(ಭಾರತ ಅ-ಪೂರ್ವ ಕರಾವಳಿಯೋಟ – ೧೬)
ದೈವಿಕ ಸಂಗತಿಗಳಲ್ಲಿ ನನಗೆ ಎಳ್ಳಷ್ಟೂ ವಿಶ್ವಾಸ ಇಲ್ಲ. ಆದರೂ ಯಾವುದೇ ಆರಾಧನಾ ವಿಧಾನಗಳು, ಸ್ಥಳ, ಮೂರ್ತಿಶಿಲ್ಪ, ಸಂಬಂಧಿಸಿದ ಭವ್ಯ ಭವನಗಳನ್ನು ಒಮ್ಮೆಯಾದರೂ ನೋಡುವ ಅವಕಾಶ ಒದಗಿದಾಗ ತಪ್ಪಿಸಿಕೊಂಡದ್ದಿಲ್ಲ. ಅವನ್ನು ಅವಮಾನಿಸುವುದಾಗಲೀ ಪ್ರಾಮಾಣಿಕವಾಗಿ ನಂಬಿದವರನ್ನು ಪರಿವರ್ತಿಸುವ ಹಠವಾಗಲೀ ನನ್ನದಲ್ಲ. ಬದಲಿಗೆ ರಚನೆಗಳ ವೈಭವವನ್ನೂ ಅದರ ಸೃಷ್ಟಿಕರ್ತ ಮನುಷ್ಯನ ವರ್ತನೆಗಳನ್ನೂ ಕಂಡುಕೊಳ್ಳುವ ಕುತೂಹಲ ನನ್ನದು. ಹಾಗಾಗಿ ಈ ಯಾನದಲ್ಲಿ ಡಾರ್ಜಿಲಿಂಗ್, ಕಾನ್ಹಾಗಳಂತೆ ಕಾಶಿ, ಗಯಾಗಳನ್ನೂ ಪಟ್ಟಿ ಮಾಡಿ ನೋಡಿದ್ದೆ. ಅಲ್ಲಿ ದೇವ ಬಿಂಬದ ದರ್ಶನ, ಔಪಚಾರಿಕ ನಮನ, ತೀರ್ಥ ಪ್ರಸಾದಗಳಿಗೆ ನಾನು ಅಂಟಿಕೊಂಡದ್ದಿಲ್ಲ. ಉದಾಹರಣೆಗೆ, ತಿರುಮಲೆಯಲ್ಲಿ ಎರಡು ದಿನವಿದ್ದೂ ವೆಂಕಟ್ರಮಣನ ದರ್ಶನ ಮಾಡಲೇ ಇಲ್ಲ. ಆದರೆ ಎಲ್ಲೂ ಅವಾಗಿ ಒದಗಿದಾಗ ಭಾವ ತುಮುಲಗಳೇನೂ ಇಲ್ಲದೇ ತೀರ್ಥ, ಗಂಧ, ಹೂ, ತುಳಸಿ ಇತ್ಯಾದಿಗಳನ್ನು ವಸ್ತು ನಿಷ್ಠವಾಗಿ ಗ್ರಹಿಸುತ್ತ ಬಂದಿದ್ದೇನೆ. ತಿರುಪತಿಯ ಲಡ್ಡು, ಮಧೂರಿನ ಅಪ್ಪ, ಕಾಶ್ಮೀರದ ಖೀರು, ಅನ್ನಾವರಂನ ಸಪಾದಭಕ್ಷ್ಯ, ಕೃಷ್ಣಮಠದ ಮಡ್ಡಿ, ಶರವಿನ ಪಂಚಕಜ್ಜಾಯ, ಅನೇಕಾನೇಕ ದೇವಳಗಳ ಊಟ ಮುಂತಾದವನ್ನು ಮನಮೆಚ್ಚಿ ಸ್ವೀಕರಿಸಿದ್ದೇನೆ. ಅದೇ ಲೆಕ್ಕಾಚಾರದಲ್ಲಿ ಕರ್ನೂಲಿನಿಂದ ಪಶ್ಚಿಮಕ್ಕೆ ಸರಿಯುವಾಗ, ತುಂಗಭದ್ರಾ ತೀರದಲ್ಲೇ ಇರುವ ಮಂತ್ರಾಲಯ ನನಗೆ ಬಹಳ ದೊಡ್ಡ ಆಕರ್ಷಣೆಯೇ ಆಗಿತ್ತು.

ಆದರೆ ಹೆಚ್ಚು ಗಂಭೀರ ವೀಕ್ಷಣಾವಕಾಶ ಇರುವ ಹಂಪಿ, ಚಿತ್ರದುರ್ಗಗಳಿಗೆ ಕೊಡಬೇಕಾದ ಸಮಯಕ್ಕೆ ಕೊರತೆಯಾಗುತ್ತದೆಂಬ ಭಯಕ್ಕೆ ನಾವು ನೇರ ಹೊಸಪೇಟೆಯನ್ನೇ ಗುರಿ ಮಾಡಿಕೊಂಡಿದ್ದೆವು. ಬೆಳಿಗ್ಗೆ (೧೬-೫-೯೬) ಕಲ್ಕೂರರ ಬಂಧು, ಬಹುಶಃ ಅವರದೇ ಹೋಟೆಲಿನಿಂದ ಮೊದಲ ಹಬೆಯಲ್ಲೇ ಬೆಂದ ಇಡ್ಲಿ ಸಾಂಬಾರ್ ತಂದು ಕೊಟ್ಟದ್ದನ್ನು ಮನಸಾರೆ ಮೆದ್ದು, ದಾರಿಗಿಳಿಯುವಾಗ ಗಂಟೆ ಏಳೂವರೆ. ಆಗಲೇ ಗಾಜಿನ ಕೊಳವೆಯೊಳಗಿನ ಪಾದರಸ ೩೭ ಡಿಗ್ರಿಗೆ ಹೆಚ್ಚಿಕೊಂಡಿತ್ತು! ವಿಜಯನಗರ ಸಾಮ್ರಾಜ್ಯ ಕಾಲದ ಅಶ್ವಪುರಿ – ಕುದುರೆ ಸವಾರರ ನಿಲ್ದಾಣ, (ಗಂಟೆ ೯.೨೦) ಬದಲಾದ ಕಾಲಕ್ಕೆ ಬಡಕಲಾಗಿ ‘ಆಸ್ಪರಿ’ಯಾಗಿತ್ತು. ನಮ್ಮ ಕುದುರೆಗಳು ಬಳಲದಿದ್ದರೂ ಸವಾರರ ಬಿಸಿ ಇಳಿಸಲು ಅವಶ್ಯ ಒದಗಿತ್ತು. ಮುಂದೆ ಸಿಕ್ಕಿದ್ದು ಆಲೂರು. ನೀವೆಲ್ಲ ಕನ್ನಡ ರಾಜ್ಯೋತ್ಸವದ ಬಿಸಿಯಲ್ಲಿ ಸಾಕೋಸಾಕೆನಿಸುವಷ್ಟು “ಕಾವೇರಿಯಿಂದಮಾ ಗೊದಾವರಿವರಮಿರ್ದ…” ಕೇಳಿಯೇ ಇರ್ತೀರಿ. ಪ್ರಸ್ತುತ ಯಾನದಲ್ಲಿ ಕಾಕಿನಾಡದ ಹೊರವಲಯದಲ್ಲಿ ಗೋದಾವರಿ ನದಿ ಕಂಡಾಗ, ಈ ಮಾತು ನನಗೆ ನೆನಪಾಗಲಿಲ್ಲ.

