(ಶರಾವತಿ ಸಾಗರದ ಉದ್ದಕ್ಕೆ ಕೊನೆಯ ಅರ್ಧ)

ಬುತ್ತಿಯೂಟ ಮುಗಿಸಿದ್ದೇ ಹಿತ್ತಲಿನ ಗುಡ್ಡೆಯತ್ತ ಪಾದ ಬೆಳೆಸಿದೆವು. ಗುಡ್ಡೆಯ ಮೇಲೆ ಅಡ್ವೆಂಚರ್ ಬಳಗದ್ದೇ ಹೆಚ್ಚುವರಿ ವಾಸದ ಕಟ್ಟಡಗಳು ಕಾಣಿಸಿದವು. ಅಡ್ವೆಂಚರರ್ಸಿನಲ್ಲಿ ಜಲಕ್ರೀಡೆಗಳಲ್ಲದೆ ಚಾರಣ ಶಿಬಿರಗಳೂ ನಡೆಯುತ್ತವೆ. ನೆಲದ ಸತ್ವ ಬೆಳಗುವಂತೆ ಜನಪದ, ಮಹಿಳಾಪರ ಮುಂತಾದ ವಿವಿಧ ಅನುಭವ ಸಂಗ್ರಹ ಮತ್ತು ವಿಚಾರ ಸಂಕಿರಣಗಳಿಗೂ (ಕನ್ನಡ ವಿವಿ ಸಹಯೋಗ) ಇದು ನೆಲೆಯಾಗುತ್ತದೆ. ಇವಕ್ಕೆಲ್ಲ ಅಖಿಲ ಭಾರತ ಮಟ್ಟದಲ್ಲೂ (ಐಯೇಎಸ್, ಐಪೀಯೆಸ್ ವಿದ್ಯಾರ್ಥಿಗಳು ಇತ್ಯಾದಿ) ಹಲವು ತಂಡಗಳು ಅನಿಯತವಾಗಿ, ಅದೂ ಕೆಲವೊಮ್ಮೆ ದೊಡ್ಡ ಸಂಖ್ಯೆಯಲ್ಲೇ ಬರುವುದಿದೆಯಂತೆ. ಬಹುಶಃ ಅಂಥ ಸಂದರ್ಭಗಳಲ್ಲಿ ಈ ಕಟ್ಟಡಗಳೂ ಬಳಕೆಗೊದಗುವುದಿರಬೇಕು. ಅಲ್ಲೇ ಆಚೆಗೆ ಇನ್ನೊಂದು ದೊಡ್ಡ ದುಂಡು ಚಪ್ಪರ ರಚನೆಯ ಕೊನೆಯ ಹಂತದಲ್ಲಿತ್ತು. “ಇನ್ನೊಂದೆರಡು ತಿಂಗಳಲ್ಲಿ ಪರಿಸರ ಸಂಬಂಧೀ ಭಾರೀ ಸಂಕಿರಣವನ್ನು ನಡೆಸುವ ಮೂಲಕ ಅದರ ಕಾರ್ಯಾಚರಣೆಯಾಗಲಿದೆ” ಎಂದೇ ಸ್ವಾಮಿದಂಪತಿ ಹೇಳಿದ್ದರು. ಮತ್ತದಕ್ಕೆ ನಮ್ಮೆಲ್ಲರಿಗೆ ಸ್ವಯಂಸೇವಕರಾಗಿ ಬಂದು ಭಾಗವಹಿಸಲು ಮುಂಗಡ ಆಮಂತ್ರಣವನ್ನೂ ಕೊಟ್ಟದ್ದು ನೆನಪಾಯ್ತು.

ಗುಡ್ಡೆಯ ತಲೆಯಿಂದ ಶರಾವತಿ ಸಾಗರದ ದೃಶ್ಯ ಮನೋಹರವಾಗಿಯೇ ಇತ್ತು. ಆದರೆ ಗುಡ್ಡಕ್ಕೆ ಗುಡ್ಡ ಅಡ್ಡ ಎನ್ನುವಂತೆ, ಹಿನ್ನೆಲೆಯಲ್ಲಿ ಇನ್ನೂ ಎತ್ತರಕ್ಕಿದ್ದ ಶಿಖರ ಈಗ ನಮ್ಮನ್ನು ಆಕರ್ಷಿಸಿತು. ಅಡ್ವೆಂಚರರ್ಸ್ ವಠಾರದ ಬೇಲಿ ಕಳೆದು, ಸಣ್ಣ ಕಣಿವೆಗಿಳಿದು, ಕುರುಚಲು ಕಾಡು ಹೊಕ್ಕೆವು. ಒಳಗೆ ಬಹುತೇಕ ವನ್ಯ ಜಾನುವಾರುಗಳೇ (ಕಾಟಿ, ಕಡವೆ…) ರೂಢಿಸಿದ್ದ ಜಾಡನುಸರಿಸಿದೆವು. ಮುಚ್ಚಿ ಬರುತ್ತಿದ್ದ ಪೊದರುಗಳ ನಡುವೆ ಸೊಂಟ ಡೊಂಕಿಸಿ, ಕಲ್ಲುಕೊರಕಲುಗಳೊಡನೆ ಉರುಡಿ, ಬೇರಗಟ್ಟೆಯಿಂದ ಕಟ್ಟೆಗೆ ಏರಿ ತೆರೆಮೈ ಸೇರಿದೆವು. ಮತ್ತೆ ಏರೇರುತ್ತಿದ್ದಂತೆ ತೆರೆದುಕೊಂಡ ದೃಶ್ಯಾವಳಿ ಅತಿಶಯ ಮನೋಹರ! ಬಲ ಮಗ್ಗುಲಿನಲ್ಲಿ ಲಿಂಗನಮಕ್ಕಿ ಅಣೆಕಟ್ಟಿನ ನೆತ್ತಿರೇಖೆಯ ಪೂರ್ಣ ದರ್ಶನವಾಯ್ತು. (೨.೪ ಕಿಮೀ ಉದ್ದ, ಭೂಮಟ್ಟದಿಂದ ೧೯೩ ಅಡಿ ಎತ್ತರ.) ಆಲಿ ತೊಡಗಿದಂತೆ ವಿಸ್ತಾರವಾಗಿ ಮಲಗಿದ್ದ ನೀರೆ ಶರಾವತಿ, ನೀಲ ಮೈಗೆ ಕುದ್ರುಗಳ ಹಚ್ಚೆ ಹಾಕಿ ಎಡ ಮಗ್ಗುಲ ದಿಗಂತದವರೆಗೂ ವ್ಯಾಪಿಸಿದ್ದಳು. ಬೆದರಿಕೆಯ ಕರಿಮೋಡಗಳನ್ನಟ್ಟಿ, ಹಿಂಜಿದ ಬಿಳಿಯರಳೆಯ ಬೆಡಗಿನ ಬಂಡಿಗಳು ಆಕಾಶದುದ್ದಕ್ಕೆ ಮೆರವಣಿಗೆ ಹೊರಟಿದ್ದವು.

ಜೋಗದ ಸಿರಿಯೋ ಕಾರ್ಗಲ್ಲಿನ ಚರುಮುರಿಯೋ ಇನ್ಯಾವುದೇ ಅತಿ ಪ್ರಚುರಿತ ಆಕರ್ಷಣೆಗಳು ಎಂದೂ ಸುಲಭದಲ್ಲಿ ಪಡೆದುಕೊಳ್ಳಬಹುದು. ಆದರೆ ಹೊನ್ನೇ ಮಡುಗಟ್ಟಿದ ಇಲ್ಲಿನ ದೃಶ್ಯ ಎಲ್ಲರಿಗೂ ದಕ್ಕುವಂತದ್ದಲ್ಲ, ಸದ್ಯ ನಮ್ಮದು ಮಾತ್ರ ಎಂಬ ಧನ್ಯತೆ ಬಹುಶಃ ಎಲ್ಲರಲ್ಲೂ ಮೂಡಿತ್ತು. ಸಣ್ಣ ಒಂದೆರಡು ಕಲ್ಲುಗಳನ್ನೇರಿಯೋ ತೆಳು ಹುಲ್ಲ ಹಾಸಿನಲ್ಲಿ ಮೈಚಾಚಿಯೋ ಮರವಟ್ಟು, ಸಮನಿಸುತ್ತಿದ್ದ ಸೂರ್ಯಾಸ್ತದ ಚಂದಕ್ಕೂ ಹಿಂಬಾಲಿಸಲಿದ್ದ ನಕ್ಷತ್ರದಾಟಕ್ಕೂ ಸಾಕ್ಷಿಯಾಗುವ ಆಸೆ ಬಲವತ್ತರವಾಗಿದ್ದರೆ ಆಶ್ಚರ್ಯವಿಲ್ಲ. ಆದರೆ ಕತ್ತಲಲ್ಲಿ ಕಾಡು ಹಾಯುವ ಕಷ್ಟ, ಮರುದಿನದ ಶರಾವತಿ ಯಾನ ಯೋಚಿಸಿ, ನಿಧಾನಕ್ಕೆ ಶಿಬಿರಕ್ಕೆ ಮರಳಿದೆವು.

ಬೆಳಗ್ಗಿನೊಂದು ಅನುಭವದ ಬೆಳಕಿನಲ್ಲಿ, ಪ್ರತಿಯೊಬ್ಬರೂ ಪೂರ್ವಕಲ್ಪನೆಯ ಹತ್ತೆಂಟು ಬಟ್ಟೆ, ಸಲಕರಣೆಗಳ ಗಂಟುಗಳನ್ನೆಲ್ಲ (ನಾಗರಿಕ ಹೊರೆ?) ಕಳಚಿಕೊಂಡು, ಮರುದಿನಕ್ಕೆ ಹೊಸದಾಗಿಯೇ ಸಜ್ಜಾಗುತ್ತಿದ್ದೆವು. ಆದರೆ ಸಮೂಹದ ಗೋಜಲು ಬಿಡಿಸುವ ನಡುವೆಯೂ ಸ್ವಾಮಿ ದಂಪತಿ ಸರಳ ಬಿಸಿಯೂಟಕ್ಕೆ ಕರೆದಾಗ, “ಹೇಗೆ ಮಾಡಿದಿರಿ” ಎಂದು ಕೇಳುವುದನ್ನೂ ಮರೆತು, ಕೇವಲ ಹಸಿವು ಹಿಂಗಿಸಿದೆವು. ಮರುದಿನದ ಹೊಸಗನಸಿಗೆ, ಬೆಳಕು ಹರಿಯುವ ಮುನ್ನ ತಯಾರಾಗುವ ಯೋಚನೆಯೊಂದನ್ನೇ ತಲೆ ತುಂಬಿಕೊಂಡು ಬೇಗ ಮಲಗಿದೆವು. ಅದೇ ಧ್ಯಾನದಲ್ಲಿ ಬೆಳಕು ಹರಿಯುವ ಮುನ್ನ ಎದ್ದು, ಸರತಿಯ ಸಾಲಿನಲ್ಲಿ ಶೌಚಾದಿಗಳನ್ನು ಮುಗಿಸಿ, ಮುಖ್ಯ ಮನೆ ಎದುರು ಸಜ್ಜಾಗಿ ನಿಂತದ್ದು ಮಾತ್ರ ಹನ್ನೆರಡೇ. ಒಬ್ಬ – ಮುಳುಗಿದ ಹರಿಗೋಲಿನಲ್ಲಿದ್ದವ, ಜ್ವರ, ಹೊಟ್ಟೆ ಸರಿಯಿಲ್ಲ ಎಂಬೆಲ್ಲ ನೆಪವೊಡ್ಡಿದ್ದ. ನಿಜದಲ್ಲಿ ಆತನನ್ನು ಭಯಪೀಡಿಸಿದ್ದಿರಬೇಕು! ಸ್ವಾಮಿದಂಪತಿಯ ಒಪ್ಪಿಗೆ ಪಡೆದು, ವಾಪಾಸು ಹೋಗಲು ದಾರಿಬದಿಯಲ್ಲಿ ಕಾರು ಕಾದಿದ್ದ!

ಹೊನ್ನೆಮರಡಿಗೆ ನಾವು ಬಂದ ಸಂಜೆಯೇ ಮನೆಯ ಹಿತ್ತಿಲ ಮಾಡಿನಡಿಯ ವಿಸ್ತಾರ ಭಾಗವನ್ನು ಆಕ್ರಮಿಸಿದಂತೆ, ಎರಡು ದೊಡ್ಡ ‘ರಬ್ಬರ್’ ತೆಪ್ಪ (ಡಿಂಘಿ) ಕಂಡಿದ್ದೆ. ಆಗ ಸಹಜವಾಗಿ “ಗಾಳಿ ತೆಗೆದು ಮಡಚಿಡಬಹುದಿತ್ತಲ್ಲ” ಎಂದೇ ಕೇಳಿದ್ದೆ. ಸ್ವಾಮಿ ವಿವರಣೆಯನ್ನೂ ಕೊಟ್ಟಿದ್ದರು “ನಿಜ, ಜಾಗ ತಿಂತದೆ, ಆದರೆ ಮಡಚಿಟ್ಟರೆ ಇಲಿ ಕತ್ತರಿಸುತ್ತದೆ. ಅದೇ ತುಸು ಗಾಳಿ ತುಂಬಿದರೆ ಇಲಿಯ ಹಲ್ಲಿಗೆ ಸಿಗುವುದಿಲ್ಲ”! ಅವನ್ನು ಈಗ ಅಂಗಳಕ್ಕೆ ತಂದಿಟ್ಟೆವು.

ಡಿಂಘಿ ನೋಟಕ್ಕೆ ಉರುಟುರುಟು ದಂಡೆಯ, ಒಂದೇ ಅಚ್ಚಿನ ದೋಣಿಯಂತೆ ಕಂಡರೂ ಒಳಗೆ ಬಿಗಿಯಾದ ನಾಲ್ಕೈದು ಗಾಳಿ ವಿಭಾಗಗಳಿವೆ. ಅವೆಲ್ಲವುಗಳ ಗಾಳಿಮೂತಿಗೂ ಪಂಪ್ ಹಚ್ಚಿ, ಬಿಗಿ ಮಾಡಿದೆವು. ಡಿಂಘಿ ವಿಶೇಷ ಭಾರದ್ದೇನೂ ಅಲ್ಲ. ಆದರೆ ಮುಳ್ಳು, ಕಲ್ಲು ತಾಗಿ ಘಾಸಿಗೊಳ್ಳದ ಎಚ್ಚರಿಕೆಗೋಸ್ಕರ ಮೂರು ನಾಲ್ಕು ಮಂದಿ ಎತ್ತಿ ಒಯ್ದು, ನೀರಿಗಿಳಿಸಿದೆವು. ಮತ್ತೆ ಹಿಂದಿನ ದಿನದಂತೇ ಹಿಂಬಾಲಿಸಿದ್ದವು – ಹುಟ್ಟುಗಳು, ಖಾಸಾ ಚೀಲಗಳು, ಮಲಗುವ ಹಾಳೆಗಳ ಸುರುಳಿಗಳು, ಗುಡಾರ, ಪಾತ್ರೆ ಇತ್ಯಾದಿ. ಆದರೆ ಹೊಸದೇ ಎನ್ನುವಂತೆ ಒಣಗಿಸಿದ ದಿನಸಿ, ಅಣಿಗೊಳಿಸಿದ್ದ ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಬುತ್ತಿ ಎಂಬಿತ್ಯಾದಿ ವಿವರಗಳು ಬಂದಾಗ, ಇವುಗಳನ್ನು ಸಜ್ಜುಗೊಳಿಸುವಲ್ಲಿ ಸ್ವಾಮಿದಂಪತಿಯ ರಾತ್ರಿಯ ಶ್ರಮ ಎಷ್ಟಿರಬಹುದು, ವಿಶ್ರಾಂತಿ ಎಷ್ಟು ಕಡಿಮೆಯಾಗಿರಬಹುದು ಎಂದೆಲ್ಲ ಅಂದಾಜಿಸಿದಾಗ ಆಶ್ಚರ್ಯವೇ ಆಯ್ತು. (ನಾವು ಸಹಾಯ ಮಾಡಲಿಲ್ಲವಲ್ಲ ಎಂದು ಸಣ್ಣ ಅಪರಾಧೀ ಪ್ರಜ್ಞೆಯೂ ಬಂತು!)

