(ತಾತಾರ್ ಶಿಖರವನ್ನು ಭೂತಕಾಲದಲ್ಲಿ ಹತ್ತುವ ಮುನ್ನ ವರ್ತಮಾನದ ಒಂದು ಜರೂರು, ಒಂದು ಅನುಭವ ಹೇಳಿಬಿಡುತ್ತೇನೆ. ನಿಮ್ಮುತ್ಸಾಹದ ಚಿಲುಮೆ ವಾರಕಾಲ ಬಾಳಲಿ!)
ಕುದುರೆಮುಖ ರಾಷ್ಟೀಯ ಉದ್ಯಾನವನದೊಳಗೆ ಹಾಯುವ ಸುಲಭ ಏರಿನ, ಅಂದದ ಬಳುಕಿನ ನುಣ್ಣನೆ ದಾರಿ ಅದರದ್ದಲ್ಲ; ಗಣಿಗಾರಿಕೆಯವರದ್ದು. ಕಬ್ಬಿಣ ಗಣಿಗಾರಿಕೆಯವರಿಗೆ ಅದು ಅವಶ್ಯವೇ ಸರಿ. ಆದರೆ ಮತ್ತೆ ಹುಟ್ಟಿದ ವನ್ಯ ಇಲಾಖೆಗೆ, ಇಂದು ಬದಲಾದ ಪರಿಸ್ಥಿತಿಗೆ ಅದು ಶಾಪವೇ ಆಗಿದೆ. ಮೇಲಿನ ಸೌಕರ್ಯಗಳಲ್ಲದೆ ವಿರಳ ವಾಹನ ಸಂಚಾರವೂ ಕುಮ್ಮಕ್ಕು ಕೊಡುವುದರಿಂದ ಇಲ್ಲಿ ಮಿತಿಮೀರಿದ ವೇಗದಲ್ಲಿ ಧಾವಿಸುವ ಖಾಸಗಿ ವಾಹನಗಳು (ಈ ದಾರಿಯಲ್ಲಿ ಕೆಂಬಸ್ಸು, ಗಣಿಲಾರಿ, ಸಹಸ್ರಪಾದಿ ಎಣ್ಣೆಲಾರಿಗಳು ಇಲ್ಲ. ಇತರ ಸರಕು ಸಾಗಣೆ ಲಾರಿಗಳು, ಸಾರ್ವಜನಿಕ ಬಸ್ಸುಗಳೂ ತುಂಬಾ ಕಡಿಮೆ.) ಅಪಘಾತಕ್ಕೊಳಗಾಗುವುದು, ಜೀವ ಹಾನಿಯಾಗುವುದು ನಿತ್ಯ ಸಂಗತಿ. ಕರಾವಳಿ ವಲಯದಿಂದೇರುವವರಿಗೆ ಮಾಳದವರೆಗಿನ ಬಿಸಿಯೋ ಘಟ್ಟದ ಮೇಲಿನಿಂದ ಬರುವವರಿಗೆ ಕಳಸದವರೆಗಿನ ಅವೈಜ್ಞಾನಿಕ ಏರಿಳಿವಿನ ಹರಕು ದಾರಿಯೋ ಈ ಕಾಡಿನ ನದುವೆ ಕಾಡುವುದಿಲ್ಲ. ಕಣ್ಣು ತುಂಬುವ ಹಸಿರು, ಮೈ ತೀಡುವ ತಣ್ಪು, ತೆರೆದು ಬಿದ್ದ ಬೆಟ್ಟದಲೆಯಲೆಯ ನಡುವೆ ನಾನು/ ನಾವು ಮಾತ್ರ ವಿಹಾರಿಗಳು ಎಂಬ ಭಾವ ತಂದುಬಿಡುತ್ತದೆ. ಸೌಮ್ಯದಿಂದ ಬಿಸಿಯೇರಿಸುವವರೆಗಿನ ಪಾನೀಯಗಳನ್ನು ಸೇವಿಸುತ್ತ, ಹಾಳಮೂಳಗಳನ್ನು ಕುರುಕುತ್ತ, ವಾಹನದಲ್ಲೇ ಇರುವ ಸಂಗೀತವನ್ನು ಗರಿಷ್ಠ ಅರಚಿಸುತ್ತಾ ಕಡಿಮೆಯಾದರೆ ತಾವೂ ಬೊಬ್ಬೆ-ಸಂಗೀತದಲ್ಲಿ ಕಡಿಮೆಯಿಲ್ಲ ಎಂದು ಪ್ರಚುರಿಸುತ್ತ, ಸಿಗರೇಟು ಮೋಟು, ಕಸ, ಡಬ್ಬಿ, ಬಾಟಲುಗಳನ್ನು ಹೊರಗೆ ತೂರುತ್ತ ಅಪಾಯಕಾರೀ ವೇಗ ತಲಪಿಬಿಡುತ್ತಾರೆ. ಸ್ಥಳನಾಮ ಹೇಳುವ, ವನ್ಯರಕ್ಷಣೆಯ ನೂರೆಂಟು ಸಂದೇಶಗಳನ್ನು ಜಾಹೀರುಪಡಿಸುವ ಬರಹಗಳ ವೈವಿಧ್ಯ (ವಿವಿಧ ಸ್ಕೀಮುಗಳ ಕಡತ ಬಲಪಡಿಸಿದಷ್ಟು) ಪರಿಸರಕ್ಕೆ ಏನೂ ಮಾಡಿದಂತೆ ಕಾಣುವುದಿಲ್ಲ. ಇಲ್ಲಿ ಅವಘಡಗಳಿಗೆ ಸಿಕ್ಕು ಸಾಯುವ ಅಸಂಖ್ಯರಲ್ಲಿ ವನ್ಯ ಜೀವಿಗಳೇ ಬಹುಸಂಖ್ಯಾತರು. ಸಾಮಾನ್ಯ ದೃಷ್ಟಿಗೆ ನಗಣ್ಯವಾಗಬಹುದಾದ ಹಾವು ಮಂಗಗಳಷ್ಟೇ ಅಲ್ಲ, ಕಡವೆ ಕಾಟಿಯಷ್ಟು ದೊಡ್ಡ ಮೃಗಗಳೂ ಇವೆ ಎನ್ನುವುದು ನಿಜಕ್ಕೂ ಆತಂಕಕಾರಿ. ಹಾಗಾಗಿ ನಿಲ್ಲಿ! ನಡೆದು ಬನ್ನಿ.
Keep reading →
Categories: ಪ್ರವಾಸ ಕಥನ · ವನ್ಯಲೋಕ