(ಭಾರತ ಅ-ಪೂರ್ವ ಕರಾವಳಿಯೋಟ – ೧)

೧೯೯೦ರ ಪ್ರಾಕೃತಿಕ ಭಾರತ ಸೀಳೋಟ ಎರಡು ವರ್ಷ ಹಳತಾಗುತ್ತಿದ್ದಂತೆ ತಲೆಯೊಳಗೆ ಇನ್ನೊಂದೇ ಸಾಹಸಯಾನ ಮೊಳಕೆಯೊಡೆದಿತ್ತು. ಹಿಂದಿನಂತೆ ವ್ಯಾಪಾರ ಕಡಿಮೆಯಿರುವ ಬೇಸಗೆ ಕಾಲ, ಮತ್ತೆ ತಿಂಗಳ ಕಾಲ ಅಂಗಡಿ, ಮನೆ ಮತ್ತು ಮಗನ ನಿರ್ವಹಣೆಗೆ ತಂದೆ ತಾಯಿಯರಲ್ಲಿ ಬೇಡಿಕೆ ಇಡುವವನಿದ್ದೆ. ಅಷ್ಟರಲ್ಲಿ ನನ್ನ ಅಮೆರಿಕನ್ನಡಿಗ ತಮ್ಮ – ಆನಂದನಿಂದ, ಅವರಿಬ್ಬರಿಗೆ ಮಾಮೂಲೀ ಕರೆ – “ನಮ್ಮಲ್ಲಿಗೆ ಒಮ್ಮೆಯಾದರೂ ಬನ್ನಿ” ಹೊಸ ಭಾರೀ ಆಮಿಷದೊಡನೆ ಬಂದಿತ್ತು. “ಪ್ರಯಾಣ ನನ್ನ ಎರಡನೇ ವೈರಿ (ದೇವರು ಮೊದಲನೇ ವೈರಿ)” ಎಂದೇ ಸಾರುತ್ತಿದ್ದ ತಂದೆಗೆ ನಿರಾಕರಿಸಲಾಗದ ಆಮಿಷ – ಎಸ್. ಚಂದ್ರಶೇಖರ್ ಭೇಟಿ. ಭಾರತೀಯ ಮೂಲದ, ಶಿಕಾಗೋದಲ್ಲಿದ್ದ, ನೊಬೆಲ್ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯನ್ ಚಂದ್ರಶೇಖರ್ ಏನೂ ತೋರಿಕೆಯಿಲ್ಲದ ಅಪ್ಪಟ ಖ-ಭೌತ ವಿಜ್ಞಾನಿ. ಅಪಾರ ಓದು, ಅಧ್ಯಯನ ಮತ್ತು ಲೋಕಜ್ಞಾನದ ಖಣಿ – ಚಂದ್ರಶೇಖರ್, ಸರಿಯಾಗಿಯೇ ಜೀವನ ಚರಿತ್ರೆ ಬರೆವವರನ್ನು ಹತ್ತಿರ ಬರಗೊಡುತ್ತಿರಲಿಲ್ಲ. ಅವರಾಗಿಯೇ ಆತ್ಮಕಥಾನಕವಿರಲಿ, ತನ್ನ ಘೋಷಿತ ಆಸಕ್ತಿಯ ಹೊರಗೆ ಒಂದು ಸಾರ್ವಜನಿಕ ಹೇಳಿಕೆಯನ್ನೂ ಕೊಡದ ಸುಜ್ಞಾನಿ, ಔಪಚಾರಿಕ ಸಭೆ ಸಮ್ಮಾನಗಳನ್ನೆಲ್ಲ ಪೂರ್ಣ ದೂರ ಇಟ್ಟ ಮಹಾಮೇಧಾವಿ. ಇಂಥ ‘ದೇವ ಸಾಕ್ಷಾತ್ಕಾರಕ್ಕೆ’ ನನ್ನ ತಂದೆ ‘ದೊಡ್ಡ ತಪಸ್ಸ’ನ್ನೇ ಮಾಡಿ, ಒಲಿಸಿ, ಬಹಳ ವಿಸ್ತೃತವಾಗಿ ‘ಸುಬ್ರಹ್ಮಣ್ಯನ್ ಚಂದ್ರಶೇಖರರ ವೈಜ್ಞಾನಿಕ ಜೀವನ ಚರಿತ್ರೆ’ ಬರೆದು, ಪ್ರಕಟಿಸಿದ್ದರು. (ನೋಡಿ: ಸುಬ್ರಹ್ಮಣ್ಯನ್ ಚಂದ್ರಶೇಖರ್) ಈಗ ತಂದೆ ಶಿಕಾಗೋಗೇ ಹೋಗಿ, ಆ ಪುಸ್ತಕದ ಗೌರವ ಪ್ರತಿಯೊಂದನ್ನು ಕೈಯಾರೆ ಚಂದ್ರಶೇಖರ್ ಅವರಿಗೆ ಕೊಟ್ಟು, ಅದೇ ಪ್ರಥಮ ಬಾರಿಗೆ ಅವರ ದರ್ಶನ ಮತ್ತು ಸಂದರ್ಶನಗಳನ್ನು ಪಡೆಯುವ ಭಾಗ್ಯವನ್ನೇ ಆನಂದ ಕಲ್ಪಿಸಿದ್ದ.