‘ಡಿಂಘಿ’ ಶಬ್ದವಾಗಿ ಭಾರತೀಯ ಮೂಲದ್ದಂತೆ! ಗಮನಿಸಿ, ಇಂಗ್ಲಿಷಿನಲ್ಲಿ ಇದು Dinghy, Dingy ಅಲ್ಲ. ಇದನ್ನು Raft ಎಂದೂ ಕರೆದರೂ ನಮ್ಮ ಸಾಂಪ್ರದಾಯಿಕ ತೆಪ್ಪ ಅಲ್ಲ. (ಸಾಲು ಬಿದಿರೋ ಬಾಳೇ ದಿಂಡೋ ಕಟ್ಟಿ ಮಾಡಿದ ತೇಲು ಸಾಧನವಲ್ಲ.) ಇವು ಮುಖ್ಯವಾಗಿ ಕಡಲ ಯಾನದ ಭಾರೀ ಹಡಗುಗಳಲ್ಲಿ ಆಪದ್ರಕ್ಷಕನಾಗಿ (life boat) ಬಳಕೆಯಲ್ಲಿವೆ. ಮತ್ತೆ ಮೋಜಿನಯಾನ, ಕ್ರೀಡೆಗಳಲ್ಲಿ ನೂರಾರು ರೂಪ ಗಾತ್ರಗಳಲ್ಲಿ ಬಳಕೆಯಲ್ಲಿವೆ. ನಾವು ಬಳಸಿದ ಡಿಂಘಿಗಳು ಬೆಟ್ಟಗಳ ನಡುವಣ ರಭಸ ಹರಿನೀರ ಸಾಹಸಗಳಲ್ಲಿ (White water rafting) ಹೆಚ್ಚಾಗಿ ಬಳಕೆಯಲ್ಲಿವೆ ಎಂದೇ ಸ್ವಾಮಿ ಹೇಳಿದರು. ಇದು ಸಮತಳದ ದೋಣಿಯಂತೇ ಇದ್ದರೂ ಅದೇನು ಕಾರಣಕ್ಕೋ ತಳದಲ್ಲಿ ಸ್ಪಷ್ಟವಾಗಿ ಕೆಲವು ತೆರಪುಗಳಿವೆ. ಹಾಗಾಗಿ ಅಂಚುಗಳಿಂದ ಹೊರಗಿನ ನೀರು ಎಷ್ಟೇ ಒಳ ಚಿಮ್ಮಿದರೂ ‘ನೀರು ತುಂಬುವ’ ಭಯವಿರಲಿಲ್ಲ. ಹಾಗೇ ದೋಣಿಯೊಳಗಿನ ಒಟ್ಟು ತೂಕ ಹೆಚ್ಚಿದಲ್ಲಿ, ತಳದಿಂದಲೇ ನುಗ್ಗುವ ತುಸು ನೀರು ನಿರಂತರ ಒಳಗಿರುವುದು ತಪ್ಪುವುದಿಲ್ಲ. ನಾವು ಎರಡು ದಿನಗಳ ಊಟ, ವಾಸ ಎಂದು ಸಾಕಷ್ಟು ಸಾಮಾನಿನ ಜತೆಗೆ (ಒಂದೊಂದರಲ್ಲಿ) ಏಳು ಮಂದಿ ತುಂಬಿಕೊಂಡದ್ದರಿಂದ, ಉದ್ದಕ್ಕೂ ಸುಮಾರು ಪಾದ ಮುಳುಗುವಷ್ಟು ನೀರಿತ್ತು.

ಏಳು ಗಂಟೆಗೆ ಸರಿಯಾಗಿ ಎರಡು ಡಿಂಘಿ, ಹದಿನಾಲ್ಕು ಮಂದಿ ಶರಾವತಿ ಸಾಗರದ ಉದ್ದಕ್ಕೆ ಹೊರಟಿದ್ದೆವು. ಆಕಾಶ ತಿಳಿಯಾಗಿ, ಅಲೆಯೊಲೆತ ಇಲ್ಲವಾಗಿ, ತೆಳು ಗಾಳಿ ನೂಕುಬಲವನ್ನೇ ಕೊಟ್ಟು ನಮ್ಮ ಯಾನ ಸುಂದರ ಗಾನವಾಗಿಯೇ ಪಸರಿಸಿತು. ದಿಕ್ಕು ನಿನ್ನೆ ಹೇಳಿದ್ದೇ – ಮರಗಳ ಗುಚ್ಛಗಳಂತೇ ಕಾಣುತ್ತಿದ್ದ ಮೂರು ಪುಟ್ಟ ಕುದುರುಗಳು. ಎರಡೂ ಕಾಲುಗಳನ್ನು ಒಳಗೇ ಇಟ್ಟುಕೊಂಡಂತೆ, ಎರಡೂ ಮಗ್ಗುಲ ಉರುಟು ದಿಂಡುಗಳ ಮೇಲೆ ಮೂರ್ಮೂರು ಮಂದಿ ಕುಳಿತು ಹುಟ್ಟು ಹಾಕುತ್ತಿದ್ದೆವು.

ಸ್ವಾಮಿ ಹಿಂದಿನ ದಿಂಡಿನ ಮೇಲೆ ಕುಳಿತು, ದೋಣಿಗಳಲ್ಲಿ ಮಾಡುವಂತೆ, ಸ್ಪಷ್ಟ ದಿಕ್ಕು ನಿರ್ಧರಿಸುವ ಚುಕ್ಕಾಣಿಯ ಕೆಲಸ ನಿರ್ವಹಿಸಿದರು. ಹರಿಗೋಲಿನಲ್ಲಾದರೆ ಚಲನೆ ಮತ್ತು ದಿಕ್ಕುಗಳನ್ನು ಎರಡೂ ಮಗ್ಗುಲಿನ ತೊಳಸಿಕೆಗಳ ಸಂತುಲನದಲ್ಲೇ ಕಾಯ್ದುಕೊಳ್ಳಬೇಕಾಗುತ್ತಿತ್ತು. ಆದರಿಲ್ಲಿ ಹುಟ್ಟು ಹಾಕುವ ಆರುಮಂದಿಯ ಅಸಮತೋಲನದಲ್ಲೂ ದಿಕ್ಕು ಕಾಯ್ದುಕೊಳ್ಳುವ ಮತ್ತು ನೂಕುಬಲವನ್ನಾಗಿಯೇ ಬಳಸಿಕೊಳ್ಳುವ ಜಾಣ್ಮೆ ಚುಕ್ಕಾಣಿಯಲ್ಲಿರುತ್ತಿತ್ತು. ಇನ್ನೊಂದು ಡಿಂಘಿ ನಮ್ಮಿಂದ ತುಸು ಅಂತರವನ್ನು ಕಾಯ್ದುಕೊಂಡು ಹಿಂಬಾಲಿಸಿತ್ತು.

ಪ್ರಾಯದ ಅಂತರದಿಂದಾಗಿ ನಮ್ಮೂವರನ್ನು ಬಿಟ್ಟು, ಉಳಿದೆಲ್ಲರನ್ನೂ (ಐಟಿ ವೃತ್ತಿಯವರೇ ಆದರೂ) ಸ್ವಾಮಿ ದಂಪತಿ ಪ್ರೀತಿಯಿಂದ ಎಳೆಯ ಬಾಲಕರಂತೇ ನಡೆಸಿಕೊಳ್ಳುತ್ತಿದ್ದರು. ಹಾಗಾಗಿ ಸ್ವಾಮಿ ಆಗೀಗ ಸಮೀಪದಲ್ಲೇ ಇದ್ದ ನನ್ನ ಚಾಲನೆಯನ್ನು ಕೈಸನ್ನೆಯಲ್ಲೇ ತಡೆದು, ತರುಣ ಸದಸ್ಯರನ್ನು ಹೆಚ್ಚಿನ ಶ್ರಮಕ್ಕೆ ಪ್ರಚೋದಿಸುವಂತೆ ಚುಕ್ಕಾಣಿಯಲ್ಲೇ ಆಟವಾಡಿಸುವುದೂ ಇತ್ತು. ಡಿಂಘಿಗಳಲ್ಲಿ ಹುಟ್ಟು ಹಾಕುವವರ ಸಂಖ್ಯೆ ಹೆಚ್ಚೇ ಇದ್ದುದರಿಂದ, ಕೈಸೋತವರು ಸಣ್ಣ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರೂ ಒಟ್ಟಾರೆ ಪ್ರಗತಿಯಲ್ಲಿ ದೊಡ್ಡ ಕೊರತೆಯೇನೂ ಆಗುತ್ತಿರಲಿಲ್ಲ. (ಗಮನಿಸಿ, ಇಲ್ಲೆಲ್ಲ ನೆಲದ ಮೇಲಿನ ದೂರದ ಅಳತೆಗಳು ಮತ್ತು ಚಲನಾವೇಗ ಮಾಪನಗಳೂ ಅರ್ಥ ಕಳೆದುಕೊಳ್ಳುತ್ತವೆ.) ಸಾಕಷ್ಟು ಚುರುಕಾಗಿಯೇ ‘ಮೊದಲ ಗುರಿ’ – ಮೂರು ದ್ವೀಪಗಳನ್ನು ತಲಪಿದ್ದೆವು. ಆದರೆ ಸ್ವಾಮಿದಂಪತಿಯ ನಿರೀಕ್ಷೆಗೆ ವಿರುದ್ಧವಾಗಿ, ಕುದುರಿನ ಮರಗಳೆಲ್ಲ ಅರ್ಧಕ್ಕೂ ಹೆಚ್ಚೆತ್ತರಕ್ಕೆ ಮುಳುಗಿ ನಿಂತಿದ್ದವು. ನಾವು ಪಾದ ಊರಿ ತಿಂಡಿ ತಿನ್ನುವ ಮಾತಂತಿರಲಿ, ಇಷ್ಟರಲ್ಲೇ ಕೆಲವರಿಗೆ ಮೂಡಿದ್ದ ಉಚ್ಚೆಯ ಒತ್ತಡಕ್ಕೂ ಮುಕ್ತಿ ಸಿಗುವಂತಿರಲಿಲ್ಲ. ಮುಂದಿನ ಹಂತದಲ್ಲಿ ಕುದ್ರುಗಳ ಸಂಖ್ಯೆ ಹೆಚ್ಚಿದ್ದವು. ಹಾಗೆ ನಾವು ಮುಟ್ಟಿದ ಇನ್ನೊಂದು ದ್ವೀಪದಲ್ಲಿ, ಮರಗಳು ನೀರಲ್ಲೇ ನಿಂತಿದ್ದರೂ ಎರಡು ಮೂರಡಿ ಆಳದಲ್ಲಿ ಮಟ್ಟಸ ನೆಲ ಕಾಣಿಸಿದ್ದರಿಂದ ಉಚ್ಚೆ ವಿರಾಮ ಸಿಕ್ಕಿತು. ಗಿಡ್ಡದವರು ಮರಗಳ ಗೆಲ್ಲನ್ನೇರಿ, ಹೊಟ್ಟೆ ಹಗುರ ಮಾಡಿಕೊಂಡ ಅಧಿಕೃತ ವರದಿ ಸಿಕ್ಕಿದೆ. ಇನ್ನು ಕೆಲವರು, ಸೊಂಟದಾಳದ ನೀರಲ್ಲಿ ನಿಂತಂತೇ ಒಳಗಿದ್ದದ್ದನ್ನು ಹೊರಗಿನದ್ದರಲ್ಲಿ ಒಂದಾಗಿಸಿದ ಬಗ್ಗೆ ಗಾಢ ಗುಮಾನಿಗಳಿವೆ; ವ್ಯತ್ಯಾಸವೇನೂ ಇಲ್ಲ !

ಮುಂದೊಂದು ದ್ವೀಪದಲ್ಲಿ ತಿಂಡಿಯ ಬಿಡುವು. ಮೊದಲ ದಿನದಂದೇ ಮಾಡಿ, ಕಟ್ಟಿ ತಂದಿದ್ದರೂ ಆಕಸ್ಮಿಕದಲ್ಲಿ ನೀರು ಕುಡಿದಿದ್ದ ಚಪಾತಿಗಳನ್ನೇ ಕಾಯಕಲ್ಪ ಮಾಡಿ ತಂದಿದ್ದರು. ನಂಚಿಕೊಳ್ಳುವಲ್ಲಿ ಕಾರ ಬಯಸುವವರಿಗೆ ಉಪ್ಪಿನ ಕಾಯಿ, ಅಲ್ಲದಿದ್ದರೆ ಬೆಲ್ಲ, ಅಷ್ಟೆ. ಒಲೆ ಹೂಡಿ ಚಾ ಕಾಯಿಸುವ ಗೋಜಿಗಿಳಿಯಲೇ ಇಲ್ಲ. ಆದರೂ ಎಲ್ಲರ ಹೊಟ್ಟೆಯನ್ನು ಧಾರಾಳ ತಂಪು ಮಾಡಿತ್ತು ಸನ್ನಿವೇಶ. ಸಣ್ಣ ವಿಶ್ರಾಂತಿಯನಂತರ ’ದೋಣಿ ಸಾಗಲಿ’ ಗಾನಲಹರಿ ಅಸಂಖ್ಯ ಸ್ವರ ವಿನ್ಯಾಸಗಳಿಗಿಳಿಯಿತು. ವಿವಿಧ ರೂಪ, ಗಾತ್ರಗಳ ಕುದ್ರುಗಳು, ಹಸುರಿನ ಛಾಯೆಗಳು, ನೀರಗನ್ನಡಿಯಲ್ಲಿನ ಅದ್ಭುತ ಬಿಂಬಗಳು ಬಿಡಿಸಿಕೊಳ್ಳುತ್ತಲೇ ಹೋದವು.

ಸ್ವಾಮಿದಂಪತಿ ಹಿಂದೆ ನೀರು ಕಡಿಮೆ ಇದ್ದ ದಿನಗಳಲ್ಲಿ ಯುವ ದೋಣಿಗರಿಗೆ ನಕಾಶೆ ಕೊಟ್ಟು ಸ್ವತಂತ್ರವಾಗಿ ಜಲ ಓಣಿಗಳಲ್ಲಿ ಸಂಚರಿಸಿ, ಕುದ್ರುಗಳ ವೈಶಿಷ್ಟ್ಯವನ್ನು ಕಂಡುಕೊಳ್ಳಲು ಬಿಡುವುದಿತ್ತಂತೆ. ಇವರೂ ಸೇರಿಕೊಂಡಾಗ ಭೂ ಚಹರೆಗಳಿಂದಲೇ ಶರಾವತಿಯ ಮುಖ್ಯಪಾತ್ರೆ, ಅಸಂಖ್ಯ ಕುರುಡುಗಲ್ಲಿಗಳ ಜಾಡು, ಹೊಸ ಹೊಸಾ ಶಿಬಿರತಾಣಗಳನ್ನು ಕಂಡುಕೊಂಡದ್ದೂ ಇತ್ತಂತೆ. ಆದರೆ ಇಂದು ನೀರಿನ ಉತ್ತುಂಗದಲ್ಲಿ, ಅವರ ಎಷ್ಟೋ ಮಾಹಿತಿಗಳು ತತ್ಕಾಲೀನವಾಗಿ ನಿರುಪಯುಕ್ತವೇ ಆಗುತ್ತಿತ್ತು. ನಮ್ಮ ಬಲ ದಿಕ್ಕಿನಲ್ಲಿ, ದಿಗಂತಕ್ಕಿಟ್ಟ ಗಡಿಕಲ್ಲಿನಂತೆ ನಿಂತ ಕೊಡಚಾದ್ರಿ ಶಿಖರ ನಮ್ಮ ಸಾಮಾನ್ಯ ದಿಕ್ಸೂಚಿಯಾಗಿತ್ತು. ಹಾಗೇ ಎಲ್ಲೋ ತಳದಲ್ಲಿ, (ಲಿಂಗನಮಕ್ಕಿ ಪೂರ್ಣ ತುಂಬಿದಾಗಿನ ಅಧಿಕೃತ ಅಳತೆಯಂತೆ) ಸುಮಾರು ಹದಿನೈದಡಿ ಆಳದಿಂದ ತೊಡಗಿದಂತೆ ಜಲಾಧಿವ್ರತ ನಡೆಸಿದ್ದ ಹಿರೇಭಾಸ್ಕರ ಅಥವಾ ಮಡೆನೂರು ಅಣೆಕಟ್ಟನ್ನು ನಾವು ಅರಿವಿಲ್ಲದೇ ದಾಟಿದ್ದೆವು.