ಆದರೆ ಆಲೂರು ಕಂಡಾಗ ಅದು ಜಾಗೃತವಾದ ತಪ್ಪಿಗೆ (ದಿನಚರಿಯಲ್ಲಿ ನಮೂದಿಸಿದ್ದೆ), ನನ್ನೆರಡು ಮೊಸಳೆ ಕಣ್ಣೀರು. (ಮತ್ತೆ “ಓಟು ಪಾಡ್ರ ಪೋನಾಗ ಮಲ್ಲ ಮೀಸೆ ಮರಪ್ಪಡೆ!”) ಕನ್ನಡದ ಏಕೀಕರಣಕ್ಕೆ ಹೋರಾಡಿದ ಹಿರಿಯರಲ್ಲಿ ಗಣ್ಯರು – ಆಲೂರು ವೆಂಕಟರಾವ್. ಜಗಕೆ ಇವರೊಬ್ಬರೇ ‘ಕನ್ನಡ ಕುಲ ಪುರೋಹಿತ.’ ಅವರ ಊರೇ ಇಂದು ಆಂಧ್ರದೊಳಗಿದೆ, ಎಂಬ ಸಣ್ಣ ವಿಷಾದದ ಎಳೆ ಅಂದಿನಿಂದ (೧೯೯೬) ಇಂದಿನವರೆಗೆ ನನ್ನ ತಲೆಯೊಳಗಿತ್ತು! ಇಂದು ಬರವಣಿಗೆಯ ಖಾಚಿತ್ಯಕ್ಕೆಂದು ತನಿಖೆ ಮಾಡಿದಾಗ, ವೆಂಕಟರಾಯರ ಆಲೂರು ಇಂದಿಗೂ ಅಪ್ಪಟ ಕನ್ನಡ ನೆಲದಲ್ಲೇ ಇದೆ. ಅದು ಮಹಾಕವಿ ಕುಮಾರವ್ಯಾಸನ ಗದಗಿನ ಬಳಿ ಇರುವ – ಹೊಳೆ ಆಲೂರು. ಆದರೆ ವಿದ್ವತ್ ವಲಯದೊಳಗೆ ಕೆಲವೊಮ್ಮೆ ಪ್ರಾಜ್ಞರೇ ತಪ್ಪು ಗ್ರಹಿಕೆಗಳನ್ನು ಪ್ರಚುರಿಸಿ, ಒಣ ಪ್ರತಿಷ್ಠೆಗಾಗಿ ಹಿಂದೆಗೆದುಕೊಳ್ಳಲು ಹಿಂಜರಿಯುವುದನ್ನು ಕಂಡಿದ್ದೇನೆ. ಹಾಗಾಗಿ ಹಾಸ್ಯಕ್ಕಾದರೂ ಇಷ್ಟಿರಲಿ ಎಂದು ದಾಖಲಿಸಿದ್ದೇನೆ. (ಸಣ್ಣ ಉದಾಹರಣೆ: ಯಕ್ಷ-ಕವಿ ಪಾರ್ತಿಸುಬ್ಬನ ಊರು! ಕುಕ್ಕಿಲ ಕೃಷ್ಣ ಭಟ್ಟರು ಸಪ್ರಮಾಣ ಸ್ಥಾಪಿಸಿದ್ದನ್ನು, ವಿನಾಕಾರಣ ಶಿವರಾಮ ಕಾರಂತರು ತಿರಸ್ಕರಿಸಿದ್ದು.)

ಹತ್ತೂವರೆಯ ಸುಮಾರಿಗೆ, ಸೌರ ಕುಂಡದಲ್ಲಿ ನಮ್ಮ ತಲೆ ಹುರಿದು ಹೊಟ್ಟಾದ (ಉಪಾಧ್ಯರ ಉಷ್ಣಮಾಪಕ – ೪೫ ಡಿಗ್ರಿ) ಹೊತ್ತಿಗೆ, ಕರ್ನಾಟಕ ಗಡಿ ಬಂತು. ನಮ್ಮ ತಳಮಳವನ್ನು (ಭಾವಾವೇಶ ಎಂದೇ ಅರ್ಥೈಸಿಕೊಳ್ಳಿ), ಒಂದು ಚಾ ಹೊಯ್ದು, (ಅರ್ಘ್ಯಂ ಸಮರ್ಪಯಾಮೀ) ಕನ್ನಡ ನೆಲಕ್ಕೆ ಚಕ್ರಾರ್ಪಣೆ (ಪಾದಾರ್ಪಣೆ ಎಂಬಂತೆವೋಲ್) ಮಾಡಿದೆವು. ಬೋರ್ಡು, ಕಿಲೋಕಲ್ಲುಗಳು ಬಳ್ಳಾರಿಯ ಬರವನ್ನು ಸಾರುತ್ತಿದ್ದಂತೆ ನನ್ನ ಬಳ್ಳಾರಿ ಪ್ರಜ್ಞೆಯೂ ಜಾಗೃತವಾಗಿತ್ತು. ಸಹಜವಾಗಿ ಮಾರ್ಗದಂಚಿನಲ್ಲಿ ಕಾಣಿಸಿದ ಮೋಕ ಜಲಾಶಯವನ್ನು ‘ಹಗರಿ ಬೊಮ್ಮನ ಹಳ್ಳಿ’ ಎಂದು (ತಪ್ಪಾಗಿ) ಗುರುತಿಸಿಕೊಂಡೆ. (ಅಂಧಾಭಿಮಾನ ತಪ್ಪು! ನಿಜದ ಹಗರಿಬೊಮ್ಮನಹಳ್ಳಿ, ಬಳ್ಳಾರಿ ಪೇಟೆಗೆ ನಾವು ಪ್ರವೇಶಿಸಿದ ವಿರುದ್ಧ ದಿಕ್ಕಿನಲ್ಲಿದೆ.)

ಬಾಲ್ಯದಲ್ಲಿ – ಅಂದರೆ, ಸುಮಾರು ಮೂರು ದಶಕಗಳ ಹಿಂದೆ ನಾನು ಹಗರಿ ಸರೋವರಕ್ಕೆ ‘ಸಮುದ್ರ ಸವಾರ’ನಾಗುವ ಹುಚ್ಚಿನಲ್ಲಿ ಬಂದ ಕತೆಯನ್ನು (೨೨ನೇ ಸಲ, ಮತ್ತೆ ಹೊಸದೆಂಬಂತೆ) ದೇವಕಿಗೆ ಮುದದಿಂದ ಕೊರೆ.. ಅಲ್ಲಲ್ಲ ಒರೆದಿರಬೇಕು! ಬಳ್ಳಾರಿ ಪೇಟೆಯಲ್ಲಂತೂ ನೆನಪಿನ ಎಳೆ ಹಿಡಿದು ಗಲ್ಲಿ ಗಲ್ಲಿ ಸುತ್ತುವ ಉತ್ಸಾಹ ಇತ್ತು, ಸಮಯ ಇರಲಿಲ್ಲ. ಸಂತ ಜಾನರ ಪ್ರೌಢಶಾಲೆ ಬೇಸಗೆ ರಜೆಯಲ್ಲಿ ಬಾಗಿಲಿಕ್ಕಿ ಕೂತಿತ್ತು. ಕೋಟೆಗೆ ಏರುವ ಮೆಟ್ಟಲಿನ ಪಕ್ಕದ ‘ಜಾರುಗುಪ್ಪೆ’ ಕಾದ ಕಾವಲಿಯಂತಿದ್ದರೂ ಒಮ್ಮೆ ಜಾರುವ ಆಸೆ ತಣಿಸಿದ್ದು ಸುಳ್ಳಲ್ಲ. ಕಂಟೋನ್ಮೆಂಟ್ ರೈಲ್ವೇ ಅಡ್ಡಗೇಟಿಗೆ ಬರುತ್ತಿದ್ದಂತೆ ಬಲಭಾಗದಲ್ಲಿ ಎನ್ಸಿಸಿ ಕಛೇರಿ ಕಂಡು ಆಶ್ಚರ್ಯವಾಯ್ತು. (ತಂದೆಯ ಕಾಲದಲ್ಲಿ ಕಛೇರಿ ರೈಲ್ವೇ ಗೇಟಿನ ಇನ್ನೊಂದು ಮಗ್ಗುಲಲ್ಲಿತ್ತು) ಕುತೂಹಲ ತಡೆಯದೆ ಬೈಕಿಳಿದು “ಯಾರಿದ್ದೀರಿ? ಮೊಯ್ನುದ್ದೀನ್, ಕೃಷ್ಣಪ್ಪ, ಹೀರಾಲಾಲ್…” ಎಂದೇ ಒಳ ನುಗ್ಗಿದ್ದೆ. ಹಳೆ ನೆನಪಿಗೆ ಇದ್ದ ಒಂದು ಕೊಂಡಿ – (ಬಹುಶಃ ಕೃಷ್ಣಪ್ಪ) ರಜೆಯಲ್ಲಿದ್ದ. ಬಟಾಲಿಯನ್ ಮುಖ್ಯಸ್ಥ ನನ್ನ ನೆನಪಿನಿಂದ (ಬಳ್ಳಾರಿಯ ಬಟಾಲಿಯನ್ ಕಚೇರಿ ಕಟ್ಟಿದ್ದು ನನ್ನಪ್ಪ ಎಂದಿದ್ದೆ) ಉತ್ತೇಜಿತರಾಗಿ, ಚಾ ತರಿಸಿ ಕೊಟ್ಟರು. ಹೆಚ್ಚಿನದ್ದಕ್ಕೆ ನಮಗೆ ಸಮಯವಿರಲಿಲ್ಲ. ಅಲ್ಲೇ ಆಚೆಗಿದ್ದ ನಮ್ಮ ಬಾಡಿಗೆ ಮನೆಯ ಯಾವ ಕುರುಹೂ ಪತ್ತೆಯಾಗಲಿಲ್ಲ….