ನನ್ನ ‘ರಜಾ ಅರ್ಜಿ’ಯನ್ನು ಅಡಿಗೆ ತಳ್ಳಿ, ಮೌನಿಯಾದೆ. ತಂದೆ ತಾಯಿ ಆರು ತಿಂಗಳ ವೀಸಾ ಹಿಡಿದೇ ಅಮೆರಿಕಾಕ್ಕೆ ಹೋಗಿದ್ದರು. ಆದರೆ ತಂದೆ, ಚಂದ್ರಶೇಖರ್ ಭೇಟಿಯ ಸ್ವಪ್ನ ಸಾಕ್ಷಾತ್ಕಾರವಾದದ್ದೇ, “ಇಲ್ಲಿರುವುದು ಸುಮ್ಮನೆ, ಅಲ್ಲಿದೆ ನನ್ನ ಮನೆ” ಎಂದು ಹೇಳತೊಡಗಿದ್ದರು. (ನೋಡಿ: ಸಪ್ತ ಸಾಗರದಾಚೆಯೆಲ್ಲೋ ಮತ್ತು Crossing the dateline) ಸುಮಾರು ಎರಡೇ ತಿಂಗಳಿನಲ್ಲಿ ಅವರು ಪ್ರವಾಸ ಮುಗಿಸಿ, ಭಾರತಕ್ಕೆ ಮರಳಿದರು. ಬಳಲಿದ್ದ ನನ್ನ ಬಯಕೆ ಬಳ್ಳಿ ಮತ್ತೆ ನಳನಳಿಸಿತು. ತಡ ಮಾಡದೆ ಕೇಳಿಯೇ ಬಿಟ್ಟೆ. ಇಬ್ಬರೂ ಭಾರೀ ಸಂತೋಷದಲ್ಲೇ “ಧಾರಾಳ ಹೋಗಿ, ನಿಶ್ಚಿಂತೆಯಿಂದ ಹೋಗಿ, ಚೆನ್ನಾಗಿ ಯೋಜನೆ ಮಾಡಿ ತಿರುಗಾಡಿ ಬನ್ನಿ, ಬೆಂಬಲಕ್ಕೆ ನಾವಿದ್ದೇವೆ” ಎಂದು ಬಿಟ್ಟರು. ದೊಡ್ಡ ಹೊರೆ ಇಳಿಯಿತೆಂದು ಕುಣಿದು ಕುಪ್ಪಳಿಸಿದವನಿಗೆ ಸ್ವಂತ ಕಾಲೇ ತೊಡರಿತು. ಅತ್ರಿ ಬುಕ್ ಸೆಂಟರ್ ಸುಮಾರು ೧೯ ವರ್ಷಗಳ ಕಾಲ ೧೧*೧೯*೧೪ ಅಡಿಗಳ ಅಗಲ, ಉದ್ದ ಮತ್ತು ಎತ್ತರದ ಬಾಡಿಗೆ ಕಿಷ್ಕಿಂಧೆಯಲ್ಲಿತ್ತು. ಎತ್ತರವನ್ನು ಸದುಪಯೋಗಪಡಿಸುವಂತೆ ನಾನೇ ಹಾಕಿಕೊಂಡಿದ್ದ ಮರದ ಅಟ್ಟ ವರ್ಷಗಳುರುಳಿದಂತೆ ಹೆಚ್ಚಿದ ದಾಸ್ತಾನಿನ ಭಾರದಲ್ಲಿ ಅಪಾಯಕಾರಿಯಾಗಿ ತೊನೆಯುತ್ತಿತ್ತು. ಸಹಜವಾಗಿ ಹಿತ್ತಿಲಲ್ಲಿದ್ದ ಖಾಲೀ ನೆಲಕ್ಕೆ ಮಳಿಗೆ ವಿಸ್ತರಿಸಿಕೊಳ್ಳಲು ನಾನೂ ಒತ್ತಿನ ಅನೇಕ ಬಾಡಿಗೆದಾರರೂ ಕಟ್ಟಡದ ಯಜಮಾನ – ಕರ್ನಾಟಕ ಕ್ರಿಶ್ಚಿಯನ್ ಎಜುಕೇಶನ್ ಸೊಸಾಯಿಟಿ, ಇವರಿಗೆ ಮನವಿ ಸಲ್ಲಿಸುತ್ತಲೇ ಇದ್ದೆವು. ಅದು ಈ ವೇಳೆಗೆ ಒಮ್ಮೆಲೆ ಫಲಿಸಿತ್ತು, “ಹೆಚ್ಚಿನ ಜಾಗ ಕೊಡುತ್ತೇವೆ, ಬೇಕಿದ್ದರೆ ವಿಸ್ತರಿಸಿಕೊಳ್ಳಿ” ಎಂದು ಬಿಟ್ಟರು. ದೇವರು ವರ ಕೊಟ್ಟ ಮೇಲೆ ಮುಹೂರ್ತ ಹುಡುಕುವುದುಂಟೇ! ಸಾಹಸಯಾನದ ವಿಚಾರ ನೆನೆಗುದಿಗೆ ಹಾಕಿ, ಎರಡನೇ ಯೋಚನೆ ಇಲ್ಲದಂತೆ, ಕಂತ್ರಾಟುದಾರನನ್ನು ಹಿಡಿದು ಕೆಲಸಕ್ಕಿಳಿದೆ.

ಮೂಲ ಕಟ್ಟಡಕ್ಕೆ ತಾಗಿದಂತೆ ಮತ್ತು ಹೊಂದಿಕೊಳ್ಳುವಂತೆ ಹಿತ್ತಿಲಲ್ಲಿ ಎರಡಡಿ ತಗ್ಗಿನಲ್ಲಿ ಸುಮಾರು ಹದಿನೈದಡಿ ಉದ್ದಕ್ಕೆ ಹೊಸತೇ ಕಟ್ಟಡ ಎಬ್ಬಿಸಿದೆ. ಅದಕ್ಕೆ ಮಧ್ಯ ಎತ್ತರದಲ್ಲಿ ಕಾಂಕ್ರೀಟ್ ಮಾಳಿಗೆ ಬಂತು. ಅನಂತರ ಮೂಲ ಹಿತ್ತಿಲ ಗೋಡೆ ಬೀಳಿಸಿ, ದೈನಂದಿನ ಆವಶ್ಯಕ ಪುಸ್ತಕಗಳನ್ನಷ್ಟೇ ಹೊಸ ವ್ಯವಸ್ಥೆಗೆ ದಾಟಿಸಿದೆವು. ಹೆಚ್ಚುವರಿ ಪುಸ್ತಕಗಳ ಭಾರೀ ಹೊರೆಯನ್ನು ಮನೆಗೆ ಸಾಗಿಸಿ, ರಾಶಿ ಹಾಕಿದೆ. ಮತ್ತೆ ಎದುರು ಭಾಗದಲ್ಲಿ ಮರದ ಅಟ್ಟ ಬಿಚ್ಚಿ, ಅಲ್ಲಿಗೂ ಕಾಂಕ್ರೀಟ್ ಚಪ್ಪಡಿಯ ಎರಕ ಬಂತು. ನೆಲವನ್ನು ಹೊಸ ಕಟ್ಟಡ ಹಾಗೂ ಎದುರಿನ ಪುಟ್ಟಪಥಕ್ಕೆ ಹೊಂದುವಂತೆ ಸಾಕಷ್ಟು ತಗ್ಗಿಸಿದ್ದಾಯ್ತು. ವಿಸ್ತರಿಸಿದ ಅವಕಾಶಕ್ಕೆ ತಕ್ಕಂತೆ ಮರದ ಕಪಾಟು, ಹಳತರ ಹೊಂದಾಣಿಕೆಗಳು, ಆವಶ್ಯಕ ಸೌಕರ್ಯಗಳು ನಡೆಯುತ್ತಿದ್ದಂತೆ….

ಅದುವರೆಗೆ ಜ್ಯೋತಿಯಿಂದ ಕಂಕನಾಡಿಯವರೆಗೆ ಸದಾ ರೋಗಗ್ರಸ್ತ ದ್ವಿಪಥ ಡಾಮರು ರಸ್ತೆಯಷ್ಟೇ ಇತ್ತು. ನಗರಾಡಳಿತ ಅದನ್ನು ಒಮ್ಮೆಗೇ ಚತುಷ್ಪಥವನ್ನಾಗಿಸುವ ಕಾಮಗಾರಿ ಕೈಗೆತ್ತಿಕೊಂಡಿತು. ನಮ್ಮ ದಾರಿಯಲ್ಲಿ ವಾಹನ ಸಂಚಾರವಿಲ್ಲದೆ ನನಗೆ ರಚನಾ ಸಾಮಗ್ರಿಗಳ ಸಾಗಣೆ ಕಷ್ಟವಾಯ್ತು. ನಡೆದು ಬರುತ್ತಿದ್ದ ವಿರಳ ಗಿರಾಕಿಗಳನ್ನೂ ಸತಾಯಿಸಿತು. ‘ಒಳ್ಳೇ ನಾಳೆಗಳಿವೆ’ ಎಂದು ಅನಾನುಕೂಲಗಳನ್ನು ಸುಧಾರಿಸಿಕೊಳ್ಳುತ್ತಿರುವಾಗಲೇ ಮಳೆಗಾಲ ಶುರುವಾಗಿತ್ತು. ಅದರೊಡನೆ ನನ್ನ ಮನೆಯದೊಂದು ದೊಡ್ಡ ಸಮಸ್ಯೆ ದಿಢೀರನೆ ಉದ್ಭವಿಸಿತ್ತು.

ಪಿಂಟೋರವರ ಓಣಿಯಲ್ಲಿ ನಾನು ೧೯೮೦ರಲ್ಲೇ ಸ್ವಂತ ಮನೆ ಕಟ್ಟಿಸಿಕೊಂಡಿದ್ದೆ. ಆ ಕಾಲಕ್ಕೆ ನನ್ನ ನಿವೇಶನದ ಉತ್ತರ ಮಗ್ಗುಲಿನಲ್ಲಿ, ಸುಮಾರು ಆರೇಳು ಅಡಿ ತಗ್ಗಿನಲ್ಲಿ ಹಳೆಗಾಲದ ಒಂದು ದೊಡ್ಡ ಅಂಗಳ, ನಡುವೆ ಒಂದು ಹಂಚಿನ ಮನೆ ಇತ್ತು. (ಇಂದಿನ ಅಭಿಮಾನ್ ಬಿಲ್ಡರ್ಸಿನ ಮಾಲಕಿ, ಅಂದು ಪುಟ್ಟ ಹುಡುಗಿ, ತಂದೆ ತಾಯಿ ಸೋದರಿಯೊಡನೆ ಅಲ್ಲೇ ಇದ್ದರು.) ಎಂಬತ್ತರ ದಶಕದ ಕೊನೆಯಲ್ಲಿ ಆ ನಿವೇಶನವನ್ನು ಜಾನ್ ರಾಜ್ ಎಂಬೊಬ್ಬ ಕಟ್ಟಡ ನಿರ್ಮಾಪಕ ಕೊಂಡು, ಪೀಸ್ ಲ್ಯಾಂಡ್ ಅಪಾರ್ಟ್‍ಮೆಂಟ್ ಹೆಸರಿನಲ್ಲಿ ಎರಡು ಮಾಳಿಗೆಯಲ್ಲಿ ಸುಮಾರು ಇಪ್ಪತ್ಮೂರು ಮನೆಗಳ ವಸತಿ ಸಮೂಹವನ್ನೇ ಕಟ್ಟತೊಡಗಿದ್ದರು. ಆತ ನಮ್ಮೆರಡು ಅಂಗಳಗಳ ವ್ಯತ್ಯಾಸವನ್ನು ಸ್ಪಷ್ಟಗೊಳಿಸುವಾಗ, ಯಾರಿಗೂ ಅರಿವಿಲ್ಲದೆ ಅತ್ತ ತಗ್ಗು ಹೆಚ್ಚಿತ್ತು ಮತ್ತು ನಮ್ಮ ಪಾಗಾರದ ಅಡಿಪಾಯ ದುರ್ಬಲವಾಗಿತ್ತು. ಪರಿಣಾಮವಾಗಿ, ಮಳೆ ಹೆಚ್ಚಿದ್ದ ಒಂದು ಸಂಜೆ ನಮ್ಮ ಪಾಗಾರದ ಒಂದು ಮೂಲೆಯಲ್ಲಿ ಮಾಟೆ ಬಿದ್ದು, ಸುಮಾರು ಮೂವತ್ತಡಿ ಉದ್ದಕ್ಕೆ ಪಾಗಾರ ಸಹಿತ ಅಂಗಳವೇ ಅತ್ತ ಮಗುಚಿ ಬಿತ್ತು. ಮನೆಯ ಅಡಿಪಾಯವನ್ನೇ ಅಪಾಯದ ಅಂಚಿಗೆ ತಂದಿತ್ತು. ಗಾಯದ ಮೇಲೆ ಉಪ್ಪು ಚೆಲ್ಲಿ, ಬರೆ ಹಾಕಿದಂತಾಗಿತ್ತು ನನ್ನ ಅವಸ್ಥೆ.