ಬಿಸಿಲು ನೆತ್ತಿಗೇರಿತ್ತು. ಬಹುತೇಕ ಎಲ್ಲರೂ ‘ನೆಲದಿಂದ ತಂದ’ ನೀರನ್ನು ಬಾಯ್ಗೆ ಸುರಿದು ದೇಹದಲ್ಲಿ ಬೆವರಾವಿಯಾಗಿಸಿ ಮುಗಿಸಿದ್ದರು. ಮತ್ತೆ ಅನಿವಾರ್ಯವಾಗಿ ನೇರ ಶರಾವತಿಯನ್ನೇ ಮೊಗೆಮೊಗೆದು ಕುಡಿಯುತ್ತ ಸಾಗಿದ್ದೆವು. ಆಗ ಪ್ರಥಮ ನಾಗರಿಕ ಸದ್ದೆನ್ನುವಂತೆ ಹೊಳೆ ಬಾಗಿಲು – ತುಮ್ರಿ ಕಡವಿನ ಲಾಂಚಿನ ಕ್ಷೀಣ ಸದ್ದು ಕಿವಿಗೆ ಬಿತ್ತು. ಆದರೆ ಅದನ್ನು ಮೀರಿಸುವಂತೆ, ಒಮ್ಮಿಂದೊಮ್ಮೆಗೆ ಸ್ವಾಮಿಯವರ ಧ್ವನಿ ಗಡಸಾಗಿತ್ತು. ನಾವು ಹುಟ್ಟು ಹಾಕುವುದನ್ನು ತಡೆದರು. ದೋಣಿಯನ್ನು ಹಿಂಬಾಲಿಸಿದ ದೋಣಿಯತ್ತ ತಿರುಗಿಸಿದರು. ಅದು ಸಮೀಪಿಸಿದಾಗ, ಅವರಲ್ಲೊಬ್ಬ ತೇಲಂಗಿಯ ಬೆಲ್ಟುಗಳನ್ನು ಬಿಚ್ಚಿ ಹಾಕಿದ್ದು ಸ್ಪಷ್ಟವಾಯ್ತು. ಸ್ವಾಮಿದಂಪತಿ ನೈಜ ಕಾಳಜಿಯಲ್ಲಿ ಉರಿಉರಿದು ಆತನಿಗೆ ಬಹಳ ದೊಡ್ಡದೇ ಪಾಠ ಮಾಡಿದರು. ಸೂಕ್ಷ್ಮ ಇಷ್ಟೇ – ಸಾಹಸ ಏನೇ ಮಾಡಿ, ಯುಕ್ತ ರಕ್ಷಣೆಯೊಡನೆ ಮಾಡಿ! ಆಕಸ್ಮಿಕಗಳು ಹೇಳಿ ಬರುವವಲ್ಲ, ಸಮಯ ಕೊಟ್ಟು ಘಟಿಸುವವೂ ಅಲ್ಲ. ಅಡ್ವೆಂಚರರ್ಸ್ ಇಪ್ಪತ್ತೇಳು ವರ್ಷದ ಇತಿಹಾಸದಲ್ಲಿ ಏನೆಲ್ಲ ಟೀಕೆ, ಸಂಕಟಗಳನ್ನು ಅನುಭವಿಸಿ, ಸಹಿಸಿದೆ. ಆದರೆ ಜೀವಾಪಾಯವನ್ನು ಕಂಡಿಲ್ಲ ಮತ್ತು ಅದಕ್ಕೆ ಆಸ್ಪದ ಕೊಡುವ ಉಡಾಫೆಯನ್ನು ಕ್ಷಮಿಸಿಲ್ಲ. ಕೇವಲ ಸೆಕೆಯಾಯ್ತೆಂದು ಬೆಲ್ಟ್ ಬಿಚ್ಚಿದ್ದ ತರುಣನಿಗೆ, ನಿಜ ಸೂರ್ಯ ತಂಪಾಗಿ ತೋರುವಂತೆ, ಹೊಳೆಬಾಗಿಲಿನಲ್ಲಿ ದೋಣಿಯಿಂದ ನೂಕಿಸಿಕೊಂಡು ಬಸ್ಸೇರಿ ವಾಪಾಸು ಹೊರಟಂತೆಲ್ಲ ಭಾಸವಾಗಿದ್ದರೆ ಆಶ್ಚರ್ಯವಿಲ್ಲ. ಪೂರ್ಣ ಶರಣಾದ, ಅಭಿಯಾನ ಮುಗಿಯುವ ಕಾಲಕ್ಕೆ ಸ್ವಾಮಿ ದಂಪತಿಯ ಆಪ್ತನೇ ಆದ ಎಂದರೆ ತಪ್ಪಲ್ಲ.

೧೯೪೯ರಲ್ಲಿ ಕಾರ್ಯಾರಂಭ ಮಾಡಿದ ಹಿರೇಭಾಸ್ಕರ ಅಣೆಕಟ್ಟಿನ ಮುಳುಗಡೆ ವಿವರಗಳು, ಸಂಕಟಗಳು ನನಗೆ ತಿಳಿದಿಲ್ಲ. ಹಾಗೇನಾದರೂ ಇದ್ದರೆ, ಹಿರೇಭಾಸ್ಕರ ಅಣೆಕಟ್ಟನ್ನೂ ಮುಳುಗಿಸಿ, ಸಮಸ್ಯೆಗಳನ್ನೆಲ್ಲ ಕ್ಷುದ್ರ ಮಾಡುವಷ್ಟು ಬೃಹತ್ತಾಗಿ ೧೯೬೪ರಲ್ಲಿ, ಕೆಳ ಪಾತೆಯಲ್ಲಿ ಲಿಂಗನಮಕ್ಕಿ ಅಣೆಕಟ್ಟು ಬಂತು. ‘ಜಗ ಬೆಳಗಿದ ಜೋಗ’ ಎಂದು ಏನೆಲ್ಲ ಹೊಗಳು ಸಾಹಿತ್ಯ ಇರಬಹುದು ಮತ್ತವು ಕಾಲಧರ್ಮದಲ್ಲಿ ನಿಜವೂ ಇರಬಹುದು. ಆದರೆ ಅಷ್ಟು ದೊಡ್ಡ ಸಂಖ್ಯೆಯಲ್ಲಲ್ಲದಿದ್ದರೂ ಪ್ರಕಟವಾದ (ಉದಾಹರಣೆಗೆ ನಾ. ಡಿಸೋಜಾರ ಮುಳುಗಡೆ, ದ್ವೀಪ ಇತ್ಯಾದಿ) ‘ಸಂತ್ರಸ್ತ ಸಾಹಿತ್ಯ’ ಖಂಡಿತಕ್ಕೂ ಉಪೇಕ್ಷಿಸುವಂಥವಲ್ಲ. ಅದರಲ್ಲಿ ಅತಿ ನೂತನವಾದದ್ದು – ಪುನರ್ವಸು (ಅಂಕಿತ ಪ್ರಕಾಶನ, ೫೪೪ ಪುಟಗಳ ಮಹಾಗಾತ್ರಕ್ಕೆ ಬೆಲೆ ಕೇವಲ ರೂ ೪೫೦). ತಾತ್ವಿಕವಾಗಿ ಈ ಮಹಾಕಥನ (ಕಾದಂಬರಿ), ಅಣೆಕಟ್ಟಿನಿಂದ ಸಂತ್ರಸ್ತರೂ ಫಲಾನುಭವಿಗಳೂ ಆದ ಡಾ| ಗಜಾನನ ಶರ್ಮಾರ ಕಾಲ್ಪನಿಕ ಬರೆಹ. ಆದರೆ ನಿಜದಲ್ಲಿ, ಅವರೇ ಮುನ್ನುಡಿಯಲ್ಲಿ ಬರೆದುಕೊಂಡಂತೆ, “…. ಅದು ನನ್ನ ಬದುಕನ್ನು ಅರಳಿಸಿದ್ದೂ ಹೌದು, ನರಳಿಸಿದ್ದೂ ಹೌದು…. ನಾನು ಜೋಗವನ್ನು ಪ್ರೀತಿಸುತ್ತೇನೋ ದ್ವೇಷಿಸುತ್ತೇನೋ ನನಗೇ ಗೊತ್ತಿಲ್ಲ…”. ಮೊದಲು ಜೋಗದ ಸಂತ್ರಸ್ತರ ಪಟ್ಟಿಯಲ್ಲೂ ಮುಂದೆ ನೌಕರಿಯ ಪಟ್ಟಿಯಲ್ಲೂ ಇದ್ದು, ಇಂದು ನಿವೃತ್ತರಾಗಿರುವ ಶರ್ಮಾರ ಈ ಕೃತಿ ಆ ನೆಲದ ನೋವೇ ಮೂರ್ತವಾದಂತಿದೆ. ಪುಸ್ತಕದ ಹಿನ್ನುಡಿಕಾರರಾದ ಜೋಗಿ ಹೇಳಿದಂತೆ ‘ಕಥಾ ಸಾಕ್ಷ್ಯಚಿತ್ರ’ವೇ ಆಗಿದೆ. ಎಸ್ಸೆಲ್ಲೆನ್ ಸ್ವಾಮಿ ದಂಪತಿ ನಮ್ಮನ್ನು ಸಮ್ಮಾನಿಸಿದಾಗ, ಬಹಳ ಅರ್ಥಪೂರ್ಣವಾಗಿ ‘ಪುನರ್ವಸು’ವನ್ನು ನಮಗೆ ಪುರಸ್ಕಾರವಾಗಿ ಕೊಟ್ಟು ಬಹಳ ದೊಡ್ಡ ಉಪಕಾರವನ್ನೇ ಮಾಡಿದ್ದಾರೆ. (ಕ್ಷಮಿಸಿ, ‘ಪುನರ್ವಸು’ವಿನ ನನ್ನ ಓದು ಇನ್ನೂ ಪೂರ್ಣಗೊಂಡಿಲ್ಲ.)

‘ಮಡೆನೂರು ಕಟ್ಟೆ’ಯಿಂದ ತೊಡಗಿದಂತೆ ಸುಮಾರು ಎಪ್ಪತ್ತೊಂದು ವರ್ಷ ಕಳೆದ ಮೇಲೂ ಮುಳುಗಡೆಯ ಸಂಕಟಗಳಿಗೆ ದೊಡ್ಡ ಸಾಕ್ಷಿಯಾಗಿ ಮುಂದುವರಿದಿರುವ ಎರಡು ಸ್ಥಳ – ಹೊಳೆಬಾಗಿಲು ಮತ್ತು ಹಸುರುಮಕ್ಕಿ ಕಡವುಗಳು. ಇಲ್ಲಿ ಜನ ವಾಹನಗಳು ದೋಣಿಯೇರಿಯೇ ಶರಾವತಿ ನೀರಸಾಗರವನ್ನು ಪಾರುಗಾಣಬೇಕು. ಉಳಿದಂತೆ, ಅರೆಬರೆ ಮುಳುಗಡೆಯ ಕೃಷಿಕರು, ದುರ್ಗಮ ಬಳಸು ದಾರಿಗಳನ್ನು ಹಿಡಿಯಲಾಗದವರೆಲ್ಲ ಸ್ವಂತಕ್ಕೆ ಹರಿಗೋಲು, ದೋಣಿಗಳನ್ನಿಟ್ಟುಕೊಂಡೋ ಕಿಮೀಗಟ್ಟಳೆ ನಡೆದುಕೊಂಡೋ ಒದ್ದಾಡುವುದು ಇದ್ದದ್ದೇ! ಯೋಜನೆ ತೊಡಗುವಾಗ ಇದ್ದ ಸತ್ಸಂಕಲ್ಪಗಳೆಲ್ಲ ಬದಲಾದ ರಾಜಕೀಯ ಸ್ಥಿತಿ ಮತ್ತು ಕಾಲಧರ್ಮದಲ್ಲಿ ಶಿಥಿಲಗೊಂಡಿರುವುದನ್ನೂ ಈ ಸಂಕಟಗಳು ಧಾರಾಳ ಪ್ರತಿಫಲಿಸುತ್ತವೆ. (ತೋರ ನೋಟಕ್ಕೆ ಮೈಸೂರಿನ ರಾಜರು, ಬ್ರಿಟಿಷರು ಹೋಗಿ ಪ್ರಜಾಸತ್ತೆ ಬಂತು ಎಂದು ಮುಗಿಸುವಂತದ್ದಲ್ಲ. ಕೇವಲ ಒಂದು ಅಣೆಕಟ್ಟಿನ ನೆಪದಲ್ಲಿ ಒದಗಿದ ಮೌಲಿಕ ಶೈಥಿಲ್ಯಕ್ಕೆ ಈ ಮೊದಲೇ ನಾನು ಉಲ್ಲೇಖಿಸಿದ ‘ಪುನರ್ವಸು’ ಕಾದಂಬರಿ ಎಷ್ಟೂ ನಿದರ್ಶನಗಳನ್ನು ಕೊಡುತ್ತದೆ.) ನಾವು ಹೊಳೆಬಾಗಿಲಿನಲ್ಲಿ ಎರಡೂ ದಿಕ್ಕಿನಿಂದ ಭರ್ತಿಯಾಗಿ ಬರುತ್ತಿದ್ದ ಪುಟ್ಟ ಹಡಗುಗಳನ್ನು ವಿರಾಮದಲ್ಲಿ ನೋಡಿ ಮುಂದುವರಿದೆವು.

ಹರಿಗೋಲಿನ ಪ್ರಯೋಗ ಕಾಲದಲ್ಲೇ ಆದ ‘ಸ್ವಾಮಿ ಯೋಜನೆ’ ಡಿಂಘಿಯಲ್ಲೂ ಜ್ಯಾರಿಯಿತ್ತು. ಮಂಗಳೂರಿನಿಂದ ಬಂದವರಲ್ಲಿ ನಾನು ಮಾತ್ರ ಮುಂದಿನದ್ದರಲ್ಲಿ, ದೇವಕಿ ಮತ್ತು ಯಶಸ್ವೀ ಇನ್ನೊಂದೇ ದೋಣಿಯಲ್ಲಿದ್ದರು. ಅದೇ ಮಾನಕದಲ್ಲಿ ಅಲ್ಲದಿದ್ದರೂ ನಮ್ಮ ಅಂದಾಜು ಮೀರಿ, (ಬಹುಶಃ ಪರಸ್ಪರ ಸಮಾಲೋಚನೆಯ ಅನುಕೂಲಕ್ಕಿರಬೇಕು) ಸ್ವಾಮಿದಂಪತಿ ಮಾತ್ರ ನಮ್ಮ ದೋಣಿಯಲ್ಲೇ ಇದ್ದರು. (ಎಡ ಮಗ್ಗುಲಿನ ಮೂರನೇ ಹುಟ್ಟುಗಾರಿಗೆ ನೊಮಿತೋ ನಡೆಸಿದ್ದರು) ಸ್ವಾಮಿಯವರ ದೈಹಿಕ ನಿಲುವು, ಮಾತು ವನ್ಯದಂತೆ; ಔಪಚಾರಿಕ ನೋಟಕ್ಕೆ ಒರಟು, ಸನ್ನಿವೇಶದ ಶ್ರುತಿಗೆ ಅರ್ಥಪೂರ್ಣ. ನೊಮಿತೋ ದೈಹಿಕವಾಗಿ ಸಣ್ಣಾಳಾದರೂ ಸ್ವರ ಮತ್ತು ಸಾಮರ್ಥ್ಯ ದೊಡ್ಡದು, ಸಂಬಂಧ ಆಪ್ತ. ಪ್ರಾಯದ ಹಿರಿತನ ಮತ್ತು ಎಲ್ಲರಲ್ಲೂ ಅಂತಸ್ತವಾದ ಸಾಂಪ್ರದಾಯಿಕತೆಯಲ್ಲಿ (ಪುರುಷ ಶ್ರೇಷ್ಠ!) ಸ್ವಾಮಿಯೇ ಯಾನದ ನಾಯಕನಂತೆ ಕಾಣುತ್ತಿದ್ದರು. ಆದರೆ ಒಂದೆರಡು ಸಂದರ್ಭಗಳಲ್ಲಿ ಸ್ವಾಮಿಯೇ ಹೇಳಿದಂತೆ, ಈ ಯಾನದಲ್ಲಿ ಬಹುತೇಕ ಮಾತು, ಅಡುಗೆ ಸೇರಿದಂತೆ ವ್ಯವಸ್ಥೆಗಳೆಲ್ಲವನ್ನು ಗಟ್ಟಿಯಾಗಿ ನಡೆಸಿದವರು ನೊಮಿತೋ. ಸ್ವಾಮಿದಂಪತಿ ಸ್ಪಷ್ಟವಾಗಿ ನಮಗೂ ಹಿಂಬಾಲಿಸಿದ ದೋಣಿಗೂ ಕೆಲವೇ ಸ್ಪಷ್ಟ ಸೂಚನೆಗಳನ್ನು ಕೊಟ್ಟದ್ದಿದೆ. ಉಳಿದಂತೆ ಕೇವಲ ಕಣ್ಗಾವಲು, ‘ಅನುಭವವೇ ಪಾಠ ಮಾಡುತ್ತದೆ’ ಎನ್ನುವ ನಿರ್ಲಿಪ್ತಿ ಅವರದು.