ಹನ್ನೊಂದು ಗಂಟೆಯ ಸುಮಾರಿಗೆ ಉತ್ತರ ಅಂಚಿನಿಂದ ಬಳ್ಳಾರಿ ಪೇಟೆ ಪ್ರವೇಶಿಸಿದ್ದವರು, ದಕ್ಷಿಣ ಅಂಚಿನಿಂದ ಕಳಚಿಕೊಳ್ಳುವಾಗ ಹನ್ನೆರಡೂವರೆ ಗಂಟೆ. ವಿಶ್ವಪರಂಪರೆಯ ತಾಣ ಹಂಪಿ ನನ್ನ ಮನಃಪಟಲದಲ್ಲಿ (ಅಂದಿಗೆ ಮೂರು ದಶಕಗಳ ಹಿಂದೆ ನೋಡಿದ್ದರಿಂದ) ಕೇವಲ ಹಾಳುಹಂಪಿ. ಕನ್ನಡ ವಿಶ್ವವಿದ್ಯಾಲಯದ ನೆಪದಲ್ಲಿ ನಡುವೆ ಒಮ್ಮೆ ಭೇಟಿ ಕೊಟ್ಟಿದ್ದರೂ ವಿಶೇಷ ತಿರುಗಾಡುವ ಅವಕಾಶವಾಗಿರಲಿಲ್ಲ. ಪ್ರಸ್ತುತ ಸಾಹಸಯಾನದ ಯೋಜನಾಹಂತದಲ್ಲಿ, ಉತ್ಖನನದ ಹಂಪಿಯೊಡನೆ ವಿಶ್ವವಿದ್ಯಾಲಯದ ನವ-ವಠಾರ (ಕಾಮಲಾಪುರ) ಸೇರಿಸಿ ನೋಡುವ ಬಯಕೆ ಇಟ್ಟುಕೊಂಡಿದ್ದೆ. ಪುಸ್ತಕೋದ್ಯಮಿಯಾಗಿ ನಾನು ಅಲ್ಲಿನ ಅನೇಕರಿಗೆ ಅನಿವಾರ್ಯವಾಗಿ ಪರಿಚಿತನಾಗಿದ್ದೆ. ಹಾಗಾಗಿ ವಿವಿನಿಲಯದ ಅತಿಥಿ ಗೃಹಕ್ಕೆ ಲಗ್ಗೆ ಹಾಕುವ ಅಂದಾಜು ಮಾಡಿದ್ದೆ. ಆದರೆ ಅನೌಪಚಾರಿಕವಾಗಿ ಅವನ್ನೆಲ್ಲ ತೋಡಿಕೊಂಡು, ನನ್ನ ಜನವಾಗಿ ಅಲ್ಲಿ ನಿಲ್ಲಲು ಯಾರೆಂದು ಯೋಚಿಸಿದಾಗ, ಹೊಳೆದ ಒಂದೇ ಹೆಸರು ಪುರುಷೋತ್ತಮ ಬಿಳಿಮಲೆ.

‘ಕಾಗೆ ಮುಟ್ಟಿದ ನೀರು’ (೨೦೨೦) – ಪುರುಷೋತ್ತಮ ಬಿಳಿಮಲೆಯವರ ಆತ್ಮಕಥೆ. ಅದನ್ನು ನಾನೋದಿ, ಪ್ರಭಾವಿತನಾಗಿ ಬರೆದ ಪ್ರತಿಕ್ರಿಯಾ ಲೇಖನದ ಸಣ್ಣ ಭಾಗವನ್ನು ತುಸು ಪರಿಷ್ಕರಿಸಿ ಇಲ್ಲಿ ಕೊಡುತ್ತಿದ್ದೇನೆ. (ಪೂರ್ಣ ಓದಿಗೆ: ತೇನ್ಸಿಂಗ್ ಬಿಳಿಮಲೆ) ಸುಮಾರು ಒಂದು ತಿಂಗಳು ಮುಂಚಿತವಾಗಿ (೨೦-೩-೯೬) ಪುರುಷೋತ್ತಮರಿಗೆ ಪತ್ರಿಸಿದ್ದೆ. ಅದರಲ್ಲಿ ಮುಖ್ಯವಾಗಿ ವಿವಿನಿಲಯದ ಅತಿಥಿ ಗೃಹವನ್ನುದ್ದೇಶಿಸಿದ್ದರೂ “ಒಂದು ರಾತ್ರಿಗೆ ನಾಲ್ಕು ಮಂದಿಗೆ ಉಚಿತ ಅಥವಾ ರಿಯಾಯ್ತಿ ದರದ ನೆಲೆ ಕಾಣಿಸಬಲ್ಲಿರಾ?” ಎಂದೇ ಪತ್ರಿಸಿದ್ದೆ. ಕೊನೆಯಲ್ಲಿ ವಿಶೇಷ ಸೂಚನೆಯಾಗಿ “ಯಾರೂ ಮನೆಗೆ ಕರೆದು ಉಳಿಸಿಕೊಳ್ಳುವ ಹಿಂಸೆ ಅನುಭವಿಸಕೂಡದು” ಎಂದೇ ಬರೆದಿದ್ದೆ. ವಿವಿ ನಿಲಯಗಳ ಬಗ್ಗೆ ಆಗ ನನ್ನಲ್ಲಿದ್ದ ಭ್ರಮೆಯ ಕಾರಣದಿಂದ, ‘ಸಾಹಸಯಾನದಲ್ಲಿ ಬಂದವರೊಡನೆ ಅನೌಪಚಾರಿಕ ಸಂವಾದ’ ನಡೆಸಬಹುದು. ನಮಗೆ ಯಾವ ಭತ್ತೆ, ಸಂಭಾವನೆಯ ಅಪೇಕ್ಷೆಯೂ ಇಲ್ಲ ಎಂದೂ ಸ್ಪಷ್ಟಪಡಿಸಿದ್ದೆ. ಮರು ಟಪಾಲಿನಲ್ಲೆಂಬಂತೆ (೩೦-೩-೯೬) ಬಿಳಿಮಲೆ ಸರಳವಾಗಿ ಬರೆದರು “ವಿವಿನಿಲಯದ ಅತಿಥಿಗೃಹ ಸರಿಯಿಲ್ಲ. ನೀವು ಬರುವಂದು ವಿದ್ಯಾಸಂಸ್ಥೆಗಳಿಗೆ ವಾರ್ಷಿಕ ಬೇಸಗೆ ರಜಾದಿನಗಳಾದ್ದರಿಂದ ಹೆಂಡತಿ (ಶೋಭನಾ) ಮತ್ತು ಮಗ (ಅನನ್ಯ) ಊರಿನಲ್ಲಿರುತ್ತಾರೆ. ನಾನು ಇಲ್ಲೇ ಇರುತ್ತೇನೆ. ಉಳಿದದ್ದು ಮೊಖ್ತಾ…” ಎಂದು ಬರೆದು, ನಿಸ್ಸಂದಿಗ್ಧವಾಗಿ ತಮ್ಮ ಮನೆಯನ್ನೇ ನಮಗೆ ನಿಶ್ಚಯಿಸಿದ್ದರು.

