Athree Book Center

ನಿರಾಶ್ರಿತರ ಶಿಬಿರ

January 28, 2010 · 6 Comments

(ತಾತಾರ್-೨)

[ವಿ.ಸೂ: ಮುಂದೆ ಹಳಗಾಲದ ನಿರೂಪಣೆಯ ಉದ್ದಕ್ಕೆ ಈ ತೆರನ [ ] ದೊಡ್ಡ ಕಂಸದೊಳಗೆ ಈ ಕಾಲದ ವಗ್ಗರಣೆ ಅಥವಾ ಟಿಪ್ಪಣಿ ಎನ್ನಿ, ಹಾಕುತ್ತಿರುತ್ತೇನೆ]

ಡಿಸೆಂಬರ್ ೧೫, ೧೯೭೧ರ ಬೆಳಿಗ್ಗೆ ನಾನು ನಾಲ್ಕು ಗಂಟೆಗೇ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿ, ಅವಸರದಲ್ಲಿ ತಿಂಡಿ ಕುಡಿದು ಕಾಫಿ ತಿಂದೆ. ಪ್ಯಾಂಟು ಶರಟುಗಳೊಳಗೆ ತೂರಿದ್ದಲ್ಲದೆ ಊಟಿಯ ಚಳಿಯ ನಿರೀಕ್ಷೆಯಲ್ಲಿ ತಂದೆಯ ಹಳೆಯ ಕೋಟೊಂದನ್ನೂ ಏರಿಸಿಕೊಂಡೆ. [ಆ ಪ್ರಾಯದಲ್ಲಿ ‘ಕೊಡಗಿನವನಾದ’ ನಾನು, ಸ್ವೆಟ್ಟರ್ ಬಳಸುವುದು ಅವಮಾನಕಾರಿ ಎಂದೇ ಇತ್ತು, ನನ್ನಲ್ಲಿರಲೂ ಇಲ್ಲ!) ಮಧ್ಯಾಹ್ನದ ಊಟಕ್ಕೆ ಮಿತ್ರರೊಡನೆ ಹಂಚಿ ತಿನ್ನಲು ಕಟ್ಟಿಟ್ಟ ರೊಟ್ಟಿಗಂಟನ್ನು ದಿನಮುಂಚಿತವಾಗಿ ಇತರ ಸಾಮಾನುಗಳನ್ನು ತುಂಬಿ ಸಜ್ಜುಗೊಂಡಿದ್ದ ಸುಲಭೋಪಾಯದ ಬೆನ್ನುಚೀಲದಲ್ಲಿ ಇರುಕಿಸಿ, ಅದರ ಬಾಯಿ ಬಿಗಿದು ಬೆನ್ನಿಗೇರಿಸಿದೆ. ಬಲಗೈಯಲ್ಲಿ ಗಾಂಧೀ ಬಂಟ – ಊರುಗೋಲು. ಕಾಲಿಗೆ ಬೇಟೆಗಾರನ ಪಾದರಕ್ಷೆ ಅಥವಾ ಹಂಟರ್ ಶೂ. ನನ್ನಲ್ಲಿ ಅಷ್ಟಾಗಿ ಪ್ರಾಮುಖ್ಯ ಸಲ್ಲಬೇಕಿಲ್ಲದ ತಲೆಗೆ ಕಾಡುಟೊಪ್ಪಿ ಅಥವಾ ಜಂಗಲ್ ಹ್ಯಾಟ್.

Keep reading →

→ 6 CommentsCategories: ಪ್ರವಾಸ ಕಥನ

ಈಶ್ವರ ದುರ್ಯೋಧನನಾದದ್ದು ಯಾಕೆ?

January 25, 2010 · 12 Comments

ಪ್ರಿಯರೇ,

ತಾತಾರ್ ಲೇಖನ ಮುಂದೊಂದು ವಾರಕ್ಕೆ ಮತ್ತೆ ದೂಡುತ್ತಿರುವುದಕ್ಕೆ ನಿಮ್ಮಿಂದ ಕ್ಷಮೆ ಕೇಳಲೇ ಮಗ ಅಭಯನಿಗೆ ಪ್ರಥಮ ಸಿನಿಮಾ – ಗುಬ್ಬಚ್ಚಿಗಳು, ಇದಕ್ಕೆ ಸ್ವರ್ಣಕಮಲ ಬಂದ ಸಂತೋಷದ ವಾರ್ತೆ (ನೋಡಿ: www.abhayatalkies.com) ಬಿತ್ತರಿಸಿ ನಾನದಕ್ಕೆ ಸಂಬಂಧಿಸಿದ ಓಡಾಟಗಳಲ್ಲಿ ವ್ಯಸ್ತನಾಗಿದ್ದೆ ಎನ್ನಲೇ! ಏನೇ ಇರಲಿ, ಸದ್ಯ ತಮ್ಮ ಅನಂತ ವರ್ಧನ (ಅ-ತೃತೀಯ) ನನ್ನ ಲೇಖನ ಛಲದೊಳ್ ದುರ್ಯೋಧನಕ್ಕೆ ಪೂರಕವಾಗಿ ಅವನ ನೆನಪುಗಳ ಒಂದಷ್ಟು ಹೊರೆ ಇಳಿಸಿದ್ದನ್ನು ಇಲ್ಲಿ ಕೊಡುತ್ತಿದ್ದೇನೆ. ಕೊನೆಯಲ್ಲಿ ಈ ತೀನಿ ನಿಮಗೆ ರುಚಿಸಿದ್ದಕ್ಕೆ ನಾಲ್ಕು ಸಾಲಾದರೂ ಬರೆಯುವುದು ಮರೆಯಬೇಡಿ.