ನಮ್ಮ ದೋಣಿಯೊಳಗೆ ಮಾತು, ಹಾಸ್ಯ ಧಾರಾಳ ನಡೆದಿತ್ತು. (ಸಣ್ಣ ಬೇಸರದ ಸಂಗತಿ – ಸ್ವಾಮಿ ಎಲ್ಲೂ ನನ್ನನ್ನು ಅವರ ಹಾಸ್ಯಕ್ಕೆ ಗುರಿಪಡಿಸಲೇ ಇಲ್ಲ!) ಅದರಲ್ಲೂ ಬೆಂಗಳೂರಿನ ಎಂಟು ಜನ ಮಿತ್ರ ಬಳಗ ತಂದ – ಭಾರ್ಗವ್ ಬರ್ಲೀ, ಬಗ್ಗೆ ಸ್ವಾಮಿದಂಪತಿಯ ‘ಪ್ರೀತಿ’ (ಕಾಲೆಳೆಯುವುದು) ತುಸು ಹೆಚ್ಚೇ! ಭಾರ್ಗವ್ ಹಿಂದೊಮ್ಮೆ, ನೀರು ಕಡಿಮೆ ಇದ್ದ ಕಾಲದಲ್ಲಿ, ಹೀಗೇ ದೋಣಿಯನುಭವಕ್ಕೆಂದು ಹೊನ್ನೆ ಮರಡಿಗೆ ಬಂದಿದ್ದರಂತೆ. ಆಗ ಆತನಿಗೆ ನೀರಿನ ಸಂಪರ್ಕದಿಂದ ಉಂಟಾದ ಒಗ್ಗದಿಕೆ (ಅಲರ್ಜಿ), ಮತ್ತದರಿಂದ ಪಾರಾಗುವಲ್ಲಿ ನೊಮಿತೋ ವಹಿಸಿದ ಕಾಳಜಿ ದೊಡ್ಡದು. ಅದು ಈ ಬಂಧಕ್ಕೆ ನೆಪವೂ ಹೌದು.

ದೋಣಿಯೊಳಗಿನ ನೀರಿನಲ್ಲಿ ಪಾದ ಸದಾ ಮುಳುಗಿದ್ದರೂ ನೆತ್ತಿ ಸುಡುತ್ತಲೇ ಇತ್ತು. ಮುಖ್ಯ ನೆಲ ಬಿಡುವವರೆಗೆ ನಮ್ಮ ಖಾಸಾ ಚೀಲ ಮರು ಮರು ವಿಮರ್ಶೆಗೆ ಒಳಗಾದ ಗೊಂದಲದಲ್ಲಿ, ನಾವಿಬ್ಬರೂ ಮಾಮೂಲು ಹ್ಯಾಟನ್ನು ಕಾರಿನಲ್ಲೇ ಮರೆತಿದ್ದೆವು. ದೇವಕಿಯೇನೋ ಶಾಲಿನಲ್ಲೇ ತಲೆ ಮುಖ ಸಾಕಷ್ಟು ಮರೆ ಮಾಡಿಕೊಂಡಿದ್ದಳು. ತುಂಡು ಕೈ ಬನಿಯನ್ ಮಾತ್ರ ಹಾಕಿದ ನಾನು ಸೂರ್ಯಶಕ್ತಿ ಚೂರೂ ವ್ಯರ್ಥವಾಗದಂತೆ ಧರಿಸಿಕೊಳ್ಳುತ್ತಲೇ ಇದ್ದೆ. ಎದುರಿನವ ಹುಟ್ಟು ಹಾಕುವಲ್ಲಿ ಆಗೀಗ ತಪ್ಪಿದಾಗ ಚಿಮ್ಮಿದ ನೀರು, ಸ್ವಾಮಿ ಅವರಿವರನ್ನು ಕೆಣಕುವಂತೆ ಚೇಪಿದ ನೀರು, ಆಕಸ್ಮಿಕವಾಗಿ ನನ್ನ ಮೇಲೆ ಬಿದ್ದಾಗಷ್ಟೇ ನನಗೆ ತುಸು ತಂಪು, ಆನಂದ. ಬಲಗಾಲನ್ನು ದೋಣಿಯ ಬಲಮಗ್ಗುಲ ದಿಂಡಿನ ಮೇಲೆ ಅರೆ ಮಡಚಿ, ಓರೆ ಕುಳಿತಂತೇ ನಿರಂತರ ಹುಟ್ಟು ಹಾಕಿ ಹಾಕೀ ತೋಳು ಬಳಲುತ್ತಿತ್ತು, ಕಾಲಿಗೆ ಜೋಮು ಹಿಡಿಯುತ್ತಿತ್ತು. ಇದು ನನ್ನೊಬ್ಬನ ಸಮಸ್ಯೆಯೇನೂ ಅಲ್ಲ. ಮತ್ತೆ ಎಲ್ಲವೂ ಸುಲಭವೇ ಆದರೆ ಸಾಹಸ ಎಲ್ಲಿ ಬಂತು, ಬಿಡಿ. ಹೊತ್ತು ಸಾಕಷ್ಟು ಏರಿದ ಕಾಲಕ್ಕೆ, ‘ಊಟಕ್ಕೊಂದು ಒಣ ದ್ವೀಪ’ ಹುಡುಕಿ ಹಿಡಿದು ತಂಗಿದೆವು.

ದೋಣಿಗಳನ್ನು ಅಂಚಿನ ಗಿಡ, ಮರಗಳಿಗೆ ಬಂಧಿಸಿ, ಕಟ್ಟಿ ತಂದ ಇನ್ನೇನೋ ಅನ್ನ ವಗ್ಗರಿಸಿದ ರೂಪವನ್ನೇ ಭರ್ಜರಿ ಊಟವೆಂಬಂತೆ ಆಸ್ವಾದಿಸಿದೆವು. ಹಿಂಬಾಲಿಸಿದಂತೆ ಒಂದು ಗಂಟೆಯ ವಿರಾಮ. ಕೆಲವರು (ತೇಲಂಗಿ ಸಹಿತ) ಜಲಕೇಳಿಗಿಳಿದರು. ನಾವು ಕೆಲವರು ದ್ವೀಪ ದರ್ಶನಕ್ಕೆಂದು ಸಣ್ಣ ಚಾರಣವನ್ನೇ ನಡೆಸಿದೆವು. ಅಲ್ಲಿ “ಹಸಿರು ಧಾರಾಳ ಇತ್ತು” ಎಂದು ಮುಗಿಸುವಂತಿಲ್ಲ; ಎಲ್ಲ ಅಕೇಸಿಯಾ! ಮತ್ತೆ ಹಾಗೇ ಸುತ್ತಣ ಹಲವು ಕುದುರುಗಳನ್ನು ಗಮನಿಸಿದಾಗಲೂ ಎದ್ದು ತೋರುತ್ತಿದ್ದದ್ದು ಅಕೇಸಿಯಾವೇ. ಇವೆಲ್ಲ ಸಾಲು ಹಿಡಿದು ಬೆಳೆದ ಶಿಸ್ತು ನೋಡಿದರೆ, ಅರಣ್ಯ ಇಲಾಖೆಯ ಹಸಿರೀಕರಣದ ಪುಣ್ಯಫಲ ಎನ್ನುವುದು ಸ್ಪಷ್ಟವಾಯ್ತು.

ಐವತ್ತಕ್ಕೂ ಹೆಚ್ಚು ವರ್ಷಗಳಿಂದ ಜಲಬಂಧೀಖಾನೆಯಲ್ಲಿ, ಅದೂ ಮೂಲತಃ ಮಲೆನಾಡಿನವೇ ಆದ ಕುದುರುಗಳಲ್ಲಿ ಏನೇನೋ ಜೀವವೈವಿಧ್ಯದ ನಿರೀಕ್ಷೆಯಲ್ಲಿದ್ದ ನನಗೆ ಬಹಳ ನಿರಾಶೆಯಾಯ್ತು. ಅಬೇಧ್ಯ ಮರಬಳ್ಳಿಗಳ ಕೋಟೆ ನುಗ್ಗುವ ನಮ್ಮ ಹುಮ್ಮಸ್ಸಿಗೆ ಅಸಂಖ್ಯ ಜೇಡರ ಬಲೆಗಳಷ್ಟೇ ಹರಿದವು. ಮಳೆಗಾಲಕ್ಕೂ ಮೊದಲಿನ ಕೆಲವು ಸೆಗಣಿ ಗುಡ್ಡೆ (ಕಾಟಿಯದ್ದಿರಬೇಕು), ಇದ್ದಂತೇ ಬೆರಣಿಯಾಗಿದ್ದದ್ದೂ ಆಶಾಜನಕವಾಗಿರಲಿಲ್ಲ. ಹುಲ್ಲು ಬಿಡಿ, ಸಹಜ ಪೊದರು ಕುರುಚಲುಗಳಿಗೂ ಅವಕಾಶ ಉಳಿಸದ ಅಕೇಸಿಯಾ ವನಗಳಲ್ಲಿ ಮೇಯುವ ಪ್ರಾಣಿಗಳಿಗೆಲ್ಲಿ ಬಂದೀತು ಆಕರ್ಷಣೆ. ಮತ್ತವು ಸಂಚರಿಸದಲ್ಲಿ ಸುಳಿದಾವೇ ಮಾಂಸಾಹಾರಿಗಳು? ಈ ಪ್ರಾಕೃತಿಕ ತಕ್ಕಡಿಯ ಏರುಪೇರಾದ ತಾಣಗಳಲ್ಲಿ ಜೀವ ವೈವಿಧ್ಯವನ್ನು ಹುಡುಕಿದ್ದು ನಮ್ಮ ತಪ್ಪು. ದ್ವೀಪದ ಒಳಗೊಂದೆಡೆ ಉದ್ದಕ್ಕೆ ಅಗಳು ತೋಡಿದಂತಿತ್ತು. ಅದು ಅಣೆಕಟ್ಟು ಪೂರ್ವದಲ್ಲಿ, ನೆಲದ ಯಾರೋ ಇಬ್ಬರ ನಡುವಣ ಹಕ್ಕಿನ ರೇಖೆಯೇ ಇದ್ದಿರಬಹುದು. ಅದರ ಹಿಂದೆ “ನೆಲ ನಮ್ಮದು” ಎಂದು ಅದೆಷ್ಟು ತಲೆಮಾರು ಏನೇನು ಸರ್ಕಸ್ ಮಾಡಿರಬಹುದು ಎಂಬ ವಿಚಾರ ಹೊಳೆದಾಗ ಸಣ್ಣ ವಿಷಾದದ ನಗೆ ಬಾರದಿರಲಿಲ್ಲ. ಅದ್ಭುತಗಳನ್ನು ಕಾಣುವ ಯೋಚನೆ ಬೇಗನೆ ಕಳಚಿಕೊಂಡು, ಎಲ್ಲರಿದ್ದಲ್ಲಿಗೇ ಮರಳಿ, ನಾವೂ ಒಂದಷ್ಟು ತೇಲಂಗಿ ಬಲದ ಶರಾವತೀಶಯನರಾಗಿ ಪುನಶ್ಚೇತನರಾದೆವು.

ನಾಗರಿಕ ರೂಢಿಗಳಲ್ಲಿ ಸಣ್ಣ ಮಳೆಗೂ ಸಾಮಾನ್ಯರು ತಲೆ ಒದ್ದೆಯಾಗದಂತಿರಲು ಹೆಣಗುತ್ತಾರೆ, ಭ್ರಮೆ ಮುಂದುವರಿದಂತೆ, ಶೀತ ಜ್ವರಗಳಲ್ಲೂ ಒದ್ದಾಡುತ್ತಾರೆ. ಒಣ ಬದಲೀ ಬಟ್ಟೆ ಇಟ್ಟುಕೊಳ್ಳದೇ ಈಜುಕೊಳ, ನದಿ, ಸಮುದ್ರಸ್ನಾನಗಳಿಗೆ ಇಳಿಯುವ ಪ್ರಶ್ನೆಯೇ ಇಲ್ಲ. ಆದರೆ ಈ ಸಾಹಸಯಾನದಲ್ಲಿ ಆಶ್ಚರ್ಯಕರವಾಗಿ ನಾವೆಲ್ಲ ನೀರಿನೊಡನೆ ಒಂದಾಗಿ ಹೋಗಿದ್ದೆವು. ಯಾನಾರಂಭದಲ್ಲಿ ತೊಡೆಮಟ್ಟದ ನೀರಿಗಿಳಿದೇ ಡಿಂಘಿ ಏರಿದ್ದೆವು. ಹಾಗೆ ಒದ್ದೆಯಾದ ನಮ್ಮ ಕನಿಷ್ಠ ಉಡುಪು, ಮುಂದೆಯೂ ಹುಟ್ಟುಗಾರಿಕೆಯಲ್ಲಿ ಸಿಡಿದ ನೀರಿನಿಂದ, ಬೇರೆ ಬೇರೆ ನೆಪಗಳಲ್ಲಿ ಕುದ್ರುಗಳಿಗಿಳಿದು ಹತ್ತುವಲ್ಲೆಲ್ಲ ಮತ್ತೆ ಮತ್ತೆ ತೊಯ್ಯುತ್ತಲೇ ಇತ್ತು. ಇನ್ನೊಂದು ಮುಖದಲ್ಲಿ ಶ್ರಮ ಬಿಸಿಲಿನ ಪರಿಣಾಮದಲ್ಲಿ ಧಾರಾಳ ಬೆವರುಪ್ಪು ಬೆರೆತು ಒಣಗುತ್ತಲೂ ಇತ್ತು. ಇಲ್ಲೆಲ್ಲ ತಲೆ ಮೈ ಒರೆಸಿಕೊಳ್ಳಲೊಂದು ಬಟ್ಟೆ ತುಂಡು ಬಳಸಿದ್ದಿಲ್ಲ, ಒಣ ಬಟ್ಟೆಗೆ ಬದಲಲಂತು ಅವಕಾಶವೇ ಇರಲಿಲ್ಲ. ಅದನ್ನೇ ಅಪರಾಹ್ನದ ಈಜು ಮುಗಿದ ಮೇಲೂ ಮುಂದುವರಿಸಿ, ಕೇವಲ ಸೂರ್ಯಸ್ನಾನ ಮಾಡಿದ್ದೆವು! ಅಷ್ಟೇಕೆ, ನಾನಂತೂ ಎರಡು ದಿನ ಕಳೆದು, ಕಾರೇರಿ ಮಂಗಳೂರ ಮನೆ ಸೇರುವವರೆಗೂ ಅಧಿಕೃತ ಸ್ನಾನ, ಬದಲಿ ಬಟ್ಟೆಯ ಯೋಚನೆಯನ್ನೇ ಮಾಡಲಿಲ್ಲ.

ಊಟ ವಿಶ್ರಾಂತಿ ಹೆಚ್ಚಾಯ್ತೆಂದು ಮೋಡಗಳ ಸಂಚಲನ ನಮಗೆ ಎಚ್ಚರಿಕೆ ಕೊಟ್ಟಿತ್ತು. ಮಳೆಯ ಹೊಸದೇ ಸೂಚನೆ ಸಿಗುತ್ತಿದ್ದಂತೆ, ಎಲ್ಲರೂ ಚುರುಕಾದೆವು. ನಮ್ಮ ಭೇಟಿಯ ಯಾವುದೇ ಕುರುಹುಗಳನ್ನು ದ್ವೀಪದಲ್ಲಿ ಉಳಿಸದೆ, ದೋಣಿ ಏರಿ ಹುಟ್ಟು ಬೀಸ ತೊಡಗಿದೆವು. ಮಧ್ಯಾಹ್ನದ ಚೇತರಿಕೆಯಲ್ಲಿ, ವರ್ತಮಾನದ ಬಹಳ ದೊಡ್ಡ ಗೀಳೇ ಆಗಿರುವ ಎಲ್ಲರ ಕ್ಯಾಮರಾ/ಚರವಾಣಿಗಳು ಹೊರಬಂದು ಚಿಗುರಿದ್ದವು. ಅವೆಲ್ಲ ಮೊದಲ ದಿನದ ಹರಿಗೋಲು ಪ್ರಕರಣದೊಡಣೆ ‘ಜಲಗಂಡ’ದ ಚಳಿ ಹಿಡಿದು, ಬಹುತೇಕ ಜಲಬಂಧ ಆವರಣದೊಡನೆ ಚೀಲಗಳ ಗರ್ಭ ಸೇರಿದ್ದವು. (ಒಂದೋ ಎರಡೋ ಜಲನೀರೋಧೀ ಸಲಕರಣೆಗಳೂ ಗೋಪ್ರೋಗಳೂ ಇದ್ದವು; ಸ್ಮಾರ್ಟ್ ಕಿಡ್ಡುಗಳು!) ನಾವಂತೂ ಮೊದಲ ದಿನದ ತೇಲಂಗಿ ಅಭ್ಯಾಸಕ್ಕೂ ಮೊದಲೇ ಚರವಾಣಿಯನ್ನು ಆರಿಸಿ, ಚೀಲದೊಳಗಿಟ್ಟಿದ್ದೆವು. (ಹಾಗಾಗಿಯೇ ಹರಿಗೋಲು ಪ್ರಯೋಗದ ಒಂದೂ ಚಿತ್ರ ನನ್ನ ಸಂಗ್ರಹದಲ್ಲಿಲ್ಲ.) ಇಲ್ಲಿ ಚರವಾಣಿ ಮಹಾತ್ಮ್ಯೆ ಕುರಿತು ನಾಲ್ಕು ಮಾತು. ಶರಾವತಿ ಸಾಗರದ ವಲಯದಲ್ಲೆಲ್ಲ ‘ನೆಟ್ ವರ್ಕ್’ ಏನೋ ಬಹಳ ಸ್ವಸ್ಥವಿದ್ದಂತಿದೆ. ಆಗಸದ ಪ್ರಸನ್ನವದನ ನೋಡಿ, ಸಲಕರಣೆಗಳು ಹೊರ ಬಂದದ್ದೇನೋ ಸರಿ. ಹಾಗೆಂದು ಹುಟ್ಟು ಹಾಕುವ ಸಮಯದಲ್ಲಿ, ಕಾಲ್, ಚಾಟ್, ಅಪ್ಲೋಡ್…. ಎಂದೆಲ್ಲ ಕಳೆದುಹೋಗಿ, ಇತರರಿಗೆ ಹೊರೆಯಾಗದಂತೆ ‘ಸ್ವಾಮಿ ಮೇಷ್ಟ್ರು’ ಖಡಕ್ಕಾಗಿರುತ್ತಿದ್ದರು. ಅಪರೂಪದ ಚಿತ್ರಗಳನ್ನು ಚುರುಕಾಗಿ ಸೆರೆ ಹಿಡಿಯುವ ಮಟ್ಟಿಗೆ ರಿಯಾಯ್ತಿ ತೋರಿಸುತ್ತಿದ್ದರು.

ಸ್ವಾಮಿ ದಂಪತಿಗೆ ನೆಟ್‍ವರ್ಕಿಂಗ್ ಚಪಲಗಳೇನೂ ಇಲ್ಲ. ಆದರೆ ಯಾವುದೇ ನಾಗರಿಕ ಸಂಪರ್ಕ ಮತ್ತು ಕೆಲಸಗಳೆಲ್ಲ ನಡೆಸಲು ಚರವಾಣಿ ಅನಿವಾರ್ಯ ಎಂದಾದ್ದರಿಂದ ಬಿಡುವಂತೆಯೂ ಇಲ್ಲ. ನಮಗೇ ಕಂಡ ಸಣ್ಣ ಉದಾಹರಣೆ ನೋಡಿ. ಹೊನ್ನೆಮರಡು ಮನೆಯ ಹಿತ್ತಲ ಜಗಲಿಯಲ್ಲಿ ಏನೋ ಗಾರೆ ಕೆಲಸ ನಡೆದಿತ್ತು. ಅದಕ್ಕೆ ಕೆಲಸಗಾರರನ್ನು ಕರೆಸುವಲ್ಲಿ, ಯಾನದಲ್ಲಿದ್ದಾಗ ಅವರಿಗೆ ನಿರ್ದೇಶನ ಕೊಡುವಲ್ಲಿ ಚರವಾಣಿ ಇಲ್ಲದೇ ಸುಧಾರಿಸುವುದೆಂತು. ಮತ್ತೆ ಎಲ್ಲೆಲ್ಲಿಂದಲೋ ಇವರ ಕಲಾಪಗಳನ್ನು ಬಯಸಿದವರಿಗೆ, ಏಕೈಕ ಸುಲಭ ಸಂಪರ್ಕವೂ ಚರವಾಣಿಯೇ. ಇಲ್ಲೊಂದು ತಮಾಷೆ ನಾನು ದಾಖಲಿಸಲೇಬೇಕು: ಬಹುಶಃ ನಮ್ಮ ಬುತ್ತಿಭಾಗ್ಯಕ್ಕೆಂದೇ ಇವರು ಪರಿಚಿತರಲ್ಲಿ, ಹೋಳಿಗೆ ಕಟ್ಟಿಸಿಕೊಂಡು ಬರಲು ಹೇಳಿದ್ದರು. ಅವರು ನಾವಿತ್ತ ಹೊರಟ ಮೇಲೆ, ಮನೆಗೆ ಬಂದಿದ್ದರಂತೆ. ಅಲ್ಲಿದ್ದ ಕೆಲಸಗಾರರಿಂದ ಸುದ್ದಿ ಕೇಳಿ, ಹೋಳಿಗೆ ಕಟ್ಟನ್ನು ಕಿಟಕಿಯಿಂದ ಅಡುಗೆ ಕೋಣೆಯೊಳಗೆ ಹಾಕಿ, ಇವರಿಗೆ ಕರೆ ಮಾಡಿ ತಿಳಿಸಿದರು. ಸೌಜನ್ಯಕ್ಕೆ ಸ್ವಾಮಿ “ಸರಿ ಸರಿ” ಎಂದೇನೋ ಹೇಳಿ ಸಂಪರ್ಕ ಮುಗಿಸಿದರು. ಅನಂತರ ಸಣ್ಣ ನಗೆ ಬೆರೆಸಿ “ರಾತ್ರಿ ಹೆಗ್ಗಣಗಳು ಉಳಿಸುವುದಿಲ್ಲ, ಬಿಡಿ” ಎಂದು ನಮ್ಮಲ್ಲಿ ಹೇಳಿಕೊಂಡಾಗ, ಅಳುವುದೋ ನಗುವುದೋ ನೀವೇ ಹೇಳಿ!

‘ನೀರಾಟ’ದಲ್ಲಿ ಸ್ವಾಮಿದಂಪತಿ ಕಳೆದುಕೊಂಡ ಚರವಾಣಿ ಸಲಕರಣೆಗಳಿಗೆ ಲೆಕ್ಕವೇ ಇಲ್ಲವಂತೆ! “ಅದಕ್ಕೂ ಮೀರಿದ ಸಂಕಟಾಂದ್ರೆ, ಮುಳುಗೋದ್ರ ಜತೆಗೇ ನಮ್ಮೆಲ್ಲ ಸಂಪರ್ಕ ವಿಳಾಸಗಳೂ ನೀರಹೋಮವಾಗಿ, ಸೊನ್ನೆಯಿಂದ ತೊಡಗಬೇಕಾಗುತ್ತಿತ್ತು ಮತ್ತೆ ಯಾರ್ಯಾರಿಂದಲೋ ‘ಅಲ್ ಸೇವ್ ಮಾಡಿ, ಇಲ್ ಡುಪ್ಲಿಕೇಟ್ ಮಾಡಿ…’ ಎಂದೆಲ್ಲ ಪಾಠ ಹೇಳಿಸ್ಕೋಬೇಕಾಗ್ತಿತ್ತು” ಎಂದೊಮ್ಮೆ ನಕ್ಕಿದ್ದರು. ಅಂದು ಅಪರಾಹ್ನದ ಪಯಣದಲ್ಲಿ ನೀರ ಹರಹು ಹೆಚ್ಚಿ, ಜಾಡರಸುವಿಕೆಯಲ್ಲಿ ಸ್ವಾಮಿದಂಪತಿಗೆ ತುಸು ಗೊಂದಲವಾದಾಗ ಮಾತ್ರ, ಚರವಾಣಿ ತೆಗೆದು ಗೂಗಲಣ್ಣನ ಸಹಾಯ ಪಡೆದಿದ್ದರು.

ಸಂಜೆಯಾಗುತ್ತಿದ್ದಂತೆ ಮಳೆಯ ಸೂಚನೆ ದಟ್ಟವಾಗುವುದರೊಡನೆ, ಹಗುರಕ್ಕೆ ಎದುರು ಗಾಳಿ, ಸಾಗರದ ಅಲೆಯೊಲೆತ ಮತ್ತೆ ಶುರುವಾಗಿತ್ತು. ಸಹಜವಾಗಿ ನಾವು ಬೇಗನೆ ದ್ವೀಪ ಸೇರಿ ಶಿಬಿರ ಹೂಡುವ ಅಂದಾಜು ಮಾಡಿದೆವು. ಆ ವಲಯದಲ್ಲಿ ಸ್ವಾಮಿದಂಪತಿ ಹಿಂದೆ ಶಿಬಿರಯೋಗ್ಯವಾಗಿ ಕಂಡುಕೊಂಡಿದ್ದ ಮತ್ತು ಬಳಸಿದ್ದ ಒಂದೆರಡು ದ್ವೀಪಗಳು ಜಲಸ್ತಂಭನದಲ್ಲಿದ್ದವು. ಹಾಗಾಗಿ ಹೊಸದೊಂದು ದ್ವೀಪ ಸಿಕ್ಕಾಗ, ಮೊದಲು ಸ್ವಾಮಿ ದಂಪತಿಯಷ್ಟೇ ದೋಣಿಯಿಳಿದಿದ್ದರು. ದ್ವೀಪದ ಒಳಗೆ ಸ್ವಲ್ಪ ತಿರುಗಾಡಿ ಬಂದಾಗಲೂ ಪೂರ್ಣ ಹಿಡಿಸದ್ದಕ್ಕೆ, ನಮ್ಮಲ್ಲಿಬ್ಬರನ್ನು ಮರುಪರಿಶೀಲನೆಗೆ ಬಿಟ್ಟರು. ಅವರು ಅದನ್ನೇ ಅನುಮೋದಿಸಿದ ಮೇಲೆ ನಮ್ಮ ಪಯಣಕ್ಕೆ (ದೋಣಿಗಿಲ್ಲದ) ಲಂಗರು ಹಾಕಿದೆವು.

ಸಂಜೆ ಬೆಳಕಿನಲ್ಲೂ ಪೊದರು ಮುಚ್ಚಿದಂತಿದ್ದರೂ ಅಲ್ಲಿ ಅದೇನೋ ಸವಕಲು ಜಾಡಿತ್ತು. ಅದನ್ನು ಅನುಸರಿಸಿ, ಕುರುಚಲು ಕಾಡಿನ ಎಡೆಯಲ್ಲಿ ಎಡಕ್ಕೊಮ್ಮೆ ಬಲಕ್ಕೊಮ್ಮೆ ತಿರುವು ತೆಗೆದು, ಉಕ್ಕಿನ ಮುಳ್ಳುಗಳನ್ನೆ ಹೊಂದಿದ ತೋಳುಗಾತ್ರದ ಬಳ್ಳಿ ಹೊಸ್ತಿಲನ್ನು ದಾಟಿದಲ್ಲಿ, ಅಪ್ಪಟ ಮಲೆನಾಡಿನ ದಟ್ಟ ಮೇಲ್ಮುಚ್ಚಿಗೆಯ ‘ಕಾಡಿನಮನೆ’ಯನ್ನೇ ಸೇರಿದಂತಾಗಿತ್ತು. ಕುರುಚಲು ಕಡ್ಡಿಯೂ ಮೊಳೆಯದಷ್ಟು ನೆರಳು. ಅಲ್ಲಿನೆರಡು ತಟ್ಟುಗಳಲ್ಲಿ ಸಾಕಷ್ಟು ದಪ್ಪಕ್ಕೆ ಬಿದ್ದಿದ್ದ ಕಡ್ಡಿ, ಎಲೆಗಳನ್ನು ಆಚೀಚೆ ನೂಕಿ, ಹಗುರಕ್ಕೆ ಗುಡಿಸಿ ನಮ್ಮ ನೆಲೆ ಸ್ಪಷ್ಟ ಮಾಡಿಕೊಂಡೆವು. ಮತ್ತೆ ದೋಣಿಗಳನ್ನು ಅರ್ಧ ನೆಲದ ಮೇಲಕ್ಕೆಳೆದು, ಗಟ್ಟಿ ಆಧಾರಕ್ಕೆ ಕಟ್ಟಿ, ಗಂಟುಗದಡಿಯನ್ನು ಕ್ರಮವಾಗಿ ವರ್ಗಾಯಿಸಿದೆವು. ಕಾಡ ಕಲ್ಲಿನ ಒಲೆಮಾಡಿ, ಉದುರು ಸೌದೆ ಒಟ್ಟಿ ಕಿಚ್ಚಿಕ್ಕಿ, ಅಡುಗೆ ಸಾಹಿತ್ಯ ಪ್ರಾಯೋಗಿಕ ರೂಪಪಡೆಯತೊಡಗಿತು. ಇತ್ತ ನಿರಪಾಯ ಅಂತರದಲ್ಲಿ ಶಿಬಿರಾಗ್ನಿ, ಗುಡಾರ ಎಂದೆಲ್ಲ ಶಿಬಿರ ಅರಳುತ್ತಿದ್ದಂತೆ, ದಿನದಾಟ ಮುಗಿಸಿದ ದಿನಕರ ಪೂರ್ಣ ತೆರೆ ಎಳೆದ.