ಒಂದೂವರೆಯ ಸುಮಾರಿಗೆ ಹೊಸಪೇಟೆ ತಲಪಿ, ಊಟ ಮುಗಿಸಿ, ನೇರ ಕನ್ನಡ ವಿವಿ ವಠಾರ – ಕಾಮಲಾಪುರಕ್ಕೆ, (ಸುಮಾರು ೧೫ಕಿಮೀ) ಹೋದೆವು. ವಿವಿನಿಲಯ ವಿರೂಪಾಕ್ಷ ದೇವಳದ ರಥಬೀದಿಯ ಕಲ್ಲ ಮಂಟಪಗಳಲ್ಲಿ ಅಂಬೆಗಾಲು ಹಾಕುತ್ತಿದ್ದಾಗ ಒಮ್ಮೆ ಕಂಡಿದ್ದೆ. ಯಾಕೋ ಆಗ ಗಾಡಿಯ ನೊಗಕ್ಕೆ ಮೋಟಾರ್ ಹೂಡಿದಂತೆ ಅನ್ನಿಸಿತ್ತು. ಆಧುನಿಕ ಅಗತ್ಯಗಳಿಗೆ ಹಳೆಗಾಲದ ರಚನೆಗಳನ್ನು ಹೊಂದಿಸಿಕೊಳ್ಳುವ ಕಷ್ಟ, ಸ್ಥಳದ ಕೊರತೆ, ಎಲ್ಲಕ್ಕೂ ಮಿಗಿಲಾಗಿ ತುಂಗಭದ್ರ ಸೊಕ್ಕಿದಾಗ ಎಲ್ಲವೂ ಸಚೇಲ ಸ್ನಾನ ಮಾಡಿದ ಕತೆಗಳನ್ನು ತಿಳಿದ ಯಾರೂ ಹೊಸ ನಿರ್ಮಾಣದ ಕುರಿತು ಅಪಸ್ವರ ತೆಗೆಯಲಾರರು. ಆದರೆ ಹೊಸ ವಠಾರ ಆಧುನಿಕ ಸಾಧ್ಯತೆಗಳೊಡನೆ ‘ವಿಜಯನಗರ’ದ ತೋರಿಕೆಯನ್ನು ಅನುಕರಿಸ ಹೊರಟಂತೆ ಕಂಡು ವಿಷಾದವೇ ಆಗಿತ್ತು. ಬಿಳಿಮಲೆಯೊಡನೆ ಸ್ವಲ್ಪವೇ ಸುತ್ತಾಡಿ, ಸ್ವತಂತ್ರವಾಗಿ ಹಂಪಿಯತ್ತ ಹೋದೆವು. ಬಹುಶಃ ವಿರೂಪಾಕ್ಷ ದೇವಳದ ವಠಾರವನ್ನಷ್ಟು ನೋಡಿ, ಕತ್ತಲೆಗೆ ಹೊಸಪೇಟೆಯಲ್ಲೇ ಇದ್ದ ಬಿಳಿಮಲೆಯವರ ಮನೆ ಸೇರಿಕೊಂಡೆವು.

ಪುರುಷೋತ್ತಮರಂತೆ ಅವರ ಇನ್ನೂ ಕೆಲವು ಸಹೋದ್ಯೋಗಿಗಳು, ಆ ಸಮಯದಲ್ಲಿ ಮನೆಯವರನ್ನು ಸ್ವಂತ ಊರುಗಳಿಗೆ ಕಳಿಸಿಕೊಟ್ಟು ‘ಬ್ರಹ್ಮಚಾರಿ ಕೂಟ’ ನಡೆಸಿದ್ದರು. ಕೂಟ ನಮ್ಮ ಮನವಿಯನ್ನು ತಳ್ಳಿ ಹಾಕಿ, ರಾತ್ರಿಯೂಟಕ್ಕೆ ನಮ್ಮನ್ನು ಯಾವುದೋ ಹೋಟೆಲಿಗೆ ಒಯ್ದಿತ್ತು. (ನಮ್ಮ ಹೊಟ್ಟೆಯ ಸೌಭಾಗ್ಯಕ್ಕೆ ರಾಜಭೋಜನ ಹೇರಲಿಲ್ಲ!) ಇಂದು ಆ ಕೂಟದಲ್ಲಿ ಬಿಳಿಮಲೆಯಲ್ಲದೆ ಜಪಾನೀ ಪ್ರೊಫೆಸರ್ ಸುಮಿಯೋ ಮೊರಿಜಿರಿ ಒಬ್ಬರಷ್ಟೇ ನನ್ನ ಸ್ಪಷ್ಟ ನೆನಪಿನಲ್ಲಿದ್ದಾರೆ. ಉಳಿದಂತೆ ರಮಹತ್ ತರೀಕೆರೆ, ಓ.ಎಲ್ ನಾಗಭೂಷಣಸ್ವಾಮಿ, ಎ.ವಿ.ನಾವಡ, ನಾಗವೇಣಿ, ಮಾಧವ ಪೆರಾಜೆ, ಮೋಹನ ಕುಂಟಾರು… ಮುಂತಾದ ಹೆಸರುಗಳೂ ಕಾಲನಿರ್ಣಯವೂ ನನ್ನಲ್ಲಿ ಕಲಸಿಹೋಗಿವೆ – ಕ್ಷಮಿಸಿ. ರಾತ್ರಿಯ ನಿದ್ದೆಗೆ ಬಿಳಿಮಲೆಯವರ ಪುಟ್ಟ ತಾರಸಿ ಮನೆ, ಅದೂ ಬಳ್ಳಾರಿಯ ಭೀಕರ ಸೆಕೆಗಾಲದಲ್ಲಿ ಎಂಬ ಮಿತಿ ನಮ್ಮನ್ನು ಕಾಡಲೇ ಇಲ್ಲ. ಒಳ ಮನೆ ನಮ್ಮ ಕನಿಷ್ಠಾವಶ್ಯಕತೆಗಳಿಗೆ ಮಾತ್ರ. ಮಲಗಿದ್ದು ತಾರಸಿಯ ಮೇಲೆ, ಅನಂತ ಅವಕಾಶಗಳ ಛತ್ತಿನಡಿಯಲ್ಲಿ.

(ದಿನದ ಓಟ ೩೨೩ ಕಿಮೀ) ರಾತ್ರಿ ಹಂಪಿ ತಾ. ೪೦, ತೇ ೨೦% ಸೂರ್ಯ ಹುಟ್ಟುವ ನಾಡಿನ ಮೊರಿಜಿರಿ ನನಗೆ ಹಳೆ ಪರಿಚಯದವರು. ಯಕ್ಷಗಾನ, ಭೂತ, ಜನಪದ ಎಂದೆಲ್ಲಾ ಇವರ ಓಡಾಟ ಮಂಗಳೂರಿನಲ್ಲಿ ಸಾಕಷ್ಟು ನಡೆದಿತ್ತು. ನನ್ನ ಪುಸ್ತಕಗಳಿಗೂ ಇವರು ಬಹಳ ಗಣ್ಯ ಗಿರಾಕಿಯೂ ಆಗಿದ್ದರು. ಹಾಗಾಗಿ ಅವರು ತಮ್ಮ ಸಂಪ್ರದಾಯವೆನ್ನುವಂತೆ ಬೆಳಗ್ಗಿನ (೧೭-೫-೯೬) ‘ಚಾ ಸತ್ಕಾರ’ಕ್ಕೆ ಕರೆದಾಗ ಹೋಗದಿರಲಾಗಲಿಲ್ಲ. ಅವರಿಗೆ ತಮ್ಮೂರಿನ ಬೈಕಿನಲ್ಲಿ (ಹೊಂಡಾ), ಅದೂ ಅಲ್ಲೆಲ್ಲ ಕೇವಲ ಸಿಟಿ ಬೈಕ್ ಎನ್ನುವ ೧೦೦ ಸಿಸಿ ಗಾಡಿಯ ಮೇಲೆ ಅಷ್ಟೆಲ್ಲ ಹೊರೆಯೊಡನೆ ಇಬ್ಬಿಬ್ಬರು ಸಾವಿರಾರು ಕಿಮೀ ಸವಾರಿ ಮಾಡಿ ಬಂದದ್ದಕ್ಕೆ ಎದೆ ತುಂಬಿ ಬಂದಿತ್ತು. ಅವರದೂ ಗಂಡು ಬಿಡಾರ. ಸರಳ ಸತ್ಕಾರ ಸ್ವೀಕರಿಸಿದ್ದೆವು. ಅನಂತರ ನಮ್ಮ ಸುಟ್ಟಮೋರೆ ನೋಡಿ ಸಹಜ ಎನ್ನುವಂತೆ ಚರ್ಮರಕ್ಷಣೆಗೇ ಇರುವಂಥ ವನಸ್ಪತಿ ಮುಲಾಮನ್ನೇ (ಜಪಾನೀ ತಯಾರಿ) ಉಡುಗೊರೆ ಮಾಡಿದ್ದರು. ನಮ್ಮ ನಿರಾಕರಣೆಯನ್ನು ಅವರು ಒಪ್ಪಿಕೊಳ್ಳಲೇ ಇಲ್ಲ. ಈಚೆಗೆ ಬಿಳಿಮಲೆಯವರ ಪುಸ್ತಕ ಓದುವವರೆಗೂ ಅವರ ಸಂಪ್ರದಾಯದಲ್ಲಿ ಸಣ್ಣಪುಟ್ಟ ನೆಪಗಳಿಗೂ ‘ಉಡುಗೊರೆ’ ಕೊಡುವ ಕ್ರಮವಿದೆಯೆಂದು ನನಗೆ ತಿಳಿದೇ ಇರಲಿಲ್ಲ. ತುಂಬ ಅರ್ಥಪೂರ್ಣ ಉಡುಗೊರೆ. ಆದರೇನು ಮಾಡೋಣ, ಸ್ಪಷ್ಟ ವೈದ್ಯ ನಿರ್ದೇಶನವಿಲ್ಲದೆ (ಕಾಯಿಲೆ ಬಿದ್ದಾಗ) ಯಾವುದೇ ಲೇಪವನ್ನು ನಾವು ಬಳಸುವುದಿಲ್ಲ. ಹಾಗಾಗಿ ಆ ಮುಲಾಮಿನ ಟ್ಯೂಬ್ ಇಂದೂ ನಮ್ಮೊಡನೆ (ಮುದ್ರೆಯೊಡೆದೇ ಇಲ್ಲ!) ಸ್ಮರಣಿಕೆಯಾಗಿಯೇ ಉಳಿದಿದೆ!

