ದೋಣಿಸಂತೆ, ಜನಗದ್ದಲಗಳೇ ಬಾಂಗ್ಲಾತೀರವೆಂದು ನಮ್ಮರಿವಿಗೆ ಬಂದಿತ್ತು. ಮತ್ತೆ ನಾನು ಮೊದಲೇ ಹೇಳಿದ ನಮ್ಮ ಕಲ್ಪನಾ ಬುಗ್ಗೆಯಾದರೂ ಪೂರ್ಣ ಗಾಳಿ ಕಳೆದುಕೊಂಡು, ನಿಜದಲ್ಲಿ ಬಾಂಗ್ಲಾ ತೀರ ನೋಡುವ ಉತ್ಸಾಹವನ್ನೂ ಉಳಿಸಿರಲಿಲ್ಲ. ಆದರೆ ಸವಾರಿಯ ಲಹರಿ ಕಳೆದುಕೊಳ್ಳಲಿಚ್ಛಿಸದೆ, ಅಂಬಿಗರಿಗೆ ಸ್ವಲ್ಪ ಜಬರದಸ್ತು ಮಾಡಿ ಸುತ್ತು ಪೂರೈಸಿಕೊಂಡೆವು. ನನ್ನ ಲೇಖನ ಓದಿ, ಮುಂದೆ ಅನುಸರಿಸುವವರು ಯಾರಾದರೂ ಇದ್ದರೆ, ದೋಣಿ ಸವಾರಿಯ ಕುರಿತು ನಮ್ಮಂತೇ ಅವಸರಿಸಿ ಮೋಸಹೋಗಬೇಡಿ. ಡೇವಿಡ್ ನಮ್ಮನ್ನಿಳಿಸಿದ ತಾಣಕ್ಕಿಂತಲೂ ತುಸು ಹಿಂದೆ, ಸೇತುವೆಯಿಂದಲೂ ಮೇಲ್ದಂಡೆಯ ಹಳ್ಳಿಯಿಂದ, ಡಾವ್ಕೀ ಪೇಟೆ ಬದಿಯಿಂದೆಲ್ಲ ದೋಣಿ ಸವಾರಿ ಕೊಡುವ ಅನ್ಯ ಸಂಘಟಕರೂ ಇದ್ದಾರೆ. ನಾವು ವಿಚಾರಣೆ, ತಾಳ್ಮೆ ವಹಿಸಲಿಲ್ಲ. ಹಿಂದೆ ದಾರಿಯ ವೀಕ್ಷಣಾ ಕಟ್ಟೆಯಂತೆ, ಇಲ್ಲೂ ಡೇವಿಡ್ಡಿಗೇನಾದರೂ ಒಳ ಒಪ್ಪಂದ ಇತ್ತೋ ಎಂಬ ಸಂಶಯವೂ ನಮಗುಳಿದಿದೆ.

ದಾರಿಗೇರಿದ ಮೇಲೆ ಪರಿಸರದ ಚಂದಕ್ಕಾಗಿ ನಾವು ನಡೆದೇ ತೂಗು ಸೇತುವೆ ದಾಟಿದೆವು. ಮತ್ತೆ ಹಿಂಬಾಲಿಸಿ ಬಂದ ವ್ಯಾನೇರಿ, ಅನತಿ ದೂರದಲ್ಲಿದ್ದ ಡಾವ್ಕೀ ಪೇಟೆ, ಇನ್ನೊಂದು ಕೊನೆಯ ಬಾಂಗ್ಲಾ ಗಡಿ ಠಾಣೆಗೂ ಭೇಟಿ ಕೊಟ್ಟೆವು. ಕಲ್ಲು ಹೊತ್ತ ಲಾರಿಗಳ ಸಮ್ಮರ್ದದಲ್ಲಿ ಅಲ್ಲಿನ ದಾರಿಗಳು ಹಾಳಾಗಿ, ದೂಳು ಹೊಗೆಯ ಗೂಡಾಗಿ “ಇದನ್ನು ನೋಡಲು ಬಂದಿರಾ” ಎಂದು ನಮ್ಮನ್ನು ಅಣಕಿಸಿತು. ಆ ಗೊಂದಲಪುರದಲ್ಲೂ ಪೋಲೀಸು ಸಿಬ್ಬಂದಿ ನಮ್ಮೆಲ್ಲರ ಗುರುತಿನ ಚೀಟಿ ತನಿಖೆ ಮಾಡಿದ್ದು, ನನಗೆ ಭದ್ರತೆಯ ಅಣಕದಂತೇ ತೋರಿತು. ಹಾಡೇ ಹಗಲಿನಲ್ಲಿ ಹೀಗೆ ಬಂದು (ಕಗ್ಗಲ್ಲಿನ ಮಾಲು ಹೊತ್ತವರಲ್ಲ), ಅವರ ‘ಖಡೀ ನಜರ್’ ಎದುರಿಗೇ ಪ್ರವಾಸೀ ಕುತೂಹಲದಿಂದಾಚೆಗೆ ಯಾವುದೇ ಚಟುವಟಿಕೆ ಮಾಡದ (ಒಂದು ಗ್ರೂಪ್, ಒಂದು ಸೆಲ್ಫೀ ಪಟಕ್ಕಷ್ಟೇ ಸೀಮಿತ!), ಕೊನೆಯದಾಗಿ ಅಷ್ಟೇ ನಿರಪೇಕ್ಷವಾಗಿ ವಾಪಾಸು ಹೊರಟವರ (ಗಡಿ ದಾಟುವ ಅನುಮತಿ ಪತ್ರಕ್ಕೆ ತಿಣುಕಿರಲಿಲ್ಲ) ಜಾತಕ ಕಟ್ಟಿಕೊಂಡು ಅವರಿಗೇನು ಲಾಭವೋ!

ವಾಪಾಸು ಹೊರಟಾಗ ಗಂಟೆ ಎರಡಾಗಿತ್ತು. ಬರುವ ದಾರಿಯಲ್ಲೊಂದೆರಡು ಕಡೆ, ತೋಟಗಳಲ್ಲಿ ಮರವಿಡೀ ಅಪ್ಪಟ ಕೇಸರೀ ಬಣ್ಣದ ಕಿತ್ತಳೇ ಹಣ್ಣುಗಳನ್ನು ಹೊತ್ತಿದ್ದದ್ದನ್ನು ಕಂಡಿದ್ದೆವು. ಹಾಗಾಗಿ ಬೆಳೆಯುವ ಊರಷ್ಟೇ ಎಂಬ ಧೈರ್ಯದಲ್ಲಿ ಡಾವ್ಕೀ ಮಾರ್ಗಬದಿಯ ಕಿತ್ತಳೆ ಗುಡ್ಡೆಯವಳನ್ನು (ಹಾಸನದಲ್ಲಿ ಬಸ್ಸಿಗೇ ಬಂದವ “ಆರಕ್ಕಿಪ್ಪತ್ತು ರೂಪಾಯಿ” ಎಂದೇ ಕೊಟ್ಟ ನೆನಪಿನಲ್ಲಿ) ಬೆಲೆ ಕೇಳಿ, ಅಪ್ರತಿಭನಾದೆ; ಒಂದಕ್ಕಿಪ್ಪತ್ತು! ಮುಂದೆಲ್ಲೋ ಚೌಕಾಸಿ ಮಾಡಿ, ತತ್ಕಾಲೀನ ಹೊಟ್ಟೆಪಾಡಿಗೆಂದು ಹದಿನೈದಕ್ಕೊಂದರಂತೆ ಕೊಂಡೆವು. ಡೇವಿಡ್ಡನಲ್ಲಿ ಪೇಟೆಯಿಂದ ಹೊರಗೆ, ಮರದ ನೆರಳಲ್ಲಿ ನಿಲ್ಲಿಸು, ಬುತ್ತಿಯುಣ್ಣುತ್ತೇವೆ ಎಂದೆವು. ಪುಣ್ಯಾತ್ಮ, ಒಳ್ಳೇ ಜಾಗ ತೋರಿಸ್ತೇನೆಂದು ಅರ್ಧ-ಮುಕ್ಕಾಲು ಗಂಟೆ ಸತಾಯಿಸಿದ. ಮುಂದಿನ ಲಕ್ಷ್ಯಕ್ಕೂ ಹತ್ತಿರವೆಂದು ಹೇಳುತ್ತಾ ಎಲ್ಲೋ ಕವಲಾಗಿ ಹರಕು ಡಾಮರಿನ ರಸ್ತೆಯಲ್ಲಷ್ಟು ಓಡಿಸಿ, ನಿಜಕ್ಕೂ ಒಂದು ಸುಂದರ ಪರಿಸರದ ಹೊಳೆ ಬಳಿಗೇನೋ ಒಯ್ದ. ಆದರೆ (ಬಹುಶಃ ಪ್ರವಾಸೋದ್ದಿಮೆ ಕಟ್ಟಿಸಿದ್ದ) ಸುಂದರ ಸೋಪಾನವಿಳಿದರೆ ಕಂಡದ್ದೇನು? ಎಲ್ಲೆಲ್ಲೂ ಮೋಜುಮಸ್ತಿಯವರು ಅಟ್ಟು, ಉಂಡೆಸೆದ ಪ್ಲ್ಯಾಸ್ಟಿಕ್ ತಟ್ಟೆ, ಲೋಟಾದಿ ಕಸದ ಕುಪ್ಪೆಗಳು, ಅಮಲು ಹೀರಿ ಎಸೆದ ಬಾಟಲಿಗಳು. ಸೊಕ್ಕಿನ ದಿನಗಳಲ್ಲಿ ಆ ಹೊಳೆಯೂ ಕಲ್ಲ ಪಾತ್ರೆಯಲ್ಲಿ ಸುಂದರ ವಿನ್ಯಾಸಗಳನ್ನೇ ಮೂಡಿಸಿದೆ. ಆದರೆ ಅವುಗಳಲ್ಲಿ ಇಂದು ನಿಂತ, ಕಲಕಲಿಸುವ ನೀರು ಮಾತ್ರ ಕಪ್ಪು, ನಾತ ಬೀರುವ ಸಕಲಪುಕಳೀತೀರ್ಥ! ಅಲ್ಲಿವರೆಗೆ ನಾವು, ಸ್ಫಟಿಕ ನಿರ್ಮಲ, ಮರಕತದ ಗಟ್ಟಿ ಎಂದಿತ್ಯಾದಿ ಮೇಘಾಲಯದ ಜಲಮೂಲಗಳಿಗೆ ಕೊಟ್ಟಿದ್ದ ವಿಶೇಷಣಗಳಿಗೆ ವ್ಯತಿರಿಕ್ತವಾಗಿ, ಮೇಘಾಲಯದ ‘ಮಾರು- ಮಾದರಿ’ಗೇ ಅವಹೇಳನಕರವಾಗಿ ಹರಿದಿತ್ತು. ಬಾಂಗ್ಲಾ ಗಡಿಯಲ್ಲಿ ನಮ್ಮ ಮೂರ್ಬಣ್ಣದ ಬಟ್ಟೆ ಎದುರು ಅನಂತ ಸಲ್ಯೂಟ್ ಮಾಡಿದಾಗ ನಾನು ನಕ್ಕಿದ್ದೆ. ಇಲ್ಲಿ ಮಾತ್ರ ನನಗೆ ಎದೆ ತುಂಬಿ ಹಾಡುವಂತಾಯ್ತು “ಭಾರತೀಯರು ಒಂದೇ, ಎಲ್ಲೆಲ್ಲೂ ಒಂದೇ!!” ಇದ್ದದ್ದರಲ್ಲಿ ಸ್ವಚ್ಛ ಮೂಲೆಯಲ್ಲಿ ಕುಳಿತು, ನಮ್ಮದೇ ಬಾಟಲಿ ನೀರಿನಲ್ಲಿ ತೊಳೆ, ಕುಡಿ ಮಾಡಿ, ಊಟ ಮುಗಿಸಿ (ನಮ್ಮದೇನೂ ದೇಣಿಗೆ ಕೊಡಲಿಲ್ಲ), ಜಾಗ ಖಾಲಿ ಮಾಡಿದೆವು.

ದಿನದ ಕೊನೇ ‘ಐಟಮ್’ ಎನ್ನುವಂತೆ ಡೇವಿಡ್ ನಮ್ಮನ್ನು ‘ಅತಿಶುದ್ಧದ ಹಳ್ಳಿ’ ಎಂದೇ ಪ್ರಚಾರದಲ್ಲಿರುವ ಮೌಲಿನ್ನೊಂಗ್ ಮುಟ್ಟಿಸಿದ. ಈ ಹಳ್ಳಿಯ ಪ್ರಚಾರ ಕೇಳುತ್ತಿದ್ದಾಗಲೇ ನನ್ನ ಮನಸ್ಸು ಏನೋ ಅಪಸ್ವರ ಮಿಡಿದಿತ್ತು. ಹೋದ ಮೇಲೆ ನೋಡುವುದೇನು – ಇಡಿಯ ಹಳ್ಳಿ ತನ್ನ ವೈಯಕ್ತಿಕತೆಯನ್ನು ಪ್ರವಾಸೋದ್ಯಮದ ಅಡ್ಡೆಯಲ್ಲಿಟ್ಟು ಮಾರಿಕೊಳ್ಳುತ್ತಿದೆ. ಪುಟ್ಟ ಹಳ್ಳಿ, ಸಣ್ಣ ಜನಸಂಖ್ಯೆ, ವ್ಯವಸ್ಥಿತ ರೂಪ, ತಕ್ಕ ಮಟ್ಟಿಗೆ ಸ್ವಚ್ಛತೆ ಎಲ್ಲ ಸರಿಯೇ ಇದೆ. ಅಲ್ಲಿನ ಅಧಿಕೃತ ಘೋಷಣಾ ಬೋರ್ಡು, ಅವರು ಅಳವಡಿಸಿಕೊಂಡ ಹಲವು ಆಂತರಿಕ (ಎಲ್ಲರಿಗೂ ಕಾಣುವಂತದ್ದಲ್ಲ) ಸ್ವಚ್ಛತಾ ಕಲಾಪಗಳ ಚಿತ್ರಣ ಕೊಟ್ಟದ್ದನ್ನೂ ಒಪ್ಪೋಣ. ಆ ಎಲ್ಲ ಸಾಧನೆಗಳು ಅಂತಿಮವಾಗಿ ಅಲ್ಲಿನ ಸಾಮಾಜಿಕ ಬದುಕನ್ನೇ ಮಾರಲಿರುವ ಸಾಧನಗಳು ಎಂದು ಗ್ರಹಿಸುವಲ್ಲಿ ನನ್ನ ಮನಸ್ಸು ಪೂರ್ಣ ಹಾಳಾಗಿಹೋಯ್ತು. ಪ್ರತಿ ಮನೆಯೂ ಎಂಬಂತೆ ಹೋಂ ಸ್ಟೇ ಬೋರ್ಡುಗಳು ಮೆರೆದಿದ್ದವು. ಪ್ರಾಕೃತಿಕ ಸತ್ಯಗಳೆಲ್ಲ ಪ್ರದರ್ಶನೀಯ ಹೆಸರು ಹೊತ್ತು, ಕೈ ಬೀಸಿ ಕರೆದಿದ್ದವು. ಅವಕ್ಕೆಲ್ಲ ಬೆಳಗ್ಗೆ ದಾರಿಯ ವೀಕ್ಷಣಾ ಕಟ್ಟೆಯಂತೆ, ಪ್ರತ್ಯೇಕ ಪ್ರವೇಶ ಇದ್ದಿರಬೇಕು – ನಾವು ಪರೀಕ್ಷೆ ಮಾಡಲಿಲ್ಲ! ಅಲ್ಲೂ ಒಂದು ಜೀವಂತ ಬೇರಿನ ಸೇತುವಿತ್ತು, “ಪ್ರವೇಶಧನ ಇಪ್ಪತ್ತು ರೂಪಾಯಿ” ಎಂದದ್ದನ್ನು ನಾವು ತಿರಸ್ಕರಿಸಿದೆವು. ಇನ್ಯಾವುದೋ ಒಂದು ಮನೆ, ದಾರಿಯ ಇನ್ನೊಂದು ಮಗ್ಗುಲಿನ ಮರದ ಮೇಲೊಂದು ಬಿದಿರಿನ ಅಟ್ಟಳಿಗೆ ಕಟ್ಟಿ, ಓರೆಯಲ್ಲಿ ಬಿದಿರ ಸೇತು ಕಟ್ಟಿ ಅದಕ್ಕೆಷ್ಟೊ ಹಾಸಲು ಎಂದರು, ನಾವು ಹೋಗಲಿಲ್ಲ. ಹಳ್ಳಿಗೆ ಪ್ರವೇಶ ಧನ, ವಾಹನ ತಂಗುವುದಕ್ಕೆ ಪ್ರತ್ಯೇಕ, ಶೌಚಾಲಯ ದುಬಾರಿ, ಕೊನೆಯಲ್ಲಿ ಎಲ್ಲೆಡೆಗಳ ಗಿಲೀಟುಗಳ ಮಾರಾಟದ ಹತ್ತೆಂಟು ಮಳಿಗೆಗಳನ್ನು ನೋಡ ನೋಡುತ್ತಾ ಸ್ವಚ್ಛ ಹಳ್ಳಿ ನಮಗೆ ಹೇಸಿಗೆಯೇ ಆಯ್ತು.

ಮೌಲಿನ್ನೊಂಗ್ ಹಳ್ಳಿ ಒಂದು ವಿಸ್ತೃತ ಹೋಟೆಲ್ ಎಂದರೆ ಖಂಡಿತಾ ತಪ್ಪಲ್ಲ. ಆದರೆ ಇಲ್ಲಿನ ಮಾಲಿಕ, ಸಿಬ್ಬಂದಿಗಳಿಗೆ ಪ್ರತ್ಯೇಕ ವೈಯಕ್ತಿಕ ಜೀವನ ಎಂಬುದಿಲ್ಲ ಎನ್ನುವ ಸ್ಥಿತಿ ವಿಚಿತ್ರ. ನಮ್ಮ ವಾಸದ ಮನೆ, ಜೀವನದ ನಿತ್ಯ ಕಲಾಪಗಳು ಲೋಕ ಪ್ರದರ್ಶನದ ಅಂಗವಾಗುವುದನ್ನು ನಾನಂತೂ ಒಪ್ಪಿಕೊಳ್ಳಲಾರೆ. ನಾನು ಕಂಡಂತೆ ಚೆನ್ನೈ ಹೊರವಲಯದ – ದಕ್ಷಿಣ್, ಮಂಗಳೂರಿನ ಪಿಲಿಕುಳದ ‘ಜೀವಂತ ಸಾಂಪ್ರದಾಯಿಕ ಹಳ್ಳಿ’ ಮಣಿಪಾಲದ ಹಸ್ತಶಿಲ್ಪಗಳಂಥವನ್ನಾದರೂ ದೊಡ್ಡ ಅಪನಂಬಿಕೆಯನ್ನು (ಇದು ನಿಜವಲ್ಲ) ಉಳಿಸಿಕೊಂಡೇ ಅರ್ಥ ಮಾಡಿಕೊಳ್ಳುವುದು ಸಾಧ್ಯ. ಆದರೆ ಮೌಲಿನ್ನೊಂಗ್ ಹಾಗೂ ಅಲ್ಲವೆನ್ನುವುದೇ ದುರಂತ. ಅಲ್ಲಿ ರೂಪುಗೊಳ್ಳುತ್ತಿರುವ ಭಾರೀ ಕಟ್ಟಡ ಒಂದರ (ಶಾಲೆಯೋ ಸಭಾಭವನವೋ, ಇನ್ನೊಂದೋ ತಿಳಿದಿಲ್ಲ) ಕೊನೆಯವರೆಗೂ ನಡೆದು ಹೋಗಿ, ಮರಳುವಲ್ಲಿ ಕೆಲವು ಗಲ್ಲಿ ಗಲ್ಲಿ ಸುತ್ತಿ, ನಿರಾಶೆಯಲ್ಲೇ ವ್ಯಾನ್ ಏರಿ ವಾಪಾಸಾದೆವು.

ಶಿಲ್ಲಾಂಗ್ ಸೇರುವಾಗ ಊಟದ ಸಮಯವಾಗಿತ್ತು. ಅದನ್ನು ಮೊದಲು ಮುಗಿಸಿಕೊಂಡೆವು. ದಿನಪೂರ್ತಿ ಅನುಭವಿಸಿದ ನಿರಾಶೆಯ ಬೆಳಕಿನಲ್ಲಿ, ನಾಳೆಗೇನು ಎನ್ನುವುದೀಗ ನಮ್ಮ ಎದುರು ಗಂಭೀರವಾಗಿ ನಿಂತಿತ್ತು. ಆ ವೇಳೆಗೆ ನಮ್ಮ ದೊಡ್ಡ ಬಳಗದ ಬೇರೇ ಕೆಲವರು, ಇನ್ನೊಂದೇ ದಿಕ್ಕಿನಲ್ಲಿ ಸುತ್ತಿ ಬಂದವರು, ಭಾರೀ ಉತ್ತೇಜಿತರಾಗಿ “ಬ್ಯಾಂಬೂ ಟ್ರಯಲ್, ಬ್ಯಾಂಬೂ ಟ್ರಯಲ್…” ಎಂದು ಉದ್ಗರಿಸುವುದು ಕೇಳಿತು. ನಾವೂ ಮಾತಿಗೆ ಸೇರಿಕೊಂಡೆವು. ವಿವರಗಳನ್ನು ಕೇಳುತ್ತಿದ್ದಂತೆ ನಮ್ಮ ಮರುದಿನದ ಕಲಾಪಗಳನ್ನು ಅದೇ ನಿಟ್ಟಿನಲ್ಲಿ ಗಟ್ಟಿ ಮಾಡಿಯೇಬಿಟ್ಟೆವು. ಆ ಕಲಾಪಕ್ಕೆ ಬೆಳಗ್ಗೆ ಹೊರಡುವುದರೊಡನೆ, ಹಾಸ್ಟೆಲ್ಲಿನ ಸಂಪರ್ಕವೂ ಮುಗಿಯುವುದಿತ್ತು. ಅದಕ್ಕೂ ಸಿದ್ಧತೆಗಳನ್ನು ಮಾಡಿಕೊಂಡು ನಿದ್ರೆಗೆ ಶರಣಾದೆವು.