ಶಿಬಿರತಾಣದ ಒಂದು ತೀರಾ ಅನಪೇಕ್ಷಿತ ಅವಲಕ್ಷಣವನ್ನೂ ನಾನಿಲ್ಲಿ ಹೇಳಬೇಕಾಗಿದೆ. ಅಲ್ಲಿ ಬಹುಶಃ ಕೆಲವು ತಿಂಗಳುಗಳ ಹಿಂದಷ್ಟೇ ಯಾರೋ ಭಾರೀ ಮರವೊಂದನ್ನು, ಯಂತ್ರ ಗರಗಸ ಬಳಸಿ ಬುಡದಿಂದ ಬೀಳಿಸಿದ್ದರು. ಅದರ ದಪ್ಪ ಕಾಂಡದ ತೊಗಟೆ ಸೇರಿದಂತೆ ಅನಾವಶ್ಯಕ ಓರೆಗಳನ್ನಷ್ಟು ಕಳೆದು, ಚೊಕ್ಕ ದಿಮ್ಮಿಯನ್ನು ಮಾತ್ರ ಸಾಗಿಸಿದ್ದರ ಅವಶೇಷಗಳೆಲ್ಲ ಸುತ್ತ ಬಿದ್ದಿದ್ದವು. ನಮಗೆ ದೋಣಿ ಇಳಿದಾಗ ಸಿಕ್ಕ ಸವಕಲು ಜಾಡಿನ ರಹಸ್ಯವಾದರೂ ಈ ಕಳ್ಳನಾಟಾ ಸಾಗಣೆಯದ್ದೇ ಇರಬೇಕು. ಅಣೆಕಟ್ಟಿನ ನೆಪದಲ್ಲಿ ಅಧಿಕೃತವಾಗಿ ಕಡಿದ, ಮುಳುಗಡೆಯ ಸಂಕಟದಲ್ಲಿ ಸತ್ತ ಲಕ್ಷಾಂತರ ಮರಗಳು ಸಾಲದೆಂಬಂತೆ ಕಳ್ಳತನದಲ್ಲೂ ಒಳ್ಳೊಳ್ಳೆ ಮರಗಳು ಹೀಗೆ ಹೋದರೆ, ನಾಳೆ ‘ಹಸುರುಳಿಸಿ’ ಬೋರ್ಡು ನಿಲ್ಲಿಸಲೂ ಗೂಟ ಸಿಗಲಾರದು!

ಮೊಂಬತ್ತಿ, ಸಣ್ಣದಾಗಿ ಎಬ್ಬಿಸಿದ ಶಿಬಿರಾಗ್ನಿ ಹಾಗೂ ವೈವಿಧ್ಯಮಯ ಟಾರ್ಚ್ಗಳು ನಮ್ಮೆಲ್ಲ ಚಟುವಟಿಕೆಗಳನ್ನು ಸಾಕಷ್ಟು ಬೆಳಗಿದ್ದವು. ಆದರೆ ಮುಗುಳುನಗೆಯ ಷಷ್ಟಿ ಚಂದ್ರ ಎಲೆ ಮುಚ್ಚಿಗೆಗಳ ಸಂದಿನಿಂದ ಇಣುಕಿದಷ್ಟಕ್ಕೆ ಇಡಿಯ ಜಗವೇ ಬೆಳಗಿತ್ತು. ನಗರಗಳ ಬೆಳಕಿನ ಹುಚ್ಚುಹೊಳೆಗೆ ಕಡಲತಡಿಯ ಕೊಡಲಿ ಗೊರವರೊಡನೆ) ಮುಂದೆ, ಶಿಬಿರಾಗ್ನಿ ಸುತ್ತ ಎಲ್ಲ ಹರಡಿ ಕುಳಿತು ಸವಿದ ಬಿಸಿಬಿಸಿ ಅನ್ನ ಸಾಂಬಾರ್ಗಂತೂ ಅಪೂರ್ವ ಕಂಪೂ ರುಚಿಯೂ ಬಂದಿತ್ತು. ಎರಡು ದೊಡ್ಡ ಗುಡಾರಗಳಿಗೆ ತಲಾ ನಾಲ್ವರು, ಸಣ್ಣದಕ್ಕೆ ಇಬ್ಬರು, ಉಳಿದಂತೆ ಅಡುಗೆ ಕಟ್ಟೆಯ ಸುತ್ತ ಮುತ್ತ ಸಿಲ್ಪಾಲಿನ್ ಶೀಟ್ ಮತ್ತು ಫೋಮ್ ಹಾಳೆಗಳ ಮೇಲೆ ಉಳಿದವರು ಮೈಚಾಚಿದ್ದಷ್ಟೇ ಗೊತ್ತು. ಉರಿಬಿಸಿಲಿನಲ್ಲಿ ಸುಟ್ಟ ಮೈಗಳಿಗಿಲ್ಲಿ ತಣ್ಪು ಸಿಕ್ಕಿತ್ತು – ಚಳಿ ಕಾಡಲಿಲ್ಲ. ಬಳಲಿದ್ದ ಮೈಗೆ ಸುಪ್ಪತ್ತಿಗೆ ಒದಗಿತ್ತು – ಕಲ್ಲು ಕೋಲು ಒತ್ತಲಿಲ್ಲ. ನಿಶಿಯುದ್ದಕ್ಕೆ ಶರಧಿ ಶರಾವತಿಯ ಅಲೆಯೊಲೆತವಿಲ್ಲಿ ಜೋಗುಳ – ಉಬ್ಬೆಗದ ತಳಮಳವಲ್ಲ. ಹಾಗೆ ಮುಚ್ಚಿಗೆಯ ಕಂಡಿಗಳಲ್ಲಿ ಇಣುಕುವ ಚುಕ್ಕಿಗಳ ಬೆಳಕಿನೋಣಿಯಲ್ಲಿ ತೇಲುತ್ತ ಸೇರಿದ ನಿದ್ರಾಲೋಕ ಅನಂತವೇ ಎನ್ನುವಂತಿತ್ತು.

ಹೊಂದಿದ ಮನಸ್ಸುಗಳಿಗೆ, ಕಿರಿದರೊಳೂ ‘ರಾತ್ರಿ ಬೆಳಗುವ ಚಂದಿರ’ ಹಿರಿದಾಗಿ, ಹೊಸದಾಗಿ ತುಂಬಿಕೊಂಡ. ದೋಣಿ ಚಲಾಯಿಸಿದಂತೆ, ಶಿಬಿರ ಅರಳಿಸಿದಂತೆ, ಅಡುಗೆಯೂ ‘ನೀವೆ ಮಾಡಿ, ಅನುಭವಿಸಿ’ಯ ಕಲಾಪ ಎನ್ನುವುದನ್ನು ಯಾರೂ ಮರೆಯಲಿಲ್ಲ. ಮೂಲದಲ್ಲಿ ಪಾಕಪಟ್ಟಿಯ ಅಂದಾಜು ಮಾಡಿ, ಯುಕ್ತ ಮಾನಕದಲ್ಲಿ ದಿನಸಿ ಸಂಗ್ರಹಿಸಿ ತಂದ ಸ್ವಾಮಿದಂಪತಿ, ಧಾರಾಳ ಸಲಹೆ, ಸಹಾಯಕ್ಕೆ ಮುಕ್ತರಿದ್ದಂತೆ ನಿಜ ಪಾಕಪ್ರಯೋಗಕ್ಕೆ ಹುಡುಗರನ್ನೇ ಇಳಿಸಿದರು. ಮೊದಲು ಬಿಸಿಬಿಸಿ ಚಾ, ಕಟ್ಟಿ ತಂದ ‘ಡೋಕುಳಬೆ’, ಅಲ್ಲಲ್ಲ ಕೋಡುಬಳೆ. (ಡೋಕುಳಬೆ – ನನಗೆ ತಂದೆಯಿಂದ ಪರಿಚಯವಾದ ‘ಟೋಮುಲಾಕು ಟಾಕುಯಾನಿ….’ ಅರ್ಥಾತ್ ‘ಮೋಟುಕಾಲು ಕಾಟುನಾಯಿ….’ ಎಂಬ ಗೂಢಭಾಷೆಯನ್ನು ಶಿಬಿರಕ್ಕೆ ಪರಿಚಯಿಸಿದ್ದರ ಫಲ! ಆ ಕುರಿತ ಹೆಚ್ಚಿನ ವಿವರಗಳಿಗೆ ನನ್ನ ಜಾಲತಾಣದಲ್ಲಿ ಮುಕ್ತವಾಗಿಯೇ ಇರುವ, ತಂದೆ – ಜಿಟಿ ನಾರಾಯಣ ರಾವ್ ಆತ್ಮಕತೆ – ಮುಗಿಯದ ಪಯಣದ ಅಧ್ಯಾಯ – ಶರಾವತಿ ಸಾಗರದ ನಡುವಣ ಮುಂಜಾವಿಗೆ ಅವಸರವಿರಲಿಲ್ಲ. ಹಿಂದಿನ ರಾತ್ರಿಯಂತೇ ಹುಡುಗರು ಮಾಡಿದ ಚಾ ಎರಡೆರಡು ಪ್ರತಿ ಮಿಕ್ಕು ಶಿಬಿರ ಮುಚ್ಚುವವರೆಗೂ ಚಾಲನೆಯಲ್ಲಿತ್ತು. ಬಹು ತರಕಾರಿಯ ಉಪ್ಪಿಟ್ಟು (ರವಾಭಾತ್?) ರುಚಿಯಲ್ಲೂ ಮೊತ್ತದಲ್ಲೂ ಧಾರಾಳವೇ ಇತ್ತು. ಉಳಿದದ್ದನ್ನು ಮಧ್ಯಾಹ್ನಕ್ಕೆ ಕಟ್ಟಿಕೊಂಡೆವು. ಶಿಬಿರವನ್ನು ಬರಿದೇ “ಮುಚ್ಚಿದೆವು” ಎಂದು ಮುಗಿಸುವಂತಿಲ್ಲ. ಹೌದು, ಹಿಂದಿನ ಸಂಜೆ ಅಲ್ಲಿ ಕಾಲೂರಿದಲ್ಲಿಂದ, ಕಾಲು ಕೀಳುವವರೆಗಿನ ಕಡಿಮೆ ಮಾತಿನ, ಹೆಚ್ಚಿನರ್ಥದ ಪಾಠ ಯಾರೂ ಮನನ ಮಾಡಬೇಕಾದದ್ದೇ ಎನ್ನುವುದಕ್ಕೆ ಸಣ್ಣ ವಿವರಣೆ.

ಶಿಬಿರತಾಣ ನಿರ್ಧಾರವಾದದ್ದೇ ಬಯಲುಶೌಚಕ್ಕೆ ಸ್ಥಾನ ನಿರ್ಣಯವೂ ಆಯ್ತು – ಎಡ ಮಗ್ಗುಲು ಮಹಿಳೆಯರಿಗೆ, ಬಲ ಮಗ್ಗುಲು ಪುರುಷರಿಗೆ. ಶುದ್ಧೀಕರಣಕ್ಕೆ ನೀರು ಹೊತ್ತೊಯ್ದು ಬಳಸಬೇಕು. ಮಲದ ಮೇಲೆ ತರಗೆಲೆ ಎಳೆದು (ಬೇಗ ಮಣ್ಣಾಗುವಂತೆ), ತುಂಡುಗಲ್ಲು ಹೇರಿ (ತಡವಾಗಿ ಹೋದ ನಮ್ಮವರು ಮೆಟ್ಟದಂತೆ) ಬರವುದು ಅವಶ್ಯ. ಉಳಿದಂತೆಯೂ ನಮ್ಮ ಯಾವುದೇ ದೈಹಿಕ ಅಗತ್ಯಗಳಿಗೆ ನೀರನ್ನು ಮೂಲದಿಂದ (ಇಲ್ಲಿ ಶರಾವತಿ ಸಾಗರ) ಮೊಗೆದು, ನೆಲದಲ್ಲಿ ಬಳಸಿ. ಹೊಳೆಯಾಗಿ ಅದು ಊರೂರ ಕೊಚ್ಚೆಯನ್ನೆಲ್ಲ ತನ್ನ ತಬ್ಬಿನಲ್ಲಿ ಇಟ್ಟುಕೊಂಡಿರಬಹುದಾದರೂ ನಮ್ಮ ಬಳಕೆಯ ಕೇಂದ್ರದಲ್ಲಿ, ದುಷ್ಪ್ರಭಾವ ನಗಣ್ಯ ಎಂದೇ ಭಾವಿಸಬೇಕು. ಅಂಥಲ್ಲಿ ನಾವು ಸೋಪು, ಪೇಸ್ಟ್ ಅಥವಾ ಯಾವುದೇ ತೊಳೆಯುವ ಪ್ರಕ್ರಿಯೆಯನ್ನು ನೇರ ಮಾಡಿದರೆ, ಅದು ಸ್ಥಳೀಯವಾಗಿ ನಮಗೇ ಹೆಚ್ಚು ಹಾನಿಕರ ಎಂಬ ಎಚ್ಚರ ಬೆಳೆಸುವ ಪ್ರಕ್ರಿಯೆಯಿದು. ಮುಂದುವರಿದ ನೀತಿ ಸಂಹಿತೆಯಲ್ಲಿ ಕೊನೆಯದಾಗಿ ನಾವು ಬಳಸಿದ ಸೌದೆ ಮತ್ತು ನೆಲ. ರಾತ್ರಿ ಹಚ್ಚಿದ್ದ ಶಿಬಿರಾಗ್ನಿ ಎಷ್ಟೋ ಹೊತ್ತಿಗೆ ಕೊಟ್ಟಷ್ಟೂ ಕಡ್ಡಿಗಳನ್ನು ಸುಟ್ಟು, ತಣ್ಣಗಿನ ಪುಟ್ಟ ಬೂದಿರಾಶಿಯಾಗಿತ್ತು. ಶಿಬಿರದ ಕೊನೆಯ ಮಾತಿಗೆಂದು ನಾವದನ್ನು ಸುತ್ತುವರಿದು ನಿಂತಿದ್ದೆವು. ಬೂದಿಯನ್ನು ಸರಿಯಾಗಿ ಒಟ್ಟು ಮಾಡಿ, ಸಾಂಕೇತಿಕವಾಗಿ ಎಲ್ಲರೂ ಸ್ವಲ್ಪ ಸ್ವಲ್ಪ ನೀರು ಹಾಕಿದೆವು. ಅನಂತರ ನೊಮಿತೋ ತೊಯ್ದು ತೊಪ್ಪೆಯಾಗಿದ್ದ ಬೂದಿ, ಮಸಿ ರಾಶಿಯ ತಳದವರೆಗೂ ಕೈ ಹಾಕಿ ಕಲಸಿದರು. ಇದು ಪರೋಕ್ಷವಾಗಿ ಕಿಡಿಯ ಶೇಷವೂ ಉಳಿದಿಲ್ಲವೆಂದು ತಿಳಿಸುತ್ತದೆ. ಮುಂದುವರಿದು, ಆ ಬೂದಿ ಪಾಕವನ್ನು ಸರದಿಯಲ್ಲಿ (ನನ್ನೊಬ್ಬನ್ನುಳಿದು – ಕಾರಣ ಸಂಕೋಚ) ಎಲ್ಲರ ಮುಖಗಳಿಗೂ ಚೊಕ್ಕ ಬಳಿದರು. ಇದು ತೋರಿಕೆಗೆ ನಮ್ಮನ್ನು ನೀಗ್ರೋಗಳಂತೆ, ಅನಾಗರಿಕ ಅಲಂಕಾರಗಳ ಅಂಡಮಾನಿನ ಆದಿವಾಸಿಗಳಂತೆಲ್ಲ ಕಾಣಿಸಿದ್ದು ನಿಜ. ಆದರೆ ಇದು ಸೂರ್ಯತಾಪದ ವಿರುದ್ಧ, ಕಾಸು ಖರ್ಚಿಲ್ಲದ ಮತ್ತು ಬಜಾರ್ ರಾಸಾಯನಿಕಗಳ ಅಡ್ಡಪರಿಣಾಮಗಳಿಲ್ಲದ ರಕ್ಷಣಾ ಹೊದಿಕೆ ಎಂದು ತಿಳಿದಾಗ (ಆಧಾರ – ನೊಮಿತೋ), ಸಂಭ್ರಮಿಸಿದರು ಮತ್ತು ಪೂರ್ವಾಹ್ನದುದ್ದಕ್ಕೂ ತೊಳೆಯದೇ ಉಳಿಸಿಕೊಂಡರು.