ಪೂರ್‍ವ ನಿಶ್ಚಯದಂತೆ ಕಾಮಲಾಪುರಕ್ಕೇ ಹೋಗಿ ಬಿಳಿಮಲೆಯವರೊಡನೆ ವಿವಿನಿಲಯದ ವಠಾರವನ್ನು ಮತ್ತಷ್ಟು ಸುತ್ತಾಡಿದೆವು. ನಿಗದಿತ ವೇಳೆಗೆ ಕುಲಪತಿ ಕಂಬಾರರ ಧರ್ಮ ದರ್ಶನವಷ್ಟೇ ಸಿಕ್ಕಿತು. ಸಂವಾದದ ಸಂಗತಿಯೇ ಇಲ್ಲ. ಅಂದು ವಿವಿನಿಲಯದೊಳಗಿನ ಕೆಟ್ಟ ಸುಳಿಗಳು, ಇನ್ನೂ ಮುಖ್ಯವಾಗಿ ನೇರ ಬಿಳಿಮಲೆಯವರೇ ಅನುಭವಿಸುತ್ತಿದ್ದ ಮಹಾಸಂಕಟಗಳ ಕಿಂಚಿತ್ ಅರಿವೂ ನಮಗೆ ಇರಲೇ ಇಲ್ಲ. ಇಂದು ‘ಕಾಗೆ ಮತ್ತು ನೀರು’ ಓದಿನ ಮುನ್ನೆಲೆಯಲ್ಲಿ, ಅಂದು ಅನುಭವಿಸಿದ್ದೆಲ್ಲಕ್ಕೂ ಹಿನ್ನೆಲೆಯಲ್ಲಿ ವಿಕಟವರ್ಣದ ಪರದೆ ಬಿದ್ದಿದೆ. ಬಿಳಿಮಲೆ ನಮ್ಮನ್ನು ವಿವಿನಿಲಯದ ಅತಿಥಿಗೃಹಕ್ಕೆ ಬಿಡಲಿಲ್ಲ ಯಾಕೆ, ಕುಲಪತಿಗಳು ನಮಗೆ ಔಪಚಾರಿಕ ದರ್ಶನ ಮಾತ್ರ ಕೊಟ್ಟದ್ದು ಯಾಕೆ, ವಿದ್ವತ್ ಸಂವಾದ ನಡೆಯಲಿಲ್ಲ ಯಾಕೆ ಎನ್ನುವುದೆಲ್ಲ ತುಂಬ ಸ್ಪಷ್ಟವಾಗಿದೆ. ಜೊತೆಗೇ ಬಿಳಿಮಲೆಯವರ ಅಂದಿನ ಮಾನಸಿಕ, ಆರ್ಥಿಕ ಒತ್ತಡಗಳ ನಡುವೆ ನಾವೂ ಸೇರಿಕೊಂಡೆವಲ್ಲಾ ಎಂಬ ಸಣ್ಣ ಅಪರಾಧಿ ಪ್ರಜ್ಞೆಯೂ ಕಾಡುತ್ತದೆ. ನೀನಾಸಂ ಪ್ರಸ್ತುತಪಡಿಸಿದ ಅದೇ ವಲಯದ (ಗತ ವಿಜಯನಗರದ) ಐತಿಹಾಸಿಕ ನಾಟಕ (ಲೇ: ಗಿರೀಶ ಕಾರ್ನಾಡ್, ನಿ: ವೆಂಕಟ್ರಮಣ ಐತಾಳ) ‘ರಾಕ್ಷಸ ತಂಗಡಿ’ ಅವಶ್ಯ ನೋಡಿ: ಅದರಲ್ಲಿ ಮೊದಲ ತೆರೆ ಸರಿಯುವಾಗ ಕಾಣುವ ಭಾರೀ ಗೊಂದಲ, ಗದ್ದಲಗಳೆಲ್ಲ ಕೊನೆಯ ತೆರೆ ಬೀಳುವಾಗ ಉಳಿಸುವ ಗಾಢ ವಿಷಾದ. ಕನ್ನಡ ವಿವಿ ನಿಲಯದ್ದೂ ಹೌದು. ‘ಇತಿಹಾಸ ಮರುಕಳಿಸುತ್ತದೆ’!

 

ಪಶ್ಚಿಮಘಟ್ಟದ ಪ್ರಾಕೃತಿಕ ಆರೋಗ್ಯದ ಉತ್ತುಂಗ ಪ್ರತಿನಿಧಿ – ಕುದುರೆಮುಖ. ಅದರ ಪೂರ್ಣ ಶೋಷಣೆಯೇ ಲಕ್ಷ್ಯವಾಗಿ ತೀರಾ ಈಚೆಗೆ ಹುಟ್ಟಿಕೊಂಡ ಗಣಿಗಾರಿಕೆ ಕಂಪೆನಿ ನಿರ್ಲಜ್ಜವಾಗಿ ಕದ್ದಿಟ್ಟುಕೊಂಡ ಹೆಸರೂ ಕುದುರೆಮುಖ. ‘ನಾಮದ ಬಲ ಒಂದಿದ್ದರೆ ಸಾಕು’ ಎನ್ನುವ ಬಹುಮಂದಿ, ಸುಲಭವಾಗಿ ಒದಗುವ ಔದ್ಯಮಿಕ ಕುದುರೆಮುಖವನ್ನೇ ನಿಜವೆಂದೇ ಭ್ರಮಿಸುತ್ತಾರೆ. ಅಂಥದ್ದೇ ಭ್ರಮೆಯಾದ ‘ಹಂಪಿ ವಿವಿನಿಲಯ’ ಬಿಟ್ಟು, ನಾವು ವಿಶೇಷಣ ಪೂರ್ವಪದವಾಗಿ ‘ಹಾಳು’ ಇದ್ದರೂ ನಿಜ ಹಂಪಿಯತ್ತ ಹೋದೆವು. ಹಿಂದಿನ ನೋಡಲು ಬಾಕಿಯುಳಿದ ಹಾಳು ಮತ್ತು ಸ್ಪಷ್ಟಪಡಿಸಿದ ಒಳಿತುಗಳನ್ನು ಇನ್ನಷ್ಟು ಕಣ್ದುಂಬಿಕೊಳ್ಳಲು ನಾಲ್ಕೆಂಟು ಕಡೆ ಬೈಕೋಡಿಸಿದೆವು. ವಿರೂಪಾಕ್ಷ ದೇವಳದ ಎದುರಿನ ಎಡ ಮಗ್ಗುಲಿನಲ್ಲಿ ವಿವಿ ನಿಲಯಕ್ಕಾಗಿ ಮರುರೂಪಿಸಿದ್ದ ಕಲ್ಲ ಮಂಟಪಗಳು ಸದ್ಯ ಬೀಗ ಮುದ್ರೆಯಲ್ಲಿದ್ದಂತಿತ್ತು.