ವಸತಿ ಸಮೂಹದ ನಿರ್ಮಾಪಕ ವೆಚ್ಚ ಭರಿಸುವ ಆಶ್ವಾಸನೆ ಕೊಟ್ಟರೂ ಕೆಲಸದ ಗುಣಮಟ್ಟ ಖಾತ್ರಿಪಡಿಸಿಕೊಳ್ಳಲು ನಿರ್ವಹಣೆಯನ್ನು ನಾನೇ ವಹಿಸಿಕೊಂಡೆ. ಅಂಗಡಿ ಕೆಲಸ ನಡೆಸಿದ್ದ ಕಂತ್ರಾಟುದಾರನೇ ತುರ್ತಾಗಿ ಜನ ಹಚ್ಚಿ, ರಾತ್ರಿ ಹಗಲೆನ್ನುವಂತೆ ಮಳೆನೀರ ಗಂಡಿ ಬಿಡಿಸಿ ಕೊಟ್ಟ. ಹದಿನೈದಡಿ ಆಳದಲ್ಲಿ ಬಲವಾದ ಅಡಿಪಾಯವನ್ನೇ ಹಾಕಿಸಿದೆ. ಪಾಗಾರ ಮೇಲೆ ಬರುವಾಗ ಈ ಬದಿಗೆ ಬರಿದೇ ಮಣ್ಣು ತುಂಬುವ ಬದಲು, (ಪ್ರಕಟಣೆಗಳ ದಾಸ್ತಾನಿಗೆ ಆವಶ್ಯಕವೇ ಆಗಿದ್ದ) ನೆಲ ಅಂತಸ್ತು ಮಾಡಿಸಿಕೊಂಡೆ. ಕಟ್ಟಡ ನಮ್ಮ ಅಂಗಳದ ಮಟ್ಟಕ್ಕೆ ಬಂದಲ್ಲಿ, (ಕಾರಿಲ್ಲದೆಯೂ) ಶೆಡ್ಡು ಕಟ್ಟಿಸಿ ಮುಗಿಸಿದೆ. ಹೀಗೆ ಅಂಗಡಿ, ದಾರಿ ಮತ್ತು ಮನೆ ಎಂಬ ತಾಪತ್ರಯದಲ್ಲಿ ಕಾಲ ಸುಮಾರು ಎರಡು ವರ್ಷಗಳೇ ಸಂದುಹೋಗಿದ್ದವು. ಸಾಹಸಯಾನಕ್ಕೆಂದು ತಂದೆ ತಾಯಿಯರಿಂದ ಪಡೆದ ವರ ಅಮಾನತಿನಲ್ಲಿದ್ದಂತೆ, ಉಲ್ಲಾಸ ಕಾರಂತರ ಮಾಯೆ ಎರಗಿತ್ತು….