ಕೊನೆಯಲ್ಲಿ ಅಡುಗೆ ಒಲೆಯ ಶೇಷವೂ ಸೇರಿದಂತೆ ಉಳಿದಷ್ಟೂ ಬೂದಿ, ತಳದ ತೆಳು ಮಣ್ಣು ಮತ್ತು ಅರೆ ಸುಟ್ಟ ಸೌದೆಗಳನ್ನು ಎಲ್ಲರೂ ಮುಷ್ಟಿಗಳಲ್ಲಿ ಬಾಚಿ ಬಾಚಿ ಸುತ್ತ ಮರ ಪೊದರುಗಳ ಬುಡಗಳಿಗೆ ಎರಚಿದೆವು. ಗುಡಾರಾದಿ ನಾವು ಬೀಡು ಬಿಟ್ಟ ಜಾಗದ ಅಂಚಿಗೆ ನೂಕಿ ಇಟ್ಟಿದ್ದ ತರಗೆಲೆ ಕಸಗಳನ್ನು, ಮತ್ತೆ ತೆಳುವಾಗಿ ಹರಡಿ, ಒಟ್ಟಾರೆ ಮನುಷ್ಯ ಚಟುವಟಿಕೆಯ ಕುರುಹುಗಳನ್ನೂ ಅಳಿಸಿದೆವು. ಇಳಿಸಿದಷ್ಟೇ ವ್ಯವಸ್ಥಿತವಾಗಿ ನಮ್ಮೆಲ್ಲ ಸಾಮಾನುಗಳನ್ನು ದೋಣಿಗಳಿಗೆ ಮರು ತುಂಬಿದೆವು. ಆ ಬೆಳಿಗ್ಗೆ ಬಹುತೇಕ ಸ್ತಬ್ಧವಾದ ನೀರ ಹಾಸಿನ ಮೇಲೆ, ನಮ್ಮದೇ ಅಲೆತರಂಗಗಳನ್ನೆಬ್ಬಿಸುತ್ತ, ನೆನಪಾದ ಎಲ್ಲ ದೋಣಿಗೀತೆಗಳನ್ನು ಗುನುಗುತ್ತ ಯಾನ ಮುಂದುವರಿಸಿದೆವು.

ಹೊನ್ನೆ ಮರಡಿನ ದೋಣಿಗಟ್ಟೆಯಲ್ಲಿ ನಿರಂತರ ಮನುಷ್ಯ ಚಟುವಟಿಕೆಗಳಿದ್ದದ್ದೇ. ಇದು ಸ್ವಲ್ಪ ಮಟ್ಟಿಗೆ ದಂಡೆಯ ಮಣ್ಣನ್ನು ಮತ್ತೆ ಮತ್ತೆ ನೀರಿಗಿಳಿಸುತ್ತಿದ್ದುದರಿಂದ ಅಲ್ಲಿ ಹತ್ತಿಪ್ಪತ್ತಡಿ ವ್ಯಾಪ್ತಿಯಲ್ಲಿ ಶರಾವತಿ ಸಾಗರ ತುಸು ಕಲಂಕಾಗಿತ್ತು. ಉಳಿದಂತೆ ನಾವು ತಂಗಿದ ಕುದ್ರುಗಳ ದಂಡೆಗಳೆಲ್ಲ ಬಹುತೇಕ ಚೊಕ್ಕ ತೊಳೆದಿಟ್ಟ ಕಲ್ಲು ಅಥವಾ ಮರಳೇ ಇದ್ದು ನೀರು ಪಾರದರ್ಶಕವಾಗಿತ್ತು. ಹಾಗೇ ಹುಟ್ಟು ಹಾಕಿದ ವಿಸ್ತಾರದಲ್ಲೂ ಶರಾವತಿ ಶುದ್ಧ ನೀಲವರ್ಣೆ. ಮಳೆಗಾಲದ ಮೊದಲ ಭಾಗಗಳಲ್ಲಿ ಕೊಚ್ಚಿ ಬಂದಿರಬಹುದಾದ ಮಣ್ಣು, ಕಸ ಕಡ್ಡಿಗಳೆಲ್ಲ ಈ ವೇಳೆಗೆ ಆಳಗಳಲ್ಲಿ ತಂಗಿದ್ದೇ ಕಾರಣವಿರಬೇಕು. ಆದರೂ ತೀರಾ ಅಪರೂಪವೆನ್ನುವಂತೆ ಎಲ್ಲೋ ಎರಡು ಕಡೆ, ಪರ್ಲ್ಪೆಟ್ ಬಾಟಲು ತೇಲಿ ತೋರಿದ್ದನ್ನು, ನಾವು ಹೆಕ್ಕಿ ದೋಣಿಗೇ ಹಾಕಿಕೊಂಡಿದ್ದೆವು. ಅದೇ ಉತ್ಸಾಹದಲ್ಲಿ ಇನ್ನೆಲ್ಲೋ ಒಂದು ಕಡೆ ತೇಲುತ್ತಿದ್ದ ಬೆಂಡನ್ನು (ಥರ್ಮಕೋಲ್ ತುಂಡು) ಗುರುತಿಸಿ ಹೆಕ್ಕಲು ನೋಡಿದಾಗ ತಿಳಿಯಿತು, ಅದು ಮುಳುಗಿದ್ದ ಬಲೆಯ ನಿಶಾನಿ! ಮುಂದೆಲ್ಲೋ ಒಂದು ಕುದುರಿನಲ್ಲಿ, ದೂರದಿಂದಲೇ ದೋಣಿ ಸಹಿತ ಬೀಡು ಬಿಟ್ಟ ಕೆಲವು ಬೆಸ್ತರನ್ನೂ ಕಂಡೆವು. ಅಂದರೆ ‘ಶರಾವತಿ ಕಣಿವೆ ವನಧಾಮ’ದೊಳಗೆ ಮೀನುಗಾರಿಕೆ ಅಧಿಕೃತವೇ? ಆ ನೆಪದಲ್ಲಿ ಕುದುರುಗಳಲ್ಲಿ ಬೆಸ್ತರು ಮೊಕ್ಕಾಂ ಮಾಡುವುದು ಸಿಂಧುವೇ? ನಮ್ಮ ಶಿಬಿರಸ್ಥಾನದ ಕುದುರಿನಲ್ಲಿ ಮರ ಕಡಿದು ಸಾಗಿಸುವಲ್ಲಿ ಇಂಥವರ ಕೈವಾಡಾವಿರಲಾರದೇ? (ಅಭಯಾರಣ್ಯದಲ್ಲಿ ಸಹಜವಾಗಿ ಬಿದ್ದ ಮರವನ್ನೂ ಕಡಿಯುವ, ಸಾಗಿಸುವ ಕ್ರಮವಿಲ್ಲ!)

ಚುರುಗುಟ್ಟುವ ಬಿಸಿಲು ಕಾಡಿದರೂ ನಿರಂತರ ಹುಟ್ಟುಗಾರಿಕೆಯಲ್ಲಿ, ನಾವು ಸಾಕಷ್ಟು ಬೇಗನೇ ಹಸಿರುಮಕ್ಕಿಯನ್ನು ಸಮೀಪಿಸಿದ ಲಕ್ಷಣಗಳನ್ನು ಕಂಡೆವು. ಹಿಂದಿನ ದಿನವೇ ಸ್ವಾಮಿ ಪರಿಚಯದ ಬಾಡಿಗೆ ಟೆಂಪೋ ಮತ್ತೆರಡು ಕಾರು ಚಾಲಕರಿಗೆ ಚರವಾಣಿಸಿ, ಮಧ್ಯಾಹ್ನ ಹಸಿರುಮಕ್ಕಿಯಲ್ಲಿ ನಮ್ಮ ದಾರಿ ಕಾದಿರಲು ವ್ಯವಸ್ಥೆ ಮಾಡಿದ್ದರು. ಬೆಂಗಳೂರು ತರುಣರು ವಾರ ಮೊದಲೇ ಹೊಸನಗರದಿಂದ ರಾತ್ರಿ ಬಸ್ ಸ್ಥಳ ಕಾಯ್ದಿರಿಸಿದವರು. ಹಾಗಾಗಿ ಅಪರಾಹ್ನದ ಹೆಚ್ಚುವರಿ ಸಮಯದಲ್ಲಿ, ಸ್ವಂತ ತಾಕತ್ತಿನಲ್ಲಿ, ಜೋಗ್ ನೋಡಿ, ಒಂದೆರಡು ಗಂಟೆ ಮೊದಲು ಹೊಸನಗರ ಸೇರುವ ಯೋಜನೆ ಹಾಕಿದ್ದರು. ಇನ್ನೊಂದು ಕಾರಿನಲ್ಲಿ ನಾವಾರು ಮಂದಿ, ಟೆಂಪೋದಲ್ಲಿ ಎರಡು ದೋಣಿ ನೇರ ಹೊನ್ನೆಮರಡು ಸೇರಿಕೊಳ್ಳುವುದೆಂದಾಗಿತ್ತು.

ಹಸಿರುಮಕ್ಕಿಯ ದೋಣಿಗಟ್ಟೆಯಲ್ಲಿ ಶರಾವತಿಗೆ ಸ್ಥಳೀಯ ಮಾಲಿನ್ಯ ಸೇರಿಕೊಳ್ಳುತ್ತದಂತೆ. ಹಾಗಾಗಿ ಹನ್ನೊಂದು ಗಂಟೆಯ ಸುಮಾರಿಗೇ ನಾವು ಅನತಿ ದೂರದ ಒಂದು ಕುದುರನ್ನು ವಿಹಾರ ಮತ್ತು ಊಟಕ್ಕೆ ಆಯ್ದುಕೊಂಡೆವು. ಅದು ಸಮೀಪಿಸುತ್ತಿದ್ದಂತೆ, ಒಂದೆರಡು ಉತ್ಸಾಹಿಗಳು ದೋಣಿ ಚಲಾವಣೆಗೆ ಇತರ ಜನ ಇದ್ದಂತೆ (ಅನುಮತಿ ಮೇರೆಗೆ) ನೀರಿಗೆ ಹಾರಿ ತೇಲಂಗಿ ಈಜಿನಲ್ಲೇ ದ್ವೀಪ ಸೇರಿದರು. ಸೊಂಟಮಟ್ಟದ ನೀರಿನಲ್ಲಿ ಮುಳುಗಿ ನಿಂತಿದ್ದ ಪೊದರುಗಳ ನೆರಳಲ್ಲಿ ದೋಣಿಗಳನ್ನು ಕಟ್ಟಿ, ಬಹುತೇಕ ಎಲ್ಲರೂ ನೀರಾಟಕ್ಕಿಳಿದೆವು. ನನಗೆ ತಿಳಿದಂತೆ ಡಾ| ಯಶಸ್ವೀ ಕಡಲೀಜಿನಲ್ಲೂ ಪಳಗಿದವರು. ಅವರಂತೆ ಇನ್ನೂ ಕೆಲವು ಒಳ್ಳೇ ಈಜುಗಾರರು ನಮ್ಮ ತಂಡದಲ್ಲಿದ್ದಿರಬಹುದು. ಆದರೆ ಗುಂಪಿನ ಶಿಸ್ತು ಭಂಗವಾಗದಂತೆ ಅವರೆಲ್ಲರೂ ತೇಲಂಗಿ ಭದ್ರವಾಗಿ ತೊಟ್ಟುಕೊಂಡಿದ್ದಂತೇ ಬಹುತರದಲ್ಲಿ ಮತ್ತು ಸಾಕಷ್ಟು ದೂರಕ್ಕೂ ಈಜಿ ಸುಖಿಸಿದರು. ಹಾಗೇ ಮುಖಕ್ಕೆ ಬಳಿದುಕೊಂಡ ‘ಅಲಂಕಾರ’ಗಳೆಲ್ಲವನ್ನೂ ಚೊಕ್ಕ ತೊಳೆದು, ‘ನಾಗರಿಕತೆ’ ಹೆದರದ ರೂಪವನ್ನೂ ತಾಳಿದೆವು!

ಈ ಹಿಂದೆ ದಕವಲಯದಲ್ಲಿ ನಾವಿಬ್ಬರು ನಮ್ಮದೇ ದೋಣಿಯಾನಗಳನ್ನು ಧಾರಾಳ ಮಾಡಿರುವುದು ನಿಮಗೆಲ್ಲ ತಿಳಿದದ್ದೇ. (ತಿಳಿಯದವರು ನನ್ನ ಜಾಲತಾಣದಜಲಸಾಹಸಗಳು’ ವಿಭಾಗ ನೋಡಬಹುದು) ಆದರೆ ಅಲ್ಲೆಲ್ಲ ಕಂಡ ಜಲಮಾಲಿನ್ಯದ ತೀವ್ರತೆಯಿಂದ, ಅವುಗಳ ಹನಿ ಮೈಮುಟ್ಟಿದರೂ ಡೆಟ್ಟಾಲ್ (ಡೆತ್ ಆಲ್?) ಸ್ನಾನ ಮಾಡಬೇಕೆನ್ನುವಷ್ಟು ಭಯ ಕಾಡುತ್ತಿತ್ತು. ಆದರಿಲ್ಲಿ ಡಾಗ್ ಪೆಡಲ್ ಪ್ರವೀಣನಾದ ನಾನು, ನನ್ನಷ್ಟೂ ಈಜು ಬಾರದ ದೇವಕಿ, ಮೊದಲ ಬಾರಿ ಎನ್ನುವಂತೆ ಸ್ವಸ್ಥ ನೀರಿನಲ್ಲಿ ಬೇಕಾದ ಆಟಗಳನ್ನು ಆಡಿ ಸಂತೋಷಿಸಿದೆವು. ಹೊತ್ತೇರಿದಂತೆ ದಂಡೆಯಲ್ಲಿ ಎಲ್ಲ ಒಟ್ಟಾಗಿ, ಉಳಿದಿದ್ದ ಸ್ವಲ್ಪ ಉಪ್ಪಿಟ್ಟು ಮತ್ತು ಹೊಸದಾಗಿ ತಂದಿದ್ದ ರುಚಿಕರ ಪುಳಿಯೋಗರೆ ಕಂಠಮಟ್ಟ ಮುಕ್ಕಿ ತೃಪ್ತರಾದೆವು. ಸಕಾಲದಲ್ಲಿ ಮತ್ತೆ ದೋಣಿಯೇರಿ ಹಸಿರುಮಕ್ಕಿಯ ಕಡವಿನ ಕಟ್ಟೆ ಸೇರಿದೆವು.

ಹಸಿರುಮಕ್ಕಿ ಕಡವಿನ ಬಗ್ಗೆ ನನ್ನ ನೀನಾಸಂ ಕಥನದಲ್ಲಿ ಬಂದಿರುವುದರಿಂದ ಇಲ್ಲಿ ಹೆಚ್ಚೇನೂ ಬರೆಯುತ್ತಿಲ್ಲ. ನಿಗದಿಯಂತೆ ಕಾದಿದ್ದ ವ್ಯಾನ್, ಕಾರುಗಳಿಗೆ ನಮ್ಮೆಲ್ಲ ಸೊತ್ತುಗಳನ್ನು ಹೇರಿದೆವು. ಮತ್ತೆ ಅಲ್ಲಿದ್ದ ಜೋಪಡಿ ಹೋಟೆಲಿನಲ್ಲಿ ಚಾ ಹಾಕಿ, ನಿಂತಂತೇ ಸಣ್ಣ ಸಮಾರೋಪ. ಸ್ವಾಮಿ ದಂಪತಿ ಕಲಾಪದ ಬಗ್ಗೆ ಎಲ್ಲರ ಅಭಿಪ್ರಾಯಗಳನ್ನು ಕೇಳಿ, ಭಾವುಕತೆಗೆ ಆಸ್ಪದವಿಲ್ಲದಂತೆ, ವಿದಾಯದ ಮಾತುಗಳನ್ನು ಆಡಿದರು. ಅನಂತರ ಏಳು ಮಂದಿಯ ಜೋಗದ ಕಾರು ಮುಂದೋಡಿತು. ಉಳಿದ ನಾವೇಳು ಮಂದಿ ಇನ್ನೊಂದು ಕಾರಿನಲ್ಲಿ, ಡಿಂಘಿ ಹೇರಿದ ವ್ಯಾನಿನ ಜತೆಗೆ, ಸಾಗರಕ್ಕಾಗಿ ಹೊನ್ನೆಮರಡಿಗೆ ಮರಳಿದೆವು. ಅಲ್ಲಿ ಚುರುಕಾಗಿಯೇ ಡಿಂಘಿ ಮತ್ತು ಶಿಬಿರ ಸಾಮಗ್ರಿಗಳನ್ನೆಲ್ಲ ಇಳಿಸಿ, ಒಳ ಸೇರಿಸಿ, ಅವಸರದಲ್ಲೂ ಆತಿಥ್ಯ ಮರೆಯದ ನೊಮಿತೋ ಕೊಟ್ಟ ವಿದಾಯದ ಚಾ ಹೀರಿದೆವು. ಮುಂದೆ ಬೆಂಗಳೂರ ಕಾರು ಸಾಗರದ ದಾರಿ ಹಿಡಿಯಿತು. ನಮ್ಮೂವರದು ಬಂದದ್ದೇ ದಾರಿ – ಕಾರ್ಗಲ್, ಭಟ್ಕಳಕ್ಕಾಗಿ ಮಂಗಳೂರು. ತೀರಾ ಸಣ್ಣದಾಗಿ ಕಾಡಿದ ಮಳೆಗೆ ಜಗ್ಗದೆ, ಮುಸುಕಿದ ಕತ್ತಲೆಗೆ ಸೋಲದೆ, ನಿದ್ರೆ ಮತ್ತು ಸುಸ್ತು ಚಾಲನೆಯ ಮೇಲೆ ಪರಿಣಾಮ ಬೀರದಂತೆ ಚಾಲನೆಯಲ್ಲಿ ನಾನೂ ಯಶಸ್ವೀಯೂ ಕೈ ಬದಲಾಯಿಸಿಕೊಳ್ಳುತ್ತ, ಸ್ವಸ್ಥವಾಗಿ ಅಪರಾತ್ರಿ ಒಂದೂವರೆ ಗಂಟೆಗೆ ಮನೆ ಸೇರಿಕೊಂಡೆವು.