ಬಲ ಮಗ್ಗುಲಿನ ಮಂಟಪ ಸಾಲಿನಲ್ಲಿ ಹಳ್ಳಿಗರು ಅಕ್ರಮ ವಸತಿ ಹೂಡಿದ್ದನ್ನು ಹಿಂದೆ ಕಂಡಿದ್ದೆ. ಈ ಬಾರಿ ಅವನ್ನು ತೆರವುಗೊಳಿಸಿದ್ದಂತಿತ್ತು. ದೇವಳದ ಒಳ ಮಗ್ಗುಲಿನ ಹಳೆಗಾಲದ ಕಾಲುವೆ ಇನ್ನೂ ಜುಳುಜುಳಿಸಿಯೇ ಇತ್ತು. ಗೋಪುರದ ನೆರಳು ತಲೆಕೆಳಗಾಗಿ ಕಾಣುವ ಚೋದ್ಯ, ಜೀರ್ಣೋದ್ಧಾರ ಮಾಡಹೋಗಿ ಕೆಡಿಸಿಟ್ಟ ಉಗ್ರನರಸಿಂಹ, ಕೆಸರು ಕಳೆಗಳನ್ನು ಕಳಚಿಟ್ಟ ಸುಂದರ ಸೋಪಾನಶ್ರೇಣಿಯ ಕೆರೆ, ನೀರು ತುಂಬಿದಂತೇ ಇರುವ ಶಿವ ಮಂದಿರ, ಕಮಲ ಭವನ, ದಿಬ್ಬ, ಆನೆಲಾಯ, ಸಂಗೀತ ಸ್ತಂಬಗಳಿರುವ ಮಂಟಪ, ಕಲ್ಲ ರಥ ಎಂದೆಲ್ಲ ಸುಮಾರು ಸುತ್ತಾಡಿದೆವು. ಚಕ್ರತೀರ್ಥ, ಪುರಂದರ ಮಂಟಪ, ಸೀತೆಯ ಸೆರಗೆಳೆದ ಗುರುತು, ಮತಂಗ ಪರ್ವತ ಎಂದೂ ಏನೇನೋ ಕ್ಯಾಮರಾ ಕಣ್ಣು ತುಂಬಿಕೊಂಡದ್ದಷ್ಟೇ ಇಲ್ಲಿ ದಾಖಲಿಸಬಲ್ಲೆ. ಹಂಪಿಯ ಗತ ವೈಭವದ ನಿಜ ಅನುಭವಕ್ಕೆ, ಅಲ್ಲಿನ ಬಂಡೆ ರಾಶಿಗಳದೇ ಗುಡ್ಡಗಳ ನಡುವೆ ರಣಬಿಸಿಲಿನಲ್ಲಿ, ಬಡಕಲು ತುಂಗಭದ್ರೆಯ ಒತ್ತಿನಲ್ಲಿ ವಿರಾಮದಲ್ಲಿ ನಡೆಯುವುದೇ ಸರಿ.

ನಾವು ಕಾಲಕಟ್ಟಳೆಯಲ್ಲಿ, ಎಲ್ಲವನ್ನೂ ನೋಡಿದ ಶಾಸ್ತ್ರ ಮಾಡಿ, ‘ಹಂಪೆ ದರ್ಶನ’ ಮುಗಿಸಿದೆವು. (ಔಪಚಾರಿಕ ಪರಿಚಯವನ್ನೇ ಬಯಸುವವರು ಅವಶ್ಯ ವಿಕಿಪೀಡಿಯಾ ನೋಡಿ. ಹಾಗೇ ಅಲ್ಲಿನ ಸುಂದರ ಚಿತ್ರ ಸಂಗ್ರಹಕ್ಕೆ ಶಿವಶಂಕರ ಬಣಗಾರ್ ಅವರ ಸಂಗ್ರಹವನ್ನೂ ನೋಡಬಹುದು, ಅಂತರ್ಜಾಲದಲ್ಲಿ ಎಷ್ಟೂ ಶೋಧಿಸಬಹುದು.) ಮಧ್ಯಾಹ್ನ ಹೋಸಪೇಟೆಗೆ ಮರಳಿ, ಊಟ ಮಾಡಿ, ಬಿಳಿಮಲೆಯವರ ಮನೆಯಿಂದ ನಮ್ಮ ಗಂಟುಗಳನ್ನು ಕಟ್ಟಿಕೊಂಡು ಹೊರಡುವಾಗ ಎರಡೂವರೆ ಗಂಟೆಯಾಗಿತ್ತು. ತುಂಗಭದ್ರಾ ಅಣೆಕಟ್ಟು, ಅದರದೇ ಭಾಗವೆನ್ನುವಂತೆ ಹೆಚ್ಚು ಸ್ಥಿರಗೊಂಡ ವೈಕುಂಠ ಗುಡ್ಡೆಗಳಿಗೂ ಹಾಜರಿ ಹಾಕಿ, ಚಿತ್ರದುರ್ಗದ ದಾರಿ ಹಿಡಿದೆವು. ಹೊಸಪೇಟೆ – ಚಿತ್ರದುರ್ಗಗಳ ಅಂತರ ಸುಮಾರು ನೂರಾಮೂವತ್ತು ಕಿಮೀ ಮಾತ್ರ. ಆದರೆ ಆರೋಣಿ, ನಾಲ್ಕೋಣಿ ದಾರಿಗಳಲ್ಲಿ ಓಡಿ ಬಂದವರಿಗೆ ಇಲ್ಲಿ ಸಿಕ್ಕಿದ್ದು ಬಹುತೇಕ ಒಂದೇ ಓಣಿ. ತರಾತುರಿಯಲ್ಲೇನಾದರೂ ಅದರ ಹರಕಂಚು ಇಳಿಸಿದರೆ, ಭಾರೀ ವಾಹನಗಳು ಹುಡಿ ಹಾರಿಸಿದ ಪುಡಿ ಜಲ್ಲಿ ಮಣ್ಣಿನಲ್ಲಿ ತೂರಾಡಿ ಹೋಗುತ್ತಿದ್ದೆವು. ಬಹಳ ಎಚ್ಚರದಿಂದ ಚಿತ್ರದುರ್ಗ ತಲಪುವಾಗ ಆಕಾಶದಲ್ಲಿದ್ದದ್ದು ಸಂಜೆಗೆಂಪೋ ರಸ್ತೆಯ ದೂಳಿಗೆಂಪೋ ಹೇಳುವುದು ಕಷ್ಟ. (ಭಾವುಕರಾಗಬೇಡಿ, ಖಂಡಿತಕ್ಕೂ ಗೋದೂಳಿಯಲ್ಲ!)

ಪ್ರಥಮ ಕನ್ನಡ ಸಾಹಸ ಸಾಹಿತ್ಯ ಸಮ್ಮೇಳನ (ಸುಮಾರು ೧೯೯೪), ಬೆಂಗಳೂರಿನ ನ್ಯಾಶನಲ್ ಕಾಲೇಜಿನಲ್ಲಿ ನಡೆಯಿತು. (ಅದು ಅದ್ವಿತೀಯ ಕೂಡಾ!) ಅದಕ್ಕೆ ಪ್ರಬಂಧಕಾರನಾಗಿ, ಸಂವಾದದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನನ್ನನ್ನು ಹಿಡಿದು ಹಾಕಿದವರು ಬೇದ್ರೆ ಮಂಜುನಾಥ್. ಅದು ಮೊದಲು ಅವರನ್ನು ಕಂಡದ್ದಿಲ್ಲ, ಪರಿಚಯವೇನಾದರೂ ಇದ್ದಿದ್ದರೆ, ಅವರ ಸಾರ್ವಜನಿಕ ಲೇಖನಗಳ ಮೂಲಕವಷ್ಟೇ. ಬೇದ್ರೆ ಹವ್ಯಾಸೀ ಪರ್ವತಾರೋಹಣವನ್ನು ಸಾಹಸೈಕ ದೃಷ್ಟಿಯಲ್ಲಿ ಕಂಡವರಲ್ಲ. ಅದನ್ನು ಶಿಖರದಲ್ಲಿ ಧ್ವಜ ಮತ್ತು ಊರಿನಲ್ಲಿ ಹಾರಾಟ ಮಾಡುವ ಸರಕಾಗಿ ದುಡಿಸಿಕೊಂಡವರೂ ಅಲ್ಲ. ಪರ್ವತಾರೋಹಣ ಅವರಿಗೆ ಪರಿಸರದ ಕಥನ, ವನ್ಯ ಸಂರಕ್ಷಣೆಯ ಚಳವಳಿ ಮತ್ತು ಆರೋಗ್ಯಪೂರ್ಣ ಪ್ರೇರಣೆ ನೀಡುವ ಅವಕಾಶ. ಸಾಹಸ ಲೇಖನಗಳಲ್ಲಿ ಅರಿವಿಲ್ಲದೇ ದುಡುಕುವ ಮಂದಿಗೆ ದಿಕ್ಕು ಕೊಡುವಂತೆ ಮೇಲೆ ಹೇಳಿದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.