Keep reading →

→ 12 CommentsCategories: ಹೀಗೆ ಒಂದಿಷ್ಟು

ನಿಲ್ಲಿ! ಗಡಿಬಿಡಿಯಲ್ಲಿ ಗಂಗಡಿಕಲ್ಲು

January 14, 2010 · 11 Comments

(ತಾತಾರ್ ಶಿಖರವನ್ನು ಭೂತಕಾಲದಲ್ಲಿ ಹತ್ತುವ ಮುನ್ನ ವರ್ತಮಾನದ ಒಂದು ಜರೂರು, ಒಂದು ಅನುಭವ ಹೇಳಿಬಿಡುತ್ತೇನೆ. ನಿಮ್ಮುತ್ಸಾಹದ ಚಿಲುಮೆ ವಾರಕಾಲ ಬಾಳಲಿ!)

ಕುದುರೆಮುಖ ರಾಷ್ಟೀಯ ಉದ್ಯಾನವನದೊಳಗೆ ಹಾಯುವ ಸುಲಭ ಏರಿನ, ಅಂದದ ಬಳುಕಿನ ನುಣ್ಣನೆ ದಾರಿ ಅದರದ್ದಲ್ಲ; ಗಣಿಗಾರಿಕೆಯವರದ್ದು. ಕಬ್ಬಿಣ ಗಣಿಗಾರಿಕೆಯವರಿಗೆ ಅದು ಅವಶ್ಯವೇ ಸರಿ. ಆದರೆ ಮತ್ತೆ ಹುಟ್ಟಿದ ವನ್ಯ ಇಲಾಖೆಗೆ, ಇಂದು ಬದಲಾದ ಪರಿಸ್ಥಿತಿಗೆ ಅದು ಶಾಪವೇ ಆಗಿದೆ. ಮೇಲಿನ ಸೌಕರ್ಯಗಳಲ್ಲದೆ ವಿರಳ ವಾಹನ ಸಂಚಾರವೂ ಕುಮ್ಮಕ್ಕು ಕೊಡುವುದರಿಂದ ಇಲ್ಲಿ ಮಿತಿಮೀರಿದ ವೇಗದಲ್ಲಿ ಧಾವಿಸುವ ಖಾಸಗಿ ವಾಹನಗಳು (ಈ ದಾರಿಯಲ್ಲಿ ಕೆಂಬಸ್ಸು, ಗಣಿಲಾರಿ, ಸಹಸ್ರಪಾದಿ ಎಣ್ಣೆಲಾರಿಗಳು ಇಲ್ಲ. ಇತರ ಸರಕು ಸಾಗಣೆ ಲಾರಿಗಳು, ಸಾರ್ವಜನಿಕ ಬಸ್ಸುಗಳೂ ತುಂಬಾ ಕಡಿಮೆ.) ಅಪಘಾತಕ್ಕೊಳಗಾಗುವುದು, ಜೀವ ಹಾನಿಯಾಗುವುದು ನಿತ್ಯ ಸಂಗತಿ. ಕರಾವಳಿ ವಲಯದಿಂದೇರುವವರಿಗೆ ಮಾಳದವರೆಗಿನ ಬಿಸಿಯೋ ಘಟ್ಟದ ಮೇಲಿನಿಂದ ಬರುವವರಿಗೆ ಕಳಸದವರೆಗಿನ ಅವೈಜ್ಞಾನಿಕ ಏರಿಳಿವಿನ ಹರಕು ದಾರಿಯೋ ಈ ಕಾಡಿನ ನದುವೆ ಕಾಡುವುದಿಲ್ಲ. ಕಣ್ಣು ತುಂಬುವ ಹಸಿರು, ಮೈ ತೀಡುವ ತಣ್ಪು, ತೆರೆದು ಬಿದ್ದ ಬೆಟ್ಟದಲೆಯಲೆಯ ನಡುವೆ ನಾನು/ ನಾವು ಮಾತ್ರ ವಿಹಾರಿಗಳು ಎಂಬ ಭಾವ ತಂದುಬಿಡುತ್ತದೆ. ಸೌಮ್ಯದಿಂದ ಬಿಸಿಯೇರಿಸುವವರೆಗಿನ  ಪಾನೀಯಗಳನ್ನು ಸೇವಿಸುತ್ತ, ಹಾಳಮೂಳಗಳನ್ನು ಕುರುಕುತ್ತ, ವಾಹನದಲ್ಲೇ ಇರುವ ಸಂಗೀತವನ್ನು ಗರಿಷ್ಠ ಅರಚಿಸುತ್ತಾ ಕಡಿಮೆಯಾದರೆ ತಾವೂ ಬೊಬ್ಬೆ-ಸಂಗೀತದಲ್ಲಿ ಕಡಿಮೆಯಿಲ್ಲ ಎಂದು ಪ್ರಚುರಿಸುತ್ತ, ಸಿಗರೇಟು ಮೋಟು, ಕಸ, ಡಬ್ಬಿ, ಬಾಟಲುಗಳನ್ನು ಹೊರಗೆ ತೂರುತ್ತ ಅಪಾಯಕಾರೀ ವೇಗ ತಲಪಿಬಿಡುತ್ತಾರೆ. ಸ್ಥಳನಾಮ ಹೇಳುವ, ವನ್ಯರಕ್ಷಣೆಯ ನೂರೆಂಟು ಸಂದೇಶಗಳನ್ನು ಜಾಹೀರುಪಡಿಸುವ ಬರಹಗಳ ವೈವಿಧ್ಯ (ವಿವಿಧ ಸ್ಕೀಮುಗಳ ಕಡತ ಬಲಪಡಿಸಿದಷ್ಟು) ಪರಿಸರಕ್ಕೆ ಏನೂ ಮಾಡಿದಂತೆ ಕಾಣುವುದಿಲ್ಲ. ಇಲ್ಲಿ ಅವಘಡಗಳಿಗೆ ಸಿಕ್ಕು ಸಾಯುವ ಅಸಂಖ್ಯರಲ್ಲಿ ವನ್ಯ ಜೀವಿಗಳೇ ಬಹುಸಂಖ್ಯಾತರು. ಸಾಮಾನ್ಯ ದೃಷ್ಟಿಗೆ ನಗಣ್ಯವಾಗಬಹುದಾದ ಹಾವು ಮಂಗಗಳಷ್ಟೇ ಅಲ್ಲ, ಕಡವೆ ಕಾಟಿಯಷ್ಟು ದೊಡ್ಡ ಮೃಗಗಳೂ ಇವೆ ಎನ್ನುವುದು ನಿಜಕ್ಕೂ ಆತಂಕಕಾರಿ. ಹಾಗಾಗಿ ನಿಲ್ಲಿ! ನಡೆದು ಬನ್ನಿ.
Keep reading →