ಗಣಪತಿ ಭಟ್ರ ಮೇಧಾವೀ ಶಿಷ್ಯರೊಬ್ಬರು ಶಿಲ್ಲಾಂಗಿನ ಇಸ್ರೋದಲ್ಲಿ ವಿಜ್ಞಾನಿ. ಅವರು ಗುರುಗಳ ಬರೋಣದ ಸುದ್ದಿಯೊಡನೇ “೧೪ರ ಸಂಜೆಯಿಂದ ೧೬ ರ ವಿದಾಯದವರೆಗೂ ನಮ್ಮ ಆತಿಥ್ಯ ಸ್ವೀಕರಿಸಿ, ಕೆಲಸ ನೋಡಿ, ಭಾಷಣ ಮಾಡಿ ಹೋಗಬೇಕು” ಎಂದು ಒಪ್ಪಿಸಿಬಿಟ್ಟಿದ್ದರು. ಗಣಪತಿ ಭಟ್ಟರಿಗೆ ಬ್ಯಾಂಬೂ ಟ್ರಯಲ್ ವಿವರ ಕೇಳಿದ ಮೇಲೆ ತಪ್ಪಿಸಿಕೊಳ್ಳಲು ಮನಸ್ಸಿಲ್ಲ, ಶಿಷ್ಯನನ್ನೂ ಬಿಡುವಂತಿಲ್ಲ – ಉಭಯ ಸಂಕಟ. ಬ್ಯಾಂಬೂ ಟ್ರಯಲ್ ಅನುಭವಿಸಿ ಬಂದ ಮಿತ್ರರು ತಾವು ಬಳಸಿದ ಸಮಯವನ್ನು ಉತ್ಪ್ರೇಕ್ಷಿಸುತ್ತಿರುವಂತಿತ್ತು. ಗುಹೆ, ಚಾರಣಗಳ ನಾಲ್ಕೂ ದಿನ ಇವರ ಚಟುವಟಿಕೆಗಳ ವೇಗವನ್ನು ನಾವು ಪರೋಕ್ಷವಾಗಿ ಗಮನಿಸಿದ್ದೆವು. ಹಾಗಾಗಿ ನಾವು, ಬ್ಯಾಂಬೂ ಟ್ರಯಲ್ಲನ್ನು ಇನ್ನಷ್ಟು ಚುರುಕಾಗಿಯೇ ಪೂರೈಸುವ ವಿಶ್ವಾಸದಲ್ಲೇ ಹೊರಟಿದ್ದೆವು. ಕಾರು ಮಾತ್ರ ಎರಡು ಪ್ರತ್ಯೇಕ ಹಿಡಿದೆವು. “ಚುರುಕಿನ ಪ್ರಯತ್ನ ಮಾಡುತ್ತೇವೆ. ಸಮಯ ಸಾಲದೆಂದನ್ನಿಸಿದರೆ ಅರ್ಧದಲ್ಲೇ ವಾಪಾಸಾಗುತ್ತೇವೆ” ಎಂಬ ನಿರ್ಧಾರದ ಗಣಪತಿ ಭಟ್ಟ ದಂಪತಿ ಮುಂದಿನ ಕಾರಿನಲ್ಲಿದ್ದರು. ‘ಬ್ಯಾಂಬೂ ಟ್ರಯಲ್’ಇರುವ ಹಳ್ಳಿ – ವಾಹ್ಖೆನ್, ಸ್ಥಳೀಯರಲ್ಲೇ ಇನ್ನೂ ಜನಪ್ರಿಯವಲ್ಲ. ಅದರೆ ಅವರ ಚಾಲಕನಿಗೆ ದಾರಿಯ ಪರಿಚಯವಿತ್ತು. ಸಹಜವಾಗಿ ನಮ್ಮ ನಾಲ್ವರ ಕಾರಿನ ಚಾಲಕ – ಆ ಸ್ಥಳಕ್ಕೆ ಹೊಸಬ, ನಿಷ್ಠಾವಂತ ಹಿಂಬಾಲಕನಾದ. ಡಾವ್ಕೀ ದಾರಿಯಲ್ಲೇ ಹತ್ತಿಪ್ಪತ್ತು ಕಿಮೀ ಹೋಗಿ, ವೀಕ್ಷಕ ದಿಬ್ಬದಿಂದಲೂ ತುಸು ಮುಂದೆ ಬಲ ಕವಲೊಡೆದೆವು.