“ಆಕಾಶವಾಣಿ ಚಿತ್ರದುರ್ಗ. ಪ್ರಾಯೋಗಿಕ ಪ್ರಸಾರದಲ್ಲಿ ಬೇದ್ರೆ…” ಎನ್ನುವ ಹಂತದಲ್ಲಿ (೧೯೯೬), ನಿರ್ದೇಶಕನಿಂದ ನಿರೂಪ ಹೊತ್ತ ಜವಾನನವರೆಗೆ ಹೊಣೆಗಳ ಬೇಧವಿಲ್ಲದೆ ಕೆಲಸ ನಡೆಸಿದ್ದ ನಾಲ್ಕೆಂಟು ಮಂದಿಯಲ್ಲಿ ಬೇದ್ರೆ ಮಂಜುನಾಥ್ ಕೂಡಾ ಒಬ್ಬರು. ನನಗೆ ಕರಾವಳಿಯೋಟದ ಯೋಜನೆಯ ಹಂತದಲ್ಲಿ ಕೊನೆಯ ವಾಸ್ತವ್ಯಕ್ಕೆ ನನಗೆ ಚಿತ್ರದುರ್ಗ ಪ್ರಶಸ್ತವಾಗಿ ಕಂಡಿತ್ತು. ಆಗ ಸ್ಥಳೀಯ ವ್ಯವಸ್ಥೆಗೆ ಸಂಪರ್ಕಯೋಗ್ಯ ವ್ಯಕ್ತಿಯಾಗಿ ಹೊಳೆದ ಒಂದೇ ಹೆಸರು – ಬೇದ್ರೆ ಮಂಜುನಾಥ್. ಇವರಲ್ಲೂ ನನ್ನ ಮನವಿ “ಯಾರೂ ನಮ್ಮನ್ನು ಮನೆಯಲ್ಲಿ ಉಳಿಸಿಕೊಳ್ಳುವ ಹಿಂಸೆ ಅನುಭವಿಸಬಾರದು” ತಳ್ಳಿ ಹಾಕಲಾಯ್ತು. ಬಿಳಿಮಲೆಯವರಂತೇ ಬೇದ್ರೆಯೂ ನಮ್ಮನ್ನು ತಮ್ಮ ಮನೆಗೇ ಎಳೆದು ಹಾಕಿಕೊಂಡಿದ್ದರು. ಸಂಜೆ ಆರು ಗಂಟೆಗೆ ಬೇದ್ರೆಯವರ ಮನೆ ಮುಟ್ಟಿದೆವು.

ಬೇದ್ರೆಯವರ ಕುತೂಹಲದ ಬೇರುಗಳು ಕಲಿಕೆ ಮತ್ತು ವೃತ್ತಿಯ ಪರಿಧಿಗಳನ್ನು ಸದಾ ಮೀರುತ್ತಲೇ ಇರುತ್ತವೆ. ಭಾಷೆ, ಸಾಹಿತ್ಯ, ಸಾಹಸ, ಗಣಕ… ಇವಕ್ಕೆಲ್ಲ ಸಾಕ್ಷಿ ಎನ್ನುವಂತೆ ಅಂದು ಮನೆಯಲ್ಲಿ ಸ್ವಂತ ಕವಲುಗಳಲ್ಲದೆ (ತಾಯಿ, ಹೆಂಡತಿ, ಎರಡು ಮಕ್ಕಳು), ಅನೇಕ ಎಳೆ ಚಿಗುರುಗಳೂ (ಶಿಷ್ಯಂದಿರು) ನಮ್ಮ ದಾರಿ ಕಾಯುವಂತಾಗಿತ್ತು. ಸಮಯದ ನಿರ್ವಹಣೆಯಲ್ಲಿ ಬೇದ್ರೆ ನಮಗೂ ಒಂದು ಹೆಜ್ಜೆ ಮುಂದೇ ಇದ್ದರು. ನಾವು ಚುರುಕಿನಲ್ಲಿ ‘ಮಂಜುನಾಥನ ತೀರ್ಥ, ಪ್ರಸಾದ’ ಸ್ವೀಕರಿಸಿದ್ದೆವು. ಮತ್ತವರ ಬಳಗದೊಡನೆ ಚಂದ್ರಗಿರಿಯ ತಪ್ಪಲಿಗೆ ಹೋಗಿದ್ದೆವು. ಹಗಲು ರಾತ್ರಿಯ ಬೇಧವಿಲ್ಲದೆ ಅಲ್ಲಿ ನೋಡಬಹುದಾದ ಒಂದೆರಡು ಗುಹೆ, ಮತ್ತು ಖ್ಯಾತ ಓಬವ್ವನ್ನ ಕಿಂಡಿ ದರ್ಶನ ಮಾಡಿಸಿದರು. (ಈ ಚಂದ್ರಗಿರಿ ಗುಹೆಗಳು ಆದಿಮಾನವನ ಶಿಲಾಲೇಖಗಳನ್ನು ಒಳಗೊಂಡಿವೆ. ಇವುಗಳ ಕುರಿತಂತೆ ಅಧ್ಯಯನ ಹೊತ್ತಗೆಯನ್ನೇ ಶ್ರೀಶೈಲ ಆರಾಧ್ಯ, ಬಹಳ ಹಿಂದೆಯೇ ಪ್ರಕಟಿಸಿದ್ದಾರೆ.) ಮುಂದೆ ಇನ್ನೂ ರೂಪುಗೊಳ್ಳುತ್ತಿದ್ದ ಆಕಾಶವಾಣಿ ಕೇಂದ್ರಕ್ಕೆ ಕರೆದೊಯ್ದಿದ್ದರು. ಅಲ್ಲಿ ಸುಮಾರು ಎರಡು ಗಂಟೆಗಳ ಕಾಲ, ನಮ್ಮ ನಾಲ್ವರೊಡನೆ ಸಂವಾದ ಧ್ವನಿಮುದ್ರಿಸಿಕೊಂಡರು.

(ವಿಶ್ವವಿದ್ಯಾಲಯದಲ್ಲಿಲ್ಲದ ಪಾತ್ರೆ ಇಲ್ಲಿತ್ತು!) ಅನಂತರದ ದಿನಗಳಲ್ಲಿ ಅದನ್ನು ಚೊಕ್ಕವಾಗಿ ಸಂಸ್ಕರಿಸಿ ಅರ್ಧವೋ ಮುಕ್ಕಾಲೋ ಗಂಟೆ ಕಾಲ ಪ್ರಸಾರ ಕೂಡಾ ಮಾಡಿದ್ದರಂತೆ. ಅಪಾರ ಮೆಚ್ಚುಗೆಯೂ ಬಂತೆಂದೇ ಬೇದ್ರೆಯವರು ಪತ್ರಿಸಿದ್ದರು. ಅಂದು ಆಕಾಶವಾಣಿಯಲ್ಲಿ ದೇವಕಿಗೆ ಅಪೂರ್ವ ಮಿತ್ರಯೋಗ. ಬೇದ್ರೆಯವರ ಸಹೋದ್ಯೋಗಿ – ಉಶಾಲತಾ ಸರಪಾಡಿ, ದೇವಕಿಯ ಉಜಿರೆ ಕಾಲೇಜ್ ಗೆಳತಿ! (ಉಶಾಲತಾ ಅವರ ನಿವೃತ್ತಿಪೂರ್ವ ದಿನಗಳ ಸೇವೆ ಮಂಗಳೂರು ಆಕಾಶವಾಣಿಗೇ ಸಂದಿದೆ.)