ಹಸುರುಮಕ್ಕಿಯ ವಿದಾಯದ ಮಾತುಗಳಲ್ಲಿ ಎಲ್ಲರೂ ಔಪಚಾರಿಕ ಮೆಚ್ಚುಗೆಯನ್ನಷ್ಟೇ ಹೇಳಿದ್ದರು. ನಲ್ವತ್ತು ವರ್ಷಗಳ ಸ್ವಾಮಿದಂಪತಿಯ ಸಾಹಸೀ ಜೀವನ, ಸಾಧನೆ ಮತ್ತು ವಿಪರೀತ ಪರಿಸ್ಥಿತಿಗಳಲ್ಲು ತಣ್ಣಗೆ ಮೂರು ದಿನದ ಸಾಹಸಯಾನವನ್ನು ನಮ್ಮಿಂದಲೇ ಯಶಸ್ಸುಗಾಣಿಸಿದ ಕ್ರತುಶಕ್ತಿಗೆ ನನ್ನಲ್ಲೂ ಅಪಾರ ಮೆಚ್ಚುಗೆಯಲ್ಲದೇ ಇನ್ನೊಂದಿಲ್ಲ. ಆದರೂ ಅವರು ನನ್ನಲ್ಲಿ ಗುರುತಿಸಿದ ಹಿರಿತನದ ಬಲದಲ್ಲಿ, ವಸ್ತುನಿಷ್ಠವಾಗಿ ನನ್ನ ಅಭಿಪ್ರಾಯಗಳನ್ನು (ತೀರ್ಮಾನಗಳಲ್ಲ) ದಾಖಲಿಸುತ್ತಿದ್ದೇನೆ.

ವನ್ಯಪರವಾದ, ಸಾಹಸಯಾನ ಎಂದೇ ನಾವೆಲ್ಲ ಒಪ್ಪಿ ಬಂದವರು. ಆದರೆ ಹೆಚ್ಚಿನವರಿಗೆ ಇದರ ಪೂರ್ವಾನುಭವ ಏನೂ ಇದ್ದಂತಿರಲಿಲ್ಲ. ‘ನಾಗರಿಕತೆಯ ಮುದ್ದ’ನ್ನೇ ರೂಢಿಸಿಕೊಂಡ ಇವರನ್ನು ಕೇವಲ ಮೂರು ದಿನಗಳಲ್ಲಿ ತಿದ್ದುವ ಪ್ರಯತ್ನ ಸರಿಯಾಗಲಾರದು. ಹಾಗಾಗಿ ಕೆಲವಾದರೂ ‘ನಾಗರಿಕ’ ಆವಶ್ಯಕತೆಗಳನ್ನು ಅಥವಾ ಸವಲತ್ತುಗಳನ್ನು ಸ್ವಾಮಿ ದಂಪತಿ ಅಳವಡಿಸಿಕೊಳ್ಳಬೇಕು ಎನ್ನುವುದಕ್ಕೆ ಮೂರು ಸಲಹೆಗಳು.

೧. ಕುಡಿಯುವ ನೀರು: ನಮ್ಮ ವಾಟಾರ್ ಬಾಟಲ್ಲುಗಳಲ್ಲಿ ಒಯ್ದ ಹೊನ್ನೆಮರಡಿನ ಬಾವಿ ನೀರು ಮುಗಿದ ಮೇಲೆ, ಎಲ್ಲರೂ ಎಲ್ಲಕ್ಕೂ ನೇರ ಶರಾವತಿ ನೀರನ್ನು ಆಶ್ರಯಿಸಿದೆವು. ಇಂದು ಯಾವುದೇ ಸಾರ್ವಜನಿಕ ಜಲನಿಧಿಗಳು ಅನುಭವಿಸುತ್ತಿರುವ ಮಾಲಿನ್ಯದ ಭೀಕರತೆಯನ್ನು ಯಾರೂ ಮರೆಯಬಾರದು. ಅಣೆಕಟ್ಟು ತುಂಬಿರುವ ಈ ದಿನಗಳಲ್ಲಿ ನೀರು ಶುದ್ಧವೇ ಕಾಣಬಹುದು ಅಥವಾ ಮಾಲಿನ್ಯ ತೆಳುವಾಗಿ ದುಷ್ಪರಿಣಾಮಗಳು ಕಂಡಿರಲಾರದು. ಮುಂದೆ ನೀರಿಳಿದ ದಿನಗಳಲ್ಲಿ ನೇರ ಹೊಳೆನೀರಿನ ಬಳಕೆ ಅಪಾಯಕಾರಿ. ಅಷ್ಟೆಲ್ಲ ಶಿಬಿರ ಸಾಮಗ್ರಿಗಳ ಜತೆಗೆ (ಸಮುದ್ರ ಯಾನಿಗಳು ಸಿಹಿನೀರು ಒಯ್ಯುವಂತೆ) ಕುಡಿನೀರಿನ ಸಂಗ್ರಹವನ್ನೂ ಒಯ್ಯುವಂತಾಗಬೇಕು. ಅಲ್ಲದಿದ್ದರೆ, ಕನಿಷ್ಠ ಯಾವುದಾದರೂ ಶುದ್ಧೀಕರಣದ (ಶಿಬಿರತಾಣಗಳಲ್ಲಿ ಕುದಿಸಿ ಆರಿಸುವುದೋ ಶುದ್ಧೀಕರಣದ ಗುಳಿಗೆ ಬಳಸಿಯೋ) ವ್ಯವಸ್ಥೆಯನ್ನಾದರೂ ಅಳವಡಿಸಿಕೊಳ್ಳುವುದು ಆಗಬೇಕು. ತನ್ನ ಮೊದಲ ಹೊನ್ನೆಮರಡು ಭೇಟಿಯಲ್ಲಿ ಭಾರ್ಗವ್ ಬರ್ಲಿ ಜಲಾಶಯದ ನೀರಿನ ಸಂಪರ್ಕದಿಂದ, ಸ್ವಾಮಿ ದಂಪತಿಗೂ ಹೆದರಿಕೆ ಹುಟ್ಟುವಂತೆ ಊದಿಕೊಂಡದ್ದನ್ನು ಇಲ್ಲಿ ನೆನಪಿಸಿಕೊಳ್ಳಲೇಬೇಕು.

೨. ನಾವು ಹೊನ್ನೆಮರಡನ್ನು ತಲಪಿದಂದು ಪಾಯಖಾನೆಯ ಬಾಗಿಲ ಬಳಿ, ಮಾರಣೇ ದಿನ ಅನ್ಯರು ಅತಿಥಿಗೃಹದ ದಾರಿಯಲ್ಲಿ, ರಾತ್ರಿಯ ವೇಳೆ ವಿಷದ ಹಾವುಗಳನ್ನು ಅಕಸ್ಮಾತಾಗಿ, ಮುಂದಾಗಿ ಗುರುತಿಸಿದ್ದಕ್ಕೆ ದುರ್ಘಟನೆ ನಡೆಯಲಿಲ್ಲ. ಅಪರಾತ್ರಿಯಲ್ಲಿ ಶುದ್ಧ ಪೇಟೆಯವರನ್ನು ಪಾಯಖಾನೆಯ ಅಥವಾ ಹೆಚ್ಚುವರಿ ನೀರಿನ ಆವಶ್ಯಕತೆಗಾಗಿ ಇಂಥ ಪರಿಸರಕ್ಕೆ ಮುಕ್ತವಾಗಿಸುವುದು ತಪ್ಪಬೇಕು. ನಾವು ಗಮನಿಸಿದಂತೆ, ಗುಡ್ಡದ ನೆತ್ತಿಯಲ್ಲಿರುವ ಕಟ್ಟಡಗಳಿಗಿರುವಂತೆ, ಅತಿಥಿಗೃಹಕ್ಕೆ ಸೇರಿದಂತೇ ಪಾಯಖಾನೆ ಮತ್ತು (ಮಿತ ಬಳಕೆಯ ಪಾಠದೊಡನೆ) ನಲ್ಲಿನೀರಿನ ಸಂಪರ್ಕ ಕೊಡುವಂತಾಗಬೇಕು.

೩ ಶಿಬಿರವಾಸಿಗಳು ತೀರಾ ಅಜ್ಞಾತ ದ್ವೀಪಗಳಲ್ಲಿ, ನೆಪಕ್ಕೆ ಗುಡಾರವಿದ್ದರೂ ಮುಕ್ತವಾಗಿ ನಿದ್ರಿಸುವುದು ಸರಿಯಲ್ಲ. ಚಳಿ ಹೋಗಲಾಡಿಸಲು, ಬೆಳಕಿನ ಮೂಲವಾಗಿ ಮತ್ತು ವನಚರಗಳಿಗೆ ಭಯಕಾರಿಯಾದ ಶಿಬಿರಾಗ್ನಿಯನ್ನು ರಾತ್ರಿಯಿಡೀ ಜೀವಂತವಾಗಿಡಬೇಕು. ಆ ಬೆಂಕಿಯೂ ಸೇರಿದಂತೆ, ಅಪಾಯಕಾರೀ ವನಚರಗಳ ಬಗ್ಗೆ ಕಣ್ಗಾವಲಿಡುವಂತೆ, ಸರದಿಯ ಮೇಲೆ ಪಹರೆ ಜವಾಬ್ದಾರಿ ಎಲ್ಲರಿಗೂ ಕೊಡಬೇಕು. ಆಗ ಸಹಜವಾಗಿ, ಕೊನೆಯ ಅವಧಿಯ ಪಹರಿಗಳು ದಿನದ ಚಾ, ತಿನಿಸುಗಳನ್ನು ಸಕಾಲಕ್ಕೆ ಪೂರೈಸುವುದೂ ಸಾಧ್ಯವಾಗುತ್ತದೆ.

ಸ್ವಾಮಿದಂಪತಿ ಈ ಬಾರಿ ಮಾತ್ರ ಅಷ್ಟಾಗಿ ಯಶಸ್ವಿಯಾಗದ ಯಾನವನ್ನು, ಜನವರಿಯಲ್ಲಿ ಎರಡೂ ದಿಕ್ಕುಗಳಿಂದ ನಡೆಸುವ ಘೋಷಣೆ ಮಾಡಿದ್ದಾರೆ. (ಹೊನ್ನೆಮರಡಿನಿಂದ ಹೊರಟು ಮೂರು ದಿನಗಳಲ್ಲಿ ಹೊಸನಗರ ತಲಪಿದ ಹರಿಗೋಲುಗಳನ್ನು ಅಲ್ಲಿ ಕಾದಿರುವ ಹೊಸದೇ ತಂಡ ಮತ್ತೆ ಮೂರು ದಿನಗಳ ಯಾನದಲ್ಲಿ ಹೊನ್ನೆಮರಡಿಗೇ ಮುಟ್ಟಿಸುತ್ತದೆ) ನಾವಂತೂ ನಿಜ ಸಾಹಸಾಭಿಲಾಷಿಗಳಿಗೆ ಇದರಲ್ಲೊಂದನ್ನು ಅನುಭವಿಸಲು ಪೂರ್ಣಮನಸ್ಸಿನಿಂದ ಶಿಫಾರಸು ಮಾಡುತ್ತಿದ್ದೇವೆ. ಆದರೆ ನೀರು, ದೋಣಿಯಾನ, ಅಜ್ಞಾತ ದ್ವೀಪಗಳಲ್ಲಿ ಶಿಬಿರವಾಸ ಎಂಬುದನ್ನೆಲ್ಲ ಪ್ರಕೃತಿ ಲೋಲುಪರು ಗ್ರಹಿಸುವುದು ತಪ್ಪಲ್ಲ. ಆದರೆ ಇದು ಕೊಡುವ ರಮ್ಯಚಿತ್ರಣದ ಜತೆಗೆ ‘ಸಾಹಸ’ ಬೆರೆತಿರುವುದನ್ನು ಉಪೇಕ್ಷಿಸುವುದೇ ಹೆಚ್ಚು. ಭಾಗಿಗಳು ಎಷ್ಟು ಕಷ್ಟವಾದರೂ ಸ್ವತಃ ದೋಣಿ ಚಲಾಯಿಸಲೇಬೇಕು, ಶಿಬಿರದ್ದೂ ಸೇರಿದಂತೆ ಎಲ್ಲ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕು ಎನ್ನುವುದನ್ನು ಗಂಭೀರವಾಗಿ ಗಮನಿಸಬೇಕು. ಹಿಮಾಲಯದಲ್ಲಿ ಅಥವಾ ರೆಸಾರ್ಟ್‍ಗಳಲ್ಲಿ ಎಲ್ಲ ಕೆಲಸಕ್ಕೂ ಒದಗುವ ನೌಕರರು ಇಲ್ಲಿಲ್ಲ. ಒಮ್ಮೆ ಹೊರಟ ಮೇಲೆ, ನಡುನೀರಿನಲ್ಲಿ ದೋಣಿ ಚಲಾಯಿಸುವಲ್ಲಿ ಕೈಸೋತರೆ ಪರ್ಯಾಯ ವ್ಯವಸ್ಥೆ ಅಸಾಧ್ಯ. ಶಿಬಿರದಲ್ಲಿ ಕನಿಷ್ಠ ತಿನಿಸು ಪಾನೀಯಗಳನ್ನು ಮಾಡುವಲ್ಲಿ ಉದಾಸೀನ ಮಾಡಿದರೆ ಉಪವಾಸವೇ ಗತಿ! ಸರಕಾರಗಳ ‘ಸಾಹಸೀ ಸಂಸ್ಥೆಗಳು’ ಅಥವಾ ರೆಸಾರ್ಟ್ ಸಂಸ್ಕೃತಿಯ ಕಿಂಚಿತ್ ಲೇಪವೂ ಅಡ್ವೆಂಚರರ್ಸ್ ಕಲಾಪಗಳಲ್ಲಿ ಇಲ್ಲವೇ ಇಲ್ಲ. ಸ್ವಾಮಿ ದಂಪತಿಗಳು ಸೌಕರ್ಯಗಳ ಪೂರೈಕೆದಾರರಲ್ಲ, ಅಪ್ಪಟ ಸಾಹಸದ ಸವಾಲನ್ನಷ್ಟೇ ಒಡ್ಡುವವರು ಎನ್ನುವುದನ್ನು ಮನನ ಮಾಡಿಕೊಂಡು ಭಾಗವಹಿಸಿದರೆ, ಇಂಥ ಅನುಭವ ಇನ್ನೊಂದಿಲ್ಲ.

(ಮುಗಿಯಿತು)