ನನ್ನ ಗಟ್ಟಿ ಹವ್ಯಾಸ ಪರ್ವತಾರೋಹಣ ಮತ್ತು ತತ್ಸಂಬಂಧೀ ಸಣ್ಣ ಪುಟ್ಟ ಸಾಹಸಗಳು. ಇವನ್ನು ನಾನೆಂದೂ ಮೈ ಸೊಕ್ಕು ತೀರಿಸಲೆಂಬಂತೆ ನಡೆಸಿರಲಿಲ್ಲ. ನಡೆದ ದಾರಿ, ಶಿಖರ ಸಾಧನೆ, ವನ, ವನ್ಯ ಮತ್ತು ಜಲಾದಿ ಪ್ರಾಕೃತಿಕ ಸಿರಿಗಳನ್ನು ಇದ್ದಂತೇ ಅನುಭವಿಸುವುದರೊಡನೆ ಅವುಗಳ ಸಂರಕ್ಷಣೆಯ ಕುರಿತ ಕಾಳಜಿ ಬೆಳೆಸಿಕೊಂಡಿದ್ದೆ. ಆದರೆ ಇಂಥಾ ಕಾಳಜಿಗೆ ಸ್ಪಷ್ಟ ದಿಕ್ಕು ಕೊಡುವ ಕೆಲಸವನ್ನು ಅತ್ತ ಉಲ್ಲಾಸ ಕಾರಂತ ನಾಗರಹೊಳೆಯಲ್ಲಿ ನಡೆಸಿದ್ದರು. ಅವರು ಆಗ ಹುಲಿ ಸಂಶೋಧನೆಯಲ್ಲಿ ಮುಳುಗಿ, ವಿಸ್ತೃತ ವನ್ಯಸಂರಕ್ಷಣೆಯ ಚಿಂತನೆಯ ಪೋಷಣೆ ನಡೆಸಿದ್ದರು. ಇವು ನನ್ನನ್ನು ಗಾಢವಾಗಿ ತಟ್ಟಿತ್ತು ಎನ್ನುವುದಷ್ಟೇ ನಿಜ. ಅದಕ್ಕೆ ಬೇಕಾದ ಅಧ್ಯಯನದ ಬಲ, ವೃತ್ತಿ ಮತ್ತು ಸಾಂಸಾರಿಕ ಜವಾಬ್ದಾರಿಗಳನ್ನು ಕಳಚಿಕೊಳ್ಳುವ ತಾಕತ್ತು ನನಗಿರಲಿಲ್ಲ. ಹಾಗಾಗಿ ವನ್ಯ ಸಂರಕ್ಷಣೆ ಎನ್ನುವುದು ನನಗೆ ರೂಪವಿಲ್ಲದ ಹಂಬಲವಷ್ಟೇ ಆಗಿತ್ತು. ಇದನ್ನು ಎಲ್ಲೋ ಎಂದೋ ಉಲ್ಲಾಸರಲ್ಲೂ ಹೇಳಿಕೊಂಡಿದ್ದೆ. ಅದು ಈ ವೇಳೆಗೆ ಫಲಿಸಿತ್ತು.

ಉಲ್ಲಾಸರು ಸಂಶೋಧನೆಯ ಭಾಗವಾಗಿ ನಾಗರಹೊಳೆಯ ಪ್ರಾಣಿಗಣನೆ ನಡೆಸುತ್ತಿದ್ದರು. ಅದಕ್ಕೆ ವನ್ಯ ಚಾರಣದ ತಾಕತ್ತಿದ್ದ, ಸಾಮಾನ್ಯ ಜ್ಞಾನದ ಸ್ವಯಂ ಸೇವಕರನ್ನು ಸೇರಿಸಿಕೊಳ್ಳುತ್ತಿದ್ದರು. ತಿಂಗಳಾನುಗಟ್ಟಳೆ ನಡೆಯುವ ಅದರಲ್ಲಿ ಒಂದು ವಾರದ ಅವಧಿಯನ್ನು ನಾನು, ಗೆಳೆಯ ಕೃಷ್ಣಮೋಹನ ಪ್ರಭು ಜೊತೆ ಅನುಭವಿಸಿದೆ. ಮುಂದುವರಿದಂತೆ ನಮ್ಮ ಹುರುಪು ನೋಡಿದ ಉಲ್ಲಾಸರು, ದಕ ವಲಯದೊಳಗೆ ಹುಲಿ ಸಂರಕ್ಷಣಾ ಪ್ರಚಾರ ನಡೆಸುವ ಜವಾಬ್ದಾರಿಯನ್ನು ನಮಗೆ ವಹಿಸಿದರು. ಈ ಎಲ್ಲ ಕಲಾಪಗಳ ವಿವರಗಳನ್ನು ನಾನು ಈ ಹಿಂದೆಯೇ ಪರ್ವತಾರೋಹಿಗೆ ವನ್ಯ ದೀಕ್ಷೆ, ಉಲ್ಲಾಸ್ ಕರೆದಲ್ಲಿಗೆ ಹುಲಿ ಬರುತ್ತೆ ಮತ್ತು ಹುಲಿ, ಹುಲಿ ಎಂಬ ಮೂರು ಕಂತುಗಳಲ್ಲಿ ಇಲ್ಲೇ ಪ್ರಕಟಿಸಿರುವುದರಿಂದ ಈಗ ಪ್ರತ್ಯೇಕ ವಿಸ್ತರಿಸುವುದಿಲ್ಲ. ಹೀಗೆ ಅವನ್ನೂ ತೃಪ್ತಿಕರವಾಗಿ ಪೂರೈಸಿಕೊಂಡ ಮೇಲೆ, ಅಂದರೇ….