(ದಿನದ ಓಟ ೧೩೯ ಕಿಮೀ) ಭಾರತ ಅ-ಪೂರ್ವ ಕರಾವಳಿಯೋಟದ ಕೊನೆಯ ಸೂರ್ಯೋದಯಕ್ಕೆ (೧೮-೫-೧೯೯೬ ಶನಿವಾರ) ನಾವು ಚಿತ್ರದುರ್ಗದ ಐತಿಹಾಸಿಕ ಕೊಟೆಯ ಉತ್ತುಂಗದಲ್ಲಿದ್ದೆವು. ಊರಿಗೆ ಮೊದಲೇ ಎನ್ನುವಂತೆ ನಮ್ಮನ್ನು ಅಲ್ಲಿಗೆ ಮುಟ್ಟಿಸಿ, ಉದ್ದಕ್ಕೂ ಸ್ಥಳೀಯ ಮಹತ್ವಗಳನ್ನೆಲ್ಲ ತಿಳಿಸಿ, ತಮ್ಮ ಶಿಲಾರೋಹಣದ ಚಟುವಟಿಕೆಗಳ ಗಮ್ಮತ್ತನ್ನೆಲ್ಲ ಹಂಚಿಕೊಂಡ ಬೇದ್ರೆ ಶಿಷ್ಯರು ನಮ್ಮ ಸಾಹಸಯಾನಕ್ಕೆ ನಿಜದ ಸಮ್ಮಾನವನ್ನೇ ಮಾಡಿದ್ದರು. (ಹಿಂದೆ ಭಾರತ ಸೀಳೋಟದಲ್ಲಿದ್ದಾಗ ನೈನಿತಾಲಿನಲ್ಲಿ ಇಂಥದ್ದೇ ಮಧುರ ಅನುಭವವಾಗಿತ್ತು) ಬೇದ್ರೆಯವರ ಮನೆಯಲ್ಲೇ ಬೆಳಗ್ಗಿನ ತಿಂಡಿ ಮುಗಿಸಿ ಮಂಗಳೂರ ದಾರಿ ಹಿಡಿಯುವಾಗ ಗಂಟೆ ಹನ್ನೊಂದು ಕಳೆದಿತ್ತು.

ಪುಸ್ತಕದ ಬದನೇಕಾಯಿಗೆ ನೆಲದ ಜ್ಞಾನದ ಒಗ್ಗರಣೆ ಬಿದ್ದರೆ ಮಾತ್ರ ಪಾಕ ಸೇವ್ಯವಾಗುತ್ತದೆ. ಒಟ್ಟು ಭಾರತದ ಲೆಕ್ಕದಲ್ಲಿ ನಮ್ಮ ನೆಲದ ಜ್ಞಾನ ಇಂದೂ ಕಡಿಮೆಯೇ ಇರುವುದರಿಂದ ವ್ಯತ್ಯಾಸ ತಿಳಿಯದೇ ಹೋಗಿರಬಹುದು. ಆದರೆ ಚಿತ್ರದುರ್ಗ ಕಳೆದ ಮೇಲಿನ ವಲಯದಲ್ಲಿ ಈಗ ಕೊರತೆಯ ಅರಿವಾಗುತ್ತದೆ. ಅಂದು ನಾವು ಆಯ್ದು ಅನುಸರಿಸಿದ ಚನ್ನಗಿರಿ ಶಿವಮೊಗ್ಗ ದಾರಿ ಇಂದಿಗೂ ಸರಿ ಕಾಣುತ್ತದೆ. ಆದರೆ ಶಿವಮೊಗ್ಗದಿಂದ ಮುಂದೆ ಯಾಕೆ ತಪ್ಪಿದೆವೋ ತಿಳಿದಿಲ್ಲ. ನೇರ ತೀರ್ಥಳ್ಳಿ ದಾರಿ ಬಿಟ್ಟು – ಭದ್ರಾವತಿ, ನರಸಿಂಹರಾಜಪುರ, ಕೊಪ್ಪ, ಹರಿಹರಪುರಗಳಿಗಾಗಿ ಆಗುಂಬೆ ಮುಟ್ಟಿದ್ದೆವು. ಸೋಮೇಶ್ವರದಿಂದ ಉದ್ದೇಶಪೂರ್ವಕವಾಗಿಯೇ ಹತ್ತಿರದ ಕಾರ್ಕಳ, ಮೂಡಬಿದ್ರೆ ಬಿಟ್ಟು ಹೆಬ್ರಿಗಾಗಿ, ಉಡುಪಿ ಸೇರಿಕೊಂಡೆವು. ಉಡುಪಿಯಲ್ಲಿ ಉಪಾಧ್ಯರನ್ನು ಸಾಲಿಗ್ರಾಮದ ಬಸ್ಸಿಗೆ ಬಿಟ್ಟು, ಉಳಿದ ಮೂವರು ಸುಕ್ಷೇಮವಾಗಿ ಮಂಗಳೂರು ಸೇರುವಾಗ ರಾತ್ರಿ ಏಳೂವರೆ ಗಂಟೆ.

(ದಿನದ ಓಟ ೩೩೩ ಕಿಮೀ) ಕಾರ್ಯಕ್ರಮ ಸುಖಾಂತವಾದ್ದರಿಂದ ಎಲ್ಲ ಹೇಳಬಹುದು “ಇದು ಸಾಹಸ”, ಅಲ್ಲವಾದರೆ “ಹುಚ್ಚಲ್ವಾ”! ಆದರೆ ನಾವು ಮಾತ್ರ, ‘ಪ್ರಯೋಗಪಟುಗಳು’ ಎಂಬ ಸ್ಪಷ್ಟ ನಿಲುವನ್ನು ಅಂದೂ ಇಂದೂ ಉಳಿಸಿಕೊಂಡೇ ಇದ್ದೇವೆ. ಸಲಕರಣೆ ಸಂಗ್ರಹ, ಪರಿಸರ ನಿರ್ಮಾಣಗಳೊಡನೆ ಒದಗಿದ ಆಕಸ್ಮಿಕಗಳಿಗೆ ಹೊಂದಿ ದುಡಿದದ್ದಕ್ಕೆ ಯಶಸ್ವಿಗಳಾಗಿರಬೇಕು. ನಮ್ಮ ಬೈಕೋಟದ ಅಂದಾಜಿನ ಏಳೂವರೆ ಸಾವಿರ ಕಿಮೀ ಎಂಟು ಸಾವಿರ ಕಿಮೀಗಳಿಗೆ ಏರಿದಾಗಲೂ ವೆಚ್ಚದ ಅಂದಾಜಿನ ತಲಾ ಹದಿನೈದು ಸಾವಿರ ರೂಪಾಯಿ ಕೇವಲ ಆರು ಸಾವಿರಗಳಿಗೆ ಇಳಿದಿತ್ತು! ಅದೂ ಸೇರಿದಂತೆ, ಗರಿಷ್ಠ ೪೮ ಡಿಗ್ರಿ ಸೆಂಟಿಗ್ರೇಡಿನ ಬಿಸಿಯಲ್ಲೂ ತಂಪು ಕಾಣಿಸಿದ, ಬಿರುಮಳೆಯಲ್ಲೂ ಆಶ್ರಯ ಒದಗಿಸಿದ, ಕೊರೆ ಚಳಿಯಲ್ಲಿ ಬೆಚ್ಚನ್ನ ಗೂಡು ಕಾಣಿಸಿದ, ಸುಂಟರ ಗಾಳಿಯಲ್ಲಿ ದಿಕ್ಕಾದ, ಗಿರಿಗಳೆತ್ತರದಲ್ಲಿ ಸೆಳೆಗಲ್ಲಾದ, ಗುಹೆಯಾಳದಲ್ಲಿ ಬೆಳಕಾದ, ಸೆಳೆತಗಳಲ್ಲಿ ಸ್ಥಿರ ಆಧಾರಗಳಾದ, ಒಟ್ಟಾರೆ ‘ಭಾರತ ಅ-ಪೂರ್ವ ಕರಾವಳಿಯೋಟ’ದ ಯಶಸ್ಸಿಗೆ ಪೂರಕರಾದ ಅಸಂಖ್ಯ ಮಹನೀಯರಲ್ಲಿ ಕೆಲವರನ್ನಷ್ಟೇ ಇಲ್ಲಿ ಕಾಲಕಾಲಕ್ಕೆ ಹೆಸರಿಸಿದ್ದೇನೆ. ಅವರಿಗೂ ಬಿಟ್ಟು ಹೋಗಿರಬಹುದಾದ ಅಸಂಖ್ಯರಿಗೂ ದೊಡ್ಡ ನಮಸ್ಕಾರ ಮತ್ತು ವಂದನೆ.

ವಿಸೂ: ಈ ಅನುಭವದ ಫಲಶ್ರುತಿಯಾಗಿ ನಾನು ಇಂಗ್ಲಿಷಿನಲ್ಲಿ, ೧೯೯೬ರಲ್ಲೇ ಬರೆದ ವರದಿ WILDLIFE SANCTUARIES – Bharatha A-poorva Karavaliyota 1996. A SYNOPSIS ಇದನ್ನು ಇನ್ನೆರಡು ದಿನ ಬಿಟ್ಟು ಸ್ವತಂತ್ರವಾಗಿ ಪ್ರಕಟಿಸಲಿದ್ದೇನೆ

(ಸರಣಿ ಮುಗಿಯಿತು)