ವಾಹ್ಖೆನ್ ಹಳ್ಳಿಯ ಸಪುರ ದಾರಿ ಡಾಮರ್ ಕಾಣದೆ ಶತಮಾನ ಸಂದಂತಿತ್ತು. ಬಹುಶಃ ಈಗ ಬ್ಯಾಂಬೂ ಟ್ರಯಲ್ ಅರ್ಥಾತ್ ‘ಬಿದಿರ ಸೇತು ಸರಣಿ’ಯ ಜನಾಕರ್ಷಣೆಯ ಒತ್ತಡಕ್ಕೆ ಮಣಿದು, ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಒಂದು ಕಡೆಯಂತೂ ನಾವೆಲ್ಲ ಕಾರಿಳಿದು, ಜೆಸಿಬಿ ಮತ್ತು ಕೂಲಿಗಳು ಐದು ಮಿನಿಟಿನ ಕೆಲಸ ಪೂರೈಸುವುದನ್ನು ಕಾದು, ಮುಂದುವರಿಯಬೇಕಾಯ್ತು. ಆಗ ಕೂಲಿಗಳ ಕುರಿತು ನಮ್ಮ ಚಾಲಕನ ವಿಮರ್ಶೆ ವಿಶಿಷ್ಟವಾಗಿತ್ತು. ಆ ರಾಜ್ಯದ ಸಾಮುದಾಯಿಕ ನಿಷ್ಠೆಯ ಬಿಗಿಯಲ್ಲಿ ಒಂದು ವಲಯದ ಮಂದಿ ಇನ್ನೊಂದು ವಲಯದಲ್ಲಿ ಕೂಲಿ ಕೆಲಸ ಮಾಡುವುದೂ ನೈತಿಕ ಪೋಲೀಸರ ಕಣ್ಣಲ್ಲಿ ಅಪರಾಧವಂತೆ. ಅಂದರೆ ನಮ್ಮಲ್ಲಿನಂತೆ ಎಲ್ಲೆಲ್ಲಿನ ತಮಿಳ, ಒಡಿಯಾ ಅಥವಾ ಗುರುತು ಮರೆಮಾಡಿದ ವಿದೇಶೀ (ಬಾಂಗ್ಲಾ, ನೇಪಾಲೀ…) ಕಾರ್ಮಿಕರ ಕತೆಯಲ್ಲ. ಖಾಸೀ ವಲಯದಲ್ಲಿನ ಕೆಲಸಕ್ಕೆ ಗ್ಯಾರೋ ವಲಯದ ಕೂಲಿ ಬಂದರೂ ದೊಂಬಿಯೇ! ಆದರೆ ಇಲ್ಲಿ ದಾರಿ ಕೆಲಸ ಮಾಡಿಸುತ್ತಿದ್ದ ಗುತ್ತಿಗೆದಾರ ಭಾರೀ ಗಟ್ಟಿಗನಾದ್ದಕ್ಕೆ, ಅನ್ಯರನ್ನು ಬಳಸಿಕೊಂಡಿದ್ದ! ಆಗ ನಾವು, “ಅಯ್ಯಯ್ಯೋ ಇಂದೋ ನಾಳೆಯೋ (ಗುರುವಾಯೂರಪ್ಪನ ದರ್ಶನವೂ ಭಕ್ತ ಜೇಸುದಾಸನಿಗೆ ನಿಷಿದ್ಧ ಎಂದಂತೆ) ಖಾಸೀ ವಲಯದ ದೃಶ್ಯಗಳೂ ಅನ್ಯರಿಗೆ (ಸದ್ಯ ನಮಗೆ) ಇಲ್ಲ ಎಂದುಬಿಟ್ಟರೇನಪ್ಪಾ” ಎಂದು ಕಾರಿನವನನ್ನು ಅವಸರಿಸಿದೆವು!