೧೯೯೬ರ ಫೆಬ್ರುವರಿ ಮೊದಲ ವಾರ, ಅಂದರೆ ಪ್ರಯಾಣಾರಂಭಕ್ಕೂ ಸುಮಾರು ಎರಡೂವರೆ ತಿಂಗಳ ಮೊದಲಷ್ಟೇ ನಾನು ಎರಡನೇ ಮೋಟಾರ್ ಸೈಕಲ್ ಸಾಹಸಯಾನದಲ್ಲಿ ಭಾರತ ಸುತ್ತಿ ಬರುವ ಕಲಾಪದ ಪೂರ್ವರಂಗಕ್ಕಿಳಿದೆ. ನಮ್ಮ ೧೯೮೫ರ ಮೊದಲ ದೀರ್ಘ ಬೈಕ್ ಯಾನ – ‘ಹತ್ತು ದಿನಗಳ ದಕ್ಷಿಣ ಭಾರತ ದರ್ಶನ’ಕ್ಕಾಗುವಾಗ (ನೋಡಿ ದಕ್ಷಿಣಾಪಥದಲ್ಲಿ ಚಕ್ರವರ್ತಿಗಳು) ಎರಡೂ ಯೆಜ್ದಿ ಬೈಕ್‍ಗಳೇ ಓಡಿದ್ದು ಆಕಸ್ಮಿಕ. ಆದರೆ ೧೯೯೦ರ ಪ್ರಾಕೃತಿಕ ಭಾರತದ ಸೀಳೋಟಕ್ಕಾಗುವಾಗ ಮೂರೂ ಹೀರೋ ಹೊಂಡಾಗಳೇ ಆದದ್ದು ಮಾತ್ರ ಯೋಗ್ಯತೆಯಿಂದಲೇ. ಇಂಥವಕ್ಕೆ ಯೆಜ್ದಿ, ರಾಜದೂತಾದಿ ಹಳೆಗಾಲದ ಮತ್ತು ಎರಡು ಆಘಾತದ ಯಂತ್ರಗಳಂತೆ ಶೀಘ್ರ ಬಳಲಿಕೆ ಆಗುತ್ತಿರಲಿಲ್ಲ. ಜಪಾನೀ ಮೂಲದ ಹೀರೊಂಡಾಕ್ಕಿದ್ದ ಹೊಸ ಲೋಹಸಂಯುಕ್ತದ ಹಂದರ, ಹಗುರವೂ ಹೊರೆ ಹೊರುವಲ್ಲಿ ಹೆಚ್ಚು ಸಮರ್ಥವೂ ಇತ್ತು. ಸವಾರರಿಗೆ ಕಚ್ಚಾ ಮಾರ್ಗಗಳಲ್ಲಿ ಇವುಗಳ ನಿರ್ವಹಣೆ ಬುಲೆಟ್ಟಿನಂಥ ತೂಕಭಾರೀ ಬೈಕುಗಳಿಗೆ ಹೋಲಿಸಿದರೆ ತುಂಬ ಸುಲಭ. ಎಲ್ಲಕ್ಕು ಮುಖ್ಯವಾಗಿ ಇದರ ನೂರು ಸಿಸಿ ಮತ್ತು ನಾಲ್ಕು ಆಘಾತದ ಇಂಜಿನ್ ಇಂಧನ ಕ್ಷಮತೆ, “ಲೀಟರ್ ಪೆಟ್ರೋಲಿಗೆ ಅರವತ್ತು ಕಿಮೀ” ಎಂದೇ ಖ್ಯಾತವೂ ಅದ್ವಿತೀಯವೂ ಇತ್ತು. ಭಾರತ ಸೀಳೋಟ ಮುಗಿದ ಮೇಲಂತೂ ನಾವು “ಇಂಥ ಇನ್ನೊಂದು ಬೈಕೇ ಇಲ್ಲ” ಎಂದು ಒಕ್ಕೊರಲಿನಲ್ಲಿ ಘೋಷಿಸಿದ್ದೆವು. ಆದರೆ…

ಈ ನಡುವಿನಲ್ಲಿ, ಹೊಂಡಾದಂತೆ ಇನ್ನೊಂದೇ ಖ್ಯಾತ ಜಪಾನೀ ಕಂಪೆನಿ ಕವಾಸಾಕೀ ಭಾರತೀಯ ಬಜಾಜ್ ಸಹಯೋಗದಲ್ಲಿ ತನ್ನ ನೂರು ಸಿಸಿ, ನಾಲ್ಕು ಆಘಾತಗಳ ಬೈಕ್ ಬಿಡುಗಡೆ ಮಾಡಿತ್ತು. ಇದು “ಲೀಟರಿಗೆ ಎಂಬತ್ತು ಕಿಮೀ” ಎನ್ನುತ್ತಲೇ ಹೀರೋ ಹೊಂಡಾಕ್ಕೆ ಸೆಡ್ಡು ಹೊಡೆದು ಅದ್ಭುತ ಪ್ರಚಾರ ಸತ್ರವನ್ನು ನಡೆಸಿತು. ಅದಕ್ಕೆ ಮರುಳುಗಟ್ಟಿ, ನಾನೂ ಸೇರಿದಂತೆ ದೊಡ್ಡ ಮಿತ್ರ ಬಳಗ, ನಮ್ಮ ಹಳೆ ಬೈಕುಗಳನ್ನು ಸಿಕ್ಕ ಬೆಲೆಗೆ ಮಾರಿ, ಒಳದಾರಿ ಹಿಡಿದು ‘ಬಜಾಜ್ ೪-ಎಸ್’ ಕೊಂಡೆವು. ಅದು ಆರಂಭಿಕ ಓಟಗಳಲ್ಲಿ ನಮಗೆ ಭಾರೀ ಕುಶಿ ಕೊಟ್ಟದ್ದು ನಿಜ. ಆದರೆ ಹೊಸತನ ಮಾಸುವುದರೊಳಗೆ ಒಂದೊಂದೇ ‘ಬಜಾಜ್ ೪-ಎಸ್’ ಹೃದಯ ದೌರ್ಬಲ್ಯ ಪ್ರಕಟಿಸತೊಡಗಿದವು. ಮಳೆನಾಡಿನ ಮಳೆಗಾಲಕ್ಕಂತೂ ಅವುಗಳ ಕಾಟ ಅಸಾಧ್ಯವೇ ಆಗಿತ್ತು. ಕಳಶಪ್ರಾಯವಾಗಿ ಸ್ಥಳೀಯ ವಿತರಕನ ನಿದ್ರಾಪ್ರಿಯತೆ, ಭಾರತೀಯ ನಿರ್ಮಾಪಕನ ಬೇಜವಾಬ್ದಾರೀ ಕಾಡತೊಡಗಿತು. ಮಾರಿ ಕೈತೊಳೆದುಕೊಳ್ಳೋಣವೆಂದರೆ ಅಷ್ಟರಲ್ಲೇ ಅದರ ಅಪಖ್ಯಾತಿ ಬೆಳೆದು ಬೆಲೆಯೂ ಬಿದ್ದು ಹೋಗಿತ್ತು. ಆದರೆ ನನಗೆ ಎರಡನೇ ಭಾರತ ಯಾನ ಹರಳುಗಟ್ಟುತ್ತಿದ್ದಂತೆ ವಿಳಂಬಿಸುವುದನ್ನು ಬಿಟ್ಟು, ಸಿಕ್ಕ ಬೆಲೆಗೆ ಕವಾಸಾಕಿಯನ್ನು ಸಾಕುವುದು ಬಿಟ್ಟು, ಸಾಗ ಹಾಕಿದೆ. ಮತ್ತೆ ಅದೃಷ್ಟಕ್ಕೆ, ಈ ವೇಳೆಗೆ ನಮ್ಮ ಸಾಹಸಯಾನದ ತುರ್ತನ್ನು ಸರಿಯಾಗಿ ಅರ್ಥ ಮಾಡಿಕೊಂಡ ಸ್ಥಳೀಯ ಹೀರೊಂಡಾ ವಿತರಕ – ಸುನೀಲ್ ಕೀರ್ತಿ, “ಕನಿಷ್ಠ ಮೂರು ತಿಂಗಳಾದರೂ ಬೇಕು” ಎನ್ನುವ ಸರದಿಯ ಪಟ್ಟಿ ಹಾರಿಸಿ, ನನಗೆ ಹೊಸದೊಂದು ಬೈಕನ್ನು ಮಾರಿದರು. ಇತ್ತ ಕಿಶೋರಿಗೂ ಅಂಥಾದ್ದೇ ಏನೋ ತುರ್ತಿನಲ್ಲಿ ಹೀರೊಂಡಾ ಬೇಕಾದಾಗ, ನಮ್ಮ ಹಳೇ ಪರಿಚಯದ ಹುಬ್ಬಳ್ಳಿ ವಿತರಕ – ಛಡ್ಡಾ, ಕೂಡಾ ಸರದಿ ಪಟ್ಟಿ ಹಾರಿಸಿ ಅವರಿಗೆ ಬೈಕ್ ಕೊಡಿಸಿದರು. ಈ ಎಲ್ಲದರ ಕೊನೆಯಲ್ಲಿ…

“೧೪-೪-೯೬ರಿಂದ ೧೮-೫-೧೯೯೬ರವರೆಗೆ ಎರಡನೇ ಭಾರತ ಬೈಕ್ ಯಾನ” ಎಂದು ಅನೌಪಚಾರಿಕ ಘೋಷಣೆಯನ್ನು ಮಿತ್ರವಲಯದಲ್ಲಿ ಹಬ್ಬಿಸಿದೆ. ಕಳೆದ ಬಾರಿಯ ಮೂಲ ಮೂರು, ನಡುವೆ ಸೇರಿಕೊಂಡ ಎರಡು ಬೈಕುಗಳಲ್ಲಿ ನಾಲ್ಕು ಬೈಕುಗಳು, ಒಟ್ಟಾರೆ ಐದು ಸವಾರರು – ಬಾಲಣ್ಣ, ನಾಯಕ್, ರಾಜ, ಪ್ರಸನ್ನ ಮತ್ತು ಮೋಹನ್ ಏನೇನೋ ಕಾರಣಗಳಿಂದ ಹಿಂದುಳಿದರು. ಯಾರದೇ ಬೈಕಾದರೂ “ಸಹವಾರಿತ್ವಕ್ಕೆ ನಾವಿದ್ದೇವೆ” ಎಂದಿದ್ದ ವೆಂಕಟ್ರಮಣ ಉಪಾಧ್ಯ ಮತ್ತು ಕೆ.ಎಲ್. ರೆಡ್ಡಿ ಕೂಡಾ ಹತಾಶರಾದರು. ಸೀಳೋಟದ ರಮ್ಯಚಿತ್ರಗಳಿಗೆ ಮಾರುಹೋಗಿ ಸಂದ ಐದು ವರ್ಷಗಳುದ್ದಕ್ಕೆ ಅನೇಕ ಸಾಹಸಿಗಳು, ಅಂಥಾದ್ದು ಇನ್ನೊಂದಾದರೆ ನಾ ಮುಂದು ತಾ ಮುಂದು ಎಂದದ್ದಿತ್ತು. ಅದರಲ್ಲೂ ಕೆಲವು ಬೈಕ್‍ವೀರರು “ನಾನೇ ಜೋಡಿಯನ್ನೂ ಕರೆದುಕೊಂಡು ಬರುತ್ತೇನೆ” ಎಂದು ಆಶ್ವಾಸನೆ ಕೊಟ್ಟದ್ದೂ ಇತ್ತು. ಆದರೆ ನಿಜ ಸಾಹಸಯಾನದ ಘೋಷಣೆಯಾದಾಗ, ವಿವರಗಳ ಪ್ರಖರತೆಗೆ ಬುರುಗುಗಳೆಲ್ಲ ಆರಿಹೋದವು. ನನ್ನೊಂದೇ ಬೈಕ್ (ಖಾಯಂ ಸಂಗಾತಿ ದೇವಕಿಯೊಡನೆ) ಅಷ್ಟು ದೊಡ್ಡ ಓಟ ನಡೆಸುವುದೇ? ಕನಿಷ್ಠ ಎರಡು ಬೈಕಲ್ಲದೇ ಸಾಹಸಯಾನವೇ ಅಸಾಧ್ಯ ಎನ್ನುವ ವೇಳೆಗೆ, “ನಾನಿದ್ದೇನೆ” ಎಂದು ಗಟ್ಟಿ ನಿಂತವರು ಕಿಶೋರ್ ಕುಮಾರ್. ಸಿಂಡಿಕೇಟ್ ಬ್ಯಾಂಕಿನ ನೌಕರ ಕಿಶೋರ್, ದೀರ್ಘಯಾನಕ್ಕಷ್ಟೇ ಮೊದಲಿಗರು. ಆರೋಹಣಕ್ಕೂ ಉಪಾಧ್ಯರಿಗೂ ಹಳೆಯ ಹುಲಿ. ಪಾಪ, ರೆಡ್ಡಿಯವರಿಗೆ ಇನ್ನೊಬ್ಬ ಸವಾರ ಬರಲೇ ಇಲ್ಲ.