→ 11 CommentsCategories: ಪ್ರವಾಸ ಕಥನ · ವನ್ಯಲೋಕ

ಹೋಗೋಣ ಬನ್ನಿ ತಾತಾರಿಗೆ

January 8, 2010 · 7 Comments

“ಕ್ರಿಸ್ಮಸ್ ರಜೆಗೆ ಬಸ್ಸೇರಿ ರಾಮೋಜಿ ಸಿಟಿ ನೋಡಲು ಹೊರಟಿದ್ದೇವೆ” ಗೆಳೆಯ ಮನೋಹರ ಉಪಾಧ್ಯ ಹೇಳಿದ್ದರು. ಆದರೆ ತೆಲಂಗಾಣದ ಗದ್ದಲಕ್ಕೆ ಹೆದರಿ, ಕಡೇ ಮಿನಿಟಿಗೆ ಯೋಜನೆ ಬದಲಿಸಿ, ಸ್ವಂತ ವಾಹನದಲ್ಲಿ ಊಟಿಯನ್ನು ಮುಟ್ಟಿ ಬಂದರು. ಎರಡೂವರೆ ಜನ (ಹೆಂಡತಿ ವಿದ್ಯಾ ಮತ್ತು ಮಗ ಸುಧನ್ವ, ಸಣ್ಣವನಾದ್ದರಿಂದ ೧/೨) ಮಾತ್ರ ತುಂಬಿಕೊಂಡು ಎರಡು ದಿನದ ಹೋ-ಬರುವ ಚಾಲನೆಯ ನಡುವೆ ಉಳಿದ ಎರಡೂವರೆ ದಿನದಲ್ಲಿ ಎಷ್ಟು ನೋಡಿರಬಹುದು, ಏನು ಅನುಭವಿಸಿರಬಹುದು ಎಂದು ಉಪೇಕ್ಷೆಯಲ್ಲೇ ವಿಚಾರಿಸಿದೆ. ಕಾಸರಗೋಡು, ಸುಲ್ತಾನ್ ಬತ್ತೇರಿಯ ದಾರಿ ಹಿಡಿದಿರಬೇಕು ಎಂಬ ನನ್ನೂಹೆ ತಪ್ಪಾಗಿತ್ತು. ಮನೋಹರ್ ಮೈಸೂರು ದಾರಿಯನ್ನೇ ಹಿಡಿದಿದ್ದರು. ೧೯೭೧ರಲ್ಲಿ ಇದೇ ಊಟಿವಲಯದಲ್ಲಿ ನನ್ನೊಂದು ಸಾಹಸ ಯಾತ್ರೆ ತೊಡಗಿದ್ದೂ ಮೈಸೂರಿನಿಂದ ಎಂದು ಮನಸ್ಸು ಒಮ್ಮೆಲೇ ಜಾಗೃತವಾಯ್ತು. ಮನೋಹರ್ ಮುಂದುವರಿದು “ನಾವ್ short cut, ಮಾಸ್ನಿಗುಡಿ ದಾರಿ ಹಿಡಿತ್ತ್” ಎಂದರು. ಅವರಿಗೆ ಬಲುದೂರದಿಂದಲೇ ಆಕಾಶಕ್ಕೆದ್ದ ದಿಗಂತದಂತೇ ತೋರುವ ಉದಕಮಂಡಲ ಶ್ರೇಣಿ ಒಟ್ಟಾರೆ ವಾಹನಸಾಧ್ಯ ಹತ್ತಿರದ ದಾರಿಯಲ್ಲಿ ಹತ್ತುವುದಷ್ಟೇ ಗುರಿ. ಒತ್ತಿನ ಕಾಡು, ಮಂಜುಮೋಡ ಮುಡಿದ ಬೆಟ್ಟಸಾಲುಗಳೆಲ್ಲ ದಾರಿ ಸಾಗುವಾಗ ದಕ್ಕುವ ಸಹಜ ಸುಂದರ ದೃಶ್ಯ ಮಾತ್ರ. ಸುಮಾರು ನಾಲ್ಕು ದಶಕದ ಹಿಂದೆ ನನಗೋ ‘ಮಸಣಿಗುಡಿ’ ಮಹಾಸಾಹಸಕ್ಕೆ ತಳಶಿಬಿರ. ಇನ್ನು ಕಾಡು, ನಡಿಗೆಯಲ್ಲಿ ಪಾರುಗಾಣಲೇಬೇಕಾದ ‘ದುಷ್ಟಮೃಗ’ಗಳ ಬೀಡು. ಮತ್ತೆ ಬೆಟ್ಟ, ಹತ್ತಿ ಜಯಿಸಲೇ ಬೇಕಾದ ತಾತಾರ್ ಶಿಖರದ ಸವಾಲು. ನನ್ನ ಉದಕಮಂಡಲದ ಪ್ರಥಮ ಸಂದರ್ಶನದ ನೆನಪು ಇನ್ನಿಲ್ಲದಂತೆ ಒತ್ತರಿಸಿ ಬಂತು. ಉಪಾಯ್ದರು ಸ್ವಭಾವತಃ ದಾಕ್ಷಿಣ್ಯಪರರು, ಮಾತು ಕಡಿಮೆಯವರು. ಇನ್ನು ಅನ್ಯರ ಅನುಭವಗಳಿಗೆ ಕಿವಿಯಾಗುವ ನೆಪದಲ್ಲಿ ತಮ್ಮ ಕಡತ ಬಿಚ್ಚುವವರ ‘ಮುದಿತನ’ವನ್ನು ನಾನು ಪ್ರಕಟಿಸಿಬಿಟ್ಟಿದ್ದರೆ ಫಜೀತಿಯಾಗುತ್ತಿತ್ತು; ಬಹಳ ಕಷ್ಟದಿಂದ ನಿಯಂತ್ರಿಸಿದೆ! ಆದರೆ ಅನೂಹ್ಯಲೋಕದ, ಅಸಂಖ್ಯಭಾವದ ಜಾಲಿಗರೇ ನಿಮ್ಮೆದುರು ನನಗೇನೂ ಸಂಕೋಚವಿಲ್ಲ. (ನಿಮಗೆ ಬೇಡವೆನ್ನಿಸಿದಾಗ ಇಲ್ಲೇ ಮೇಲಿನ ಬಲಮೂಲೆಯಲ್ಲಿ ಚಿಟಿಕೆ ಹೊಡೆದು, ಮೌನವಾಗಿದ್ದರೆ ನಾನು ಕೇಳಲುಂಟೇ!)

Keep reading →

→ 7 CommentsCategories: ಪ್ರವಾಸ ಕಥನ