ಒಂದೆರಡು ದಿನಗಳಿಂದಲೇ ಈ ವಲಯದ ಕೃಷಿ ಕಲಾಪಗಳು ನಮಗೆ ಹೆಚ್ಚು ಕಾಣಸಿಗುತ್ತಿತ್ತು ಮತ್ತು ನಮ್ಮ ಲೆಕ್ಕಕ್ಕದು ವಿಚಿತ್ರವಾಗಿಯೂ ಇತ್ತು. ಕಿತ್ತಳೆ ಮರ ತುಂಬ ಕೇಸರಿ ವರ್ಣದ ಹಣ್ಣೇ ತುಂಬಿದ್ದ ದೃಶ್ಯ ಹಲವೆಡೆಗಳಂತೆ ಇಲ್ಲೂ ಕಂಡೆವು. ನಮ್ಮೂರ ಅಡಿಕೆಗೆ ಆರೈಕೆ ಮಾಡಿದಷ್ಟೂ ‘ಕೋಲ’ ಜಾಸ್ತಿ! ಪ್ರತಿ ಗಿಡದ ಬುಡ ಬಿಡಿಸಿ, ಬಿಸಿಲು ನೆರಳುಗಳ ಅಂದಾಜು ಮಾಡಿ, ವರ್ಷವಿಡೀ ನೀರು ಗೊಬ್ಬರ ನೋಡಿಕೊಂಡೂ ಫಸಲು ಹಿಡಿಯುವ ಮಳೆಗಾಲದಲ್ಲಿ ನಾಲ್ಕು ಮಳೆ ಹೆಚ್ಚಾದರೆ ಮಿಡಿಗೆ ‘ಕೊಳೆರೋಗ’, ಅದೇ ಬೇಸಗೆಯಲ್ಲಿ ನೀರು ತತ್ವಾರವಾದರೆ ಗರಿ ಉದುರಿಸಿ ಗಿಡ ಗತಪ್ರಾಣ. ಆದರಿಲ್ಲಿನ ಅಡಿಕೆ ಗಿಡಗಳು ಸಪುರ ಮತ್ತು ಗುಡ್ಡದ ಮೈಗಳಲ್ಲೂ ಬಿದಿರು, ವಾಟೆಯಷ್ಟೇ ಸಹಜವಾಗಿ, ಗುಂಪಾಗಿಯೋ ಅಡ್ಡಾತಿಡ್ಡಾ ಸಾಲು ಹಿಡಿದೋ ಬೆಳೆದಿದ್ದವು. ಸಾಲು ಹಿಡಿದು, ಗುಂಡಿ ಮಾಡಿ ನೆಟ್ಟು, ಬುಡ ಹಸನುಗೊಳಿಸಿದ್ದಂತೆ, ನಿರಾವರಿ ವ್ಯವಸ್ಥೆ ಮಾಡಿದ್ದಂತೆ ಒಂದೂ ಕಾಣಲಿಲ್ಲ! ನಮ್ಮಲ್ಲಿ ಆರು ದಿನ ಸತತ ಮಳೆ ಬಂದರೆ ಕಾಡುವ ಕೊಳೆ ರೋಗ ಇಲ್ಲಿನ ಆರು ತಿಂಗಳ ಮಳೆಯಲ್ಲಿ ಕಾಡುವುದಿದ್ದರೆ, ಇಲ್ಲಿನ ಕೃಷ್ಯುತ್ಪನ್ನವಾಗುಳಿಯುವುದೇ ಅಸಾಧ್ಯ. ಈ ವಲಯದ ಇನ್ನೂ ಮುಖ್ಯವಾದ ಒಂದು ಬೆಳೆ – ಹಿಡಿಸೂಡೀ (ಬಾಂಬೆ ಪೊರಕೆ) ಹುಲ್ಲು. ಇದು ಫಕ್ಕನೆ ನೋಡಿದರೆ ವಾಟೆ ಅಥವಾ, ಸಣ್ಣ ಬಿದಿರಿನ ಸಂತಾನವೇ ಇರಬೇಕೆಂಬಂತೆ ಎಲ್ಲೆಂದರಲ್ಲಿ ಸಹಜವಾಗಿಯೂ ಕೃಷಿತವಾಗಿಯೂ ಬೆಳೆದಿರುತ್ತವೆ. ಅದರಲ್ಲಿ ಕದಿರು ಬಿಟ್ಟು ಬೆಳೆದ ಕಡ್ಡಿಗಳನ್ನಷ್ಟೇ ನಾಜೂಕಾಗಿ ಕಡಿದು, ಕೀಸಿ ಗುಡ್ಡೆ ಹಾಕಿದ್ದು, ಮನೆಯಂಗಳಗಳಲ್ಲಿ ಒಣಗ ಹಾಕಿದ್ದು ಧಾರಾಳ ನೋಡಸಿಗುತ್ತವೆ. ಸಾರ್ವಜನಿಕ ಸ್ಥಳಗಳಲ್ಲೂ ಬಹುತೇಕ ಸಹಜವಾಗಿ ಬೆಳೆವ ಇವನ್ನು ಸ್ಥಳೀಯರಿಗೆ ಫಸಲು ಗುತ್ತಿಗೆಯ ಮೇಲೆ ಕೊಡುತ್ತಾರಂತೆ. ಹೀಗೆ ಒಂಬತ್ತು ಗಂಟೆಯ ಸುಮಾರಿಗೆ ನಾವು ಬಿದಿರ ಸೇತುವಿನ ಹಳ್ಳಿ – ವಾಹ್ಖೆನ್ ಮುಟ್ಟಿದ್ದೆವು.

(ಕ್ಷಮಿಸಿ, ಬಿದಿರ ಸೇತು ಹಾಗೂ ಈ ಕಥನ ಸರಣಿಯ ಮುಕ್ತಾಯ ಮುಂದಿನ ಕಂತಿನಲ್ಲಿ.)

(ಮುಂದುವರಿಯಲಿದೆ)