ಬೈಕ್ ಎರಡು, ಜನ ನಾಲ್ಕು, ದಿನ ಸುಮಾರು ಮೂವತ್ನಾಲ್ಕು, ಓಟ ಸುಮಾರು ಏಳೂವರೆ ಸಾವಿರ ಕಿಮೀ ಮತ್ತು ತಲಾ ಖರ್ಚು ಸುಮಾರು ಹದಿನೈದು ಸಾವಿರ – ಯೋಜನೆ ಖಚಿತವಾಯ್ತು. ಕಳೆದ ಬಾರಿ ಮಂಗಳೂರಿನಿಂದ ತೊಡಗಿದ ಮೂವತ್ತು ದಿನಗಳ ಸವಾರಿಯ ಕೊನೆ ಬಿಂದು ದಿಲ್ಲಿ, ಹಿಂಪಯಣ ರೈಲಿನದ್ದಾಗಿತ್ತು. ಈ ಬಾರಿ ಮಂಗಳೂರಿನಿಂದ ರೈಲು, ಸವಾರಿಯ ಆರಂಭ ಬಿಂದು ಕೊಲ್ಕೊತ್ತಾ, ಮುಕ್ತಾಯ ಮಂಗಳೂರು. ಹಿಂದೆ ದಿಲ್ಲಿ – ಮಂಗಳೂರು ಒಂದೇ ರೈಲು. ಆಗ ಆತ್ಮೀಯರೂ ಸಂಬಂಧಿಕರೂ ಆದ ಎಂ.ಎಸ್. ಭಟ್ಟರ (ನಿವೃತ್ತ ಹಿರಿಯ ರೈಲ್ವೇ ಅಧಿಕಾರಿ) ಸಲಹೆ, ಸಂಪರ್ಕಗಳ (ವಿವಿ ಮೆಹ್ತಾ) ಪೂರ್ಣ ಬಲವಿದ್ದೂ ನಮಗೆ ದಿಲ್ಲಿಯಲ್ಲಿ ಬೈಕ್ ರೈಲಿಗೇರಿಸಲು ಕೂಲಿಕಾರರ ಗ್ಯಾಂಗ್ ಸಾಕಷ್ಟು ರಗಳೆ ಮಾಡಿತ್ತು. ಮಂಗಳೂರು ಕೊಲ್ಕತ್ತಾ ದಾರಿಯಲ್ಲಿ ಒಂದೇ ರೈಲ್ ಇರಲಿಲ್ಲ. ಅಂದರೆ ಮದ್ರಾಸಿನಲ್ಲಿ ನಾವು ರೈಲು ಬದಲಿಸುವುದರೊಡನೆ ಬೈಕುಗಳನ್ನು ಇಳಿಸಿ, ಇನ್ನೊಂದಕ್ಕೆ ಏರಿಸುವ ಹೆಚ್ಚುವರಿ ಸಂಕಟ ಇತ್ತು. ಇದನ್ನು ತೀರಾ ದೂರದ ಅಪರಿಚಿತ ಸ್ಥಳಗಳಿಗಿಂತ ಮಂಗಳೂರು ಮತ್ತು ಹೆಚ್ಚು ನೆಚ್ಚಬಹುದಾದ ಮದ್ರಾಸಿಗೆ ಹೊಂದಿಸಲು ಒಟ್ಟಾರೆ ಕಲಾಪ ನಕ್ಷೆಯನ್ನು ತಿರುಗಿಸಿಟ್ಟಿದ್ದೆ.

ಎರಡನೇ ಭಾರತ ಸವಾರಿಗೆ ಭಾರತ ಸೀಳೋಟಕ್ಕೂ ಮೀರಿ ವಿವರಗಳ ಪುಷ್ಟಿ ಸಿಕ್ಕಿತ್ತು, ಹೆಚ್ಚಿನ ಜನಗಳ ಸಹಕಾರವೂ ಒದಗಿತ್ತು. ಅವುಗಳ ನೀರಸ ವಿವರಣೆಯನ್ನು ಕೊಟ್ಟು ನಿಮ್ಮ ಕುತೂಹಲ ತಗ್ಗಿಸುವುದಿಲ್ಲ, ಮುಂದೆ ಅನ್ವಯವಾಗುವ ಸಂದರ್ಭಕ್ಕೆ ನೆನಪಿನ ಹೊರೆ ತರುವ ಕಷ್ಟವನ್ನೂ ಕೊಡುವುದಿಲ್ಲ. ಮುಂದಿನ ಅನಿಯತ ಕಂತುಗಳಲ್ಲಿ, ಬೈಕ್ ಯಾನದೊಳಗೆ ಅವನ್ನು ಸಾಂದರ್ಭಿಕವಾಗಿ ಬೆಸೆಯುತ್ತೇನೆ. ಇಷ್ಟು ಮಾತುಗಳೊಡನೆ, ಯಥಾಲಭ್ಯ ಚಿತ್ರ ಸಹಿತ, ಬಣ್ಣಿಪೆನೀ ‘ಭಾರತ ಅಪೂರ್ವ ಕರಾವಳಿಯೋಟ’ ಎಂಬ ಸಾಹಸ ಕಥಾಮೃತವಾ

(ಮುಂದುವರಿಯಲಿದೆ)